June 12, 2013

ನಿರಾಳ

ಆತ ಅಡಿಗೆ ಮನೆಗೆ ಹೊಕ್ಕಾಗ ಆಕೆ ಹಾಲಿನ ಪ್ಯಾಕೆಟ್ ಒಂದನ್ನು ಕಟ್ ಮಾಡಿ ಪಾತ್ರೆಗೆ ಹಾಕ್ತಾ ಇದ್ದಳು. ಆ ಪ್ಯಾಕೆಟ್ ಕಂಡ ಕೂಡಲೆ ಅವನ ಕೋಪ ಭುಗಿಲ್ಲೆಂದಿತು. ಅವಳು ಏನಾದರೂ ಹೇಳುವ ಮುಂಚೆ ಛಟೀರ್ ಎಂದು ಅವಳ ಕೆನ್ನೆಗೆ ಹೊಡೆದ. ಹೊಡೆತವನ್ನು ನಿರೀಕ್ಷಿಸದ ಆಕೆ ಆಯ ತಪ್ಪಿ ಬಿದ್ದಳು. ಬೀಳುವಾಗ ಹಳೆ ಫ್ರಿಜ್ ನ ಅಂಚು ತಲೆಗೆ ತಾಗಿ ತಲೆಯಿಂದ ಬಳಬಳನೆ ರಕ್ತ ಸುರಿಯಲಾರಂಭಿಸಿತು. ಕಣ್ಣು ಕತ್ತೆಲೆ ಬಂದು ಬಿದ್ದಿದ್ದಳು ಆಕೆ.
ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದಳು. ತಲೆ ಎತ್ತಲಿಕ್ಕಾಗದಷ್ಟು ನೋವು. ಅವಳ ಅಮ್ಮ ಆಕೆಯ ಪಕ್ಕ ಕೂತವರು ಅವಳಿಗೆ ಪ್ರಜ್ಝೆ ಬಂದಿದ್ದನ್ನು ನೋಡಿ, ಕೂಡಲೆ ಅವಳ ಕಿವಿಯ ಹತ್ತಿರ ಬಾಗಿ, ಹೊರಗಡೆ ಪೋಲಿಸರಿದ್ದಾರೆ, ಕಾಲು ಜಾರಿ ಬಿದ್ದೆ ಅಂತ ಹೇಳಿಕೆ ಕೊಡು ಅಂತ ಪಿಸುಗುಟ್ಟಿದರು. ಮತ್ತೆ ನಿನಗೇನು ಬಂತು ಕೇಡು. ಅಷ್ಟು ಹೆಚ್ಚು ದುಡ್ಡು ತೆತ್ತು ಶ್ರೀಮಂತರು ಕುಡಿಯುವ ಹಾಲಿನ ಪ್ಯಾಕೆಟ್ ತಂದಿದ್ದು, ಅದೂ ಗಂಡ ನಿಗೆ ಒಳ್ಳೆಯ ಸಂಬಳವಿಲ್ಲವೆಂದೂ ಕೂಡ'?
ಆಕೆಗೆ ಅವಳ ಅಮ್ಮನ ಮೇಲೆ ಹೇಸಿಗೆ ಹುಟ್ಟಿತು. ತುಟಿಪಿಟಕ್ಕೆನ್ನದೆ ಮಣಭಾರ ಎನ್ನಿಸುವ ತಲೆಯನ್ನು ಆದಷ್ಟು ಪಕ್ಕಕ್ಕೆ ಹೊರಳಿಸಿದಳು
ಅವಳು ಬಿದ್ದು , ಅಡಿಗೆ ಮನೆಯೆಲ್ಲ ರಕ್ತ ಆದಾಗ, ಅವಳು ಅಲುಗಾಡದೆ ಮಲಗಿದ್ದನ್ನು ನೋಡಿ ಆತ ಅಕ್ಕಪಕ್ಕದವರನ್ನು ಕೂಗಿದ. ಅವರೆಲ್ಲ ಸೇರಿ ಆಕೆಯನ್ನು ಆಸ್ಪತ್ರೆಗೆ ತಂದಿದ್ದರು. ಪೋಲಿಸ್ ಕಂಪ್ಲೈನ್ ಕೊಡದೆ ಆಕೆಯನ್ನು ಸೇರಿಸಲ್ಲ ಅಂದಾಗ ಅಲ್ಲೆ ಹತ್ತಿರವಿದ್ದ ಪೋಲಿಸ್ ಸ್ಟೇಶನ್ ನಲ್ಲಿ ಕಂಪ್ಲೈನ್ ಲಾಜ್ ಮಾಡಿದ್ದರು. 6 ಗಂಟೆಗಳ ನಂತರ ಆಕೆಗೆ ಪ್ರಜ್ಞೆ ಮರುಕಳಿಸಿತ್ತು. ಈಗ ಅಮ್ಮನ ಈ ವರಾತ. ಆಕೆಗೆ ಸುಸ್ತಾಗಿತ್ತು.
ಬೇಡ ಬೇಡ ಅಂದರೂ ತನ್ನ ತಮ್ಮನನ್ನೆ ಪದವಿಧರೆಯಾದ  ಆಕೆಗೆ ಕಟ್ಟಿದ್ದಳು. ಓದಿಲ್ಲದೇ ಅಪಾಪೋಲಿ ತಿರುಗುತ್ತಿದ್ದವ. ಮದುವೆಯಾದರೆ ಸರಿ ಹೋಗುತ್ತಾನೆ ಅಂತ ಆಕೆ ಅಮ್ಮನ ವಿಶ್ವಾಸ. ಆಕೆಯ ಓದಿಗೆ ಆಕೆಯ sensibility ಗೆ ಅವನ ಒಂದು ಗುಣವೂ ತಾಳೆಯಾಗುತ್ತಿರಲಿಲ್ಲ. ಆದರೂ ಸಂಸಾರ ಎಂಬ ಸಮುದ್ರದಲ್ಲಿ ಧುಮುಕಿಯಾಗಿದೆ. ಈಜುವುದೊಂದೆ ನನ್ನ ಕೆಲಸ ಅಂತ ಆಕೆ stoic ಆಗಿ ಜೀವನ ನಡೆಸುತ್ತಿದ್ದಳು
ಅಮ್ಮ ಒಂದಿನ ಯಾವುದೋ ಸಮಾರಂಭದಲ್ಲಿ ಎಲ್ಲರೆದುರಿಗೇ ಆತ ಕಡಿಮೆ ಓದಿದವ, ಆಕೆಗೆ ಅವನ ಜತೆ ಮದುವೆ ಮಾಡಲು ಇಷ್ಟವೇ ಇರಲಿಲ್ಲ, ಈಗ ನೋಡಿ ಅಂತ ಸಂಭ್ರಮದಿಂದ ಹೇಳಿದಳೇನೋ ನಿಜ, ಆದರೆ ಆ ಮಾತನ್ನೆ  ತಲೆಯಲ್ಲಿಟ್ಟು ಅವನು ಆಕೆಗೆ ಇತ್ತೀಚಿಗೆ ಹಂಗಿಸಲು ಶುರು ಮಾಡಿದ್ದ.  ಕುಡಿದು ಬಂದಾಗ ಆಕೆ ಮುಖ ಸಿಂಡರಿಸಿ ಬಾಗಿಲು ತೆಗೆದಾಗ ಎರಡು ಹೊಡೆದಿದ್ದಾನೆ ಕೂಡ.
ಈಗ ಅವಳು ಚೊಚ್ಚಿಲ ಬಸುರಿ. ಅವಳಿಗೆ ಅವನ ಜತೆ ಏಗುವುದು ಕಷ್ಟ ವಾಗ್ತಿದೆ. ಮಗುವಿನ ಭವಿಷ್ಯ ಕೂಡ ಹಾಳಾಗುವುದರಲ್ಲಿದೆ ಎಂದು ಅವಳಿಗೆ ಅಸಮಾಧಾನ. ಅವಳಿಗೆ ತಾನು ಒಂದು ನೌಕರಿ ಮಾಡಿ ತನ್ನದೇ ಸ್ವಾವಲಂಬೀ ಬದುಕು ನಡೆಸಬೇಕೆಂಬ ಅಪೇಕ್ಷೆ.
ಅವಳು ಹುಡುಕುತ್ತಿದ್ದ ದಾರಿ ಅವಳ ಕಾಲಿಗೆ ಸಿಕ್ಕಿ ಬಿದ್ದಿದೆ.
ಅಮ್ಮನನ್ನು ಬಳಿ ಕರೆದು, 'ಅಮ್ಮ ,ನನಗೆ ಈ ವಿವಾಹದಿಂದ ಬಿಡುಗಡೆ ಮಾಡಿಸುತ್ತಿ ಎಂದಾದರೆ ನಾನು  ಆತನ ಬಗ್ಗೆ ಕಂಪ್ಲೈನ್ ನೀಡುವುದಿಲ್ಲ. ಅಷ್ಟಕ್ಕೂ ಹೆಚ್ಚು ಕ್ರಯದ ಹಾಲಿನ ಪ್ಯಾಕೆಟ್ ನಮ್ಮದಲ್ಲವೇ ಅಲ್ಲ. ಪಕ್ಕದ ಮನೆಯ ಮಗುವಿಗೋಸ್ಕರ ತಂದ ಹಾಲು. ಅವರ ಫ್ರಿಜ್ ಹಾಳಾಗಿದೆ ಅಂತ ನನಗೆ ಕೊಟ್ಟಿದ್ದರು. ಹಾಲು ಕಾಸಿ ಕೊಟ್ಟಿದ್ದರೆ ನಾವೇನೂ ಬಡವ ರಾಗ್ತಿರಲಿಲ್ಲ ಬಿಡು.ಕೇಳುವಷ್ಟು ವ್ಯವಧಾನ ಕೂಡ ಇಲ್ಲ ನಿನ್ನ ಅಳಿಯಂಗೆ.   ನನಗೆ ಅವನ ಜತೆ ಸಂಸಾರ ಮಾಡಲು ಇಷ್ಟವಿಲ್ಲ' ಎಂದಾಗ ಅಮ್ಮ ಕಕ್ಕಾಬಿಕ್ಕಿ.
(ಸುಮ್ನೆ ತೋಚಿದ್ದನ್ನು ಬೇಗ ಬೇಗ ಬರೆದು ಹಾಕಿದೆ...net ಸರಿಯಿಲ್ಲ. ಆಫಿಸ್ ನ dongle use ಮಾಡ್ತಿದ್ದೇನೆ..ಶ್ssss ಯಾರಿಗೂ ಹೇಳಬೇಡಿ ಮತ್ತೆ...ಈ ಕತೆ ಬರೀಬೇಕನ್ನಿಸಿದ್ದು ವ್ಯಾಸರಾಯ ಬಲ್ಲಾಳರ ಸಮಗ್ರ ಕತೆ'  ಗಳನ್ನು ಓದಿ)
ಇದು ಕತೆ ಬರೆಯುವ ಪ್ರಯಾಸ..ಈ ಹಿಂದೆ ಬರೆದ ಕತೆ (ಒಂದು feel good ಮಿನಿ ಕತೆ) ಯೊಂದನ್ನು ಆಪ್ತ ಮಿತ್ರರಿಗೆ ಕಳುಹಿಸಿದಾಗ ಅವರ ಉತ್ತರ ಹೀಗಿತ್ತು:
"ಮನಸಿಗೆ ಸಂತೋಷ ಕೊಡುವ ಪ್ರಸಂಗ.  ಕತೆಯಾಗಿ ಯಶಸ್ವಿಯಲ್ಲದಿದ್ದರೂ, ನಿಜವಾಗಿ ನಡೆದ ಘಟನೆಯಿರಬೇಕೆಂದು ಅನಿಸಿತು. ಕತೆಗೆ ಇಷ್ಟೊಂದೆಲ್ಲಾ ಆಕಸ್ಮಿಕಗಳು ಇರುವಂತಿಲ್ಲ!"
ಅವ್ರಿಗೊಂದು ಥ್ಯಾಂಕ್ಸ್ ಹೇಳುತ್ತಾ.....ನನ್ನ ಪ್ರಯತ್ನ ಜಾರಿಯಲ್ಲಿರಿಸುತ್ತಾ (ಈ ಪದ ಪ್ರಯೋಗ ಸರಿಯಾಗಿದೆಯಾ ಗೊತ್ತಿಲ್ಲ)
:-)

3 comments:

Anonymous said...

I like stories with happier endings.
- Shreekar

nenapina sanchy inda said...

yeah i agree, Shree kar..but this too ends on a 'sort' of positive note nhave?/
take care
:-)
malathi S

Srikanth Manjunath said...

ಕುದಿಯುವ ಮನಕ್ಕೆ ಉಪ್ಪು ಹಾಕದೆ ನಿಧಾನ ಯೋಚನೆ ಎಂಥಹ ಯೋಜನೆಗಳನ್ನು ಸಾರ್ಥಕ ಪಡಿಸಿಕೊಳ್ಳುತ್ತೆ. ಕಥೆಯ ಓಟ ೧೦೦ ಮೀಟರ್ ಓಟದಂತಿದೆ. ಹೇಳಬೇಕಾದುದನೆಲ್ಲ ಒಮ್ಮೆ ಹೇಳಿ ಮುಗಿಸಿಬಿಟ್ಟಿದ್ದೀರ. ಸೂಪರ್ ಅಂತ ಹೇಳಬಹುದು.