May 23, 2012

ಧೀರ ಕುಂಬಾರ- my attempt at translation

(ಮಕ್ಕಳಿಗಾಗಿ ಒಂದು ಕತೆಯನ್ನು ಅನುವಾದಿಸಿದ ಮಾಲತಿ ಆಂಟಿ)

ಕತ್ತಲಾವರಿಸಿತ್ತು. ಆಕಾಶದಲ್ಲೆಲ್ಲ ಕಪ್ಪು ಮೋಡಗಳು. ದೂರದಲ್ಲೆಲ್ಲೋ ಗುಡುಗು. ಬಲವಾದ ಗಾಳಿ ಬಿಸಿ ಮರಗಿಡಗಳೆಲ್ಲ ಅಲ್ಲಾಡುತ್ತಿದ್ದವು. ಸ್ವಲ್ಪ ಹೊತ್ತಿಗೆ ಪಿಟಿ ಪಿಟಿ ಎಂದ ಮಳೆ ಕ್ಷಣದಲ್ಲೆ ರಭಸದಲ್ಲಿ ಸುರಿಯಿತು.

ಒಂದು ಮುದಿ ಹುಲಿ ಮಳೆಯಿಂದ ರಕ್ಷಣೆ ಬಯಸಿ ತಂಗಲು ಜಾಗ ಹುಡುಕುತ್ತಿತ್ತು. ತನ್ನ ಗವಿಯಿಂದ ತುಂಬ ದೂರ ಬಂದಿತ್ತು ಈ ಹುಲಿ.   ಒಂದು ಗುಡಿಸಲು ಕಾಣಿಸಿ ಅದರ ಬಳಿ ಹೋಗಿ ಅದರ ಹುಲ್ಲಿನ ಮಾಡಿನ ಕೆಳಗೆ ತೂರಿ ಕುಳಿತುಕೊಂಡಿತು. ಮಳೆಯ ಸದ್ದೊಂದನ್ನು ಬಿಟ್ಟು ಬೇರೆ ಯಾವುದೆ ಶಬ್ದಗಳಿರಲಿಲ್ಲ. ಓಡಿ ಸುಸ್ತಾದ ಹುಲಿ ಇನ್ನೇನೂ ತೂಕಡಿಸಬೇಕು ಅಷ್ಟರಲ್ಲಿ ಮನೆಯೊಳಗಿನಿಂದ ಮನೆಯೊಡತಿಯ ಮಾತು ಕೇಳಿಸಿದವು. "ಏನು ಹಾಳಾದ ತೂತು, ಈ ಮಾಡಿನ ತೂತಿನಿಂದ ಸೋರುವ ನೀರಿನೊಂದಿಗೆ ಏಗುವುದಕ್ಕಿಂತ ಅಡವಿಯ ಹುಲಿಯಯನ್ನು ನಾನು ಧೈರ್ಯದಿಂದ ಎದುರಿಸಬಲ್ಲೆ". ಹುಲಿಗೆ ಅಚ್ಚರಿ ಎನಿಸಿತು. "ನಾನೋ ಕಾಡಿನ ರಾಜ. ಎಲ್ಲರೂ ನನಗೆ ಹೆದರುವವರು. ಇದೇನಿದು ಹೆಂಗಸಿನ ಮಾತು. ನನ್ನನ್ನು ಎದುರಿಸಬಲ್ಲೆ ಎನ್ನುತ್ತಿದ್ದಾಳಲ್ಲವಾ? ಹಾಗಾದರೆ ಈ ’ತೂತು’ ಎನ್ನುವುದು ನನಗಿಂತ ಬಲಶಾಲಿಯಾಗಿರಬೇಕು." ಹೇಗಿರಬಹುದು ಈ ’ತೂತು’ ಕಾಣಲು ಎಂದೆಲ್ಲ ಚಿಂತಿಸುತ್ತ ಕೂತ ಕಡೆಯೇ ನಿದ್ದೆ ಹೋಯಿತು.

ಸ್ವಲ್ಪ ಹೊತ್ತಿಗೆ ಯಾರೂ ಹಿಂಬದಿಗೆ ಒದ್ದ ಹಾಗಾಯಿತು. ಅದರ ಹಿನ್ನೆಲೆಯಲ್ಲೆ ಒಂದು ದನಿ , ’ಇಲ್ಲಿದಿಯಾ ಕತ್ತೆ? ಎಷ್ಟು ಪೊಗರು ನಿನಗೆ? ಮಧ್ಯಾಹ್ನ ಇಡೀ ನಿನ್ನನ್ನು ಹುಡುಕುವುದೇ ಆಯಿತು . ಹುಲಿ, ’ಹೋ ಹಾಗಾದರೆ ಆ ’ತೂತು’ ಈಗ ಮನೆ ಹೊರಗೆ ಬಂದು ನನ್ನನ್ನು ಹೊಡೆಯುತ್ತಿದೆ ಅಂದು ಕೊಂಡಿತು. ಹುಲಿಯ ಕೊರಳಿಗೆ ಹಗ್ಗ ಬಿಗಿದು ಅದನ್ನು ಹೊಡೆಯುತ್ತ ಒದೆಯುತ್ತ ಅದರ ಮೇಲೆ ಹತ್ತಿ ಕೂತು, ನಡಿ ಮನೆಗೆ, ಒಂದು ದಿನ ನಿನ್ನನ್ನು ಕೊಂದು ಹಾಕುವೆ, ಅಂತ ಹೇಳಿ ಹಗ್ಗವನ್ನು ಬಿಗಿ ಮಾಡಿ ಅದರ ಹಿಂಬದಿಗೆ ಇನ್ನೊಮ್ಮೆ ಬಲವಾಗಿ ಒದೆದ. ಹಾಗೂ ಹೀಗೂ ಹುಲಿ , ಅವನ ಮೇಲೇರಿ ಕೂತವನ ಆದೇಶದಂತೆ ಇನ್ನೊಂದು ಗುಡಿಸಲಿನ ಬಳಿಗೆ ಹೋಯಿತು. ಅದನ್ನು ಹೊರಗೆ ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿ ಬಂದ ಹುಲಿಯ ಮೇಲೆ ಕುಳಿತವನು. ಸರೀ ರಾತ್ರಿಯಾಗಿದ್ದರಿಂದ ಮನೆ ಒಳಗೆ ಸೇರಿ ಮಲಗಿ ನಿದ್ದೆ ಹೋದ. ಹುಲಿ ತನ್ನ ಕಟ್ಟನ್ನು ಬಿಡಿಸಲು ಶತ ಪ್ರಯತ್ನ ನಡೆಸಿ, ತನ್ನನ್ನು ಹೊಡೆಯುತ್ತ ಇಲ್ಲಿಯವರೆಗೆ ಕರೆದು ತಂದ ಈ ’ತೂತಿನ’ ಬಗ್ಗೆ ಯೋಚಿಸುತ್ತ ಸುಮ್ಮನಾಯಿತು.

ಹುಲಿ ’ತೂತು’ ಎಂದುಕೊಂಡಿದ್ದು ಆ ಊರಿನ ಒಬ್ಬ ಬಡ ಕುಂಬಾರ

ಮರುದಿನ ಬೆಳಿಗ್ಗೆ ಹೊರಗಡೆ ಜನರ ಮಾತಿನ ಸದ್ದು ಗದ್ದಲಕ್ಕೆ ಕುಂಬಾರನಿಗೆ ಎಚ್ಚರ ಆಯಿತು. ಎಲ್ಲರೂ ಅವನನ್ನು ಹೊಗಳುವವರೆ. ’ಎಷ್ಟು ಧೈರ್ಯ ನಮ್ಮ ಕುಂಬಾರನಿಗೆ. ನಮ್ಮ ಹಲವಾರು ಜಾನುವಾರುಗಳನ್ನು ತಿಂದು ಹಾಕಿ ನಮ್ಮ ಕೈಗೆ ಸಿಗದ ಹಾಗೆ ಓಡಾಡುತ್ತಿದ್ದ ಹುಲಿಯನ್ನು ಹೇಗೆ ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾನೆ’ ಮುಂತಾದ ಮಾತುಗಳು.

ಅದರ ಹಿಂದಿನ ದಿನ ಮಧ್ಯಾಹ್ನ ನಡೆದಿದ್ದು ಇಷ್ಟೆ. ಬೆಳಿಗ್ಗೆ ಎಲ್ಲ ಓಲೆಗೆ ಹಾಕಲು ಸೌದೆ ಹುಡುಕುತ್ತ ಕಾಡಿನಲ್ಲಿ ಅಲೆದಾಡಿ  ಕುಂಬಾರ ಸುಸ್ತಾಗಿ  ಮನೆಗೆ ತೆರಳಿದ. ಹೆಂಡತಿಗೆ ಒಂದು ಬಟ್ಟಲು ಸಾರಾಯಿ ಕೊಡಲು ಹೇಳಿದಾಗ ಆಕೆ ಇಡೀ ಪಿಪಾಯಿಯನ್ನು ತಂದು ಅವನ ಮುಂದೆ ಕುಕ್ಕಿದಳು. ಒಂದಾದ ಮೇಲೆ ಒಂದು ಹೀಗೆ ಹಲವಾರು ಬಟ್ಟಲು ಸೆರೆ ಕುಡಿಯುತ್ತ ತನ್ನ ಆಯಾಸವನ್ನು ಮರೆಯುತ್ತಿದ್ದ ಹಾಗೆ ಹೊರಗಡೆ ಗುಡುಗು-ಸಿಡಿಲಿನ ಆರ್ಭಟ ಕೇಳಿಸಿತು. ತಕ್ಷಣ ತನ್ನ ಕತ್ತೆಯನ್ನು ಕಾಡಿನಲ್ಲಿ ಕಟ್ಟಿಹಾಕಿದ ನೆನಪಾಗಿ ಕುಂಬಾರ ಗಡಿಬಿಡಿಯಿಂದ ಮಳೆ ಬರುವ ಮುಂಚೆ ಕತ್ತೆಯನ್ನು ಮನೆಗೆ ತರಲು ಓಡಿದ. ಕಾಡಿನಲ್ಲಿ ಕತ್ತೆಯನ್ನು ಕಟ್ಟಿದ ಜಾಗದಲ್ಲಿ ಅದರ ಹಗ್ಗ ಮಾತ್ರ ಇತ್ತು, ಕತ್ತೆ ನಾಪತ್ತೆ. ಅದನ್ನು ಶಪಿಸುತ್ತ, ಅಷ್ಟರಲ್ಲೆ ಮಳೆಯೂ ಶುರು ಆಗಿ, ಮರದ ಬೇರುಗಳಲ್ಲಿ ಕಾಲು ಸಿಲುಕಿ ಬಿದ್ದು, ತುಂಬ ಕೋಪದಲ್ಲಿ ಹುಡುಕಾಡುತ್ತ ಅವನು ಹುಲಿ ಮಲಗಿದ ಗುಡಿಸಲಿನ ಬಳಿ ಬಂದಿದ್ದ. ಕುಡಿತದ ಅಮಲಿನಲ್ಲಿ ಅದು ಕತ್ತೆಯೋ ಹುಲಿಯೋ ಗುರುತಿಸಲಾಗದೆ ಅಲ್ಲಿ ಸಿಕ್ಕಿದ ಪ್ರಾಣಿಯನ್ನು ಹೊಡೆದು ಬಡಿದು ಮನೆಯ ಹೊರಗೆ ಕಟ್ಟಿ ಹಾಕಿ ನಿದ್ದೆ ಹೋಗಿದ್ದ.

ಕುಂಬಾರ ಮನೆಯ ಮುಂದೆ ಕಟ್ಟಿದ ಹುಲಿಯನ್ನು ನೋಡಿ ಮೂರ್ಛೆ ಹೋದ. ಜನರಿಗೆಲ್ಲ ನಿಜ ಸಂಗತಿ ಅರುಹಿ ಹೇಳಿದರೂ ಯಾರು ಅವನನ್ನು ನಂಬಲಿಲ್ಲ ಎಲ್ಲರೂ ಅವನನ್ನು ಹೊಗಳುವವರೆ..ಎಲ್ಲರೂ ಅವನನ್ನು’ ಧೀರ ಕುಂಬಾರ’ ಎನ್ನುವ ಹೆಸರಿನಿಂದ ಕರೆಯಲಾರಂಭಿಸಿದರು.

ಹೀಗೆ ಒಂದು ದಿನ ಕುಂಬಾರನಿರುವ ರಾಜ್ಯದಲ್ಲಿ ಪರ ರಾಜ್ಯದ ರಾಜನೊಬ್ಬ ದಂಡೆತ್ತಿ ಬಂದು ಊರ ಹೊರಗಿನ ಬಯಲಿನಲ್ಲಿ ಬೀಡು ಬಿಟ್ಟ.  ಕುಂಬಾರನಿರುವ ರಾಜ್ಯದ ರಾಜನಿಗೆ ಹೀಗೆ ಯಾರೂ ದಂಡೆತ್ತಿ ಬರುವ ಯೋಚನೆ ಇಲ್ಲದಿದ್ದರಿಂದ ಅವನು ಆರಾಮಾಗಿದ್ದುದ್ದಲ್ಲದೆ, ತನ್ನ ಸೇನೆ ಯನ್ನು ಸೋಮಾರಿ ಸ್ಥಿತಿಗೆ ತಂದಿಟ್ಟಿದ್ದ. ತನ್ನ ಸೇನೆಯ ಮುಂದಾಳತ್ವ ವಹಿಸಿ ದಂಡೆತ್ತಿ ಬಂದ ವೈರಿ ಸೈನ್ಯವನ್ನು  ಓಡಿಸಲು ಒಭ್ಬ ಧೈರ್ಯವಂತ ಸಿಪಾಯಿಯನ್ನು ರಾಜ ಹುಡುಕಲು ತೊಡಗಿದ. ಯಾರದ್ದೋ ಮೂಲಕ, ಹುಲಿಯನ್ನು ಮರಕ್ಕೆ ಕಟ್ಟಿದ ಕುಂಬಾರನ ಬಗ್ಗೆ ರಾಜನಿಗೆ ತಿಳಿಯಿತು. ಅವನಿಗೆ ಬುಲಾವ್ ಹೋಯಿತು. ಕುಂಬಾರ ನಿಗೆ ಏನನ್ನೂ ಕೇಳದೆ, ’ನೀನು ನನ್ನ ಸೇನೆಯ ಮುಂದಾಳತ್ವ ವಹಿಸಿ ಊರಿನ ವೈರಿ ರಾಜನನ್ನು ಹೊಡೆದೋಡಿಸ ಬೇಕು’ ನಿನಗೆ ಒಂದು ಒಳ್ಳೆಯ ಕುದುರೆಯನ್ನು ನೀಡುತ್ತೇನೆ ಎಂದು ರಾಜ ಆಜ್ಝೆಯನ್ನು ವಿಧಿಸಿದ.

ಹೈರಾಣಾದ ಕುಂಬಾರ ಮನೆಗೆ ಬಂದು ನನಗೆ ಕುದುರೆ ಓಡಿಸಲು ಬಿಡು, ಅದರ ಮೇಲೆ ಕೂರಲು ನನಗೆ ಬರುವುದಿಲ್ಲವಲ್ಲ. ಏನಾದರಾಗಲಿ ನಾಳೆ ಬೆಳಿಗ್ಗೆ ನನ್ನನ್ನು ತುಸು ಬೇಗನೆ ಎಬ್ಬಿಸು, ಕುದುರೆ ಸವಾರಿ ಒಂದೆರೆಡು ಗಂಟೆ ಕಲಿತು, ಆ ವೈರಿ ರಾಜನಿದ್ದೆಡೆ, ಸೈನ್ಯವನ್ನು ಕರೆದುಕೊಂಡು ಹೋಗುತ್ತೇನೆ, ಈಗ ನಾನು ಮಲಗುತ್ತೇನೆ’. ಸರಿ ಎಂದಳು ಅವನ ಹೆಂಡತಿ

ಮರುದಿನ ನಸುಕಿಗೆ ಎದ್ದು ಮನೆಯ ಹಿಂಬದಿಗೆ ಕಟ್ಟಿದ ಕುದುರೆಯನ್ನಿಬ್ಬರೂ ನೋಡಿದರು. ಅದೋ ಅಷ್ಟು ಎತ್ತರ.. ಕೊನೆಗೆ ಮನೆಯ ಒಳಗಿದ್ದ ಕುರ್ಚಿಯ ಸಹಾಯದಿಂದ ಕಂಬಾರ ಕಷ್ಟಪಟ್ಟು ಕುದುರೆಯನ್ನೇರಿದ. ತನ್ನ ಹೆಂಡತಿಗೆ ಕುದುರೆ ಜೀನಿನಿಂದ (saddle) ತಾನು ಕೆಳಗೆ ಬೀಳದಂತೆ ತನ್ನ ಕೈ ಕಾಲು ಗಳನ್ನು ಕುದುರೆಯ ಸುತ್ತು ಕಟ್ಟಲು ಅಪ್ಪಣಿಸಿದ. ಯಜಮಾನನ ಹೆಂಡತಿ ಜಾಣೆ, ಯಜಮಾನನ ಕಾಲನ್ನು ರಿಕಾಬಿಗೆ  (stirrup) ಕಟ್ಟುವುದೇ ಅಲ್ಲದೆ  ಅವನ ಎರಡೂ  ಕಾಲನ್ನು ಒಂದೆ ಹಗ್ಗದಿಂದ ಒಟ್ಟಿಗೆ ಕಟ್ಟಿ ಅದನ್ನು ಕುದುರೆಯ ಹೊಟ್ಟೆಯ ಕೆಳಗೆ ಕಟ್ಟಿಟ್ಟಳು. ಈಗ ಕೈ ಗಳ ಸರದಿ. ಒಂದು ಕೈಯನ್ನು ಹಗ್ಗಕ್ಕೆ ಕಟ್ಟಿ ಅದನ್ನು ಕುದುರೆಯ ಕುತ್ತಿಗೆ ಮೇಲಿರುವ ಕೂದಲಿಗೆ ಕಟ್ಟಿದಳು. ಕುದುರೆಗೆ ಅಸಾಧ್ಯ ನೋವಾಗಿ ಅದು ಒಂದೆ ಸಮನೆ ಓಡಲು ಶುರು ಮಾಡಿತು. ಊರು ಕೇರಿ ದಾಟಿ ಊರ ಹೊರಗೆ ಬರುವುದರಲ್ಲಿ ಶರವೇಗದಿಂದ ಓಡಲು ಶುರುಮಾಡಿತು. ಕಾಲನ್ನು ಗಟ್ಟಿಯಾಗಿ ಕುದುರೆಯ ಸುತ್ತ ಕಟ್ಟಿದ್ದರಿಂದ ಕಂಬಾರ ಕೆಳಗೆ ಬೀಳಲಿಲ್ಲ. ಒಂದು ಕೈ ಬಿಡುವು (free) ಆಗಿದ್ದರಿಂದ ಹಿಂದಕ್ಕೆ ಸಾಗುತ್ತಿರುವ ಮರದ ಗೆಲ್ಲನ್ನು ಹಿಡಿಯುವ ಪ್ರಯತ್ನ ಕುಂಬಾರ ಮಾಡುತ್ತಲಿದ್ದ. ಕೊನೆಗೆ ಒಂದು ಮರದ ಕೊಂಬು ಅವನ ಕೈಗೆ ಸಿಕ್ಕಿತ್ತು. ಆದರೆ ಕುದುರೆಯ ಓಟದ ರಭಸಕ್ಕೆ ಆ ಮರ ಬುಡ ಸಮೇತ ಕಿತ್ತುಕೊಂಡು ಬಂದು ಅವನ ಕೈಯಿಂದ ನೇತಾಡಲು ಶುರು ಮಾಡಿತು. ದೂರದಿಂದ ಇದನ್ನೆಲ್ಲ ವೀಕ್ಷಿಸುತ್ತಿದ್ದ ವೈರಿ ರಾಜನಿಗೆ, ಒಂದು ಕೈಯಲ್ಲಿ ಇಡಿ ಮರವನ್ನು ಹಿಡಿದುಕೊಂಡ ಒಬ್ಬನೆ  ಕಾದಾಡಲು ಬರುತ್ತಿರುವ ಸೈನಿಕನನನ್ನು ನೋಡಿ ಭಯವಾಯಿತು. ಕುದುರೆ ಓಡಿ ಓಡಿ ಸುಸ್ತಾಗಿ ವೈರಿ ರಾಜ ಬೀಡು ಬಿಟ್ಟಿರುವ ಮೈದಾನಕ್ಕೆ ಹೋಗಿ ಕೊನೆಗೊಮ್ಮೆ ಸುಮ್ಮನೆ ನಿಂತಿತು.

ಕುಂಬಾರ ಹರ ಸಾಹಸ ಮಾಡಿ ತನ್ನ ಕೈ ಕಾಲುಗಳನ್ನು ಹಗ್ಗದಿಂದ ಬಿಡಿಸಿಕೊಂಡ. ಮೈದಾನದಲ್ಲಿ ಕಟ್ಟಿರುವ ಡೇರೆಯಲ್ಲಿ ಯಾರೂ ಕಾಣಿಸಲಿಲ್ಲ. ನಿಧಾನಕ್ಕೆ ಒಂದು ಡೇರೆ ಒಳಗಡೆ ಹೋಗಿ ನೋಡಿದ. ಅಲ್ಲಿ ಪಲ್ಲಂಗದ ಮೇಲೆ ಒಂದು ಪತ್ರವಿದ್ದಿತು. ಅದನ್ನು ಕೈ ಯಲ್ಲಿ ತೆಗೆದುಕೊಂಡು ಕಂಬಾರ ನಿಧಾನಕ್ಕೆ ನಡೆದು ಸುಸ್ತಾಗಿ ತನ್ನ ಮನೆ ಸೇರಿದ."ಪ್ರೀತಿಯ ಹೆಂಡತಿಯೇ, ಇನ್ನೆಂದೂ ನಾನು ಕುದುರೆಯ ಮೇಲೆರುವವನಲ್ಲ. ಪತ್ರವನ್ನು ತನ್ನ ಹೆಂಡತಿಯ ಕೈಗೆ ರವಾನಿಸಿ ಅದನ್ನು ರಾಜನಿಗೆ ಕೊಡಲು ಹೇಳಿ ತಾನು ಮಲಗಿ ನಿದ್ದೆ ಹೋದ.

ಓಡೋಡುತ್ತ ಆ ಪತ್ರವನ್ನು ಕುಂಬಾರನ ಹೆಂಡತಿ ರಾಜನಿಗೆ ಕೊಟ್ಟಳು

ಪತ್ರದ ತುಂಬ ಸೈನಿಕನ ಧೈರ್ಯ ಬಗ್ಗೆ ಬರೆದಿತ್ತು. ರಾಜ, ಕುಂಬಾರನೆಲ್ಲಿ ಅಂತ ಕೇಳಿದ, ಕಂಬಾರನ ಹೆಂಡತಿ, ’ದೊರೆಯೆ, ನನ್ನ ಪತಿ ಹೋರಾಡಿ ಸುಸ್ತಾಗಿ ಮಲಗಿದ್ದಾನೆ ಎಂದು ನಮ್ರತೆಯಿಂದ ಉಸುರಿದಳು.

"ಇವತ್ತು ಅವನು ವಿಶ್ರಮಿಸಲಿ, ನಾಳೆ ಅವನನ್ನು ನನ್ನನ್ನು ಬಂದು ಕಾಣಲು ತಿಳಿಸು" ಎಂದನು ರಾಜ.

ಮರುದಿನ  ಕುಂಬಾರ  ರಾಜನ ಬಳಿಗೆ ಹೋದ. ಕುದುರೆಯನ್ನು ಮನೆಯ ಹಿಂಬಾಗದಲ್ಲೇ ಬಿಟ್ಟು ನಡೆದುಕೊಂಡೇ ಅರಮನೆ ತಲುಪಿದ. ’ಆಹಾ ಏನು ನಯ ವಿನಯ ನಮ್ಮಕುಂಬಾರನಿಗೆ, ಕುದುರೆ ಹೊಂದಿದ್ದರೂ, ನೋಡು ನಡೆದು ಕೊಂಡೆ ಅರಮನೆಗೆ ಬಂದಿದ್ದಾನೆ’ ಎಂದು ಅಲ್ಲಿ ಸೇರಿದ ಊರವರು ತಮ್ಮ ತಮ್ಮಲ್ಲೆ ಹೇಳಿಕೊಂಡರು. ’ಅವನು ನಿಜಕ್ಕೂ ಶೂರ, ಧೈರ್ಯವಂತ.

ರಾಜನು   ಕುಂಬಾರನನ್ನು  ಧನ-ಕನಕಗಳಿಂದ ಸತ್ಕರಿಸಿದರಿಂದ, ಮುಂದೆ ಯಾವತ್ತು ಕುಂಬಾರನಿಗೆ ಕಷ್ಟಪಟ್ಟು ದುಡಿಯುವ   ಅಥವ ಕುದುರೆ ಏರುವ ಪ್ರಸಂಗ ಬರಲಿಲ್ಲ.

Marguerite Siek ಬರೆದ ಆಂಗ್ಲ ಕತೆ ’the Brave Potter' ನ ಕನ್ನಡ ಅನುವಾದ

May 21, 2012

ಹಲಸಿನ ಎಲೆ ಕೊಟ್ಟೆ ಮಾಡುವ ವಿಧಾನ step -by-step


ಒಂದೆ ಗಾತ್ರದ ನಾಲ್ಕು ಎಲೆಗಳನ್ನು ಹೀಗೆ ಹಿಡಿದು ಮಧ್ಯದಲ್ಲಿ ಕಡ್ಡಿಯಿಂದ ಪೋಣಿಸಿ

step -2

step-3

step-3 (part-2)

ಹಲಸಿನ ಎಲೆ ಕೊಟ್ಟೆ ಮಾಡಲು ಮಾಲವಿಕಳಿಗೆ hands-on ತರಬೇತಿ

Finished product




ಇವಿಷ್ಟೂ ಮಾಲವಿಕ ಮಾಡಿದ್ದು. ಹೆಮ್ಮೆ ಎನಿಸಿ ಅಮ್ಮ ತಮ್ಮಂದಿರಿಗೆಲ್ಲ ಫೋನ್ ಮಾಡಿದ್ದೆ ಮಾಡಿದ್ದು :-)



Soft Soft ಹಲಸಿನ ಎಲೆ ಕಡುಬು ರೆಡಿ ಟು ಈಟ್. ಇದರ ಜತೆ ಶುಂಠಿ ಚಟ್ನಿ ಮತ್ತು ಫ್ರೆಶ್ ಬೆಣ್ಣೆ ಅಥವಾ ಶ್ರೀಕಾಂತ ತರಹ ತೆಂಗಿನ ಎಣ್ಣೆ ಹಾಕ್ಕೊಂಡು ತಿನ್ನಬಹುದು. ಉದ್ದಿನ ಬೇಳೆ ಚೆನ್ನಾಗಿದ್ದರೆ ನಾನು ಒಂದು ಕಪ್ ಉದ್ದಿನ ಬೇಳೆಗೆ ಮೂರು ಕಪ್ ಬೆಳ್ತಿಗೆ ಅಕ್ಕಿ ಹಾಕುತ್ತೇನೆ.
ಇತ್ತೀಚಿಗೆ ತೀರ್ಥಹಳ್ಳಿಯಿಂದ ಬರುವಾಗಲೆಲ್ಲ ಹಲಸಿನ ಎಲೆ /ಕಾಯಿ ಗಳನ್ನು ಹೊತ್ತು ತರೋದು ಜಾಸ್ತಿ ಆಗಿದೆ.
ಚಿತ್ರ ನೋಡಿ ಎಂಜಾಯಿಸಿ...
:-)

May 1, 2012

ಕತೆ ಅಂದುಕೊಂಡು ಗೀಚಿದ್ದು

ಶ್ಯಾಮರಾಯರು ಬೇಗ ಬೇಗ ನೆ ಮನೆಗೆ ಹೆಜ್ಜೆ ಹಾಕಿದರು. ಇವತ್ತು ಕಛೇರಿಯಲ್ಲಿ ಅವರ ಕೊನೆಯ ದಿನ. ಅಲ್ಲಿ ಈಗಾಗಲೇ ಬೀಳ್ಕೊಡುಗೆ ಸಮಾರಂಭ ಮುಗಿಸಿ ಹೊರಟಿದ್ದರು. ದಾರಿಯಲ್ಲಿ ಬರುತ್ತ ತಮ್ಮ ಪತ್ನಿಗೋಸ್ಕರ ಎರಡು ಮಾರು ಮಲ್ಲಿಗೆ ಹೂ ಮತ್ತು ಅವಳ ಇಷ್ಟದ ಜಿಲೇಬಿಗಳನ್ನು ಕಟ್ಟಿಸಿಕೊಂಡಿದ್ದರು. ಪತ್ನಿಗೆ ಇದರಿಂದ ಆಗುವ ಸೋಜಿಗವನ್ನು ಊಹಿಸಿಕೊಂಡು ರಾಯರ ನಡುಗೆ ಇನ್ನಷ್ಟು ಚುರುಕಾಯಿತು.
ಮನೆ ತಲುಪಿದಾಗ ಮನೆಗೆ ಬೀಗ ಹಾಕಿತ್ತು. ಪಕ್ಕದ ಮನೆಯ ಹುಡುಗಿ, ’ಆಂಟಿ ದೇವಸ್ಥಾನಕ್ಕೆ ಹೋಗಿದ್ದಾರೆ. ಬರುವುದು ತಡವಾಗುತ್ತಂತೆ’ ಅಂತ ಅವರಿಗೆ ಮನೆಯ ಬೀಗದ ಕೈ ಯನ್ನು ಕೊಟ್ಟಳು. ರಾಯರಿಗೆ ತುಂಬ ಬೇಸರ ಆಯ್ತು.
ರಾತ್ರಿ ಸಾಧಾರಣ 8.30 ಸುಮಾರಿಗೆ ಸಾವಿತ್ರಮ್ಮ ಮನೆಗೆ ಮರಳಿದರು. ರಾಯರು ಆಕ್ಷೇಪ ವೆತ್ತಿದರು. ’ಇವತ್ತು ನಿನಗೋಸ್ಕರ ಬೇಗ ಬಂದೆ. ನಿನಗೊತ್ತಿತ್ತಲ್ಲವ ಇವತ್ತು ನನ್ನ ಸರ್ವಿಸ್ ನ ಕೊನೆ ದಿನ ಅಂತ..’
ಹೌದು..ನೀವು ದಿನ ನಿತ್ಯದ ಹಾಗೆ ಕಛೇರಿ ಕೆಲಸ ಮುಗಿಸಿ ಕ್ಲಬ್ ಗೆ ಹೋಗುತ್ತೀರಿ ಅಂದುಕೊಂಡೆ, ದೇವಸ್ಥಾನದಲ್ಲಿ ಇವತ್ತು ಚೆಂದದ ಹರಿಕತೆ ಹಮ್ಮಿಕೊಂಡಿದ್ದರು, ನಾನು ಕಮಲಮ್ಮ ಈ ಕಾರ್ಯಕ್ರಮಕ್ಕೆ ಹೋಗುವುದನ್ನು ಮೊದಲೇ ನಕ್ಕಿ ಮಾಡಿಕೊಂಡಿದ್ದೆವು. "
ಅಷ್ಟರೊಳಗೆ ಮಲ್ಲಿಗೆ ಹೂ ಬಾಡಿತ್ತು, ಜಲೇಬಿಗೆ ಇರುವೆಗಳು ಮುತ್ತಿಕೊಂಡಿದ್ದವು...
ಮರುದಿನ ಸಾವಿತ್ರಮ್ಮನಿಗೆ ಏನೋ ಇರುಸುಮುರುಸು. ದಿನ ರಾಯರು ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ಟರೆ ಬರುತ್ತಿದ್ದದ್ದೆ ರಾತ್ರಿ ಒಂಬತ್ತಕ್ಕೆ. ಒಂದು ದಿನ ಕೂಡ ಬೇಗ ಬಂದಿದ್ದಿಲ್ಲ. ಇದ್ದ ಒಬ್ಬನೆ ಮಗ ರಾಜೀವನ ಬಾಲ್ಯ- ಬೆಳವಣಿಗೆ, ಸ್ಕೂಲು, ಕಾಲೇಜು, ಕಾಯಿಲೆ-ಕಸಾಲೆ ಗಳೆದ್ದಕ್ಕೂ ಸಾವಿತ್ರಮ್ಮನೆ ಓಡಾಡಿದ್ದು. ಅವನೂ ಇಂಜಿನಿಯರಿಂಗ್ ಓದಿ ವಿದೇಶಕ್ಕೆ ಹಾರಿದ. ಅಲ್ಲಿಯ ಒಬ್ಬಳನ್ನೆ ಮದುವೆ ಕೂಡ ಮಾಡಿಕೊಂಡ. ಇನ್ನೂ ಅವರ ಸೊಸೆಯನ್ನು ಕಂಡಿಲ್ಲ ಸಾವಿತ್ರಮ್ಮ. ಒಂದು ಹಂತಕ್ಕೆ ಮಗನ ಜವಾಬ್ದಾರಿ ಮುಗಿದ ಮೇಲೆ ಸಾವಿತ್ರಮ್ಮ ಟಿವಿ ನೋಡುವುದು, ಅಕ್ಕ ಪಕ್ಕದವರ ಜತೆ ಹರಟೆ ಹೊಡೆಯುವುದು, ಸಂಜೆ ಅವರ ಜತೆ ಪೇಟೆ, ವಾಕ್, ದೇವಸ್ಥಾನ ಅಷ್ಟಲ್ಲದೆ ವರ್ಷಕ್ಕೊಂದು ಸಲ ಪಕ್ಕದ ತ್ರೀವೇಣಮ್ಮನ ಜತೆ ಕಂಡಕ್ಟಡ್ ಟೂರ್ ಗೆ ಒಂದು ವಾರ-ಹತ್ತು ದಿನಗಳ ಮಟ್ಟಿಗೆ ಹೋಗಿ ಬರುವುದು ಇತ್ತೀಚಿನ ಹದಿನೈದು ವರ್ಷಗಳಲ್ಲಿ  ರೂಢಿ ಮಾಡಿಕೊಂಡು ಬಿಟ್ಟಿದ್ದರು. ಈಗ ರಾಯರು ಮನೆಯಲ್ಲೇ ಇರುವುದರಿಂದ ಅವರಿಗೆ ಕಿರಿಕಿರಿ ಯೆನಿಸುತ್ತಿತ್ತು. ಮೊದಲಾದರೆ ಸ್ನೇಹಿತೆಯರು ಹುಡುಕಿಕೊಂಡು ಬರುವುದು, ಇವರು ಮನೆ ಕೆಲಸ ಮಾಡುತ್ತಿದ್ದ ಹಾಗೆ ಅವರೆಲ್ಲ ಮಾತನಾಡಿಸಿ, ಕೆಲವೊಮ್ಮೆ ಇವರ ಜತೆ ಊಟ ಮಾಡಿ ಹೋಗುವುದೂ ಇತ್ತು.
ರಾಯರ ಜತೆ ಏನು ಮಾತನಾಡಬೇಕೆಂದು ತಿಳಿಯುತ್ತಿರಲಿಲ್ಲ. ಉಳಿದ ದಿನ ಬಿಸಿ ನೀರು ಕಾದಿದೆ, ಕಾಫಿಗೆ ಬರುತ್ತೀರಾ, ಊಟ ಬಡಿಸಲೆ, ಸಾರು ಬಡಿಸಲೆ, ಹಾಸಿಗೆ ಹಾಕಿದೆ ಇವಷ್ಟಕ್ಕೆ ಸೀಮಿತವಾಗುತ್ತಿತ್ತು ಮಾತು. ಈಗ ದಿನ ಬೆಳಗಾದರೆ ಒಬ್ಬರಿಗೊಬ್ಬರು ಏನು ಮಾತನಾಡುವುದು ಎಂದು ತಡಕಾಡುವಂತಾಗಿದೆ ಸಾವಿತ್ರಮ್ಮನಿಗೂ ರಾಯರಿಗೂ. 
ಈ ದಿನ ಸಂಜೆ ಹೆಂಡತಿ ಮತ್ತು ತಾನು ವಾಕ್ ಹೋಗಬೇಕು ಅಂದುಕೊಂಡಿದ್ದರು ರಾಯರು ಆದರೆ ಸಾವಿತ್ರಮ್ಮ ಆಗಲೇ ಸ್ನೇಹಿತೆಯರ ಜತೆಗೆ ಬೇರೆಲ್ಲಿಗೋ ಹೋಗುವ ತಯಾರಿ ನಡೆಸಿದ್ದರು. ರಾಯರಿಗೆ ಸಿಟ್ಟು ಬಂತು.ಹೌದು ಇಷ್ಟು ದಿನ ನಿನಗೋಸ್ಕರ ಸಮಯ ಮೀಸಲಿಡಲಾಗಿಲ್ಲ ಆದರೆ ಈಗಲಾದರೂ ನಾವು ನಮ್ಮನ್ನು ಬದಲಾಯಿಸಿಕೊಳ್ಳಬಹುದಲ್ಲವಾ?’
ಸಾವಿತ್ರಮ್ಮ ’ಯಾಕೆ ಇವತ್ತು ಕ್ಲಬ್ ಕಡೆ ಹೋಗಲ್ಲವಾ?
ಇನ್ನು ಯಾವ ಕ್ಲಬ್? ಅದು ಕಛೇರಿವತಿಯಿಂದ ಮೆಂಬರ್ ಶಿಫ್..ಈಗ ನಿವೃತ್ತಿ ಪಡೆದುಕೊಂಡ ಮೇಲೆ ನಾನಲ್ಲಿ ಸೇರುವುದು ನಾನೆ ಕೈಯಿಂದ ದುಡ್ಡು ಹಾಕಬೇಕು. ಸಿಕ್ಕಾ ಪಟ್ಟೆ  ದುಬಾರಿ.
"ಕ್ಷಮಿಸಿ. ಇಷ್ಟು ವರ್ಷ ನಾನೂ ಎಷ್ಟೊ ಸಲ ನಿಮಗೆ ಈ ಮಾತನ್ನು ಹೇಳಿದ್ದೇನೆ. ಕಛೇರಿ ಬಿಡಿ, ಒಂದು ದಿನವಾದರೂ ಕ್ಲಬ್ ಹೋಗೋದು ಬಿಟ್ಟು ನನಗೋಸ್ಕರ ಮನೆಗೆ ಬಂದಿದ್ದಿದೇಯೇ?? ಮದುವೆಯಾಗಿ ಈ ಮನೆಗೆ ಬಂದಾಗ ಸರಿ, ಅತ್ತೆ, ಮಾವ, ನಾದಿನಿಯರು ಇದ್ದರು. ಹೇಗೋ ನಡೆದು ಹೋಯ್ತು. ಆಮೇಲೆ ನಾನೆ ಒಂಟಿಯಾಗಿ ಈ ಮನೆಯಲ್ಲಿ ಇರುತ್ತಿರಲಿಲ್ಲವಾ? ರಾಜೀವನಿಗೆ ಆ ದಿನ ಕೆಟ್ಟ ಜ್ವರ ಬಂದು ಆಸ್ಪತ್ರೆಗೆ ನೆರೆಯವರ ಸಹಾಯದಿಂದ ಕರೆದುಕೊಂಡೆ ಹೋದೆ, ಮರುದಿನ ರಜೆ ಹಾಕಿ ಇದ್ದಿದ್ದರೆ ನನಗೆ ಸ್ವಲ್ಪ ಸಹಾಯ ಆಗುತ್ತಿರಲಿಲ್ಲವಾ??ನನಗೀಗ ಒಂಟಿಯಾಗಿರುವುದು ರೂಢಿಯಾಗಿದೆ. ದಯವಿಟ್ಟು ನೀವು ಬೇರೆ ಯಾವುದಾದರೂ ಕ್ಲಬ್ ಅಥವ ಪಾಸ್ ಟೈಮ್ ಹುಡುಕಿ. ದುಡ್ಡಿಗೇನೂ ಕೊರತೆಯಿಲ್ಲ. ನಿಮ್ಮ ಪೆನ್ ಶನ್, ಮಗನೂ ತಿಂಗಳು ತಿಂಗಳು ಬೇಡವೆಂದರೂ ದುಡ್ಡು ಕಳುಹಿಸುತ್ತಾನೆ.  ಅಂದುಕೊಂಡು ಸ್ನೇಹಿತೆಯರ ಜತೆ ಹೊರಟೆ ಬಿಟ್ಟರು
ರಾಯರು ಅವಾಕ್ಕಾದರು............
(ಇವತ್ತು ಗಾರ್ಡನ್ ನಲ್ಲಿ ವಾಕ್ ಮಾಡ್ತಾ ಕೇಳಿಸಿಕೊಂಡ  ಬಿಡಿ ಬಿಡಿ ಸಂಭಾಷಣೆಯ ಮೇಲೆ ಆಧಾರಿತ...ನಮ್ಮ ರಾಯರು ಮುಂಬೈಯಿಂದ ಈಗ ಬರುತ್ತಾರೆ...ಅವರಿಗೆ ಕಾಯುತ್ತ....ಇದಷ್ಟು ಬರೆದೆ...ಒಂಚೂರು ಇಂಗ್ಲಿಷ್ ಬಳಸಿಲ್ಲ)
:-) Happy May Day...ಎಲ್ಲರಿಗೂ