October 29, 2015

ಮಿರ್ಜಾನ್ ಕೋಟೆ

ಇದು ಕುಮಟೆಯಲ್ಲಿರೋದು. ಗೋಕರ್ಣದಿಂದ ೧೨ ಕಿ ಮಿ. ಗೋಕರ್ಣ ಪೋಸ್ಟ್ ನಲ್ಲಿ ಗೋಗರ್ಭದ ಬಗ್ಗೆ ಬರೆದಿದ್ದೆ. ಅಲ್ಲಿಂದ ಒಂದು ದಾರಿ ಮಿರ್ಜಾನ್ ಕೋಟೆಗೆ ಬರುತ್ತೆ.
ಕೋಟೆಯ ಬಗ್ಗೆ ಅಲ್ಲಿ ಮಾಹಿತಿ ನೀಡಲು ಯಾರೂ ಇರಲಿಲ್ಲ.
ವೈಕಿಪೀಡಿಯಾದಲ್ಲಿ ಏನೇನೋ ಮಾಹಿತಿಗಳಿವೆ ಅಲ್ಲಿ ಓದಕೊಳ್ಳಬಹುದು. ನಾನು ಪಿಚ್ಚರ್ ಹಾಕ್ತಿದ್ದೀನಿ. ಆರಾಮಾಗಿ ಇಲ್ಲಿ ಒಂದು ದಿನ ಕಳೆಯಬಹುದು. ಪಿಕ್ನಿಕ್ ಎಲ್ಲ ಮಾಡಬಹುದಂತೆ...ಕೋಟೆಯ ಒಂದು ಕಡೆ ನಾಗ ಬನ ಇದೆ. ಕೆಲವು ಚಿತ್ರಗಳು ಮಿಸ್ ಆಗಿವೆ. ಹೆಚ್ಚಿನ ಚಿತ್ರಗಳನ್ನು ಮಾಲವಿಕಾಳ ನೋಕಿಯಾ ಸೆಲ್ಲ್ ಫೋನ್ ನಿಂದ ತೆಗೆದವುಗಳು. :-)

ಒಳ ಹೋಗುವ ದಾರಿ. ಅಲ್ಲಿ ಗೋಡೆಗೆ ತಾಗಿದ ಪಾಚಿ ಮತ್ತಿತರೇ ಗಿಡಗಳನ್ನು ತೆಗೆಯುವ ಕೆಲಸ ನಡೀತಿದೆ. ನಾವೇ ಗೇಟ್ ತೆಗೆದು ಹೋಗ ಬೇಕು. ಒಳ ಹೋಗಿ ಗೇಟ್ ಹಾಕಬೇಕು. ಯಾಕಂದರೆ ದನಗಳು ಒಳ ಹೊಕ್ಕುತ್ತಾವೆ ಅಂತ. :-)















ಗವಿಯಿಂದ ದಾರಿ ಇಲ್ಲಿಗೆ ಬರುತ್ತೆ ಅಂತ ಬೋರ್ಡ್ ಓದಿದ ನೆನಪು. ಬೃಹತ್ ಗಾತ್ರದ ಎರಡು ಬಾವಿಗಳಿವೆ ಕೋಟೆಯೊಳಗೆ. ಬಗ್ಗಿ ನೋಡಿದರೆ ಏನೂ ಕಾಣದಷ್ಟು ಆಳ. ಮಾತ್ರವಲ್ಲ ಗಿಡಗಂಟಿಗಳು ಜೊಂಪೆ ಜೊಂಪೆಯಾಗಿ ಬೆಳೆದಿವೆ. ಬಹುಶ: ಅದು ಸೆರೆಮನೆ ಆಗಿರಲಿಕ್ಕೆ ಸಾಧ್ಯ. ಮೇಲಿನಿಂದ ಮುಚ್ಚಿಟ್ಟಿದ್ದಾರೆ. ಇಲ್ಲದಿದ್ದರೆ it is dangerous.

ಹೊರಗಿನಿಂದ ಕೋಟೆಯ ಇನ್ನೊಂದು ಪಾರ್ಶ್ವ

October 27, 2015

ಒಳ್ಳೆತ(ಮ)ನ

ಮಗ ಮದುವೆ  ಮಾಡಿಕೊಳ್ಳುತ್ತಿದ್ದಾನೆ ಅಂದಾಗ ಡಾ. ಪದ್ಮಿನಿಗೆ ತುಂಬಾ ಸಂತೋಷ ಸಮಾಧಾನ. ಆ ದಿನ ಸಂಜೆ ಅವನು ಹುಡುಗಿಯನ್ನು ಮನೆಗೆ ಕರೆದುಕೊಂಡು ಬರುವವನಿದ್ದ. ಮನೆಗೆ ತಾಗಿರುವ ಗರಾಜ್ ಅನ್ನೇ ಮಾಡಿಫೈ ಮಾಡಿ ಅಲ್ಲಿ ತನ್ನ ಪ್ರಾಕ್ಟೀಸ್ ಮಾಡುತ್ತಿದ್ದಳು ಸ್ತ್ರೀ ತಜ್ಞೆ ಯಾದ ಡಾ. ಪದ್ಮಿನಿ. ಸ್ವಲ್ಪ ವಾದ್ರು ಮನೆ ಚೊಕ್ಕಟ ಮಾಡುವ ಅಂತ ಅದರ ಕಾರ್ಯದಲ್ಲಿ ತೊಡಗಿದಳು.  ಬಂದ ಪೇಶೇಂಟ್ಸ್ ಗಳಿಗೆಲ್ಲ ಹಿಂದಿನ ಬೀದಿಯಲ್ಲಿರುವ ತನ್ನ ಸ್ನೇಹಿತೆಯ ಮಗಳ ಬಳಿ ಕಳುಹಿಸುವ ಏರ್ಪಾಡು ಮಾಡಿದಳು. ಮನೆಯೊಳಗೆ - ದಿವಾನ್ ಗೆ ಹೊಸ ಹಾಸು, ಕಿಟಕಿಗಳಿಗೆ ಹೊಸ ಪರದೆ , ಹೂದಾನಿಯಲ್ಲಿ ತಾಜಾ ಹೂವಿನ ಗುಚ್ಛ ಇತ್ಯಾದಿ.. ಆಮೇಲೆ ಸಂಜೆಗೆ ಏನೆಲ್ಲಾ ತಿಂಡಿ  ಮಾಡಬೇಕೆಂದು ಅಡಿಗೆಯ ಶಾಂತಮ್ಮನಿಗೆ ಸಲಹೆ  ಸೂಚನೆಯನ್ನಿತ್ತಳು,   
ಸಂಜೆ ಕಾವೇರಿಯನ್ನು ಕರೆದುಕೊಂಡು ಬಂದಾಗ 'ಇವಳನ್ನು ಎಲ್ಲೋ ನೋಡಿದೆನಲ್ಲ ಅಂತ ಅನಿಸಿತು. ಮಗ ಮೆಚ್ಚಿದ ಹುಡುಗಿ ಅಂತ ಹೆಚ್ಚಿಗೇನೂ ಆಲೋಚನೆ ಮಾಡದೆ ಅವಳು ಮದುವೆಗೆ ಸಮ್ಮತಿ ನೀಡಿದಳು. ಕಾವೇರಿಗೆ  ತನ್ನವರಾರೂ ಇರಲಿಲ್ಲ. ಅನಾಥಾಶ್ರಮದಲ್ಲಿ ಓದಿ ಈಗ ಬ್ಯಾಂಕೊಂದರಲ್ಲಿ ಕೆಲಸ ಆಕೆಗೆ. ಸುಮಾರು ಮಧ್ಯರಾತ್ರಿ ಡಾ ಪದ್ಮಿನಿಗೆ , ಕಾವೇರಿಯನ್ನು ಕಂಡದ್ದೆಲ್ಲಿ ಅಂತ ನೆನಪಾಗಿ ಬೆಚ್ಚಿ ಬಿದ್ದಳು. ಮಗನಿಗೆ ಏನೂ ಹೇಳಲು, ಕೇಳಲು ಹೋಗಲಿಲ್ಲ. ಕಾವೇರಿಯ ಜತೆ ಮಾತುಕತೆಯಲ್ಲಿ ತೊಡಗಿದಾಗ ಆಕೆ ಒಳ್ಳೆಯವಳೆಂದು ಅವಳಿಗೆ ಮನದಟ್ಟಾಗಿತ್ತು. ಮಗ ಮತ್ತು ಕಾವೇರಿ ಆತ್ಮೀಯ ಸ್ನೇಹಿತರಂತೆ ಸಂಭಾಷಿಸುವದು ನೋಡಿ ಸಂತಸ ಪಟ್ಟಿದ್ದಳು. ಮಾತುಗಳಲ್ಲಿ ಏನು ನಯ -ನಾಜೂಕು!!
ಮದುವೆಯೆಲ್ಲ ಮುಗಿದು ಹಲವಾರು ವರ್ಷಗಳು ಕಳೆದರೂ ಕಾವೇರಿಗೆ ಮಕ್ಕಳಾಗಲಿಲ್ಲ. ಇಬ್ಬರಿಗೂ ಅದರ ಕೊರಗು ಹತ್ತಿಕೊಂಡಿತು. ಒಂದು ಸಲ ಏನೋ ಮಾತಾಡುವಾಗ , 'ಮೊದಲ ಪಸಲ ಗರ್ಭ ಧರಿಸಿದಾಗ ಅಬೋರ್ಶನ್ ಮಾಡಿಸಿದರೆ ಮಕ್ಕಳಾಗುವುದು ಸ್ವಲ್ಪ ಕಷ್ಟವೇ  'ಎಂದು ಡಾ. ಪದ್ಮಿನಿ ಉಸುರಿದರು. " ಹೌದಮ್ಮ ಹಾಗಾಗಿದ್ದು ಅವಳ ತಪ್ಪಲ್ಲ  ' ಅಂತ ಮಗ ಪ್ರತ್ಯುತ್ತರ  ನೀಡಿದಾಗ ಇಬ್ಬರಿಗೂ ತಾವೇನೂ ಮಾತನಾಡುತ್ತಿದ್ದೇವೆ ಎಂಬುದರ ಅರ್ಥವಾಗಿ ಪ್ರಶ್ನಾರ್ಥಕವಾಗಿ ಒಬ್ಬರ ಮುಖ ಇನ್ನೊಬ್ಬರು ನೋಡಿ ಕೊಂಡರು. ಇಬ್ಬರೂ ಒಂದೇ ಉಸುರಿಗೆ 'ನಿನಗೊತ್ತಿತ್ತಾ?' ಅಂತ ಕೇಳಿಕೊಂಡರು 
"ಹೌದಮ್ಮ ಮದುವೆಗೆ ಮುಂಚೆ ಆಗಿದ್ದನ್ನು ಕಾವೇರಿ ಹಂಚಿಕೊಂಡಿದ್ದಾಳೆ. ಆ ಅನಾಥಾಶ್ರಮಕ್ಕೆ ಬಂದವರೊಬ್ಬರಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದಾಗ ಆಕೆಗೆ  ೧೩ ವರ್ಷ ವಯಸ್ಸು. ಅಬೋರ್ಶನ್ ಗೆ ನಿನ್ನ ಬಳಿ ಬಂದಿದ್ದು ಗೊತ್ತಿರಲಿಲ್ಲ ಅಂದ ಮಗ. 
"ಹೌದು ಕಣೋ ಮಗ, ನನಗೆ ಅವಳಾರೆಂದು ಆ ದಿನಾನೆ ಗೊತ್ತಾಗಿತ್ತು. ಆದರೆ ನಿಮ್ಮಿಬ್ಬರ ಮದುವೆಯಿಂದ ಇಬ್ಬರೂ ಖುಷಿಯಾಗಿರುತ್ತೀರಿ ಅನ್ನಿಸಿ ನಾನೂ ಸುಮ್ಮನಿದ್ದೆ. ಬಹುಶ: ಯಾವತ್ತೂ ಯಾರಿಗೂ ಏನೂ ಹೇಳುತ್ತಿರಲಿಲ್ಲ. ಈಗ ನೀನು ಮಕ್ಕಳಿಲ್ಲವೆಂಬ ಕೊರಗುತ್ತಿರುವುದಿರಿಂದ ಸೈಂಟಿಫಿಕ್ ರೀಸನ್ ಕೊಟ್ಟೆ ಅಷ್ಟೆ 'ಅಂದರು 
ಇಬ್ಬರ ಮಾತುಗಳನ್ನು ಇನ್ನೊಂದು ಕೋಣೆಯಲ್ಲಿದ್ದ ಕಾವೇರಿ ಕೇಳಿಸಿಕೊಂಡು...'ಒಳ್ಳೆಯವರು ಇರುತ್ತಾರೆ ಜಗತ್ತಿನಲ್ಲಿ ಎಂದು ನಿಟ್ಟುಸಿರು ಬಿಟ್ಟಳು. 


October 21, 2015

ಒಬ್ಬಂಟಿ


ಇಷ್ಟು ದೊಡ್ಡ ಜಗದಲ್ಲಿ  ಯಾರೂ ನನಗಿಲ್ಲ
ಪರರ ಮಾತು ಹಾಗಿರಲಿ ನನ್ನವರೂ ನನ್ನ ಪಾಲಿಗಿಲ್ಲ 

ಜನರು ಅತ್ತು ಅತ್ತು ಜೀವನ ಸವೆಸುವರು
ನಾನು ನಗುತ್ತಿದ್ದರೂ ಜೀವನ ಸಾಗಿಸಲಾಗಲಿಲ್ಲ 

ಒಂದು ಚೂರು ಪ್ರೀತಿ ಅಷ್ಟೆ ನನಗೆ ಬೇಕಿತ್ತು
ಜಗತ್ತಿಗೆ ಅದನ್ನೂ ಸಹಿಸಲಾಗಲಿಲ್ಲ

ಆಕಾಶವೇ ಎಷ್ಟೊಂದು ತಾರೆಗಳು ನಿನ್ನ ಸನ್ನಿಧಿಯಲ್ಲಿ
ನನ ಜೀವನದಲ್ಲಿ ಆ  ಅದೃಷ್ಟ ಜಗಮಗಿಸಲಿಲ್ಲ
:-)

guess ಮಾಡಿ 
(ಮಿರ್ಜಾನ ಕೋಟೆ ಚಿತ್ರಗಳು ಮುಂದಿನ ವಾರ ಪುರುಸೊತ್ತು ಆದ್ರೆ. ಗೋಕರ್ಣ ಕ್ಕೆ ಹೋಗಿ ಬಂದದ್ದೇ ಬಿಸ್ಕೂಟ್  ಫ್ಯಾಕ್ಟರಿ ಗೆ ಬಿಡುವಿಲ್ಲದ ಕೆಲಸ . ನನಗೊತ್ತಿರೋವಷ್ಟು ಸಹಾಯ ನಾನು ಮಾಡುತ್ತಿದ್ದೇನೆ. ನಮ್ಮ ಮಾಮೂಲಿ ಅಡಿಗೆಯ ಹಾಗೆ ಅಲ್ಲ. ಮಾಮೂಲಿ ಅಡಿಗೆಯಾದ್ರೆ ಅದೇನೋ ಹೇಳ್ತಾರಲ್ಲ ಇಂಗು ಮತ್ತು ತೆಂಗು ಇದ್ದರೆ ಮಂಗ ಕೂಡ ಅಡಿಗೆ ಮಾಡುವುದು' ಅಂತ ..... ನನ್ನ ಅಡಿಗೆ ಸ್ವಲ್ಪ ಹಾಗೆ ಕಾಯಿ, ಉಪ್ಪು, ಹುಳಿ ಹಾಕೋದು ಏನೋ ಒಂದು ಮಾಡಿ ಇಡೋದು.  Baking  needs precision. ಬೇಕಿಂಗ್  ಅದೆಲ್ಲ ನನಗೆ ಹೇಳಿ ಮಾಡಿಸಿದ್ದಲ್ಲ. ಕೆಲ ಐಡಿಯಾ, suggestions,  ಲೇಬಲ್ ಅಂಟೀಸೋದು, ಬಾಕ್ಸ್ ಅಸೆಂಬಲ್ ಮಾಡಿ ಕೊಡೋದು, ಪಾತ್ರೆ ತೊಳೆಯೋದು ಇಂತದ್ದೆಲ್ಲ ಮಾಡಿ ಕೊಡೋದು. ಹಾಂ ಮತ್ತೆ ನನಗೆ ಅವಳು ಸಂಬಳ ಕೊಡುತ್ತಾಳೆ. :-))
ಬೇಕಿಂಗ್ = ? in ಕನ್ನಡ 
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು 




October 12, 2015

ಗೋಕರ್ಣಕ್ಕೆ ಒಂದು ಟೂರ್ (my 350 th post)



ಚಿಕ್ಕವಳಿದ್ದಾಗ ಭಾರತದ ಉದ್ದಗಲ ಪ್ರಯಾಣಿಸಿದ ಹೆಮ್ಮೆ ನನ್ನದು. ಅಜ್ಜ ನನ್ನ ತಂದೆಗೆ volkswagen Beetle- steel blue ಬಣ್ಣದ್ದು ಕೊಡಿಸಿದ್ದರು. ಆಗ ಸ್ಕೂಲ್ ಗೆ ಚಕ್ಕರ ಹಾಕಿ ತಿರುಗಾಟ ಮಾಡಿದ್ದಲ್ಲಿ ಕೇಳುವವರು ಯಾರೂ ಇರಲಿಲ್ಲ. ಅಷ್ಟೆ ಅಲ್ಲ ನನ್ನ ಅಜ್ಜ ದೊಡ್ಡ ಕುಳ ಆಗಿದ್ದರಿಂದ ಯಾರೂ ಯಾವುದರ ಬಗ್ಗೆಯೂ ಸೊಲ್ಲೆತ್ತುತ್ತಿರಲಿಲ್ಲ. ಪ್ರಯಾಣ ಅಂದರೆ ಸಿರ್ಫ್ ಯಾತ್ರಾ pilgrimage ಸ್ಥಳಗಳು- ಕಾಶಿ, ರಾಮೇಶ್ವರ, ಪಳನಿ, ತಿರುಪತಿ, ಕನ್ಯಾಕುಮಾರಿ, ಪಂಡರಾಪುರ, ಮದುರೈ etc. ಅಜೋಬಾ, ನಾನಿ, ಅಪ್ಪ, ಅಮ್ಮ, ನಾವು ಮೂರು ಮಕ್ಕಳು,( ನನ್ನ ತಂಗಿ ಇನ್ನೂ ಹುಟ್ಟಿರಲಿಲ್ಲ.) ಇಷ್ಟು ಜನ ಗಾಡಿಯಲ್ಲಿ. ಕೆಲವೊಮ್ಮೆ ಡ್ರೈವರ್ ಕೂಡ ಇರುತ್ತಿದ್ದ

ಗಾಡಿ, ರಸ್ತೆ ಮಧ್ಯ ಕೆಲವೊಮ್ಮೆ ಮುಷ್ಕರ ಹೂಡುತಿತ್ತು. ಆಗ ಅಜ್ಜ ಅಪ್ಪ ದಾರಿಯಲ್ಲಿ ಸಾಗುವ ಟ್ರಕ್ ನಿಲ್ಲಿಸಿ ನಮ್ಮ ಗಾಡಿ Tow ಮಾಡಿಸಿ ಹತ್ತಿರದ ಗರಾಜ್ ಗೆ ಸಾಗಿಸುತ್ತಿದ್ದರು. ಆಗ ಹೋಟಲ್ ಗಳು ಅಷ್ಟೊಂದು ಇರಲಿಲ್ಲ. ನಾವು ಹೀಗೆ ಯಾರಾದರೂ ಗರಾಜ್ ನಡೆಸುವವರ ಮನೆಯಲ್ಲಿ ರೊಟ್ಟಿ ಪಲ್ಯ ಚಟ್ನಿ ತಿನ್ನುತ್ತಿದ್ದ ನೆನಪು. ಕೆಲವೊಮ್ಮೆ ರಿಪೇರಿ ಆಗಲಿಕ್ಕೆ ಎರಡು ಮೂರು ದಿನಗಳೇ ಬೇಕಾಗುತ್ತಿದ್ದವು. :-)

ಹೀಗೆ ಒಂದು ಸಲ ಕಾರವಾರಕ್ಕೆ ಹೋಗುವಾಗ ದಾರಿಯಲ್ಲಿ ರಾತ್ರಿ ನಮ್ಮ ಗಾಡಿ ಮುಷ್ಕರ ಹೂಡಿತು. ಅದೊಂದು ಸೇತುವೆ. ಕೆಳಗೆ ಹರಿಯುತ್ತಿರುವ ನದಿ. ಒಂದು ಹುಲಿ ಧುತ್ ಅಂತ ನಮ್ಮ ಕಾರ್ ಮುಂದೆ. ನಾವು ಸದ್ದು  ಮಾಡಬಾರದೆಂದು ಅಮ್ಮ ನನ್ನ ಮತ್ತು ತಮ್ಮನ ಬಾಯಿ ಗಟ್ಟಿ ಹಿಡಿದುಕೊಂಡಿದ್ದು, ನಮ್ಮ excitement ಇನ್ನೂ ಹಸಿಯಾಗಿದೆ.ಡ್ರೈವರ ಕೂಡಲೆ ಗಾಡಿಯ ಲೈಟ್ ಆಫ್ ಮಾಡಿದ. ಸ್ವಲ್ಪ ಹೊತ್ತು ಸುಮ್ಮನೆ ನಮ್ಮ ಕಡೆ ನೋಡಿ ಆಮೇಲೆ ನಿಧಾನಕ್ಕೆಬಳಿ ಸಾಗಿ ಪಂಜಿನಿಂದ ಟಾಪ್ ಮೇಲೆ ಹೊಡೆಯಿತು. ಕಾರ್ ಗಡಗಡ ನಡುಗಿದ್ದು ಇನ್ನೂ ನೆನಪಿದೆ. ಆಗ ಅಪ್ಪ, ಡ್ರೈವರ್ ಗೆ ಒಟ್ಟೊಟ್ಟಿಗೆ ಬೆಳಕು ಹಾಗೂ ಹಾರ್ನ್ ಮಾಡಲು ಹೇಳಿದರು. ಡ್ರೈವರ್ ಲೈಟ್ ಆನ್ ಮಾಡಿ ಹಾರ್ನ್ ಹಾಕಿದ್ದೆ ಹಾಕಿದ್ದು, ಹುಲಿ ಒಂದೇ ಉಸುರಿಗೆ ಓಡಿ ಹೋಯ್ತು. :-)

ಆಮೇಲೆ ಅಪ್ಪನಿಗೆ ಬಿಹಾರ್ ಗೆ ಟ್ರಾನ್ಸ್ಫರ್ ಆಯ್ತು. ಅಪ್ಪ ಹೋಗುವ ಮೊದಲು ಕಾರ್ ಅನ್ನು ಗೂಡ್ಸ್ ಟ್ರೈನ್ ನಲ್ಲಿ ಮುಂದೆ ಕಳುಹಿಸಿದ್ದರು. ಅಪ್ಪ ಬಿಹಾರ್ ತಲುಪಿ ಅಲ್ಲಿನ ಬ್ರಾಂಚ್ ಜಾಯಿನ್ ಆಗಿ ಮೂರು ತಿಂಗಳು ಕಳೆದರೂ ಕಾರ್ ನ ಪತ್ತೆ ಇಲ್ಲ. ಅಂತೂ ಇಂತೂ ಪತ್ರ ಬರೆದು ಬರೆದೂ, ಅಲ್ಲಿ ಇಲ್ಲಿ ಫೋನಾಯಿಸಿ...ಒಂದು ದಿನ ಪಟ್ನಾದ ಗೂಡ್ಸ್ ಶೆಡ್ ನಿಂದ ಫೋನ್ ಬಂತು, ಕಾರು ತಲುಪಿದೆಯೆಂದು. ಅಪ್ಪ ಹೋಗಿ ನೋಡಿದರೆ ಅದು ರಿಪೇರಿ ಆಗದಷ್ಟು ನುಜ್ಜುಗುಜ್ಜಾಗಿತ್ತು. ಕೊನೆಗೆ ಗುಜರಿಯಲ್ಲಿ 200 ರೂ ಅಷ್ಟೆ ಬಂದಿತ್ತು. ಆಮೇಲೆ ನಮ್ಮ ಅಪ್ಪ ಕಾರ್ ಸುದ್ದಿಗೆ ಹೋಗಲಿಲ್ಲ.
ಮೊನ್ನೆ ಗೋಕರ್ಣಕ್ಕೆ ಹೋಗುವ ದಾರಿಯಲ್ಲಿ ಮಕ್ಕಳಿಗೆ ಇದನ್ನು ಹೇಳ್ತಾ ಇದ್ದೆ. ಈಗ ನಿಮ್ಮ ಜತೆ 
ಶ್ರೀಕಾಂತ್ ಬ್ಯಾಂಕ್ ನಲ್ಲಿದ್ದಾರೆಂದಾಗ ನನಗೆ ಖುಶಿ ಎನಿಸಿದ್ದು ಎರಡು ವರ್ಷಕ್ಕೊಮ್ಮೆ ಸಿಗುವ LFC (Leave fare concession). ಆದರೆ ನಮ್ಮ ಮದುವೆಯಾದ ಕೆಲವೇ ವರ್ಷದಲ್ಲಿ ಅದನ್ನು ನಿಲ್ಲಿಸಲಾಯಿತು. ಆಗ ನಮ್ಮ ಬೈಕಿಂಗ್, ಹೈಕಿಂಗ್, ಟ್ರೆಕ್ಕಿಂಗ್ ಅಂತ ಏನಾದರೂ ಇರುತ್ತಿತ್ತು. ನನ್ನ ಹಾಗೆ ಪ್ರಯಾಣಿಸುವ ಹುಚ್ಚು ನನ್ನ ಮಕ್ಕಳಿಗೂ ಇದೆ. ಹಾಗಾಗಿ ನಾವು ಎಲ್ಲಾದರೂ ಹೋಗುತ್ತಿರುತ್ತೇವೆ. ಶ್ರೀಕಾಂತ ಗೆ ಇತ್ತೀಚೆಗೆ ತುಂಬಾ ಕೆಲಸ ಹಾಗಾಗಿ ಈಗ ನಾವು ಮೂರು ಜನ , ಅಥವಾ ತಂಗಿ ಬಂದಾಗ ಅವಳು ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳು ಸೇರಿ ನಮ್ಮ ’ಲೇಡೀಸ್ ಓನ್ಲಿ’ ಟ್ರಿಪ್ ಶುರು ಆಯಿತು.
ಗೋಕರ್ಣಕ್ಕೆ ಹೋಗಲು ಕಾರಣ , ನನಗೆ ಸ್ಮಿತಾ ಕಾಯ್ಕಿಣಿ ವಾಟ್ಸಾಪ್ ನಲ್ಲಿ ಕಳುಹಿಸಿದ ಗೋಕರ್ಣದ ಚಿತ್ರಗಳು. ನಾನು ನಿಹಾ ಏನೇ ಆಗಲಿ ತಿಂಗಳಿಗೊಂದು ಸಲ ಎಲ್ಲಾದರೂ ಹೋಗಲೇ ಬೇಕೆಂದು ಡಿಸೈಡ್ ಮಾಡಿದ್ದೇವೆ. ಶ್ರೀಕಾಂತ ಗೆ ಅವರ ಕೆಲಸ, ಮಾಲವಿಕಾಳಿಗೆ ಅವಳ ಕಿರು ಉದ್ಯಮ ಬಿಟ್ಟು ಬರಲು ಆಗಲ್ಲ. ಹಾಗಾಗಿ ನಾನು ನಿಹಾ ರಜಾ ಇದ್ದಾಗ ಎಲ್ಲಾದರೂ ಹೋಗಿ ಬರುತ್ತೇವೆ. ಲಾಸ್ಟ್ ನಮ್ಮ ಟ್ರಾವೆಲ್ ಜುಲೈ ನಲ್ಲಿ ಆಗಿದ್ದು. ಆಮೇಲೆ ನಿಹಾ ಆಫಿಸ್ ನಲ್ಲಿ ಅವಳಿಗೆ ಒಂದು ಆಪ್ (App) ಹಾಗೂ ವೆಬ್ ಸೈಟ್ ಡೆವೆಲಪ್ ಮಾಡುವ ಅರ್ಜೆಂಟ್ ಕೆಲಸಗಳಿಂದ ಬಿಡುವು ಸಿಕ್ಕಿರಲಿಲ್ಲ. ಈ ಸಲದ ಲಾಂಗ್ ವೀಕೆಂಡ್ ವೇಸ್ಟ್ ಮಾಡಲು ಅವಳು ಸಿದ್ದಳಿರಲಿಲ್ಲ. ಹಾಗಾಗಿ ಅಮ್ಮ ನೀವು ಬರದಿದ್ದರೆ ನಾನೊಬ್ಬಳೆ ಹೋಗೋದು ಗ್ಯಾರಂಟಿ ಅಂದಳು. ಗೋಕರ್ಣದ ಹುಳ ಅವಳ ತಲೆಗೆ ನಾನೆ ಬಿಟ್ಟಿದ್ದು. ಸರಿ ಹೋಗುವುದೆಂದಾದ ಮೇಲೆ ಸ್ಮಿತಾ ಗೆ ಎಸಿಸ್ಟ್ ಮಾಡಲು ಹೇಳಿದೆ. ಅಲ್ಲಿನ ಲೋಕಲ್ ಗೈಡ್ ಮನೇಶ್ವರ್ ನಂ ಕೊಟ್ಟರು. ಮೊದಲು ಬಸ್ ನಲ್ಲಿ ಹೋಗುವುದೆಂದಿತ್ತು. ಇಲ್ಲಿಂದ ಬೆಳಗಾವಿ ಆಮೇಲೆ ಅಲ್ಲಿಂದ ಗೋಕರ್ಣ ತುಂಬಾ ಹತ್ತಿರ. ಆದರೆ ಶ್ರೀಕಾಂತ you can cover more places if you hire a vehicle 'ಅಂದ್ರು. ನಾವು ಯಾವಗಲೂ ಹಯರ್ ಮಾಡುವ ಅನ್ವೇಕರ್ ಮಾಮಾ ಸತಾರಾ ಟ್ರಿಪ್ ನಲ್ಲಿದ್ದರಿಂದ ಅವರೇ ಇನ್ನೊಂದು ಗಾಡಿಯವನ ಪರಿಚಯ ಮಾಡಿ ಕೊಟ್ಟರು. ಆ ಚಾಲಕನ ಹೆಸರು ರಾಜು. ಪುರ್ತಿ ನಮ್ಮ ಟೂರ್ ನಲ್ಲಿ ಡ್ರೈವರ್, ಗೈಡ್ ಅಂಡ್ ಬಾಡಿಗಾರ್ಡ್ .
ಅಲ್ಲಿ ಹೋಗುವ ಮ್ಯಾಡಂ, ಇಲ್ಲಿ ಹೋಗುವಾ ಮ್ಯಾಡಂ ಅಂತ ಅವನಿಗೆ ಎಲ್ಲಿಲ್ಲದ ಹುಮ್ಮಸ್ಸು. ಮನೇಶ್ವರ ಸಹಾಯದಿಂದ ಮಾಮೂಲಿ ಯಾತ್ರಾ ಸ್ಥಳಗಳು ಬಿಟ್ಟು ಹೊಸ ಹೊಸ ಜಾಗೆ ನೋಡುವ ಅವಕಾಶ ರಾಜುಗೂ...:-) ಇಲ್ಲಿವೆ ಕೆಲವು ಚಿತ್ರಗಳು. ಸ್ಮಿತಾ ಗೆ ಥಾಂಕ್ಸ್ ಹೇಳುತ್ತಾ.....ನಮ್ಮ ಮುಂದಿನ ಟ್ರಿಪ್ ನನ್ನ ತಂಗಿ ಮತ್ತು ಅವಳ ಮಕ್ಕಳು ಯು ಎಸ್ ನಿಂದ ಬಂದಾಗ ನೈನಿತಾಲ್ ಗೆ. ಅಲ್ಲಿ ಮಾಲವಿಕಳ ಕಾಲೇಜ್ ಮೇಟ್ ನ ಅಮ್ಮ ಹೋಮ್ ಸ್ಟೇ ನಡೆಸುತ್ತಾರೆ. ಸೋ ಪರಿಚಯದವರು ಸಿಕ್ಕಿದ್ದು ಖುಶಿ. looking forward to our trip involving flight and train

ಬೆಳಗಾವಿಯಿಂದ ಬೆಳಿಗ್ಗೆ 5.30 ಗಂಟೆಗೆ ಹೊರಟಿತು ನಮ್ಮ ಸವಾರಿ. ತುಂಬಾ ಮಂಜು ಕವಿದಿತ್ತು.




7.45 ಗೆ ಯೆಲ್ಲಾಪುರದ ಶಾನುಭೋಗ್ ಹೋಟಲ್ ನಲ್ಲಿ ಇಡ್ಲಿ ಸಾಂಬಾರ, ಟೀ ಕುಡಿದು ಮುಂದಿನ ದಾರಿ
 ಮೊದಲಿಗೆ ಮಾಗೋಡು ಫಾಲ್ಸ್ ಸಿಕ್ಕಿತು. ಇನ್ನು ಚಿತ್ರಗಳ ಮುಖಾಂತರ ಕತೆ ಹೇಳುತ್ತೇನೆ. :-)


ರಭಸದಿಂದ ಧುಮ್ಮುಕ್ಕುವ ನೀರಿನಿಂದಾಗಿ , ಹೊಗೆಭರಿತ ವಾತಾವರಣದ ಹಾಗೆ ಅನ್ನಿಸುತ್ತಿತ್ತು.








ಆ ಮೇಲೆ ದಾರಿಯಲ್ಲಿ ಸಣ್ಣಕ್ಕೆ ಮಳೆ ಹನೀತಾ ಇತ್ತು. ಅಷ್ಟರಲ್ಲೇ ತಮ್ಮನ ನಾಲ್ಕು ವಾಟ್ಸಾಪ್ ಮೆಸೇಜ್ ಎಲ್ಲಿದ್ದೀರಾ ಅಂತ. :-) ನಾವು ಮೂರೆ ಜನ ಹೋಗೋದು ಅವನಿಗೆ ಸುತಾರಾಂ ಇಷ್ಟವಿಲ್ಲ. ಅವನು ಬರುತ್ತೇನೆಂದಾಗ ನಾನು ನಯವಾಗ ತಿರಸ್ಕರಿಸಿದೆ. ಮಾತ್ರವಲ್ಲ ನಾವು ನಾವೇ ಹೀಗೆ ಹಲವಾರು ಬಾರಿ ತಿರುಗಾಡಿ  ಬಂದಿದ್ದೇವೆಂದು ಹೇಳಿದ್ದೆ,

10.45 ಗೆಲ್ಲ ನಾವು ಗೋಕರ್ಣ ತಲುಪಿದೆವು. ಎಂಟರ್ ಆಗುವಾಗಲೇ ಪಾರ್ಕಿಂಗ್ ಫೀ ತೆಗೆದುಕೊಂಡು ಬಿಡುತ್ತಾರೆ. ಯಾಕಂದ್ರೆ ಪುಟ್ಟ ಊರು ಮತ್ತು ಸಣ್ಣ ಸಣ್ಣ ಗಲ್ಲಿಯ ರಸ್ತೆ. ಹಾಗಾಗಿ ಹೋಗಲು ಬರಲು ಬೇರೆ ಬೇರೆ ದಾರಿ. ಅದೇ convenient ಕೂಡಾ. ಮೊದಲಿಗೆ ಗೋಕರ್ಣನಾಥೇಶ್ವರನ ದರ್ಶನ. ಹಳೆ ಹೊಸ construction. ದೊಡ್ಡ ಪ್ರಾಂಗಣ. ಚಪ್ಪಲಿ ಹೊರಗೆ ಬಿಟ್ಟು ಹೂ ಮಾರುವವರ ಬಳಿ ನೈದಿಲೆ, ದಾಸವಾಳ ಹೂಗಳನ್ನು ಮುತ್ತಗದ ಎಲೆಯಲ್ಲಿ ಹಾಕಿ ಕೊಟ್ಟಿದ್ದನ್ನು ತೆಗೆದುಕೊಂಡು ಕ್ಯೂ ನಲ್ಲಿ ನಿಂತು ಬಂದ ಜನರನ್ನು ಗಮನಿಸುತ್ತಾ ನಿಂತೆ. ಗರ್ಭಗುಡಿ ತಲುಪುವಷ್ಟರಲ್ಲಿ 12,00 ಗಂಟೆ ಆಗಿತ್ತು. ನಾವು ಒಳಗಿದ್ದ ಹಾಗೆಯೇ ಮುಖ್ಯ ದ್ವಾರವನ್ನು ಹಾಕಿ ಬಿಟ್ಟರು. ಇನ್ನು ದೇವರ ದರ್ಶನ ಸಂಜೆಯೆಂದು ತಿಳಿಯಿತು. ನಾವು ಸರತಿಯಲ್ಲಿ ಹೋಗಿ ಆತ್ಮ ಲಿಂಗವನ್ನು ಮುಟ್ಟಿ ಬಂದೆವು.
ನಿಹಾ ಗೆ ನನ್ನ ಅಜ್ಜ ಹೇಳಿದ ಕತೆ- ಗೋಕರ್ಣದಲ್ಲಿ ಶಿವನ ದೇವಸ್ಥಾನ ಕಟ್ಟಿದ ಬಗ್ಗೆ ಹೇಳಿದೆ. ನಿಮಗೆ ಬೇರೆ ವರ್ಶನ್ ಗೊತ್ತಿದ್ರೆ ದಯವಿಟ್ಟು ಹೇಳಿ.
ರಾವಣನ ತಾಯಿಗೆ ಪೂಜೆ ಮಾಡಲು ಒಂದು ಶಿವಲಿಂಗ ಬೇಕಿತ್ತಂತೆ. ರಾವಣನಿಗೆ ಎಲ್ಲೂ ಸಿಗಲಿಲ್ಲ. ಅದಕ್ಕೆ ಅವನು ಶಿವನ ಕುರಿತು ಕಠಿನ ತಪಸ್ಸು ಮಾಡಿದ. ಶಿವ ಸಂತೃಪ್ತನಾಗಿ ಆತ್ಮಲಿಂಗವನ್ನು ರಾವಣನ ಕೈಯಲ್ಲಿ ಕಳುಹಿಸಿಕೊಟ್ಟ. ಒಂದೇ ಶರತ್ತು ಏನೆಂದರೆ, ಯಾವ ಕಾರಣಕ್ಕೂ ಲಿಂಗ ವನ್ನು ನೆಲದ ಮೇಲೆ ಇಡಬಾರದು. ಇಟ್ಟರೆ ಅದು ಅಲ್ಲೇ ಸಮಾಧಿಯಾಗುತ್ತದೆಂದು. ಇದನ್ನು ನೋಡಿದ ವಿಷ್ಣು, ’ಇವನ ಕೈಗೆ ಶಕ್ತಿಯುತ ಆತ್ಮ ಲಿಂಗ ಬಂದಿದೆ. ಇದನ್ನು ಅವನು ಕೆಟ್ಟ ಕಾರ್ಯಕ್ಕಾಗಿ ಬಳಸುತ್ತಾನೆಂದು, ಹೇಗಾದರೂ ಮಾಡಿ ಅದನ್ನು ರಾವಣ ನೆಲದ ಮೇಲೆ ಇಡುವಂತೆ ಮಾಡಬೇಕೆಂದು ನಿಶ್ಚಯಿಸುತ್ತಾನೆ. ರಾವಣ ಆತ್ಮಲಿಂಗವನ್ನು ಹಿಡಿದುಕೊಂಡು ಗೋಕರ್ಣದ ಸಮುದ್ರ ತಡಿಯಲ್ಲಿ ನಡೆಯುತ್ತಿರುತ್ತಾನೆ.  ವಿಷ್ಣು ತನ್ನ ಸುದರ್ಶನ ಚಕ್ರವನ್ನು ಸುರ್ಯನಿಗೆ ಅಡ್ಡ ಇಟ್ಟು ಮುಸ್ಸಂಜೆಯ ಸಮಯದ atmospheric look ಕೊಡಿಸುತ್ತಾನೆ, ರಾವಣ ನೇಮ ನಿಷ್ಟೆಯನ್ನು ಪಾಲಿಸುವುದರಲ್ಲಿ ಎತ್ತಿದ ಕೈ. ಸಂಜೆಯ ಸಂಧ್ಯಾವಂದನೆಯ ಸಮಯವಾಯಿತೆಂದು ಅತ್ತ ಇತ್ತ ನೋಡುತ್ತಿರುವಾಗಲೇ, ಬಾಲ ಬ್ರಾಹ್ಮಣನ ವೇಷ ತೊಟ್ಟ ವಿಷ್ಣು ಕಾಣಸಿಗುತ್ತಾನೆ. 'ಬಾಲಕ, ನಾನು ಕೈ ಕಾಲು ಮುಖ ತೊಳೆದು ಸಂಧ್ಯಾವಂದನೆ ಮಾಡಿ ಬರುವ ತನಕ ಈ ಲಿಂಗವನ್ನು ಹಿಡಿದು ಕೋ, ಯಾವುದೇ ಕಾರಣಕ್ಕೆ ಇದನ್ನು ನೆಲದ ಮೇಲೆ ಇಡಬೇಡ’ ಎನ್ನುತ್ತಾನೆ. ಅದಕ್ಕೆ ಬಾಲಕ ನೋಡಲು ಭಾರ ಇದ್ದ ಹಾಗೆ ಕಾಣುತ್ತೆ. ನಾನು ಮೂರು ಸಲ ಕರೆಯುತ್ತೇನೆ. ಅಷ್ಟರಲ್ಲಿ ನೀವು ಬರದಿದ್ದರೆ ನಾನು ಲಿಂಗವನ್ನು ನೆಲದ ಮೇಲೆ ಇಡುತ್ತೇನೆ’ ಅಂತ ಹೇಳುತ್ತಾನೆ. ಸಮುದ್ರದಲ್ಲಿ ಕೈ ಕಾಲು ತೊಳೆಯಲು ಹೋಗುವಾಗ ಸಮುದ್ರ ದೂರ ದೂರ ಹೋಗುತ್ತಾ ಇತ್ತು. ಕೊನೆಗೆ ವಿಷ್ಣು ಸಮುದ್ರದಲ್ಲಿ ಗಾಳಿ ಮೊರೆತ ಸೃಷ್ಟಿಸಿ, ಮೂರು ಸಲ ರಾವಣನನ್ನು ಕರೆದ ಹಾಗೆ ಮಾಡಿ, ಆತ್ಮಲಿಂಗವನ್ನು ನೆಲದ ಮೇಲೆ ಇಟ್ಟೇ ಬಿಟ್ಟ. ಲಿಂಗ ಅಲ್ಲಿ ಚಿರ ಸ್ಥಾಯಿಯಾಯಿತು....ಗೋಕರ್ಣನಾಥೇಶ್ವರನ (ಮಹಾಬಲೇಶ್ವರ) ದೇವಸ್ಥಾನವಾಯಿತು. ಮುಂದೆ ಏನಾಯ್ತು ಗೊತ್ತಿಲ್ಲ ಪಾಪದ ರಾವಣನಿಗೆ.poor chap!!
ನಮಗೆ ದೇವಸ್ಥಾನ ಮುಂತಾದ್ದರಲ್ಲಿ ಅಷ್ಟೊಂದು ಆಸಕ್ತಿಯಿರಲಿಲ್ಲ. ಯಾವುದಾದರೂ ಶಾಂತ ಸ್ಥಳದಲ್ಲಿ ನಿಹಾ ಗೆ ಚಿತ್ರ ಬರೆಯಲು ಅವಕಾಶವಾದರೆ ಸಾಕಿತ್ತು, ಮತ್ತು ಬೀಚ್ ನಲ್ಲಿ ಕೊಂಚ ಸಮಯ. ಗೋಕರ್ಣ ಚೆಂದದ ಊರು, ನಮ್ಮ ತೀರ್ಥಹಳ್ಳಿಯ ಹಾಗೆ- temple town. ಹಸಿರು ಬೆಟ್ಟ, ಹಸಿರಿನ ವಾತಾವರಣದಿಂದ ಕೂಡಿದೆ. ಸ್ಮಿತಾ ಏನೆಲ್ಲಾ ನೋಡಬಹುದೆಂದು ದೊಡ್ಡ ಲಿಸ್ಟ್ ಎ ಕೊಟ್ಟಿದ್ದರು. ನಾನು ಎರಡು ದಿನ ಸಾಕಾಗುತ್ತಾ ಅಂತ ಕೇಳಿದ್ದಕ್ಕೆ, ಗೋಕರ್ಣ ಸಣ್ಣ ಊರು ಅಂದಷ್ಟೆ ಹೇಳಿದ್ದರು. ಹೌದು ನಾಲ್ಕು ಸಲ ತಿರುಗಾಡಿದ ಮೇಲೆ ನಮಗೆ ಎಲ್ಲೆಲ್ಲಿ ಏನೇನಿದೆ ಅಂತ ತಿಳಿಯುತ್ತಾ ಹೋಯಿತು. ಮತ್ತು ಸ್ಮಿತಾ- ಸೆಕೆ ಬಿಸಿಲು ಇರುತ್ತೆ ಕ್ಯಾಪ್, sun screen lotion ಇಟ್ಟುಕೊಳ್ಳಿ ಅಂದಿದ್ದರು, ನಾವು ಮೂರು ಜನರೂ ಮುಖಕ್ಕೆ ಏನನ್ನೂ ಹಚ್ಚುವುದಿಲ್ಲ, ಹಾಗಾಗಿ ತಲೆಗೆ ಟೋಪಿ ಮತ್ತು ಕೊಡೆಗಳನ್ನು ಹಿಡಿದುಕೊಂಡಿದ್ದೆವು. ನಮ್ಮ ಅದೃಷ್ಟ ಎನ್ನಲೇ ಬೇಕು. ಮೋಡ ಮತ್ತು ಹನಿ ಮಳೆಯ ವಾತಾವರಣ ನಮಗೆ ತುಂಬಾ ಅನುಕೂಲವಾಯಿತು. especially ಸಮುದ್ರ ತೀರದಲ್ಲಿ ಸಮಯ ಕಳೆಯುವಾಗ.
ದೇವಸ್ಥಾನದಿಂದ ಹೊರಗೆ ಬಂದು ದೇವಸ್ಥಾನದ ಸುತ್ತ ಮುತ್ತ ಸ್ವಲ್ಪ ಹೊತ್ತು ಕಳೆದೆವು. ಆಮೇಲೆ ಸಮುದ್ರ ತೀರಕ್ಕೆ ಹೋದೆವು. ಇವತ್ತು ಅಮವಾಸ್ಯೆ. ನೀರಲ್ಲಿ ಹೋದರೆ ಒಳ್ಳೆಯದು ಅಂದ ರಾಜು. ಅದಕ್ಕೆ ನಾನು ಕಾಲು ಒದ್ದೆ ಮಾಡಿದ ಹಾಗೆ ಮಾಡಿದೆ. ನನಗೆ ಮುಂಬೈ ನಲ್ಲಿ ಬೀಚ್ ಬಳಿಯಿದ್ದರೂ ನೀರಲ್ಲಿ ಹೋಗಕ್ಕೆ ಅಷ್ಟು ಇಷ್ಟ ಇರುತ್ತಿರಲಿಲ್ಲ. ದೂರದಿಂದ ಅಲೆಗಳ ಆಟ ನೋಡುವುದರಲ್ಲೇ ಹಿತ.
ಎಷ್ಟು ಚೆಂದದ ಕಲಾತ್ಮಕ ಹೊರ ಮೈ ಈ ಮನೆಗೆ??!! ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ


ಸಮುದ್ರಕ್ಕೆ ಭೇಟಿ.

ಇಲ್ಲಿ ನಾವು ಗೋಕರ್ಣದ ಲೋಕಲ್ ಗೈಡ್ ಮನೇಶ್ವರ್ ಗೆ ಕಾಯ್ತಾಇದ್ವಿ. ಮನೇಶ್ವರ್ ಅವರದ್ದು ರಿಕ್ಷಾ ಇದೆ. ನಾವು ಗಾಡಿ ಮಾಡಿಕೊಂಡು ಹೋದದ್ದರಿಂದ ಅವರು ಅವರ ರಿಕ್ಷಾವನ್ನು ಸಮುದ್ರದ ತಡಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಬಂದರು. ನಿಹಾ ಒಳ್ಳೆಯ ಮೀನು ಊಟ ಮಾಡಬೇಕೆಂದಿತ್ತು. ಮನೇಶ್ವರ್ ಅವರ ಪರಿಚಯದ ಪುಟ್ಟ ಹೋಟಲ್ ಗೆ ಕರೆದುಕೊಂಡು ಹೋದರು. ಅಲ್ಲಿ ನಮಗೆ ರುಚಿಯಾದ ಮೀನಿನ ಊಟ ಸಿಕ್ಕಿತು.

ಮಾಲವಿಕಾ ಮಾತ್ರ ಕಷ್ಟಪಟ್ಟು ಊಟ ಮಾಡಿದಳು. ಅಲ್ಲಿಂದ ಓಂ ಬೀಚ್ ಗೆ ಹೋದೆವು.
 ಇಲ್ಲಿ ಹಲವಾರು ಸಿನಿಮಾ ಶೂಟ್ ಗಳಾಗಿವೆಯಂತೆ. ಮೇಲೆ ಯಾವುದೋ ಸ್ಪೋಟ್ ನಿಂದ ನೋಡಿದ್ರೆ ಈ ಬೀಚ್ ಓಂ ಆಕಾರದಲ್ಲಿ ಕಾಣುತ್ತಂತೆ. ನಿಹಾ ಚಿತ್ರ ಬರೆಯಲು ಕೂತರೆ, ನಾನು ಒಂದು ಬಂಡೆ ಮೇಲೆ ಬಂಡೆಯಂತೆಯೇ ಪವಡಿಸಿ ಜನರನ್ನು ನೋಡುತ್ತಿದ್ದೆ. ಮಾಲವಿಕಾ ಉದ್ದ್ದಕ್ಕೆ ಒಂದು ಸಮುದ್ರ ಕಿನಾರೆಯ ವಾಕ್ ಕೈಗೊಂಡಳು. ಸಮಯ ಮಧ್ಯಾಹ್ನದ ಮೂರು ಆದರೂ ಮೋಡದ ವಾತಾವರಣದಿಂದಾಗಿ ಇದೆಲ್ಲ ಸಾಧ್ಯವಾಯಿತು
ಇಲ್ಲಿ ನೀಹಾ ಚಿತ್ರ ಬರೆಯುತ್ತಿದ್ದ ಹಾಗೆ ಹಲವಾರು ಜನ ಕೂಡಿದರು, artist ಆ, architect ಆ , ಯಾವೂರು ಮುಂತಾದೆಲ್ಲ. ಅವಳ ಸುತ್ತು ಜನರು ಸೇರಿದ್ದನ್ನು ಕಂಡು ನಮ್ಮ ಡ್ರೈವರ್ ರಾಜು ಅಲ್ಲಿಗೆ ಹೋದ. ಕೂಡಲೇ ಜನ ಜಾಗ ಖಾಲಿ ಮಾಡಿ ಹೋದರು.


ಚೆಂದದ ಕೊಡೆಯಿಂದಾಗಿ ಚಿತ್ರ ಇನ್ನೂ ಚೆನ್ನಾಗಿ ಕಾಣುತ್ತಿದೆಯಲ್ಲವಾ?

ಇಲ್ಲಿಂದ ನಮಗೆ ಮನೇಶ್ವರ್ ಗೋಗರ್ಭಕ್ಕೆ ಕರೆದೊಯ್ದರು. ಹಲವಾರು ಜನರಿಗೆ ಇದರ ಬಗ್ಗೆ ಗೊತ್ತಿಲ್ಲವಂತೆ. ಗುಡ್ಡ ಪ್ರದೇಶದಲ್ಲಿ ಸ್ವಲ್ಪ ಮೇಲಕ್ಕೆ ಹೋದರೆ ಅಲ್ಲೊಂದು ಪುಟ್ಟ ಗುಹೆ. ಸರೀ ನೋಡಿದರೆ ಮಾತ್ರ ಗೋಚರಿಸುವಂತದ್ದು.
ಗುಹೇಶ್ವರ
 ಒಂದು ಪುಟ್ಟ ಬೆಳಕಿಂಡಿಯಿಂದ ಗುಹೆಯೊಳಗೆ ಬೆಳಗು
ಬೆಳಕಿಂಡಿ ಮೇಲಿನಿಂದ

ಆ ಗುಹೆಯಿಂದ ಮುರ್ಡೇಶ್ವರ, ಕಾರವಾರ ಮತ್ತು ಮೀರ್ಜಾನ್ ಫೋರ್ಟ್ ಗೆ ದಾರಿಯಿದೆ ಅಂದರು. ತುಂಬಾ ಕತ್ತಲೆ ಮಾತ್ರ ಬಾವಲಿಗಳು ನಮ್ಮ ತಲೆ ಕಿವಿಗಳ ಹತ್ತಿರವೇ ಓಡಾಡಿಕೊಂಡಿದ್ದವು. ನಾನು ಕಿವಿ ಮೇಲೆ ಕೈ ಇಟ್ಟುಕೊಂಡೇ ಇದ್ದೆ. ಮನೇಶ್ವರ ತುಂಬ ಚಿಕ್ಕವರಿದ್ದಾಗ  ಆ ಗುಹೆ ಹೊಕಿದ್ದರಂತೆ. ಸುಮಾರು ಎರಡು ಕಿ ಮಿ ದೂದ ನಡೆದ ನಂತರ, ಉಸಿರಾಡಲು ಆಗದೇ ಅವರ ಮಿತ್ರರು ಅವರನ್ನು ಅಲ್ಲಿಂದ ಹೊರಗೆ ತಂದರಂತೆ.
ಪುನ: ದೇವಸ್ಥಾನದ ಬೀಚ್ ಬಳಿ ಕರೆದುಕೊಂಡು, ಅಲ್ಲಿಂದಲೇ ಏನೇನು ನೋಡಬೇಕೆಂದು ನಮಗೆ ತೋರಿಸಿದರು. ಮನೇಶ್ವರ ದೇವಸ್ಥಾನ, ರಾಮ ತೀರ್ಥ etc. ಅವರಿಗೆ ಥ್ಯಾಂಕ್ಸ್ ಹೇಳಿ. ನಮ್ಮ ಮುಂದಿನ ಕಾರ್ಯಕ್ರಮ ಹಮ್ಮಿಕೊಂಡೆವು. ಮೊದಲಿಗೆ ಮನೇಶ್ವರ ದೇವಸ್ಥಾನ. ಇಲ್ಲಿವೆ ಚಿತ್ರಗಳು. ಮಧ್ಯಾಹ್ನ ವಾದುದರಿಂದ ಗರ್ಭಗುಡಿ ಮುಚ್ಚಿದ್ದವು. ಕೂರಲು ಪ್ರಶಸ್ಥ ಜಾಗ ಇತ್ತು. ನಾನು bhraminy kite ಮತ್ತು ಕಾಗೆಗಳ ಜಗಳ ನೋಡುತ್ತಿದ್ದರೆ, ನಿಹಾ ದೇವಸ್ಥಾನದ ಪೈಂಟಿಂಗ್ ನೋಡುತ್ತಿದ್ದಳು, ಮಾಲವಿಕಾ ಅಲ್ಲೇ ಇದ್ದ ಕಿರು ದಾರಿಗಳಲ್ಲಿ ವಾಕ್ ಹೋದಳು. ನಾನು ಕೂತ ಸ್ಥಳದಿಂದ ನನಗೆ ಕೆಳಗೆ ಬಹುದೂರದ ವರೆಗೆ ಕಾಣುತ್ತಿತ್ತು. ಅಲ್ಲಿ ಒಂದೆಡೆ ಮಾಡು ರಿಪೇರಿಯಾಗುತ್ತಿತ್ತು. ಪಿತೃ ಪಕ್ಷ ವಾದ್ದರಿಂದ ಪಿತರಿಗೆ ತರ್ಪಣ ನೀಡಲು ಬಂದ ಜನರು ಹಲವಾರು. ಅವರೆಲ್ಲ ಪುರೋಹಿತರ ಮನೆಗಳಲ್ಲಿ, ಯಾತ್ರಿ ನಿವಾಸದಲ್ಲಿ ಉಳಿದುಕೊಂಡಿದ್ದರು. ಮಾತ್ರವಲ್ಲ long week end ವಾದ್ದರಿಂದ, ಟೂರಿಸ್ಟ್ ಗಳೂ ಹಲವಾರು. otherwise ಅಲ್ಲಿ ಸೀಸನ್ ಶುರು ವಾಗುವುದು ನವೆಂಬರ್ ನಿಂದ ಫೆಬ್ರವರಿ ವರೆಗಂತೆ. " ಆಗ ಇಲ್ಲಿ ರಸ್ತೆ ನೆ ಕಾಣ ಸಿಗಲ್ಲ ಮ್ಯಾಡಂ, ಅಷ್ಟೊಂಡು foreigners ತುಂಬಿರುತ್ತಾರೆ. "ನನಗೆ ಜರ್ಮನ್, ಇರಾನಿ ಮತ್ತು ಅಮೇರಿಕನ್ ಇಂಗ್ಲಿಷ್ ಗೊತ್ತಿರೋ ಬಗ್ಗೆ ಆ ಊರಿನಿಂದ ಬಂದವರಿಗೆಲ್ಲ ನನ್ನ ಬಗ್ಗೆ ಆಶ್ಚರ್ಯ" ಅಂತ ಅರ್ಧ ನಾಚುತ್ತ ಅರ್ಧ ಹೆಮ್ಮೆಯೊಂದಿಗೆ ಹೇಳಿಕೊಂಡರು ಮನೇಶ್ವರ್. ಅವರದ್ದೊಂದು ಫೋಟೊ ತೆಗೆಯಲು ಮರೆತೇ ಹೋಯಿತು.
’ಡೇರಿಂಗ್ ಡ್ಯಾನಿ’ ಗೊತ್ತಾ? ಅಂತ ಕೇಳಿದರು ನನಗೆ. ಇಲ್ಲವಲ್ಲ ಯಾರವರು ಅಂತ ಕೇಳಿದೆ. ಅದೇ ಮ್ಯಾಡಂ ಫಿಲ್ಮ್ ನಲ್ಲಿ ಸ್ಟಂಟ್ ಎಲ್ಲ ಮಾಡ್ತಾರೆ??!! ಅವನು ನನ್ನ ಫ್ರೆಂಡ್ ಅಂದರು. 
ಕನ್ನಡ ಫಿಲ್ಮ್ ನಲ್ಲಾ? ಅಂತ ಕೇಳಿದೆ. ಹೌದೆಂದರು.
ನಾನು ಕನ್ನಡ ಫಿಲ್ಮ್ ನೋಡಲ್ಲ ಅಂದಿದ್ದಕ್ಕೆ ಸ್ವಲ್ಪ ಪೆಚ್ಚಾದರು. :-)
ಮನೆಯಲ್ಲಿ ಯಾರ್ಯಾರಿದ್ದಾರಂತ ಕೇಳಿದೆ. ಅಮ್ಮ, ಅಣ್ಣ ಮತ್ತು ನಾನು ಎಂದರು. ಸ್ವಲ್ಪ ಜಮೀನಿದೆಯಂತೆ. ಅಲ್ಲಿ ಅವರು ಭತ್ತ ಬೇಳೀತಾರಂತೆ.
"ಸೀಸನ್ ನಲ್ಲಿ ನಮ್ಮ ಹೊಟಲ್ ಓಪನ್ ಮಾಡ್ತೇವೆ, ಮತ್ತು ಬಾಡಿಗೆಗೆ ನಮ್ಮ ಟೂ ವ್ಹೀಲರ್ಸ್ ಇದೆ ಮ್ಯಾಡಂ, ನೀವೆಲ್ಲ ಆಗ ಬರಲೇ ಬೇಕು. ಒಳ್ಳೆ ಫಿಶ್ ಕರಿ ಮಾಡ್ತೇವೆ’ ಅಂದಿದ್ದಾರೆ. ನೀಹಾ ಹೋಗ್ತಾಳಂತೆ to have that touristy feeling..:-)





ಕೆಳಗಡೆಯಿಂದ ಕಾಣುವ ದೇವಸ್ಥಾನದ ಚಿತ್ರ, ಹಾಗು ಒಳಗಡೆ ಪ್ರಾಂಗಣದಲ್ಲಿರುವ ಪೈಂಟ್ಂಗ್


ಒಳದಾರಿಯಲ್ಲಿ ಹಾಗೆ ಸುಮ್ಮನೆ ನಡೀತಾ ಹೋದೆವು. ಅಲ್ಲಿ ಪರ್ಣಕುಟಿ ಎಂಬ ಮನೆಯ ಹೆಸರು ಕಾಣಿಸಿತು. ಅಲ್ಲೆ ಸೆಲ್ ಫೋನ್ ನಲ್ಲಿ ಮಾತಾಡ್ತಾ ಇರುವ ಪುರೋಹಿತರಿಗೆ, ’ಇಲ್ಲಿ ಜಯಂತ ಕಾಯ್ಕಿಣಿ’ಯವರ ಮನೆ ಎಲ್ಲಿ ಅಂತ ಕೇಳಿದೆ. ಅವರು ಸನ್ನೆಯಿಂದ ಈ ಮನೆಯನ್ನು ತೋರಿಸಿದರು. ನಿಹಾ ಗೆ ಹಠ, ’ಫೋಟೊ ತೆಗೆದು ನಿನ್ನ ಫ್ರೆಂಡ್ ಗೆ ಕಳುಹಿಸು’ ಅಂತ..ಅದಕ್ಕೆ ಬೇಡ ಬೇಡ ಅಂತ ನಾಚ್ಕೋತಾ ಪೋಸ್ ಕೊಟ್ಟಿದ್ದು. :-)

ಪರ್ಣಕುಟಿ ಎಂತ ಚೆಂದದ ಹೆಸರು. ಅದರ ಸೈಡ್ ವಿಂಗ್...:-)
 ಮಕ್ಕಳಿಗೆ ಸಮುದ್ರ ಸ್ನಾನ ಮಾಡಬೇಕಿತ್ತು. ಪೂರ್ತಿ ಸಂಜೆ ಯಾದ ಮೇಲೆ ಹೋಗುವ ನಿರ್ಧಾರ ಮಾಡಿದೆವು, ಡ್ರೈವರ್ ಗೂ ರೆಸ್ಟ್ ಬೇಕಿತ್ತು. ಆದ್ದರಿಂದ ನಾವು ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ ಬಂಡಿಕೇರಿ ಮಠದ (ಬಂಡಿ ಹೋಗುವ ಜಾಗ ಅಷ್ಟೆ ಇರುವುದರಿಂದ ಈ ಹೆಸರು ಬಂದಿದ್ದಂತೆ) ಕಡೆ ಪಯಣಿಸಿದೆವು. ಸುತ್ತು ಬಳಸುವ ಕೊನೆಯಿಲ್ಲದ ಒಳದಾರಿಯಲ್ಲಿ ಕೊನೆಗೂ ಮಠ ತಲುಪಿದೆವು. ಊರಿನಿಂದ ಕೊಂಚ ಒಳಕ್ಕಿದೆ ನಮ್ಮ ಕೊಂಕಣೀಯರ ಈ ಚಿತ್ರಾಪುರ ಮಠ. ಒಳ್ಳೇ picturesque location. ಸ್ವಲ್ಪ ಹೊತ್ತು ವಿಶ್ರಮಿಸಿ ಸಂಜೆ 5.30 ಗೆ ಕುಡ್ಲೇ ಬೀಚ್ ಗೆ ಹೋಗುವುದೆಂದು ನಿರ್ಧರಿಸಿದೆವು.

ಸಂಜೆ ಕುಡ್ಲೆ ಬೀಚ್ ಕಡೆ ಏನೋ ಹೋದ್ವಿ. ಆದರೆ ನಾವು ಬೀಚ್ ತಲುಪುವಷ್ಟರಲ್ಲಿ ಕತ್ತಲೆಯಾಗಿತ್ತು. ಚೆಂದದ ಸೂರ್ಯಾಸ್ತ ಸಿಕ್ಕಿತು. ಆದ್ರೆ ನೀರಲ್ಲಿ ಆಡ್ತಾ ಕೂತ್ರೆ  ತುಂಬಾ ಕತ್ತೆಲೆಯಾಗ್ತಿತ್ತು. ಅಲ್ಲಿನ ದಾರಿಯಲ್ಲಿ ಬೆಳಕಿರಲಿಲ್ಲ ಮಾತ್ರವಲ್ಲ ದೊಡ್ಡ ದೊಡ್ಡ ಕಂದಕಗಳೂ, ಬಂಡೆಗಳೂ ಇದ್ವು. ಎರಡು ಹೋಟಲ್ ಗಳಿದ್ವು ಬೀಚ್ ಗೆ ತಾಗಿಕೊಂಡು ಅದರಲ್ಲೂ ಮಿಣಿ ಮಿಣಿ ಬೆಳಕು. ಅದಕ್ಕೆ ಬೇಗ ಅಲ್ಲಿಂದ ಹೊರಗೆ ಬಂದ್ವಿ.ರಾತ್ರಿಯ ನಮ್ಮ ಊಟ ಪೈ ರಿಫ್ರೆಶಮೆಂಟ್ಸ್ ನಲ್ಲಿ. ಪೂರ್ತಿ ವೆಜಿಟೇರಿಯನ್ ಊಟ, ಮಾಲವಿಕಾಗೆ ಸಮಾಧಾನ. ನಾವು ಉಳಿದುಕೊಂಡಿದ್ದ ಬಂಡೀಕೇರಿ ಮಠದಲ್ಲೂ ಊಟ ತಿಂಡಿಯ ವ್ಯವಸ್ಥೆಯಿತ್ತು. 








ಮರುದಿನ ಬೆಳಿಗ್ಗೆ  ದೇವಸ್ಥಾನದ ಬೀಚ್ ನಲ್ಲಿ  ಬೆಳಿಗ್ಗೆ ನೀರಿಗಿಳಿದು, ಬ್ರೇಕ್ ಫಾಸ್ಟ್ ಮಾಡಿ ಅಲ್ಲಿಂದ ಕುಮಟೆಯಲ್ಲಿರುವ ಮಿರ್ಜಾನ ಕೋಟೆಗೆ ಭೇಟಿ ನೀಡುವುದೆಂದಾಯಿತು.
ಬೆಳಗಿನ ದೃಶ್ಯ

ಮಾಲು ನಿಹಾ ನೀರಿಗಿಳಿದರೆ ನಾನು ಈ ಮೀನು ತರುವ ಚಿಕ್ಕ ದೋಣಿಗಳನ್ನು ನೋಡುತ್ತಲಿದ್ದೆ.



ಪಿತೃಗಳಿಗೆ ತರ್ಪಣ ನೀಡುವ ಕೆಲಸದ ಮಧ್ಯೆ ಬ್ರೇಕ್ ತೆಗೊಂಡು ಫೋಟೊ ತೆಗೆಸಿಕೊಳ್ಳುತ್ತಿರುವುದು :-)
ನಮ್ಮ ಬೆಳಗಿನ ಉಪಾಹಾರ ಬೀಚ್ ಗೆ ತಾಗಿಕೊಂಡ ಸ್ವಾತಿ ಹೋಟಲ್ ನಲ್ಲಿ. ವಿದೇಶಯರಿಗೂ ಹೇಳಿಮಾಡಿಸಿದಂತಹ ತಿಂಡಿಗಳು ಇದ್ವು. ಪಾಸ್ತಾ, ಬ್ರೆಡ್ ಟೋಸ್ಟ್, Muesli, Oats ಮುಂತಾದವು. ಇಡ್ಲಿ, ವಡಾ ದೋಸಾ ಕೂಡ ಇದ್ವು. 

ಕುಮಟೆಗೆ ಹೋಗುವ ದಾರಿಯಲ್ಲಿ ಯಶವಂತ ಚಿತ್ತಾಲರ ಕಾದಂಬರಿಗಳಲ್ಲಿ/ಕತೆಗಳಲ್ಲಿ ಬರುವ ಹನೇಹಳ್ಳಿ, bankikoodlu, chittaapoora  ಊರುಗಳನ್ನು ಕಂಡು ರೋಮಾಂಚನವಾಯಿತು. 
ಕೋಟೆಯ ಚಿತ್ರ ಇನ್ನೊಂದು ಪೋಸ್ಟ್ ನಲ್ಲಿ.
:-)