Showing posts with label ಸಣ್ಣ ಕತೆ. Show all posts
Showing posts with label ಸಣ್ಣ ಕತೆ. Show all posts

April 22, 2016

ದೇವರ ಆಟ

ಆಫಿಸ್ ನಲ್ಲಿದ್ದರೂ ಜಮುನಾಳ ಮನಸ್ಸೆಲ್ಲಾ ಇನ್ನೆರಡು ದಿನದಲಿ ಕಟ್ಟಬೇಕಾದ ಬಡ್ಡಿ  ಕಂತಿನ ಮೇಲೆ ನೆಟ್ಟಿತ್ತು. ಏನು ಮಾಡಿದರೂ ೧೦,೦೦೦ ರೂಪಾಯಿಗಳು ಹೊಂದಿಸಲು ಶಕ್ಯವಿರಲಿಲ್ಲ. ಅಂತೂ ಇಂತೂ ಆಫಿಸ್ ಬಿಡುವ ವೇಳೆಯಾಯ್ತು. ಸ್ನೇಹಿತೆ ವಸುಧಾ 'ಯಾಕೇ ಮೋರೆ ಬಾಡಿದೆ ಹುಷಾರಿಲ್ಲ್ವಾ ' ಅಂತ ಕೇಳಿದಳು. ಇಲ್ವೆ ಹುಷಾರಾಗಿದ್ದೇನಿ. ಇನ್ನೆರಡು ದಿನದಲ್ಲಿ ಕಟ್ಟಬೇಕಾದ ಮೊತ್ತದ ಬಗ್ಗೆ ವಿಚಾರ. 
ಆ ದಿನ ಏನೋ ಅರ್ಜೆಂಟ್ ಇತ್ತು ಆ ವ್ಯಾಪಾರಿಯ್ಂದ ದುಡ್ಡು ಕಡ ತೆಗೆದುಕೊಂಡೆ. ಈಗ ಅರ್ಧ ದುಡ್ಡು ಕಟ್ಟ್ತೇನೆ ಅಂದ್ರೂ ಒಪ್ಪಲ್ಲಾ. ಎಲ್ಲ ದುಡ್ಡು ನಾಡಿದ್ದೇ ಬೇಕಂತೆ. ಏನು ಮಾಡಲಿ? ಮನೆಯಲ್ಲಿ ಪುಟ್ಟ ಮಕ್ಕಳು ಮಾತ್ರ ಇರೋದು. ಅವರಿಗೆ ಏನಾದರೂ ತೊಂದರೆ ಮಾಡ್ತಾರಾ ಅಂತ ಅಷ್ಟೆ ಟೆನ್ಶನ್. ಸಂಬಳ ಕೈಗೆ ಬರಲು ಇನೂ ಹದಿನೈದು ದಿನ. ಅಷ್ಟೂ ಕಾಯಕ್ಕಾಗಲ್ವಂತೆ. ಅವರನ್ನೂ ದೂಷಿಸುವ ಹಾಗಿಲ್ಲ ಬಿಡು. ನನ್ನ ಕಷ್ಟಕ್ಕೆ ತುರ್ತಾಗಿ ದುಡ್ಡು ಕೊಟ್ಟಿದ್ದಾರೆ. ಈಗ ನಾನೂ ಅದನ್ನೂ ಕಟ್ಟಬೇಕಾದುದು ನನ್ನ ಧರ್ಮ. ಬಂಗಾರ ಕೂಡ ಅಡವಿಟ್ಟದ್ದು ಆ ದುಡ್ಡು ಖಾಲಿಯಾಗಿದೆ. 
ಜಮುನಾಳ ಮಗನಿಗೆ ಇತ್ತೀಚಿಗೆ ಆಕ್ಸಿಡೆಂಟ್ ಆಗಿ ತಲೆಗೆ ಏಟು ಬಿದ್ದಿತ್ತು. ಕೂಡಲೆ ಶಸ್ತ್ರ ಚಿಕಿತ್ಸೆ ನಡೆಸಿದ್ದಲ್ಲಿ ಮಾತ್ರ ಜೀವ ಉಳಿಯುವ ಆಸೆಯಿತ್ತು. ಲಕ್ಷಗಟ್ಟಲೆ ಖರ್ಚು ಬಂದಿತ್ತು.  ಹಾಗಾಗಿ ಆಕೆ ಮಾರ್ವಾಡಿಯಿಂದ ದುಡ್ಡನ್ನು ದುಪ್ಪಟ್ಟು ಬಡ್ಡಿಗೆ ತೆಗೆದುಕೊಂಡಿದ್ದಳು. ಅವಳು ಕೆಲಸ ಮಾಡೋದು ಪ್ರೈವೆಟ್ ಫರಂ ನಲ್ಲಿ. ಸಂಬಳ ಬಿಟ್ಟರೆ ಅಲ್ಪ ಸ್ವಲ್ಪ ಮೆಡಿಕಲ್ ಫೆಸಿಲಿಟಿ ಗೆ ದುಡ್ಡು ಕೊಡ್ತಿದ್ರೆ ವಿನಾ: ದೊಡ್ಡ ಮೊತ್ತದ ಸಾಲ ವಗೈರೆ ಕೊಡುತ್ತಿರಲಿಲ್ಲ. 
ಅಲ್ಪ ಸ್ವಲ್ಪ ಉಳಿತಾಯ ಮಾಡಿದ್ದು ಮಕ್ಕಳ ಶಾಲೆಗೇ ಕಟ್ಟ ಬೇಕಾಯ್ತು. ಹಲವಾರು ಜನ ಇದರ ಬಗ್ಗೆ ಚಕಾರ ವೆತ್ತಿದ್ದು ಅವಳಿಗೆ ಗೊತ್ತು. ಅದು ಪ್ರತಿಷ್ಠಿತ ಶಾಲೆ. ಮಾತ್ರವಲ್ಲ ಮಕ್ಕಳಿಬ್ಬರೂ ಬುದ್ದಿವಂತರು. ಅಷ್ಟಲ್ಲದೇ ಈಗ ಆ ಶಾಲೆಗೆ ಭರ್ತಿ  ಮಾಡಿದರೆ ಮಕ್ಕಳ ಹನ್ನೆರಡನೇ ಕ್ಲಾಸ್ ತನಕ ಚಿಂತೆಯಿಲ್ಲದ ಶಿಕ್ಷಣ . ಅದೆಲ್ಲಾ ಆಲೋಚನೆ ಮಾಡಿಯೇ ಮಕ್ಕಳನ್ನು ಆ ಶಾಲೆಗೆ ಹಾಕಿದ್ದಳು. ಇನ್ನುಳಿದ ಉಳಿತಾಯಕ್ಕೆ ಸಧ್ಯಕ್ಕೆ ಕೈ ಹಾಕಿದರೆ ಬಡ್ಡಿ ಹಣ ಪೋಲಾಗುತ್ತಿತ್ತು. ಸಧ್ಯದ ಆಲೋಚನೆ ೧೦,೦೦೦ ರೂಪಾಯಿಗಳನ್ನು ಹೊಂದಿಸುವದು ಆಗಿತ್ತು. 
ಅವಳ ಸ್ನೇಹಿತೆ ಅವಳ ಮುಖ ನೋಡ ಲಾಗದೆ ಅವಳ ಕೈಲಿದ್ದ ಬಂಗಾರದ ಬಳೆ ಕಳಚಿ ಕೊಟ್ಟು. ಇಗೋ ಇದನ್ನು ಮಾರು ಅಥವಾ ಅಡವಿಡು. ಆ ಮೇಲೆ ಯಾವುಗಲಾದ್ರು ದುಡ್ಡು ಕೊಡು. ಮತ್ತು ನೋಡು ನೀನು ನಂಬಿರುವ ದೇವರು ನಿನ್ನನ್ನು ಯಾವತ್ತೂ ಕೈ ಬಿಡುವುದಿಲ್ಲ ಅಂತ ನಕ್ಕಳು. ದೇವರನ್ನು ನಂಬದ ವಸುಧಾ ಚೇಷ್ಟೆ ಮಾಡುತ್ತಾಳೇನೋ ಅಂದುಕೊಂಡಳು ಜಮುನಾ. ಆದರೆ ಅಲ್ಲಿ ತಮಾಷೆ ಇರಲಿಲ್ಲ. ಅವಳ ಕೈ ಬಳೆ ಯನ್ನು ಅವಳಿಗೆ ವಾಪಸ್ಸು ಮಾಡುತ್ತಾ , 'ಅಯ್ಯೋ ಇಟ್ಟುಕೋ . ನಿನ್ನಿಂದಲೇ ನನಗೆ ಧೈರ್ಯ. ಅಷ್ಟಿದ್ದರೆ ಬ್ಯಾಂಕ್ ನಲ್ಲಿರೋ ಎಫ್ ಡಿ ಮುರಿದ್ರಾಯ್ತು ಬಿಡು. 
ಬಸ್ ಹತ್ತಿ  ಬಸವಳಿದು ಟ್ರಾವಲ್ ಮಾಡಿ ಮನೆಗೆ ಬರುವಷ್ಟರಲ್ಲಿ ಜಮುನಾ ಸುಸ್ತಾದಳು. ಮಧ್ಯಾಹ್ನ ಯಾವತ್ತೋ ತಿಂದ ಮೊಸರನ್ನ ಕರಗಿ ಹೊಟ್ಟೆ ತಾಳ ಹಾಕಲಾರಂಭಿಸಿತು. ಮೂರು ಮನೆಗಳಿದ್ದ ಮಹಡಿ ಮನೆ. ಗಂಡ ಬದುಕಿದ್ದಾಗ ಮನೆಯೊಂದು ಕಟ್ಟಿಸ್ದ್ದು ಆಯ್ತು. ಅದರ ಲೋನ್ ಎಲ್ಲ ತೀರಿಸುವಷ್ಟರಲ್ಲಿ ಮಗನ ಅಪಘಾತ. ಮನೆ ಅವಳ ಹೆಸರಿಗಿದ್ದಿದ್ದು ಅವಳಿಗೆ ಅನುಕೂಲ ಆಯ್ತು.  ಕೆಳಗಿನ ಮನೆಗಳೆರಡನ್ನು ಬಾಡಿಗೆಗೆ ಕೊಟ್ಟಿದ್ದಳು.  ತುಂಬಾ ಪುಟ್ಟ ಮನೆಗಳವು, ಬೆಂಕಿ ಪೊಟ್ಟಣದಂತೆ. . ಆದರೆ ಸ್ವಂತದ್ದು ಎನ್ನುವ ಸಮಾಧಾನ. 
ಮಹಡಿ ಏರಿ ತನ್ನ ಮನೆ ತಲುಪಿದಾಗ ಅಲ್ಲಿಬ್ಬರು ಹೊರಗಡೆ ಕೂತಿದ್ದರು. ಮೊದಲಿಗೆ ಮನೆಯ ಬೀಗದ ಕಡೆ ಅವಳ ಕಣ್ಣು ಹೋಯಿತು . ಬೀಗ ಹಾಕಿಯೇ ಇತ್ತು. ಮಕ್ಕಳು ಬರುವುದು ಇನ್ನೂ ಒಂದು ಗಂಟೆ ತಡವಿತ್ತು. ನಿಟ್ಟುಸಿರು ಬಿಟ್ಟಳು. ಆತಂಕದಿಂದ ಬಂದವರತ್ತ ಪ್ರಶ್ನಾರ್ಥಕ ನೋಟ ಬೀರಿದಳು. 
'ಹೆದರಬೇಡಿ ಮ್ಯಾಡಂ. ನಾವು  ಹೆಸರಾಂತ ಜಾಹಿರಾತು ಕಂಪೆನಿಯಿಂದ ಬಂದಿದ್ದೇವೆ. ನಿನ್ನೆ ಕಾರನಲ್ಲಿ ಈ ಕಡೆಯಿಂದ ಹೋಗುವಾಗ ಟ್ರಾಫಿಕ್ ಜ್ಯಾಮ್ ನಲ್ಲಿಸಿಕ್ಕಾಕಿಕೊಂಡು,  ಹೀಗೇ ಕಣ್ಣಾಡಿಸುವಾಗ ನಿಮ್ಮ ಮನೆಯ ತಾರಸಿಯ ಮೇಲೆ ಕಣ್ಣು ಹೋಯಿತು. ನಮ್ಮ ಜಾಹಿರಾತಿನ ಹೋರ್ಡಿಂಗ್ ಹಾಕಲು ಪ್ರಶಸ್ತ ಜಾಗ. ಇಲ್ಲಿ ಒಂದು ಗ್ರಿಲ್ ರೈಲಿಂಗ್/ scaffolding ನಿರ್ಮಿಸಲು , ನಮ್ಮ ಹೋರ್ಡಿಂಗ್ ಹಾಕಲು ಅನುಮತಿ ನೀಡ ಬಹುದಾ? ಇದರಿಂದ ನಿಮಗೆ ತಿಂಗಳಿಗೆ  ೨೫,೦೦೦ ರೂ ಬಾಡಿಗೆ ಕೊಡುತ್ತೇವೆ ನಾವು. ಈ ಮಹಡಿ ನಿಮ್ಮ ಸ್ವಂತದ್ದು ಅಂತ ನಿಮ್ಮ ಬಾಡಿಗೆದಾರರಿಂದ ತಿಳಿಯಿತು. ಹಾಗಾಗಿ ನಿಮಗೋಸ್ಕರ ವೈಟ್ ಮಾಡ್ತಾ ಇದ್ವಿ. ನಾಳೆ ಇದೇ ಹೊತ್ತಿಗೆ ಬರುತ್ತೇವೆ. ನೀವು ಆಲೋಚನೆ ಮಾಡಿ ನಮ್ಮ ಕಾಂಟ್ರಾಕ್ಟ್ ಒಂದಕ್ಕೆ  ಸಹಿ ಹಾಕ ಬೇಕು. 
" ನಿಮ್ಮ ಹೋರ್ಡಿಂಗ್ ಹಾಕಲು ನನ್ನದೇನೂ ಅಡ್ಡಿಯಿಲ್ಲ. ಅದು ಸೇಫ್ ಆಗಿರಬೇಕು. ಬೆಂಗಳೂರಿನ ಗಾಳಿಗೆ ಹೊಯ್ದಾಡದಂತೆ ಅದನ್ನು ನಿರ್ಮಿಸಬೇಕು. ಅದಲ್ಲದೇ ಆಕಸ್ಮಾತ್ ಅನಾಹುತಗಳೇನಾದರೂ ಆದರೆ ಅದರ ಜವಾಬ್ದಾರಿ ನೀವು ತೆಗೆದುಕೊಳ್ಳಬೇಕು ಅಂದಳು. ಅವರು  ಎಲ್ಲದಕ್ಕೂ ಸೈ ಅಂತ ಹೇಳಿ ಮರುದಿನ ದಿನ ಮರಳುವುದಾಗಿ  ಹೇಳಿದರು. 
"ಏನಾದರೂ ಎಡ್ವಾನ್ಸ್  ಕೊಡಬಹುದಾ? ಒಂದು ಹತ್ತು ಸಾವಿರ ನಾಳೆ ಸಹಿ ಹಾಕಿದ ಮೇಲೆ ಕೊಡ ಬಹುದಾ ಅಂತ ಹೆದರಿ ಹೆದರಿ ಕೇಳಿದಳು. ಅವರು ಸಂತಸದಿಂದ ಖಂಡಿತ ಮ್ಯಾಡಂ ಅಂತ ಹೊರಟರು. 
ಮರುದಿನ ಬೆಳಿಗ್ಗೆ ಅವಳು ಆಫಿಸಿಗೆ ಹೋಗುವಾಗ ಮನೆಯ ಬಳಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು ವಸುಧಾಳಿಗೆ ಪ್ರಸಾದವನ್ನು ಕೊಡಲು ಮರೆಯಲಿಲ್ಲ. 
:-)

July 20, 2015

ಹಾವೊಳು ಹೂವೆ??

ಚೈತ್ರಾ ಆಫಿಸ್ ನಿಂದ ಬಂದು ಗೇಟ್ ತೆರೆದು ಮನೆಯೊಳಗೆ ಹೋಗುವಾಗ ರಸ್ತೆ ಮೇಲೆ ನಿಂತು ತಲೆ ಕೆರೆದುಕೊಂಡು ಇವಳ ಕಡೆಗೆ ನೋಡುತ್ತಿದ್ದವನನ್ನು ಕಡೆಗಣ್ಣಿನಿಂದ ನೋಡಿದಳು. ಇವನನ್ನು ಎಲ್ಲೋ ನೋಡಿದೆನಲ್ಲಾ ಅಂತಾ. ಚೈತ್ರಾಳಿಗೆ ಫೊಟೊಗ್ರಾಫಿಕ್ ಮೆಮರಿ. ಏನಾದರೂ ಒಂದು ಸಲ ನೋಡಿದರೆ ಅವಳಿಗೆ ಅದು ಮರೆತು ಹೋಗುವುದಿಲ್ಲ. ಅವನ ಬಗ್ಗೆ ಯೋಚಿಸುತ್ತ, ಮನೆಯ ಒಳಗೆ ಬಂದು ಬಾಗಿಲಿಗೆ ಅಗುಳಿ ಹಾಕಿ ಚಪ್ಪಲಿ ತೆಗೆಯ ಬೇಕಾದ್ರೆ ಕಾಲ ಬಳಿ ಭುಸ್ ಎನ್ನುವ ಸದ್ದು. ನೋಡಿದರೆ ನಾಗರ ನಾವು. ಕಿಟಕಿಯ ಬಾಗಿಲು ಅವಳು ಯಾವಗಲೂ ಸಣ್ಣಕ್ಕೆ ತೆಗೆದಿರುತ್ತಾಳೆ ಅಂಚೆಯವನು ಕಾಗದ ಪತ್ರ ಏನಾದರೂ ಇದ್ದಲ್ಲಿ ಅದನ್ನು ಕಿಟಕಿಯ ಸಂದಿಯಿಂದ ಒಳಗೆ ನೂಕುವಂತೆ.. ತಕ್ಷಣ ಅವಳಿಗೆ ರಸ್ತೆಯಲ್ಲಿ ನಿಂತವನನ್ನು ಎಲ್ಲಿ ನೋಡಿದ್ದು ಅಂತ ನೆನೆಪಾಯಿತು. 
ಆದರೆ ಮೊದಲಿಗೆ ಈ ಹಾವಿಗೆ ಏನಾದರೂ ಮಾಡಬೇಕಿತ್ತು. ಚೈತ್ರಾಳಿಗೆ ಹಾವುಗಳೆಂದರೆ ಭಯವಿರಲಿಲ್ಲ. ಅದಿನ್ನೂ ಹೆಡೆ ಎತ್ತಿ ನಿಂತಿತ್ತು. ನಿಧಾನಕ್ಕೆ ಅವಳು ಕೈಯನ್ನು ಹೆಡೆಯ ಹಿಂಭಾಗಕ್ಕೆ ತೆಗೆದುಕೊಂಡು ತಕ್ಷಣ ಅದರ ಕುತ್ತಿಗೆಯನ್ನು ಒತ್ತಿ ಹಿಡಿದಳು. ಅದೇನೂ ಹೆಚ್ಚು ಒದ್ದಾಡದೆ ಸುಮ್ಮನೆ ಇತ್ತು. ನಿಧಾನಕ್ಕೆ ಅಲ್ಲಿಯೇ ಸಿಕ್ಕ ಪೆನ್ಸಿಲ್ ನಿಂದ ಅದರ ಬಾಯಿ ಅಗಲಿಸಿ ನೋಡಿದಳು. ಹಲ್ಲು ಇರಲಿಲ್ಲ. ಉಸ್ಸಪ್ಪ ಎಂದು ನಿಟ್ಟುಸಿರು ಬಿಟ್ಟು ಹಾವನ್ನು ಕೈಯಲ್ಲೇ ಹಿಡಿದು ಕೊಂಡು ಗೋಣಿಚೀಲಕ್ಕಾಗಿ ಹುಡುಕಾಟ ನಡೆಸಿದಳು. ಮನೆಯಲ್ಲಿ ಗೋಣಿ ಚೀಲ ಇರಲಿಲ್ಲ. ಆದರೆ ಹೊರದೇಶಕ್ಕೆ ಹೋಗಿದ್ದಾಗ ಅವಳ ಪತಿ ಅಲ್ಲಿಯ ಹೋಟಲ್ ಒಂದರ ಲಾಂಡ್ರಿ ಬ್ಯಾಗ್ ತಂದಿದ್ದು ಸ್ಟೋರ್ ರೂಮ್ ಬಾಗಿಲ ಸಂದಿನಲ್ಲಿ ಸಿಕ್ಕಿತು. ಹಾವನ್ನು ಸಿಂಬಿ ಸುತ್ತಿಸಿ ಅದನ್ನು ಲಾಂಡ್ರಿ ಬ್ಯಾಗ್ ನಲ್ಲಿ ಹಾಕಿ ಚೀಲದ ಬಾಯಿಯನ್ನು ಗಟ್ಟಿಯಾಗಿ ಕಟ್ಟಿದಳು. ಸಾವ್ಲೋನ್ ಹಾಕಿ ಕೈ ಕಾಲು ತಿಕ್ಕಿ ತಿಕ್ಕಿ ತೊಳೆದಳು. ಆಮೇಲೆ ಅಡುಗೆ ಮನೆಗೆ ಬಂದು ಟೀ ಕಾಯಿಸಲು ಇಟ್ಟಳು. ಟೀ ಆಗುತ್ತಿದ್ದ ಹಾಗೆ ಅವಳಿಗೆ ಕೆಲ ದಿನದ ಹಿಂದಿನ ನೆನಪು ಫ್ಲ್ಯಾಶ್ ಬ್ಯಾಕ್ ನಲ್ಲಿ ಮನಸ್ಸಿನಲ್ಲಿ ಹಾಯಿತು.
ಆಫಿಸ್ ನಿಂದ ಮನೆಗೆ ಬರುವಾಗ ಚೈತ್ರಾ ಒಳ ದಾರಿಯಿಂದ ಬರುವುದು ವಾಡಿಕೆ. ಆ ರಸ್ತೆಯಲ್ಲಿ ದೊಡ್ಡ ದೊಡ್ಡ ಬಂಗಲೆಗಳು ಮಾತ್ರವಲ್ಲ ಹೆಚ್ಚಿನ ಮನೆಯಲ್ಲಿ ಚೆಂದದ ಕೈತೋಟ ವಿದ್ದವು. ಅಲ್ಲಿಂದ ಮನೆಗೆ ಬರುವುದು ತುಸು ಹೆಚ್ಚೆ ಸಮಯ ತೆಗೆದುಕೊಳ್ಳುತ್ತಿದ್ದರೂ ಆಕೆಗೆ ಆ ದಾರಿಯಿಂದ ಬರುವುದು ಆಹ್ಲಾದಕರ ವಿಷಯ. ಹೆಚ್ಚು ವಾಹನ ಸಂಚಾರ ಕೂಡ ಇರಲಿಲ್ಲ. ಅದೇ ಒಂದು ದಿನ ಆ ರಸ್ತೆಯಲ್ಲಿ ಮನೆಗೆ ಬರಬೇಕಾದರೆ ಒಂದು ಮನೆಯ ಮುಂದೆ ಹಲವಾರು ಜನರು ಸೇರಿದ್ದರು. ಅರೇ ಯಾರಾದರು ತೀರಿಕೊಂಡರಾ ಹೇಗೆ ಅಂದು ಕೊಂಡಳು. ಆ ಮನೆಯ ಹತ್ತಿರಕ್ಕೆ ಬರುತ್ತಿದ್ದ ಹಾಗೆ ಅವಳು ಕುತೂಹಲದಿಂದ ಹೆಜ್ಜೆಯ ವೇಗ ಕಡಿಮೆಗೊಳಿಸಿದ್ದಳು. ಸೇರಿದ ಜನರೆಲ್ಲ ಹಾವಿನ ಬಗ್ಗೆ ಮಾತನಾಡುತ್ತ ಇದ್ದರು. ಯಾರೋ ಸ್ನೇಕ್ ಶ್ಯಾಮ್ ಗೆ ಫೋನ್ ಹಚ್ಚಲು, ಇನ್ನು ಯಾರೋ ಗೂಗಲ್ ನಲ್ಲಿ ಅವರ ಹೆಸರು ಹುಡುಕುತ್ತ ಇರಬೇಕಾದರೆ......ಅದೇ ಗೇಟ್ ಮುಂದಿರುವವ.....ಗಟ್ಟಿ ದನಿಯಲ್ಲಿ ಹಾವು ನಾನು ಹಿಡಿದುಕೊಡುತ್ತೇನೆ ಅಂತ ಹೇಳಿ ಮನೆ ಮಾಲೀಕಳ ಮುಂದೆ ತಲೆ ಕೆರೆದುಕೊಳ್ಳುತ್ತ ನಿಂತಿದ್ದ. "ಆದರೆ ಕಾSSSSSಸು" ಅಂತ ರಾಗ ಹಾಕಿದ್ದ . ಎಷ್ಟು ಕೊಡ್ಬೇಕಪ್ಪ? ಒಂದು ಆ ಹಾವು ಇಲ್ಲಿಂದ ಹೋದರೆ ಸಾಕು. ಮಕ್ಕಳು ಶಾಲೆಯಿಂದ ಬರುವ ವೇಳೆ"...
"500 ಕೊಡಿ ಸಾಕು"
:ಏನು 500 ಆ? 250 ಕೊಡ್ತೀನಪ್ಪ" ....ಅಂದಾಗ ಚೈತ್ರಳಿಗೆ ನಗು ತಡೆದುಕೊಳ್ಳಲಾಗಲಿಲ್ಲ. ಹಾವು ಅಂತ ಹೆದರಿಕೆ..ಅದರಲ್ಲೂ ಚೌಕಾಸಿ..ಅಂತ ಅವಳು ಮನೆಯ ಹಾದಿ ಹಿಡಿದಿದ್ದಳು. ಇದಾಗಿ  15 ದಿನ ಆಗಿರ ಬಹುದು
ಟೀ ರೆಡಿಯಾಗಿ ಇನ್ನೇನೂ ಗ್ಲಾಸಿಗೆ ಸೋಸಿ ಹಾಕಬೇಕು ಅನ್ನುವಷ್ಟರಲ್ಲಿ ಬಾಗಿಲ ಗಂಟೆಯ ಸದ್ದಾಯಿತು. ಚೈತ್ರಾ ಬಾಗಿಲು ತೆಗೆದಾಗ ಅವನು ನಿಂತಿದ್ದ. ’ಏನು’? ಎಂಬಂತೆ ಅವಳು ಅವನ ಕಡೆಗೆ ನೋಡಿದಳು
"ಮೇಡಂ ಈಗಷ್ಟೆ ಕಿಟಕಿ ಸಂದಿಯಿಂದ ಹಾವು ಬಂದಿದ್ದನ್ನು ನೋಡಿದೆ. ನಿಮಗೆ ಹೇಳುವಾ ಅಂತ ಬಂದೆ’ ಅಂದ...
"ಇಲ್ಲವಲ್ಲ"....ಅವಳಿಗೆ ಅವನ ಆಟ ಆಗಲೇ ಗೊತ್ತಾಗಿತ್ತು...
ಹೀಗೆ ಮನೆಯೊಳಗೆ ಹಲ್ಲು ಕಿತ್ತ, ಮತ್ತು ಬೆರೆಸಿದ ನಾಗರ ಹಾವನ್ನು ಬಿಡುವುದು. ಆಮೇಲೆ ಅದನ್ನು ಹಿಡಿಯುವ ನೆಪದಲ್ಲಿ ಮನೆಯಲ್ಲಿ ಹೊಕ್ಕುವುದು, ಅದನ್ನು ಹಿಡಿಯಲು ದುಡ್ಡು ಪಡೆಯುವುದು ಮಾತ್ರವಲ್ಲ, ಕೈಗೆ ಸಿಕ್ಕಿದ ಬೆಲೆ ಬಾಳುವ ಸಾಮಾನು ಕದಿಯುವುದು..ಮನೆಯಲ್ಲಿ ಇರುವ ಜನರ ಬಗ್ಗೆ ಮಾಹಿತಿ ಕಲೆಹಾಕಿ ಅವರು ಇಲ್ಲದಿದ್ದಾಗ  ಆ ಮನೆಗೆ ಕನ್ನ ಹಾಕುವುದು....
"ಇಲ್ಲ ಮೇಡಂ ಹುಡುಕುವಾ. ನಾಗರಹಾವು ಕಂಡಂಗೆ ಆಯ್ತು". 
"ಇಲ್ಲ ಈ ನೆಲ ತುಂಬಾ ಜಾರುತ್ತೆ ಎಲ್ಲೂ ತಪ್ಪಿಸಿಕೊಂಡು ಹೋಗಲ್ಲ, ಸಿಕ್ಕಿದರೆ ಆಮೇಲೆ ನೋಡುವಾ ಅಂತ ಬಾಗಿಲು ಹಾಕಿದಳು ಚೈತ್ರಾ. ಅವಳ ಪೋಲಿಸ್ ಫ್ರೆಂಡ್ ಗೆ ಅವಳು ಆಗಲೇ ಎಸ್ ಎಮ್ ಎಸ್ ಮಾಡಿ ಆಗಿತ್ತು. ಇನ್ನೇನೂ ಅವನು ಬರುತ್ತಾನೆ ಅಂತ ಕಾಯುತ್ತ ಇದ್ದಳು. ಅವನು ಹೊರಗೆ ಕಾಯುತ್ತ ಇದ್ದ......
:-)

October 19, 2013

ಕಥೆ

ಅವಳು ಅವನಿಗೆ ತಾನು ತಾಯಾಗಲಿರುವ ಬಗ್ಗೆ ಹೇಳಿದಾಗ ಅವನು ಕೇಳಿದ ಪ್ರಶ್ನೆ 'ಅದು ಹೇಗೆ ಸಾಧ್ಯ?' ಅಂತ. ಅವಳೋ ಕಕ್ಕಾಬಿಕ್ಕಿ
ಪ್ರಿಯಂವದಾಳಿಗೆ ಐದು ಜನ ಅಕ್ಕಂದಿರು ಇಬ್ಬರು ತಂಗಿಯಂದಿರು. ಅಕ್ಕಂದಿರ ಮದುವೆ, ಬಾಣಂತನ, ಮಕ್ಕಳು ಅಂತ ನೋಡಿ ಅವಳಿಗೆ ರೇಜಿಗೆ ಅನ್ನಿಸಿ. ತಾನು ಯಾವತ್ತೂ ಮದುವೆಯಾಗಲಾರೆನೆಂದು ಪ್ರತಿಜ್ಞೆ ಮಾಡಿದ್ದಳು. ಹಾಗೆ ವಿಜ್ಞಾನದ ಉನ್ನತ ಪದವಿಧರೆಯಾದ ಅವಳು ವಿಜ್ಞಾನಿಯೊಬ್ಬರ ಬಳಿ ಎಸಿಸ್ಟೆಂಟ್ ಆಗಿ ಕ್ಯಾನ್ಸರ್ ರೋಗದ ಮೇಲೆ, ಅದನ್ನು ಗುಣಪಡಿಸುವತ್ತ  ಸಂಶೋಧಕಿಯಾಗಿ ಕೆಲಸಕ್ಕಿದ್ದಳು. ಹೀಗಿರುವಾಗ ಒಂದು ದಿನ ಅವಳ ತಂಗಿಗೆ ಒಬ್ಬನ ಜತೆ ಪ್ರೇಮವಾಗಿ ಮದುವೆಯಾಗಲು ತುದಿಗಾಲ ಮೇಲೆ ನಿಂತಿದ್ದಳು. ಆದರೆ ಅವಳಿಗಿಂತ ದೊಡ್ಡವಳಿಗೆ ಮದುವೆಯಾಗದೆ ಚಿಕ್ಕವಳಿಗೆ ಮದುವೆ ಮಾಡುವುದು ಮನೆಯ ಹಿರಿಯರಿಗೆ ಸರಿ ಬರಲಿಲ್ಲ. 38 ರ ಪ್ರಾಯದ ಪ್ರಿಯಂವದೆಗೆ ಗಿಣಿಗೆ ಹೇಳಿದ ಹಾಗೆ ಹೇಳಿದರೂ ಅವಳು ಸುತಾರಾಂ ಒಪ್ಪಲಿಲ್ಲ. ಸರಿ ಹಾಗಾದ್ರೆ ಚಿಕ್ಕವಳಿಗಾದ್ರು ಮದುವೆ ಮಾಡಿ ಮುಗಿಸುವ ಅಂದ್ರೆ ಅವಳ ಪ್ರಿಯಕರನ ಕುಟುಂಬಕ್ಕೆ  ಗುಮಾನಿ. ನೋಡಲು ಇಷ್ಟು ಚೆನ್ನಾಗಿದ್ದಾಳೆ ಅಕ್ಕ, ಸ್ವಂತ ದುಡಿಮೆಯಿದೆ ಆದರೆ ಯಾಕೆ ಮದುವೆಯಾಗುತ್ತಿಲ್ಲ ಅಂತ ಅವರಿಗೆ ತಲೆ ಬಿಸಿ. ಏನೋ ಊನವನ್ನು ಮುಚ್ಚಿಡುತ್ತಿದ್ದಾರೆ ಅಂತ. ಹೀಗೆ ಮದುವೆ ಮುಂದೂಡುತ್ತಲೆ ಇರುವಾಗ ತಂಗಿ ತಲೆ ಕೆಟ್ಟವರಹಾಗೆ ವರ್ತನೆ ಶುರು ಮಾಡಿದ್ಲು. ಆಗ ಕುಟುಂಬದ ಹಿರಿಯರೆಲ್ಲ ಸೇರಿ ಪ್ರಿಯಂವದೆಗೆ ಛಿಮಾರಿ ಹಾಕಿದರು - ನಿನ್ನಿಂದ ನಿನ್ನ ತಂಗಿಯ ಜೀವನ ಹಾಳಾಗುತ್ತಿದೆಯೆಂದು. ಅವಳು 'ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ, ನಾನು ಆಶ್ರಮ ಸೇರಿ ಸನ್ಯಾಸಿ ಆಗುತ್ತೇನೆ ಅಂತ ಗಲಾಟೆ ಮಾಡಲು ಶುರು ಮಾಡಿದಳು. ಆಗ ಸಿಕ್ಕಿದ ವರ ಸುಮತೀಂದ್ರ.
ಸುಮತೀಂದ್ರನಿಗೆ ಮೂವರು ಅಕ್ಕಂದಿರು. ತಂದೆ ಚಿಕ್ಕ ಪ್ರಾಯದಲ್ಲೇ ಕಾಲಾವಸಾನರಾಗಿದ್ದರು. ಕೈ ತುಂಬ ಸಂಬಳ ಮಾತ್ರವಲ್ಲ ಗದ್ದೆ ತೋಟಗಳಿಂದಲೂ ಸಾಕಷ್ಟು ಆದಾಯ  ಬರುವ ಸುಮತೀಂದ್ರನಿಗೆ ಮೂವರು ಅಕ್ಕಂದಿರ ಮದುವೆ ಮಾಡಿ ಮುಗಿಸಬೇಕಾದ್ರೆ ಸಾಕು ಬೇಕಾಯಿತು. ನೋಡಲು ಒಂದು ಚೂರು ಲಕ್ಷಣವಿಲ್ಲದ ಹುಡುಗಿಯರನ್ನು ದಂಡಿಯಾಗಿ ವರದಕ್ಷಿಣೆ ಕೊಟ್ಟು ಸಾಗ ಹಾಕಿದ. ಅಮ್ಮನೂ ತೀರಿಕೊಂಡ ಮೇಲೆ ಅವನು ದುಡಿಯುತ್ತ ಕುಡಿಯುತ್ತ ಇತ್ತೀಚಿನ ಐದು ವರ್ಷಗಳಲ್ಲಿ ಹಾಯಾಗಿದ್ದ.ಮದುವೆ ಮಾಡಿಕೊಳ್ಳುವ ಯೋಚನೆ ಅವನಿಗೆ ಖಂಡಿತ ಇರಲಿಲ್ಲ. ಪ್ರಿಯಂವದಾ ಹಾಗೂ ಸುಮತೀಂದ್ರ ಮದುವೆ ಮಾಡಿಸಿದವರು ಎರಡೂ ಕುಟುಂಬದ ನಿಕಟ ಪರಿಚಯದವರು ಮತ್ತು ಎರಡೂ ಕುಟುಂಬಕ್ಕೆ ಬೇಕಾದವರು. ಪ್ರಿಯಂವದಾ ಹಾಗೂ ಸುಮತೀಂದ್ರರಿಬ್ಬರನ್ನೂ ಒಂದು ಸಲ ಒಟ್ಟೊಟ್ಟಿಗೆ ಇನ್ನೊಂದು ಸಲ ಬೇರೆ ಬೇರೆಯಾಗಿ ಸಂಧಿಸಿ ಅವರಿಬ್ಬರೂ ಮದುವೆಯಾಗುವ ಹಾಗೆ ತಯಾರು ಮಾಡಿದರು. ಮ್ಯಾರೇಜ್ ಆಫ್ ಕನ್ವಿನೀಯನ್ಸ್ ಅಂತಾರಲ್ಲವಾ, ಹಾಗೆ!
ಸರಿ ಮದುವೆಯಾಯ್ತು. ಸುಮತೀಂದ್ರ ಅವಳ ಸುದ್ದಿಗೆ ಹೋಗುತ್ತಿರಲಿಲ್ಲ. ಅವರಿಬ್ಬರಿಗೂ ಬೇರೆ ಬೇರೆ ಕೊಠಡಿ. ಅವಳು ಮಾಡಿ ಹಾಕಿದ ರುಚಿರುಚಿಯಾದ ಅಡಿಗೆ ಬಾಯಿ ಚಪ್ಪರಿಸಿ ತಿಂದು ಅವನ ಸ್ನೇಹಿತರು, ಕುಡಿತ ಅಂತ ಆರಾಮಾಗಿದ್ದು ಬಿಟ್ಟಿದ್ದ. ಪ್ರಿಯಂವದೆ ತನ್ನ ಸಂಶೋಧನೆಯಲ್ಲಿ ಮಗ್ನ.ಯಾವಾಗಲೋ ಕುಡಿತದ ಅಮಲಿನಲ್ಲಿ ಅವಳನ್ನು ಕೂಡಿದ ಅವನು, ಅವಳು ರೇಜಿಗೆಯಿಂದ ಅವನಿಗೆ ಛಿ ಮಾರಿ ಹಾಕಿದ್ದು,  ಈ ಸಿಡಿಲಿನಂತಹ ಸುದ್ದಿ.
ಅವನು ಅದು ಹೇಗೆ ಅಂತ ಕೇಳಿದ್ದಕ್ಕೆ ಅವಳ ಬಳಿ ಉತ್ತರ ಏನೋ ಇತ್ತು ಆದರೆ ಅವನ ಶಾಕ್ ನಿಂದ ಕೂಡಿದ ಮುಖ ನೋಡಿ ಅವಳಿಗೆ ಉತ್ತರಿಸಬೇಕೆಂದನಿಸಲಿಲ್ಲ. ಅವನು ಯಾವಾಗಲೋ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಅವನಿಗೆ ಮಕ್ಕಳಾಗದಿರುವ ಬಗ್ಗೆ ರಿಪೋರ್ಟ್ ಬಂದಿದ್ದು ಅವನಿಗೆ ನಿಜಕ್ಕೂ ಶಾಕ್ ಆಗಿತ್ತು.ಆ ಮೇಲೆ ಅವರು ಬೇರೆ ಬೇರೆ ಆದರು. ಅವನಿಗೆ ಅವಳ ಬಗ್ಗೆ ಮರೆತು ಕೂಡ ಹೋಯಿತು. 
ಪ್ರಿಯಂವದಾ ಯಾವಾಗಲೋ ಹೊರ ದೇಶದ ಸಂಶೋಧನಾ ಫೆಲ್ಲೊಶಿಪ್ ಗೆ ಅರ್ಜಿ ಹಾಕಿದ್ದು ಅದು ಸ್ವೀಕೃತ ಆಗಿ ಆಕೆ ಸ್ವಿಜರ್ ಲ್ಯಾಂಡ್ ಗೆ ಹೋಗಿದ್ದಷ್ಟೆ ಅವನಿಗೆ ಅವರಿವರಿಂದ ಗೊತ್ತು. ಆಮೇಲೆ ಅವರಿಬ್ಬರೂ ಸಂಪರ್ಕದಲ್ಲಿರಲಿಲ್ಲ
ಮಧ್ಯೆ ಮಧ್ಯೆ ಸುಮತೀಂದ್ರನಿಗೆ ಅವನ ದೂರದ ಸಂಬಂಧಿ ಡಾಕ್ಟರ್ ಒಬ್ಬರು ಪತ್ರ ಕಳುಹಿಸುತ್ತಿದ್ದರು. ಅದರ ಒಕ್ಕಣೆ ಹೆಚ್ಚು ಕಡಿಮೆ ಹೀಗಿರುತ್ತಿತ್ತು, 'ಇಲ್ಲಿ ಥೇಟ್ ನಿನ್ನನ್ನು ಹೋಲುವ ನೇ ಒಬ್ಬ ಹುಡುಗನಿದ್ದಾನೆ ಅಂತಲೋ, ನೀನು ಆರನೆ ಈಯತ್ತೆಯಲ್ಲಿದ್ದಾಗ ಹೇಗೆ ಕಾಣುತ್ತಿದ್ದೆ ಹಾಗೆ ಕಾಣುತ್ತನೆಂದಲೋ, ನಕ್ಕರೆ ನೀನೆ ನಕ್ಕಹಾಗೆ ಕಾಣುತ್ತನೆಂತ್ಲೋ ಇರುತಿತ್ತು. ಆದರೆ ಮೊನ್ನೆ ಬಂದ ಪತ್ರ ಓದಿ ಅವನಿಗೆ ಯಾಕೋ ತಳಮಳ ಆಯ್ತು. ಈ ಪತ್ರದ ಒಕ್ಕಣೆ ಹೀಗಿತ್ತು, 'ಒಂದು ಸಲ ಇಲ್ಲಿ ಬಂದು ಆ ಹುಡುಗನ್ನ ನೋಡ್ತಿಯಾ? ದೂರದಿಂದಲೇ ನೋಡು. ಅವನ ತಾಯಿ ಇನ್ನೂ ಕೆಲವೆ ದಿನಗಳ ಅತಿಥಿ.'
ಸುಮತೀಂದ್ರ ಈಗ ಸ್ವಯಂ ನಿವೃತ್ತಿ ಹೊಂದಿದ್ದ. ದುಡ್ಡಿನ ಜತೆ ಅವನ ಬಳಿ ಸಮಯವೂ ಸಾಕಷ್ಟಿತ್ತು. ಈಗ ಗೆಳೆಯರೂ ಅವರವರ ಪರಿವಾರ ಅವರ ಜೀವನದಲ್ಲಿ ವ್ಯಸ್ತರಾಗಿದ್ದು ಇವನ ಬಳಿ ಮಾತಾಡುವಷ್ಟು ವ್ಯವಧಾನ ಅವರಿಗಿರಲಿಲ್ಲ. ಇತ್ತೀಚಿಗೆ ಯಾಕೋ ಅವನಿಗೆ ಪ್ರಿಯಂವದಾ ಅವಳ ಅಡಿಗೆ, ಅವಳು ಬಳಸುವ ಶ್ಯಾಂಪೂ ಪರಿಮಳ ಅವಳ ಉದ್ದ ಜಡೆ ಪದೇ ಪದೇ ನೆನಪಿಗೆ ಬರುತ್ತಿತ್ತು. ಹದಿನೈದು ವರ್ಷಗಳೇ ಕಳೆದು ಹೋಗಿದ್ದವು. ಅವಳಿಗೆ ನನ್ನ ನೆನಪು ಒಂದು ಸಲವೂ ಕಾಡಿಲ್ಲವೇ ಮುಂತಾದ ಪ್ರಶ್ನೆಗಳು ಅಸ್ವಸ್ಥ ಮಾಡುತ್ತಿದ್ದವು. ಆ ಸಂಬಂಧಿಕರಿರುವ ಊರಿಗೆ ಹೋಗಿ ಯಾಕೆ ಆ ಹುಡುಗನ್ನ ನೋಡ ಬಾರದು? ಅವನ ಶಿಕ್ಷಣಕ್ಕೆ ಏನಾದರೂ ದಾರಿಯಾದರೂ ಮಾಡುವ ಅಂತ ಹೊರಟ ಸುಮತೀಂದ್ರ.
ಹೌದು ಅಲ್ಲಿ ನೋಡಿದ್ರೆ ಆ ಹುಡುಗ ಸುಮತೀಂದ್ರ 9 ನೆ ತರಗತಿಯಲ್ಲಿ ಹೇಗೆ ಕಾಣಿಸುತ್ತಿದ್ದ ಹಾಗೇ ಇದ್ದ. ಅಷ್ಟೆ ಅಲ್ಲ ಸುಮತೀಂದ್ರನ ಹಾಗೆ ಸುಮ್ಮನೆ ಕೂತಾಗ ಒಂದು ಕಾಲನ್ನು ಅಲ್ಲಾಡಿಸುವ ಅಭ್ಯಾಸ ಕೂಡ ಇತ್ತು. ಸುಮತೀಂದ್ರ ಆ ಹುಡುಗನ ಅಮ್ಮನ ಬಳಿ ಮಾತನಾಡಲು ಹೋದ. ಅಮ್ಮನ ಪರಿಸ್ಥಿತಿ ತುಂಬ ಬಿಗಡಾಯಿಸಿತ್ತು. ಆಕೆ ಕಷ್ಟಪಟ್ಟು ಹುಡುಗನಿಗೆ ತಂದೆ ಇಲ್ಲ, ಹೇಳಿಕೊಳ್ಳುವಂತಹ ಬಂಧು ಬಳಗವಿಲ್ಲ, ನಾನು ನೋಡಿದರೆ ನಿತ್ಯ ರೋಗಿ, ನನ್ನ ನಂತರ ಆ ಹುಡುಗಂದು ಏನಾಗುತ್ತದೋ ಎಂದು ರೋಧಿಸಿದರು. ಅವನು ಊರಿನ ಮುನಿಸಿಪಾಲಿಟಿ ಆಫಿಸ್ ನಲ್ಲಿ ಸ್ವಲ್ಪ ಅವರಿವರ ಕೈ ಬೆಚ್ಚಗೆ ಮಾಡಿ ಆ ಹುಡುಗ ಹುಟ್ಟಿದ ದಿನಾಂಕ ಅವನ ಇತರೇ ಮಾಹಿತಿಗಳನ್ನು ಕಲೆ ಹಾಕಿದ. ತಾಯಿಯ ಹೆಸರು ಇತ್ತೆ ವಿನಹ ತಂದೆಯ ಹೆಸರನ್ನು ಅಲ್ಲಿ ನೋಂದಾಯಿಸಿರಲಿಲ್ಲ. ಈಗ ಅವನು ಪ್ರಿಯಂವದಾಳಿಗೆ ಸಂಪರ್ಕಿಸ ಬೇಕಾಯಿತು. ಹಾಗೆ ತಾನೂ ಡಾಕ್ಟರ್ ಬಳಿ ತಪಾಸಣೆ ಹೋದಾಗ ಅವನಲ್ಲಿ ತಂದೆಯಾಗುವ ಎಲ್ಲ ಯೋಗ್ಯತೆಗಳೂ ಇದ್ದವು. ಒಂದು ತರಹ ಸಂತಸ ಸಂಭ್ರಮ.
ಸರಿ ಗೂಗಲ್ ನಲ್ಲಿ ಅವಳ ಹೆಸರು ಪ್ರಿಯಂವದಾ ಅಂತ ಹಾಕಿದ್ರೆ ಏನೂ ಸಿಗಲಿಲ್ಲ. ಪುನ: ಅವನ ಊರಿಗೆ ವಾಪಸ್ ಬಂದು  ಮನೆಯ ಕಪಾಟುಗಳನ್ನೆಲ್ಲ ತಡಕಾಡಿದ ಪ್ರಿಯಂವದಾ ಬಗ್ಗೆ ಏನಾದರೂ ಸುಳಿವು ಸಿಗಬಹುದೇ ಅಂತ. ಕೊನೆಗೂ ಪುಸ್ತಕದ ಕಪಾಟಿನಲ್ಲಿ ಎರಡು ಪುಸ್ತಕದ ಮಧ್ಯೆ ಅಪಚ್ಚಿಯಾದ, ಹುಳು ತಿಂದ ಅರ್ಜಿಯ ಸ್ವಲ್ಪ ಭಾಗದಲ್ಲಿ ಅವಳ ಸಂಶೋಧನಾ ಸಂಸ್ಥೆಯ ಹೆಸರು ಸಿಕ್ಕಿತು. ಕೂಡಲೆ ಗೂಗಲಿಸಿ ನೋಡಿದರೆ ಪ್ರಿಯಂವಾದ ಈಗ ಪ್ರಿಯಾ ಆಗಿದ್ದು, ಅವಳಿಗೆ ಬಂದ ಹಲವಾರು ಪ್ರಶಸ್ತಿಗಳು, ಅವಳು ಮತ್ತು ಅವಳ ಸಹೋದ್ಯೋಗಿಗಳು ಜಂಟಿಯಾಗಿ ಮಂಡಿಸಿದ ಪ್ರಬಂಧಗಳ ಪಟ್ಟಿಯೇ ಕಣ್ಣೆದುರಿಗೆ ಸಾಲು ಸಾಲಾಗಿ ಬಂದು ನಿಂತಿತು. ಪುಟದ ಕೊನೆಯಲ್ಲಿ ಅವಳ ವೈಯಕ್ತಿಕ ಮಾಹಿತಿ ಮುಂತಾದನ್ನು ಹಾಕಿದ್ದರು. ಅವಳ ಇ ಮೈಲ್ ಫೋನ್ ನಂಬರ್ ಇತ್ಯಾದಿ.
ಕೂಡಲೆ ಒಂದು ಮೈಲ್ ಕಳುಹಿಸಿ ಒಂದು ವಾರದ ತನಕ ಬೆಳಿಗ್ಗೆ ಮಧ್ಯಾಹ್ನ , ರಾತ್ರಿ ಎಚ್ಚರವಾದಾಗಲೆಲ್ಲ ಅವಳ ಮೈಲ್ ಏನಾದರೂ ಬಂದಿದೆಯಾ ಅಂತ ಕಾಯೋದೆ ಆಯಿತು. ಇನ್ನೊಂದೆರಡು ದಿನ ಕಾದು ಅಲ್ಲಿ ಕೊಟ್ಟ ನಂಬರ್ ಗೆ ಸಂಪರ್ಕಿಸೋದು ಅಂತ ತನ್ನಷ್ಟಕ್ಕೆ ಅಂದು ಕೊಂಡ ಅಲ್ಲಿಂದ ಯಾವುದೇ ಸುದ್ದಿಯಿಲ್ಲ. ಕೊನೆಗೆ ಫೋನ್ ಮಾಡಿದರೆ, 'ದಯವಿಟ್ಟು ನಿಮ್ಮ ಹೆಸರು ನಂಬರ್ ಹೇಳಿ ಅಂತ ಆಟೋಮೇಟದ್ ದನಿಯೊಂದು ಕೇಳಿತು. ಹತಾಶನಾದ ಸುಮತೀಂದ್ರ. ಎಲ್ಲ ಆಸೆ ಕೈಬಿಟ್ಟ ಮೇಲೆ ಒಂದು ದಿನ ಅವಳ ಮೈಲ್ ನೋಡಿ ಅವನ ಎದೆ ಡವಗುಟ್ಟಿತು ಕಾತುರದಿಂದ.
ಮೈಲ್ ಪಕ್ಕದಲ್ಲೇ ಅವಳ ಫೋಟೊ ಮೊದಲಿಗೆ ನೋಡಿದ. ಬಿಳಿ ಕೂದಲಿನಿಂದ ಆವೃತ ಅವಳ ಮುಖ ಇನ್ನೂ ಆಕರ್ಷಕ ವಾಗಿತ್ತು, ಸ್ನಿಗ್ದ ಸುಂದರವಾಗಿತ್ತು. ಮಿಂಚಂಚೆಯಲ್ಲಿ ಅವಳು ಕೆಲ ದಿನಗಳ ಮಟ್ಟಿಗೆ ಕೆಲಸಕ್ಕೆ ಬ್ರೇಕ್ ತೆಗುದ್ಕೊಂಡು ಮಗನ ಜತೆ ಯೂರೋಪ್ ಟೂರ್ ಗೆ ಹೋಗಿದ್ದು ಹಾಗು ಅಲ್ಲಿನ ಚಿತ್ರಗಳನ್ನು ಕಳುಹಿಸಿದ್ದಳು. 'ಆಶ್ಚರ್ಯದಿಂದ ಮೂರು ನಾಲ್ಕು ಸಲ ನಿನ್ನ ಮೈಲ್ ಓದ ಬೇಕಾಯ್ತು. ಏನಪ್ಪ ದಿಢೀರ್ ನೆನಪು ಬಂತು ಅಂತ' ಆ ಹುಡುಗನ ಬಗ್ಗೆ ಓದಿ ಆಶ್ಚರ್ಯ ಆಯಿತು.ಡಾಕ್ಟರ್ ನನಗೆ ಅವಳಿ ಜವಳಿ ಮಕ್ಕಳಾಗುವ ಸಾಧ್ಯತೆಯಿದೆ ಎಂದಿದ್ದರು. ಆದರೆ ಒಂದು ಮಗು ಸತ್ತು ಹುಟ್ಟಿತ್ತು ಅಂತ ದಾಯಿ ಹೇಳಿದಾಗ ಅವಳನ್ನು ನಂಬಿದೆ. ಸಾಧ್ಯ ಆದರೆ ನನಗೆ ಅವನ ಫೋಟೊ ಕಳುಹಿಸಿ ಮತ್ತು ಆಟಾಂಚ್ ಮೆಂಟ್ ನಲ್ಲಿ ನಿನ್ನ ಮಗನ ಫೋಟೊ ಕೂಡ ನೋಡು. ಹೇಗಿದ್ದಿಯಾ? ನಾನು ನನ್ನ ಕೆಲಸದಲ್ಲಿ ತುಂಬ ಇನ್ವಾಲ್ವ್ ಆಗಿದ್ದೀನಿ. ನಾನೀಗ ಸೀನಿಯರ್ ರಿಸರ್ಚ್ ಸಯಂಟಿಸ್ಟ್. ವಾಸ ಮಾಡಲು ಮನೆ ಒಳ್ಳೆಯ ಸಂಬಳ ಇದೆ". ಅಂತೆಲ್ಲ ಹಾಕಿದ್ದಳು ಮೈಲ್ ನಲ್ಲಿ
ಮಗನ ಫೋಟೊ ನೋಡಿ ಇವನಿಗೆ ಶಾಕ್. ಥೇಟ್ ಆ ಹುಡುಗನ ತರಹ ಮುಖಚರ್ಯೆ. ಏನಿದು ಆಶ್ಚರ್ಯ ಅಂತ. ಕೂಡಲೆ ಅವಳಿಗೊಂಡು ಮೈಲ್ ಹಾಕಿ ಅವನು ಆ ರಾತ್ರಿಯೇ ಊರಿಗೆ ಹೊರಟ. ಆ ಹುಡುಗ ಹುಟ್ಟಿದ ಆಸ್ಪತ್ರೆಗೆ ಹೋಗಿ, ಸ್ವಲ್ಪ ಲಂಚ ಕೊಟ್ಟು ಹಳೆಯ ಫೈಲ್ ಗಳನ್ನೆಲ್ಲ ಎಡತಾಕಿದ. ಆಗ ಅಲ್ಲಿ ಕೆಲಸ ಮಾಡುತ್ತಿದ್ದ ದಾಯಿಯ ಹೆಸರು ಸಿಕ್ಕಿತು. ಆ ದಾಯಿಯ ವಿಳಾಸದ ಜಾಡನ್ನು ಹುಡುಕುತ್ತ ಹೊರಟ ಸುಮತೀಂದ್ರ. ಅವರಿವರನ್ನು ಕೇಳಿಕೊಂಡು ಕೊನೆಗೂ ಒಂದು ತಿಂಗಳ ನಂತರ ಅವಳನ್ನು ಪತ್ತೆ ಹಚ್ಚಿದ. ಈಗ ಅವಳು ಹಣ್ಣು ಹಣ್ಣು ಮುದುಕಿ. ಆದರು ಸರಿಯಾಗಿ ನೆನಪುಮಾಡಿಕೊಳ್ಳಲು ಹೇಳಿದಾಗ ಅವಳಿಂದ ಪಡೆದ ಮಾಹಿತಿ ಇಷ್ಟು.
ಪ್ರಿಯಂವದಾ ಅವಳ ಊರಿನವಳೇ ಆಗಿದ್ದು, ಗಂಡನನ್ನು ಬಿಟ್ಟು ಬಂದಿದ್ದು ಅವಳಿಗೆ ತಿಳಿದಿತ್ತು. ಅದೇ ಊರಿನ ಇನ್ನೊಂದು ಕುಟುಂಬದ ಹೆಂಗಸಿಗೆ ತುರ್ತಾಗಿ ಅವಳ ಜೀವ ಉಳಿಸಲು ಒಂದು ಮಗು ಬೇಕೆ ಬೇಕಿತ್ತು. ದಾಯಿ ಪ್ರಿಯಂವದಳಿಗೆ ಗೊತ್ತಾಗದಂತೆ ಅವಳ ಮಗುವನ್ನು ಕದ್ದು ಆ ಕುಟುಂಬಕ್ಕೆ ಕೊಡುವ ಹುನ್ನಾರದಲ್ಲಿದ್ದಳು. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಪ್ರಿಯಂವದಳಿಗೆ ಅವಳಿಜವಳಿ ಗಂಡು ಮಕ್ಕಳು ಹುಟ್ಟಿದ್ದು ಅವಳಿಗೆ ಅನುಕೂಲವಾಯಿತು.ಡಾಕ್ಟರ್ ಕೂಡ ಇದರಲ್ಲಿ ಶಾಮೀಲಾಗಿದ್ದಿರ ಬಹುದು ಎಂದು ಅವನಿಗೆ ಸಂಶಯ ಬಂತು. ಅವಳು ಅದರಲ್ಲಿ ಒಂದು ಮಗುವನ್ನೆ ಎತ್ತಿಕೊಂಡು ಆ ಕುಟುಂಬಕ್ಕೆ ಕೊಟ್ಟಿದ್ದಳು. ಆ ಹೆಂಗಸಿಗೆ ಮೂರು ಮಕ್ಕಳಾಗಿ ಹೊಟ್ಟೆಯಲ್ಲಿ ಸತ್ತು ಹುಟ್ಟುತ್ತಿದ್ದರಿಂದ ಆಕೆ ಮಾನಸಿಕ ಕ್ಷೋಭೆಗೆ ತುತ್ತಾಗಿದ್ದಳು. ಈ ಮಗುವಿನಿಂದ ಆಕೆ ಸಮಾಧಾನ ಹೊಂದಿದ್ದಾಳೆ. ಆದರೆ ಈಗ ತೀರ ಕಾಯಿಲೆಯಿಂದ ಅವಳು ಇನ್ನು ಕೆಲವೇ ದಿನಗಳ ಅತಿಥಿ.
ಇದೆಲ್ಲವನ್ನೂ ಸುಮತೀಂದ್ರ ಪ್ರಿಯಂವದಾಳಿಗೆ ಮೈಲ್ ಮೂಲಕ ರವಾನಿಸಿದ.'ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ. ನಿಮ್ಮಿಬ್ಬರನ್ನು ನೋಡಬೇಕೆನ್ನಿಸಿದೆ. ಇತ್ತೀಚಿಗೆ ನಿನ್ನ ನೆನಪು ತುಂಬ ಕಾಡುತ್ತಿದೆ'
ಮರು ಮೈಲ್ ನಲ್ಲಿ ಪ್ರಿಯಂವದಾಳ ಉತ್ತರ ಹೀಗಿತ್ತು. ಇನ್ನು ಎರಡು ತಿಂಗಳಿಗೆ ಮಗನ ರಜೆ ಶುರು ಆಗುತ್ತದೆ. ಆಗ ಅವನನ್ನು ನಿನ್ನ ಬಳಿ ಕಳುಹಿಸುತ್ತೇನೆ. ನೋಡು. ಬೇಕಾದ್ರೆ ನಿನ್ನ ಬಳಿ ಇಟ್ಟು ಕೋ. ನಾನು ಇನ್ನು ಆರು ತಿಂಗಳ ನಂತರ ಸ್ವಯಂ ನಿವೃತ್ತಿ ಪಡೆದು ಸ್ಯಾನ್ ಫ್ರಾನ್ಸಿಕೋ ದ ಆಶ್ರಮ ಸೇರುತ್ತ ಇದ್ದೀನಿ. ನಾವು ಒಂದು ಒಪ್ಪಂದದ ಮೇಲೆ ಮದುವೆಯಾಗಿದ್ದು. ಅದರ ಪ್ರಕಾರ ನೀನು ವರ್ತಿಸಲಿಲ್ಲ. ಮಗುವನ್ನು ನಾನು ಆಗಲೇ ತೆಗೆದು ಹಾಕಬಹುದಿತ್ತು ಆದರೆ ಹುಟ್ಟದೆ ಇರುವ ಮಗುವಿನ ಯಾವುದೇ ತಪ್ಪು ಇರಲಿಲ್ಲ ಅನ್ನುವ ಪಾಪಪ್ರಜ್ಞೆ ಕಾಡಿತ್ತು. ಮಗು ಹುಟ್ಟಿದ ಬಳಿಕ ನಾನು ಬದಲಾಗಬಹುದೆಂದು ಕೊಂಡಿದ್ದೆ. ಆದರ ನನಗೆ ಅವನಿಗೇ ಯಾವ ಇಮೋಷನಲ್ ಅಟ್ಯಾಚ್ ಮೆಂಟ್ ಇಲ್ಲ. ಹುಟ್ಟಿದಾರಭ್ಯ ಅವನು ನ್ಯಾನಿ ಬಳಿ ಬೆಳೆದ. ನೀನು ಬೇರೆ ಮದುವೆ ಮಾಡಿಕೊಳ್ಳುವಲ್ಲಿ ನನ್ನದೇನೂ ಅಭ್ಯಂತರವಿಲ್ಲ. ನಿನಗೆ ಕಾನೂನಿನ ತೊಡಕೂ ಆಗಲ್ಲ ಯಾಕಂದರೆ ನಾವು ಹಲವು ವರ್ಷಗಳು ಸಂಪರ್ಕದಲ್ಲಿರಲಿಲ್ಲ. ಮಗನ ಬಗ್ಗೆ ಬೇಗ ಯಾವುದಾದರೂ ನಿರ್ಧಾರ ತೆಗೆದುಕೊ. ಅವನ ಹೆಸರಿಗೆ ಸ್ವಲ್ಪ ಹಣಕಾಸು ಠೇವಣಿಯಾಗಿಟ್ಟಿದ್ದೇನೆ. ಮಗನನ್ನು ನಿನ್ನ ಬಳಿ ಇರಿಸಿಕೊಳ್ಳಲು ಇಷ್ಟ ಪಡದಿದ್ದರೆ ಅವನಿಗೆ ಬೇರೆ ವ್ಯವಸ್ಥೆ ಮಾಡಬೇಕು.
...................................................................... 
ಸುಮತೀಂದ್ರ ಈಗ ಅವನ ದೂರದ ಸಂಬಂಧದಲ್ಲಿ ವಯಸ್ಸಾದ ದೊಡ್ಡಮ್ಮನನ್ನು ಕರೆದುತಂದು, ಇಬ್ಬರು ಮಗಂದಿರ ಜತೆ ವಾಸವಾಗಿದ್ದಾನೆ.
(ಕಥೆಯೆಂದು ಗೀಚಿದ್ದು ಟೈಟಲ್ ಏನೂ ತೋಚಲಿಲ್ಲ....ಅದಕ್ಕೆ ಸುಮ್ನೆ ಕಥೆ ಅಂತ ಹಾಕಿದ್ದೀನಿ. ಚೆನ್ನಾಗಿದೆಯಾ ಇಲ್ಲವಾ?)

-- 
:-)
malathi S

September 1, 2013

ಆಶಾ ದೀಪ

ಜನವರೀ ಮೊದಲನೇ ವಾರಕ್ಕೆ  ಪ್ರಶಾಂತ ಸುಲತಾ ಅಮೇರಿಕೆಗೆ ಹಾರಿದರು. ಒಂದೆರಡು ದಿನ ಅವನು ಮನೆಯಲ್ಲೇ ಇದ್ದ. ಅವಳಿಗೆ ಆದಷ್ಟು ಮನೆಯ ಬಗ್ಗೆ ತಿಳಿಹೇಳಿದ. ದೊಡ್ಡ ಮನೆ. ಅಕ್ಕಪಕ್ಕ ಕಣ್ಣು ಹಾಯಿಸುವ ಅಳತೆಗೆ ಒಂದೂ ಮನೆಯಿರಲಿಲ್ಲ. ಅವರು ತಲುಪಿದ್ದು ರಾತ್ರಿಯ ಸಮಯ ಹಾಗಾಗಿ ಏನೂ ಕಾಣುತ್ತಿರಲಿಲ್ಲ. ಪ್ರಶಾಂತ ಮದುವೆಗೆಂದು ಭಾರತಕ್ಕೆ ಬಂದಾಗ, ಅವನ ಕಂಪೆನಿಯಲ್ಲಿ ಮೀಟಿಂಗ್ ನಡೆದು ಅವನಿಗೆ ಹೆಚ್ಚಿನ ಜವಾಬ್ದಾರಿಯುತ ಕೆಲಸ ಕೊಟ್ಟು ವೇತನ ಕೂಡ ಜಾಸ್ತಿ ಮಾಡಲಾಗಿತ್ತು. ಆ ದೆಸೆಯಿಂದ ಅವನು ಇನ್ನು ಎರಡು ದಿನಕ್ಕೇ ಇನ್ನೊಂದು ಸ್ಥಳಕ್ಕೆ ಪ್ರಾಜೆಕ್ಟ್ ಸೈಟ್ ಭೇಟಿ ನೀಡಲು ಹೋಗಲೇ ಬೇಕಿತ್ತು.

ಸುಲತಾಳಿಗೆ ತನ್ನ ಹಳ್ಳಿಯೊಂದು ಬಿಟ್ಟು ಯಾವುದೇ ದೊಡ್ಡ ಊರು ನೋಡಿ ಸಹ ಗೊತ್ತಿರಲಿಲ್ಲ. ತಲುಪಿದ ಮಾರನೇ ದಿನ ಅವನು ಸೂಪರ್ ಸ್ಟೋರ್ ಗೆ ಹೋಗಿ ಮನೆಗೆ ಬೇಕಾಗುವ ಸಾಮಾನು ತರಕಾರಿಗಳನ್ನು ತಂದು ಹಾಕಿದ್ದ. ಉಳಿದ ಇನ್ನೊಂದು ದಿನ ಅವನು ಮನೆಯ ಹತ್ತು ಹಲವಾರು ಉಪಕರಣಗಳನ್ನು ಹೇಗೆ ಉಪಯೋಗಿಸುವುದು, ಮನೆಗೆ ಹೇಗೆ ಬೀಗ ಹಾಕುವುದು, ಅಡುಗೆ ಮನೆಯ ಸ್ಮೋಕ್ ಡಿಟೆಕ್ಟರ್ ಬಗ್ಗೆ ಮುಂತಾದ ಕೆಲವು ಮಾಹಿತಿ ನೀಡಿದ. ಮೂರನೇ ದಿನ ಫುರ್ ಅಂತ ಹಾರಿ ಹೋದ. 

ಸುಲತಾಗೆ ಏನೂ ಮಾಡ ಬೇಕೆಂಬುದೇ ತೋಚಲಿಲ್ಲ. ಕಿಟಕಿಯ ಪರದೆಯನ್ನು ಸರಿಸಿದರೆ ಏನಿದೆ ಅಲ್ಲಿ ನೋಡಲು? ಎಲ್ಲೆಲ್ಲೂ ಹಿಮದ ರಾಶಿ. ಕಣ್ಣು ನೋವಾಗುವಷ್ಟು ಬಿಳಿ. ಒಂದು ನರಪಿಳ್ಳೆಯ ಸುಳಿವು ಕೂಡ ಸಿಗದಷ್ಟು ಹಿಮದ ರಾಶಿ. ಪುನ: ಒಳಗೆ ಬಂದು ಟಿ ವಿ ನಾದರೂ ನೋಡುವ ಅಂದರೆ ಹಲವಾರು ಇಂಗ್ಲಿಷ್ ಚ್ಯಾನೆಲ್ ಗಳು. ಅವಳ ಕಲಿತ ಹಳ್ಳಿಯ ಇಂಗ್ಲಿಷ್ ಗೂ ಇದಕ್ಕೂ ತಾಳೆಯಾಗಲಿಲ್ಲ  ಅರ್ಥಕೂಡ ಆಗಲಿಲ್ಲ. ಸುಮ್ಮನೆ ಚಿತ್ರಗಳನ್ನು ನೋಡುತ್ತ ಕುಳಿತಳು. ಅಡಿಗೆ ಮನೆಗೆ ಹೋದರೆ ಯಾವ್ ಯಾವುದು ಎಲ್ಲಿದೆ ಅಂತ ಹುಡುಕುವುದೇ ಅರ್ಧ ದಿನ ಆಯಿತು. ಅಷ್ಟರಲ್ಲಿ ಒಗ್ಗರಣೆಯ ಹೊಗೆ ತುಂಬಿ ಸ್ಮೋಕ್ ಸೈರನ್ ಶುರು ಹಚ್ಚಿಕೊಂಡಿತು. ಸುಲತಾ ತಬ್ಬಿಬ್ಬಾಗಿ ನೋಡುತ್ತ ನಿಂತಿರಬೇಕಾದರೆ ಹೊರಗಡೆ ಬಾಗಿಲು ದಬ ದಬನೆ ಸದ್ದು ಮಾಡಿತು. ಬಾಗಿಲು ತೆಗೆದಾಗ ಮೂರು ನಾಲ್ಕು ಸಮವಸ್ತ್ರಧಾರಿಗಳು ಇಂಗ್ಲಿಷ್ ನಲ್ಲಿ ಏನೇನೋ ಕೇಳುತ್ತ ಅವಳಿಂದ ಉತ್ತರ ಬಾರದೆ ಅವಳನ್ನು ದೂಡಿಕೊಂಡು ಅಡಿಗೆ ಮನೆ ಕಡೆ ಓಡಿದರು. ಅವರು ಸ್ಮೋಕ್ ಅಲಾರಾಂ ಅನ್ನು ಬಂದ್ ಮಾಡಿ ಹೊರಹೊರಟರು. ಆಮೇಲೆ ಅಡಿಗೆ ಮನೆಗೆ ಹೋಗುವ ದುಸ್ಸಾಹಸ ಮಾಡಲಿಲ್ಲ ಸುಲತಾ. ಫ್ರಿಜ್ ನಲ್ಲಿದ್ದ ಚಾಕೋಲೇಟ್ ಹಣ್ಣುಗಳನ್ನು ತಿಂದಳು. ಎರಡು ದಿನದ ನಂತರ ಬರಲಿರುವ ಪ್ರಶಾಂತ್ ನ ದಾರಿ ಕಾಯುತ್ತ. ಆದರೆ ಅವನು ಹೋದ ಊರಲ್ಲಿ ಹಿಮದ ಜತೆ ಧಾರಾಕಾರವಾಗಿ ಮಳೆ ಸುರಿದು ಆ ಊರಿನಿಂದ ಅಲ್ಲಾಡಲು ಆಗದಷ್ಟು ವಿಪರೀತ ಪರಿಸ್ಥಿತಿ ಹುಟ್ಟಿಕೊಂಡಿತು. ಅವನು ಫೋನ್ ಮಾಡಿ ಸುಲತಾಗೆ ಸಧ್ಯಕ್ಕೆ ಬರಲು ಆಗಲಿಕ್ಕಿಲ್ಲ, ಆದರೆ ನೀನು ವರಿ ಮಾಡಬೇಡ ವೀಕ್ ಎಂಡ್ ನನ್ನ ಕನ್ನಡಿಗ ಫ್ರೆಂಡ್ ಮತ್ತು ಅವನ ಹೆಂಡತಿ ನಮ್ಮಲ್ಲಿಗೆ ಬಂದಿರುತ್ತಾರೆ. ಅವನು ಸೋಮವಾರ ಹೊರಡುತ್ತಾನೆ, ಅವನ ಹೆಂಡತಿ ರಮಾ ನಿನಗೆ ಈ ದೇಶದ ರೀತಿ ನೀತಿ ತಿಳಿಸುತ್ತಾಳೆ. ನಾನು ಬರುವುದು ವಿಳಂಬ ವಾಗುತ್ತದೆ ಸ್ವಲ್ಪ ತಡಕೋ ಚಿನ್ನ ಎಂದಾಗ ಅವಳಿಗೆ ಅಳು ಉಕ್ಕಿ ಬಂತು.

ಸ್ಮೋಕ್ ಸೈರನ್ ಆಫ್ ಮಾಡಿದ್ದು ನೋಡಿಟ್ಟುಕೊಂಡಿದ್ದಳು ಸುಲತಾ. ಹಾಗಾಗಿ ಪ್ರಶಾಂತನ ಮಿತ್ರರ ಕುಟುಂಬ ಕನ್ನಡದವರೆಂದು ಕೇಳಿ ಸಂತಸದಿಂದ ಅವಳು ಅಡಿಗೆ ಮಾಡಲು ಆರಂಭಿಸಿದಳು. ಅಮ್ಮ ಊರಿನಿಂದ ಬರುವಾಗ ಕಟ್ಟಿಕೊಟ್ಟ ಸಾಂಬಾರ್, ಹುಳಿ ಪೌಡರ್, ಉಪ್ಪಿನಕಾಯಿ ಹಪ್ಪಳ, ಸಂಡಿಗೆ ಎಲ್ಲ ಟೇಬಲ್ ಮೇಲೆ ಅಣಿಮಾಡಿಟ್ಟುಕೊಂಡಳು. ಸ್ವಲ್ಪ ರಸಂ, ಒಂದು ಮಿಶ್ರ ತರಕಾರಿಗಳ ಹುಳಿ, ಹಪ್ಪಳ ಸಂಡಿಗೆ ಕರಿದಿಟ್ಟು ಪುನ: ಸ್ಮೋಕ್ ಸೈರನ್ ಆನ್ ಮಾಡಿಟ್ಟಳು. ಪ್ರಶಾಂತ ತಂದ ಸಾಮಾನುಗಳಲ್ಲಿ ಒಂದು ದೊಡ್ಡ ಪ್ಯಾಕೆಟ್ ಅಕ್ಕಿಯನ್ನು ನೋಡಿದಳು. ಪೊಟ್ಟಣದ ಹಿಂಬದಿಯಿದ್ದ ಅನ್ನ ತಯಾರು ಮಾಡುವ ಬಗೆ ಓದಿ, ಗ್ಯಾಸ್ ಸ್ಟವ್ ಮೇಲೆ 'ಬಸಿದು ಹಾಕಿದ ಅನ್ನ' ಮಾಡಿಟ್ಟಳು. ಅನ್ನ ಬಿಡಿ ಬಿಡಿಯಾಗಿ ಮಲ್ಲಿಗೆ ತರಹ ಸಿದ್ದವಾಯಿತು. ಇನ್ನೂ ಅವಳು ಮೈಕ್ರೋವೇವ್ ಡಿಶ್ ವಾಶರ್ ಬಗ್ಗೆ ಕಲಿಯಬೇಕಿತ್ತಷ್ಟೆ. ಶುಕ್ರವಾರ ಸಂಜೆ ಪ್ರಶಾಂತ ನ ಮಿತ್ರರು ಪರಶು- ರಮಾ- ಮನೆಗೆ ತಲುಪುವಾಗ ತಡ ರಾತ್ರಿ. ಹಿಮದ ದೆಸೆಯಿಂದ ಜಾರದಂತೆ ನಿಧಾನಕ್ಕೆ ಗಾಡಿ ಚಲಾಯಿಸಿಕೊಂಡು ಬಂದಿದ್ದರು. ಹಲವಾರು ದಿನಗಳ ನಂತರ ಕನ್ನಡ ಮಾತನಾಡಲು ಸಿಕ್ಕಿದ್ದು ಸುಲತಾಗೆ ತುಂಬ ಖುಶಿ. ಅಡಿಗೆಯನ್ನು ಮೈಕ್ರೋವೇವ್ ಪಾತ್ರೆಯಲ್ಲಿ ಬಿಸಿ ಮಾಡಿಕೊಡುವ ಮೊದಲ ಪಾಠ ರಮಾಳಿಂದ ಸುಲತಾಗೆ. ಅಡಿಗೆಯನ್ನು ಹೊಗಳಿ ಹೊಗಳಿ, ಸುಲತಾಳ ಸ್ಮೋಕ್ ಅಲರಾಂ ಕತೆ ಕೇಳಿ ನಕ್ಕು, ಅವಳು ಅಡಿಗೆ ಮಾಡುವಾಗ ಅದನ್ನು ಬಂದ್ ಮಾಡಿಟ್ಟಿದ್ದಕೆ ಹೊಗಳಿ ಇಬ್ಬರೂ ಊಟ ಮಾಡಿ ಬೇಗನೆ ಮಲಗಿ ಬಿಟ್ಟರು. ಸುಲತಾ ಅಡಿಗೆ ಮನೆ ಚೊಕ್ಕ ಮಾಡಿಟ್ಟು, ರಮಾ ತನಗೋಸ್ಕರ ತಂದಿದ್ದ ಹೂ ಗುಚ್ಛ ನೋಡಿದಳು. ಅದರಲ್ಲಿನ ಹೂ ಗಳನ್ನು ಬಿಡಿಸಿಟ್ಟು ದೊಡ್ಡ ಅಲಂಕಾರಿಕ ಪಾತ್ರೆಯಲ್ಲಿ ಅದನ್ನು ಸುಂದರವಾಗಿ ಜೋಡಿಸಿಟ್ಟಲು. ಆಮೇಲೆ ಮಾಡಲು ಏನೂ ಕೆಲಸವಿಲ್ಲದಿದ್ದುರರಿಂದ ಅವಳು ತನ್ನ ಕೋಣೆಗೆ ಹೋಗಿ ಮಲಗಿ ಬಿಟ್ಟಳು.

ಭಾನುವಾರ ಬೆಳಿಗ್ಗೆ ರಮಾ ಎದ್ದಿದ್ದವಳೆ, ಸುಲತಾ ಒಳಗೆ ಕಾಫಿ ಹೇಗೆ ಮಾಡುವುದೆಂದು ತಲೆ ಕೆರೆದುಕೊಳ್ಳುತ್ತಿದ್ದರೆ, ಹೊರಗಿನಿಂದ ವಾವ್ ಎನ್ನುವ ಉದ್ಗಾರ ಕೇಳಿಸಿತು. ಹೊರಗಡೆ ಬಂದು ನೋಡಿದಾಗ, ಹಿಂದಿನ  ರಾತ್ರಿ ಸುಲತಾ ಜೋಡಿಸಿಟ್ಟ ಹೂಗಳ ಸಾಲುಗಳನ್ನು ಬಿಟ್ಟ ಬಾಯಿಯಿಂದ ತದೇಕಚಿತ್ತಳಾಗಿ ನೋಡುತ್ತಿದ್ದ ರಮಾ ಕಾಣಿಸಿದಳು. ಅರೇ ಯಾರ್ ತುಂಬಾ ಚೆನ್ನಾಗಿದೆ ಹೂಗಳ ಜೋಡನೆ, ಇದನ್ನೆ ಬಿಸಿನೆಸ್ ಆಗಿ ಮಾಡಿದರೆ ತುಂಬ ದುಡ್ಡು ಮಾಡಬಹುದು ನೀನು ಎಂದಳು. 
ನಂತರ ಸುಲತಾಳನ್ನು ಬೇಸ್‌ಮೆಂಟ್ ಕೆ ಕರೆದುಕೊಂಡು ಹೋಗಿ ವಾಶಿಂಗ್ ಮಶೀನ್ ಹೇಗೆ ನಡೆಸುವುದು, ಡಿಶ್ ವಾಶರ್ ಹೇಗೆ ಉಪಯೋಗಿಸುವುದು ಮುಂತಾದನ್ನು ಕಲಿಸಿದಳು. ಸೋಮವಾರ ಬೆಳಿಗ್ಗೆ ಅವಳನ್ನು ಹತ್ತಿರದ ಮಾಲ್, ಆಸ್ಪತ್ರೆ, ಲೈಬ್ರರಿ, ಶಾಲೆ ಗಳನೆಲ್ಲ ಪರಿಚಯಿಸಿದಳು ರಮಾ. ಮೊದಲಿಗೆ ನೀನು ಡ್ರೈವಿಂಗ್ ಕಲೀಬೇಕು ಇಲ್ಲದಿದ್ದರೆ ನೀನು ಸಿಕ್ಕಾಕೋತೀಯಾ ಇಲ್ಲಿ ಬಸ್ ಗಳು ತುಂಬಾ ಕಡಿಮೆ. ನೀನಿರುವ ಊರಿಗೆ ಸಬ್‌ಅರ್ಬ್ಸ್ ಅನ್ನುತ್ತಾರೆ. ಸಿಟಿಯಾದರೆ ನಿನಗೆ ಬಸ್ ಗಳು ಮಾತ್ರವಲ್ಲ ಎಲ್ಲ ಸಾಮಾನು ಸರಂಜಾಮುಗಳು ಅಕ್ಕಪಕ್ಕದಲ್ಲೇ ಸಿಗುತ್ತವೆ. ಆ ಮೇಲೆ ಅವಳಿಗೆ ಅಲ್ಲಿನ ಹವಾಮಾನಕ್ಕನುಗುಣವಾದ ಬಟ್ಟೆಗಳನ್ನು ಕೊಡಿಸಿದಳು. ಎಲ್ಲ ಕಾರ್ಡ್ ಮೂಲಕ ಖರೀದಿ. ನೀನೇನು ಚಿಂತೆ ಮಾಡಬೇಡ ಸುಲ್ಲ್ (ಆಗಲೇ ಅವಳ ಹೆಸರು ಕೂಡ ಚಿಕ್ಕಾದಾಯಿತು) ಪ್ರಶಾಂತ ಬಂದ ಮೇಲೆ ದುಡ್ಡು ನನ್ನ ಎಕೌಂಟ್ ಗೆ ಟ್ರಾನ್ಸ್ಫರ್ ಮಾಡುತ್ತಾನೆ. ನೀನು ನಿಶ್ಚಿಂತೆಯಿಂದ ಏನೇನು ಬೇಕೋ ಅದನ್ನು ತೆಗೆದುಕೋ. ಆದರೆ ಸುಲತಾಗೆ ಏನು ತೆಗೆದುಕೊಳ್ಳಬೇಕೆಂದು ಒಂದೂ ತೋಚಲಿಲ್ಲ. 

ಮುಂದಿನ ಮೂರು ವರ್ಷ ಕಳೆಯುವುದರಲ್ಲಿ ಕಾರ್ ಚಲಾಯಿಸುವುದನ್ನು  ಕಲಿತುಕೊಳ್ಳುವುದರಿಂದ ಅಲ್ಲಿನ ಜನರ ಹಾಗೆ ಆಂಗ್ಲ ಭಾಷೆಯನ್ನು ಮಾತನಾಡುವ ಕೋರ್ಸ್ ಮಾಡಿಕೊಂಡು, ಹಳ್ಳಿ ಗೌರಮ್ಮನ ತರಹ ಆಗಿರದೇ, ಅಲ್ಲಿನ ಜನರ ಹಾಗೇ ಉಡುಗೆ ತೊಡುಗೆಗಳನ್ನು ರೂಢಿಮಾಡಿಕೊಂಡು ಸ್ಮಾರ್ಟ್ ಆಗಿ ಪರಿವರ್ತನೆಗೊಂಡಳು, ಚುರುಕು ಬುದ್ದಿಯ ಸುಲತಾ. ಹಾಗೇ ಅವಳು ಇಂಗ್ಲಿಷ್ ನ ಉನ್ನತ ವ್ಯಾಸಂಗಕ್ಕೆ  ಕಲಿಯಲಾರಂಭಿಸಿದಳು. ಕಂಪ್ಯೂಟರ್ ಇಂಟರ್ನೆಟ್ ಗಳಲ್ಲಿಯೂ ತಕ್ಕಮಟ್ಟಿಗೆ ಪರಿಣಿತಿ ಸಾಧಿಸಿದಳು. ಈಗ ಅವಳು ಚೊಚ್ಚಿಲ ಬಸುರಿ.

ಆದರೆ ವಿಧಿಯಾಟ ಬೇರೆ ನೆ ಆಗಿತ್ತು. ಒಂದು ಸಂಜೆ ಆಫಿಸ್ ನಿಂದ ಮರಳುವಾಗ ಪ್ರಶಾಂತ ನ ಕಾರಿಗೆ, ನಿಯಂತ್ರಣ ತಪ್ಪಿದ ಟ್ರಕ್ ಒಂದು ಬಡಿದು, ಪ್ರಶಾಂತ ಜೀವಾಪಾಯದಿಂದೇನೋ ಪಾರಾದ ಆದರೆ ಮೈ ಮೇಲಿನ ನಿಯಂತ್ರಣ ಕಳೆದುಕೊಂಡು ಮಲಗಿದ್ದಲ್ಲಾದ. ಸ್ನೇಹಿತರು ಆಪ್ತೇಷ್ಟರು, ಆಫೀಸಿನ ಸಹೋದ್ಯೋಗಿಗಳೆಲ್ಲ ತುಂಬ ನೆರವಾದರು. ಆದರೆ ಅವನು ಅಲ್ಲಿನ ಕೆಲಸ ಕಳೆದುಕೊಳ್ಳಬೇಕಾಯಿತು. ಸಾಕಷ್ಟು ದುಡ್ಡು, ಇನ್ಸೂರೆನ್ಸ್ ಹಾಗೂ ಅಪಘಾತ ಮಾಡಿದ್ದ ಟ್ರಕ್ ಕಂಪೆನಿ ವತಿಯಿಂದ ದೊಡ್ಡ ಜುಲ್ಮಾನೆಯ ಮೊತ್ತ ಇವರ ಕೈಗೆ ಬಂದಿತ್ತು. ಆದರೆ ಸುಮ್ಮನೆ ಕೂತು ತಿಂದರೆ ಕೂಡಿಟ್ಟ ದುಡ್ಡು ಬೇಗನೆ ಖರ್ಚಾಗುತ್ತೆಂದು, ಹಾಗೂ ಬೇರೆ ದಾರಿಗಾಣದೆ ಇಬ್ಬರೂ ಭಾರತಕ್ಕೆ ಬರುವ ಹಾಗಾಯಿತು.

ಭಾರತಕ್ಕೆ ಬಂದ ಮೇಲೆ ಬೆಂಗಳೂರಿನಲ್ಲಿ ನೆಲೆಸುವುದಂತಾಯಿತು. ಅವರು ಮಾಡಿದ ಮೊದಲ ಕೆಲಸ ಒಂದು ದೊಡ್ಡ ಎರಡಂತಸ್ತಿನ ಮನೆ ಖರೀದಿ ಮಾಡಿದ್ದು. ಮನೆ ಹೊಸದಾಗೇ ಇತ್ತು ಆದುದರಿಂದ ಮನೆಯಲ್ಲಿ ವ್ಹೀಲ್ ಚೇರ್ ಓಡಾಡುವ ಹಾಗೆ ಸ್ವಲ್ಪ ಬದಲಾವಣೆ ಮಾಡಲಾಯಿತು. ಮೇಲಂತಸ್ಥಿನ ಮನೆಯನ್ನು ಬ್ರಿಗೆಡಿಯರ್ ಒಬ್ಬರಿಗೆ ಬಾಡಿಗೆಗೆ ನೀಡಲಾಯಿತು. ಬ್ರಿಗೇಡಿಯರ್ ಅವರು ನಿವೃತ್ತಿ ಪಡೆದುಕೊಂಡಿದ್ದರು. ಮಗಳು ಬೆಂಗಳೂರಿನ ಕಾಲೇಜು ಒಂದರಲ್ಲಿ ಮೆಡಿಕಲ್ ಓದುತ್ತಿದ್ದರಿಂದ, ದೂರದ ಅಂಬಾಲಾದಿಂದ ಬೆಂಗಳೂರಿನಲ್ಲಿ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಬಂದು ಬಾಡಿಗೆ ಮನೆಯಲ್ಲಿದ್ದರು. ಸುಲತಾಳ ಬಾಣಂತನಕ್ಕೆ ತುಂಬಾನೇ ಸಹಾಯ ಮಾಡಿದ್ದರು ದಂಪತಿಗಳು. ಹಾಗೂ ಅವರ ಮನೆಯಲ್ಲಿ ಕೆಲಸಕ್ಕಿದ್ದವಳು ಇವರ ಮನೆಯಲ್ಲೂ ಕೆಲಸ ಮಾಡಿಕೊಡುತ್ತಿದ್ದಳು.

ಬ್ರಿಗೆಡಿಯರ್ ಅವರಿಗೆ ಕೆಲ ಜನ ಪ್ಂಜಾಬಿ ಸ್ನೇಹಿತರಿದ್ದರು. ಅವರಿಗೆ ಆವಾಗಾವಾಗ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗುತ್ತಿತ್ತು. ಒಂದು ಸಲ ಸುಲತಾ ಅವರಿಗೆ ಚಂದದ ಹೂವಿನ ಎರೆಂಜ್ ಮೆಂಟ್ ಮಾಡಿಕೊಟ್ಟಿದ್ದಳು. ಎಲ್ಲರಿಂದ ವಾಹ್ ವಾಹ ಶಭಾಸ್ ಗಿರಿ ಪಡೆದ ಹಿನ್ನಿಲೆಯಲ್ಲೇ ಬ್ರಿಗೆಡಿಯರ್ ಆಂಟಿ (ಸುಲತಾ ಅವರನ್ನು ಹಾಗೇ ಸಂಬೊಧಿಸುತ್ತಿದ್ದಳು) ನೀನ್ಯಾಕೆ ಜನರಿಗೆ ಹೂವಿನ ವಿನ್ಯಾಸ ಮಾಡಿ ಕೊಡಬಾರದು ಅಂತ. ಅವಳಿಗೆ ಆ ಉಪಾಯ ತುಂಬ ಇಷ್ಟ ವಾಯಿತು.

ಅವರ ಸ್ನೇಹಿತರಲ್ಲೆ ಮೊದಲು ಮೊದಲು ಹೋಗಿ ಹೂವಿನ ವಿನ್ಯಾಸಗಳನ್ನು, ಪಾರ್ಟಿ ರೂಮ್ ಅನ್ನು ಚೆಂದವಾಗಿ ವಿನೂತನ ರೀತಿಯಲ್ಲಿ. ಎಲ್ಲೂ ರಿಪೀಟ್ ಆಗದಂತೆ ಸಿಂಗರಿಸುವುದನ್ನು ಕಲಿತು ದುಡ್ಡು ಮಾಡತೊಡಗಿದಳು. ಮಗು ಹುಟ್ಟಿ ದ ಸಮಯ ಮಲಗಿದ್ದಲ್ಲಿ ಸುಮ್ಮನಿರದೆ ನೆಟ್ ನಲ್ಲಿ ಫ್ಲವರ್ ಎರೆಂಜ್‌ಮೆಂಟ್‌ನಲ್ಲಿ ಬಳಸುವ ಹೊಸ ಹೊಸ ಪರಿಕರಗಳ ಬಗ್ಗೆ ಓದಿ ತಿಳಿದುಕೊಂಡಳು. ಮಗುವಿಗೆ ಒಂದು ವರೆ ತಿಂಗಳು ಆಗುವಷ್ಟರಲ್ಲಿ ಅವಳು ಒಂದು ದಿನ ಕಮರ್ ಶಿಯಲ್ ಸ್ಟ್ರೀಟ್ ಗೆ ಹೋಗಿ ಬಗೆ ಬಗೆಯ ಅಲಂಕಾರಿಕ ಸಾಮಗ್ರಿಗಳನ್ನು ತಂದು ಇಡಲಾರಂಭಿಸಿದಳು. ಮನೆಯ ಒಂದು ಕೊಠಡಿ ಅವಳ ಈ ಕಿರು ಉದ್ಯಮಕ್ಕೆ ಮೀಸಲಿಟ್ಟು ಕೊಂಡಳು. ಎರಡು ಮೂರು ಹೂವಿನ ವ್ಯಾಪಾರಿಗಳ ಬಳಿ ಒಪ್ಪಂದ ಮಾಡಿಕೊಂಡಳು. ಅವರ ಬಳಿ ತಾನು ಆಗಷ್ಟೆ ಮಾಡಿಟ್ಟು ಕೊಂಡ ಚೆಂದದ ವಿಸಿಟಿಂಗ್ ಕಾರ್ಡ್ ಗಳನ್ನು ಕೊಟ್ಟಿದ್ದಳು. ಅವಳು ಹೊರಗೆ ಹೋದಾಗಲೆಲ್ಲ ಬ್ರಿಗೆಡಿಯರ್ ಆಂಟಿ ಮಗುವನ್ನು ನೋಡಿಕೊಳ್ಳುತ್ತಿದ್ದಳು. ಹೀಗೆ ವಾರಕ್ಕೆ ಮೂರು ನಾಲ್ಕು ಮನೆ/ಹಾಲ್ ಗಳನ್ನು ಸಿಂಗರಿಸುವ ಅವಳಿಗೆ ಈಗ ಬಿಡುವಿಲ್ಲದ ಕೆಲಸ. ಮೌಖಿಕವಾಗಿ ಅವಳ ಈ ಕಲಾ ಕೌಶ್ಯಲ್ಯದ ಮಾತು ಹಬ್ಬಿ ಈಗ ಅವಳು ಹೊರದೇಶದಲ್ಲೂ ಬೇಡಿಕೆಯಿರುವ ಹೂವಿನ ವಿನ್ಯಾಸಕಿ. ಈ ಸಲ ಅವಳು ಮೊದಲ ಬಾರಿಗೆ ಒಬ್ಬಳೆ ವಿದೇಶಕ್ಕೆ ಹೊರಟಿದ್ದಾಳೆ. ಅಲ್ಲಿ ಒಬ್ಬರ ಮನೆಯ ಮದುವೆಗೆ ಹೂವಿನ ಅಲಂಕಾರ ಎಲ್ಲ ಸುಲತಂದ್ದೆ. ಪ್ರಶಾಂತ ಗೆ ಅವಳ ಬಗ್ಗೆ ತುಂಬ ಹೆಮ್ಮೆ. ತನ್ನ ಕೊನೆಯ ಶಸ್ತ್ರ ಚಿಕಿತ್ಸೆಯ ನಂತರ ವೈದ್ಯರು ಅವನ ದೇಹದ ಸ್ಥಿತಿ 90 % ಸರಿಯಾಗುವ ಭರವಸೆ ನೀಡಿದ್ದಾರೆ. ತಾನು ಓಡಾಡುವಂತಾದ ಮೇಲೆ ಅವಳಿಗೆ ತನ್ನ ಪೂರ್ಣ ಸಹಕಾರ ನೀಡುವ ನಿಟ್ಟಿನಲ್ಲಿ ಆಲೋಚಿಸುತ್ತಿದ್ದಾನೆ. ಮೋಡ ಕವಿದ ವಾತಾವರಣದಲ್ಲಿ ಮೂಡಿದ ಸೂರ್ಯಕಿರಣಗಳಿಂದ ಮನೆಯೊಳಗೆ ಹೊಂಬೆಳಕು ಹರಡಿತು.

ಒಟ್ಟು ಜೀವನದ ಬಂಡಿ ಸಾಗುತ್ತಿದ್ದೆ. ಈಗ ಸುಲತಾ ಳ ಮುಂದಿನ ಯೋಚನೆ ಮಗಳ ಭವಿಷ್ಯ. ಕೂಡಿಟ್ಟಿದ ಹಣದಿಂದ ಸಣ್ಣದೊಂದು ತರಬೇತಿ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿದ್ದಾಳೆ. ಅಲ್ಲದೇ ಕೆಲ ಅನಾಥಾಶ್ರಮದ ಹುಡುಗಿಯರಿಗೆ ತನ್ನ ಅಸಿಸ್ಟೆಂಟ್ ಆಗಿ ತರಬೇತು ಗೊಳಿಸಿ ಅವರ ಜೀವನೋಪಾಯಕ್ಕೆ ದಾರಿ ಮಾಡಿದ್ದಾಳೆ. 

ತನ್ನ ಆಲೋಚನೆಯನ್ನು ಮೊಟಕುಗೊಳಿಸಿ ಬೇಗ ಬೇಗ ತಯಾರಾಗಿ ಎರಡು ಕಡೆ ಹೂವಿನ ವಿನ್ಯಾಸ ಮಾಡಿ ಮಧ್ಯಾಹ್ನದ ನಂತರ ಹೊರ ದೇಶಕ್ಕೆ ಹೊರಡಲು ಕೆಲವು ಲಾಸ್ಟ್ ಮಿನಿಟ್ ಎರೆಂಜ್ ಮೆಂಟ್ ಮಾಡಲಿಕ್ಕಿದೆ. ಅವಳು ಬರುವ ತನಕ ಅವಳ ಅಮ್ಮ ಹಾಗೂ ಅತ್ತೆ ,ಇಬ್ಬರೂ ಸೇರಿ ಮನೆಯನ್ನು ನೋಡುಕೊಳ್ಳುತ್ತಿದ್ದಾರಾದ್ದರಿಂದ ಅವಳು ಪ್ರಶಾಂತ ಹಾಗೂ ಪುಟ್ಟ ಕಂದಮ್ಮಳನ್ನು ಅವರಿಗೊಪ್ಪಿಸಿ ನಿಶ್ಚಿಂತೆಯಿಂದ ಹೋಗಿ ಬರಲು ಅನುವಾಗುತ್ತಿದ್ದಾಳೆ.
(ಕಥೆ ಅಲ್ಲ ಕೇಸ್ ಸ್ಟಡಿ ಅಂತ ಓದಲೇನಡ್ಡಿಯಿಲ್ಲ)
:-)

August 25, 2012

ನಂಬಿಕೆ

ಪ್ರಖ್ಯಾತ ಪಂಡಿತರೊಬ್ಬರು ನದಿಯ ಆಚೆ ಬೀಡುಬಿಟ್ಟಿದ್ದರು. ಅಲ್ಲಿ ಒಂದು ಪುಟ್ಟ ಕುಟೀರ ಕಟ್ಟಿ ತಂಗಿದ್ದರು. ದಿನ ನಿತ್ಯ ಮುಂಜಾನೆ ಊರಿನ ಜನರೆಲ್ಲ ಅವರ ಕುಟೀರದ ಮುಂದೆ ಜಮಾಯಿಸಿ, ಈ ಲೋಕದ ಪರಿವೆಯೆ ಇಲ್ಲದೆ ಎರಡು ತಾಸು ಅವರ ಪ್ರವಚನ ಕೇಳುತ್ತಿದ್ದರು. ಆ ಊರಿನ ಜಮೀನ್ದಾರರು ನದಿ ಈಚೆ ಬದಿ ಇದ್ದರು. ಅವರ ಮನೆಯಿಂದ ದಿನ ನಿತ್ಯ ಆ ಪಂಡಿತರಿಗೆ ಶುದ್ದ ಹಾಲು ಕೊಟ್ಟು ಬರುವ ಕೆಲಸ ಮೋತಿ ಎಂಬ ಗೊಲ್ಲರ ಯುವತಿಯ ಪಾಲಿಗೆ ಬಿದ್ದಿತು. ಪ್ರತೀ ದಿನ  ಸೂರ್ಯೋದಯ ಆದ ಕೆಲ ಹೊತ್ತಿಗೆ ಅವಳು ದೋಣಿಯ ಮೂಲಕ ನದಿ ದಾಟಿ ಕುಟೀರಕ್ಕೆ ಹಾಲು ಕೊಟ್ಟು ಸ್ವಲ್ಪ ಹೊತ್ತು ಪಂಡಿತರ ಪ್ರವಚನ ಕೇಳಿ ಪುನ: ತನ್ನ ಊರಿಗೆ ದೋಣಿಯಲ್ಲಿ ನದಿ ದಾಟಿ ಮರಳುತ್ತಿದ್ದರು. ಹೀಗೆ ಒಂದು ದಿನ ಅವಳು ಪಂಡಿತರಿಗೆ ಹಾಲು ಕೊಟ್ಟು ಹೊರಡಲು ಅನುವಾದಾಗ ಪಂಡಿತರು ಅವಳನ್ನು ನಿಲ್ಲಿಸಿ, 'ನಾಳೆಯಿಂದ ನಾನು ಹೊಸದೊಂದು ವೃತವನ್ನು ಕೈಗೊಂಡಿದ್ದೇನೆ, ಆದ್ದರಿಂದ ನನಗೆ ಸೂರ್ಯೋದಯಕ್ಕೆ ಒಂದು ಗಂಟೆ ಮುಂಚೆಯೇ ಹಾಲು ಬೇಕಾಗುತ್ತದೆ." "ಓ, ಅದಕ್ಕೇನಂತೆ, ಹಾಗೆಯೇ ಆಗಲಿ' ಎಂದಳು ಮೋತಿ.

ಮರು ದಿನ ಅವಳು ಹೆದರುತ್ತಲೆ  ಪಂಡಿತರೆದುರಿಗೆ ಹೋಗಿ ನಿಂತಳು, ಪಂಡಿತರೇ ಕ್ಷಮಿಸಬೇಕು. ನಾನೇನೋ ಹೊತ್ತಿಗೆ ಮುಂಚೆ ನದಿ ತೀರದಲ್ಲಿ ಕಾಯುತ್ತಿದ್ದೆ. ಆದರೆ ದೋಣಿಯವನು ಬರಲೇ ಇಲ್ಲ. ಮತ್ತು ಮಳೆಗಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ನದಿ ನೀರಿಗೆ ಸೆಳೆತ ಜಾಸ್ತಿಯಂತೆ ಆದ್ದುದರಿಂದ ಅವನಿಗೆ ಬೆಳಿಗ್ಗೆ ಬೇಗನೆ ಬರಲಾಗುವುದಿಲ್ಲವಂತೆ. ಅದಕ್ಕೆ ಇವತ್ತು ವಿಳಂಬವಾಯಿತು.

ಪಂಡಿತರು, 'ಏನು ಇಲ್ಲಿಗೆ ಬರಬೇಕಾದರೆ ನೀನು ದೋಣಿಯನ್ನು ಅವಲಂಬಿಸಬೇಕೆ? ನನಗೆ ಗೊತ್ತಿರುವ ಮೂಲಗಳ ಪ್ರಕಾರ ಶ್ರೀ ವಿಷ್ಣುವಿನ ಹೆಸರು ಹೇಳಿದರೆ ನದಿ ದಾರಿ ಬಿಟ್ಟುಕೊಡುತ್ತದೆಯಂತೆ' ಅಂತ ತಮಾಷೆಗೆ ಹೇಳಿದರು. ಮೋತಿಗೆ ಅತ್ಯಾಶ್ಚರ್ಯ. ಮಹಾನ ಪಂಡಿತರು. ಜನರನ್ನು ಎರೆಡೆರಡು ಗಂಟೆಯ ಕಾಲ ಕೇವಲ ಅವರ ಮಾತನಿಂದ ಮಂತ್ರಮುಗ್ದರಾಗಿಸಿ  ಹಿಡಿದಿಟ್ಟುಕೊಳ್ಳುವವರು, ನನಗೆ, ಒಬ್ಬ ಹಾಲು ಹಾಕುವ ಗೊಲ್ಲಿತಿಗೆ ಇಷ್ಟು ದೊಡ್ಡ ಗುಟ್ಟೊಂದನ್ನು ಹೇಳುತ್ತಿದ್ದಾರೆ ಅಂತ ಧನ್ಯತಾ ಭಾವದಿಂದ 'ಈ ವಿಷಯ ನನಗೆ ಗೊತ್ತಿರಲಿಲ್ಲ' ಅಂತ ಅವಳು ಕೃತಜ್ಞತೆಯಿಂದ ಪಂಡಿತರ ಕಾಲಿಗೆ ಎರಗಿ, ಮನೆಗೆ ಹೊರಟು ಬರುತ್ತಾಳೆ.

ಮರುದಿನದಿಂದ ಸರಿ ಒಂದು ತಿಂಗಳು ಅವಳು ತಪ್ಪದೆ ಸುರ್ಯೋದಯಕ್ಕೆ ಒಂದು ಗಂಟೆ ಮುಂಚೆ ಹಾಲು  ಕುಟೀರಕ್ಕೆ ತಲುಪಿಸಿ ಬರುತ್ತಿದ್ದಳು. ಒಂದು ತಿಂಗಳು ಕಳೆದ ನಂತರ ಪಂಡಿತರು, "ಮೋತಿ ನನ್ನ ವ್ರತ ಮುಗಿದಿದೆ. ನಾಳೆಯಿಂದ ನೀನು ಮುಂಚಿನ ಹಾಗೆ ಸೂರ್ಯೋದಯದ ನಂತರ ಹಾಲನ್ನು ತಲುಪಿಸಬಹುದು. ಅದಲ್ಲದೇ ದೋಣಿಯವನಿಗೂ ನನ್ನ ಧನ್ಯವಾದ ತಿಳಿಸು. ನಿಮ್ಮಿಬ್ಬರಿಂದ ನನ್ನ ವ್ರತ ಸಾರ್ಥಕವಾಯ್ತು. ಅದಕ್ಕೆ ಮೋತಿ, 'ಪಂಡಿತರೆ, ನಿಮಗೆ ಇಷ್ಟು  ಬೇಗ ಮರೆತು ಹೋಯಿತೆ, ನಾನು ದೋಣಿಯವನ ಮೇಲೆ ಅವಲಂಬಿತ ವಾಗದೆ ದಿನ ನದಿ ನೀರಿನಲ್ಲಿ ನಡೆದುಕೊಂಡೆ ಬರುತ್ತಿದೆ, ನೀವು ಹೇಳಿಕೊಟ್ಟಿದ್ದ ಗುಟ್ಟಿನಿಂದ. ದೋಣಿಯವನು ಬರಲೇ ಇಲ್ಲ. ಆದರೆ ನಾಳೆಯಿಂದ ನಾನು ದೋಣಿಯಲ್ಲೆ ಬರುತ್ತೇನೆ, ಅಂತ ಹೇಳಿ ನದಿ ಬಳಿ ತೆರಳಿದಳು. ಪಂಡಿತರು, 'ಎಲಾ ಇವಳ ನನಗೆ ತಮಾಷೆ ಮಾಡುತ್ತಾಳೆಯೇ ಈ ಹಳ್ಳಿ ಹೆಂಗಸು?' ನೋಡೆ ಬಿಡುವ, ಅಂತ ಪಂಡಿತರು ಗೊಲ್ಲಿತಿಯನ್ನು ಹಿಂಬಾಲಿಸಿದರು.

ಗೊಲ್ಲಿತಿ ನದಿಯ ಬಳಿ ತೆರಳಿ ಭಯಭಕ್ತಿಯಿಂದ ನಮಸ್ಕರಿಸಿದಾಗ ನದಿ ಇಬ್ಭಾಗವಾಗಿ ಮಧ್ಯೆ ದಾರಿ ಮಾಡಿಕೊಟ್ಟಿತು. ಗೊಲ್ಲಿತಿ ಅದರಲ್ಲಿ ನಡೆಯುತ್ತ ಮುಂದೆ ಸಾಗಿದಳು, ಪಂಡಿತರು ಮೂರ್ಛೆ ಹೋದರು..
(faith can move mountains)

Translation of the story 
Crossing the River- from Tales  told by Mystics by Manoj Das (Sahitya Akademi)

August 19, 2012

ಏನ್ಕತೀ?

ಗೌರಮ್ಮ ಮನೆಗೆ ಬಂದು ಚಪ್ಪಲಿ ತೆಗೆದ ತಕ್ಷಣ ಗೀತಾ, 'ಗೌರಮ್ಮ ಟೇಬಲ್ ಮೇಲೆ ಬಿಸಿ ಬಿಸಿ ಅಡಿಗೆ ಇದೆ. ಮೊದಲು ಊಟ ಮಾಡಿ ಒಂದಷ್ಟು ಮಲಗಿ ಸುಧಾರಿಸಿಕೊಳ್ಳಿ, ಪ್ರಯಾಣ ಮಾಡಿ ಬಂದಿದ್ದೀರಾ' ಇವತ್ತು ಏನೂ ಅಡಿಗೆ ಕೆಲಸ ಇಲ್ಲ' ಅಂದಳು
ಗೌರಮ್ಮನಿಗೂ ಸುಸ್ತು. ಮಾನಸಿಕ ಸುಸ್ತು. ಈ ಗೀತಮ್ಮ ಯಾರೋ ಏನೋ ಎಷ್ಟು ಒಳ್ಳೆಯವರು. ಅದೇ ನಿನ್ನೆ ಮಗನ ಮನೆಗೆ ಸುಸ್ತಾಗಿ ತಲುಪಿದಾಗ ಸೊಸೆ, 'ಅತ್ತೆ ಹೇಗೂ ನೀವು ಬಂದಿದ್ದಿರಲ್ಲ ಇವತ್ತು ಅಡಿಗೆ ಮನೆ ಜವಾಬ್ದಾರಿ ನಿಮ್ಮದೆ ಅಂತ ಸೋಫಾದ ಮೇಲೆ ಮಲಗಿ, ಟಿವಿ ಯ ರಿಮೋಟ್ ಹಿಡಿದು ಕೊಂಡು, ಹಾಕಿದ್ದ ಚೂಡಿದಾರ್ ಪ್ಯಾಂಟ್ ಹರಿದು ಹೋಗಿದ್ದರ ಪರಿವೆಯೇ ಇಲ್ಲದೆ, ಕಾಲ ಮೇಲೆ ಕಾಲು ಹಾಕಿ ಮಲಗಿದ್ದು..ಭಯಂಕರ ಸಿಟ್ಟು ಬಂದಿತ್ತು ಗೌರಮ್ಮನಿಗೆ.

ಗೀತಳ ಪರಿಚಯ ಆಗಿ ಸುಮಾರು ಆರು ತಿಂಗಳು ಕಳೆದಿವೆ. ಗೌರಮ್ಮನ ಗಂಡ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಕೋಮಾಗೆ ಹೋಗಿದ್ದಾರೆ. ಗೀತಾ ಆ ಅಸ್ಪತ್ರೆಯಲ್ಲಿ ಡಾಕ್ಟರ್. ಗೌರಮ್ಮನ ಊರು ಕುಣಿಗಲ್ ಬಳಿಯ ಒಂದು ಊರು. ಜಮೀನು ಇದೆ. ಗಂಡ ಆರೋಗ್ಯದಿಂದಿರುವವರೆಗೆ ಅವರೇ ತೋಟವನ್ನು ನೋಡಿಕೊಳ್ತಾ ಇದ್ದಿದ್ದು. ಅದು ಈಗ ಅವರ ಇಬ್ಬರು ಮಗಂದಿರ ಸುಪರ್ದಿನಲ್ಲಿದೆ. ಗೌರಮ್ಮನ ಗಂಡನಿಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಆಗಲು ಹೇಳಿದಾಗ ಯಾರ ಮನೆಯಲ್ಲಿ ಇರುವುದು ಎಂದು ಆಕೆಗೆ ತಿಳಿಯಲಿಲ್ಲ. ಸಂಬಂಧಿಕರು ಪರಿಚಯಸ್ಥರು ಯಾರೂ ಇವರನ್ನು ತಮ್ಮಲ್ಲಿ ಬಂದು ಇರಲು ಹೇಳಲಿಲ್ಲ. ಎಷ್ಟು ದಿನ ಅಂತ ಹೀಗೆ ಅವರು ಆಸ್ಪತ್ರೆಯಲ್ಲಿರುವುದು. ಮಗಂದಿರಿಬ್ಬರೂ ಸರಿಯೇ ಸರಿ. ಅಪ್ಪನನ್ನು ಆಸ್ಪತ್ರೆಗೆ ದಾಖಲು ಮಾಡಿ, ಹಣಕಾಸನ್ನು ಕಟ್ಟಿ, ಇವಳ ಕೈಗೂ ಸ್ವಲ್ಪ ಹಣ ಕೊಟ್ಟು ಊರಿನ ದಾರಿ ಹಿಡಿದವರು, ಅಪರೂಪಕ್ಕೆ ಫೋನ್ ಮಾಡಿ, 'ಅಪ್ಪ ಹೇಗಿದ್ದಾರೆಂದು ಕೇಳಿ ಕೈ ತೊಳ್ಕೋತಾರೆ. ಗೌರಮ್ಮನದು ಕಷ್ಟಪಟ್ಟು ದುಡಿಯುವ ಜೀವ. ಆಸ್ಪತ್ರೆಯಲ್ಲಿ ಹೊತ್ತೇ ಹೋಗದು. ಆಗ ಪರಿಚಯವಾದವರು ಲೇಡಿ ಡಾಕ್ಟರ್ ಗೀತ. ಚಟುವಟಿಕೆಯ ಹೆಂಗಸು. ಸಾದಾ ಕಾಟನ್ ಸೀರೆಯಲ್ಲಿ ಚಂದದ ನಗು ಮುಖದ ಡಾಕ್ಟರ್. ಒಂದು ಸಲ ವಾರ್ಡ್ ಬಾಯ್ ಗೆ 'ಇವತ್ತು ಅಡಿಗೆ ಮಾಡಕ್ಕೆ ಪುರುಸೊತ್ತಾಗಲಿಲ್ಲ, ಹೊರಗಿನಿಂದ ಏನಾದರೂ ತಂದು ಕೊಡು ಅಂತ ಹೇಳ್ತಿದ್ದಾಗ ಅವರ ಕಣ್ಣು ಗೌರಮ್ಮನ ಮೇಲೆ ಹೋಯಿತು. ' ನೀವು ಏನಾದರೂ ತೆಗೊಳ್ತೀರಾ ಅಮ್ಮ, ಅಂತ ಕೇಳಿದರು' ಆದರೆ ಗೌರಮ್ಮ ಆಗಲೇ ಕ್ಯಾಂಟೀನ್ ನಿಂದ ಊಟ ತರಿಸಿ ಊಟ ಮಾಡಿಯಾಗಿತ್ತು.

ವಾರ್ಡ್ ಬಾಯ್ ತಂದುಕೊಟ್ಟಿದ್ದ ಊಟದಲ್ಲಿ ಕಾಲು ಭಾಗ ಕೂಡ ಊಟ ಮಾಡದೇ ಇದ್ದುದ್ದು ನೋಡಿ ಗೌರಮ್ಮನ ಕರುಳು ಚುರುಕ್ ಎಂದಿತು. 'ಅಲ್ಲ ದಿನ ಇಡೀ ಓಡಾಟ ಅಷ್ಟು ಊಟ ಸಾಕೇ ಡಾಕ್ತ್ರಮ್ಮ' ಅಂತ ತಡಿಯಲಾರದೇ ಕೇಳಿದಳು. "ಈ ಕ್ಯಾಂಟೀನ್ ಊಟ ಮಾಡುವುದಕ್ಕಿಂತ ಉಪವಾಸ ಇರುವುದೇ ಲೇಸು. ಒಂಚೂರು ಚೆನ್ನಾಗಿಲ್ಲ. ನಾನು ಆದಷ್ಟು ಮನೆಯಿಂದಲೇ ನನ್ನ ಊಟ ತರುವುದು. ಆದರೆ ನಿನ್ನೆ ರಾತ್ರಿಯಿಡೀ ಎಮರ್ಜೆನ್ಸಿ ಕೇಸ್ ಗಳಿದ್ದರಿಂದ ನಾನಿನ್ನೂ ಮನೆಗೆ ಕೂಡ ಹೋಗಿಲ್ಲ. ಒಬ್ಬ್ಬರ ದೇಹಸ್ಥಿತಿ ತುಂಬ ಬಿಗಡಾಯಿಸಿದೆ. ಅದು ಸರಿಯಾಗಿ ಒಂದು ಹಂತಕ್ಕೆ ಬಂದ ಮೇಲೆ ನಾನು ಮನೆಗೆ ಹೋಗುವುದು. ಈಗ ಒಂದರೆಗಳಿಗೆ ಪಕ್ಕದ ಕಾಟ್ ನಲ್ಲಿ ಮಲಗುತ್ತೇನೆ" ಅಂತ ಅಲ್ಲೇ ಅಡ್ಡಾದರು. ಗೌರಮ್ಮ ಗಂಡನ  ಬೆಡ್ಡ ಪಕ್ಕದಲ್ಲಿರುವ ಸಣ್ಣ ಬೆಂಚ್ ಮೇಲೆ ಮಲಗಿದರು. ಡಾಕಟ್ರಮ್ಮನ ಬಗ್ಗೆ ಇನ್ನಷ್ಟು ವಿಷಯ ತಿಳಿಯಲು ಅವರು ಕುತೂಹಲಿಗಳಾದರು

ಮರುದಿನ ವಾರ್ಡ್ ಬಾಯ್ ಅವರ ಗಂಡನಿಗೆ ಸ್ಪೋಂಜ್ ಬಾಥ್ ಕೊಡುವಾಗ,ಗೌರಮ್ಮ ನಿಧಾನವಾಗಿ ಡಾಕಟ್ರಮ್ಮ ನ ವಿಚಾರ ತೆಗೆದರು. ಅವರಿಗೆ ಗೊತ್ತಾಗಿದ್ದು ವಿಷಯ ಇಷ್ಟು. ಡಾಕಟ್ರಮ್ಮನ ಮನೆ ಇಲ್ಲೇ ಆಸ್ಪತ್ರೆ ಬಳಿ ಮತ್ತು ಅವರಿಗೆ ಮದುವೆಯಾಗದಿರುವುದು.ಡಾಕ್ಟ್ರಮ್ಮನ ಕನ್ಸಲೇಟಶನ್ ರೂಮ್ ಗೌರಮ್ಮನ ಗಂಡನ ವಾರ್ಡ್ ಪಕ್ಕದಲ್ಲೇ ಇದ್ದುದ್ದು. ಒಂದು ದಿನ ಸ್ವಲ್ಪ ವಿರಾಮವಾಗಿದ್ದಾಗ ಗೌರಮ್ಮ ಹೆದರುತ್ತ ಅವರ ಕೋಣೆಗೆ ಹೋದರು. 'ಒಂದು ಇಷಯ ಡಾಕ್ಟ್ರಮ್ಮ, ಅನ್ಯಥಾ ಭಾವಿಸದಿದ್ದರೆ ಹೇಳುತ್ತೇನೆ ಎಂದರು. ಅವರು ನಸುನಗುತ್ತ ಹೇಳಿ ಗೌರಮ್ಮ, ಗೌರಮ್ಮ ಅಲ್ಲವೇ ತಮ್ಮ ಹೆಸರು'? ಅಂದಳು. ಹೌದು. ನನಗೆ ಇಲ್ಲಿ ಕೂತು ಕೂತು ಬೇಜಾರು. ನಾನ್ಯಾಕೆ ನಿಮಗೆ ಅಡಿಗೆ ಮಾಡಿ ಕೊಡಬಾರದು?? ಒಂದು ಗಂಟೆಯ ಕೆಲಸ. ಅಡಿಗೆ ಮಾಡಿಟ್ಟು ಪಾತ್ರೆ ಬಳಸಿಟ್ಟು ವಾಪಸ್ ಆಸ್ಪತ್ರೆಗೆ ಮರಳುತ್ತೇನೆ. ಆಗಬಹುದೆ? ವಿಚಾರ ಮಾಡಿ.'ಓ ಅದಕ್ಕೇನಂತೆ ಮಾಡಬಹುದು. ಆದರೆ ನಿಮ್ಮ ಮನೆಯವರಿಗೆ ತಕರಾರಿರಬಾರದು ಅಷ್ಟೆ. ಮತ್ತು ನೀವು ನಮ್ಮ ಮನೆಯಲ್ಲೇ ಊಟ ಮಾಡಿ. ಹಾಗಾದರೇ ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ ಎಂದಳು. ಗೌರಮ್ಮನಿಗೆ ತುಂಬ ಖುಶಿಯಾಯಿತು.

ಹೀಗೆ ಒಂದು ದಿನ ಗೀತಾ, 'ಅಲ್ಲ ನೀವು ಆಸ್ಪತ್ರೆಯಲ್ಲಿ ಇದ್ದುಕೊಂಡು ಏನೂ ಮಾಡುವುದಕ್ಕಿಲ್ಲ. ನೋಡಲಿಕ್ಕೆ ನರ್ಸ್/ವಾರ್ಡ್ ಬಾಯ್ ಎಲ್ಲ ಇದ್ದಾರೆ. ರಾತ್ರಿ ಯಾಕೆ ಮುದುಡಿಕೊಂಡು ಆ ಬೆಂಚ್ ಮೇಲೆ ಮಲಗಬೇಕು. ನನ್ನ ಮನೆಯಲ್ಲಿ ಹೇಗೂ ಮೂರು ಕೋಣೆಗಳಿವೆ. ನೀವೂ ಅಡಿಗೆ ಮಾಡಿದ್ದಕ್ಕೆ ಹಣಕಾಸು ಇಸ್ಕೊಳ್ಳಲ್ಲಾ ಅಂತೀರಾ...ರಾತ್ರಿ ಇಲ್ಲೇ ಮಲಗಿ. ಆಕಸ್ಮಾತ್ ಆಸ್ಪ್ತತ್ರೆಗೆ ಧಾವಿಸ ಬೇಕಾದಲ್ಲಿ ಅದು ಕಾಲ್ನಡಿಗೆಯಲ್ಲಿ ಕ್ರಮಿಸುವಷ್ಟೇ ದೂರ. ಏನ್ಹೇಳ್ತೀರಾ ಗೌರಮ್ಮ?' ಗೌರಮ್ಮ ಒಪ್ಪಿ ರಾತ್ರಿ ಇವರ ಮನೆಯಲ್ಲೇ ಉಳಿಯಲು ಪ್ರಾರಂಭಿಸಿದರು.

ಗೀತಾಳ ಮೆನೆಯಲ್ಲಿ ತಂಗಲು ಶುರುಮಾಡಿದ ಸ್ವಲ್ಪ ದಿನಗಳ ನಂತರ , ಒಂದು ದಿನ ರಾತ್ರಿ ಗೀತಾ ಮತ್ತು ಗೌರಮ್ಮ ರಿಗೆ ಲೋಕಾಭಿರಾಮವಾಗಿ ಮಾತಾಡುವ ಅವಕಾಶ ಸಿಕ್ಕಿತು. ಗೌರಮ್ಮ, ಗೀತಳಿಗೆ - ಯಾಕೆ ಇನ್ನೂ ಮದುವೆ ಆಗಿಲ್ಲ ಅಂತ ಕೇಳಬಹುದೇ ಡಾಕ್ಟ್ರಮ್ಮ??' ಅದಕ್ಕೆ ಗೀತಾ ' ಒಹೋ ಅದಕ್ಕೇನಂತೆ. ನಾನೂ ಒಬ್ಬರನ್ನ ಪ್ರೀತಿಸಿದ್ದೆ. ಅವರೂ ಡಾಕ್ಟರ್. ಹಳ್ಳಿಗೆ ಹೋಗಿ ಅಲ್ಲಿ ಒಂದು ಕ್ಲಿನಿಕ್ ತೆರೆಯುವ ಯೋಜನೆಗಳನ್ನೆಲ್ಲ ಹಾಕ್ಕೊಂಡಿದ್ವಿ. ಬೇರೆಯವರ ಸೇವೆ ಮಾಡ್ತಾ ಮಾಡ್ತಾ ಅವರು ಅವರ ಆರೋಗ್ಯದ ಕಡೆ ನಿಗಾ ವಹಿಸದೇ ಒಂದು ದಿನ ತುಂಬ ಕಾಯಿಲೆ ಬಿದ್ದರು. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ತುಂಬ ವಿಳಂಬವಾಗಿತ್ತು. ಕೊನೆಯುಸಿರೆಳೆದುಬಿಟ್ಟರು, ಅಂದಳು ಗದ್ಗದಿತಳಾಗಿ' "ಅವರ ತರಹ ಇನ್ನೂ ಯಾರೂ ಸಿಕ್ಕಿಲ್ಲ ನನಗೆ. ಬಹುಶ: ಅವರ ನೆನಪಲ್ಲೇ ಜೀವನ ಸವೆಸುತ್ತೇನೆ" ಗೌರಮ್ಮ ಲೊಚಗುಟ್ಟಿ ಸುಮ್ಮನಾದರು.

ಹೀಗೆ ಒಂದು ದಿನ ರಾತ್ರಿ ಗೌರಮ್ಮನ ಯಜಮಾನರಿಗೆ ಶ್ವಾಸಕೋಶದ ಸೋಂಕು ತಗುಲಿ ದೇಹಸ್ಥಿತಿ ಸಿರಿಯಸ್ ಅಂತ  ಆಸ್ಪತ್ರೆಯಿಂದ ಕರೆ ಮಾಡಿದರು. ಗೀತ ವಾಚ್ ಮನ್ ಗೆ  ಗೌರಮ್ಮನನ್ನು ಆಸ್ಪತ್ರೆ ತನಕ ತಲುಪಿಸಲು ಹೇಳಿದಳು. ಮರು ದಿನ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಗೌರಮ್ಮನ ಯಜಮಾನರು ದೈವಾಧೀನರಾದರು. ಗೌರಮ್ಮ ನಿಗೆ ಗೀತಳನ್ನು ಕಾಣುವ ಆಸ್ಪದ ಸಿಗಲಿಲ್ಲ. ಅವರು ಕುಟುಂಬದವರ ಜತೆ ಕುಣಿಗಲ್ ಗೆ ಹೊರಟು ಬಿಟ್ಟರು. ಹಾಗೇ ಅವರ ಅಪರ ಕರ್ಮಗಳೆಲ್ಲವೂ ಮುಗಿಯಿತು.

ಇಷ್ಟು ದಿನ ಅತ್ತೆ ಮಾವ ಇಲ್ಲದ ಮನೆಯಂತ ಮನೆಯಲ್ಲಿ ಸೊಸೆಯಂದಿರದ್ದೆ ರಾಜ್ಯ. ಎಲ್ಲೆಂದರಲ್ಲೇ ಪಾತ್ರೆಗಳು, ಬಟ್ಟೆಗಳು. ಸೊಸೆಯಂದಿರು ದಿನವಿಡೀ ತಮ್ಮ ತಮ್ಮ ಕೋಣೆಯಲ್ಲಿ ಟಿವಿ ನೋಡುವುದರಲ್ಲಿ ತಲ್ಲೀನರು. ಅವರ ಮಕ್ಕಳನ್ನು ಸರಿಯಾಗಿ ಗಮನಿಸದಷ್ಟು ಅವರು ಟಿವಿ ಯೊಳಗೆ ಮಗ್ನರಾಗಿದ್ದರು. ರಾತ್ರಿ ಅವರ ಗಂಡಂದಿರು ತೋಟದಿಂದ ಮನೆಗೆ ತೆರಳಿದಾಗ ಅವರ ಬೇಕು ಬೇಡ, ಊಟ ಇತ್ಯಾದಿಗಳನ್ನೂ ಮುದಿ ಗೌರಮ್ಮನ ಪಾಲಿಗೆ ಬಿದ್ದಿತು.ಗೌರಮ್ಮನ ಕೆಲಸದಲ್ಲಿ ಸೊಸೆಯಂದಿರು ಕಿಂಚಿತ್ತೂ ಸಹಾಯ ಮಾಡ್ತಿರಲಿಲ್ಲ. ತೋಟದ ದೊಡ್ಡ ಮನೆ. ಹಾಗೇ ಕೆಲಸಗಳೂ ಬೇಕಾದಷ್ಟಿದ್ದವು.

ಒಂದು ದಿನ ಗೌರಮ್ಮ ವಿಪರೀತ ತಲೆ ನೋವಿಗೆ ತುತ್ತಾದರು. ಒಬ್ಬರಾದರೂ ಸೊಸೆ 'ಹೇಗಿದ್ದೀರಿ ಅತ್ತೆ' ಅಂತ ಕೇಳುವುದು ಬಿಡಿ ಅವರ ಕೋಣೆ ಕಡೆಗೂ ಹಾಯಲಿಲ್ಲ. ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಎಲ್ಲ ಹೊರಗಿನಿಂದಲೇ ತರಿಸಿ ತಿಂದು ಆಯ್ತು. ಒಬ್ಬ ಮಗ ಅಮ್ಮನಿಗೋಸ್ಕರ ಒಂದು ಬ್ರೆಡ್, ತಲೆನೋವಿಗೊಂದು ಮಾತ್ರೆ ಕೊಟ್ಟು ಹೊರಟು ಹೋದ. ಅಂತದ್ದರಲ್ಲೇ ಡಾಕ್ಟರ್ ಗೀತ ಗೌರಮ್ಮನಿಗೆ ಫೋನ್ ಮಾಡಿದರು. 'ಹೇಗಿದ್ದೀರಿ ಗೌರಮ್ಮ' ನೀವು ಊರಿಗೆ ಹೋಗುವ ಮುಂಚೆ ನಿಮ್ಮನ್ನು ಮಾತನಾಡಿಸಲೇ ಆಗಲಿಲ್ಲ. ನಾನು ಆ ದಿನ ಪೂರ್ತಿ ಎಮೆರ್ ಜೆನ್ಸಿ ಕೇಸ್ ಗಳನ್ನು ಅಟೆಂಡ್ ಮಾಡ್ತಾ ಇದ್ದೆ. ಈಗ ಮೂರು ದಿನ ರಜೆ ಹಾಕಿದ್ದೀನಿ ಊರಿಗೆ ಹೋಗಿ ಚಿಕ್ಕಪ್ಪನನ್ನು ನೋಡಿಕೊಂಡು ಬರೋಣವೆಂದು.ನಿಮ್ಮ ಕೆಲವು ಬಟ್ಟೆ ಬರೆ ಇಲ್ಲೇ ಉಳಿದಿವೆಯಲ್ಲ ಗೌರಮ್ಮ. ಆ ನೆವದಲ್ಲಿ ಒಂದೆರಡು ದಿನ ಬೆಂಗಳೂರಿಗೆ ಬಂದು ಹೋಗ ಬಹುದು. ಸ್ವಲ್ಪ ಹೊತ್ತು ಮೌನ ವಹಿಸಿ,- ಹಾಗೆ ನಿಮ್ಮ ಕೈ ಯಡುಗೆಯ ರುಚಿ ನೆನಪಾಯ್ತು'. ತಲೆ ನೋವಿನಿಂದ ನರಳುತ್ತಿರುವ ಗೌರಮ್ಮನಿಗೆ, ಗೀತಳ ಅಪ್ಯಾಯಮಾನವಾದ ದನಿ ಕೇಳಿ ಅಳು ಒತ್ತರಿಸಿ ಬಂತು. ನನ್ನ ಪಾಡು ಹೀಗಾಗಿದೆ. ಮೊದಲೆಲ್ಲ ಮಾವನವರ ಹೆದರಿಕೆ ಇತ್ತು ಸೊಸೆಯಂದಿರಿಗೆ. ಈಗ ಆಸ್ತಿ ಪಾಸ್ತಿ ಎಲ್ಲ ಅವರ ಪಾಲಿಗೆ ಬಂದ ಮೇಲೆ ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ನನಗೆ ಬೇಜಾರು ಬಂದು ಬಿಟ್ಟಿದೆ. ಯಾವುದೇ ಆಶ್ರಮ ಸೇರಿಕೊಳ್ಳುವ ಆಸೆಯನ್ನು ಮಕ್ಕಳ ಮುಂದೆ ಇಟ್ಟಾಗ ಸೊಸೆಯಂದಿರು ಇಷ್ಟು ದೊಡ್ಡ ಗಂಟಲು ಮಾಡಿ, 'ಅದಕ್ಕೆಲ್ಲ ತುಂಬ ಕಾಸು ವ್ಯಯ ಆಗುತ್ತೆ. ತೆಪ್ಪಗೆ ಮನೆ ನೋಡಿಕೊಂಡು, ಅಡಿಗೆ ಮಾಡಿಕೊಂಡು ಇರಿ' ಅನ್ನುವುದೇ? ಇವತ್ತು ಸ್ವಲ್ಪ ಹುಷಾರಿಲ್ಲವೆಂದು ಮಲಗಿದರೆ ನನಗೆ ಹೊಟ್ಟೆಗೆ ಗತಿಯಿಲ್ಲ. ಮತ್ತೆ ನಿನ್ನೆ ರಾತ್ರಿ ಒಬ್ಬ ಸೊಸೆ ನನಗೆ ಬಂದು ಜೋರು ಮಾಡಿ, 'ಅತ್ತೆ, ನಿಜಕ್ಕೂ ಹುಷಾರಿಲ್ಲವಾ? ಅಥವಾ ನಾಟಕ ಆಡುತ್ತಿದ್ದೀರಾ? ಇನ್ನೂ ಮಲಗೇ ಇದ್ರೆ ನಿಮ್ಮನ್ನ  ನಿಜಕ್ಕೂ ಯಾವುದಾದರೂ ಆಶ್ರಮಕ್ಕೆ ಸಾಗ ಹಾಕುವುದೇ ಸರಿ? ಅಷ್ಟಲ್ಲದೇ ಮಗ ಬಂದ ಕೂಡಲೇ ಇದೆ ಮಾತನ್ನ ಅವನಿಗೆ ಹೇಳಿದ್ದಾಳೆ. ಎಲ್ಲೋ ನನ್ನ ಮೇಲೆ ಕಿಂಚಿತ್ ಪ್ರೀತಿ ಇರಬೇಕು ಆ ಮಗನಿಗೆ, ಅವನು ಹೆಂಡತಿಯನ್ನು ಸರೀ ದಬಾಯಿಸಿದ. ಆದರೆ ಇದು ತುಂಬ ದಿನ ನಡೆಯುವ ಹಾಗೆ ಕಾಣಲ್ಲ. ಹೇಳಿ ಕೇಳಿ ಪ್ರೀತಿಸಿ ಮದುವೆಯಾಗಿದವ. ನನ್ನನ್ನು ಮನೆಯಿಂದ ಕಳಿಸುತ್ತಾನೆ ವಿನಃ ಹೆಂಡತಿಗೆ ಏನೂ ಹೇಳಲಾರ ಅಂತಲೇ ನನಗೆ ಅನ್ನಿಸುವುದು. ಅಷ್ಟು ಹೇಳಿ ಗೋಳೋ ಅಂತ ಅತ್ತರು ಗೌರಮ್ಮ

ಅದಕ್ಕೆ ಗೀತ, 'ನೋಡಿ ಗೌರಮ್ಮ, ಸಮಾಧಾನ ಮಾಡಿಕೊಳ್ಳಿ. ನಿಮ್ಮ ಅಭ್ಯಂತವೇನಿಲ್ಲದಿದ್ದರೆ ನೀವು ನಮ್ಮ ಮನೆಗೆ ಬಂದಿರಬಹುದು' ನಾನು ಅಮ್ಮನಿಲ್ಲದೇ ಬಾಳಿ ಬದುಕಿದವಳು. ನಿಮ್ಮನ್ನು ನನ್ನ ತಾಯಿ ತರಹನೇ ನಾನು ಕಂಡಿದ್ದೆ, ನೀವು ನನ್ನಲ್ಲಿದ್ದಾಗ. ಈಗಲೂ ನಮ್ಮ ಮನೆಗೆ ನಿಮಗೆ ಸ್ವಾಗತ. ಏನಂತೀರಾ? ಹಾಗೇ ಮುಂದಿನ ತಿಂಗಳು ಹದಿನೈದು ದಿನಗಳ ರಜೆ ಹಾಕಿದ್ದೇನೆ.  ಅಮರನಾಥ ಯಾತ್ರೆ ಮಾಡಿ ಬರುವಾ ನಾನು ನೀವು?

ಏನೆಂದಿರಬಹುದು ಗೌರಮ್ಮ?????

:-) :-)

May 1, 2012

ಕತೆ ಅಂದುಕೊಂಡು ಗೀಚಿದ್ದು

ಶ್ಯಾಮರಾಯರು ಬೇಗ ಬೇಗ ನೆ ಮನೆಗೆ ಹೆಜ್ಜೆ ಹಾಕಿದರು. ಇವತ್ತು ಕಛೇರಿಯಲ್ಲಿ ಅವರ ಕೊನೆಯ ದಿನ. ಅಲ್ಲಿ ಈಗಾಗಲೇ ಬೀಳ್ಕೊಡುಗೆ ಸಮಾರಂಭ ಮುಗಿಸಿ ಹೊರಟಿದ್ದರು. ದಾರಿಯಲ್ಲಿ ಬರುತ್ತ ತಮ್ಮ ಪತ್ನಿಗೋಸ್ಕರ ಎರಡು ಮಾರು ಮಲ್ಲಿಗೆ ಹೂ ಮತ್ತು ಅವಳ ಇಷ್ಟದ ಜಿಲೇಬಿಗಳನ್ನು ಕಟ್ಟಿಸಿಕೊಂಡಿದ್ದರು. ಪತ್ನಿಗೆ ಇದರಿಂದ ಆಗುವ ಸೋಜಿಗವನ್ನು ಊಹಿಸಿಕೊಂಡು ರಾಯರ ನಡುಗೆ ಇನ್ನಷ್ಟು ಚುರುಕಾಯಿತು.
ಮನೆ ತಲುಪಿದಾಗ ಮನೆಗೆ ಬೀಗ ಹಾಕಿತ್ತು. ಪಕ್ಕದ ಮನೆಯ ಹುಡುಗಿ, ’ಆಂಟಿ ದೇವಸ್ಥಾನಕ್ಕೆ ಹೋಗಿದ್ದಾರೆ. ಬರುವುದು ತಡವಾಗುತ್ತಂತೆ’ ಅಂತ ಅವರಿಗೆ ಮನೆಯ ಬೀಗದ ಕೈ ಯನ್ನು ಕೊಟ್ಟಳು. ರಾಯರಿಗೆ ತುಂಬ ಬೇಸರ ಆಯ್ತು.
ರಾತ್ರಿ ಸಾಧಾರಣ 8.30 ಸುಮಾರಿಗೆ ಸಾವಿತ್ರಮ್ಮ ಮನೆಗೆ ಮರಳಿದರು. ರಾಯರು ಆಕ್ಷೇಪ ವೆತ್ತಿದರು. ’ಇವತ್ತು ನಿನಗೋಸ್ಕರ ಬೇಗ ಬಂದೆ. ನಿನಗೊತ್ತಿತ್ತಲ್ಲವ ಇವತ್ತು ನನ್ನ ಸರ್ವಿಸ್ ನ ಕೊನೆ ದಿನ ಅಂತ..’
ಹೌದು..ನೀವು ದಿನ ನಿತ್ಯದ ಹಾಗೆ ಕಛೇರಿ ಕೆಲಸ ಮುಗಿಸಿ ಕ್ಲಬ್ ಗೆ ಹೋಗುತ್ತೀರಿ ಅಂದುಕೊಂಡೆ, ದೇವಸ್ಥಾನದಲ್ಲಿ ಇವತ್ತು ಚೆಂದದ ಹರಿಕತೆ ಹಮ್ಮಿಕೊಂಡಿದ್ದರು, ನಾನು ಕಮಲಮ್ಮ ಈ ಕಾರ್ಯಕ್ರಮಕ್ಕೆ ಹೋಗುವುದನ್ನು ಮೊದಲೇ ನಕ್ಕಿ ಮಾಡಿಕೊಂಡಿದ್ದೆವು. "
ಅಷ್ಟರೊಳಗೆ ಮಲ್ಲಿಗೆ ಹೂ ಬಾಡಿತ್ತು, ಜಲೇಬಿಗೆ ಇರುವೆಗಳು ಮುತ್ತಿಕೊಂಡಿದ್ದವು...
ಮರುದಿನ ಸಾವಿತ್ರಮ್ಮನಿಗೆ ಏನೋ ಇರುಸುಮುರುಸು. ದಿನ ರಾಯರು ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ಟರೆ ಬರುತ್ತಿದ್ದದ್ದೆ ರಾತ್ರಿ ಒಂಬತ್ತಕ್ಕೆ. ಒಂದು ದಿನ ಕೂಡ ಬೇಗ ಬಂದಿದ್ದಿಲ್ಲ. ಇದ್ದ ಒಬ್ಬನೆ ಮಗ ರಾಜೀವನ ಬಾಲ್ಯ- ಬೆಳವಣಿಗೆ, ಸ್ಕೂಲು, ಕಾಲೇಜು, ಕಾಯಿಲೆ-ಕಸಾಲೆ ಗಳೆದ್ದಕ್ಕೂ ಸಾವಿತ್ರಮ್ಮನೆ ಓಡಾಡಿದ್ದು. ಅವನೂ ಇಂಜಿನಿಯರಿಂಗ್ ಓದಿ ವಿದೇಶಕ್ಕೆ ಹಾರಿದ. ಅಲ್ಲಿಯ ಒಬ್ಬಳನ್ನೆ ಮದುವೆ ಕೂಡ ಮಾಡಿಕೊಂಡ. ಇನ್ನೂ ಅವರ ಸೊಸೆಯನ್ನು ಕಂಡಿಲ್ಲ ಸಾವಿತ್ರಮ್ಮ. ಒಂದು ಹಂತಕ್ಕೆ ಮಗನ ಜವಾಬ್ದಾರಿ ಮುಗಿದ ಮೇಲೆ ಸಾವಿತ್ರಮ್ಮ ಟಿವಿ ನೋಡುವುದು, ಅಕ್ಕ ಪಕ್ಕದವರ ಜತೆ ಹರಟೆ ಹೊಡೆಯುವುದು, ಸಂಜೆ ಅವರ ಜತೆ ಪೇಟೆ, ವಾಕ್, ದೇವಸ್ಥಾನ ಅಷ್ಟಲ್ಲದೆ ವರ್ಷಕ್ಕೊಂದು ಸಲ ಪಕ್ಕದ ತ್ರೀವೇಣಮ್ಮನ ಜತೆ ಕಂಡಕ್ಟಡ್ ಟೂರ್ ಗೆ ಒಂದು ವಾರ-ಹತ್ತು ದಿನಗಳ ಮಟ್ಟಿಗೆ ಹೋಗಿ ಬರುವುದು ಇತ್ತೀಚಿನ ಹದಿನೈದು ವರ್ಷಗಳಲ್ಲಿ  ರೂಢಿ ಮಾಡಿಕೊಂಡು ಬಿಟ್ಟಿದ್ದರು. ಈಗ ರಾಯರು ಮನೆಯಲ್ಲೇ ಇರುವುದರಿಂದ ಅವರಿಗೆ ಕಿರಿಕಿರಿ ಯೆನಿಸುತ್ತಿತ್ತು. ಮೊದಲಾದರೆ ಸ್ನೇಹಿತೆಯರು ಹುಡುಕಿಕೊಂಡು ಬರುವುದು, ಇವರು ಮನೆ ಕೆಲಸ ಮಾಡುತ್ತಿದ್ದ ಹಾಗೆ ಅವರೆಲ್ಲ ಮಾತನಾಡಿಸಿ, ಕೆಲವೊಮ್ಮೆ ಇವರ ಜತೆ ಊಟ ಮಾಡಿ ಹೋಗುವುದೂ ಇತ್ತು.
ರಾಯರ ಜತೆ ಏನು ಮಾತನಾಡಬೇಕೆಂದು ತಿಳಿಯುತ್ತಿರಲಿಲ್ಲ. ಉಳಿದ ದಿನ ಬಿಸಿ ನೀರು ಕಾದಿದೆ, ಕಾಫಿಗೆ ಬರುತ್ತೀರಾ, ಊಟ ಬಡಿಸಲೆ, ಸಾರು ಬಡಿಸಲೆ, ಹಾಸಿಗೆ ಹಾಕಿದೆ ಇವಷ್ಟಕ್ಕೆ ಸೀಮಿತವಾಗುತ್ತಿತ್ತು ಮಾತು. ಈಗ ದಿನ ಬೆಳಗಾದರೆ ಒಬ್ಬರಿಗೊಬ್ಬರು ಏನು ಮಾತನಾಡುವುದು ಎಂದು ತಡಕಾಡುವಂತಾಗಿದೆ ಸಾವಿತ್ರಮ್ಮನಿಗೂ ರಾಯರಿಗೂ. 
ಈ ದಿನ ಸಂಜೆ ಹೆಂಡತಿ ಮತ್ತು ತಾನು ವಾಕ್ ಹೋಗಬೇಕು ಅಂದುಕೊಂಡಿದ್ದರು ರಾಯರು ಆದರೆ ಸಾವಿತ್ರಮ್ಮ ಆಗಲೇ ಸ್ನೇಹಿತೆಯರ ಜತೆಗೆ ಬೇರೆಲ್ಲಿಗೋ ಹೋಗುವ ತಯಾರಿ ನಡೆಸಿದ್ದರು. ರಾಯರಿಗೆ ಸಿಟ್ಟು ಬಂತು.ಹೌದು ಇಷ್ಟು ದಿನ ನಿನಗೋಸ್ಕರ ಸಮಯ ಮೀಸಲಿಡಲಾಗಿಲ್ಲ ಆದರೆ ಈಗಲಾದರೂ ನಾವು ನಮ್ಮನ್ನು ಬದಲಾಯಿಸಿಕೊಳ್ಳಬಹುದಲ್ಲವಾ?’
ಸಾವಿತ್ರಮ್ಮ ’ಯಾಕೆ ಇವತ್ತು ಕ್ಲಬ್ ಕಡೆ ಹೋಗಲ್ಲವಾ?
ಇನ್ನು ಯಾವ ಕ್ಲಬ್? ಅದು ಕಛೇರಿವತಿಯಿಂದ ಮೆಂಬರ್ ಶಿಫ್..ಈಗ ನಿವೃತ್ತಿ ಪಡೆದುಕೊಂಡ ಮೇಲೆ ನಾನಲ್ಲಿ ಸೇರುವುದು ನಾನೆ ಕೈಯಿಂದ ದುಡ್ಡು ಹಾಕಬೇಕು. ಸಿಕ್ಕಾ ಪಟ್ಟೆ  ದುಬಾರಿ.
"ಕ್ಷಮಿಸಿ. ಇಷ್ಟು ವರ್ಷ ನಾನೂ ಎಷ್ಟೊ ಸಲ ನಿಮಗೆ ಈ ಮಾತನ್ನು ಹೇಳಿದ್ದೇನೆ. ಕಛೇರಿ ಬಿಡಿ, ಒಂದು ದಿನವಾದರೂ ಕ್ಲಬ್ ಹೋಗೋದು ಬಿಟ್ಟು ನನಗೋಸ್ಕರ ಮನೆಗೆ ಬಂದಿದ್ದಿದೇಯೇ?? ಮದುವೆಯಾಗಿ ಈ ಮನೆಗೆ ಬಂದಾಗ ಸರಿ, ಅತ್ತೆ, ಮಾವ, ನಾದಿನಿಯರು ಇದ್ದರು. ಹೇಗೋ ನಡೆದು ಹೋಯ್ತು. ಆಮೇಲೆ ನಾನೆ ಒಂಟಿಯಾಗಿ ಈ ಮನೆಯಲ್ಲಿ ಇರುತ್ತಿರಲಿಲ್ಲವಾ? ರಾಜೀವನಿಗೆ ಆ ದಿನ ಕೆಟ್ಟ ಜ್ವರ ಬಂದು ಆಸ್ಪತ್ರೆಗೆ ನೆರೆಯವರ ಸಹಾಯದಿಂದ ಕರೆದುಕೊಂಡೆ ಹೋದೆ, ಮರುದಿನ ರಜೆ ಹಾಕಿ ಇದ್ದಿದ್ದರೆ ನನಗೆ ಸ್ವಲ್ಪ ಸಹಾಯ ಆಗುತ್ತಿರಲಿಲ್ಲವಾ??ನನಗೀಗ ಒಂಟಿಯಾಗಿರುವುದು ರೂಢಿಯಾಗಿದೆ. ದಯವಿಟ್ಟು ನೀವು ಬೇರೆ ಯಾವುದಾದರೂ ಕ್ಲಬ್ ಅಥವ ಪಾಸ್ ಟೈಮ್ ಹುಡುಕಿ. ದುಡ್ಡಿಗೇನೂ ಕೊರತೆಯಿಲ್ಲ. ನಿಮ್ಮ ಪೆನ್ ಶನ್, ಮಗನೂ ತಿಂಗಳು ತಿಂಗಳು ಬೇಡವೆಂದರೂ ದುಡ್ಡು ಕಳುಹಿಸುತ್ತಾನೆ.  ಅಂದುಕೊಂಡು ಸ್ನೇಹಿತೆಯರ ಜತೆ ಹೊರಟೆ ಬಿಟ್ಟರು
ರಾಯರು ಅವಾಕ್ಕಾದರು............
(ಇವತ್ತು ಗಾರ್ಡನ್ ನಲ್ಲಿ ವಾಕ್ ಮಾಡ್ತಾ ಕೇಳಿಸಿಕೊಂಡ  ಬಿಡಿ ಬಿಡಿ ಸಂಭಾಷಣೆಯ ಮೇಲೆ ಆಧಾರಿತ...ನಮ್ಮ ರಾಯರು ಮುಂಬೈಯಿಂದ ಈಗ ಬರುತ್ತಾರೆ...ಅವರಿಗೆ ಕಾಯುತ್ತ....ಇದಷ್ಟು ಬರೆದೆ...ಒಂಚೂರು ಇಂಗ್ಲಿಷ್ ಬಳಸಿಲ್ಲ)
:-) Happy May Day...ಎಲ್ಲರಿಗೂ