Showing posts with label ರಂಗಶಂಕರ. Show all posts
Showing posts with label ರಂಗಶಂಕರ. Show all posts

September 24, 2013

ನಿನ್ನೆ ಏನಾಯ್ತು ಗೊತ್ತಾ??

ಆಫಿಸ್ ನ ಸ್ವಲ್ಪ ಕೆಲಸ ಮತ್ತು ಮಿತ್ರರೊಬ್ಬರು ಹೇಳಿದ editing ಕೆಲಸ ಮುಗಿಸಿದಾಗ ಮಧ್ಯಾಹ್ನದ 3.30 ಗಂಟೆ. ಏನಾದರೂ ಓದುವ ಅಂದರೆ ಸಿಕ್ಕಿದ್ದು ತೀರ್ಥರಾಮ ವಳಲಂಬೆಯವರ 'ಮೃತ ಸಂಜೀವಿನಿ'. ನಮ್ಮ ರಾಯರು ತೀರ್ಥರಾಮ ಅವರ ಫ್ಯಾನ್. ಅವರ ಎಲ್ಲ ಪುಸ್ತಕಗಳು ನಮ್ಮಲ್ಲಿದೆ. (ಒಂದನ್ನು ಮಾತ್ರ ಸ್ನೇಹಿತೆಯ ಮೂಲಕ ಚಕ್ರವರ್ತಿ ಸೂಲಿಬೆಲೆ ಯವರಿಗೆ ಕೊಟ್ಟಿದ್ದು ಅವರಿಗೆ ತುಂಬಾ ಇಷ್ಟ ಆಗಿದ್ದಕ್ಕೆ ಅವರಿಗೇ ಅದನ್ನು ಉಡುಗೊರೆ  ಆಗಿ ಕೊಟ್ಟು ಬಿಟ್ಟೆ- ಇದನ್ನು ಬರೆಯುವಾಗ ನೆನಪಾಯ್ತು. ಇನ್ನೊಂದು ಪ್ರತಿಯನ್ನು  ತಂದು replace ಮಾಡಬೇಕು :-)) ಮೊನ್ನೆ ಅಂಕಿತಾಗೆ ಹೋದಾಗ ಇನ್ನೊಂದಿಷ್ಟು ಪುಸ್ತಕ ತಂದಿದ್ವಿ. ಅದರಲ್ಲೊಂದು ಈ ಪುಸ್ತಕ.
ತೀರ್ಥರಾಮ ಅವರ ಪುಸ್ತಕ ತಂದ ಕೂಡಲೆ ನಾನು ಅದರ ಹಿಂಪುಟ ಓದಿ, ಅದರೊಳಗಿನ ಚಿತ್ರಗಳನ್ನು ನೋಡಿ ಇಡುವುದು ಮಾಮೂಲು.ಅವರ ಬರಹಗಳಿಗೆ ಅವರೇ ರೇಖಾಚಿತ್ರ, ಮುಖಪುಟ ಎಲ್ಲ ಸಿದ್ದಪಡಿಸುತ್ತಾರೆ. ಸಿಕ್ಕಾಪಟ್ಟೆ ಟ್ಯಾಲೆಂಟಡ್ ಮಾತ್ರ ಅಲ್ಲ ಬರಹದ ಕಲೆ ತುಂಬಾ ಚೆನ್ನಾಗಿ ಸಾಧಿಸಿದೆ. ಸುಮ್ನೆ diagonal reading ಮಾಡಿ impress ಆಗಿದ್ದೇನೆ. ಅವರ ಪುಸ್ತ್ಕಕಗಳನ್ನೆಲ್ಲ ನನಗೆ 45 ಆದ ನಂತರ ಓದಲು ಪ್ರಾರಂಭಿಸುತ್ತೇನೆಂದುಕೊಂಡಿದ್ದೇನೆ . ಆದರೆ ಈ ಪುಸ್ತಕ ಓದಿಸಿಕೊಂಡು ಹೋಯ್ತು. ಓದ್ತಾ ಮಧ್ಯದಲ್ಲಿ ಮಕ್ಕಳಿಗೆ ಬಾಸುಂದಿ ಮಾಡಿಕೊಡುತ್ತೇನೆಂದು ಪ್ರಾಮಿಸ್ ಮಾಡಿದ್ದು ನೆನಪಾಗಿ ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಗ್ಯಾಸ್ ಮೇಲಿಟ್ಟು ಬಂದೆ. ಇನ್ನು ಕೆಲವು ಪುಟಗಳನ್ನು ಓದುವಷ್ಟರಲ್ಲಿ ಅಲ್ಲೆ ಕುಳಿತಿದ್ದ ನಿಹಾ, 'ಅಮ್ಮ, ನನಗೆ ಪೆಡಿಕ್ಯೂರ್ ಮಾಡ್ತೀಯಾ ಅಂತ ಕೇಳಿದ್ಲು. ನನಗೆ ಇಷ್ಟ ನನ್ನ ಮನೆಯವರಿಗೆಲ್ಲ ಪೆಡಿಕ್ಯೂರ್ ಮಾಡೋದು. ಸರಿ  ಟಬ್ ನ ಉಗುರುಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಶ್ಯಾಂಪು ಹಾಕಿ ಅದರಲ್ಲಿ ಸ್ವಲ್ಪ ಬಾತ್ salt ಬೆರೆಸಿ ನಿಹಾಗೆ ಅದರಲ್ಲಿ ಕಾಲು ಇಳಿಬಿಡಲು ಹೇಳಿದೆ. ಸಿಸ್ಟಮ್ ನಲ್ಲಿ ಕಿಶೋರಿ ಅಮೋನ್ಕರ್ ಅವರ 'ಸಹೆಲಾ ರೆ' ಹಾಕ್ಕೊಂಡಿದ್ದೆ.
"ಅಮ್ಮ, ನಿನಗೆ ಕಿಶೋರಿ ಅಮೋನ್ಕರ್ ಇಷ್ಟ ಆಗುತ್ತಾರಾ?"
ನಾನು - ಹೂಂ. ನಿನಗೆ??
"ಅವರದ್ದು nasal ವಾಯ್ಸ್. ನನಗದು ಅಷ್ಟು ಇಷ್ಟ ಆಗಲ್ಲ'
ನಾನು- 'ನೀಹಾ ಮೊನ್ನೆ ಅಶ್ವಿನಿ ಭಿಡೆ ಕಾರ್ಯಕ್ರಮ ಚೆನ್ನಾಗಿತ್ತಂತೆ, ರವೀಂದ್ರ ಫೋನ್ ಮಾಡಿದ್ರು. ನಾವು ಆ ಬಂಡಲ್ ನಾಟಕಕ್ಕೆ ಹೋಗುವುದಕ್ಕಿಂತ ಅಶ್ವಿನಿ ಭಿಡೆ ಕಾನ್ ಸರ್ಟ್ ಎಟೆಂಡ್ ಮಾಡಬಹುದಿತ್ತು ನೋಡು."
ನಿಹಾ ತನ್ನ economics assignment ಮಾಡ್ತಾ ಕೂತಳು.
ನಾವು ಹೋಗಿದ್ದು the gossips of 47 ಎನ್ನುವ ಹಿಂದಿ ನಾಟಕಕ್ಕೆ. ಸದತ್ ಹಸನ್ ಮಾಂಟೋ ರವರ ಸಣ್ಣ ಕತೆಗಳನ್ನು ಆಧರಿಸಿದ ನಾಟಕ. ಆದರೆ ಕತೆಗಳಲ್ಲಿನ ಪಂಚ್ ನಾಟಕದ ಮುಖೇನ ನೀಡುವಲ್ಲಿ ಆ ತಂಡ ವಿಫಲವಾಯಿತು. ಯಾವುದೇ ಹಿಂದಿ ಶೋ ನಾವು ರಂಗಶಂಕರದಲ್ಲಿ ಈ ಹಿಂದೆ ನೋಡಿರಲಿಲ್ಲ. ಅದಕ್ಕೆ ಹೋಗಿದ್ವಿ. ಪ್ಲಸ್, ನಿಹಾಳ ಫ್ರೆಂಡ್ ಮತ್ತು ತಂದೆ ತಾಯಿ ಕೂಡ ಬರುವವರಿದ್ದರು. ಖುಶಿಯಾಯ್ತು ನನಗೆ ಅವರ ಜತೆ ಹಿಂದಿಯಲ್ಲಿ ಸಂಭಾಷಿಸಲು. ಫ್ರೆಂಡ್ ತಂದೆಗೆ Geological survey of India ದಲ್ಲಿ  ಕೆಲಸ. ಕುಮಾರಕೄಪಾ ರೋಡ್ ನಲ್ಲಿ ಮನೆಯಂತೆ. ಹಿಂದಿನ ಸಲ ಅವರು 'ಬಿಖರೆ ಬಿಂಬ್' ನಾಟಕಕ್ಕೆ ಬಂದು ಟಿಕೆಟ್ ಸಿಗದೆ, ಮಳೆರಾಯನ ಕೃಪೆಯಿಂದಾಗಿ, ನಾಟಕ ನೋಡುವವರು ನಾಟಕ ನೋಡಿ ಹೊರಗೆ ಬಂದರೂ, ಇವರು ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದನ್ನು ಶೇರ್ ಮಾಡಿದರು.
'ಆಪನೆ 'ಪಾ' ಫಿಲ್ಮ್ ದೇಖಿ ಹೈ? ಉಸ್ಮೆ ಜೋ ಮಾ ಕಾ ರೋಲ್ ಕಿಯಾ ಹೈ ನಾ, ಮೈನೆ ಉನ್ಹೆ ಯಹಾಂ ದೇಖಾ' ಅಂತ ತುಂಬ excite ಆಗಿ ನಿಹಾ ನ ಫ್ರೆಂಡ್ ಅಮ್ಮ ಹೇಳಿದರು. ಅವರು ಮಾತು ಮುಗಿಸಿದ ಮೇಲೆ, ರಂಗ ಶಂಕರ ಅವರದ್ದೆ ಸಂಸ್ಥೆ ,ಅವರ ದಿವಗಂತ ಪತಿಯ ಹೆಸರಿನಲ್ಲಿ ಸಂಸ್ಥಾಪಿಸಿದ್ದು ರಂಗ ಶಂಕರ ಅಂತ ಹೇಳಿದೆ. ಅವರು ತೀರಾ ಇತ್ತೀಚಿಗೆ ಜೈಪುರ್ ದಿಂದ ಬೆಂಗಳೂರಿಗೆ ವರ್ಗವಾಗಿ ಬಂದಿದ್ದಾರೆ. 
 ಅದರಲ್ಲಿನ ಪಾತ್ರ ಮಾಡಿದ ಒಬ್ಬ ಹುಡುಗನ ಮಿಮಿಕ್ರಿ ಮಾಡಿ ನಿಹಾ ನ ನಗಿಸಿದೆ. ಪೆಡಿಕ್ಯೂರ್ ಮುಗಿಸಿ, ಕಿಶೋರಿ ತಾಯಿ ಯ ಇನ್ನೊಂದೆರಡು ಹಾಡು- ಅವಘಾ ರಂಗ್ ಎಕ್ ಝಾಲಾ', ಆಯಿ ರೆ ಬದರಿಯಾ ಕಾರಿ ಕಾರಿ, ಕೇಳುವಷ್ಟರಲ್ಲಿ , ಹಸಿವೆಯಿಂದ ಹೊಟ್ಟೆ ತಾಳ ಹಾಕಲಾರಂಭಿಸಿತು. ಸಮಯ ನೋಡಿದ್ರೆ 9.15. ಬಾಸುಂದಿ ರೆಡಿಯಾಗಿತ್ತು. ಅದಕ್ಕೆ ಸಕ್ಕರೆ ಬೆರೆಸಿ, ಸ್ತ್ಟವ್ ಆಫ್ ಮಾಡಿ, ಏಲಕ್ಕಿ ಕುಟ್ಟಿ, ದ್ರಾಕ್ಷಿ ಗೋಡಂಬಿ ಮೈಕ್ರೋವೇವಿಸಿ ಹಾಕಿ, ಫೋಟೊ ತೆಗೆದು, ಮಕ್ಕಳು ಊಟದ ನಂತರ ಅದನ್ನು ತಿನ್ನುವ ಹಾಗೆ ಫ್ರಿಜ್ ನಲ್ಲಿಟ್ಟೆ. ಅನ್ನದ ಪಾತ್ರೆ ಬಿಸಿ ಮಾಡಲು ತೆರೆದರೆ ಅದರಲ್ಲಿ ತುಂಬ ಕಡಿಮೆ ಅನ್ನ ಇತ್ತು. ಅನ್ನ ಮಾಡಿಕೊಳ್ಳುವಷ್ಟು ವ್ಯವಧಾನ ಇರಲಿಲ್ಲ.

ಆಗ ಆಪತ್ಬಾಂಧವ ಮ್ಯಾಗಿಯ ನೆನಪಾಯ್ತು. ಕೂಡಲೆ ಒಂದು ಚಿಕ್ಕ ನೀರುಳ್ಳಿ ಕಚಕಚನೆ ಚಕಚಕನೆ ಕಟ್ ಮಾಡಿದೆ, ಎರಡು ಬೆಳ್ಳುಳ್ಳಿ ಜಜ್ಜಿದೆ, ಫ್ರಿಜ್ ನಲ್ಲಿ ಫ್ರೋಜನ್ ಸ್ವೀಟ್ ಕಾರ್ನ್ ನೋಡಿದೆ. ಅದನ್ನು ಹೊರ ತೆಗೆದೆ. ಎಣ್ಣೆ ಬಿಸಿ ಮಾಡಿ ನೀರುಳ್ಳಿ - ಬೆಳ್ಳುಳ್ಳಿ ಹಾಕಿ ಕೈ ಆಡಿಸಿದೆ. ನಾಲ್ಕು ಹಸಿಮೆಣಸು ಹಾಕಿದೆ. ಅದಕ್ಕೆ ಒಂದು ಹಿಡಿ ಸ್ವೀಟ್ ಕಾರ್ನ್ ಬೆರೆಸಿ ಘಂ ಅನ್ನುವ ಪರಿಮಳ ಬರುತ್ತಿದ್ದ ಹಾಗೆ ನೀರು ಹಾಕಿದೆ. ಇಂಡಕ್ಷನ್ ಸ್ಟವ್ ಆದ್ದರಿಂದ ಅರ್ಧ ನಿಮಿಷಕ್ಕೆ ನೀರು ಕುದಿಯಲು ಶುರು. ಅದಕ್ಕೆ ಮ್ಯಾಗಿ ಮಸಲಾ ಪ್ಯಾಕ್ ನಿಂದ ಮಸಾಲೆ ಹಾಕಿದೆ. ಆಮೇಲೆ ನೂಡಲ್ಸ್ ಸೇರಿಸಿದೆ. ಫೋಟೊಗೋಸ್ಕರ ಕೊತ್ತಂಬರಿ ಸೊಪ್ಪಿನ ಶೋ off ಮಾಡಿದೆ. ತುಂಬಾ ಟೇಸ್ಟೀಯಾಗಿತ್ತು. ನನ್ನ ಬ್ಯಾಚಲರ್ ಬ್ಲಾಗ್ ಓದುಗ ತಮ್ಮಗೋಳ್ ಇದನ್ನು ಆರಾಮಾಗಿ ತಯಾರಿಸಿ ತಿನ್ನಬಹುದು.
ರಾಯರಂತು ಎರೆಡೆರಡು ಸಲ ಹಾಕಿಸಿಕೊಂಡು ತಿಂದ್ರು. ಎಷ್ಟು ಎಂಜಾಯ್ ಮಾಡಿದ್ವಿ ನಿನ್ನೆಯ ಡಿನ್ನರ್.

ರಾತ್ರಿ ನಿದ್ರೆ ಇಲ್ಲದೆ ಒಂದು ನ್ಯಾನೋ ಕತೆ ಹುಟ್ಟಿಕೊಂಡಿತು :
ಮಿತ್ರರಿಬ್ಬರು ಮಾತುಕತೆ ಆಡುತ್ತ ನಗುತ್ತ ಇದ್ದ ಹಾಗೆ ಬಾಗಿಲು ದಡದಡ ಸದ್ದು ಮಾಡಿತು. ಇವರ ರೂಂ ಗೆ ಆವಾಗಾವಾಗ ಮಿತ್ರರು ಭೇಟಿ ನೀಡುತ್ತಿದ್ದರಾದ್ದರಿಂದ ಆ ರಾತ್ರಿ ಅವರು ಯಾವತ್ತಿನ ಹಾಗೆ ಬಾಗಿಲು ತೆರೆದರು. ಬಂದೂಕು ಧಾರಿಯೊಬ್ಬ ಬಾಗಿಲು ತೆಗೆದವನನ್ನು ನೂಕಿ ಒಳಗೆ ಬಂದ
"ನಿನ್ನ ಹೆಸರೇನು?'
"ಪದ್ಮನಾಭ"
" ಸರಿ. ಆ ಕಡೆ ಸರಿ"
ಇನ್ನೊಬ್ಬ ರೂಂ ಮೇಟ್ ನನ್ನು ಉದ್ದೇಶಿಸಿ
'ನಿನ್ನ ಹೆಸರು'?
"ಸಾಹಿಲ್ ಖುರ್ಶೀದ್"
ಆಗ ಪದ್ಮನಾಭ "ಏನಲೇ ನೀನು ಮುಸ್ಲಿಮ್ ಆ? ಐದು ವರ್ಷ ಒಟ್ಟಿಗಿದ್ದರೂ ಇವತ್ತೆ ಗೊತ್ತಾಗಿದ್ದು ಅಂತ ಆಶ್ಚರ್ಯದಿಂದ ಕೇಳಿದ
ಬಂದೂಕುಧಾರಿ ಸಾಹಿಲ್ ನ ಎದೆಗೆ ಬಂದೂಕು ಗುರುಯಿಟ್ಟ. ಕೂಡಲೆ ಪದ್ಮನಾಭ ಸಾಹಿಲ್ ಗೆ ಎದುರಾಗಿ ನಿಂತು ನನ್ನ ಸ್ನೇಹಿತನನ್ನು ಕೊಲ್ಲುವ ಮೊದಲು ನಾನು ಸಾಯಬೇಕು
ಬಂದೂಕುಧಾರಿ ಗುಂಡಿ ಒತ್ತಿಯೇ ಬಿಟ್ಟ. ಒಂದೆ ಬುಲೆಟ್ ಇಬ್ಬರ ಹೃದಯ ಸೀಳಿ ಹಿಂದಿನ ಗೋಡೆಗೆ ಬಡಿಯಿತು. ಮಿತ್ರರಿಬ್ಬರೂ ಕುಸಿದರು. ಇಬ್ಬರ ರಕ್ತ ಕೂಡಿ ಕೋಡಿಯಾಗಿ ಹರಿಯಿತು, ಯಾವ್ ರಕ್ತ ಯಾರದ್ದು ಅನ್ನುವುದರ ಪರಿವೆಯೇ ಇಲ್ಲದೆ.
moral of the story is: ರಾತ್ರಿ ಮ್ಯಾಗಿಯಲ್ಲಿನ ಹಸಿಮೆಣಸು ತಿಂದು ಹೊಟ್ಟೆ ಉರಿದು ಇಂತಹ ಕತೆಗಳು ಹುಟ್ಟುವ ಸಂಭವವಿದೆ ಆದ್ದರಿಂದ ಹಸಿಮೆಣಸು ತಿನ್ನಬಾರದು.
ಅಷ್ಟೆ ಕಣ್ರೀssss........ನನ್ನ ಬ್ಲಾಗ್ ಗೊಂದು ಹೂರಣ ಕೂಡ ಸಿಕ್ಕಿತ್ತು
ನಿನ್ನೆಯ ದಿನಚರಿ

November 28, 2011

ಭೇಟಿಯಾಗುವ ಮುನ್ನ ಕಣ್ಮರೆಯಾದ ಶ್ರೀ ನಾಗರಾಜ ಜವಳಿ

ಇವತ್ತು ಮಧ್ಯಾಹ್ನ  ನೀಲೇಶ ಜವಳಿ ಎಸ್ ಎಮ್ ಎಸ್ ’my chikkappa Nagaraj Javali expired today' ಓದಿದಾಗ ನನಗೆ ಅದು ತಲೆಗೆ ಹೋಗಲು ಎರಡು ನಿಮಿಷ ಗಳೆ ಬೇಕಾದವು.sms ಎಷ್ಟು ಹೊತ್ತಿಗೆ ಕಳುಹಿಸಿದ್ದು ಅಂತ ನಾನು ನೋಡಲಿಲ್ಲ. ಭಾನುವಾರ ಅಂದ್ರೆ ಒಂದಷ್ಟು ಕೆಲಸಗಳು, ಹಾಗೂ ನಾನು ಪ್ರವಾಸ ಕೈಗೊಂಡು ಮನೆಗೆ ಬಂದು ಕೆಲವು ದಿನಗಳಾಗಿವೆ, ಆದ್ದರಿಂದ ಕ್ಲೀನಿಂಗ್, ಅದು-ಇದು.... ಶ್ರೀಕಾಂತ ಗೆ ಹೇಳಿದಾಗ ಸ್ವಲ್ಪ ಹೊತ್ತು ಅವರೂ ಗರಬಡಿದವರಂತಾಗಿ ’what!! so sad' ಅಂದರು
ನಿನ್ನೆ ರಾತ್ರಿಯಷ್ಟೆ ನಾವು ಅವರ ಬಗ್ಗೆ ಮಾತನಾಡುತ್ತಿದ್ದೆವು. ತೀರ್ಥಹಳ್ಳಿಯಲ್ಲಿರುವ ಶ್ರೀಕಾಂತ ಕಸಿನ್ ಮಗಳು  ಅಪೂರ್ವ ಸಧ್ಯಕ್ಕೆ ನಮ್ಮ ಮನೆಯಲ್ಲಿ ಇದ್ದಾಳೆ. ಊಟ ಮಾಡ್ತಾ ಲೋಕಾಭಿರಾಮವಾಗಿ ತೀರ್ಥಹಳ್ಳಿ, ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು,ನಾಟಕ-ಸಂಗೀತ ಕಾರ್ಯಕ್ರಮಗಳು, ಅದಕ್ಕೆ ಜನರ ಪ್ರತಿಕ್ರಿಯೆ, ಹೀಗೆ ಮಾತು ಬಂದಾಗ ನೀಲೇಶ ಜವಳಿಯ ನಾಟಕ ತಂಡ ’ನಟಮಿತ್ರರು’ ಅವರ ಚಿಕ್ಕಪ್ಪ ನಾಗರಾಜ ಜವಳಿ. ಇವರೆಲ್ಲ  ಮಾತಲ್ಲಿ ಹಾದು ಬಂದಿದ್ದರು, ಇವತ್ತು sms ಬಂದಾಗ ಒಂದು ಕ್ಷಣ ಮನಸ್ಸು ಹೌಹಾರಿದ್ದು  ಹೌದು.
ಅವರು ನನ್ನ ಬ್ಲಾಗ್ ಓದುಗರೂ ಕೂಡ. ಶ್ರೀಕಾಂತ ಭಾವ ಯೋಗೇಶ ಜೋಯಿಸ್ ಮತ್ತು ನಾಗರಾಜ ಜವಳಿ ಆಪ್ತ ಮಿತ್ರರು. ಮಂಗಳೂರಿನ Canara College ನ ಪ್ರಾಂಶುಪಾಲರಾಗಿದ್ದ ಅವರು ವಿಶ್ರಾಂತ ಜೀವನವನ್ನು ಅವರ ಊರಾದ ತೀರ್ಥಹಳ್ಳಿಯಲ್ಲಿ ಕಳೆಯುತ್ತಿದ್ದರು. ಹಲವು ಮಿತ್ರರೊಡಗೂಡಿ ಪ್ರತಿ ದಿನ ಸಂಜೆ  ಇನ್ನೋರ್ವ ಮಿತ್ರರ ಮನೆಯ ಜಗಲಿಯಲ್ಲಿ ಅವರ ಬೈಠಕ್. ಶ್ರೀಕಾಂತ ಭಾವನವರಿಂದಲೆ ನನಗೆ ಗೊತ್ತಾಗಿದ್ದು ಅವರು ನನ್ನ ಬ್ಲಾಗ್ ಓದುಗರೆಂದು. ತೀರ್ಥಹಳ್ಳಿಯ ಬಗ್ಗೆ ಬರೆದಾಗಲೆಲ್ಲ ಅವರು ಯೋಗೇಶ ಅಣ್ಣನಿಗೆ ಓದಿ ಹೇಳುತ್ತಿದ್ದರಂತೆ. ಯೋಗೇಶ ಅಣ್ಣನವರಲ್ಲಿ ಕಂಪ್ಯೂಟರ್ ಇಲ್ಲ.ಅವರು ನನ್ನ ಬ್ಲಾಗ್ ಓದುತ್ತಾರೆಂದು ನಾನು ಮುಜುಗರ ಪಟ್ಟಿದ್ದೆ. ನಾಗರಾಜ ಜವಳಿಯವರಿಗೆ ಇಷ್ಟವಾದ ನನ್ನ ಪೋಸ್ಟ್ ’ಬಕುಳಾಬಾತ್ ಎಂಬ thriller' 
ನೀಲೇಶ ಪರಿಚಯ ನನಗೆ ಇತ್ತೀಚಿಗೆ facebook ನಲ್ಲಿ ಆಗಿದ್ದು.ಅವನು ಒಂದು ದಿನ ’ಈಗಷ್ಟೆ ವಸುಧೇಂದ್ರ ರ ’ನಮ್ಮಮ್ಮ ಅಂದ್ರೆ ನಂಗಿಷ್ಟ”ಪುಸ್ತಕ ಓದಿದೆ. ನೀವು ಓದಿದಿರಾ ಅಂತ ಕೇಳಿದಾಗ, ನನ್ನ ಬಳಿ ಅವರ ಎಲ್ಲ ಪುಸ್ತಕ ಇದೆ, ಎಲ್ಲವನ್ನೂ ನಾನು ಓದಿ ಇಷ್ಟ ಪಟ್ಟಿದ್ದೇನೆ ಅಂತ ಹೇಳಿ  ನನ್ನ ಪುಸ್ತಕದ collection ಬಗ್ಗೆ ಜಂಬ ಕೊಚ್ಚಿಕೊಳ್ತಾ ಇದ್ರೆ, ಅವನು, ನನ್ನ ಚಿಕ್ಕಪ್ಪನ ಬಳಿ 3000 ಸಾವಿರಕ್ಕಿಂತ ಹೆಚ್ಚು ಪುಸ್ತಕ ಇದೆ ಅಂತ ಹೇಳಿದಾಗ ನಾನು ಸುಮ್ಮನಾಗಿ ಬಿಟ್ಟೆ. ಆಗಿನಿಂದ ನನಗೆ ನಾಗರಾಜ ಜವಳಿಯವರ ಪುಸ್ತ್ಕಕಗಳನ್ನು ನೋಡಬೇಕು ಎಂಬ ಕುತೂಹಲ. ಹಾಗು ದೇಶಕಾಲ ಸಂಚಿಕೆಗಳೆಲ್ಲವೂ ಅವರಲ್ಲಿ ಲಭ್ಯವೆಂದು ಗೊತ್ತಾದ್ದರಿಂದ ನಾನು ಇಲ್ಲಿ ಆ ಪುಸ್ತಕಗಳನ್ನು subscribe ಮಾಡಿಲ್ಲ. ತೀರ್ಥಹಳ್ಳಿಗೆ ಹೋದಮೇಲೆ ಅವರಿಂದ ಪಡಕೊಂಡು ಓದಿದರಾಯಿತೆಂದು.
ತೀರಾ ಇತ್ತೀಚಿಗೆ ಹೆಗ್ಗೋಡಿನಲ್ಲಿ ನೀನಾಸಂ ಸಾಂಸ್ಕೃತಿಕ ಶಿಭಿರಕ್ಕೆ ನೀಹಾರಿಕ ಕೂಡ ಭಾಗವಹಿಸಿದ್ದಳು. ನಾನು ಶ್ರೀಕಾಂತ ಆ ಸಮಯ ತೀರ್ಥಹಳ್ಳಿಗೆ ಹೋಗುವುದಿತ್ತು. ಆಗ ನಾವು ಯಾವುದಾರರೊಂದು ಒಂದು ದಿನ  ನಾಟಕ ನೋಡಿ , ಮತ್ತು ನೀಹಾ ಳನ್ನು ಭೆಟಿಯಾದಾಗೂ ಆಯಿತೆಂದು ಅಲ್ಲಿಗೆ ಹೋಗಿ ಬರುವುದೆಂದು ತೀರ್ಮಾನಿಸಿದ್ದೆವು. ಆದರೆ ಇಲ್ಲಿಯ ಆಫಿಸಿನ ಹಲವು ಕೆಲಸಗಳ ಒತ್ತಡದಿಂದ ಹೋಗಲಾಗಲಿಲ್ಲ. ನೀಲೇಶ ಜವಳಿ ನನಗೆ ಕಾರ್ಯಕ್ರಮದ ಪಟ್ಟಿ ಕಳುಹಿಸುತ್ತೇನೆ ಅಂದಾಗ ನಾನು, ’ಬೇಡ, ನನ್ನ ಬಳಿ ಇದೆ, ಮತ್ತು ನಿಹಾ ಅಲ್ಲಿದ್ದಾಳೆ ಎಂದಾಗ, ನಾನು ಚಿಕ್ಕಪ್ಪ ಹೆಗ್ಗೋಡಿಗೆ ಹೋಗ್ತಾ ಇದ್ದೇವೆ, ನನಗೆ ಗೋರಾ ನೋಡ ಬೇಕಿತ್ತು ಆದರೆ ಚಿಕ್ಕಪ್ಪನಿಗೆ ಮರಾಠಿ ಸಂಗೀತ ನಾಟಕ”ಕತ್ಯಾರ್ ಕಾಳ್ಜಾತ್ ಘುಸ್ಲಿ’ ನೋಡಬೇಕಂತೆ, ನಾಳೆ ಹೋಗ್ತಾ ಇದ್ದೇವೆ ಅಂತ sms ಮಾಡಿದಾಗ, ನಾನು ’ನೋಡಿ ಹೇಳು ತಮ್ಮ, ಹಾಗೆ ನಿಹಾ ಗೆ ಹಾಯ್ ಹೇಳು’ ಚೆನ್ನಾಗಿದ್ದರೆ ನಾನು  ಎರಡು ದಿನ ಬಿಟ್ಟು ರಂಗಶಂಕರದಲ್ಲಿ  ಆ ನಾಟಕ ಪ್ರದರ್ಶನ ಇದೆ , ನೋಡುತ್ತೇನೆ’ ಅಂದಿದ್ದೆ. ಯಾಕಂದರೆ ನನಗೆ ಮರಾಠಿ ನಾಟಕಗಳು ಇಲ್ಲಿ ಸಿಗುವುದು ಕಡಿಮೆ. ಬಂದಾಗ ನಾನು ಆ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ. ನಮ್ಮ ಮನೆಯಿರೋದು ಮಹಾಲಕ್ಷ್ಮಿಪುರಂ ನಲ್ಲಿ, ಜೆ.ಪಿ. ನಗರಕ್ಕೆ ಹೋಗೋದು ಒಂದು ದೊಡ್ಡ ಸಾಹಸ.ಆದರೂ ತಪ್ಪಿಸಿಕೊಳ್ಳಲ್ಲ.
ನಾಟಕ ನೋಡಿದ ಮೇಲೆ ನೀಲೇಶ ಹಾಗೂ ನಿಹಾರಿಕಾ sms ಒಟ್ಟೊಟ್ಟಿಗೆ ಬಂದಿತ್ತು..
ನೀಲೇಶ: ನಾಟಕ ಸಕತ್ ಅಕ್ಕ...dont miss
ನಿಹಾರಿಕ: mommy marathi drama was awesome. you should watch ಅಂದಾಗ ಕೂಡಲೆ indianstage ನಲ್ಲಿ ಆನ್ ಲೈನ್ ಟಿಕೆಟ್ ಗೆ ಟ್ರೈ ಮಾಡಿದೆ, ಆದರೆ ಯಾಕೋ ಅದು ಸರಿ operate ಆಗ್ತಾ ಇರಲಿಲ್ಲ.ಮರುದಿನ ಬೆಳಿಗ್ಗೆ 9 ಗಂಟೆಯಿಂದ 9.30 ತನಕ ಕಿರಣ ವಟಿ ಯವರ ಸೆಲ್ ನಂಬರ್ ಗೆ (ನಾಟಕದ ಟಿಕೆಟ್ ಅವರಲ್ಲಿ ಲಭ್ಯವೆಂದು ನನಗೆ ಇ-ಮೈಲ್ ನಲ್ಲಿ ಬಂದಿತ್ತು) ಪ್ರಯತ್ನಿಸಿ, ಅವರು ಫೋನ್ ಎತ್ತುಕೊಳ್ಳದಿದ್ದಾಗ, ಏನಾದರಾಗಲಿ ರಂಗಶಂಕರಕ್ಕೆ ಹೋಗಿ ನೋಡುವುದು, ಟಿಕೆಟ್ ಸಿಕ್ಕರೆ ಸಿಗುತ್ತದೆ, ಇಲ್ಲದಿದ್ದರೆ shankaras ನಲ್ಲಿ ಯಾವುದಾದರು ಪುಸ್ತ್ತಕ, ಸಿ.ಡಿ ಕೊಂಡು, ಜಯನಗರ 4th ಬ್ಲಾಕ್ ಒಂದು ರೌಂಡ್ ಹಾಕಿ ಬರುವುದು ಅಂತ. 9.30 ವರೆ ಸುಮಾರಿಗೆ ಕಿರಣ ವಟಿಯವರೆ ಫೋನ್ ಮಾಡಿದಾಗ ನಾನು ಎರಡು ಟಿಕೆಟ್ ಬುಕ್ ಮಾಡಿದೆ.
ನಾಟಕ ನಾನು ಮಾತ್ರ ಅಲ್ಲ ಮಾಲವಿಕ ಕೂಡ ಎಂಜಾಯ್ ಮಾಡಿದಳು.ರಂಗಶಂಕರ jampacked. ಮರಾಠಿ ಮಾತನಾಡುವುವವರನ್ನು ಕಂಡು ನನಗೆ ಮುಂಬೈ ಗೆ ಹೋಗಿ ಬಂದಷ್ಟೇ ಖುಶಿ. ಮನೆಗೆ ಬಂದು ನಿಹಾ ಹಾಗು ನೀಲೇಶ ಇಬ್ಬರಿಗೂ ನನಗೆ ನಾಟಕ, ಅದರಲ್ಲಿನ ಹಾಡು ಎಲ್ಲವೂ ಇಷ್ಟವಾಯಿತು, ಮಾತ್ರವಲ್ಲ ಎಲ್ಲರ ಜತೆ ನಾನು ’once more’ ಕೂಗು ಹಾಕಿದ್ದನ್ನು sms ಮಾಡಿದೆ.
ನಿಹಾ smiley ಕಳಿಸಿದ್ದರೆ, ನೀಲೇಶ, ’ಅಕ್ಕ, ನನಗೆ ಅದರಲ್ಲಿನ ಎಲ್ಲ ಹಾಡುಗಳು ಬಾಯಿ ಪಾಠ ಆಗಿದೆ. ನಾನು ಚಿಕ್ಕಪ್ಪ ಹೆಗ್ಗೋಡಿಗೆ ಜೀಪ್ ಮಾಡಿಕೊಂಡು ಹೋಗಿದ್ವಿ. ದಾರಿಯಲ್ಲೆಲ್ಲ, ಹೋಗ್ತಾ ಬರುತ್ತಾ ಆ ಸಂಗೀತ ನಾಟಕದ ಆಡಿಯೋ ಕೇಳ್ತಾ ಹೋದ್ವಿ’ ಅಂತ ಮರು sms ಮಾಡಿದ. ನಾನು ನಾಗರಾಜ ಜವಳಿಯವರು ತಲೆದೂಗುತ್ತ, ವಾಹ!! ಅಂತ ಕೈ ಮೇಲೆತ್ತಿದ್ದು, ಪ್ರಯಾಣದ ಮಧ್ಯದಲ್ಲಿ ಗೋಳಿ ಬಜೆ ತಿಂದಿದ್ದು ಇಲ್ಲಿ ಕೂತು imagine ಮಾಡ್ತಾ ಇದ್ದೆ. ಮನಸ್ಸು ಎಷ್ಟು ವಿಚಿತ್ರ ಅನ್ನುವುದಕ್ಕೆ ಇದೂ ಕೂಡ ಒಂದು ನಿದರ್ಶನ- ನಾನು ನಾಗರಾಜ ಜವಳಿಯವರ ಬಗ್ಗೆ ಕೇಳಿದ್ದೇನೆ, ಅವರನ್ನು ನೋಡಿಲ್ಲ.. ಅವರ ಸಾಂಸ್ಕೃತಿಕ ಚಟುವಟಿಕೆ, ಅವರ ಅಗಾಧ ಪುಸ್ತಕದ collection, ಓದುವ ಹವ್ಯಾಸದ ಬಗ್ಗೆ ಯೋಗೇಶ ಅಣ್ಣನವರಿಂದ ಕೇಳಿದ್ದೇನೆ, ಆದರೆ ಅವರನ್ನು ಭೇಟಿಯಾಗುವುದನ್ನು ಮುಂದಕ್ಕೆ  ಹಾಕುತ್ತ ಬಂದಿದ್ದೆ. ತೀರ್ಥಹಳ್ಳಿಗೆ ಹೋದಾಗ ತೋಟದ ಕೆಲಸ, ಶ್ರೀಕಾಂತ ಅಕ್ಕನಿಗೆ (ಅವರಿಗೂ ವಯಸ್ಸಾಗಿದೆ) ಸ್ವಲ್ಪ ಮನೆ ಕೆಲಸದಲ್ಲಿ ಸಹಾಯ ಮಾಡುವುದು ಇದರಲ್ಲೇ ಸಮಯ ಹೋಗುತ್ತಿತ್ತು. ಈಗ ’ಛೆ’ ಅನ್ನಿಸುತ್ತಿದ್ದೆ.
 ಇದು ನನ್ನಕಡೆಯಿಂದ ಒಂದು ಪುಟ್ಟ  ಬ್ಲಾಗ್ ನಮನ ಕಣ್ಮರೆಯಾದ ನಾಗರಾಜ ಜವಳಿ ಮಾಮನವರಿಗೆ. ಮುಂದಿನ ಸಲ ತೀರ್ಥಹಳ್ಳಿಗೆ ಹೋದಾಗ ಅವರನ್ನು ಭೇಟಿಯಾಗಬೇಕೆಂದಿದ್ದೆ!!!
:-(

October 14, 2009

ಒಂದು ಭಾನುವಾರ- ಹಾಗೆ ಸುಮ್ಮನೆ

ಇತ್ತೀಚಿಗೆ ರಂಗಶಂಕರದಲ್ಲಿ ಮಧ್ಯಾನ್ಹ 3.30 ಗಂಟೆಗೆ ನಾಟಕದ ಶೋ ಇಡುತ್ತಾರೆ, ಇದರಿಂದ ನಮಗೆ ಅನುಕೂಲವಾಗಿದೆ. ಮಹಾಲಕ್ಷ್ಮಿಪುರಂ ದಿಂದ ಜೆ.ಪಿ ನಗರ ಸ್ವಲ್ಪ ದೂರ. ರಿಕ್ಷಾದವರು ಕೆಲವೊಮ್ಮೆ ಬರಲು ಒಪ್ಪುವುದಿಲ್ಲ.

ಭಾನುವಾರ ೩.೩೦ ಗಂಟೆಯ ಶೋ ‘ನಾ ತುಕಾರಾಮ್ ಅಲ್ಲ’ ಗೆ ಹೊರೆಟೆವು. ಸ್ವಲ್ಪ ಗಡಿಬಿಡಿಯಾಯ್ತು. ಬಸ್ಸು, ರಿಕ್ಷಾ ಹಿಡಿದು, ರಂಗಶಂಕರ ತಲುಪಿದಾಗ ಶೋ ಶುರು ಆಗುವ ಮೊದಲ ಗಂಟೆಯ ಸದ್ದಾಯಿತು. on-line ಟಿಕೆಟ್ ಬುಕ್ ಮಾಡಿದ್ದರಿಂದ ಅದನ್ನು ಕೊಟ್ಟು ಬೇರೆ ಪಾಸ ಅವರಿಂದ ಪಡೆದುಕೊಳ್ಳ ಬೇಕಿತ್ತು. ಅಂತು ಅದೆಲ್ಲಾ ಫೋರ್‌ಮೆಲಿಟಿ ಪೋರೈಸಿ, ಓಡ್ತಾ ಮೆಟ್ಟಿಲು ಹತ್ತಿ, ತುಂಬಾ ಎತ್ತರದ ಜಾಗದಲ್ಲಿ ಹೋಗಿ ಕುಳಿತು ಕೊಂಡೆವು, ಉಳಿದಿದ್ದ ಜಾಗವೆಲ್ಲಾ ಭರ್ತಿಯಾಗಿತ್ತು.

ನಾಟಕ ಇನ್ನೂ ಶುರು ಮಾಡಿರಲಿಲ್ಲ. ಅದಕ್ಕೆ ಸುಮ್ಮನೆ ಪರಿಚಯದವರೂ ಯಾರಾದರೂ ಇದ್ದಾರಾ ಅಂತ ನೋಡುತ್ತಿರುವಾಗ ಜಯಂತ ಕಾಯ್ಕಿಣಿ ಅವರ ಮಗನ ಜತೆ ಕೂತಿದ್ದು ಕಾಣಿಸಿತು ದೂರದಲ್ಲಿ ಸುಧನ್ವಾ ದೇರಾಜೆ ಯವರನ್ನು ಕಂಡೆ. ಅವರ (ಮುಖ) ಪರಿಚಯ ನನಗೆ ಮೇ ಪ್ಲವರ್ ನ,fish market ಕಾರ್ಯಕ್ರಮದಲ್ಲಿ, ದುಂಡಿರಾಜ ಅವರ ಕವನ ಗಳ ಬಗ್ಗೆ ಮಾತನಾಡಲು ಕರೆದಾಗ ಆಗಿತ್ತು. (ಆ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಅವರ ಕಡೆ ಬೆಟ್ಟು ಮಾಡಿ- ಅವನು ಸುಧನ್ವಾ ದೇರಾಜೆ-ಉಜಿರೆಯವನು- ಒಳ್ಳೆಯ ಹುಡುಗ ಅಂತ ಪರಿಚಯಿಸಿದ್ದು ನೆನಪಾಗಿ ನಗೆ ಬಂದಿತ್ತು) ದೇರಾಜೆಯವರು ತುಂಬ ಕುತೂಹಲದಿಂದ ರಂಗಸಜ್ಜಿಕೆಯನ್ನು study ಮಾಡ್ತಾ ಇದ್ದರು. (ಮರು ದಿನ ನಾಟಕದ ಬಗ್ಗೆ ಪುಟ್ಟ ಮುದ್ದಾದ ಬರಹ ವಿಜಯ ಕರ್ನಾಟಕದಲ್ಲಿ ಹಾಕಿದ್ದರು.)
ನಾವು ಕುಳಿತುಕೊಂಡ ಸಾಲಿನಲ್ಲಿ ಕೆಲವು ಖಾಲಿ ಸೀಟ್ ಇದ್ದುದರಿಂದ, ಅರುಂಧತಿ ನಾಗ ನಮ್ಮ ಹತ್ತಿರ ಕುಳಿತುಕೊಂಡ್ರು. ಕೂತ ಕಡೆಯಿಂದ ಎಲ್ಲರಿಗೂ ಮೊಬೈಲ್ ಸ್ವಿಚ್ ಆಫ್ ಮಾಡಲು ರಿಕ್ವೆಶ್ಟ್ ಮಾಡ್ತಾ ಇದ್ರು. ಜಯಂತ ಕಾಯ್ಕಿಣಿ ಮಾಡಿರಲಿಲ್ಲ. ಅದಕ್ಕೆ ಅರುಂಧತಿ ಅವರ ಬಳಿ ಹೋಗಿ, ಅವರ ಕೈ ಕುಲುಕಿ, ಕುಶಲೋಪರಿ ಬಳಿಕ ಅವರನ್ನು ಮೊಬೈಲ್ ಸ್ವಿಚ್ ಆಫ್ ಮಾಡಲು ಕೇಳಿಕೊಂಡರು.

ನಾಟಕ ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಕೆಲವು ಡಯಾಲಗ್ ತುಂಬಾ ಉದ್ದವಿತ್ತು. ಶ್ರೀಕಾಂತ್ ತುಂಬಾ ನಗ್ತಾ ಇದ್ದರು. ಅವರೆಲ್ಲಾದ್ರು ನಗ್ತ ನಗ್ತ ಬೀಳಬಹುದೆಂದನಿಸಿ, ನಾಟಕಕ್ಕಿಂತ ಅವರನ್ನು ಗಮನಿಸ್ತ್ತಾ ಇದ್ದೆ. ಎಲ್ಲ ಪಾತ್ರಧಾರಿಗಳು ತುಂಬಾ ಚೆನ್ನಾಗಿ ಅಭಿನಯಿಸಿದ್ರು. ವೃದ್ಧ್ಯಾಪದಲ್ಲಿ ಕಾಡುವ ಅನಿಶ್ಚಿತತೆ, ಅದನ್ನು ದೂರಮಾಡಲು ವೃದ್ದರು ಕಂಡು ಕೊಂಡ ಉಪಾಯ ತಮಾಷೆಯಾದ್ರೂ, ಮನಸ್ಸಿಗೆ ತಟ್ಟುವಂತಿತ್ತು. ನನ್ನ ಹಿರಿ ಮಗಳು ಬ್ಯಾಕ್ ರೆಸ್ಟ್ ಗೆ ತಲೆಯಾನಿಸಿ ಒಳ್ಳೆ ನಿದ್ದೆ ಮಾಡಿದಳು. ಯಾಕೆಂದರೆ ಪ್ರತಿ ಭಾನುವಾರ ಊಟದ ನಂತರ ಒಂದಷ್ಟು ಮಲಗುವುದು ಅವಳ ಅಭ್ಯಾಸ. ನಾಟಕ ಮುಗಿದ ಮೇಲೆ ‘ಇಷ್ಟು ಬೇಗ ಮುಗಿದು ಹೋಯಿತಾ ಅಂತ ಅವಳ ಪ್ರಶ್ನೆ. ಸಧ್ಯ ಅವಳು ಮಲಗಿದ್ದು ಇವರಿಗೆ ಗೊತ್ತಿರಲಿಲ್ಲ. ಇಲ್ಲದಿದ್ದರೆ ಇವರು ಲೆಕ್ಚರ ಮೋಡ್ ಗೆ ಸಜ್ಜಾಗುತ್ತಿದ್ದರು.

೫.೩೦ ಗೆ ನಾಟಕ ಸಮಾಪ್ತ ವಾಯ್ತು. ಹೊರಗೆ ಜಯಂತ ಕಾಯ್ಕಿಣಿ ಅವರ ಮಗನನ್ನು ಆಪ್ತರಿಗೆ ಪರಿಚಯಿಸ್ತಾ ಇದ್ದರು. ನಾವು ಶಂಕರ್ ಬುಕ್ ಹೌಸ್ ನಿಂದ ಕೆಲವು ಹಳೆಯ ಕಪ್ಪು-ಬಿಳುಪು , ಕನ್ನಡ ಫಿಲ್ಮ್ ಸಿ. ಡಿ. ಗಳನ್ನು ಕೊಂಡುಕೊಂಡೆವು.

ಮಕ್ಕಳಿಗೆ ಅಷ್ಟು ಬೇಗ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಅದಕ್ಕೆ ನಮ್ಮವರು, ‘ನಡೀರಿ, ಗಾಂಧಿಬಜಾರ್ ಕಡೆಗೆ ಹೋಗುವ. ನೀವು ಅಲ್ಲಿ ಹೋಗಿಲ್ಲವಲ್ಲ’ ಅಂತ ಹೇಳಿ ರಿಕ್ಷಾದಲ್ಲಿ ಹೋಗಿ ಹೋಟೆಲ್ ಶಿವ ಸಾಗರ್ ಹತ್ತಿರ ಇಳಿದು. ಅಲ್ಲಿಂದ ನಮ್ಮನ್ನು ನಡೆಸಿಕೊಂಡು, ‘ಹಳೆಯ ಸಾಹಿತಿಗಳಿಗೆಲ್ಲ, film makers ಗಳಿಗೆಲ್ಲ ಅಚ್ಚು ಮೆಚ್ಚಿನ ತಾಣ ಅಂತ ವಿವರಿಸ್ತಾ, ಅಲ್ಲಿ ಭೇಟಿ ನೀಡುತಿದ್ದ ಎಲ್ಲ ಸಾಹಿತಿಗಳ ಹೆಸರನ್ನು ಪಟ ಪಟನೆ ಹೇಳುತ್ತಾ ಹೋದ್ರು. ಅಲ್ಲಿನ ಹೂವಿನ ಮಾರುಕಟ್ಟೆ ನನಗೆ ತುಂಬಾ ಇಷ್ಟವಾಯ್ತು. ತರಹ ತರಹದ ಆಕಾರದಲ್ಲಿ ಕಟ್ಟಿದ ಹೂ ಮಾಲೆ, ವಿವಿಧ ಜಾತಿಯ ಹೂಗಳು, ಅದನ್ನು ಕೊಳ್ಳುವ ಜನರು.ಬಹುಶ: ಅಲ್ಲೆಲ್ಲೋ ದೇವಸ್ಥಾನವಿದೆಯೋ ಎನೋ, ಗೊತ್ತಾಗಲಿಲ್ಲ.

ಡಿ.ವಿ.ಜಿ ರೋಡಲ್ಲಿ ಗುಲಕನ್ನ್-ಮಸಾಲಾ ಸೋಡಾ ಅಂಗಡಿಗೂ ಕರೆದುಕೊಂಡು ಹೋದ್ರು. ಅಂಗಡಿಯವನ ಮಾತನ್ನು ನನ್ನ ಮಕ್ಕಳು ಮಿಮಿಕ್ರಿ ಮಾಡಿದಾಗ, ಕುಡಿಯುತ್ತಿರುವ ಸೋಡಾ ನೆತ್ತಿಗೆ ಹತ್ತಿ, ಇವರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. ನಿಮಗೆ ನಗಲಿಕ್ಕೆ- ತಮಾಷೆ ಮಾಡಲಿಕ್ಕೆ ಹೊತ್ತು-ಗೊತ್ತು ಇಲ್ಲ ಅಂತ ಅಂದು ಬಿಟ್ರು. ಆ ಸೋಡ ಅಂಗಡಿಗಿಂತ ಮುನ್ನ, ದೇವರ ಸಾಮಾನು, ಕುಸುರಿ ಕೆತ್ತನೆಯ ಕೊಬ್ಬರಿ, ಸಕ್ಕರೆ ಅಚ್ಚುಗಳನ್ನು ಮಾರುವ ಸುಮಾರು ಅಂಗಡಿಗಳನ್ನು ನೋಡಿದೆ. ಅಲ್ಲಿ ಸಹ ಸಾಕಷ್ಟು ಜನಸಂದಣಿ ಇತ್ತು. ಅಂಗಡಿಯವನಿಗೆ ‘ಇಲ್ಲಿ ಯಾವಾಗಲೂ ಹೀಗೆ ರಶ್ ಆ’? ಅಂದಿದ್ದಕ್ಕೆ ಅವನು ‘ಅಮ್ಮ,- ಮದುವೆ, ಮುಂಜಿ, ಬಾಗಿನ, ಗಣೇಶ ಗೌರಿ ವೃತಕ್ಕೆ, ಏಳನೇ ತಿಂಗ ಳ ಶಾಸ್ತ್ರಕ್ಕೆ , ದೇವರ ಧೂಪ, ದೀಪ, ಬತ್ತಿ ಮುಂತಾದ ಸಾಮಾನೆಲ್ಲಾ ನಮ್ಮಲ್ಲಿ ದೊರೆಯುತ್ತೆ, ಅದಕ್ಕೆ ಇಲ್ಲಿ ಯವಾಗಲೂ ಜನ ಏನನ್ನಾದ್ರೂ ಕೊಂಡುಕೊಳ್ಳ್ತಾರೆ ಅಂತ ಹೇಳಿದ್ರು.

ಹಾಗೆ ನಡೆದುಕೊಂಡು ಹೋಗ್ತಾ ಇದ್ದಾಗ ನಮ್ಮೆದುರೇ ಅಂಕಿತ ಬುಕ್ಕ ಸ್ಟೋರ್ ಸಿಕ್ಕಿತು. ‘ಬಾ ನಿನಗೆ ನಿನ್ನ ಫ್ರೆಂಡ್ (ವಸುಧೇಂದ್ರರ ಹಂಪಿ ಎಕ್ಸ್‌ಪ್ರೆಸ್) ಪುಸ್ತಕ ಕೊಡಿಸ್ತೇನೆ ಅಂತ ಇವರು ನಮ್ಮನ್ನೆಲಾ ಅಂಗಡಿಗೆ ಕರೆದು ಕೊಂಡು ಹೋದ್ರು. ಪುಸ್ತಕ ದ ಅಂಗಡಿ ಹೊಕ್ಕಿದ್ದು ಅಂದ್ರೆ ಸಧಾರಣವಾಗಿ ನಾವೆಲ್ಲಾ ಹೊರಗೆ ಬರುವುದು ಎರಡು ಗಂಟೆ ಮೇಲೆ. ಮಕ್ಕಳಿಬ್ಬರೂ ಕನಿಷ್ಠ ಪಕ್ಷ ಎರಡು ಕಾಮಿಕ್ ಬುಕ್ ಗಳನ್ನು ಓದಲೇ ಬೇಕು. ನನಗ್ಯಾಕೋ ಅಂಗಡಿ ತುಂಬಾ ಕ್ರಾಂಪ್ಡ (claustrophobic ) ಅನ್ನಿಸಿತು. ಅದಕ್ಕೆ ನಾನು ಮೆಟ್ಟಿಲ ಹತ್ತಿರ ಇದ್ದ ಪುಸ್ತಕದ ಮೇಲೆ ಕಣ್ಣೋಡಿಸ್ತಾ ಇದ್ದೆ. ಎರಡು ಹಂಪಿ ಎಕ್ಸ್‌ಪ್ರೆಸ್ ಪುಸ್ತಕಗಳು, ಜಯಂತ ಕಾಯ್ಕಿಣಿ ಕವಿತೆಗಳ ಪುಸ್ತಕ ‘ಶ್ರಾವಣ ಮಧ್ಯಾನ್ಹ-ನೀಲಿ ಮಳೆ’ ಪಕ್ಕದಲ್ಲಿಟ್ಟು, ಅಂಗಡಿಗೆ ಬಂದ ಇತರ ಜನರನ್ನು ಗಮನಿಸ್ತಾ ಇದ್ದೆ. ತುಂಬ ಜನ ಇದ್ದರು. ಜಾಸ್ತಿ ಯುವಕರೇ. ಖುಶಿಯಾಯ್ತು. ಜನರಲ್ಲಿ ಪುಸ್ತಕ ಓದುವ ಅಭ್ಯಾಸ ಇನ್ನೂ ಇದೆ ಅಂತ ಆಯ್ತು

ಆಗಲೇ ಗಂಟೆ ೮.೩೦ ಯಾಗಿತ್ತು. ಅವರೆನ್ನೆಲ್ಲಾ ಹೊರಡಿಸಿ, ರೋಟಿ ಘರ್ ನಲ್ಲಿ ಊಟ ಮಾಡಿದ್ವಿ. ಮತ್ತೆ ಮನೆಗೆ ಮರಳಲು, ನಮ್ಮ ಏರಿಯಾಗೆ ಬರಲು ಯಾವೊಬ್ಬ ರಿಕ್ಷಾದವನೂ ಒಪ್ಪಲಿಲ್ಲ. ಬೇರೆ ವಿಧಿಯಿಲ್ಲದೇ ಬಸ್ಸ್ ಗೆ ಕಾದು, ಅಂತು ಇಂತು ಬಸ್ಸು ಬಂದು, ಅದರಲ್ಲಿ ಕುಳಿತು ಕೊಳ್ಳಲು ಜಾಗ ಸಿಕ್ಕಾಗ ನೆಮ್ಮದಿ. ಯಾಕೆಂದ್ರೆ ಪುಸ್ತಕ ಖರಿದಿ ಜೋರಾಗಿ, ಬ್ಯಾಗ್ ತುಂಬಾ ವಜ್ಜೆ heavy ಆಗಿತ್ತು. ಕಿಟಕಿ ಬಾಗಿಲು ತೆಗೆದು, ನನ್ನ ದೊಡ್ಡಮಗಳಿಗೆ ಆ ಜಾಗ ಬಿಟ್ಟು ಕೊಟ್ಟು ನಾನು ಪಕ್ಕದಲ್ಲಿ ಕುಳಿತುಕೊಂಡೆ.

ಬಸ್ಸ್ ಹತ್ತುವಾಗಲೇ ಖಾಲಿ ಇರುವ ಸೀಟ್ ನ ಹಿಂಬದಿ ಒಂದು ಪುಟ್ಟ ಪಾಪು ನ ನೋಡಿದ್ದೆ. ಸರಿ , ಕುಳಿತು ಎರಡು ನಿಮಿಷದ ಮೇಲೆ ತಲೆ ಮೇಲೆ ಪುಟ್ಟ ಕೈ ಯಿಂದ ತಬಲಾ ಬಾರಿಸಿದ ಹಾಗೆ ಅನ್ನಿಸ್ತು. ನಾನು ತಿರುಗಿ ನೋಡಲಿಲ್ಲ. ಹಾಗೇ ಮೂರು ನಾಲ್ಕು ಬಾರಿ ಆಯ್ತು. ಬಹುಶ: ನನ್ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಿದು ಮಗುವಿಗೆ ಆಶ್ಚರ್ಯ ವಾಗಿರಬಹುದು. ನಿಧಾನವಾಗಿ ಪುಟ್ಟ ಕೈ ನಿಂದ ಸರಳು ಹಿಡಿದುಕೊಂಡು ಮುಖ ನನ್ನ ಬಳಿಗೆ ತಂದಿತು. ನಾನು ಮಗುವನ್ನು ನೋಡಿ, ತಟ್ಟಂತ ನಾಲಿಗೆ ಹೊರಚಾಚಿದಾಗ, ಮೊದಲಿಗೆ ಬೆಚ್ಚಿ ಆಮೇಲೆ ತಕ್ಷಣ ಅದು ಗಟ್ಟಿ ನಗಲು ಶುರು ಮಾಡಿತು. ಹಲ್ಲಿಲ್ಲದ ಬೊಚ್ಚು ಬಾಯಿಯ, ಜೊಲ್ಲು ಸುರಿಸುತ್ತಾ ನಕ್ಕಿದ್ದು ತುಂಬಾ ಖುಶಿ ಕೊಟ್ಟಿತು. ಮಗುವಿನ ಅಪ್ಪ ಅಮ್ಮ ಜಂಬದಿಂದ ಮಗುವಿನ ಬಾ ಲೀಲೆ ಹೇಳಲು ಮುಂದಾದರು. ಮಗುವಿನ ಹೆಸರು ಶ್ರೀ ರಾಮ ಚಂದ್ರ. ೧೧ ತಿಂಗಳು ವಯಸ್ಸು, ನೋಡಲಿಕ್ಕೆ ದುಂಡಗಿತ್ತು, ಮುದ್ದಾಗಿತ್ತು. ಸುಮಾರು ಹೊತ್ತು ಆಡ್ತಾ , ಒಂದು ಅರ್ಧಾ ಲೀಟರ್ ಜೊಲ್ಲು ಸುರಿದಿರಬೇಕು. ಆವಾಗಾವಾಗ ನನ್ನ ವೈಲ್ ನಿಂದ ಅದರ ಬಾಯಿ ಒರೆಸುತ್ತಾ ಇದ್ದೆ. ಯಾವುದೋ ಒಂದು ದೇವರನಾಮ (ಪವಮಾನ) ‘ಆಆಆಆsssssss ಅದರ ಬಾಲ ಭಾಷೆಯಿಂದ’ ಮಗುವಿನ ತಂದೆತಾಯಿ ಹಾಡಿಸಿದ್ರು. ಮತ್ತು ಅವರು ಇಳಿಯುವ ಸ್ಟಾಪ್ ಬಂತು. ಮಗುವಿಗೆ ದುಂಡಗಿನ ಕಪ್ಪು ಬಟ್ಟು ಇಟ್ಟಿದ್ರೂ ನಾನು ದೃಷ್ಟಿಯಾಗದಂತೆ ನನ್ನ ಬೆರಳಿನಿಂದ ನೆಟಿಕೆ ಮುರಿದು, ಮಗುವನ್ನು ಅದರ ಪೋಷಕರ ಬಳಿಗೆ ಕಳಿಸಿದೆ.

ಎಷ್ಟು ಎಂಜಾಯ್ ಮಾಡಿದೆ ಆ ದಿನ.