ಪ್ರಖ್ಯಾತ ಪಂಡಿತರೊಬ್ಬರು ನದಿಯ ಆಚೆ ಬೀಡುಬಿಟ್ಟಿದ್ದರು. ಅಲ್ಲಿ ಒಂದು ಪುಟ್ಟ ಕುಟೀರ ಕಟ್ಟಿ ತಂಗಿದ್ದರು. ದಿನ ನಿತ್ಯ ಮುಂಜಾನೆ ಊರಿನ ಜನರೆಲ್ಲ ಅವರ ಕುಟೀರದ ಮುಂದೆ ಜಮಾಯಿಸಿ, ಈ ಲೋಕದ ಪರಿವೆಯೆ ಇಲ್ಲದೆ ಎರಡು ತಾಸು ಅವರ ಪ್ರವಚನ ಕೇಳುತ್ತಿದ್ದರು. ಆ ಊರಿನ ಜಮೀನ್ದಾರರು ನದಿ ಈಚೆ ಬದಿ ಇದ್ದರು. ಅವರ ಮನೆಯಿಂದ ದಿನ ನಿತ್ಯ ಆ ಪಂಡಿತರಿಗೆ ಶುದ್ದ ಹಾಲು ಕೊಟ್ಟು ಬರುವ ಕೆಲಸ ಮೋತಿ ಎಂಬ ಗೊಲ್ಲರ ಯುವತಿಯ ಪಾಲಿಗೆ ಬಿದ್ದಿತು. ಪ್ರತೀ ದಿನ ಸೂರ್ಯೋದಯ ಆದ ಕೆಲ ಹೊತ್ತಿಗೆ ಅವಳು ದೋಣಿಯ ಮೂಲಕ ನದಿ ದಾಟಿ ಕುಟೀರಕ್ಕೆ ಹಾಲು ಕೊಟ್ಟು ಸ್ವಲ್ಪ ಹೊತ್ತು ಪಂಡಿತರ ಪ್ರವಚನ ಕೇಳಿ ಪುನ: ತನ್ನ ಊರಿಗೆ ದೋಣಿಯಲ್ಲಿ ನದಿ ದಾಟಿ ಮರಳುತ್ತಿದ್ದರು. ಹೀಗೆ ಒಂದು ದಿನ ಅವಳು ಪಂಡಿತರಿಗೆ ಹಾಲು ಕೊಟ್ಟು ಹೊರಡಲು ಅನುವಾದಾಗ ಪಂಡಿತರು ಅವಳನ್ನು ನಿಲ್ಲಿಸಿ, 'ನಾಳೆಯಿಂದ ನಾನು ಹೊಸದೊಂದು ವೃತವನ್ನು ಕೈಗೊಂಡಿದ್ದೇನೆ, ಆದ್ದರಿಂದ ನನಗೆ ಸೂರ್ಯೋದಯಕ್ಕೆ ಒಂದು ಗಂಟೆ ಮುಂಚೆಯೇ ಹಾಲು ಬೇಕಾಗುತ್ತದೆ." "ಓ, ಅದಕ್ಕೇನಂತೆ, ಹಾಗೆಯೇ ಆಗಲಿ' ಎಂದಳು ಮೋತಿ.
ಮರು ದಿನ ಅವಳು ಹೆದರುತ್ತಲೆ ಪಂಡಿತರೆದುರಿಗೆ ಹೋಗಿ ನಿಂತಳು, ಪಂಡಿತರೇ ಕ್ಷಮಿಸಬೇಕು. ನಾನೇನೋ ಹೊತ್ತಿಗೆ ಮುಂಚೆ ನದಿ ತೀರದಲ್ಲಿ ಕಾಯುತ್ತಿದ್ದೆ. ಆದರೆ ದೋಣಿಯವನು ಬರಲೇ ಇಲ್ಲ. ಮತ್ತು ಮಳೆಗಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ನದಿ ನೀರಿಗೆ ಸೆಳೆತ ಜಾಸ್ತಿಯಂತೆ ಆದ್ದುದರಿಂದ ಅವನಿಗೆ ಬೆಳಿಗ್ಗೆ ಬೇಗನೆ ಬರಲಾಗುವುದಿಲ್ಲವಂತೆ. ಅದಕ್ಕೆ ಇವತ್ತು ವಿಳಂಬವಾಯಿತು.
ಪಂಡಿತರು, 'ಏನು ಇಲ್ಲಿಗೆ ಬರಬೇಕಾದರೆ ನೀನು ದೋಣಿಯನ್ನು ಅವಲಂಬಿಸಬೇಕೆ? ನನಗೆ ಗೊತ್ತಿರುವ ಮೂಲಗಳ ಪ್ರಕಾರ ಶ್ರೀ ವಿಷ್ಣುವಿನ ಹೆಸರು ಹೇಳಿದರೆ ನದಿ ದಾರಿ ಬಿಟ್ಟುಕೊಡುತ್ತದೆಯಂತೆ' ಅಂತ ತಮಾಷೆಗೆ ಹೇಳಿದರು. ಮೋತಿಗೆ ಅತ್ಯಾಶ್ಚರ್ಯ. ಮಹಾನ ಪಂಡಿತರು. ಜನರನ್ನು ಎರೆಡೆರಡು ಗಂಟೆಯ ಕಾಲ ಕೇವಲ ಅವರ ಮಾತನಿಂದ ಮಂತ್ರಮುಗ್ದರಾಗಿಸಿ ಹಿಡಿದಿಟ್ಟುಕೊಳ್ಳುವವರು, ನನಗೆ, ಒಬ್ಬ ಹಾಲು ಹಾಕುವ ಗೊಲ್ಲಿತಿಗೆ ಇಷ್ಟು ದೊಡ್ಡ ಗುಟ್ಟೊಂದನ್ನು ಹೇಳುತ್ತಿದ್ದಾರೆ ಅಂತ ಧನ್ಯತಾ ಭಾವದಿಂದ 'ಈ ವಿಷಯ ನನಗೆ ಗೊತ್ತಿರಲಿಲ್ಲ' ಅಂತ ಅವಳು ಕೃತಜ್ಞತೆಯಿಂದ ಪಂಡಿತರ ಕಾಲಿಗೆ ಎರಗಿ, ಮನೆಗೆ ಹೊರಟು ಬರುತ್ತಾಳೆ.
ಮರುದಿನದಿಂದ ಸರಿ ಒಂದು ತಿಂಗಳು ಅವಳು ತಪ್ಪದೆ ಸುರ್ಯೋದಯಕ್ಕೆ ಒಂದು ಗಂಟೆ ಮುಂಚೆ ಹಾಲು ಕುಟೀರಕ್ಕೆ ತಲುಪಿಸಿ ಬರುತ್ತಿದ್ದಳು. ಒಂದು ತಿಂಗಳು ಕಳೆದ ನಂತರ ಪಂಡಿತರು, "ಮೋತಿ ನನ್ನ ವ್ರತ ಮುಗಿದಿದೆ. ನಾಳೆಯಿಂದ ನೀನು ಮುಂಚಿನ ಹಾಗೆ ಸೂರ್ಯೋದಯದ ನಂತರ ಹಾಲನ್ನು ತಲುಪಿಸಬಹುದು. ಅದಲ್ಲದೇ ದೋಣಿಯವನಿಗೂ ನನ್ನ ಧನ್ಯವಾದ ತಿಳಿಸು. ನಿಮ್ಮಿಬ್ಬರಿಂದ ನನ್ನ ವ್ರತ ಸಾರ್ಥಕವಾಯ್ತು. ಅದಕ್ಕೆ ಮೋತಿ, 'ಪಂಡಿತರೆ, ನಿಮಗೆ ಇಷ್ಟು ಬೇಗ ಮರೆತು ಹೋಯಿತೆ, ನಾನು ದೋಣಿಯವನ ಮೇಲೆ ಅವಲಂಬಿತ ವಾಗದೆ ದಿನ ನದಿ ನೀರಿನಲ್ಲಿ ನಡೆದುಕೊಂಡೆ ಬರುತ್ತಿದೆ, ನೀವು ಹೇಳಿಕೊಟ್ಟಿದ್ದ ಗುಟ್ಟಿನಿಂದ. ದೋಣಿಯವನು ಬರಲೇ ಇಲ್ಲ. ಆದರೆ ನಾಳೆಯಿಂದ ನಾನು ದೋಣಿಯಲ್ಲೆ ಬರುತ್ತೇನೆ, ಅಂತ ಹೇಳಿ ನದಿ ಬಳಿ ತೆರಳಿದಳು. ಪಂಡಿತರು, 'ಎಲಾ ಇವಳ ನನಗೆ ತಮಾಷೆ ಮಾಡುತ್ತಾಳೆಯೇ ಈ ಹಳ್ಳಿ ಹೆಂಗಸು?' ನೋಡೆ ಬಿಡುವ, ಅಂತ ಪಂಡಿತರು ಗೊಲ್ಲಿತಿಯನ್ನು ಹಿಂಬಾಲಿಸಿದರು.
ಗೊಲ್ಲಿತಿ ನದಿಯ ಬಳಿ ತೆರಳಿ ಭಯಭಕ್ತಿಯಿಂದ ನಮಸ್ಕರಿಸಿದಾಗ ನದಿ ಇಬ್ಭಾಗವಾಗಿ ಮಧ್ಯೆ ದಾರಿ ಮಾಡಿಕೊಟ್ಟಿತು. ಗೊಲ್ಲಿತಿ ಅದರಲ್ಲಿ ನಡೆಯುತ್ತ ಮುಂದೆ ಸಾಗಿದಳು, ಪಂಡಿತರು ಮೂರ್ಛೆ ಹೋದರು..
(faith can move mountains)
(faith can move mountains)
Translation of the story
Crossing the River- from Tales told by Mystics by Manoj Das (Sahitya Akademi)