October 21, 2012

ಚಾಟಿ- ಒಂದು ನ್ಯಾನೋ ಕತೆ


ಬೆಳಿಗ್ಗೆ ಟೀ ಕುಡೀತಾ ಹೊಳೆದ ಒಂದು ನ್ಯಾನೋ ಕತೆ...

ಆ ದಿನ

ಹೀಗೆ ಮನೆಗೆ ಬಂದ ಕೀಳು ಜಾತಿಯವನಿಗೆ ನಾವು ಉಪಯೋಗಿಸುವ ಬೆಲೆಬಾಳುವ ಕಪ್ ನಲ್ಲಿ ,ಇಷ್ಟು ದಪ್ಪ ಹಾಲು ಹಾಕಿ ಮಾಡಿದ ಚಹಾ ಕೊಡುವುದೇ? ಗಾಂಧಿ ತತ್ವಗಳನ್ನು ಪಾಲಿಸುವ ಅವಳ ತಂದೆಯ ಬಳಿ ಎಲ್ಲ ಜನರನ್ನೂ ಸಮಾನವಾಗಿ ಕಾಣುವುದನ್ನು ಕಲಿತ ಅವಳು ಮದುವೆಯಾಗಿ ಬಂದ ಮನೆಯಲ್ಲಿ ಕಲಿತ ಮೊದಲ ಪಾಠ ಅವಳನ್ನು ಕಕ್ಕಾಬಿಕ್ಕಿಯಾಗಿಸಿತ್ತು
ಇಂದು
ಆ ಕೀಳು ಜಾತಿಯವ ಈಗ ದೇಶದ ದೊಡ್ಡ ವ್ಯಕ್ತಿ. ಅವರು ಮನೆಗೆ ಬರುವವರಿದ್ದಾರೆ, 'ಲಾಕರ್ ನಿಂದ ನಮ್ಮ ಬೆಳ್ಳಿ
ಸಾಮಾನುಗಳನ್ನು ತಂದಿಡು ಬೆಳ್ಳಿ ಲೋಟದಲ್ಲೇ ಅವರಿಗೆ ಬಾದಾಮಿ ಹಾಲು ನೀಡಬೇಕು' ಎಂಬ ಆಜ್ಝೆ ಅವಳಿಗೆ...

ಆ ದಿನ: ಆ ಕೀಳು ಜಾತಿಯವನಿಗೆ ಕೇಳಿಸುವ ಹಾಗೆ ಆಕೆಯ ಗಂಡ ಗರ್ಜಿಸಿದ, 'ಇನ್ನು ಆ ಕಪ್ ಬೇರೆ ಕಡೆ ಇಟ್ಟು ಬಿಡು. ಇನ್ನು ಮುಂದೆ ಅಂವ ಬಂದಾಗ ಎಲ್ಲ ಆ ಕಪ್ ನಲ್ಲೆ ಅವನಿಗೆ ಚಹಾ ಕೊಡು....
ಇಂದು: ಅಂವ" ತಾಯಿ ನನಗೆ ಈ ಬೆಳ್ಳಿ ಲೋಟದಲ್ಲಿ ಹಾಲು ಬೇಡ. ನನಗೋಸ್ಕ್ರರ ಆ ದಿನ ಬೇರೆ ಇಟ್ಟ ಕಪ್ ನಲ್ಲೆ ಚಹಾ ಕೊಡಿ'.....
(ಚಾಟಿ ಹಾಗೂ ತಿರುಗೇಟು ಎನ್ನುವ ಎರಡು ಶಿರ್ಷಿಕೆಗಳ option ನನಗೆ ಫೇಸ್ ಬುಕ್ ನಲ್ಲಿ ಸಿಕ್ಕಿತ್ತು. 'ಚಾಟಿ' ಸೂಚಿಸಿದವರು ಮಿತ್ರ ಶ್ರೀವತ್ಸ ಜೋಶಿ ಮತ್ತು ತಿರುಗೇಟು ಬೈ ಸಾವಿತ್ರಿ ಹಟ್ಟಿ...)
:-)
ಚಾ/Tea one and the same...;-)

October 18, 2012

ಇಸ್ತ್ರೀ ಅಜ್ಜಿಯೂಂ ಸೀರೆಯೂಂ

ಮೊನ್ನೆ ನಮ್ಮ ಮನೆಯಿಂದ ನಮ್ಮ ಹಳೆ ಮನೆ ಇದ್ದ area- ಮಹಾಲಕ್ಶ್ಮಿ ಲೇ ಔಟ್ ಕಡೆ ಸುಮ್ಮನೆ ನಾನು ಶ್ರೀಕಾಂತ ವಾಕ್ ಹೋಗಿದ್ವಿ. ಅಲ್ಲಿ ಒಂದು ಕಡೆ ಶ್ರೀಕಾಂತ ಹಣ್ಣು ಖರೀದಿಸಬೇಕಾದ್ರೆ ನನ್ನ ಕಣ್ಣು ಅಲ್ಲೇ ಲೈಟ್ ಕಂಬಕ್ಕೆ ತೂಗುಹಾಕಿದ ಫ್ಲೆಕ್ಸ್ banner ಕಡೆ ಹೋಯ್ತು. ಅರೇ ಮುಖ ಎಲ್ಲೋ ನೋಡಿದ ಹಾಗಿದೆಯಲ್ಲ ಅಂತ ಶ್ರೀಕಾಂತ ಗೂ ತೋರಿಸಿದೆ. ಶ್ರೀಕಾಂತ ಫೋಟೊ ನೋಡಿ, 'ನೆನಪಾಗಲಿಲ್ಲವಾ, ಸರೀ ನೋಡು ಅಂದ್ರು' ಕೆಲವೆ ದಿನಗಳ ಹಿಂದೆ ಕಣ್ಣು ಪರೀಕ್ಷೆ ಮಾಡಿಸಿ ಬಂದು ಡಾಕ್ಟರ್ 'ಕಣ್ಣು perfect ' ಅಂದಿದ್ದು ಖುಶಿಯಿಂದ ಮನೆಗೆ ಬಂದು ಅಮ್ಮ ತಮ್ಮನಿಗೆ ಫೋನ್ ನಲ್ಲಿ ರವಾನಿಸಿದ್ದು ಎಲ್ಲ ನೆನಪಿಗೆ ಬಂದು, ಕಣ್ಣು ಉಜ್ಜಿಕೊಂಡು ಪುನ: ನೋಡಿದೆ.ಊಹೂಂ ಯಾರು ಅಂತ ಗೊತ್ತಾಗಲಿಲ್ಲ. ಶ್ರೀಕಾಂತ ಕಡೆ ಪ್ರಶ್ನಾರ್ಥಕವಾಗಿ ನೋಡಿದಾಗ, ಅವರು'ನಮ್ಮ ಹಳೆ ಇಸ್ತ್ರಿಯವಳು' ಅಂತ ಹೇಳಿ ಪುನ: ಹಣ್ಣಿನ ಚೌಕಾಸಿಯಲ್ಲಿ ನಿರತರಾದರು. ಅರೇ ಹೌದಲ್ಲವೇ ಐದು ವರ್ಷ ನನ್ನ ಕಾಟನ್ ಸೀರಿಗಳಿಗೆ ಸ್ಟಾರ್ಚ್, ಇಸ್ರೀ ವಗೈರೆ ಹಾಕಿ, ನಾನು ಆಫಿಸ್ ಗೆ ಟಿಪ್ ಟಾಪ್ ಆಗಿ ಹೋಗುವಂತೆ ಮಾಡಿದವರು..ಅಂತ ಪುನ: ಫ್ಲೆಕ್ಸ್ ನ ತೀರ ಬಳಿ ಹೋಗಿ ಕಣ್ಣು ಗುಡ್ಡೆ ಹೊರಬರುವಷ್ತು ಕಣ್ಣನ್ನು ದೊಡ್ಡದಾಗಿಸಿ ನೋಡಿದೆ. ಅರೇ ಅವರು ತೀರಿ ಹೋಗಿರುವ ವಿಷಯ ಹಾಕಿದ್ದರು. ಇದೇನಿದು ಹೊಸ ಪರಿ ಅಂದುಕೊಳ್ಳುತ್ತಿರುವಾಗಲೇ ಶ್ರೀಕಾಂತ , ಅದು ಇತ್ತೀಚಿಗಿನ ಹೊಸ ಫ್ಯಾಷ್ಯನ್ -ಸತ್ತು ಹೋಗಿರುವವರ ಚಿತ್ರ ಫ್ಲೆಕ್ಸ್ ನಲ್ಲಿ ಪ್ರಿಂಟ್ ಹಾಕಿಸಿ ನೇತಾಕುವುದು- ಅಂದುಬಿಟ್ಟರು.
ಅರೇ ಇವರು ತೀರಿಕೊಂಡೇ ಬಿಟ್ರಾ ಅಂತ ಅವರ ಬಗ್ಗೆ ನೆನೆಸ್ತಾ ವಾಪಸ್ ಮನೆ ದಾರಿ ಹಿಡ್ಕೊಂಡ್ವಿ.
ನಾವು ಉಡುಪಿಯಿಂದ ಮಹಾಲಕ್ಷ್ಮಿ ಲೇಔಟ್ ನ ಮನೆಗೆ ಶಿಫ್ಟ್ ಆದ ಮೂರನೆ ದಿನ ಈ ಅಜ್ಜಿ ಬಂದಿದ್ದರು. ಇಸ್ತ್ರೀ ಬಟ್ಟೆ ಇದ್ರೆ ನಾನು ತೆಗೆದುಕೊಂಡು ಹೋಗ್ತೀನಿ ಅಂತ. ನಾನು ಮುಂದಿನ ವಾರ ಬನ್ನಿ ಅಂತ ಹೇಳಿ ಕಳಿಸಿದೆ. ಸರೀ ಒಂದು ವಾರದ ನಂತ್ರ ಬಂದ್ರು ಅಜ್ಜಿ. ಅಷ್ಟೇನೂ ಬಟ್ಟೆಗಳಿಲ್ಲದಿದ್ರೂ (ಮಕ್ಕಳ ಯೂನಿಫಾರ್ಮ್ ನನ್ನ ಚೂಡಿದಾರ್ ಗೆಲ್ಲ ನಾನೆ ಇಸ್ತ್ರೀ ಹಾಕ್ತಿದ್ದೆ. ಆದರೆ ಶ್ರೀಕಾಂತ ಪ್ಯಾಂಟ್ ಶರ್ಟ್ ಗೆ ಇಸ್ತ್ರೀ ಹಾಕಕ್ಕೆ ನನಗೆ ಬರ್ತಿರಲಿಲ್ಲ ಈಗಲೂ ಬರಲ್ಲ.) ಹಾಗಾಗಿ ಶ್ರೀಕಾಂತ ರ ಕೆಲವು ಶರ್ಟ್ ಮತ್ತು ಪ್ಯಾಂಟ್ , ಕೆಲವು ನಾನು ವಾಶ್ ಮಾಡಿ ಹಾಕಿದ್ದು, ಕೆಲವು ನಮ್ಮ ಪ್ರಾಯಾಣದ ವೇಳೆ ನೆರಿಗೆ ಬಿದ್ದ ಬಟ್ಟೆಗಳನ್ನು ಕೊಟ್ಟೆ. ಆಗ ಅವರು ಬಟ್ಟೆ count ಮಾಡಿದ್ದು ಗಮ್ಮತ್ತು ಎನಿಸಿತ್ತು. ಅಜ್ಜಿ ತಮಿಳು  ಮಾತನಾಡುವವರು. her lanaguage was a curious mix of Kannada and Tamil. ನಾಲ್ಕು ಆದ ಮೇಲೆ ಕೈದು, ಕಾರು, ಕೇಳು, ಕೆಂಟು ಅಂತ ಲೆಕ್ಕ ಮಾಡ್ತಿದ್ದದ್ದು. ನಾನು ಮಕ್ಕಳು ನಗುತ್ತಿದದ್ದು ಇನ್ನೂ ನೆನಪಿದೆ. ಆಮೇಲೆ ಕಾಟನ್ ಸೀರೆಗೆ ಸ್ಟಾರ್ಚ್ ಮಾಡಿ ಪಾಲಿಶ್ ಮಾಡ್ತೇವೆ. ಸೀರೆನೂ ಕೊಡಬಹುದು ಅಂತ ಹೇಳಿದ್ದರು ಒಂದು ದಿನ ನಾ ಸೀರೆ ಉಟ್ಟಿಕೊಂಡಾಗ. ಸರಿ ಅಂತ ಅವಳಿಗೆ ಕೊಡ್ತಿದ್ದೆ. ನನಗಂತೂ ಆರಾಮ್. ಆಕಸ್ಮಾತ್ ನಾವು ಯಾರೂ ಮನೆಯಲ್ಲಿಲ್ಲದಿದ್ದಲ್ಲಿ ಹೊರಗಡೆ ಝೂಲಾದ ಮೇಲೆ ಇಟ್ಟು ಹೋಗ್ತಿದ್ದರು. ಮರುದಿನ ಹಣ ಪಡೆದುಕೊಂಡು ಹೋಗುತ್ತಿದ್ದರು. ಸಾಧಾರಣ ಆ ಮನೆಯಲ್ಲಿ ನಮ್ಮದು ಮೂರನೆ ವರ್ಷ ಅನ್ನಿಸುತ್ತೆ, ಒಂದು ದಿನ ಸಾಯಂಕಾಲ ಜೋರಾಗಿ ಅಳುತ್ತ ಅಜ್ಜಿ ನಮ್ಮನೆಗೆ ಬಂದ್ರು. ನಾನೇನಾಯ್ತು ಅಂದಿದಕ್ಕೆ ನೀವು ನಿನ್ನೆ ಕೊಟ್ಟ ಸೀರೆ ಸುಟ್ಟು ಹೋಯ್ತು. ಅದರ ಬದಲಾಗಿ ಕಾಸು ಕೊಡವಾ ಅಂದ್ರೆ ನನ್ನ ಮಗ 'ನಿನ್ನ ಬೇಜವಾಬ್ದಾರಿಯಿಂದ ಹಾಗಾಗಿದ್ದು ನಾ ಯಾಕೆ ದುಡ್ಡು ಕೊಡಲಿ' ಅಂತ ಹೇಳ್ತಿದ್ದಾನೆ, ಆ ಸೀರೆ ಬೆಲೆ ಎಸ್ತು? ನಾನು ನಿಮ್ಮ ಹತ್ತಿರ ಸೀರೆ ಬೆಲೆಯಾಗುವಸ್ತು ದಿನ ಕಾಸ್ ತೆಗೆದುಕೊಲ್ಲಲ್ಲ (ಅವರ ಕನ್ನಡ) ಅಂದ್ರು. ಅದಕ್ಕೆ ನಾನು 'ಅಯ್ಯೋ ಬಿಡಿ ಅಜ್ಜಿ, ಮನುಷ್ಯರೇ ಈಗ ಇದ್ದವರು ಸ್ವಲ್ಪ ಹೊತ್ತಿಗೆ ಇರಲ್ಲ, ಅದರಲ್ಲಿ ಸೀರೆ ಬಗ್ಗೆ ತಲೆ ಕೆಡಿಸಕೊಳ್ಳಬೇಡಿ ಅಂತ ಹೇಳಿ ಅವರನ್ನು ಬಲವಂತದಿಂದ ಮನೆಗೆ ಕಳಿಸಿದ್ದೆ.ಆ ಸೀರೆ ಹಾಗೆ ತಂದು ಕೊಡಿ ಮಕ್ಕಳೆಗೆ ಬಟ್ಟೆ ಹೊಲಿಸ ಬಹುದು. (ಅದು ಚಂದದ ಆರ್ಟ್ ಸಿಲ್ಕ್ ಸಾರಿ ಆಗಿತ್ತು ಅದರ ಕತೆ ಮುಂದಿನ ಪ್ಯಾರ)  ಆದರೂ ಹೋಗುವ ಮುಂಚೆ, 'ನಾನು ಆದಷ್ಟು ಆ ಚೀರೆ ಶೆರಿ (ಸರಿ) ಮಾಡಿ ತರ್ತೇನೆ ಅಕ್ಕ ಅಂದ್ರು..ಮೂರು ದಿನ ಬಿಟ್ಟು ನನ್ನ ಸೀರೆ ನನಗೆ ತಂದು ಕೊಟ್ರು. ನಾನು ಸೀರೆ ಬಿಡಿಸಿ ನೋಡ್ತೇನೆ ಎಲ್ಲಿಯೂ ಅದು ಸುಟ್ಟಿದ್ದು.ಹೊಲಿದಿದ್ದು ಕಾಣಲಿಲ್ಲ. ಕೊನೆಗೆ ಸೀರೆಯ ಅಂಚು ಕೂಡ ಸೂಕ್ಷ್ಮವಾಗಿ ನಿರೂಕಿಸಿದೆ, ಊಹೂಂ...ಬಹುಶ್ಯ ಬೇರೆಯವರಿಗಾದ್ರೂ ಅದರಲ್ಲಿನ defect ಕಾಣಬಹುದು ಅಂತ ಮತ್ತೆರಡು ಸಮಾರಂಭಕ್ಕೆ ಕೂಡ ಅದನ್ನು ಉಟ್ಟು ಹೋದೆ. ಯಾರೂ ಏನೂ ಗಮನಿಸಲಿಲ್ಲ..ನನಗಂತೂ ಸೋಜಿಗ ಅರೆ?? ಮುಂದಿನ ಸಲ ಅಜ್ಜಿ  ಬಂದಾಗ ಪುನ: ವಿಚಾರಿಸಿದೆ. ಸುಟ್ಟಿದ್ದು ಹೌದಾ?? ನನಗೇನೂ ಕಾಣ್ತಿಲ್ಲವಲ್ಲ ಅಂದಾಗ ಅಜ್ಜಿ mysteriously ನಕ್ಕು ಸೀರೆ ರಿಪೇರಿಯವನ ಗುಣಗಾನ ಮಾಡ್ತಾ ಇದ್ದಳು. ಆ ಸಮಯಕ್ಕೆ ಅಮ್ಮ ಕೂಡ ನಮ್ಮನೆಗೆ ಬಂದಿದ್ರು. ಸೀರೆ ಸುಟ್ಟಿದ್ದು ಹೇಳಲು ಅಜ್ಜಿ ನಮ್ಮ ಮನೆಗೆ ಬಂದು ಹೋದ ಮೇಲೆ ಅಮ್ಮನ ಫೋನ್ ಬಂದಿತ್ತು ಅವರು ಬೆಂಗಳೂರಿಗೆ ಬರುತ್ತಿರುವುದಾಗಿ ನನಗೆ ತಿಳಿಸಲು, ಆಗ ಅಜ್ಜಿ ಕತೆ ಹೇಳಿ, ನಾನು ಬೈಯಿಸಿಕೊಂಡಿದ್ದೆ. ' ಅಷ್ಟು ಚಂದದ ಸೀರ ಅವಳು ಹಾಳು ಮಾಡಿಬಿಟ್ಟಳಾ ಅದರ ದುಡ್ಡು ತೆಗೋ ಬೇಕಿತ್ತು. ಅದಕ್ಕೆ ನಾನು ಅಮ್ಮ 'ಆ 150 ಬೆಲೆ ಸೀರೆಗೆ ಅಷ್ಟು ಜಗಳ ಮಾಡಬೇಕ ಅಂತಲೂ ಕೇಳಿದ್ದೆ.ಹಾಗಾಗಿ ಅಮ್ಮ ಕೂಡ ಸೀರೆ ಬಿಡಿಸಿ ಕೂಲಂಕಷವಾಗಿ ಅದನ್ನು ಪರೀಕ್ಷಿಸಿದರು.ಅಮ್ಮನಿಗೂ ಎಲ್ಲೂ damage ಗೊತ್ತಾಗಲಿಲ್ಲ
ಈಗ ಆ ಸೀರೆ ನನ್ನ ಬಳಿ ಬಂದ ಬಗ್ಗೆ ಹೇಳುತ್ತೇನೆ:
ನಾವು ಉಡುಪಿ ಬಿಡುವ ಮುಂಚೆ ಅಮ್ಮ ಸಿಲ್ಕ್ ಸೀರೆ ಬೇಕೆಂದಿದ್ದಕ್ಕೆ ಅಮ್ಮನಿಗೆ ಅಲ್ಲಿ ಬರಲಿಕ್ಕೆ ಹೇಳಿದ್ದೆ.ಯಾಕಂದರೆ ನನ್ನ ದೂ ಅಮ್ಮಂದೂ ಬಣ್ಣದ ಟೇಸ್ಟ್ ಯಾವತ್ತೂ ಮ್ಯಾಚ್ ಆಗ್ತಿರಲಿಲ್ಲ ಇಬ್ಬರೂ ಕುಲ್ಯಾಡಿಕಾರ್ಸ್ ಸಿಲ್ಕ್ಸ್ ಅಂಗಡಿಗೆ ಹೋಗಿ, ಅಲ್ಲಿ ಕೊಂಕಣಿ ಮಾತಾಡ್ತಾರಾದ್ದರಿಂದ ನಾನು ಅಮ್ಮನಿಗೆ ಅವರ ಖರೀದಿಗೆ ಬಿಟ್ಟು ನಾನು ಅಲ್ಲಿಗೆ ಬಂದ ಬೇರೆ ಮಹಿಳೆಯರನ್ನೂ, ರಸ್ತೆಯಲ್ಲಿನ ಆಗು ಹೋಗುಗಳನ್ನು ಗಮನಿಸುತ್ತ ಇದ್ದೆ. ಅಮ್ಮ ಮೂರು ನಾಲ್ಕು ಸೀರೆ ಖರೀದಿಸಿದ ನಂತರ ಬಿಲ್ಲ ಪಾವತಿಸುವ ವೇಳೆಗೆ ,ಮಾಯಿ ನಿಮ್ಮ ಮಗಳಿಗೆ ಅಂತ ಒಂದು ಸೀರೆ ತೋರಿಸ್ತೇನೆ ಅಂತ, ನಾನು ಬೇಡ ಬೇಡ ಅಂದರೂ ಒಂದು ಸೀರೆ ತೆಗೆದು ತೋರಿಸಿದ್ರು. ಬಿಳಿ ಟಿಶ್ಯು ಪೇಪರ್ ನಲ್ಲಿ ಸುತ್ತಿದ ಆ ಸೀರೆಗೆ ನಾನೆಂದೂ ಕಂಡಿರದ ವಿಶಿಷ್ಟ ಬಣ್ಣ, ಜರಿ ಅಂಚು.ಇಡೀ ಸೀರೆ ಮೇಲೆ ಜರಿಯ ಬುಟ್ಟ. ಯಾವುದೂ ಸಿಂತೆಟಿಕ್ ಸೀರೆ ಉಡದ ನಾನು 'ನಾನು ಅಂತ ಸೀರೆ ಉಡೋದಿಲ್ಲ ಮಾಮ' ನನಗೆ ಬೇಡ ಅಂದ್ರೆ, ಅದನ್ನು ತೆಗೆದುಕೊಳ್ಳುವಂತೆ ಪೀಡಿಸಿ ಅವರು ಅಳುವುದೊಂದು ಬಾಕಿ. ನಾನು ಅಮ್ಮನಿಗೇ ಹೇಳಿದೆ, 'ಅಮ್ಮ ನಿನಗೆ ಬೇಕಾದರೆ ತೆಗೋ, ನನಗೆ ಮಾತ್ರ ಬೇಡ'. ಆ ಮಾಮ ಎಷ್ಟು upset ಆದರೆಂದರೆ ನನಗೆ ತೀರ ಕೆಡುಕೆನಿಸಿತು plus ವಿಚಿತ್ರ ಅನಿಸಿತ್ತು, ಯಾಕಂದ್ರೆ ಅಮ್ಮ ಕೊಂಡಿದ್ದ ಸೀರೆಯೆ 6000 ರೂ ಗಿಂತ ಹೆಚ್ಚಾಗಿತ್ತು, ಆಗ ಅದು ಸ್ವಲ್ಪ ಹೆಚ್ಚೆ ಮೊತ್ತ...ಹಾಗಾಗಿ ಸೀರೆ ಮಾರುವ ಮಾಮನಿಗೆ (ಕೊಂಕಣಿಯವರೆಲ್ಲ ಮಾಮ-ಮಾಯಿ ಗಳೆ) ಕಮಿಶನ್ ಅಂತ ಇದ್ದ್ರೂ ಅದಕ್ಕೇನೂ ತೊಂದರೆ ಇರಲಿಲ್ಲ. ಆಯ್ತು ಕೊಡಿ ಅಂದ್ರೆ ಬೆಲೆ ಕೇವಲ 150 ರೂ...ಈಗ ಇನ್ನಷ್ಟು ಗಾಬರಿ ಮಿಶ್ರಿತ ಆಶ್ಚರ್ಯ ಪಡುವ ಸರದಿ ನಮ್ಮದಾಯಿತು, ಆದರೂ ಮೂರು ಸಲ ಕನ್ ಫರ್ಮ್ ಮಾಡಿ, ಇನ್ನು ಅಲ್ಲಿ ಸೀನ್ create ಮಾಡೋದು ಬೇಡ ಅಂತ ಬಿಲ್ಲ ಪಾವತಿಸುವ ಕೌಂಟರ್ ಬಳಿ ಸೀರೆ ಕೊಡುವಾಗಲೂ ನನಗೊಂದು ಸಣ್ಣ ಆಸೆ, ಆ ಮಾಮನಾದರೂ 'ಇದರ ಬೆಲೆ ಹೆಚ್ಚೆ ಇದೆ ಇದ್ಯಾಕೆ 150 ರೂ' ಅಂತ ಹೇಳುತ್ತಾರೇನೋ ಅಂತ..ಇಲ್ಲ ಅವರೂ ಏನೂ ಹೇಳಲಿಲ್ಲ. ಆ ದಿನ ಮನೆ ತಲುಪಿದ ಕೂಡಲೇ ಅಮ್ಮ ನನ್ನ ಸೀರೆ ಪ್ಯಾಕೆಟ್ ನಿಂದ ಬಿಡಿಸಿ ಏನೋ ಮೊಸ ಇದೆ ಅಂತ ಅದನ್ನು ಇಂಚಿಂಚಾಗಿ  ಪರಿಶೀಲಿಸಿದ್ದು ಇನ್ನೂ ನೆನಪಿದೆ.
ಈಗ ಈ ಅಜ್ಜಿಯ ಪ್ರಸಂಗ. 
ಮತ್ತೆ ನಾವು ಆ ಮನೆಯ 5 ವರ್ಷಗಳ ಲೀಸ್ ಮುಗಿದ ಮೇಲೆ ಬಸವೇಶ್ವರನಗರಕ್ಕೆ ಶಿಫ್ಟ್ ಆದ್ವಿ. ನಾವು ಹೋಗುವ ಮುಂಚ ಅಜ್ಜಿ ಅಳುತ್ತ ಇದ್ದರು. ನಾನು ಅವರಿಗೆ ನೀವು ಅಲ್ಲಿಗೆ ಬರಬಹುದಲ್ಲ್ವಾ? ಏನೂ ಪರದೇಶಕ್ಕೆ ಹೋಗ್ತಾ ಇಲ್ಲ ತಾನೆ ಅಂದಿದ್ದೆ. ಆ ಐದು ವರ್ಷಗಳಲ್ಲಿ ಮಗನ ಮದುವೆ ಆಗಿತ್ತು. ಸೊಸೆಗೂ ಅತ್ತೆಗೂ ಕೂಡಿ ಬರುತ್ತಿರಲಿಲ್ಲ, ನಮ್ಮ ಮನೆಯಿಂದ ಇಸ್ರೀ ಬಟ್ಟೆ ತೆಗೆದುಕೊಂಡು ಹೋಗುವಾಗ ಸೊಸೆಯ ಚಾಡಿ ಮಾತೆ ಜಾಸ್ತಿ ಇರುತ್ತಿದ್ದವು. ಈಗ ಅವರ ಮುಖ ಇಲೆಕ್ಟ್ರಿಕ್ ಕಂಬದಲ್ಲಿ ನೇತಾಡುವ ಫ್ಲೇಕ್ಸ್ ನಲ್ಲಿ ನೋಡುವಂತಾಯಿತು. ಹೀಗೆ ಒಂದು ದಿನ ನನ್ನ ಕಲೀಗ್ ಮನೆಗೆ ಹೋಗಿ (ಅವರು ಇನ್ನೂ ಅಲ್ಲೇ ಇದ್ದಾರೆ) ನನಗೆ ಆ ಅಕ್ಕನ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಹಿಂಸೆ ತಾಳಕ್ಕೆ ಆಗಲ್ಲ ಅಂತ ಕೂತಿದ್ದರಂತೆ, ಅವರು ಜಾಣತನದಿಂದ ಅವರೀಗ ಊರಲಿಲ್ಲ ಅವರು ಬಂದ ಮೇಲೆ ಹೋಗುವ ಅಂತ ಹೇಳಿದ್ರಂತೆ. ವಿಷಯ ಇಷ್ಟೆ ಕೊನೆ ಕೊನೆಗೆ ಬಟ್ಟೆಗಳು ಅದಲು ಬದಲಾಗೋದು, ಪ್ಲ್ಲ್ಯಾಸ್ಟಿಕ್ ಗುಂಡಿ melt ಆಗೋದು, ಸುಡೋದು , (ನನ್ನ ಕಲೀಗ್ ಗಂಡನ ಎರಡು ಹೊಸ ಶರ್ಟ್ ಹಾಳು ಮಾಡಿದ್ದರಂತೆ) ಮುಂತಾದವು ಜಾಸ್ತಿ ಆಗಿ ಯಾರೂ ಬಟ್ಟೆ ಕೊಡುತ್ತಿರಲಿಲ್ಲವಾದ್ದರಿಂದ ಅಕ್ಕನಾದ್ರೂ (ನಾನು) ಬಟ್ಟೆ ಕೊಡ್ತಾರೆ ದೂರ ಆದ್ರೂ ಅಡ್ಡಿಯಿಲ್ಲ ಅವರ ಬಟ್ಟೆಗೆ ನಾನೇ ಇಸ್ತ್ರೀ ಹಾಕಿ ಕೊಡ್ತೇನೆ ಅಂತ ಹೊರಟಿದ್ರಂತೆ. ಅವರ ಸೊಸೆಯನ್ನು ಮೊನ್ನೆ ನೋಡಿದೆ, ನಮ್ಮ ಈಗಿನ ಮನೆಯ ಬಳಿ ಶಿಫ್ಟ್ ಆಗಿದ್ದಾರೆ. ಚಂದದ ಹೆಂಗಸು. ಎಲ್ಲೋ ಹರಕೆ ಹೇಳಿ ತಳೆ ಬೋಳಿಸಿದ್ದು ಈಗ ಸ್ವಲ್ಪ ಸ್ವಲ್ಪ ಕೂದಲು boycut ತರಹ ಬರುತ್ತ ಇದೆ.ನನಗೆ ಫಕ್ಕನೆ ಅವಳ ಗುರುತು ಸಿಗಲಿಲ್ಲ ಅವಳೆ   ನಾನು ನನ್ನಷ್ಟಕ್ಕೆ ನಡೆದುಕೊಂಡು ಹೋಗ್ತಾ ಇದ್ರೆ, ನನ್ನ ಕೈ ಗಟ್ಟಿ ಹಿಡಿದು ನಿಲ್ಲಿಸಿ, ಪರಿಚಯಿಸಿಕೊಂಡ್ಲು. ಎರಡು ಹೆಣ್ಣು ಒಂದು ಗಂಡು ಮಗ ಅಂತೆ. :-)
ಅಂತೂ ನನಗೆ ಬೇಡದಿದ್ದ ಸೀರೆ 14 ವರ್ಷಗಳ ಕಾಲ ಉಡುತ್ತಿದ್ದರೂ ಒಂಚೂರು ಶೈನ್ ಕಳಕೊಳ್ಳದೇ, ಇತ್ತೀಚಿಗೆ ನಮ್ಮ BBMP ರಸ್ತೆ ಕ್ಲೀನ್ ಮಾಡುವ ಜಯಮ್ಮ, ಸೀರೆ ಚೆನ್ನಾಗಿದೆ ಅಕ್ಕೋ ನನಗೆ ಕೊಡಿ ಅಂದಿದಕ್ಕೆ ಆಕೆಗೆ ಕೊಟ್ಟು ಬಿಟ್ಟೆ.ಶssss ಅಮ್ಮನಿಗೆ ಹೇಳಿಲ್ಲ. ಆ ಸೀರೆ ಉಟ್ಟಿದ್ದ ಫೋಟೊ ಎಲ್ಲಾದರೂ ಇದ್ರೆ ಅದನ್ನೂ ಇಲ್ಲಿ ಹಾಕ್ತೇನೆ..
ಮೊನ್ನೆ ಯಾವುದೋ ಕಾರ್ಯಕ್ರಮಕ್ಕೆ ಹೊರಟಿದ್ದ ಜಯಮ್ಮ 'ನೋಡಿ ಅಕ್ಕ ನೀವು ಕೊಟ್ಟ ಸೀರೆ, ಬೋ ಪಸಂದಾಗೈತೆ' ಅಂತ ರಸ್ತೆ ಮಧ್ಯ ನಿಂತು ಗಟ್ಟಿ ದನಿಯಲ್ಲಿ ಹೇಳಿದಾಗ ನನಗೆ ನಾಚಿಕೆ...
Long live the saree , the man who sold it to me (forced it on me) and peace be to ಇಸ್ತ್ರೀ ಅಜ್ಜಿ..
:-)
ಹಾಂ ಅಂದ ಹಾಗೆ ಇಂಗ್ಲಿಷ್-ವಿಂಗ್ಲಿಷ ನಲ್ಲಿ ಶ್ರೀದೇವಿ ಸೀರೆಗಳು ಸೂಪರ್sssssss

October 13, 2012

ಬಾಳೆ ಎಲೆ ಕಡುಬು

ಒಂದು ಕಪ್ ಉದ್ದಿನ ಬೇಳೆ ಗೆ ಎರಡು ಕಪ್ ಅಕ್ಕಿ ರವೆ/3 ಕಪ್ ಬಾಂಬೆ ರವಾ
ಉದ್ದಿನ ಬೇಳೆ ರುಬ್ಬೋಕಲ್ಲು ಅಥವ ಗ್ರೈಂಡರ್ ನಲ್ಲಿ ರುಬ್ಬಿದರೆ ನಿಮಗೆ soft ಇಡ್ಲಿ ಅಥವ ಕಡಬು ಮಾಡಲಿಕ್ಕೆ ಆಗುತ್ತದೆ. ಕೈಗೆಟಕುವ ಬೆಲೆಗೆ ಟೇಬಲ್ ಟಾಪ್ ಗ್ರೈಂಡರ್ ಸಿಗುತ್ತೆ. ಇಡ್ಲಿ ದೋಸೆಗೆ ಇದು ಉತ್ತಮ.
ಉದ್ದಿನ ಬೇಳೆ ರುಬ್ಬಿದ ಎರಡು ಮೂರು ಗಂಟೆ ನಂತರ ಅಕ್ಕಿ ರವೆ ಬೆರೆಸಿ. ಮೊದಲೆಲ್ಲ ಅಕ್ಕಿ ರುಬ್ಬಿ ಅಥವ ಅಕ್ಕಿಯನ್ನು ಎರಡು ಗಂಟೆ ನೆನೆಕಾಕಿ, ಆಮೇಲೆ ನೀರಲ್ಲ ಬಸಿದು ಅದನ್ನು ಬಟ್ಟೆ ಮೇಲೆ spread ಮಾಡಿ, ಅದು ಒಣಗಿದ ಮೇಲೆ ಅದರ ರವೆ ಮಾಡಿ ಬೆರೆಸುವುದಿತ್ತು ನಾನು. ಈಗ ಎಲ್ಲ ರೆಡಿ ಸಿಗುತ್ತೆ. ಮಂಗಳೂರು ಸ್ಟೋರ್ಸ್ ನಲ್ಲಿ ಬೆಳ್ತಿಗೆ ಅಕ್ಕಿ ರವೆ ಸಿಗುತ್ತೆ. ಆಫಿಸ್ ಗೆ ಹೋಗುವವರಿಗೆ ಇದರಿಂದ ಅನುಕೂಲ. ( ಕುಚ್ಚಲಕ್ಕಿ ರವೆ ಬೆರೆಸಿ ಕೂಡ ಕಡುಬು ಮಾಡಬಹುದು ಆದರೆ ಕೆಲವರಿಗೆ ಅದರ ಪರಿಮಳ ಹಿಡಿಸುವುದಿಲ್ಲ.)
ವಿ.ಸೂ: ಬಾಂಬೆ ರವಾ ಬೆರೆಸುವುದಾದರೆ ಬಾಂಬೆರವೆಯನ್ನು ಒಂದು ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ಹಬೆ ಮೇಲೆ 15 ನಿಮಿಷ ಬೇಯಿಸಿ. ಕೂಡಲೆ ಹೊರಗೆ ತೆಗೆದು ಆರಲು ಬಿಡಿ. ಪೂರ್ತಿ ಆರಿದ ಮೇಲೆ ಕೈನಿಂದ ರವೆಯನ್ನು ಉದುರುದುರಾಗಿಸಿ ಅದನ್ನು ಉದ್ದಿನ ಹಿಟ್ಟಿಗೆ ಬೆರೆಸಿ.
ಅಕ್ಕಿ ರವೆ ನೀರಿನಲ್ಲಿ ಎರಡು  ಗಂಟೆ ನೆನೆಸಿ ಆಮೇಲೆ ಅದರ ನೀರೆಲ್ಲ ಬಸಿದು ಉದ್ದಿನ ಹಿಟ್ಟಿಗೆ ಬೆರೆಸಿ.

ಮರು ದಿನ ಹಬೆಪಾತ್ರೆಯಲ್ಲಿ ನೀರು ಇಟ್ಟು ಬಿಸಿ ಮಾಡಲು ಇಡಿ. ಅದರಲ್ಲಿ ಬಾಳೆ ಎಲೆಯನ್ನು ಚೆನ್ನಾಗಿ spread ಮಾಡಿಡಿ. ನೀರು ಮರಳಲು (boiling) ಶುರು ಆದಾಗ ಹಿಟ್ಟನ್ನು ಹಾಕಿ.

ಹಿಟ್ಟು ಬೆಂದು ದುಪ್ಪಟ್ಟು ಆಗುವ ಸಾಧ್ಯತೆಗಳಿರುವುದುದರಿಂದ ಪಾತ್ರೆಯ ಅರ್ಧದಷ್ಟೆ ಹಿಟ್ಟು ಹಾಕಿ. ಹದಿನೈದು ನಿಮಿಷ ಬೇಯಿಸಿ. ಕಡಬು ರೆಡಿ.

 ಚಟ್ನಿ, ಬೆಣ್ಣೆ ಅಥವ ಆಲುಗಡ್ಡೆಯ ತೆಳು ಪಲ್ಯ ಚೆನ್ನಾಗಿರತ್ತೆ.
ಕಡುಬು, ಸಾಂಬಾರ, ಶುಂಠಿ ಹಾಕಿದ ಕೆಂಪು ಖಾರ ಚಟ್ನಿ ಮತ್ತು ತಾಜಾ ತಾಜಾ ಬೆಣ್ಣೆ
FB ನಲ್ಲಿ ಪೋಸ್ಟ್ ಮಾಡಿದ ಕಡುಬಿನ ಚಿತ್ರ ನೋಡಿದ ನನ್ನ ಬ್ಲಾಗ್ ಓದುಗರು, ಇದರ ರೆಸಿಪಿ ಇಲ್ಲಿ ಹಾಕಲು ಸಲಹೆ ನೀಡಿದ್ದರು..ಈ ಪೋಸ್ಟ್ ಅವರಿಗೆ...
:-)

October 9, 2012

ಹೀಗೊಂದು ಒನ್ ವೇ ಸಂಭಾಷಣೆ

ನಿನ್ನೆ ನಿಹಾಳ ಜತೆ ಅವಳ ಕಾಲೇಜ್ ಗೆ ಹೋಗಿದ್ದೆ ಅವಳ psychology subject ಆಗಿ. ಬಸ್ ನಲ್ಲಿ ಕೇಳಿದ್ದ ಸಂಭಾಷಣೆ as is..
ಹೆಲ್ಲೋ ಸುಮಿ...
..................
ನನ್ನದು ನಡೀತಾ ಇದೆ ಯಾವತ್ತಿನ ಹಾಗೆ ಏನೂ ಸುಖ ಇಲ್ಲ..
..................
ಹೂಂ ಹೇಳ್ಕೊಳ್ಳೋಕೆ ಸರಕಾರಿ ನೌಕರಿನೆ, ಆದರೆ ಸಂಬಳ ಹೆಚ್ಚಾಗ್ತಾ ಖರ್ಚೂ ಜಾಸ್ತಿ
....................
ಗಂಡ ಎನಿಸಿಕೊಂಡವ ಕುಡಿದು ಎಲ್ಲೋ ಬಿದ್ದ್ದಿರತಾನೆ.ಮನೆಗೆ ಬಂದ್ರೆ ಬಂದ. ಬಂದ್ರೂ ಗಲಾಟೆ. ನಾನು ಸುಮ್ನಿರಲ್ಲ.ಬರೀ ಗೋಳು
...................
ಅವನಾ?? (ಬಹುಶ: ಮಗನ ಬಗ್ಗೆ ಇರಬೇಕು)ಇಂಜಿನಿಯರಿಂಗ್ ಮುಗಿಸಿದ್ದಾನೆ. ದಿನ ಇಡೀ ಕಂಪ್ಯೂಟರ್ ಮುಂದೆ ಕಟಿಪಿಟಿ ಮಾಡ್ತಿರ್ತಾನೆ..ಅವನೆ ಹೇಳಿಕೊಳ್ಳುವ ಹಾಗೆ ಅವನೊಬ್ಬ ಜೀನಿಯಸ್ ಅಂತೆ
........................
ಕೆಲಸ ಏನು ಅವನನ್ನು ಹುಡುಕ್ಕಂಡು ಬರುತ್ತಾ? ಇವನ್ ತಾನೆ ಹೋಗಬೇಕು? ಎಲ್ಲ ನನ್ನ ಖರ್ಮ (ಕರ್ಮ)
........................
ಅವಳಾ? ವಯಸ್ಸು 25 ಆಯ್ತು. ಕತ್ತೆ ತರಹ ಬೆಳೆದಿದ್ದಾಳೆ. ಬಿ ಎಸ್ಸಿ ಮಾಡಿ ಮನೆಯಲ್ಲೇ ಇದ್ದಾಳೆ. ಕೆಲಸಕ್ಕೋಗೋದು ಬಿಡು. ಮನೆ ಕೆಲಸಕ್ಕೂ ಸಹಾಯ ಮಾಡಲ್ಲ. ಗಂಟೆ 9 ಆಯ್ತು ಹೌದಾ? ಇನ್ನೂ ಏಳೇ ಇಲ್ಲ ಸೋಂಬೇರಿ..ಯಾಕೆ ಬೆಳಿಗ್ಗೆ ಹಾಲು ತರೋದು, ತರಕಾರಿ ಕೊಯ್ದು ಕೋಡೋದು ಹಿಂತದ್ದೆಲ್ಲ (ಇಂತದ್ದೆಲ್ಲ )ಮಾಡಿಕೊಡಬಹುದಲ್ವಾ?
..........................
ನಿನ್ನೆ ಸಂಜೆ ಆಫಿಸ್ ನಲ್ಲಿ ಒಡಿಟ್ (audit)ನಡಿತೀತ್ತು ಮನೆಗೆ ಹೋಗುವಾಗ ಲೇಟ್...ಬೆಳಿಗ್ಗೆ ನಾನು ಮಂಚದ ಮೇಲೆ ಹಾಕಿದ್ದ ಒಣಗಿದ ಬಟ್ಟೆ ಹಾಗ್ ಹಾಗೇ...ಎಲ್ಲಾ ನಾನು ಹೇಳಿ ಮಾಡಬೇಕಾ?
.........................
ಟಿ.ವಿ ನೋಡ್ತಿರ್ತಾಳೆ
..........................
ಸುಮೀ, ಅದು ಮಾಡಿ ಆಯ್ತು. ಪಕ್ಕದ ಮನೆಗೆ ಹೋಗಲಿಕ್ಕೆ ಶುರು ಮಾಡಿದ್ಲು. ಸುಮ್ನೆ ನಮ್ಮ ಮನೆ ಹೇಸಿಗೆ ಬೇರೆಯವರಿಗೆ ತಿಳಿಯೋದು ಬೇಡ ಅಂತ ಪುನ: ಹಾಕಿಸ್ಕೊಂಡೆ. ಮತ್ತು ಸಿಗುವ ಒಂದು ಭಾನುವಾರ ನನಗೂ ಒಂದು ಬ್ರೇಕ್ ಟಿ.ವಿ ನಲ್ಲಿ ತೋರಿಸೋ ಸಿನಿಮಾಗಳು (ಬಹುಶ: ಟಿ.ವಿ ನೆಟ್ ವರ್ಕ್ ಕೇಬಲ್ ಕನೆಕ್ಷನ್ ?)
.........................
ಗಂಡು ನೋಡ್ತಾ ಇದ್ದೀನಿ. ತಕ್ಷಣಕ್ಕೆ ಸಿಗಬೇಕಲ್ಲ. ಎಲ್ಲರಿಗೂ ಕೆಲಸಕ್ಕೆ ಹೋಗುವವರು ಬೇಕು. ಒಂದೆರಡು ಬಿಸಿನೆಸ್ಸ್ ನಲ್ಲಿರೋ ಹುಡುಗರ ಮನೆಯವರು ಕೇಳಿಕೊಂಡು ಬಂದಿದ್ರು. ಇವಳಿಗೆ ಬೇಡವಂತೆ. ಬಲವಂತ ಮಾಡಿ, ಬೈದ್ದಿದ್ದಕ್ಕೆ ನೇಣು ಹಾಕ್ಕೊಂಡು ಸಾಯ್ತೀನಿ ಅಂತ ಹೇಳ್ತಾಳೆ ಬೇರೆ. ಸಾಯ್ಲಿ ಅಂತ ನಾನೇ ಸುಮ್ನಾದೆ. ನೋಡಿದ್ಯಾ ಸುಮಾ ಒಟ್ಟಿಗೆ ಸುಖ ಇಲ್ಲ. ನಾಲ್ಕು ದಿನ ಎಲ್ಲದರೂ ಹೋಗಿ ಸಾಯುವ ಅಂದ್ರೆ ನನಗೆ ಯಾರಿದ್ದಾರೆ? ನಾನ ಇವನ್ನನ್ನ ಕಟ್ಟಿಕೊಂಡು ದಿನಾನೆ ನಮ್ಮ ಮನೆಯವರ ಪಾಲಿಗೆ ನಾ ಸತ್ತು ಹೋದೆ. ನಿನ್ನನ್ನ ಬಿಟ್ರೆ ಹೇಳಿಕೊಳ್ಳುವಂತಹ ಸ್ನೇಹಿತರು ಹಿತೈಷಿಗಳು ಯಾರೂ ಇಲ್ಲ.
........................
ಪ್ರೀತಿ ಪ್ರೇಮ ಎಲ್ಲ ಸ್ವಲ್ಪ ಕಾಲ ಚಂದ. ಈಗ ನಾನೆ ಉದಾಹರಣೆಯಾಗಿದ್ದೀನಿ ಅಲ್ಲವ?ಪ್ರೀತಿಸಿದವನ್ನನ್ನ ಕಟ್ಟಿಕೊಂಡೆ ಉಳಿದವರೆಲ್ಲ ನನ್ನಿಂದ ದೂರ ಆದರು. ಇವಂದು ಆಮೇಲೆ ಗೊತ್ತಾಯ್ತು..ಪ್ರೀತಿ ಅಂತ ಅಲ್ಲ ಸುಮ್ನೆ ಜಿದ್ದಿನಿಂದ ನನ್ನನ್ನು ಮದುವೆ ಮಾಡಿಕೊಂಡಿದ್ದು. ನೀನೆ ಸುಖಿ ಸುಮಿ..
........................
ಹೌದಾ ಸುಮೀ..ಈ ಸಂತಸದ ವಿಷಯ ಹೇಳಲಿಕ್ಕೆ ಇಷ್ಟು ಹೊತ್ತು ಬೇಕಾಯ್ತಾ. ಛೆ ನಂದೇ ರಗಳೆಯಾಗಿ ಹೋಯ್ತು. ಏನು ಮಾಡ್ತಾನೆ ಹುಡುಗ, ಏನ್ ಕತೆ?
........................
ಹೂಂ. ದಸರಾಗೆ ಹೇಗೂ ರಜೆ ಇದೆ. ಅದಕ್ಕೆ ಇನ್ನಷ್ಟು ಸೇರಿಸಿ ನಾನಂತು ಹಾಜರ್. ಹಾಗೇ ದೆಹಲಿ ಕೂಡ ನೋಡಬಹುದು. ಖಂಡಿತ ಬರ್ತೇನೆ ಸುಮಿ. ಈಗ ಫೋನ್ ಇಡ್ಲಾ. ಸಂಜೆ ಮಾತಾಡ್ತೀನಿ. ನನ್ನ ಸ್ಟಾಪ್ ಬಂತು.
............................

October 6, 2012

ಸಂಚಿಯಿಂದ ತೆಗೆದ ನೆನಪು-9: (ನನ್ನ 200 ನೆ ಪೋಸ್ಟ್)

can u believe it? i cannot....love u readers my hits have crossed 36000 mark without any effort from my side..
ನನ್ನ 200 ನೆ ಪೋಸ್ಟ್ ಇನ್ನೊಂದು ನೆನಪು...ಕುಛ್ ಖಟ್ಟಿ ಕುಛ್ ಮೀಠಿ

ಮೇ 4, 2012. ಗೀತಾ ದತ್ ಹಾಡು ಗಟ್ಟಿಯಾಗಿ ಹಾಕಿಕೊಂಡು ಮನೆ ಕ್ಲೀನ್ ಮಾಡ್ತಾ ಇದ್ದೆ. ಮನೆ ಕ್ಲೀನ್ ಯಾಕಪ್ಪ ಅಂದ್ರೆ ಯು ಎಸ್ ನಲ್ಲಿರೋ ನನ್ನ ಆತ್ಮೀಯ ಗೆಳೆಯರಾದ ಶ್ರೀವತ್ಸ ಜೋಶಿ, ಸಹನಾ ಜೋಶಿ ಮತ್ತು ನನ್ನ ಬೆಂಗಳೂರಿನ ಮಿತ್ರರಾದ ವೇದಾ ಮತ್ತು ಜ್ಯೋತಿ- ಇವರನ್ನು 6 ನೇ ತಾರೀಕಿಗೆ ಊಟಕ್ಕೆ ಕರೆದಿದ್ದೆ.ಮತ್ತು ಊಟಕ್ಕೆ ಕರೆದ ಎರಡು ದಿನ ಮುಂಚೆ ಮನೆ ಕ್ಲೀನ್ ಆ ಅಂತ ನಿಮ್ಮ ಪ್ರಶ್ನೆಗಳೇನಾದರೂ ಇದ್ದರೆ ಅದಕ್ಕೂ ಉತ್ತರ ಇದೆ. ನಮ್ಮ ಮನೆಯ ಬಳಿ ಮೂರು ನಾಲ್ಕು ಮನೆ ರಿಪೇರಿ, ಮಹಡಿ ಕಟ್ಟಿಸುವುದು, ಬೀಳಿಸಿ ಕಟ್ಟಿಸುವುದು ಮುಂತಾದ ಕೆಲಸಗಳು, ಅದಕ್ಕೆ ಬೇಕಾದ ಸಿಮೆಂಟ್ ಮರಳು ಅದರ ಧೂಳು ನಮ್ಮ ಮನೆಯೊಳಗೆ ಹಾಗಾಗಿ ನನ್ನದೊಂದು ಕ್ಲೀನಿಂಗ್ ಪ್ರೋಗ್ರಾಮು.
ಇದರ ಮಧ್ಯ ನನ್ನ ತಂಗಿ ಜತೆ ಚ್ಯಾಟ್ ಮತ್ತು ಇಲ್ಲಿ ಊಟಕ್ಕೆ ಬರಲಾಗದ, ನನ್ನ ಹೈದರಾಬಾದ್ ನಲ್ಲಿರೋ ಸ್ನೇಹಿತೆ ಸಂಧ್ಯಾ ಹಾಗು ಮಧ್ಯಪ್ರದೇಶದಲ್ಲಿರೋ ನಾಗಮಣಿಯವರಿಗೆ ನನ್ನ ಮೆನ್ಯೂ ಬಗ್ಗೆ ಹೇಳಿ ಆಸೆ ತೋರಿಸ್ತಾ ಇದ್ದೆ. ಶೋ ಕೇಸ್ ಬಳಿ ಕ್ಲೀನ್ ಮಾಡ್ತಿದ್ದಾಗ ಅಲ್ಲೇ ಬಳಿಯಿರುವ ನನ್ನ ಫಿಶ್ ಬೌಲ್ ನಲ್ಲಿರುವ ಮೀನು ನನ್ನನ್ನು ನೋಡಿ ತಿಪ್ಪರಲಾಗ ಹಾಕುತ್ತ ನೀರನ್ನು ಎಲ್ಲ ಕಡೆ ಸಿಂಪಡಿಸುತ್ತಿದ್ದರು. ಅವರಿಗೆ ಸುಮ್ಮನಿರದಿದ್ದರೆ ಬೆಕ್ಕಿಗೆ ಆಹಾರವಾಗಿ ಕೊಡುವುದಾಗಿ ಗದರಿಸಿ ನನ್ನಷ್ಟಕ್ಕೆ ನಗುತ್ತ, ಇನ್ನೇನೂ ಈ ಕಡೆ ತಿರುಗಬೇಕು ಎನ್ನುವಾಗ ನನ್ನ ಸೆಲ್ ಫೋನ್ ಬ್ಲಿಂಕ್ ಆಗುವುದನ್ನು ನೋಡಿದೆ. ನನಗೂ ನನ್ನ ಸೆಲ್ ಫೋನ್ ಗೂ ಅಂತಹ ಗಳಸ್ಯ-ಕಂಠಸ್ಯ ಏನಿಲ್ಲ. ನನ್ನ ತಮ್ಮ ಬೆಳಿಗ್ಗೆ ಫೋನ್ ಮಾಡಿದ ಮೇಲೆ ಅದು ಎಲ್ಲೆಲ್ಲೋ ಇರುತ್ತೆ. ಒಂದು ಸಲ ಹಾಸಿಗೆ ಮಡಚುವಾಗ ಅದರ ಒಳಗಿದ್ದು ಅದನ್ನು ಹುಡುಕಿ ಹೊರತೆಗೆದಾಗ ಎರಡು ದಿನ ದಾಟಿತ್ತು. ಶ್ರೀಕಾಂತ ಟೂರ್ ಅಥವ ಹೊರದೇಶಕ್ಕೆ ಹೋದಾಗ ಮಾತ್ರ ನನ್ನ ಸೆಲ್ ಫೋನ್ ನನ್ನ ಡ್ರೆಸ್ ಪೊಕೆಟ್ ನಲ್ಲಿರುತ್ತೆ. ನನ್ನ ಈ ಅಭ್ಯಾಸ ಬಲ್ಲ ಆತ್ಮೀಯರು ಕುಟುಂಬ ಸದಸ್ಯರು ಆದಷ್ಟು ನನಗೆ ಲ್ಯಾಂಡ್ ಲೈನ್ ಗೆ ಫೋನ್ ಮಾಡುವುದು.
ಹಾಂ! ಎಲ್ಲಿದ್ದೆ? ಮಿಸ್ಡ್ ಕಾಲ್ ನೋಡಿದೆ..ಅರೇ ಮುನ್ನ ಳದ್ದು (ಮುನ್ನ ನನ್ನ ಭೈಯ್ಯ ಅಂದರೆ ಶ್ರೀಕಾಂತರ ಹಿರಿಯಣ್ಣನ ಮಗಳು) . ಭೈಯ್ಯನವರಿಗೆ ಹುಷಾರು ತಪ್ಪಿದ್ದ ದಿನದಿಂದ ಅವಳು ಫೋನ್ ಮಾಡಿದರೆ ಶ್ರೀಕಾಂತಗೆ ಮಾಡೋದು. ನನಗೆ ಬಂದಿರೋದು ಆಶ್ಚರ್ಯ ಪಡುತ್ತ ಅವಳಿಗೆ ಫೋನಾಯಿಸಿದೆ.. 'ಅಪ್ಪ ಹೋಗಿ ಬಿಟ್ಟರು-ಏನು ಮಾಡ್ಲಿ, ಚಿಕ್ಕಪ್ಪ ಫೋನ್ ಎತ್ತತಾ ಇಲ್ಲ' ಅಂದಾಗ ಒಂದು ಕ್ಷಣ ನನಗೆ disorient ಆದ ಭಾವನೆ ಬಂತು. ಕೂಡಲೇ ಸಾವರಿಸಿ, 'ಧೈರ್ಯ ತೆಗೆದುಕೋ' ಸ್ವಲ್ಪ ಹೊತ್ತಿಗೆ ಫೋನ್ ಮಾಡ್ತೇನೆ ಅಂದೆ. ಶ್ರೀಕಾಂತ ಗೆ ಫೋನ್ ಹಚ್ಚಿದಾಗ ಸ್ವಿಚ್ ಆಫ್ ಆಗಿತ್ತು. ಹೌದು ಆ ದಿನ ಬ್ಯಾಂಕಿನ ವರಿಷ್ಟರೊಬ್ಬರ ಭೇಟಿ ಇತ್ತು ಅಂತ ಹೇಳಿದ್ದ ನೆನಪು. ಶ್ರೀಕಾಂತ ಗೆ ಸೆಲ್ಲ್ ಫೋನ್ ಅನ್ನು ಸೈಲೆಂಟ್ ನಲ್ಲಿ ಇಡಕ್ಕೆ ಗೊತ್ತಿಲ್ಲ ಅದಕ್ಕೆ ಅದನ್ನು ಸ್ವಿಚ್ ಆಫ್ ಮಾಡಿಡೋದು. ಅವರ ಜತೆ ಇರುವ ಸಾಲಿಮಠರಿಗೆ ಫೋನ್ ಮಾಡಿದೆ. ಅವರು ವರಿಷ್ಠರ ಕೊಟಡಿಯಿಂದ ಹೊರಗೆ ಬಂದು ನನ್ನ ಜತೆ ಮಾತನಾಡಿದರು. ಶ್ರೀಕಾಂತಗೆ ಸೂಕ್ಷ್ಮವಾಗಿ ವಿಷಯ ತಿಳಿಸಿ ಅಲ್ಲಿಂದ ಮನೆಗೆ ಕಳುಹಿಸಲು ಹೇಳಿದೆ.
ಒಂದು ವರ್ಷದ ಹಿಂದೆಯೆ ಭೈಯ ನವರಿಗೆ ಲೀವರ್ ನ ಸಿರ್ರೊಸಿಸ್ (Cirrhosis)  ಅಂತ ಡಯಗ್ನೈಸ್ ಮಾಡಿದ್ದರು. ಅತ್ಯಂತ ಕ್ಲೀನ್, ಸಾಧು life style ನಡೆಸುವ, ಕುಡಿತದಿಂದ ದೂರವಿರುವ ಭೈಯ್ಯನವರಿಗೆ ಈ ರೋಗ ಬಂದಿದ್ದು ನಮಗೆಲ್ಲ ತುಂಬ ಆಶ್ಚರ್ಯದ ಸಂಗತಿ. ಆ ಮೇಲೆ ಗೊತ್ತಯಿತು ಇದು ಬಿ ಪಿ ಮಾತ್ರೆಯ ಸತತ ಬಳಕೆಯಿಂದಾದ ದುಷ್ಪರಿಣಾಮ ಅಂತ. ಹದಿನೈದು ದಿನದ ಹಿಂದೆ ನಾನು ಶ್ರೀಕಾಂತ ತೀರ್ಥಹಳ್ಳಿಯಿಂದ ಉಡುಪಿಗೆ ಹೋಗಿ ಅವರನ್ನು ನೋಡಿಕೊಂಡು ಬಂದಿದ್ದೆವು. ನಾನು ಅಲ್ಲಿಂದ ಹೊರಡುವ ಮುಂಚೆ ಅವರ ಕಾಲಿಗೆರಗಿದ್ದಾಗ ಅವರ ಕಣ್ಣೋಟ ಸಂಜ್ಞೆಯಿಂದಲೆ ನನಗೆ ಗೊತ್ತಾಯಿತು ಅದು ನಮ್ಮ ಕೊನೆಯ ಭೇಟಿ ಅಂತ. ಆದರೂ ನಾನು ,ಇನ್ನು ಸ್ವಲ್ಪ ದಿನದಲ್ಲೆ ನಿಹಾನ ಪರೀಕ್ಷೆ ಮುಗಿಯುತ್ತೆ, ನಾನು ಅವಳು ಇಲ್ಲಿ ಬಂದು ಸ್ವಲ್ಪ ದಿನ ಇರುತ್ತೇವೆ 'ಅಂದಿದ್ದೆ. ಈಗ ಈ ಸುದ್ದಿ.
ನಾನು ಚಿಕ್ಕವಯಸ್ಸಿಗೆ ಮದುವೆಯಾಗಿ ಆ ಮನೆಗೆ ಹೋದಾಗ ಅವರೆ ನನ್ನಲ್ಲಿ ಧೈರ್ಯ ತುಂಬಿದ್ದು ಹಿರಿಯರಂತಿರದೆ ನನ್ನ ಸ್ನೇಹಿತರ ತರಹ ಇದ್ದಿದ್ದು. ಆವಾಗಿನ ದಿನಗಳನ್ನೆಲ್ಲ ನೆನೆಸಿ ಸ್ವಲ್ಪ ಹೊತ್ತು ಅತ್ತೆ. ಆದರೆ ಹಲವಾರು ಕೆಲಸಗಳಿದ್ದವು ಈಗ ಮಾಡಲು. ಮೊದಲಿಗೆ ನನ್ನ ತಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಆ ಮೇಲೆ ತೀರ್ಥಹಳ್ಳಿಯಲ್ಲೆಲ್ಲ ಸುದ್ದಿ ಮುಟ್ಟಿಸಲು ನೀಲೇಶ ಜವಳಿಗೆ ಫೋನ್ ಮಾಡಿದೆ. ಅದಾದ ನಂತರ ಶ್ರೀವತ್ಸ ಜೋಶಿಯವರಿಗೆ. ಅವರು ಚಂದದ ನಾಲ್ಕು ಸಾಂತ್ವನದ ಮಾತು ಹೇಳಿದರು. ಜ್ಯೋತಿ ವೇದಾ ರ ಫೋನ್ ಹೋಗಲಿಲ್ಲ ಅದಕ್ಕೆ ತಕ್ಷಣ ಅವರಿಗೊಂದು ಮೈಲ್ ಹಾಕಿದೆ. 
ನಿಹಾ ಆ ದಿನ ಬೆಳಿಗ್ಗೆ 'ಸಂವಾದ' ತಂಡ ಆಯೋಜಿಸಿರುವ ಎರಡು  ದಿನದ ಸಿನಿಮ appreciation ಕೋರ್ಸ್ ಗೆ ಅಂತ ತುಮಕೂರಿಗೆ ಹೊರಟಿದ್ದಳು. ಅವಳಿಗೆ ಫೋನ್ ಮಾಡಿ ವಿಷಯ ತಿಳಿಸಿ, ಅವಳಿಗೆ ನಮ್ಮ ತುಮಕೂರಿನ ಆಫಿಸ್ ನಲ್ಲಿ ಕಾಯಲು ಹೇಳಿದೆ. ಮಾಲವಿಕ ಬರಬೇಕು ಅಂತ ನನಗೆ ಆಸೆ ಇತ್ತು. ಯಾಕೆಂದರೆ ಅವಳು ಭೈಯ್ಯ ಅವರನ್ನು ನೋಡಿ ಎರಡು ವರ್ಷಗಳೇ ಸಂದಿದ್ದವು. ಕೆಲಸಕ್ಕೆ ಸೇರಿದ ಮೇಲೆ ಅವಳು ಅವರನ್ನು ನೋಡಿರಲಿಲ್ಲ. ಅವಳಿಗೆ ಫೋನ್ ಮಾಡಿ ಏನು ಮಾಡ್ತೀಯಾ? ನಮ್ಮ ಜತೆ ಬರುತ್ತೀಯಾ ಅಂತ ಕೇಳಿದೆ, ಅವಳು ಒಂಚೂರು ಆಲೋಚಿಸದೆ, ಈಗಲೇ ಹೊರಡುತ್ತೇನೆ ಅಂದಳು. ಇಷ್ಟರಲ್ಲಿ ಶ್ರೀಕಾಂತ ನನಗೆ ಫೋನ್ ಮಾಡಿ ಎರಡು ಗಂಟೆಗೆ ಗಾಡಿ ಬರುತ್ತೆ ರೆಡಿಯಾಗಿರು ಅಂದಿದ್ದರು. ನಾನು ಬೇಗ ಬೇಗ ನಮಗೆ ಬೇಕಾಗಿರುವ ಬಟ್ಟೆ ಬರೆ ಮತ್ತು ಇತರೇ ಅಗತ್ಯದ ಸಾಮಾನುಗಳನ್ನು ಸ್ಯೂಟ್ ಕೇಸ್ ಒಳಗೆ ಹಾಕಿಟ್ಟೆ. ಶ್ರೀಕಾಂತ ಬಂದ ಮೇಲೆ ಮೊದಲು ಅವರು ಊಟ ಮಾಡಿದರು. ಆಮೇಲೆ ಹಣಕಾಸಿನ ವ್ಯವಸ್ಥೆ ಮುಂತಾದವುಗಳನ್ನು ಮಾಡಲು ಆಫಿಸ್ ಗೆ ಹೋದರು. ಮಾಲವಿಕ ಬಂದ ಮೇಲೆ ನಾನು ಅವಳು ಊಟ ಮಾಡಿ ಉಳಿದ ಪದಾರ್ಥಗಳನ್ನು ಕಸದ ಬುಟ್ಟಿಗೆ ಚೆಲ್ಲಿ ಮನೆ ಕಿಟಕಿಗಳು, ಹಿಂದಿನ ಬಾಗಿಲು ಭದ್ರ ಪಡಿಸುವಷ್ಟರಲ್ಲಿ ಗಾಡಿ ಬಂದಿತ್ತು. ನಮ್ಮ ಮನೆಯ ಔನರ್ ಗೆ ಹೇಳ್ಬಿಟ್ಟು, ಒಂದು  ಜತೆ ಬೀಗದ ಕೈ ಅವರಿಗೆ, ಇನ್ನೊಂದು ಆಫಿಸ್ ಗೆ ಕೊಟ್ಟು, ಮಲ್ಲೇಶ್ವರಂ ನಲ್ಲಿ ಶ್ರೀಕಾಂತರ ಕಸಿನ್ ಸತೀಶರನ್ನು ಪಿಕ್ ಮಾಡಿ ಹೊರಟ್ವಿ. ಉಡುಪಿಯಿಂದ ಅಲ್ಲಿನ ವ್ಯವಸ್ಥೆ ಬಗ್ಗೆ ಫೋನ್ ಮಾಡಿ ಆಗಾಗ ಶ್ರೀಕಾಂತ ವಿಚಾರಿಸುತ್ತಿದ್ದರು. ನಾವು ಹೊರಟಾಗ ಆಗಲೇ ಮೂರು ದಾಟಿತ್ತು. ಅಲ್ಲಿಂದ ಟ್ರಾಫಿಕ್ ಎಲ್ಲ ದಾಟಿಕೊಂಡು ಊರ ಹೊರಗಡೆ ಬರಲು 2 ತಾಸುಗಳಾದವು. ದಹನ ಕ್ರಿಯೆ ರಾತ್ರಿ 10 ಕ್ಕೆ ಅಂತ ತೀರ್ಮಾನಿಸಲಾಯಿತು. ನಮ್ಮ ಗಾಡಿಯ ಚಾಲಕ ನನಗೆ 'ನೀವು ಏನೂ ಚಿಂತೆ ಮಾಡಿಬೇಡಿಯಮ್ಮ, ನಿಮಗೆಲ್ಲ 10 ಗಂಟೆಯೊಳಗೆ ಉಡುಪಿಗೆ ತಲುಪಿಸೋದು ನನ್ನ ಜವಾಬ್ದಾರಿ' ಅಂದರು. ನೀಹಾಳನ್ನು ದಾರಿಯಲ್ಲಿ ಪಿಕ್ ಮಾಡಿ ಹೊರಟೆವು. ಸಕಲೇಶಪುರ್ ತಲುಪುವಾಗ ಉಡುಪಿಯಿಂದ ಶ್ರೀಕಾಂತರ ಭಾವ ಫೋನ್ ಮಾಡಿದರು' ರುದ್ರಭೂಮಿ ಸಂಜೆ 7 ಗಂಟೆಗೆ ಕ್ಲೋಸ್, ಮತ್ತು body ಯನ್ನು ಸಾಯಂಕಾಲ 5 ರ ನಂತರ ಆಸ್ಪತ್ರೆಯಲ್ಲಿರಗೂಡುವುದಿಲ್ಲ' ಅಂತ. ಹಾಗಾಗಿ ಭೈಯನವರ ದೇಹವನ್ನು ಮಣಿಪಾಲದ ಶೈತ್ಯಾಗಾರದಲ್ಲಿಡಲಾಯಿತು.ನಾನೂ 'ಡ್ರೈವರ್ ಗೆ, ಗಡಿಬಿಡಿಯಿಂದ ಏನೂ ಹೋಗುವುದು ಬೇಡ, ಘಟ್ಟ ಪ್ರದೇಶ..ಸಾವಕಾಶವಾಗಿ ತಲುಪಿದರಾಯಿತೆಂದು. ನೀಲೇಶ ಮತ್ತು ಊರಿನ ದೇವಸ್ಥಾನದ ಕಡೆಯವರು ಗಾಡಿ ಮಾಡಿ ಹೊರಡುವ ಮುಂಚೆ ಅವನು ನನಗೆ ಎಸ್ ಎಮ್ ಎಸ್ ಮಾಡಿದ. ನಾನು ಕೂಡಲೆ, ಬೇಡ ದಹನ ಕ್ರಿಯೆ ನಾಳೆ. ನೀವೀಗ ಹೋದರೂ ಅಲ್ಲಿ ಭೈಯ್ಯನವರು ಕಾಣ ಸಿಗಲ್ಲ ಅಂತ ಹೇಳಿದೆ. ಹಾಗೂ ಮಿತ್ರ ವಸುಧೇಂದ್ರ ಹಾಗೂ ಸಂದೀಪ ಕಾಮತ್ ಗೆ ವಿಷಯ ತಿಳಿಸಿ ಎಸ್ ಎಮ್ ಎಸ್ ಮಾಡಿ ನನ್ನ ಸೆಲ್ ಫೋನ್ ಅನ್ನು ಬ್ಯಾಗ್ ಒಳssssಗಡೆ ತುರುಕಿಸಿಟ್ಟೆ. ಇನ್ನು ಯಾರ ಜತೆನೂ ಯಾವ ಮಾತೂ ಎಸ್ ಎಮ್ ಎಸ್ ನನಗೆ ಬೇಕಿರಲಿಲ್ಲ.
ಶ್ರೀಕಾಂತ-ಸತೀಶ ಸಮಯ ಕಳೆಯಲು ಲೋಕಾರೂಢಿಯ ಮಾತುಗಳನ್ನಾಡುತ್ತಿದ್ದರೆ, ನಿಹಾ ಅವಳ ಪುಸ್ತಕ ಓದುತ್ತಿದ್ದಳು, ಮಾಲವಿಕ ನಿದ್ದೆಗೆ ಜಾರಿದ್ದಳು. ನನಗೋ ಮೌನ ಮಾತ್ರ ಬೇಕಾಗಿತ್ತು. ಆವಾಗಾವಾಗ ಒಸರುತ್ತಿದ್ದ ಕಂಬನಿ ಕಿಟಕಿಯಿಂದ ಬೀಸುತ್ತಿದ  ಗಾಳಿಗೆ ಹಾಗೇ ಆವಿಯಾಗುತ್ತಿತ್ತು. ನನ್ನ ಪರಿವಾರದವರು ನಾನು ಅಳುವುದು ನೋಡುವುದು ನನಗೆ ಬೇಕಾಗಿರಲಿಲ್ಲ.
ಹಾಗೆ ಹಳೆ ನೆನಪುಗಳೆಲ್ಲ ಒತ್ತಿಕೊಂಡು ಬಂದವು:
ಚಿಕ್ಕ ಪ್ರಾಯಕ್ಕೆ ಮದುವೆಯಾಗಿ ನಾನು ನನ್ನ ಮುಂಬೈ ನ ಪುಟ್ಟ ಕುಟುಂಬದಿಂದ ಈ ಕೂಡು ಕುಟುಂಬಕ್ಕೆ ಹಾರಿದ್ದೆ. ನಗರದಿಂದ ಹಳ್ಳಿಗೆ. ನನಗೊಂದೂ ತೋಚುತ್ತಿರಲಿಲ್ಲ. ಮದುವೆಯಾದ ಎರಡು ದಿನದ ನಂತರ, ತೀರ್ಥಹಳ್ಳಿಯಲ್ಲಿ ಆಯೋಜಿಸಿದ ಸತ್ಯನಾರಾಯಣ ಪೂಜೆ ಮುಗಿಸಿ ನನ್ನ ತಂದೆ ತಾಯಂದಿರು, ತಮ್ಮಂದಿರು, ತಂಗಿ ಹೋದ ಮೇಲೆ ನನಗೆ ಅನಾಥ ಪ್ರಜ್ಞೆ ಕಾಡಿತ್ತು. ನನಗೆ ಹಳ್ಳಿ ಜೀವನದ ಪರಿಚಯವಿರಲಿಲ್ಲ. ಶ್ರೀಕಾಂತ ಬೆಳಿಗ್ಗೆ 9 ಕ್ಕೆ ಮನೆ ಬಿಟ್ಟರೆ ಬರುತ್ತಿದ್ದದ್ದೆ ರಾತ್ರಿ. ಮನೆಯಲ್ಲಿ ಮುನ್ನ (ಸುಮತಿ) ಬಿಟ್ಟರೆ ಎಲ್ಲರೂ ನನಗಿಂತ ಹಲವಾರು ವರ್ಷ ಹಿರಿಯರೇ. ಬೇಗ ಎದ್ದು ಅಕ್ಕ (ಓರಗಿತ್ತಿ) ನಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೆ. ಆ ಮೇಲೆ ನನ್ನ ಮೊದಲನೇ ವರ್ಷದ ಪದವಿ ಪರೀಕ್ಷೆಗೆ ಓದುತ್ತಿದ್ದೆ. ಸ್ವಲ್ಪ ಹೊತ್ತು ಅತ್ತೆಯವರ ಜತೆ ಸಮಯ ಕಳೆಯುತ್ತಿದ್ದೆ. ಅವರಿಗೆ ಕಣ್ಣಲ್ಲಿ ದೃಷ್ಟಿಯಿರಲಿಲ್ಲ ಹಾಗೂ ಕಿವಿ ಮಂದವಾಗಿ ಕೇಳಿಸುತ್ತಿತ್ತು. ಅವರ ತವರುಮನೆಯ ಕತೆಗಳನ್ನು ಹೇಳಿ ನನ್ನನ್ನು ರಂಜಿಸುತ್ತಿದ್ದರು. ಮಧ್ಯಾಹ್ನ ಮಾವ ಅಂಗಡಿ ನೋಡಿಕೊಳ್ಳುತ್ತಿದ್ದರೆ ಭೈಯ್ಯ ಊಟಕ್ಕೆ ಬರುತ್ತಿದ್ದರು. ಅವರದ್ದು ಸಾವಕಾಶ ಊಟ. ಅಕ್ಕ ಮತ್ತು ಭಯ್ಯ ಅವರನ್ನು ಬಡಿಸುತ್ತ ಅವರ ಮಾತುಗಳನ್ನು ಕೇಳಲು ಉತ್ಸುಕಳಾಗುತ್ತಿದೆ. ಅವರು ಓದುವುದರಲ್ಲಿ, ಅದರಲ್ಲೂ ಲೆಕ್ಕದಲ್ಲಿ ತುಂಬ ಬುದ್ದಿವಂತರಿದ್ದರಂತೆ, ಆದರೆ ಮಾವನವರಿಗೆ ಅಂಗಡಿಯಲ್ಲಿ ಸಹಾಯ ಮಾಡಬೇಕಾಗಿ ಬಂದು ಅವರು 8 ನೇ ಈಯತ್ತೆ ಮುಗಿಯುತ್ತಿದ್ದ ಹಾಗೆ ಅವರನ್ನು ಶಾಲೆಯಿಂದ ಬಿಡಿಸಿದ್ದರಂತೆ. ಈ ಬಗ್ಗೆ ಅವರು ಬೇಜಾರಿನಿಂದ ಹಲವಾರು ಬಾರಿ ನನ್ನಲ್ಲಿ ಹೇಳಿಕೊಂಡಿದ್ದರು. ಮನೆಯಲ್ಲಿ ಹಿರಿಯ ಮೂವರು ಗಂಡಸಿದ್ದರೂ (ನನ್ನ ಮಾವನವರ ಇಬ್ಬರು  ತಮ್ಮಂದಿರು ಮತ್ತು ಶ್ರೀಕಾಂತರ ಇನ್ನೊಬ್ಬ ಅಣ್ಣ) ಅವರೆಲ್ಲ ಬೇರೆ ಬೇರೆ ಕೆಲಸ ಮಾಡುತ್ತಿದ್ದರಿಂದ ಅಂಗಡಿಯ ಜವಾಬ್ದಾರಿ ನನ್ನ ಭೈಯ್ಯನವರ ಮೇಲೆ. ಭಾರವಾದ ಮೂಟೆಗಳನ್ನು ಹೊರುವುದರಿಂದ ಅಂಗಡಿಯ ಸಾಮಾನುಗಳನ್ನು ಅದರ ಸ್ಥಾನದಲ್ಲಿಡುವುದು, ಸೇಲ್ಸ್, ಆರ್ಡರ್ ಕೊಡುವುದು, ತಿಂಗಳಿಗೆ ಒಂದು ಸಲ ಶಿವಮೊಗ್ಗಕ್ಕೆ ಹೋಗಿ ಖಾಲಿಯಾದ ಸಾಮಾನಿನ ಪಟ್ಟಿ ಕೊಟ್ಟು ಬರುವುದು ಮುಂತಾದ ಹತ್ತು ಹಲವು ಕೆಲಸಗಳು. ನಮ್ಮ 25 ವರ್ಷದ ಒಡನಾಟದಲ್ಲಿ ಅವರು ಕಾಯಿಲೆ ಬಿದ್ದದ್ದು ಆ ಒಂದೇ ಸಲ. ಭಾನುವಾರ ಅಂಗಡಿ ಬಾಗಿಲು ಹಾಕಿದ್ದರೂ ಓಣಿ ಬಾಗಿಲಿನಿಂದ ಬರುವ ಗ್ರಾಹಕರು. ಹಾಗಾಗಿ ರವಿವಾರ ಕೂಡ ಕೆಲಸವೇ ಆಗುತ್ತಿತ್ತು.

ನಮ್ಮ ತೀರ್ಥಹಳ್ಳಿಯ ಜೀನಸಿ ಅಂಗಡಿಗೆ 100 ವರ್ಷಕ್ಕಿಂತ ಹಳೆಯ ಇತಿಹಾಸ..ಎಲ್ಲ ಸಿಗುತ್ತಿತ್ತು. ಊರಿನಲ್ಲಿ ಒಂದು ಮಾತು ಇತ್ತು ;ಎಲ್ಲೂ ಸಿಗದಿದ್ದರೆ ಬಾಲಕೃಷ್ಣ ಶಣೈ ಅವರ ಅಂಗಡಿಯಲ್ಲಿ ಸಿಗುತ್ತೆ ಅಂತ. ಬಾಣಂತಿ ಔಷಧಗಳು, ಬೇರು-ಕಾಷ್ಟಗಳು etc etc..:-)
ಬೆಳಿಗ್ಗೆ ಅವರು ಹೋಮ್ ಗಾರ್ಡ್ಸ್ ಸೇವೆ ಗೆ ಹೋಗುತ್ತಿದ್ದರು. ಅವರು ಹೋಮ್ ಗಾರ್ಡ್ ಕ್ಯಾಂಪ್ ಗೆ ಎಲ್ಲ ಹೋದಾಗ ಕ್ರೀಯಾಶೀಲತೆಯಿಂದ ಪಡೆದ ಬಹುಮಾನಗಳ ಬಗ್ಗೆ, ಅವರು ಕಲಿತ ಬೇರೆ ಬೇರೆ knots ಬಗ್ಗೆ ಹೇಳೊದು ಅದರ ಪ್ರಾತ್ಯಕ್ಷಿಕತೆ ಕೂಡ ಮಾಡಿ ತೋರಿಸುವುದು, ಫರ್ಸ್ಟ್ ಎಇಡ್ ಬಗ್ಗೆ ಎಲ್ಲ ಹೇಳುತ್ತಿದ್ದರು. ಯಾವುದೇ ಪದಾರ್ಥ/ಸಾಮಾನು ಅವರು ವೇಸ್ಟ್ ಮಾಡುತ್ತಿರಲಿಲ್ಲ ನಮಗೂ ಹಾಗೇ ಹೇಳುತ್ತಿದ್ದರು, 'ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತದೆ' ಅಂತ.
ವಿಷ್ಣುವರ್ಧನ್ ಅವರ ನೆಚ್ಚಿನ ಸಿನಿಮಾ ತಾರೆ. ಅವರ ಆಪ್ತಮಿತ್ರ ಸಿನಿಮಾವನ್ನು ರಾತ್ರಿ ಅಂಗಡಿ ಬಾಗಿಲು ಮುಚ್ಚಿದ ಮೇಲೆ ಲಾಸ್ಟ್ ಶೋ ಹೋಗಿ ಮೂರು ಸಲ ಹೋಗಿ ನೋಡಿ ಬಂದವರು. ಮತ್ತು ತೀರ್ಥಹಳ್ಳಿಗೆ ವಿಷ್ಣುವರ್ಧನ್ ಅವರು ಭೇಟಿ ನೀಡಿದಾಗ ಬೆಳಿಗ್ಗಿನಿಂದ ಸಂಜೆ ತನಕ ಬಿಸಿಲನ್ನೂ ಲೆಕ್ಕಿಸದೆ ಕಾದು, ಅವರಿಗೆ ಹಸ್ತಲಾಘವ ನೀಡಿದ್ದು ಅದು ಟಿ.ವಿ ಯವರು ರೆಕಾರ್ಡ್ ಮಾಡಿದ್ದು, ಮನೆಗೆ ಬಂದು  ಬೆಂಗಳೂರಿನಲ್ಲಿದ್ದ ನನಗೆ ಫೋನಾಯಿಸಿದ್ದು ಇನ್ನು ನಿನ್ನೆ ಮೊನ್ನೆ ತರಹ ಹಸಿ ಹಸಿ ನೆನಪು.
ಮಾಲು-ನಿಹಾ 10 ನೇ ಮತ್ತು PUC 2 ನಲ್ಲಿ ಒಳ್ಳೆ ಅಂಕಗಳಿಂದ ಪಾಸ್ ಆದಾಗ, ಲೆಕ್ಕದಲ್ಲಿ ನೂರಕ್ಕೆ ನೂರು ಪಡೆದಾಗಲೆಲ್ಲ ಅವರಿಗೆ ಮೊದಲಿಗೆ ಫೋನಾಯಿಸುತ್ತಿದೆ. ಇಬ್ಬರಲ್ಲಿ ಒಬ್ಬರಾದರೂ ಡಾಕ್ಟರ್ ಆಗಬೇಕೆಂದು ಅವರು ಬಯಸಿದ್ದರು. :-)
ತುಂಬ ಕಷ್ಟ ಪಟ್ಟಿದ ಜೀವ. ಮನೆಯ ಹಿರಿಯರೆಲ್ಲ ಅವರ ಕೊನೆ ಸಮಯದಲ್ಲಿ ಹಾಸಿಗೆ ಹಿಡಿದಾಗ ಅವರ ಮಲ ಮೂತ್ರಕೂಡ clean  ಮಾಡಿದವರು. ಹಿರಿಯರೆಲ್ಲ ಕಾಲವಾದ ಮೇಲೆ, ಒಬ್ಬಳೆ ಮಗಳು 'ಮುನ್ನ' (ಸುಮತಿ) ಳ ಮದುವೆಯ ಬಳಿಕ ಅವರು ಸ್ವಲ್ಪ ನೆಮ್ಮದಿಯಿಂದಿದ್ದರು. ಹಲವಾರು ಬಾರಿ ನಾನು ಅವರಿಗೆ ಕೆಲಸಕ್ಕೆ ಸಣ್ಣ ಹುಡುಗರನ್ನು ಇಟ್ಟುಕೊಳ್ಳಿ, ಎಲ್ಲ ನೀವೆ ಮಾಡುವುದನ್ನು ಇನ್ನು ಸಾಕು ನಿಲ್ಲಿಸಿ ಅಂತ ಗಿಣಿಗೆ ಹೇಳಿದ ಹಾಗೆ ಹೇಳಿದ್ದೆ. ಆದಷ್ಟು ದಿನ ನಿರ್ವಹಿಸುತ್ತೇನೆ ಆಮೇಲೆ  ಅದೆಲ್ಲ ಇದ್ದದ್ದೆ ಅಲ್ಲವಾ ಅಂತ ಹೆಳುತ್ತಿದ್ದರು. ಅಷ್ಟರಲ್ಲಿ ಊರಿನಲ್ಲಿ ಕೊಂಕಣಿಯವರು ಶ್ರೀ ವೆಂಕಟರಮಣ ದೇವಸ್ಥಾನ ಕಟ್ಟುವುದೆಂದು ನಿರ್ಧರಿಸಿದರು. ಆ ಸಲುವಾಗಿ ಅವರು ಓಡಾಡಿದ್ದು.ಊರೂರು ತಿರುಗಿದ್ದು ಅಷ್ಟಿಷ್ಟಲ್ಲ. ಆದರೂ ತುಂಬ ಎಂಜಾಯ್ ಮಾಡುತ್ತಿದ್ದರು. ಅವರು ತುಂಬ jovial ಮನುಷ್ಯ. ಎದುರಿಗೆ ಸಿಕ್ಕ ಯಾರನ್ನೂ ಮಾತನಾಡಿಸದೇ ಯಾವತ್ತೂ ಕಳಿಸಿದವರಲ್ಲ.
'ದೇವರ ಕೆಲಸ ಶುರು ಹಚ್ಚಿಕೊಂಡ ಮೇಲೆ ನನಗೆ ಆದಾಯ ಕೂಡ ಹೆಚ್ಚಾಗಿದೆ, ಎಲ್ಲ ಸ್ವಾಮಿ ದೇವನ ಕೃಪೆ' ಅಂತ ಎಷ್ಟೊಂದು ಬಾರಿ ನನ್ನ ಬಳಿ ಹೇಳಿದ್ದರು. ರಾತ್ರಿ ಊಟ ವಾದ ಮೇಲೆ ಅವರು, ಯಾರ್ಯಾರು ದೇವಸ್ಥಾನಕ್ಕೆ ಎಷ್ಟೆಷ್ಟು ದೇಣಿಗೆ ನೀಡಿದರು ಮುಂತಾದೆಲ್ಲ ರಸಿತಿಯನ್ನು ಬರೆಯುತ್ತ, ರಸವತ್ತಾಗಿ ಹೇಳುತ್ತಿದ್ದರು. ಇನ್ನೊಮ್ಮೆ ಒಂದು ಚಿಕ್ಕ ಪೆಟ್ಟಿಗೆ ತೋರಿಸಿ 'ಇದರಲ್ಲಿ ನಾನು ದಿನಾ 100 ರೂ ಹಾಕುತ್ತೇನೆ ವಾರಕ್ಕೊಂದು ಸಲ ಅದು ದೇವಸ್ಥಾನಕ್ಕೆ ನೀಡುತ್ತೇನೆ ಅಂದಿದ್ದರು. ಆಪ್ತರು ಪರಿಚಯಸ್ಥರು ಹಲವಾರು ಜನರು 'ದೇವಸ್ಥಾನಕ್ಕಾಗಿ ತುಂಬ ಖರ್ಚು ಮಾಡುತ್ತಿದ್ದಾರೆ' ಅಂದಾಗ ಅವರ ದುಡ್ಡು ಬೇಕಾದ ಹಾಗೆ ಖರ್ಚು ಮಾಡಲು ಅವರಿಗೆ ಹಕ್ಕಿದೆ ಅಂತ ಹೇಳಿ ನಾನು ಬಾಯಿ ಮುಚ್ಚಿಸಿದೆ. ನನಗೂ ದೇಣಿಗೆ ನೀಡಲು ,ಹಾಗೂ ಈ ನಿಟ್ಟಿನಲ್ಲಿ ನನ್ನ ಕುಟುಂಬದವರನ್ನು ಪ್ರೇರೇಪಿಸಲು ಅವರು ಅವಾಗಾವಾಗ ನನಗೆ ಹೇಳುತ್ತಿದ್ದರು. ನನಗೆ ಅದರಲ್ಲೆಲ್ಲ ನಂಬಿಕೆಯಿಲ್ಲ. ಅದಕ್ಕೆ ನಕ್ಕು ಸುಮ್ಮನಾಗುತ್ತಿದೆ. ಕಡೆಗೆ ಅವರೇ ನನ್ನ ತಂದೆ-ತಾಯಿ, ತಮ್ಮ, ತಂಗಿಯರಿಗೆ ಫೋನ್ ಮಾಡಿ ಅವರಿಂದ ದೇಣಿಗೆ ಪಡೆಯುವುದರಲ್ಲಿ ಯಶಸ್ವಿಯಾದರು. ದೇವಸ್ಥಾನದ ಅಧ್ಯಕ್ಷರನ್ನಾಗಿ ಮಾಡಿದಾಗಲಂತೂ ಅವರ ಖುಶಿ ಹೇಳತೀರದು. ಅಷ್ಟು ಖುಶಿಯಲ್ಲಿದ್ದಾಗಲೇ ಅವರು ಒಂದು ದಿನ ರಕ್ತ ವಾಂತಿ ಮಾಡಿಕೊಂಡಿದ್ದು. ದೇವಸ್ಥಾನದ ಕಮಿಟಿಯವರ ಸಹಾಯದಿಂದ ಅವರಿಗೆ ಮಣಿಪಾಲಕ್ಕೆ ಕರೆದೊಯ್ಯಲಾಯಿತು. ಆಗ ನಾವು ಹಾಗೂ ನನ್ನ ತಮ್ಮನ ಕುಟುಂಬ ಮಹಾರಾಷ್ಟ್ರದ  ಟೂರ್ ಹೋಗಿದ್ದೆವು. ಆಮೇಲೆ ಅವರ ಚಿಕಿತ್ಸೆಗೋಸ್ಕರ ಅಂತ ಅವರು ಉಡುಪಿಯಲ್ಲೆ ಇರುವುದೆಂದು ನಿರ್ಧರಿಸಲಾಯಿತು ಉಡುಪಿಯಲ್ಲಿ ಹೇಗೂ ಮುನ್ನಳ ಮನೆಯಿತ್ತು.
ಕೊನೆ ಕೊನೆಗೆ ಅವರ ಜೀವ ತೀರ್ಥಹಳ್ಳಿ ಕಡೆ ಎಳೆಯುತ್ತಿತ್ತು. ಅಲ್ಲೇ ಹುಟ್ಟಿ ಬೆಳೆದು, ಕಷ್ಟ ಸುಖ, ದು:ಖ, ಹುಟ್ಟು, ಸಾವು ಸಂತಸ ಕಂಡಂತಹ ಮನೆಗೆ ಹೋಗುವ ಸಹಜ ತವಕ ವ್ಯಕ್ತ ಪಡಿಸುತ್ತಿದ್ದರು.ಉಡುಪಿಯಲ್ಲಿ  ಕೂಡ ಅಕ್ಕ ಪಕ್ಕದವರ ಸ್ನೇಹ ಸಂಪಾದಿಸಿದ್ದರು. ಯಾರಿಗೂ ಯಾವತ್ತೂ ಕೇಡು ಬಯಸಿದವರಲ್ಲ.
ನಾವು ಉಡುಪಿ ತಲುಪಿದಾಗ ರಾತ್ರಿ 11.30. ಹೋಗಿ ಮೊದಲಿಗೆ ಅಕ್ಕನನ್ನು ತಬ್ಬಿಕೊಂಡಿದ್ದು. ರಾತ್ರಿ ಇಡೀ ಸಂಕಟ, ದು:ಖವನ್ನೂ ಮರೆಮಾಚಿಸುವಷ್ಟು ಸೊಳ್ಳೆಗಳ ಕಾಟ. ಅಕ್ಕನೆ ಎದ್ದು ನಮಗೆ ಸೊಳ್ಳೆ ಓಡಿಸುವ ಕಾಯಿಲ್ ತಂದು ಕೊಟ್ಟರು. ಹಾಗೆ ಹೀಗೆ ಹೊರಳಾಡಿ  ಬೆಳಗಾಗುವುದನ್ನೆ ಕಾಯುತ್ತಿದ್ದೆ. ಶೈತ್ಯಾಗಾರದ ಬಾಗಿಲು ತೆರೆಯುವುದೇ 8 ಗಂಟೆಗೆ.
ಯಾರೂ ಅಳಕೂಡದೆಂದು ಭೈಯ್ಯ ನವರು ಹೇಳಿದ್ದರಂತೆ. ಆದರೂ ಕೊನೆಯ ಬಾರಿ ಅವರನ್ನು ಎತ್ತಿಕೊಂಡು ಹೋದಾಗ ತಡೆಯಲಾಗದೆ ಬಿಕ್ಕಳಿಸಿದ್ದೆ. ಅಷ್ಟೆ ಅಲ್ಲ, ಯಾರಿಗೂ ತೊಂದರೆ ಯಾಗಬಾರದೆಂದು ಅಂತ್ಯ ಸಂಸ್ಕಾರಕ್ಕೆಂದು ದುಡ್ಡು ಸಹ ರೆಡಿ ಮಾಡಿ ಬ್ಯಾಂಕ್ ನಲ್ಲಿ ಇಟ್ಟಿದ್ದರು ಎಂದರೆ ನಂಬುತ್ತೀರಾ??
ಈಗ ನಮ್ಮಲಿರುವುದು ಅವರ ನೆನಪು ಮಾತ್ರ.
ಮುನ್ನ ಉರ್ಫ್ ಸುಮತಿ ಹೆಗ್ಡೆ ಅವಳ ತಂದೆ ಬಗ್ಗೆ ಬರೆದಿದ್ದು ಕೆಳಗಿನ ಕೊಂಡಿಯಲ್ಲಿದೆ
http://sumathihegde.blogspot.in/2012/09/blog-post_15.html
:-(
200 ನೇ ಬರಹಕ್ಕೆ ತಲುಪಿದಕ್ಕೆ ಪುನ: ರಘು ಅಪಾರ, ಶ್ರೀಕಾಂತ, thatskannada.com, ವಿಜಯಕರ್ನಾಟಕ ಪತ್ರಿಕೆ, ಶ್ರೀವತ್ಸ ಜೋಶಿ, ಬದರಿನಾಥ ಪಲವಳ್ಳಿ, ಶ್ರೀದೇವಿ ಕಳಸದ್, ಅವಧಿ ಮ್ಯಾಗ್, ಕೆಂಡಸಂಪಿಗೆ, ನಿಲುಮೆ, ಕನ್ನಡ ಬ್ಲಾಗರ್ಸ್ ಲಿಸ್ಟ್, ಸಂಪದ ಹಾಗೂ ನನ್ನೆಲ್ಲ ಓದುಗ ಮಿತ್ರರಿಗೆ ನನ್ನ ಧನ್ಯವಾದ ಸಲ್ಲುತ್ತದೆ.

October 4, 2012

ಹೀರೆಕಾಯಿ ಸಿಪ್ಪೆ ಚಟ್ನಿ/ ridge gourd peel chutney

ನಮ್ಮ ಮನೆಯಲ್ಲಿ ಹೀರೆಕಾಯಿ ಪಲ್ಯ ಮಾಡಿದಾಗಲೆಲ್ಲ ಅದರ ಸಿಪ್ಪೆ ಚಟ್ನಿಯಾಗುತ್ತೆ by default..:-).

ಈ ರುಚಿಕರವಾದ ಚಟ್ನಿ ಮಾಡುವ ಬಗೆ ಹೀಗೆ
ಎರಡು ಹದ ಗಾತ್ರದ ಹೀರೆಕಾಯಿಗಳ ಸಿಪ್ಪೆ. tender ಇದ್ದಷ್ಟು ರುಚಿ ಹೆಚ್ಚು. ಎರಡು ದೊಡ್ಡ ಚಮಚ ತಾಜ ತೆಂಗಿನ ತುರಿ, ಮೂರು ಹಸಿ ಮೆಣಸಿನಕಾಯಿ (ಗ್ಯಾಸ್ಟ್ರಿಕ್ ಪ್ರಾಬ್ಲಮ್ ಅಥವಾ ಎಸಿಡಿಟಿ (acidity) ಇದ್ದವರು ಹಸಿ ಮೆಣಸಿನಕಾಯಿ ಬದಲು ಕಾಳುಮೆಣಸು (pepper) ಬಳಸಬಹುದು), ಜೀರಿಗೆ, ಸ್ವಲ್ಪ ತುಪ್ಪ ಅಥವ ಎಣ್ಣೆ, ಉಪ್ಪು, ಸಣ್ಣ ಚೂರು ಹುಣಸೆಹಣ್ಣು, ಚೂರು ಬೆಲ್ಲ.

ಮೊದಲಿಗೆ ತುಪ್ಪ / ಎಣ್ಣೆಯಲ್ಲಿ ಜೀರಿಗೆ ಸಿಡಿಸಿ, ಅದಕ್ಕೆ ಕತ್ತರಿಸಿದ ಹಸಿಮೆಣಸಿಕಾಯಿ / (ಕಾಳುಮೆಣಸು) ಹಾಕಿ followed by ಹೀರೆಕಾಯಿ ಸಿಪ್ಪೆ ಮತ್ತು ತೆಂಗಿನಕಾಯಿ ತುರಿ. ಕಾಯಿತುರಿ ಸ್ವಲ್ಪವೇ ಬಿಸಿಯಾದರೆ ಸಾಕು. ತಣ್ಣಗಾದ ಮೇಲೆ ಇವೆಲ್ಲವನ್ನು ಹುಣಸೆ ಮತ್ತು ಉಪ್ಪಿನೊಡನೆ ನುಣ್ಣಗೆ ರುಬ್ಬಿ ಕೊನೆಯಲ್ಲಿ ಚೂರು ಬೆಲ್ಲ ಬೆರೆಸಿ...ಚಟ್ನಿ ರೆಡಿ.ಅನ್ನ ಅಥವ ಚಪಾತಿಗೆ ಸಖತ್ combination ಸ್ವಲ್ಪ ಹೆಚ್ಚೆ ಊಟ ಮಾಡಿ ನನ್ನನ್ನು ಬೈಕೋತಾ ಕೂರಬೇಡಿ ಮತ್ತೆ...:-)

ಮಿಕ್ಸಿ ಅಥವಾ ಒರಳು ತೊಳೆದ ನೀರಿಗೆ ಮಜ್ಜಿಗೆ ಬೆರೆಸಿ ಅದಕ್ಕೊಂದು ಸಾಸಿವೆ ಕರಿಬೇವಿನ ಒಗ್ಗರಣೆ ಕೊಟ್ಟು ತಂಬಳಿ ಮಾಡಬಹುದು. ಬಿಸಿ ಅನ್ನದೊಂದಿಗೆ ರುಚಿ.ಹಾ ಹಾ after all konkaniಗಳು...
:-)