November 25, 2013

ಆಸ್ಪತ್ರೆ ಝಲಕ್ ಗಳು


ನನಗೋಸ್ಕರ ಆಸ್ಪತ್ರೆಗೆ ಹೋಗೋದು ಕಡಿಮೆ. 40 ಆದ ನಂತರ ವರ್ಷಕ್ಕೆ ಒಂದು ಸಲ ಪೂರ್ತಿ ಚೆಕ್ ಅಪ್ ಮಾಡಿಸಿಕೊಳ್ಳೋ ಕೆ ಹೋಗ್ತೀನಿ. ಇಲ್ಲದಿದ್ದರೆ ಕುಟುಂಬದವರ ಆಪ್ತರ ಜತೆಗಾರಳಾಗಿ ಹೋಗೋದು ಹೆಚ್ಚು.



ಇತ್ತೀಚಿಗೆ ರೂಟಿನ್ ಚೆಕ್ ಅಪ್ ಗೆ ಗೈನಕಾಲಜಿಸ್ಟ್ ಬಳಿ ಹೋಗಿದ್ದೆ. ನನಗೆ 15 ನೆ ನಂಬರ್ ವೈಟಿಂಗ್ ಲಿಸ್ಟ್.  ಆಗಲೇ ಪ್ರೆಗ್ನೆನೆನ್ಸಿ ಯ various stage ನಲ್ಲಿರೋ ಹುಡುಗಿಯರು/ಮಹಿಳೆಯರು ತಮ್ಮ ಸರತಿಗೋಸ್ಕರ ಕಾಯುತ್ತಿದ್ದರು. ಈಗಿನ ಹೊಸ ಟ್ರೆಂಡ್, ಪ್ರೆಗ್ನೆನ್ಸಿ ಸಮಯದಲ್ಲಿ ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಬಂದು ಡಾಕ್ಟರ್ ನ ಕಾಣುತ್ತಾರೆ. ನನ್ನ ಸಮಯದಲ್ಲಿ ಮನೆಯಲ್ಲಿನ ಯಾವುದಾದರು ಮಹಿಳೆ, ಅಮ್ಮ ಅಥವಾ ಹಲವಾರು ಬಾರಿ ನಾನೊಬ್ಬಳೆ ಹೋಗಿದ್ದು ನೆನಪಿದೆ. ಒಟ್ಟಿಗೆ ಅವರು ಡಾಕ್ಟರ್ ನ ಕನ್ಸಲ್ಟ್ ಮಾಡೋದು ನನಗೆ ಖುಶಿ. ಇರಲಿ. ಆ ದಿನ ಡಾಕ್ಟರ್ ಬರೋದು ಲೇಟ್. ಎಲ್ಲೋ ಟ್ರಾಫಿಕ್ ನಲ್ಲಿ ಸಿಕ್ಕಾಕೊಂಡಿದ್ದರು. ಅದರಲ್ಲಿ ಕೆಲವರು ಸ್ಕ್ಯಾನಿಂಗ್ ಗೋಸ್ಕರ ತುಂಬ ನೀರು ಕುಡಿದುಕೊಂಡು ಬಂದಿದ್ದು ಅವರಿಗೆ ಮೂತ್ರ ವಿಸರ್ಜನೆಯ ತುರ್ತು ಪಾಪ. ಮೂತ್ರ ಮಾಡಿ ಬಂದರೆ ಪುನ: ನೀರು ಕುಡಿದು ಬ್ಲ್ಯಾಡರ್ ತುಂಬುವ ತನಕ ಕಾದು ಸ್ಕಾನ್ ಮಾಡಿಸಬೇಕು. ಸಮಯ ಆಗಲೇ 8.30 ದಾಟಿತ್ತು. ಅದರಲ್ಲಿ ಒಬ್ಬ ಹುಡುಗಿಯ ಗಲಾಟೆಯೋ ಗಲಾಟೆ. ನೀರು ಕುಡಿದು ಅಬಾರ್ಶನ್ ಆದ್ರೆ ನಾನು ಇಲ್ಲೇ ಸತ್ತು ಹೋಗ್ತೀನಿ, ಅದರ ಪಾಪ ನಿನ್ನ ಮೇಲೆ ಅಂತ ಡಾಕ್ಟರ್ ನ ಎಸಿಸ್ಟೆಂಟ್ ಮೇಲೆ ಹರಿಹಾಯುತ್ತ ಇದ್ದಳು. ಆಕೆಗೆ ಇದೆಲ್ಲಾ ಮಾಮೂಲಿ ಅನ್ನಿಸುತ್ತೆ ಆಕೆ ಸುಮ್ನೆ ಮುಖದ ತುಂಬೆಲ್ಲ ಮುಗುಳ್ನಗು ಇಟ್ಟುಕೊಂಡೇ ಇದ್ದಳು. ಇನ್ನೊಬ್ಬಳಂತೂ ತನ್ನ ಗಂಡನ ಕೈ ಕಚ್ಚುತ್ತಿದ್ದಳು. ಆದರೆ ಕೂತಕಡೆಯಲ್ಲೇ ನಿಯಂತ್ರಣ ಇಲ್ಲದೇ ಮೂತ್ರ ಹೊಯ್ದು ಬಿಟ್ಟು ಅಳಲು ಶುರು ಮಾಡಿದಳು.ಹಿರಿಯರಾದನಾವು ಕೆಲವು ಜನ ಆಕೆಗೆ ಸಮಾಧಾನ ಮಾಡಿದೆವು. ಇದೆಲ್ಲ ಮಾಮೂಲು , ಅವಮಾನ ಪಡುವಂತಹದ್ದು ಏನೂ  ಇಲ್ಲ ಅಂತ ಆಕೆಗೆ ಮನೆಗೆ ಹೋಗಲು ಸಲಹೆ ನೀಡಿದೆವು. ಡಾಕ್ಟರ್ ಬಂದ ಮೇಲೆ ನೀರು ಕುಡಿದವರನ್ನು ಮೊದಲು ಒಳಗೆ ಬಿಟ್ಟಳು ಸಹಾಯಕಿ. ಸಧ್ಯ ಡೆಲಿವರಿ ಯಾಗೋ ಕೇಸ್ ಯಾವುದೂ ಇರಲಿಲ್ಲ.  ಮತ್ತು ಉಳಿದ ಕೆಲವರು ಅವರ ವಾಂತಿ ಸಂಕಟ, ಹೊಟ್ಟೆಯ ಗಾತ್ರ ಎಲ್ಲ ಕಂಪೇರ್ ಮಾಡ್ತಿದ್ದರು. ನನ್ನದು ರೂಟೀನ್ ಚೆಕ್ ಅಪ್ ಮತ್ತು ಹೇಗೂ ಆಸ್ಪತ್ರೆಗೂ ಮನೆಗೂ ಅಷ್ಟು ದೂರವಿರಲಿಲ್ಲದಿಂದ ನಾನು ಕೊನೆಯಲ್ಲಿ ಡಾಕ್ಟರ್ ಅವರನ್ನು ಭೇಟಿ ಮಾಡಿ ಬಂದೆ. ಅದೊಂದು ಬೇರೆನೆ ಲೋಕ. 


ಶ್ರೀಕಾಂತ್ ಗೆ ಒಂದು ರಾತ್ರಿ 1 ಗಂಟೆ ಹೊತ್ತಿಗೆ ಕಿಡ್ನೀ ಸ್ಟೋನ್ ಪ್ರಾಬ್ಲಮ್ ಆಗಿ ಆಸ್ಪತ್ರೆಗೆ ಎಡ್ಮಿಟ್ ಮಾಡಬೇಕಾಯ್ತು. ಡ್ರಿಪ್ಸ್ ಪೈನ್ ಕಿಲ್ಲರ್ ಎಲ್ಲ ಕೊಟ್ಟು ಶ್ರೀಕಾಂತ ನಿದ್ದೆಯ ಮಂಪರಿನಲ್ಲಿದ್ದರು. ನನಗೆ ರಾತ್ರಿ ಮೊದಲೇ ನಿದ್ದೆ ಬರಲ್ಲ. ಮತ್ತು ಅದು ಆಸ್ಪತ್ರೆ ಅದರ ಮೇಲೆ ಸೊಳ್ಳೆಗಳ ಕಾಟ, ನಿಶಬ್ದ ಆಸ್ಪ್ತ್ರೆಯಲ್ಲಿನ ತರಹವಾರಿ ಸದ್ದುಗಳು, ಯಾರದೋ ಕೆಮ್ಮು, ಮಾನಿಟರ್ ಗಳ ಬೀಪ್. ಇದ್ದಕ್ಕಿದಂತೆ ಒಬ್ಬ ಪೇಶೆಂಟ್ ನ ತಂದು ಶ್ರೀಕಾಂತ ಪಕ್ಕದ ಬೆಡ್ ನಲ್ಲಿ ಎಡ್ಮಿಟ್ ಮಾಡಿದರು. ಇಂಜೆಕ್ಷನ್, ಸಲೈನ್ ನಳಿಗಳನ್ನು ಅವನಿಗೆ ಲಗತ್ತಿಸಿದರು. ತುಂಬ ಜ್ವರದಿಂದ ಹುಡುಗ ನಡುಗ್ತಾ ಇದ್ದ. ಕೊನೆಗೂ ಗೌಜು ಗಡಿಬಡಿ ನಿಲ್ಲಬೇಕಾದ್ರೆ ಸಮಯ ಮೂರು ಗಂಟೆ. ಅವನ ಜತೆ ಇದ್ದ ಮಹಿಳೆ ಆಗಲೆ ನಿದ್ರಾ ಲೋಕಕ್ಕೆ ಜಾರಿ ಗೊರಕೆ ಹೊರಡಿಸುತ್ತಿದ್ದರು. ನಾನು ಓದಲು ಪುಸ್ತಕ ಒಯ್ದಿದ್ದೆನಾದರೂ (ಆಸ್ಪತ್ರೆಗೆ ಹೋಗುವಾಗ ನನ್ನ ಬಳಿ ದೊಡ್ಡ ನೀರಿನ ಬಾಟಲ್, ಒಂದು ಬುಕ್,ಸ್ಕ್ರಿಬ್ಲಿಂಗ್ ಪ್ಯಾಡ್, ಪೆನ್, ಸ್ಟೀಲ್ ಲೋಟ, ಸಣ್ಣ ಪ್ಲೇಟ್ , ಸ್ಪೂನ್, ಸ್ಯಾವ್ಲಾನ್ ಬಾಟಲ್, ಟಿಸ್ಯೂ ಪೇಪರ್ - ಇವಿಷ್ಟು ಇರುತ್ತವೆ.)ರಾತ್ರಿಯ ಮಂದ ದೀಪದಲ್ಲಿ ಓದಲು ಆಗುವುದಿಲ್ಲ. ಕಿಟಕಿಯಿಂದ ಹೊರ ನೋಡಿದರೆ ಸ್ಟೀಟ್ ಲೈಟ್ ನಲ್ಲಿ ಕಾಣುತ್ತಿದ್ದ ಯಾರದ್ದೋ ಮನೆಯ ಟಾರಸಿ ಅಲ್ಲಿನ ಕೆಲವು ಹೂ ಕುಂಡಗಳು. ಬೆನ್ನು ನೋಯಲು ಶುರು ಆಗಿದ್ದಕ್ಕೆ ಹಾಗೆ ಬೆಂಚ್ ಮೇಲೆ ಅಡ್ಡಾದೆ. ಪಕ್ಕದ ಬೆಡ್ ನ ಹುಡುಗ ನಿದ್ದೆಯಲ್ಲೇ ನರಳುತ್ತಿದ್ದ. ಸ್ವಲ್ಪ ಹೊತ್ತಿಗೆ 'ಅಮ್ಮ' ಅಂದ ಹಾಗೆ ಅನ್ನಿಸಿತು. ಕೆಲ ನಿಮಿಷ ಬಿಟ್ಟು ಪುನ: ಆ ಹುಡುಗ ಕರೆದದ್ದು ಕೇಳಿಸಿತು. ಹಾಗಾಗಿ ಪಕ್ಕದಲ್ಲಿ ಮಲಗಿರುವ ಹೆಂಗಸು ಅವನ ಅಮ್ಮ ಅಂತ ಗೊತ್ತಾಯಿತು. ಬಹುಶ: ಬೆಳಗಿನಿಂದ ದುಡಿದು ದಣಿದ ಜೀವ, ಈ ಲೋಕದ ಪರಿವೆಯೆ ಇಲ್ಲದೆ ಮಲಗಿದ್ದರು. ನಾನೇ ಅವನ ಬಳಿ ಹೋಗಿ 'ಅಮ್ಮ ಗಾಢ ನಿದ್ದೆಯಲ್ಲಿದ್ದಾರೆ, ಏನು ಬೇಕಾಗಿತ್ತು? ತುಂಬಾ ಚಳಿ, ರಗ್ ಬೇಕಿತ್ತು ಅಂದ. ಒಂದು ರಗ್ ಆಗಲೇ ಅವನಿಗೆ ಹೊದಿಸಿ ಆಗಿತ್ತು. ಸರಿ ನರ್ಸ್ ಸ್ಟೇಷನ್ ಬಳಿ ಹೋದೆ. ನರ್ಸ್ ಗಳು ಮಲಗಿದ್ದರು. ಒಂದು ರೂಮ್ ಹೊಕ್ಕೆ 'ಸಿಸ್ಟರ್' ಅಂದೆ, ಆಕೆ ಧಡಕ್ಕನೆ ಎದ್ದು ಕುಳಿತು 'ಏನಾಯ್ತು' ಅಂತ ಅವಳ ಮಲಯಾಳಿ accent ನಲ್ಲಿ ಕೇಳಿದಳು. ಏನಿಲ್ಲ ನಮ್ಮ ರೂಮ್ ನಲ್ಲಿರೋ ಇನ್ನೊಂದು ಪೇಶೆಂಟ್ ಗೆ ರಗ್ ಬೇಕಾಗಿತ್ತು. ಎಲ್ಲಿದೆ ಅಂತ ಕೇಳಿದೆ. ಆಕೆ ಅಲ್ಲೆ ಕಪಾಟು ತೋರಿಸಿ, ಏಳಲಿಕ್ಕೆ ಹೊರಟಳು, ನಾನು ಬೇಡ ಅಂತ ಸನ್ನೆ ಮಾಡಿ, ರಗ್ ಒಯ್ದು ಆ ಹುಡುಗಂಗೆ ಹೊದೆಸಿದೆ. ಸುಮಾರು 5 ಗಂಟೆ ಹೊತ್ತಿಗೆ ಆ ಹುಡುಗ ಕೆಮ್ಮಲು ಶುರು ಮಾಡಿ ಎದ್ದು ಕುಳಿತ, ವಾಂತಿ ಮಾಡುತ್ತಾನೇನೋ ಅಂತ ಭಯ ಆಯ್ತು. ಅವನ ಅಮ್ಮ ಇನೂ ನಿದ್ರೆಯಲ್ಲೇ ಇದ್ದರು. ನನಗೇನೂ ತೋಚದೆ ಬೆಡ್ ಕೆಳಗಿರುವ ಬೆಡ್ ಪ್ಯಾನ್ ಕೊಟ್ಟೆ. ಅವನು ಅದರಲ್ಲಿ ವಾಂತಿ ಮಾಡಬೇಕಾದ್ರೆ, ನರ್ಸ್ ಸದ್ದು ಕೇಳಿಸಿ ಬಂದು ದೊಡ್ಡ ಲೈಟ್ ಹಾಕಿದಳು. ಅವಳು ಬೆಡ್ ಪ್ಯಾನ್ ಹಿಡಿದುಕೊಂಡಳು, ನಾನು ಹೊರಡ ಬೇಕಾದರೆ ನನ್ನ ಕಣ್ಣು ಅಪ್ರಯತ್ನವಾಗಿ ಬೆಡ್ ಪ್ಯಾನ್ ಕಡೆ ಹೋಯಿತು. ಅದರ ತುಂಬಾ ರಕ್ತ. ಹೆದರಿ ಬಿಟ್ಟೆ. ಇನ್ನೊಬ್ಬ ನರ್ಸ್ ಬಂದು ಅವನಿಗೆ ಇಂಜೆಕ್ಷನ್ ಚುಚ್ಚಿದರು. ಆಮೇಲೆ ಆ ಹುಡುಗ ಮಲಗಿದ. ನಾನು ಆ ನರ್ಸ್ ಬಳಿ ಹೋಗಿ ಕಳಕಳಿಯಿಂದ 'ಎಷ್ಟೊಂದು ರಕ್ತ ಇತ್ತಲ್ಲವಾ' ಅಂದೆ. ನರ್ಸ್ ಏನೋ ಹೇಳಲು ಹೊರಟವಳು 'ಇನ್ವೆಸ್ಟಿಗೇಶನ್ ನಡೀತಾ ಇದೆ' ಅಂತ ಅಂದಳು.
ಬೆಳಿಗ್ಗೆ ಅವನ ಅಮ್ಮ ನನಗೆ ಎಷ್ಟೊಂದು ಥ್ಯಾಂಕ್ಸ್ ಹೇಳಿದರೆಂದರೆ ನನಗೆ ತುಂಬಾ ಮುಜುಗರ ಆಯ್ತು. ಅವರು ಸರಕಾರಿ ನೌಕರಿಯಲ್ಲಿದ್ದಾರಂತೆ. ಮಗನಿಗೆ ಬಿಟ್ಟು ಬಿಟ್ಟು ಜ್ವರ ಬಂದು ಹಿಂದಿನ ದಿನ ಸಂಜೆ ಜ್ವರ ಏರಿ ಮೇಲುಗಣ್ಣಾದಾಗ ಮನೆಯ ಬಳಿಯ ಆಸ್ಪತ್ರೆ ಕರೆದುಕೊಂಡು ಹೋಗಿ ಆ ಅಸ್ಪತ್ರೆಯ ಡಾಕ್ಟರ್ ಸಲಹೆ ಮೇರೆಗೆ ಶ್ರೀಕಾಂತ ಎಡ್ಮಿಟ್ ಆಗಿರುವ ಆಸ್ಪತ್ರೆಗೆ ಕರೆದು ತಂದು ಎಡ್ಮಿಟ್ ಮಾಡಿದರು. ಕೆಲ ತಿಂಗಳ ಹಿಂದೆಯಷ್ಟೆ ಅವನು ಕೆಲಸಕ್ಕೆ ಸೇರಿದ್ದನಂತೆ. ಹೆಸರು ರಘು. ಅವನಿಗೆ ಪಾಪು ಪಾಪು ಅಂತ ಕರೆಯುವುದು ತುಂಬಾ ಖುಶಿ ಅನ್ನಿಸ್ತು. :-)
 ಬೆಳಿಗ್ಗೆ 11 ಗಂಟೆ ಹೊತ್ತಿಗೆ ಯೂರೋಲೊಜಿಸ್ಟ್ ಬಂದು ನೋಡಿದ ನಂತರ ಶ್ರೀಕಾಂತ ಗೆ ಪುನ: ಸ್ಕ್ಯಾನ್ ಮಾಡಿಸಿ ಕೊಂಡು, ಸ್ಟೋನ್ ಬಿದ್ದು ಹೋಗಿದೆಯೆಂದು , ಡಿಸ್ಚಾರ್ಜ್ ನ formalities ಪೂರ್ಣ ಗೊಳಿಸಿ, ಈಗ ಮಾಲವಿಕಾ ಕೂಡ ಬಂದಿದ್ದರಿಂದ ಅವಳು ಉಳಿದ ಕೆಲಸಗಳನ್ನು ನಿಭಾಯಿಸಿದಳು. ನಾನು ಔಷಧಿ ಎಲ್ಲ ಬ್ಯಾಗ್ ನಲ್ಲಿ ತುಂಬಿದೆ, ಶ್ರೀಕಾಂತ್ ಸಿಸ್ಟರ್ ಹತ್ತಿರ ಮಾತಾಡಲು ಹೋಗಿದ್ದರು. ಅಷ್ಟರಲ್ಲೇ ಆ ಹುಡುಗನ ತಂದೆ ಬಂದು ಅವನ ಟೆಸ್ಟ್ ರಿಪೋರ್ಟ್ ನೋಡಿ 'ಅಯ್ಯೋ ಕಂದಾsss ಇದೇನಾಗಿ ಬಿಡ್ತೂ' ಅಂದಾಗ ನನ್ನ ಮೈ ಮೇಲೆ ಮುಳ್ಳು ಎದ್ದು ಬಂತು ಅಷ್ಟು ದಾರುಣವಾಗಿ ಬಂತು ಆ ದನಿ. ನಾನು ತಲೆ ಎತ್ತಿ ನೋಡಿದಾಗ ಅಪ್ಪ ಮಗ ಇಬ್ಬರ ಮುಖದ ಮೇಲೂ ಗಾಬರಿ. ನನ್ನ ಬ್ಯಾಗ್ ತುಂಬಿಸುವ ಕೆಲಸ ಮುಗಿದಿತ್ತು. ಅವರಿಗೆ ಪ್ರೈವಸಿ ಓದಗಿಸಲು ನಾನು ಹಿಂದುರಿಗಿ ನೋಡದೆ ಅಲ್ಲಿಂದ ಹೊರಬಿದ್ದೆ :-(
*********************************************************************************

ಪುಟ್ಟ ರಿಯಾ ಬಗ್ಗೆ ಹಿಂದಿನ ಹಲವಾರು ಪೋಸ್ಟ್ ಗಳಲ್ಲಿ ಬರೆದಿದ್ದೇನಿ. ಅವಳಿಗೆ ಕೀಮೋಥೆರಪಿ ಆದ ಕೆಲ ದಿನ ನಂತರ ರಕ್ತದಲ್ಲಿನ ಪ್ಲೇಟಲೆಟ್ ನ ಕೌಂಟ್ಸ್ ಗೋಸ್ಕರ್ ರಕ್ತ ತಪಾಸಣೆಗೆ ಹೋಗಿದ್ದೆವು. ಹೀಗೆ ಒಂದು ಸಲ ನಾನು ಹಣ ಪಾವತಿಸಿ ರಿಸೀದಿಗೋಸ್ಕರ ಕಾಯ್ತಾ ಇದೆ. ಆ ದಿನ ರಿಸಪ್ಷನ್ ಕೌಂಟರ್ ನಲ್ಲಿ ಸಿಕ್ಕಾಪಟ್ಟೆ ರಶ್. ಪ್ರಿಂಟರ್ ಜ್ಯಾಮ್ ಆಗಿ ರಸಿದಿ ಕೊಡಲು ತಡವಾಗುತ್ತಿತ್ತು. ಆಗಲೇ ಇಬ್ಬಿಬ್ಬರು ಪ್ರಿಂಟರ್ ಬಿಚ್ಚಿ ಅದನ್ನು ಸರಿಪಡಿಸುತ್ತ ಇದ್ದರು. ಒಬ್ಬ ನರ್ಸ್ ಗೂ ಯಾವುದೋ ರಿಪೋರ್ಟ್ ನ ಪ್ರಿಂಟ್ ಅಔಟ್ ಬೇಕಾಗಿದ್ದರಿಂದ ಆಕೇನೂ ಹುಬ್ಬುಗಂಟಕ್ಕಿ ಅಲ್ಲೇ ನಿಂತಿದ್ದಳು. ಅದೊಂದು ಚಿಕ್ಕ diagnostic centre. ಅಷ್ಟರಲ್ಲೇ ಒಬ್ಬ ಬಂದು 'ಮ್ಯಾಡಂ, ತಂದಿವ್ನಿ ಅಂತ ತರೆ ಕೆರೆದುಕೊಳ್ಳಹತ್ತಿದ. ಆಕೆ ಏನಪ್ಪ ಅದು ಅಂದ್ಲು. ಅದೇ ಮ್ಯಾಡಂ ಅಂತ ನಂದಿನಿ ಸ್ವೀಟ್ಸ್ ನ ಉರುಟು ಡಬ್ಬಿ ಕೌಂಟರ್ ಮೇಲಿಟ್ಟ. ನಾನು 'ಬಹುಶ: ಮಗು ಹುಟ್ಟಿದ ಖುಶಿಗೆ ಸ್ವೀಟ್ಸ್ ತಂದಿದ್ದಾನೆ ಅಂದುಕೊಂಡೆ. ನರ್ಸ್ ಪುನ: ಏನಪ್ಪ ಅದು ಅಂತ ಕೇಳಿದಾಗ, ಅದೇ ಮ್ಯಾಡಂ ಅವ್ರೆ, ಎರಡು ನಂಬ್ರ. ನರ್ಸ್ ತಲೆ ಚಚ್ಚಿಕೊಂಡು ಇದೇನ್ರಿ? ಟೆಸ್ಟ್ ಮಾಡಕ್ಕೆ ತರಲಿಕ್ಕೆ ಹೇಳಿದ್ದು, ಟೇಸ್ಟ್ ಮಾಡಕ್ಕಲ್ಲ ಅಂದಾಗ ನಾನಂತು ಬಿದ್ದು ಬಿದ್ದು ನಗಲಾರಂಭಿಸಿದೆ. ಅಸ್ಪತ್ರೆಯಲ್ಲಿ ಕಂಟೈನರ್ ಕೊಡುತ್ತಾರೆ ಮಲ ಪರೀಕ್ಷೆಗೆ. ಅವನಿಗೆ ಸರಿಯಾಗಿ ತಿಳಿಸಿಲಿಲ್ಲವೇನೋ ಅವನು ನಂದಿನಿ ಸ್ವೀಟ್ ಡಬ್ಬಿಯಲ್ಲಿ ಅವನ ಮಲ ನೀಟಾಗೆ ಹಾಕಿಕೊಂಡು ತಂದಿದ್ದ. ನರ್ಸ್ ಗೂ ನನಗೆ ಅಲ್ಲಿಗೆ ನಾನು ಹೋಗ್ತಾ ಬರ್ತಾ ಇದ್ದಿದ್ದರಿಂದ ಸ್ವಲ್ಪ ಸಲಿಗೆ ಇತ್ತು. ನಾನು 'ನೀವು ಸರಿಯಾಗಿ ಹೇಳಬೇಕಿತ್ತು' ಅಂದ್ರೆ ಮತ್ತೆ ಡೆಮೋ ಮಾಡೋಕ್ಕು ಹೇಳ್ತಿರಾ ಅಂತ ನನ್ನ ಜತೆ ಅವರು ಮುಸಿ ಮುಸಿ ನಗಲು ಶುರು ಮಾಡಿದರು. ಈಗ ನಂದಿನಿ ಬೂತ್ ಬಳಿ ಬಂದಾಗಲೆಲ್ಲ ಆ ಘಟನೆ ನೆನಪಾಗಿ ನಗು ಹಾದು ಹೋಗುತ್ತದೆ.








November 21, 2013

ವಸುಧೇಂದ್ರರ ಬರಹಗಳ ಬಗ್ಗೆ ಸಂಕಿರಣ

ಒಂದು ಹೊಸ ಸಮಸ್ಯೆ ಶುರು ಆಗಿದೆ. ನಾನು ಯಾವುದಾದರೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡರೆ, ಅದರ ಬಗ್ಗೆ ರಿಪೋರ್ಟ್ ಮಾಲತಿ ಮ್ಯಾಡಂ ಬ್ಲಾಗ್ ನಲ್ಲಿ ಓದ ಬಹುದು ಅಂತ. ಅಯ್ಯೋ ನಾನು ಎಟೆಂಡ್ ಆಗೋದು ನನಗೆ ತುಂಬಾssss ಆಪ್ತ ಎನಿಸಿದವರ ಸಮಾರಂಭಗಳನ್ನು ಮಾತ್ರ. ಮತ್ತೆ ಭಾಗವಹಿಸಿದ ಸಮಾರಂಭಗಳದ್ದೆಲ್ಲsss ನಾ ಬರೆಯಲ್ಲ. ಈ ಹಿಂದೆ ವಸುಧೇಂದ್ರ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿ ಬಂದು ಅದರ ಬಗ್ಗೆ ಸುಮ್ನೆ ತಮಾಶೆಗೆ ಬರೆದಿದ್ದು, ಅದು ಫೇಸ್ ಬುಕ್ ನಲ್ಲಿ ಶೇರ್‍ ಆಗಿದ್ದು ಇಂತಹ ಗಲತ್ ಫೆಹಮಿ ಗೆ ಕಾರಣ. :-)

ಹೌದು ವಸುಧೇಂದ್ರ ಅತ್ಯಂತ ಆತ್ಮೀಯರು. ನಾನು ಅವರನ್ನು ಫ್ರೆಂಡ್ ಅನ್ನುತ್ತೇನಾದರು, ಸಾಧಾರಣ ವಾಗಿ ಫ್ರೆಂಡ್ಸ್ ಆದವರು ಎಷ್ಟು ಒಡನಾಡಬೇಕು ನಾನು ಅಷ್ಟು ಅವರ ಜತೆ ಒಡನಾಡುವುದಿಲ್ಲ. ಆದರೆ ನನಗೆ ಅಗತ್ಯ ಬಿದ್ದಾಗ ಯಾವುದೇ ಸಹಾಯ (ಆಫಿಸ್ ಫ್ರಂಟ್) ಬೇಡಿದರು ಅದಕ್ಕೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಗೊಮ್ಮೆ ಈಗೊಮ್ಮೆ ಭೇಟಿಯಾಗಿದ್ದಾಗಲೂ ಅವರು ಯಾರ ಬಗ್ಗೆ ಕುಹುಕ ಮಾತಾಡುವುದು ಇರಲಿ, ಬೇರೆಯವರ ಬಗ್ಗೆ ಕೆಟ್ಟದ್ದು ಮಾತಾಡುವುದಿರಲಿ ಮುಂತಾದ್ದನ್ನು ಮಾಡುವುದಿಲ್ಲ.  ತುಂಬ ಹಾಸ್ಯ ಪ್ರವೃತ್ತಿಯವರು.  ಇದರಿಂದ ನನಗೆ ಅವರ ಜತೆ ತುಂಬಾ ಕಂಫರ್ಟೇಬಲ್ ಅನ್ನಿಸುತ್ತೆ.
ಅವರ ಬರಹ ಕೂಡ ಅವರಂತೆಯೇ ಆಪ್ತ, honest. ಜೀವನ ಪ್ರೀತಿಯಿಂದ ಕೂಡಿದ ಬರಹಗಳು is not everybody's cup of tea ((or coffee), ಆಮೇಲೆ ಕಾಫಿ ಪ್ರಿಯರು ನನ್ನ ಮೇಲೆ ಸಿಟ್ಟಾಗುವುದು ಬೇಡ :-))
ನಿನ್ನೆಯ ಕಾರ್ಯಕ್ರಮದ ಬಗ್ಗೆ ಚುಕ್ಕುಬುಕ್ಕು ವೆಬ್ಸೈಟ್ ನಲ್ಲಿ ಹಾಕುತ್ತಾರೆಂದು ರಘು ಹೇಳಿದ್ದಾರೆ. ಅದನ್ನು ಇಲ್ಲಿ ಲಿಂಕಿಸುತ್ತೇನೆ. ಎಷ್ಟು ಆಪ್ತವಾಗಿತ್ತು ನಿನ್ನೆಯ ಕಾರ್ಯಕ್ರಮ ಎಂದು ನಿಮಗೂ ಗೊತ್ತಾಗುತ್ತೆ. ಎಂಜಾಯ್

  ಜ್ಯೋತಿ ಫೋನ್ ಬಂದಾಗ ನಾನು "ವಸುಧೇಂದ್ರರ ಕಾರ್ಯಕ್ರಮ ಅಂದ್ರೆ ಸಭೆ ಕಿಕ್ಕಿರಿದು ತುಂಬಿರುತ್ತೆ, ನಾನು ಮೊದಲು ತಲುಪಿದ್ರೆ ನಿಮಗೆ ಸೀಟ್ ರಿಸರ್ವ್ ಮಾಡಿರ್ತೀನಿ ಅಂದಿದ್ದೆ, ಆದರೆ ನಾನು ಮನೆಯಲ್ಲಿ ಒತ್ತು ಶ್ಯಾವಿಗೆ, ಮಿತ್ರ ನೀಲೇಶ ಜವಳಿ ತೀರ್ಥಹಳ್ಳಿಯಿಂದ ಬರುತ್ತಾರೆಂದು ಅರ್ಧ ಅಡಿಗೆ ಮಾಡಿ ಬರುವುದರಷ್ಟರಲ್ಲಿ ನಾನು ತಲುಪುವಾಗ ಸ್ವಲ್ಪ ಲೇಟ್. ಜ್ಯೋತಿ ನನಗೋಸ್ಕರ ಜಾಗ ಕಾಯ್ದಿಟ್ಟಿದ್ದರು. ನಿಹಾ ತೆಗೆದ ಫೊಟೊ. ಸುಮ್ನೆ ನಿಲ್ಲಬೇಡಿ ಏನಾದರೂ ಮಾತಾಡಿ ಅಂದಾಗ ಜ್ಯೋತಿ 'hi malthi how r u? ಅಂದಾಗ ನಾನು ಥಟ್ ಅಂತ 'ಐ ಯಾಮ್ ಫೈನ್' ಅಂತ ನಕ್ಕಾಗ ನಿಹಾ ಕ್ಲಿಕ್ಕಿಸಿದ್ದು. :-)

ಜ್ಯೋತಿ ಕಡಲಾಡಿ, ವಸುಧೇಂದ್ರ ಮತ್ತು ನಾನು. ಅವರ ಫ್ಯಾನ್ ಗಳ ಮಧ್ಯ ಹೊಕ್ಕಿ ಫೋಟೊ ತೆಗೆದದ್ದೆ ಒಂದು ಸಾಹಸ/ಸಂಭ್ರಮ. :-)

ಶತಾವಧಾನಿ ಆರ್ ಗಣೇಶ ಅವರು ಎಷ್ಟೊಂದು ಓದಿಕೊಂಡಿದ್ದಾರೆ ಅಂತ ದಿಗಿಲು ಖುಶಿ ಅನ್ನಿಸಿತು. ಅವರು ಅಂದ ಮಾತು 'ಬರಹ ನಿಂತ ಕಲ್ಲಾಗದಂತೆ ಹರಿಯುವ ಶಾಸನದಂತಿರಬೇಕು'  ತುಂಬ ಇಷ್ಟ ಆಯ್ತು. ಶತಾವಧಾನಿ ಆರ್. ಗಣೇಶ, ಓ.ಎಲ್. ನಾಗಭೂಷಣ ಸ್ವಾಮಿ, ಟಿ.ಪಿ. ಅಶೋಕ ಮತ್ತು ವಸುಧೇಂದ್ರರ ಆಪ್ತ ಮಿತ್ರರಾದ ಎಮ್. ದತ್ತಾತ್ರಿ ಅವರ ಬರಹಗಳ (ಕತೆ, ಕಾದಂಬರಿ, ಲಘು ಬರಹ) ಬಗ್ಗೆ ಎಷ್ಟು ಚಂದದ ಮಾತನ್ನಾಡಿದರು ಅಂದ್ರೆ ನಾನು ಪುನ: ಅವರ ಪುಸ್ತಕಗಳನ್ನು ಓದುತ್ತಾ ಇದ್ದೇನೆ. ನನ್ನ ಮಗಳು ನಿಹಾರಿಕಾ ಕನ್ನಡ ಪುಸ್ತಕ ಓದುವುದು ಕಡಿಮೆ. ಶಿಕಾರಿ ಮುಖಪುಟ ಸ್ಪರ್ಧೆಯಲ್ಲಿ ಭಾಗವಹಿಸಲು (ಅದರ ಬಗ್ಗೆ ಪೋಸ್ಟ್ ಮುಂದೆ) ಶಿಕಾರಿ ಓದುತ್ತಿದ್ದಾಳೆ, ಆದರೆ ಕಾರ್ಯಕ್ರಮದಲ್ಲಿ ಘಟಾನುಘಟಿಗಳ ಮಾತು, ಅದಕ್ಕೆ ತಕ್ಕಂತೆ ನಮ್ಮ ನಗು ಚಪ್ಪಾಳೆಯಿಂದ ಎಷ್ಟು ಪ್ರಭಾವಿತಳಾಗಿದ್ದಾಳೆ ಅಂದ್ರೆ ಅವಳು ವಸುಧೇಂದ್ರರ ಪುಸ್ತಕ ಓದಲು ತೊಡಗಿದ್ದಾಳೆ. ಹೇಗೂ ನನ್ನ ಬಳಿ ಅವರು ಬರೆದ ಎಲ್ಲ ಪುಸ್ತಕಗಳು ಇವೆ ಮತ್ತು ಅವಳಿಗೆ ರಜೆ. ಕಾರಣಾಂತರಗಳಿಂದ ನಮ್ಮ ಟೂರ್ ಪ್ರೋಗ್ರಾಮ್ ಕ್ಯಾನ್ಸ್ಲಲ್ಡ್  <೦>
ಇಲ್ಲಿದೆ ಚುಕ್ಕುಬುಕ್ಕು ಲಿಂಕ್ ಅವರು ಅಪ್ ಡೇಟ್ ಮಾಡಿದ ಹಾಗೆ ಓದ್ತಾ ಇರಿ.
http://www.chukkubukku.com/
ಈಗ ಬೈ
:-)

November 14, 2013

ಮಕ್ಕಳ ದಿನಾಚರಣೆ

ನಿಹಾಗೆ ಪರೀಕ್ಷೆ ಮುಗಿದು ಒಂದು ತಿಂಗಳು ಕಾಲೇಜ್ ಗೆ ರಜೆ. ನಾವು ಚಿಕ್ಕ ಪುಟ್ಟ್ ಟೂರ್ ಹಾಕ್ಕೊಂಡಿದ್ದೇವೆ. ಇವತ್ತು ನಿಜ ಹೇಳಬೇಕೆಂದರೆ ನಾವು ಎರಡು ದಿನದ ದಾವಣಗೆರೆ ಟೂರ್ ಹಾಕ್ಕೊಂಡಿದ್ದೆವು.ಮರೆತು ಹೋಗಿತ್ತು. ನಮ್ಮ ಆಫಿಸ್ ನ ರಾಘು ಅವರ ನಿಶ್ಚಿತಾರ್ಥ ಇವತ್ತು ಎಂದು . ರಾಘು ನಮ್ಮ ಸಂಸ್ಥೆ ಸೇರಿ ಆಗಲೇ 10 ವರ್ಷ. ನನಗೆ ಮಗನ ತರಹ. ಹಾಗಾಗಿ ನನ್ನ ಟೂರ್ ಕ್ಯಾನ್ಸಲ್. ಇವತ್ತು ಮಕ್ಕಳ ದಿನಾಚರಣೆಯಲ್ಲವಾ?? ನನಗೆ ಮಾತೆ ಮಾಲತಿ, ಮಾಲದಿಯಮ್ಮೆ, ಅಮ್ಮ, mom ಅಂತ ಕರೆಯುವ ಸುಮಾರು ಮಿತ್ರರಿದ್ದಾರೆ ನನ್ನಷ್ಟೆ ವಯಸ್ಸಿನವರು ಕೂಡ. ನನ್ನ ಪುಟ್ಟ ಸ್ನೇಹಿತನೊಬ್ಬ ಉಡುಪಿಗೆ ನನ್ನನ್ನು ಭೇಟಿ ಮಾಡಲು ಬಂದಿದ್ದ. ನನ್ನ ಅಕ್ಕ (ಓರಗಿತ್ತಿ) ಗೆ 'ನನ್ನ ಮಗ' ಅಂತ ಪರಿಚಯಿಸಿದ್ದೆ. ಅವನು ಹೋದ ಮೇಲೆ ಅವನು ಹೇಗೆ ನಿನ್ನ ಮಗ ಆಗುತ್ತಾನೆ ಅವನು ದೊಡ್ಡ ಹುಡುಗ ಅಂತ ಕೇಳಿದ್ದು, ನಾನು, ಮುನ್ನಾ(ಸುಮತಿ- ಓರಗಿತ್ತಿಯ ಮಗಳು ಹಾಗೂ ಆ ಹುಡುಗನ FB ಪರಿಚಯ ಇರುವವಳು) ) ನಕ್ಕಿದ್ದು ನೆನಪಾಯ್ತು. ಅವರೆಲ್ಲರಿಗೂ happy childrens day from ಮಾತೆ. :-)

ಮಕ್ಕಳ ದಿನಾಚರಣೆ ಅಂದರೆ ನೆನಪಿಗೆ ಬರುವುದು ಎರಡು ಘಟನೆ
೧.ಮುಂಬೈನ ನಮ್ಮ ಮನೆ ಪಕ್ಕದಲ್ಲಿರುವ 8 ವರ್ಷದ ಹುಡುಗಿ. ತಾಯಿಯಿರಲಿಲ್ಲ. ತಂದೆ ಕುಡುಕ. ತಂದೆಗೆ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ. ಆ ಹುಡುಗಿ ಬೆಳಿಗ್ಗೆ ಮುಂಚೆ ಎದ್ದು ಅನತೀ ದೂರದಲ್ಲಿರುವ ಹ್ಯಾಂಡ್ ಪಂಪ್ ನಿಂದ ಮನೆಗೆ ನೀರು ತಂದು ಹಾಕುತ್ತಿದ್ದಳು. ತಿಂಡಿಗೆ ಟಿಫಿನ್ ಬಾಕ್ಸ್ ಗೆ ರೊಟ್ಟಿ ತಟ್ಟಿ ಕೊಡುತ್ತಿದ್ದಳು. ಮಾಡಿದ್ದ ಕೆಲಸ ಅಡಿಗೆ ಸರಿಯಾಗದಿದ್ದರೆ ತಂದೆಯಿಂದ ಒದೆತ/ಪೆಟ್ಟು. ಆ ಪುಟ್ಟ ಸೊಂಟದ ಮೇಲೆ ದೊಡ್ಡ ಬಿಂದಿಗೆ ತರೋದು ಇನ್ನೂ ನನ್ನ ಕಣ್ಣ ಮುಂದೆ ಇದೆ. ಆ ಪುಟ್ಟ ಮುಖದಲ್ಲಿ ದೊಡ್ಡವರ ಗಾಂಭೀರ್ಯ. ಅವಳಿಗೆ ಬಾಲ್ಯವೇ ಇರಲಿಲ್ಲ. ಇಲ್ಲಿ ನಾನು ದುಬಾರಿ ಚಾಕೋಲೇಟ್ ತಿನ್ನುತ್ತ ಬಣ್ಣ ಬಣ್ಣ್ದ ಕತೆ ಪುಸ್ತಕ ಓದುತ್ತಾ ಮಹಾರಾಣಿ ತರಹ ಇದ್ರೆ ಆ ಹುಡುಗಿಗೆ ದಿನ ಇಡೀ ಕೆಲಸ, ಪ್ರೀತಿ ಮಾಡುವವರು ಕೂಡ ಯಾರು ಇಲ್ಲ. :-(

೨.ಅಮ್ಮನ ಮನೆಯಲ್ಲಿ ಕೆಲಸಕ್ಕಿದ್ದ ಅನುಸೂಯ. ಅವಳ ಗಂಡ ಅವಳನ್ನು ಬಿಟ್ಟು ಬೇರೆ ಮದುವೆಯಾಗಿದ್ದ. ಯಾಕೆಂದರೆ ಅನುಸೂಯಾ ಗೆ ನಾಲ್ಕು ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡವಳು ಪುಷ್ಫ. ಒಂದು ದಿನ ಅನುಸೂಯ ಎದೆ ನೋವು ಅಂದವಳೆ, ಪುಷ್ಪ ಅವಳನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಇವಳ ಕೈ ಯಲ್ಲೇ ಅಸುನೀಗಿದಳು. ಆಗ ಪುಷ್ಪಾ 6 ನೇ ಕ್ಲಾಸ್. ಅದಾದ ನಂತರ ಸ್ಕೂಲ್ ಬಿಟ್ಟು ಮನೆಕೆಲಸಕ್ಕೆ ಹೋಗಿ , 10 ನೇ ತರಗತಿ ಪ್ರೈವೆಟ್ ನಲ್ಲಿ ಪಾಸ್ ಮಾಡಿ (ಇದಕ್ಕೆ ನಾನು ತುಂಬಾ ಸಹಾಯ ಮಾಡಿದ್ದೇನೆ ಅನ್ನುವ ಖುಶಿ ನನಗೆ) ಒಳ್ಳೆ ಅಂಕಗಳನ್ನು ಪಡೆದು, ನಮ್ಮ ತಂದೆಯ ಸಹಾಯದಿಂದ ಬ್ಯಾಂಕ್ ನ ಎಟೆಂಡರ್ ಆಗಿ, ಬ್ಯಾಂಕ್ ನ ಕ್ಲರಿಕಲ್ ಪರೀಕ್ಷೆಗೆ ಕೂತು, ಪ್ರೊಮೋಷನ್ ಎಲ್ಲ್ಸ್ ಆಗಿ ಈಗ ಅವಳು ಬೆಳಗಾವಿಯ ಹತ್ತಿರದ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್. ಮೂವರು ತಂಗಿಯರನ್ನು ದಡ ಸೇರಿಸಿ ತನ್ನ ನಲವತ್ತನೇಯ ವಯಸ್ಸಿಗೆ , ಇವಳಂತೇ ಕಷ್ಟ ಪಟ್ಟಿದ ಜೀವ ಒಂದರ ಜತೆ ಮದುವೆಯಾಗಿ, ಹಿಂದಿನ ವರ್ಷ ಅವಳಿಗೆ ಮಗು ಹುಟ್ಟಿದೆ. ಮದುವೆಗೆ ನಾನು ಹೋಗಿದ್ದೆ.

ಮಕ್ಕಳ ದಿನಾಚರಣೆಯೆಂದರೆ ನೆನಪಿಗೆ ಬರುವುದು Mulk Raj Anand ರ 'The Lost Child' ಮತ್ತು ಪಥೇರ್ ಪಾಂಚಾಲಿಯ 'ಆಪೂ'
ಇಲ್ಲಿದೆ ದ ಲಾಸ್ಟ್ ಚೈಲ್ಡ್ ನ ಕೊಂಡಿ. ಮಕ್ಕಳಿಗೆ ಓದಿ ಹೇಳಿ. ಗೂಗಲ್ ನಲ್ಲಿ ಹುಡುಕುವಾಗ ಸಿಕ್ಕಿತು. ತುಂಬ ಚಿಕ್ಕವಳಿರುವಾಗ ಈ ಕತೆ ಓದಿ ದೇವರ ಹತ್ತಿರ ಆ ಮಗುವಿಗೆ ಅವನ ಅಪ್ಪ ಅಮ್ಮ ಸಿಗಲಿ ದೇವರೆ ಅಂತ ಕೇಳಿಕೊಂಡು ಅತ್ತಿದ್ದು ನೆನಪಿದೆ. ಆಗ ಅಜ್ಜನ ಬಳಿ ಬೆಳೆಯುತ್ತಿದ ನನಗೆ ದೂರದೂರಿನಲ್ಲಿರುವ ನನ್ನ ಅಪ್ಪ, ಅಮ್ಮನ, ತಮ್ಮಂದಿರ ನೆನಪು ತುಂಬಾssssss ಕಾಡಿತ್ತು. :-(

http://www.arvindguptatoys.com/arvindgupta/lostchild.pdf

ಪುಸ್ತಕದ ಕಪಾಟು ಕ್ಲೀನ್ ಆಗ್ತಾ ಇದೆ. ಒಂದು ಪುಸ್ತಕದಲ್ಲಿ ನಿಹಾ ಗೆ ಸಿಕ್ಕಿತು ಈ ಚಿತ್ರ. ಇದರಲ್ಲಿ ನಾನು ದ್ರೌಪತಿ/ದ್ರೌಪದಿ,
ನಿಹಾ ಮಾಡಿದ ಡೂಡಲ್. ಪರೀಕ್ಷೆ ಮುಗಿದ ನಂತರ ಅವಳಿಗೆ ತುಂಬಾ art attack ಬರ್ತಾ ಇದೆ.

ಇನ್ನಷ್ಟು ಚಿತ್ರಗಳಿಗಾಗಿ ಕ್ಲಿಕ್ಕಿಸಿ

http://dudledop.blogspot.in/

:-)

November 8, 2013

Life is BEAUTIFUL

ಕೆಲದಿನಗಳ ಹಿಂದೆ ಆಯೋಜಿಸಲಾದ ಅರ್ಬನ್ ಕೃಷಿ ಮೇಳದಲ್ಲಿ ಶ್ರೀಕಾಂತರ ಹಿರಿಯ ಮಿತ್ರರ ಒತ್ತಾಯದ ಮೇರೆಗೆ ನಾವೂ ಒಂದು ಮಳಿಗೆ ಹಾಕಿ ನಮ್ಮ ಗ್ರಾಮ್ಯಾ ಹಾಗೂ ಕೈ ಕ್ರಾಫ್ಟ್ಸ್ ನ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುವುದು ಕೊನೆ ಘಳಿಗೆಯಲ್ಲಿ ತೀರ್ಮಾನವಾಯಿತು. ಬೆಳಿಗ್ಗೆ ಶ್ರೀಕಾಂತ ಎದ್ದವರೆ ಪೋಸ್ಟರ್ ಮಾಡುವಲ್ಲಿ ನಿರತರಾದರು. ನಾವು ಮೂವರು ಉಳಿದವರ (ನಾನು, ಅಕ್ಕ, ನಿಹಾ) ಚೆನ್ನಾಗಿದೆ/ಚೆನ್ನಾಗಿಲ್ಲ ಗಳ ಮಧ್ಯೆ ಕಡೆಗೂ ನಾವೂ ನಾಲ್ಕ್ಕೂ ಜನ ಒಪ್ಪುವಂತಹ ಪೋಸ್ಟರ್ ತಯಾರಾಯಿತು.  ಅದನ್ನು ಪ್ರಿಂಟ್ ಹಾಕಿಸಬೇಕಿತ್ತು. ಹೆಬ್ಬಾಳ್ ಗೆ ಹೋಗಲು ನಾವು ಗಾಡಿ ಬುಕ್ ಮಾಡಿಕೊಂಡಿದ್ದೆವು. ಹಾಗೆಯೇ ಪೋಸ್ಟರ್ ನ ಪ್ರಿಂಟ್ ಹಾಕಿಸಲು ನಾವು ಯಾವಾಗಲೂ ಹೋಗುವ ರಾಘವೇಂದ್ರ ಪ್ರಿಂಟರ್ಸ್ ಬಳಿ ಹೋದೆವು. ಅವರಿಗೆ ನಾನು-ನಮ್ಮ ಸಂಸ್ಥೆ- ಐಡಿಎಫ್ ನ ಆಫಿಶಿಯಿಲ್ ಪ್ರಿಂಟರ್ಸ್ ಅನ್ನೋದು. ಬೆಳಿಗ್ಗೆ ನಾವು ಏಷ್ಟೆ ಹೊತ್ತಿಗೆ ಬರುತ್ತೇವಂದ್ರೂ ರಾಜಣ್ಣ  ಅವರು ಅಂಗಡಿ ತೆರೆದು ರೆಡಿಯಾಗಿರ್ತಾರೆ. :-)ನಮ್ಮ ಸಂಸ್ಥೆಯ ಸಾಧನೆಗಳಲ್ಲೆಲ್ಲ ಅವರದ್ದೂ ಸಿಂಹ ಪಾಲು ಇದ್ದೇ ಇದೆ.

 ಅಲ್ಲಿ ಅವರ ಕಂಪ್ಯೂಟರ್ ಹಾಳಾಗಿದ್ದರಿಂದ ಶ್ರೀಕಾಂತ ಅದನ್ನು ರಿಪೇರಿ ಮಾಡುವ ಕಾಯಕ ಹೊತ್ತುಕೊಂಡರು. ಇನ್ನು ಸಧ್ಯಕ್ಕೆ ಅಲ್ಲಿಂದ ಬಿಡುಗಡೆಯಿಲ್ಲ ಎಂದು ನನಗೆ ಗೊತ್ತಾಯಿತು. ನನ್ನ ಚೀಲದಲ್ಲಿ ಆದಿನ ಚಾಕೋಲೇಟ್ ಬಿಸ್ಕತ್ ಮುಂತಾದವು ಯಾವುದೂ ಇರಲಿಲ್ಲ. ಅಕ್ಕ ಪಕ್ಕ ಕಣ್ಣು ಹಾಯಿಸಿದಾಗ ಒಂದು ಪುಟ್ಟ ಮೆಡಿಕಲ್ ಸ್ಟೋರ್ಸ್ ಕಂಡಿತು. ಏನಿಲ್ಲದಿದ್ದರೂ ಹಾಲ್ಸ್ , ವಿಕ್ಸ್ ಕಿ ಗೋಲಿ ಆದ್ರೂ ತೆಗೊಳ್ಳುವ ಅಂತಲ್ಲಿ ಹೋದೆ.
ಅಲ್ಲಿ ಒಬ್ಬ ವಯಸ್ಸಾದವರು ಇಡ್ಲಿ ತಿನ್ನುತ್ತಿದ್ದರೆ, ಹೆಂಗಸು ಗಲ್ಲಾದಲ್ಲಿ, ಗಲ್ಲಕ್ಕೆ ಕೈಯಾನಿಸಿ  ನಿಂತಿದ್ದರು. ಮೂಗಿನ ಎರಡೂ ಬದಿ ಮೂಗುತಿ ಹಾಕಿಕೊಂಡು ಚಂದದ ದೊಡ್ಡ ಕುಂಕುಮ ಇಟ್ಟು ಕೊಂಡು ನೋಡಲು ತುಂಬ ಲಕ್ಷಣವಾದ ಮುಖ. ನಾನು ಹೋದ ಕೂಡಲೇ ಹಿರಿಯರು ಏಳಲು ಉಪಕ್ರಮಿಸಿದರು. ನಾನು 'ನಿಧಾನವಾಗಿ ತಿಂಡಿ ಮುಗಿಸಿ ನನಗೇನೂ ಗಡಿಬಿಡಿಯಿಲ್ಲ' ಅಂತಂದೆ. ನನಗೆ ಬೇಕಾದ ಬಿಸ್ಕಿಟ್ ಚಾಕೋಲೇಟ್ ಗಳನ್ನೆಲ್ಲ ಕೌಂಟರ್ ಮೇಲಿರುವ ಡಬ್ಬಿಯಿಂದ ತೆಗೆದು ನಾನೇ ನೀಟಾಗಿ ಕೌಂಟರ್ ಮೇಲೆ ಜೋಡಿಸಿದೆ. ಅಷ್ಟರಲ್ಲಿ ಅವರು ತಿಂಡಿ ಮುಗಿಸಿ, ಒಂದು ಲೋಟ ನೀರು ಕುಡಿದು. ಕೈ ತೊಳೆದು ಬರುತ್ತೇನೆಂದು, ಅಂಗಡಿ ಬದಿಯಲ್ಲಿ ಇದ್ದ ಗೇಟ್ ನೊಳಗೆ ತಟ್ಟೆ ಲೋಟದೊಂದಿಗೆ ಒಳ ಹೊರಟು ಹೋದರು. ಆಗ ಆ ಮಹಿಳೆ 'ಸ್ವಲ್ಪ ಇರಿ, ಅವರು ಕೈ ತೊಳೆದು ಬರುತ್ತಾರೆ' ಅಂದರು. ನಾನು ಸುಮ್ಮನೆ ಮಾತಿಗೆ ಶುರು ಮಾಡಿದೆ. ಎಷ್ಟು ವಯಸಮ್ಮ ನಿಮಗೆ?..................
ನಿಹಾ ಬರೆದ ಈ ಚಿತ್ರದಂತೆ ಇತ್ತು ಅವರ ಮುಖ

ಭಾನುವಾರ ಆದುದರಿಂದ ಅಕ್ಕಪಕ್ಕದ ಅಂಗಡಿಗಳೆಲ್ಲ ಬಂದ್ ಅಥವಾ ಇನ್ನೂ ತೆರೆದಿಲ್ಲದ್ದರಿಂದ  ಆಗಲೇ ನಾಲ್ಕೈದು ಜನ ಸಾಮಾನು ಕೊಳ್ಳುವವರು ಬಂದಿದ್ದರು. ಅದರಲ್ಲಿ ಒಬ್ಬ ಹುಡುಗಿಗಂತೂ ಅರ್ಜೆಂಟ್. 'ಅಜ್ಜಿ ಬೇಗ ಐದು ರೂಪಾಯಿಯ ಕ್ಲೋಸ್ ಅಪ್ , ಒಂದು ಮೆಡಿಮಿಕ್ಸ್ ಸೋಪ್ ಕೊಡಿ ಅಂತ ಕೇಳಿ ಅದರ ಒಟ್ಟಿಗೆ ಎರಡು ಶ್ಯಾಂಪೂವಿನ ಸ್ಯಾಶೆ ಕೊಂಡು, (ಆ ಹುಡುಗಿ ಎಷ್ಟು ಗಡಿಬಿಡಿ ಮಾಡಿದರೂ ಅಜ್ಜಿ ನಿಧಾನವಾಗಿ ಒಂದೊಂದೆ ಸಾಮಾನು ಹುಡುಕಿ ಹುಡುಕಿ ಕೊಡುತ್ತ ಇದ್ದರು ಅದರಲ್ಲೂ  ಅವರ ಕೈ ತಾಗಿ ಬೀಳಿಸಿದ ಇತರೇ ಸಾಮಾನುಗಳೆ ಹೆಚ್ಚು  ) 'ಅಜ್ಜಿ ಲೆಕ್ಕ ಬರೆದಿಡಿ ಆಮೇಲೆ ಬರುತ್ತೇನೆ ಅಂತ ಓಡಿ ಹೋದಳು. ಇನ್ನೊಬ್ಬ ಮಹಿಳೆ ಫೋನ್ ಬೂತ್ ಉಪಯೋಗಿಸಲು ಚಿಲ್ಲರೆ ಕೇಳಲು ಬಂದಿದ್ದಳು. ನನಗೇನೂ ಅರ್ಜೆಂಟ್ ಇಲ್ಲದ್ದರಿಂದ ನಾನು ನನ್ನ ದುಡ್ಡು ಕೊಡಲು ಅಂಗಡಿ ಖಾಲಿಯಾಗಲು ಕಾಯ್ತಾ ಇದ್ದೆ.  ಹೀಗೆ ಚಿಲ್ಲರೆ ಸಾಮಾನು ಕೊಳ್ಳುವವರದ್ದೆ ಭರಾಟೆ.
ಈಗ ಅವರ ಕತೆ ಕೇಳಿ
"ನನಗೂ ಅವರಿಗೂ 80 ರ ಆಸುಪಾಸು. ಈ ಮೆಡಿಕಲ್ ಸ್ಟೋರ್ ನಾನು ಮದುವೆಯಾಗಿ ಈ ಮನೆಗೆ ಬಂದಾಗಲಿಂದಲೂ  ಇದೆ. ಅಂಗಡಿ ಹಿಂಬದಿಯಲ್ಲೇ ಮನೆ. ಮದುವೆಯಾದ ಹಲವಾರು ವರ್ಷ ಮಕ್ಕಳಿಲ್ಲದ್ದರಿಂದ, ಹೇಗೂ ಮಕ್ಕಳಾಗುವುದಿಲ್ಲವೆಂದು ನಾವಿದ್ದ ಪುಟ್ಟ ಮನೆ ಮತ್ತು ಅಂಗಡಿ ಆಗಿನ ಕಾಲಕ್ಕೆ ಸ್ವಂತ ಮಾಡಿ ಕೊಂಡ್ವಿ. ನನಗೆ 40 ಆದಾಗ ಮಗೆ ಹುಟ್ಟಿದ. ಸಂಪಾದನೆಯನ್ನು ಅಳಿಸಿ ತೂಗಿ ಉಪಯೋಗಿಸಿ ಜೀವನ ಮಾಡಿ ಮಗನಿಗೆ ಅವನಿಷ್ಟದಂತೆ ಇಂಜಿನಿಯಿರಿಂಗ್ ಓದಿಸಿದೆವು. ಓದಿ ಆದ ಕೂಡಲೆ ಅವನಿಗೆ ನೌಕರಿ ಸಿಗಲಿಲ್ಲ. ಮೆಡಿಕಲ್ ಸ್ಟೋರ್ ನ್ನೆ ಒಪ್ಪು ಓರಣಗೊಳಿಸಿ ಮಗನಿಗೆ ನೀಡುವಾ ಅಂದರೆ ಅವನಿಗೆ ಈ ಕಸುಬಿನಲ್ಲಿ ಆಸಕ್ತಿಯಿಲ್ಲ. ಕಡೆಗೂ ಒಂದು ಎಮ್ ಎನ್ ಸಿ ನಲ್ಲಿ ಕೆಲಸ ಸಿಕ್ಕಿ, ಪ್ರೋಮೋಷನ್ ಎಲ್ಲ ಸಿಕ್ಕಿ, ಅವನೂ ಲೇಟ್ ಆಗಿ ಒಂದು ತಿಂಗಳ ಹಿಂದೆಯಷ್ಟೆ ದೂರದ ಸಂಬಂಧದ ಒಂದು ಅನಾಥ ಹುಡುಗಿಯನ್ನು ಮದುವೆ ಮಾಡಿಕೊಂಡು ನಾಲ್ಕೂ ಜನ ಅಂಗಡಿ ಹಿಂಬದಿಯ ಪುಟ್ಟ ಮನೆಯಲ್ಲಿರುವುದು". ಎದುರಿನ ಅಂಗಡಿ ಅಷ್ಟೆ ಸೈಜ್ ಅಂತೆ ಅವರ ಮನೆ ಕೂಡ. ನಾಲ್ಕೂ ಜನ ಒಟ್ಟಿಗೆ ಆರಾಮಾಗಿ ಇರಲಿಕ್ಕಾಗುವುದಿಲ್ಲವಂತೆ. ಹೆಚ್ಚಿನ ಸಮಯ ಮಗನಿಗೆ ನೈಟ್ ಶಿಫ್ಟ್ ಆದರೆ, ಸೊಸೆಗೆ ಬೆಳಗ್ಗಿನ ಶಿಫ್ಟ್. ಅಪರೂಪಕ್ಕೊಮ್ಮೆ ಇಬ್ಬರಿಗೂ ಒಂದು ಭಾನುವಾರ ಒಟ್ಟಿಗೆ ಸಿಗುತ್ತದೆಯಂತೆ. ಆಗ ತಾತ ಹಾಗೂ ಅಜ್ಜಿ ಅವರಿಬ್ಬರಿಗೆ ಏಕಾಂತ ಕಲ್ಪಿಸಲು ಅಂಗಡಿಗೆ ಬಂದಿರುವುದಂತೆ. ಕೆಲವು ರಾತ್ರಿ ಇಲಿಗಳ ಕಾಟ ತಾಳಿಕೊಂಡು ಅಂಗಡಿಯಲ್ಲೇ ಮಲಗುವುದೂ ಇದೆಯಂತೆ.ನಮ್ಮ ಈ ಎರೆಂಜ್ಮೆಂಟ್ ನೋಡಿ ಸೊಸೆಗೆ ಬೇಜಾರಾಗುತ್ತೆ. 'ತುಂಬ ಒಳ್ಳೆಯವಳು ನನ್ನ ಸೊಸೆ' ರಜೆಯಂತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅವಳಿಗೆ ರಜೆಯಿದ್ದ ದಿನ ನನಗೆ ಏನೂ ಕೆಲಸ ಮಾಡಲು ಬಿಡುವುದಿಲ್ಲ. "ಉಳಿದ ದಿನ ನಾನು 6.30 ಗೆ ಹೊರಟು ಬಿಡ್ತೇನೆ ನಿಮಗೆ ಏನೂ ಸಹಾಯ ಮಾಡಲು ಆಗಲ್ಲ' ಅಂತಾಳೆ.  . ಮಗ ಬೇರೆ ಮನೆ ಹುಡುಕುತ್ತಿದ್ದಾನೆ ಸ್ವಲ್ಪ ಲೋನ್ ತಗೊಂಡರೆ, ಈ ಅಂಗಡಿ ಮನೆ ಮಾರಿ ಆ ದುಡ್ಡನ್ನೆಲ್ಲ ಹಾಕಿ ನಾಲ್ಕು ಜನ ಒಟ್ಟಿಗೆ ಇರುವ ಪ್ಲ್ಯಾನ್ಸ್ ಹಾಕಿದ್ದಾರೆ. 'ಮೈನ್ ರೋಡ್ ಮೇಲೆ ಇರೋದರಿಂದ ಅಂಗಡಿಗೆ ಒಳ್ಳೇ ಬೆಲೆ ನೆ ಸಿಗುತ್ತೆ. ಅತ್ತೆ ಸೊಸೆ  ಟಿವಿ ಸೀರಿಯಲ್ ಗಳನ್ನೂ ಮೀರಿಸುವಷ್ಟು ಜಗಳ ಮನಸ್ತಾಪ ಮಾಡ್ತಾ ಇರುವ ಈ ಕಾಲದಲ್ಲಿ ಇವರದ್ದು ನನಗೆ ವಿಶಿಷ್ಟ ಸಂಸಾರ ಅನ್ನಿಸಿತು.
ತಾತನಿಗೆ ನಾನು ಕೊಂಡ ಸಾಮಾನಿನ ಬೆಲೆ ಎಷ್ಟಾಯಿತು ಅಂದಾಗ ಮೂವತ್ತು ಅಂದರು. ನನಗೆ ಡೌಟ್ ಬಂದು ಒಂದೊಂದಾಗಿ ಎಲ್ಲದರ ಬೆಲೆ ಕೇಳ್ತಾ ಹೋದೆ. 65 ರೂ ಆಗಿತ್ತು. 'ವಯಸ್ಸಾತಲ್ವಾ ಅಂತ ನಗುತ್ತ ನನ್ನ ಬಳಿ ದುಡ್ಡು ಇಸಕೊಂಡರು'.  ಅವರಿಗೆ ಶುಭವಾಗಲಿ ಅಂತ ಹಾರೈಸಿ ಗಾಡಿ ಬಳಿ ಮರಳಿದೆ.
ಪ್ರಿಂಟಿಂಗ್ ಕಟ್ಟಿಂಗ್ ಎಲ್ಲ ಮುಗಿಸುವಾಗ ಮುಕ್ಕಾಲು ಗಂಟೆ ಕಳೆದು ಹೋಯಿತು. ಹೋಗುವಾಗ ಮೇಲಿನ ಪ್ರಸಂಗ ಹಾಗೂ ಚಾಕಲೇಟ್ ಗಳನ್ನು ಶ್ರೀಕಾಂತ  ನಿಹಾ ಹಾಗೂ ಕಾರು ಚಾಲಕ್ ಸ್ವಾಮಿ ಜತೆ ಶೇರ್ ಮಾಡಿದೆ. ರಾಯರು ಎಂದಿನಂತೆ ಹ್ಮ್ಮ್ಮ್ಮ್ಮ್ಮ್ ಅಂದ್ರೆ ನಿಹಾ cho chweet' ಅಂದ್ಲು. ನಿಹಾ ಮರುದಿನ ಪರೀಕ್ಷೆ ಇದ್ದರೂ ಅವಳು ನಮ್ಮ ಜತೆ ಬಂದಿದ್ದಳು.
ಅಲ್ಲಿ ನಮ್ಮ ಕೌಂಟರ್ ನಲ್ಲಿ ಆಗಲೇ ರೂಪಾ ಹಾಗೂ ಸತೀಶ ಕಟ್ಟಿಮನಿ ಉಪಸ್ಥಿತರಿದ್ದರು. ನಮ್ಮ ಮಳಿಗೆಗೆ ತುಂಬಾ queries/ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು.
:-)

November 4, 2013

ದೀಪಾವಳಿ ಹಬ್ಬ

ಸುಮ್ನೆ ಟೈಮ್ ಪಾಸ್ ಗೆ ಅಂತ ಮಾಡಿದ್ದು: - (ರಾಯರಿಗೆ ಟೈಮ್ ಪಾಸ್ ಅಂದ್ರೆ ಸಿಟ್ಟು ಬರುತ್ತೆ. 'ಏನು! ಪಾಸ್ ಮಾಡ್ಲಿಕ್ಕೆ ನಿನ್ನ ಹತ್ತಿರ ಟೈಮ್ ಇದ್ರೆ ಆಫಿಸ್ ಕೆಲ್ಸ ಮಾಡಿ ಕೊಡು' ಅಂತಾರೆ :-))

ಎಲ್ಲರೂ ಹಬ್ಬವನ್ನು ಎಂಜಾಯ್ ಮಾಡಿದ್ದೀರಿ ಅಂದುಕೋತೀನಿ. ನನಗಂತೂ ಸ್ಪೇಶಲ್ ಯಾಕಂದೆ ನನ್ನ ಹುಟ್ಟಿದ ಹಬ್ಬ ಕೂಡ ದೀಪಾವಳಿ ಹಬ್ಬದಂದೇ.
 ಈ ಸಲ ಅಮ್ಮ ಹೇಳಿ ಕೊಟ್ಟ ಚಕ್ಕುಲಿ ಮಾಡಿದೆ
ಒಂದು ಗ್ಲಾಸ್ ಉದ್ದಿನಬೇಳೆ. ನಸು ಕಂದು ಬಣ್ಣ ಬರುವ ತನಕ ಹುರಿದು, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ ಜರಡಿ ಹಿಡಿಯಿರಿ
ಒಂದು ಗ್ಲಾಸ್ ಮೈದಾ ಹಿಟ್ಟು. ಇದನ್ನು ಬಟ್ಟೆಯಲ್ಲಿ ಕಟ್ಟಿ ಹಬೆ ಪಾತ್ರೆಯಲ್ಲಿ 10 ನಿಮಿಷ ಬೇಯಿಸಿ
ತಣ್ಣಗಾದ ಮೇಲೆ ಸರಿಯಾಗಿ ಪುಡಿ ಮಾಡಿ ಜರಡಿ ಹಿಡಿಯಿರಿ.
ಉಪ್ಪು ಬೆರೆಸಿ ಎರಡು ಹಿಟ್ಟನ್ನು  ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಂದು ದೊಡ್ಡ ಟೇಬಲ್ ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದರೆ ಒಂದು ಸ್ಪೂನ್ ಬೆಣ್ಣೆ ಕೂಡ ಸೇರಿಸಬಹುದು. ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿ ಚೆನ್ನಾಗಿ ನಾದಿ. ಐದು ನಿಮಿಷ ಹಾಗೆ ಇಡಿ
ಚಕ್ಕುಲಿ ಒರಳಲ್ಲಿ ಹಾಕಿ ಚಕ್ಕುಲಿ ಮಾಡಿಡಿ.\
ಎಣ್ಣೆ ಬಿಸಿ ಮಾಡಿ ನಾಲ್ಕ್ನಾಕು  ಚಕ್ಕುಲಿಗಳನ್ನು ಕರಿಯಿರಿ
Malavika gets a training in the art of chakkuli making :-)



 ಬೇಸನ್ ಲಾಡೂ

ಒಂದು ಗ್ಲಾಸ್ ಕಡ್ಲೇ ಹಿಟ್ಟು. ಅರ್ಧ ಟೇಬಲ್ ಸ್ಪೂನ್ ಬಾಂಬೆ ರವಾ, ಅರ್ಧ ಗ್ಲಾಸ್ ತುಪ್ಪ, ಅರ್ಧ ಗ್ಲಾಸ್ ಸಕ್ಕರೆ, ಏಲಕ್ಕಿ, ದ್ರಾಕ್ಷಿ, ಗೋಡಂಬಿ.
ಸಕ್ಕರೆ ಪುಡಿ ಮಾಡಿಡಿ
ಬೇಸನ್ ಅನ್ನು ಪರಿಮಳ ಬರುವ ತನಕ( ಸಾಧಾರಣ 15-20 ನಿಮಿಷ ಆಗುತ್ತೆ) ಹುರಿಯಿರಿ. ತುಪ್ಪ ಬೆರೆಸಿ ಸ್ವಲ್ಪ ಹುರಿಯಿರಿ. ತಣ್ಣಗಾದ ಮೇಲೆ ಸಕ್ಕರೆ ಪುಡಿ, ಏಲಕ್ಕಿ, ಹುರಿದ ಗೋಡಂಬಿ, ದ್ರಾಕಿ ಬೆರೆಸಿ. ಕೈನಿಂದ ಚೆನ್ನಾಗಿ ನಾದಿ ಉಂಡೆ ಕಟ್ಟಿ. ಅಷ್ಟೆ.
:-)

November 1, 2013

ಕನ್ನಡ ರಾಜ್ಯೋತ್ಸವ 2013

ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.
ನಮ್ಮ ರಾಯರು ಸಖತ್ ದೇಶಪ್ರೇಮಿಗಳು. ಅಂದರೆ ಹೋರದೇಶದ ಪ್ರಾಜೆಕ್ಟ್ ಏನಾದರೂ ಇದ್ದಲ್ಲಿ ಆದಷ್ಟು ಬೇರೆಯವರಿಗೆ ಅವಕಾಶ ಕೋಡೋರು. ಹೀಗೆ ಒಂದು ಸಲ ಅವರೇ ಹೋಗ ಬೇಕಾದ ಅನಿವಾರ್ಯತೆ ಬಂತು. ಜಿನಿವಾಗೆ. ಆಗಲೇ ಹೋಗಿ ಹದಿನೈದು ದಿನಗಳಾಗಿದ್ದವು.  ಹೋದ ಮೂರನೇ ದಿನದಿಂದಲೆ ಬೆಂಗಳೂರು, ಮನೆ, ಆಫಿಸ್, ಹಾಗೂ ಮನೆ ತಿಂಡಿ ಮಿಸ್ ಮಾಡಲು ಶುರು ಮಾಡಿದ್ದರು. ಸರಿ, ಅಲ್ಲಿಂದ ಹೊರಡುವ ಮುನ್ನ ಪ್ಯಾರಿಸ್ ಗೆ ಒಂದು ಟೂರ್ ಹಾಕ್ಕೊಂಡ್ರು. ಅಲ್ಲಿ ಒಂದು ಜೋಡಿ ಕನ್ನಡ ಮಾತನಾಡುವವರನ್ನು ಕಂಡು ಇವರು ಹಿರಿಹಿರಿ ಹಿಗ್ಗಿ, ಮಾತನಾಡಿಸಲು ಹೋದಾಗ ಅವರು ಭಾಷೆ ಬರುವುದಿಲ್ಲವೆಂಬತೆ ಬಿಹೇವ್ ಮಾಡಿದ್ದರಿಂದ ರಾಯರಿಗೆ ಬೇಜಾರಾಗಿ ನನಗಿಲ್ಲಿ ಫೋನ್ ಮಾಡಿದರು. ಅದಕ್ಕೆ ನಾನು 'ಎಲ್ಲೋ ಹೊಸದಾಗಿ ಮದುವೆಯಾದವರು ಹನಿಮೂನ್ ಗೆ ಬಂದಿರಬಹುದು ನೀವು ಶಿವ ಪೂಜೆಯಲ್ಲಿ ಕರಡಿ ಆಗಬಹುದೆಂದು ಆ ಜೋಡಿ ಹಾಗೆ ವರ್ತಿಸಿರಬಹುದು' ಎಂದು ಸಮಾಧಾನ ಮಾಡಿದೆ. :-)  ಕನ್ನಡಕ್ಕೋಸ್ಕರ ಮಾಡಿದ ಈ ಎರಡು ವೆಬ್ ಸೈಟ್ ಲಿಂಕ್ ಇಲ್ಲಿ ಹಾಕುವಾಗ ಮೇಲಿನ ಸಂಗತಿ ನೆನಪಾಗಿ ನಿಮ್ಮ ಜತೆ ಶೇರಿಂಗ್

ನನ್ನ ಆಪ್ತ ಮಿತ್ರ ರಘು ಅಪಾರ ತನ್ನ ಮಿತ್ರರೊಂದಿಗೆ ನಡೆಸುವ ಚುಕ್ಕುಬುಕ್ಕು. ಕಳೆದ ನವೆಂಬರ್ 1, 2012 ರಂದು ಹಸಿರು ನಿಶಾನೆ ಪಡೆದ ಈ ತಾಣಕ್ಕೆ ವರುಷದ ಹರುಷ.


ಇನ್ನೊಂದು ತಾಣ  ನನ್ನ ಮಗನೆಂದೆ ಕರೆಯುವ ನಟರಾಜು ಅವರ ಪಂಜು ಪತ್ರಿಕೆ. ಇದ್ಯಾಕೆ ವಿಶೇಷ ಅಂದ್ರೆ, ದೂರದ ಜಲಪಾಯ್ ಗುರಿಯಲ್ಲಿದ್ದುಕೊಂಡು ಈ ಇ-ಪತ್ರಿಕೆಯನ್ನು ಅವರು ನಡೆಸುವ ಮೂಲಕ ತಮ್ಮ ಕನ್ನಡ ಪ್ರೇಮವನ್ನು ತೋರಿಸುತ್ತಿದ್ದಾರೆ.

ಇಬ್ಬರಿಗೂ ಶುಭಹಾರೈಕೆಗಳು. ನೀವೂ ಅವರ ತಾಣಕ್ಕೆ ಭೇಟಿ ನೀಡಿ ಪ್ರೋತ್ಸಾಹಿಸಿ

ಧನ್ಯವಾದಗಳು
:-)