November 29, 2012

ಚಿಕ್ಕ ಚಿಕ್ಕು ಕತೆ

ಟೀ ಕುಡೀತಾ ಬಾಲ್ಕನಿ ಮೇಲೆ ಕೂತಾಗ ಹೊಳೆದ ಕತೆ>>>>(love you Brooke Bond Red Label chai)
ತೋಟದಿಂದ ಮನೆಗೆ ತಂದಿದ್ದ ದೊಡ್ಡ ಚಿಕ್ಕುಗಳನ್ನು ಮೃದುಲಾ ಹಣ್ಣಾ ಗಿಸಲು ಅವನ್ನು ಅಕ್ಕಿ ಡಬ್ಬಿಯಲ್ಲಿ ಹಾಕುತ್ತ ಇದ್ದಳು. ಅದರಲ್ಲಿ 5 ಕಾಯಿ ಚೆನ್ನಾಗಿ ಹಣ್ಣಾಗಿತ್ತು ಆಗಲೆ. ಅವನ್ನು ಬದಿಗಿಟ್ಟು, ಕೆಲಸದವಳು ಮೆನೆಕೆಲಸ ಮುಗಿಸಿ, ’ಹೋಗಿ ಬರ್ತೇನೆ ಅಕ್ಕ’ ಎಂದಾಗ...’ಈ ಚಿಕ್ಕುಗಳನ್ನು ಮನೆಗೆ ತೆಗೆದುಕೊಂಡು ಹೋಗು’ ಅಂತ ಅವಳ ಕೈಗೆ ಇತ್ತಳು. ಅವಳು ಹೋದ ಮೇಲೆ ಅಲ್ಲೆ ಇದ್ದ ಮೃದುಲಾಳ ತಂದೆ ಅವಳನ್ನು
 ತರಾಟೆಗೆ ತೆಗೆದುಕೊಂಡರು, ’ಅಷ್ಟು ಚೆನ್ನಾಗಿರೋ ರುಚಿಯಾಗಿರೋ ಹಣ್ಣನ್ನು ಆ ಕೆಲ್ಸದವಳಿಗೆ ಕೊಡ ಬೇಕಿತ್ತೆ? ಎದುರು ಮನೆಯ ಛಾಯಾಪತಿ ಮನೆಗೆ ಕಳಿಸಬಹುದಿತ್ತು.’
ಮೃದುಳಲಿಗೆ ಈಗ ಆಲೋಚನೆ, ಅಲ್ಲ ಆ ಛಾಯಾಪತಿಯವರ ಕುಟುಂಬ ಅಮೇರಿಕಾದಿಂದ ಬಂದವರ ತರಹ ಆಡ್ತಾರೆ, ಮಾತು ಮಾತಿಗೆ ರಾಂಬುಟಾನ್, ಸ್ಟ್ರಾಬೆರ್ರಿ, ರಾಸ್ಪಬೆರ್ರಿ ಅಂತಾರೆ ವಿನ ಭಾರತ ದೇಶದ ಹಣ್ಣಿನ ಹೆಸರು ಸುದ್ದಾ ಉಸುರಿಸಲ್ಲ. ಅವರಿಗೆ ಚಿಕ್ಕು ಕೊಟ್ಟರೂ ಅದೂ ಗ್ಯಾರಂಟಿ ಕಸದ ಬುಟ್ಟಿಗೆಸೇರುತ್ತೆ ಅಂತ ಅವಳಿಗೆ ಗೊತ್ತು, ಆದರೆ ಯಾರಿಗೂ ಎದುರು ಮಾತಾಡುವ ಸ್ವಭಾವ ಮೃದುಲಾಳದಲ್ಲ್ಲ. ’ಅಲ್ಲ ಅವರು ಉಳ್ಳವರು ಹಣ್ಣನ್ನು ಕಾಸುಕೊಟ್ಟು ತಂದುಕೊಂಡು ತರುತ್ತಾರೆ. ನೂರಾರು quantityಯಲ್ಲಿ ನಮ್ಮ ತೋಟದಲ್ಲಿ ಬೆಳೆದ ಐದು ಚಿಕ್ಕು ಹಣ್ಣನ್ನು ಕೆಲಸದವಳಿಗೆ ಕೊಟ್ಟ ಮಾತ್ರಕ್ಕೆ ಪ್ರಳಯ ಬರುತ್ತಾ??? ಮತ್ತೆ ಮೃದುಲಾ ಅವಳಿಗೆ ಸರಿ ಎನಿಸಿದ್ದನ್ನು ಮಾಡುವವಳೆ ಬಿಡಿ..
ಆದರು ಆಲೋಚಿಸಿ: ನಾವು ಉಳ್ಳವರಿಗೆ ಕೊಡುತ್ತೇವಲ್ಲವೇ (for eg ಗೃಹ ಪವೇಶ, ಮದುವೆ, ಮುಂಜಿ, ಹುಟ್ಟುಹಬ್ಬ ಇತ್ಯಾದಿಗಳಿಗೆ...ಇಲ್ಲದ್ದವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ (ನಾವು= most cases)
ಮೊದಲೇ ಕಂಜೂಸ್ ಎಂದು ಖ್ಯಾತಿ ಪಡೆದ ನಾ ಇನ್ನು ಮುಂದೆ ಯಾರಿಗೂ ಗಿಫ್ಟ್ ಕೊಡಲ್ಲ..:-))))

November 17, 2012

................??ವಿಷಾಧಬಂಧ

ಪತ್ತೆದಾರರಿಗೆ ಜೆನೆಟ್ ಹೇಳಿ ಕಳಿಸಿದ್ದಳು. ಆಕೆಯ ಪತಿ 4 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಎಷ್ಟೆ ಆಲೋಚನೆ ಮಾಡಿದರೂ ಆತ ಯಾಕೆ ಹಾಗೆ ಮಾಡಿದ ಎಂಬುದೆ ಅವಳಿಗೆ ತಲೆ ತಿನ್ನುತ್ತಿತ್ತು. ಅವರಿಬ್ಬರೂ ಸೇನೆಯಲ್ಲಿದ್ದವರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸೇವೆಯಿಂದ ನಿವೃತ್ತಿ ಹೊಂದಿದವರು. ಯಾವುದೋ ಒಂದು ಬಾಲ್ ಪಾರ್ಟಿ ಯಲ್ಲಿ ಸಿಕ್ಕಿ ಒಬ್ಬರಿಗೊಬ್ಬರ ಪರಿಚಯವಾಗಿತ್ತು. ಇಬ್ಬರೂ ಅನಾಥರು. ಹಾಗಾಗಿ ಸ್ವಲ್ಪ ವಯಸ್ಸಾಗಿದ್ದರೂ, ಒಬ್ಬರಿಗೂಬ್ಬರು ಕಂಪೆನಿಯಾಗಬಹುದೆಂದು ಮದುವೆಯಾಗಿದ್ದರು. ಮದುವೆಯಾಗಿ ಎರಡು ವರ್ಷಗಳ ಬಳಿಕ ಈ ದುರ್ಘಟನೆ. ಇಬ್ಬರಿಗೂ ಹೇಳಿಕೊಳ್ಳ್ಳುವಂತ ಆತ್ಮೀಯರು ಯಾರೂ ಇರಲಿಲ್ಲ. ಒಬ್ಬರಿಗೊಬ್ಬರಿದ್ದರು ಅಷ್ಟೆ.
ಪೋಲಿಸರಿಗೂ ಏನೂ ಹೊಳೆದಿರಲಿಲ್ಲ. ಅದಕ್ಕೆ ಅವಳು ಪತ್ತೆದಾರರನ್ನು ನೇಮಿಸಿದಳು. ಪತ್ತೆದಾರರು ಮನೆಯನ್ನು ಶೋಧಿಸುತ್ತಿದ್ದಾಗ ಅವರ ಕೈಗೆ ಒಂದು ಫೈಲ್ ಸಿಕ್ಕಿತು. ಆ ಫೈಲ್ ಫೋಲ್ಡರ್ ನಲ್ಲಿ ಕೆಲವು ಕಾಗದ ಪತ್ರಗಳ ಜತೆಗೆ ಒಂದು ಚೈನ್ ಹಾಗೂ ಅದಕ್ಕೆ ತಗುಲಿರುವ ಲಾಕೆಟ್ ಸಿಕ್ಕಿತು. ಅವರು ಲಾಕೆಟ್ ಅನ್ನು ಪರಿಶೀಲಿಸುವಾಗ ಅವಳೆ ಮುಂದಾಗಿ,
'ಆ ಚೈನ್ ನನ್ನದು. ಅದರ ಕೊಂಡಿ ತುಂಡಾಗಿದೆಯಂತ ಹಿಂದಿನ ವಾರ ನಾನು ಸೋಮನ್ ಕೈಲಿ ರಿಪೈರಿಗೆ ಅಂತ ಕಳಿಸಿದ್ದೆ. ಆದರೆ ಅದನ್ನು ಫೈಲ್ ನಲ್ಲೇ ಮರೆತಿದ್ದರು ಅನ್ನಿಸುತ್ತೆ'
ಪತ್ತೇದಾರ ಆ ಲಾಕೆಟ್ ಅನ್ನು ಆಚೀಚೆ ತಿರುಗಿಸುವಾಗ ಹೇಗೋ ಆ ಲಾಕೆಟ್ ತೆರೆದುಕೊಂಡಿತು. ಅದರಲ್ಲಿ ಒಂದು ಫೋಟೊ. ಆ ಫೋಟೊದಲ್ಲಿ ನಗುಮುಖದ ಇಬ್ಬರು ಮಕ್ಕಳು-ಡೊಡ್ಡವನು ಹುಡುಗ. ಪುನ: ಜೆನೆಟ್ ಲೇ ಮುಂದಾಗಿ,
'ನನಗೆ ಬುದ್ದಿ ಬಂದಾಗಿನಿಂದ ಅದು ನನ್ನ ಕೊರಳಿನಲ್ಲಿದೆ. ಬಹುಶ: ಅನಾಥಾಶ್ರಮಕ್ಕೆ ಸೇರಿಸುವಾಗ ನನ್ನ ತಂದೆಯೋ ತಾಯಿಯೋ ನನ್ನ ಕೊರಳಿಗೆ ಹಾಕಿರಬಹುದು'
ಚಿತ್ರ ಮಿನಿಯೇಚರ್ ಗಾತ್ರದ್ದು ಇದ್ದುದರಿಂದ ಅದರಲ್ಲಿನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಪತ್ತೆದಾರರು ಅವರ ಪರಿಚಯವಿರುವ ಛಾಯಾಗ್ರಾಹಕರ ಬಳಿ ಅದನ್ನು ಕೊಂಡೊಯ್ದು ಆ ಚಿತ್ರದ ಬ್ಲೊ ಅಪ್ ಒಂದನ್ನು ಮಾಡಿಸಿದರು.ಆ ಫೋಟೊದಲ್ಲಿನ ಹುಡುಗಿ ಮುಖಕ್ಕೂ ಜೆನೆಟ್ ಗೂ ಸಾಮ್ಯವಿತ್ತು  ಆ ಫೋಟೊದ ಕೆಳಗಡೆ ಸೂಕ್ಷ್ಮವಾಗಿ ನೋಡಿದರೆ ಒಂದು ಶಿಲುಬೆ ಆಕಾರ ಹಾಗೂ ಊರಿನ ಹೆಸರು ಕಾಣಸಿಕ್ಕಿತು. ನಮ್ಮ ಪತ್ತೆದಾರರ ಟೀಮ್ ಆ ಊರಿಗೆ ಹೋಯಿತು. ಅದೊಂದು ಪುಟ್ಟ ಊರು. ಹೆಚ್ಚಿನವರೆಲ್ಲ ಕ್ರಿಶ್ಚಿಯನ್ನರೆ. ಆ ಊರಿನ ಇಗರ್ಜಿಗೆ ತಾಗಿದ ಹಾಗೆ ಒಂದು ಅನಾಥಾಶ್ರಮ. ಅಲ್ಲಿಗೆ ಹೋದರು ಇವರೆಲ್ಲ. ತುಂಬ ಹಳೆಯ ರೆಕಾರ್ಡ್ ಗಳು ಅಲ್ಲಿ ಸಿಗುವುದು ಇವರಿಗೆ ಅನುಮಾನವಿತ್ತು. ಅಲ್ಲಿನ ಕಛೇರಿಯಲ್ಲಿ ಕೆಲಸ ಮಾಡುವವರೆಲ್ಲ ತರುಣರು. ಆದರೂ ಅವ್ರಿಗೆ ಕೇಳಿದರು. ಅವರಲ್ಲಿ ಒಬ್ಬರು, ತಡಿರೀ, ನಮ್ಮ ಅಂಟೋಣಿಯವರಿಗೆ ಕೇಳುವ. ಅವರು 90 ವರ್ಷ ವಯಸ್ಸಿನವರಾದರೂ ಬುದ್ದಿ ಮತ್ತು ನೆನಪು ತುಂಬ ಚುರುಕಾಗಿದೆ. ಸರಿ, ಅಂಟೋನಿಗೆ ಬುಲಾವ್ ಹೋಯಿತು. ಮುದುಕ ಅಂಟೋನಿ ನಿಧಾನವಾಗಿ ಕೋಲು ಹಿಡಿದು ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಬಂದ. ಅವನಿಗೆ ಲಾಕೆಟ್ ತೋರಿಸಲಾಯಿತು. ’ಅರೇ ಮೊನ್ನೆ ಭಾನುವಾರ ಅಷ್ಟೆ ಇನ್ನೊಬ್ಬ ವ್ಯಕ್ತಿ ಈ ಲಾಕೆಟ್ ಬಗ್ಗೆ ಕೇಳಿ ಹೋದರು. ಅವರಿಗೆ ಹೇಳಿದ ಹಾಗೆ ನಿಮಗೂ ಹೇಳುತ್ತೇನೆ. ’ಯುದ್ದದ ಸಮಯ ಆಗ ಏನು ಕಷ್ಟವೋ ಏನೋ ಆ ತಾಯಿ ಇಬ್ಬರು ಮಕ್ಕಳನ್ನು ಇಲ್ಲಿ ತಂದು ಬಿಡುವಾಗ ನಾನೇ ಇಲ್ಲಿದ್ದೆ. ಇಬ್ಬರ ಕುತ್ತಿಗೆಯಲ್ಲೂ ಸಮಾನಾದ ಚೈನೂ- ಲಾಕೆಟ್. ಹೆಣ್ಣು ಮಗು ತುಂಬ ಚಿಕ್ಕದು. ಇನ್ನೂ ತಾಯಿ ಹಾಲು ಕುಡಿಯುವ ಹಸುಳೆ.ಹಸಿವೆಯಿಂದಲೋ ಏನೋ ತುಂಬ ಅಳುತ್ತಿತ್ತು. ನಾನು ಹಾಗೂ ಫಾದರ್ ಆ ಮಗುವಿಗೆ ಹಾಲಿನ ಏರ್ಪಾಡು ಮಾಡಲು ಒಳಗೆ ಹೋದೆವು, ನಾವು ಬರುವಷ್ಟರಲ್ಲಿ ಆ ತಾಯಿ ಪರಾರಿ. ಸಾಧಾರಣ 5 ವರ್ಷದ ಹುಡುಗ ಮಾತ್ರ ಸುಮ್ಮನೆ ಎಲ್ಲ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದ. ಕೊಂಕಣಿ ಭಾಷೆ ಮಾತನಾಡುತ್ತಿದ್ದ. ಆ ರಾತ್ರಿ ಭೀಕರ ಯುದ್ದ. ಒಂದಾದ ಮೇಲೆ ಒಂದು ಬಾಂಬ್ ಸ್ಪೋಟ. ನಮ್ಮ ಈ ಹಳೇ ಅನಾಥಾಶ್ರಮದಲ್ಲಿ ಒಂದು ನೆಲಮನೆಯಿತ್ತು. ಆಶ್ರಮದ ಇತರೇ ಮಕ್ಕಳನ್ನೆಲ್ಲ ಒಟ್ಟು ಮಾಡಿ ಎರಡು ರಾತ್ರಿ ಅಲ್ಲೇ ಕಳೆದೆವು. ಮೂರನೆ ದಿನ ನಾವೆಲ್ಲ ಹೊರಗೆ ಬಂದು ನೋಡಿದ್ದಾಗ ಊರಿಗೆ ಊರೆ ಧ್ವಂಸ. ಇಬ್ಬರಿಗೂ ಹೆಸರು ನಾವೇ ಇಟ್ಟಿದ್ದು ಜೆನೆಟ್ ಮತ್ತು ಜೇಜು.
ಕೆಲ ತಿಂಗಳ ನಂತರ ಒಂದು ಹಿಂದು ಕುಟುಂಬ ಆ ಹುಡುಗನನ್ನು ದತ್ತು ತೆಗೆದುಕೊಂಡು ಹೋದರು. ಅದರ ವಿವರಗಳೆಲ್ಲ ಕಡೆತದಲ್ಲಿದ್ದವು. ಮೊನ್ನೆ ಬಂದ ವ್ಯಕ್ತಿಗೋಸ್ಕರ ಮೇಲ್ಛಾವಣಿಯಲ್ಲಿದ್ದ ಧೂಳು ತುಂಬಿದ ಕಡತಗಳನ್ನೆಲ್ಲ ತೆಗೆದು ಅಂದಾಜಿನಲ್ಲಿ ನಾಲ್ಕೈದು ಕಡತ ಹುಡುಕುತ್ತಿದ್ದ ಹಾಗೆ ನಮಗೆ ಆ ದತ್ತು ತೆಗೆದುಕೊಂಡ ಹುಡುಗನ ಪರಿವಾರದವರ ಅಡ್ರೆಸ್ ಸಿಕ್ಕಿತು. ಬಂದ ವ್ಯಕ್ತಿ ಒಂದು ದೊಡ್ಡ ಮೊತ್ತದ ಸಹಾಯಧನದ ರೂಪದಲ್ಲಿ ಚೆಕ್ ಬರೆದುಕೊಟ್ಟು ಅ ವಿಳಾಸ ಬರೆದುಕೊಂಡು ಹೋದರು’ ಇಲ್ಲಿಗೆ ಮಾತು ನಿಲ್ಲಿಸಿದ ಅಂಟೋನಿ. ಪತ್ತೆದಾರರೂ ಆ ವಿಳಾಸವನ್ನು ನೋಟ್ ಮಾಡಿಕೊಂಡು
ಮತ್ತೆ ಆ ಹುಡುಗಿ ಅವನ ತಂಗಿ, ಅವಳ ವಿಚಾರ ಏನಾದರೂ ಗೊತ್ತೇ?? ’ಹಾಂ ಅವಳು ನಮ್ಮ ಇಗರ್ಜಿ ಶಾಲೆಯಲ್ಲೇ 5 ಕ್ಲಾಸ್ ತನಕ ಓದಿ, ಮತ್ತೆ ಒಂದು ರೆಸಿಡೆಂಶಿಲ್ ಶಾಲೆಗೆ ವರ್ಗಾಯಿಸಳಾದಳು. ಆ ಶಾಲೆಯ ವಿಳಾಸ ನಮ್ಮ ಕಛೇರಿಯವರು ನಿಮಗೆ ನೀಡುತ್ತಾರೆ”
ರೆಸಿಡೆಂಶಿಯಲ್ ಶಾಲೆಗೆ ಹೋಗಿ ವಿಚಾರಿಸಿದಾಗ ಅವರು ಹೀಗೆ ಹೇಳಿದರು’ಓದಿನಲ್ಲಿ ತುಂಬ ಚುರುಕು ಜೆನೆಟ್. ಮುಂದೆ ಅವಳು ವಾಯುಸೇನೆ ಯಲ್ಲಿ ಭರ್ತಿ ಯಾದಳು. ನಮ್ಮ ರೆಸಿಡೆಂಶಿಯಲ್ ಶಾಲೆಯ ಒಂದು ನಿಯಮವಿದೆ. ಕೆಲಸಕ್ಕೆ ಹೋಗುವವರು ಅವರ ಮದುವೆಯಾಗುವ ತನಕ ಅವರ ಸಂಬಳದಲ್ಲಿನ ಸ್ವಲ್ಪ ಮೊತ್ತ ಶಾಲೆಗೆ ನೀಡಬೇಕೆಂದು. ಇತ್ತಿಚಿನ ಎರಡು ವರ್ಷಗಳ ಹಿಂದೆ ಅವಳಿಗೆ ಮದುವೆಯಾಯಿತು. ಮೊನ್ನೆ ಕ್ರಿಸ್ ಮಸ್ ಗೆ ಒಂದು ಕಾರ್ಡ್ ಕಳಿಸಿದ್ದಳು. ಯಾಕೆ ಅವಳ ವಿಚಾರ ಕೇಳುತ್ತಿದ್ದೀರಿ? ಅವರಿಗೆ ಏನೋ ಒಂದು ಉತ್ತರ ಕೊಟ್ಟು ಪತ್ತೆದಾರರು ಮುಂದಿನ ವಿಳಾಸ ಹುಡುಕಿ ಹೊರಟರು.
ಆ ವಿಳಾಸ ಹುಡುಕಿಕೊಂಡು ಹೋದರು. ಅದು ಬೇರೆಯದೇ ಊರಾಗಿತ್ತು. ಅಲ್ಲಿ ತಲುಪಿದಾಗ ರಾತ್ರಿ. ಸರಿ ವಿದ್ಯುತ್ ವ್ಯವಸ್ಥೆ ಕೂಡ ಇರಲಿಲ್ಲ ಆ ಊರಲ್ಲಿ. ಆ ರಾತ್ರಿ ಅಲ್ಲಿನ ಚಿಕ್ಕ ಹೋಟಲ್ ನಲ್ಲಿ ತಂಗಿದ್ದು, ಬೆಳಿಗ್ಗೆ ಅವರ ಕಾರ್ಯ ಶುರು ಮಾಡಿದರು. ಮನೆ ಪತ್ತೆ ಹಚ್ಚಲು ತುಂಬ ಕಷ್ಟ ಪಡಬೇಕಾಗಲಿಲ್ಲ. ಹೋಟಲ್ ನ ಮಾಣಿಯೇ ಅವರಿಗೆ ಅಲ್ಲಿ ಕರೆದುಕೊಂಡು ಹೋಗಿ ಆ ಮನೆಯನ್ನು ತೋರಿಸಿದ್ದ. ಪಾಳು ಬಿದ್ದ ದೊಡ್ಡದಾದ ಬಂಗಲೆ. ಆದರು ಮನೆಯಂಗಳ ಗುಡಿಸಿ ನೀಟ್ ಆಗಿಟ್ಟಿದ್ದರಿಂದ ಅಲ್ಲಿ ಯಾರೋ ವಾಸಿಸ್ತಾ ಇರುವ ಕುರುಹು ಸಿಕ್ಕಿತು. ಮನೆಯ ಬಾಗಿಲಿಗೆ ಬಡಿದಾಗ, ಸುಮಾರು ಹೊತ್ತಾದ ಮೇಲೆ ಇಲ್ಲಿಯೂ ಕೂಡ ಓರ್ವ ಮುದುಕ ನಿಧಾನಕ್ಕೆ ಬಂದು ಬಾಗಿಲು ತೆಗೆದ. ದೃಷ್ಟಿ ಪೂರ್ತಿ ಮಂಜಾಗಿದ್ದು ಕಷ್ಟ ಪಟ್ಟು ಬಂದವರನ್ನು ನೋಡ ಹತ್ತಿದರು.ಅವರಿಗೆ ಲಾಕೆಟ್ ನಲ್ಲಿದ್ದ ಫೋಟೊ ಸರಿ ಕಾಣುತ್ತಿರಲಿಲ್ಲವಾಗಿ, ಬ್ಲೋ ಅಪ್ ಮಾಡಿದ ಫೋಟೊ ನೇ ತೋರಿಸಿದರು. ಅವರು ಏನೋ ಆಲೋಚಿಸುವವರಂತೆ ಪುನ: ಒಳಗೆ ಹೋಗಿ ಇವರ ಬಳಿಯಿದ್ದ ಲಾಕೆಟ್ ತರಹದ್ದೆ ಇನ್ನೊಂದು ಲಾಕೆಟ್ ತಂದು ಇವರ ಮುಂದೆ ಇರಿಸಿದರು. ಮಾತನಾಡುವಾಗ ದನಿ ಅದುರುತ್ತಿತ್ತು.
"ಸೋಮು ನಮ್ಮ ಮನೆಗೆ ಬಂದಾಗ ಈ ಲಾಕೆಟ್ ಚೈನ್ ಅವನ ಕುತ್ತಿಗೆಗಿತ್ತು. ಅವನನ್ನು ದತ್ತು ಪಡೆದ ಈ ಮನೆಯವರು ಅವನನ್ನು ಸ್ನಾನ ಮಾಡಿಸಿ ತರಲು ನನಗೆ ಹೇಳಿದರು. ಹಾಗೆ ಆ ಚೈನ್ ನ್ನೂ ತೆಗೆದಿಡಲು ಸೂಚಿಸಿದರು. ನಾನು ಆ ಚೈನ್ ಅನ್ನು ನನ್ನ ಬಳಿಯೇ ಇರಿಸಿಕೊಂಡೆ. ಇದಾದ ಕೆಲ ದಿನದ ನಂತರ ರಾತ್ರಿ ಎಲ್ಲಿಂದಲೋ ಕಾರ್ ನಲ್ಲಿ ಮರಳುತ್ತಿರುವಾಗ, ಕಾರ್ ಎಕ್ಸಿಡೆಂಟ್ ನಲ್ಲಿ ಇಬ್ಬರೂ ತೀರಿಕೊಂಡರು. ದತ್ತು ಪ್ರಕ್ರಿಯೆ ಇನ್ನೂ ಮುಗಿದಿರಲಿಲ್ಲ. ಎಲ್ಲಿ ಎಲ್ಲ ಆಸ್ತಿ ಆ ಹುಡುಗನಿಗೇ ಹೋಗುತ್ತೋ ಅಂತ ಅವರ ದಾಯಾದಿಗಳು ಈ ಪುಟ್ಟ ಹುಡುಗನಿಗೆ ಕಿರುಕುಳ ನೀಡಲು ಆರಂಭಿಸಿದರು. ಆ ಮೇಲೆ ಒಂದು ದಿನ ಸೋಮು ಕಾಣೆಯಾದ. ಕೆಲಸದವನಾದ ಏನು ಮಾಡಲು ಸಾಧ್ಯವಿತ್ತು?
ನಮ್ಮ ಪತ್ತೇದಾರರು ಒಂದಕ್ಕೊಂದು ತಾಳೆ ಹಾಕಿ ಸೋಮು ಯಾಕೆ ಆತ್ಮಹತ್ಯೆ ಮಾಡಿಕೊಂಡನು ಅಂತ ಅಂದಾಜಿಸಿದರು.
ಅವರು ಗೊತ್ತಿಲ್ಲದೆ ಘೋರ ಅಪರಾಧ ಮಾಡಿದ್ದರು. ತಮ್ಮ ತಂಗಿಯನ್ನೆ ಮದುವೆಯಾಗಿ ಅವಳ ಜತೆ ದೈಹಿಕ ಸಂಬಂಧ ಹೊಂದಿದ್ದರು. ಈ ಆಘಾತ ತಡೆಯಲಾಗದೆ ಜೆನೆಟ್ ಗೂ ಹೇಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದನು.
ಪತ್ತೆದಾದರು ಜೆನೆಟ್ ಬಳಿ ಹೋಗಿ’ನಮಗೂ ಕಾರಣ ತಿಳಿಯಲಾಗಲಿಲ್ಲ’ ನನ್ನನ್ನು ಕ್ಷಮಿಸಿ ಬಿಡಿ ಅಂತ ಕೇಳಿಕೊಂಡನು. ಇದನ್ನು ಕೇಳಿದ ಪತ್ತೇದಾರರ ಜ್ಯೂನಿಯರ್, ಯಾಕೆ ಸುಳ್ಳು ಹೇಳಿದ್ರಿ? ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡದ್ದು ಅಂತ ನಮಗೆ ತಿಳಿದಿದೆಯಲ್ಲ?’
’ಸತ್ಯ ಗೊತ್ತಾಗಿ ಅವರೂ ಆತ್ಮಹತ್ಯೆ ಮಾಡಿಕೊಂಡ್ರೆ’ ಅವರದಲ್ಲದ ಪಾಪಕ್ಕೆ ಅವರನ್ನು ಯಾಕೆ ಹೊಣೆಮಾಡಿ ಅವರಲ್ಲೂ ಪಾಪಪ್ರಜ್ಝೆ ತುಂಬುವುದು. ಬದುಕಿಕೊಳ್ಳಲಿ ಬಿಡು.
(ಈ ಕತೆಗೆ ಸ್ಪೂರ್ತಿ ಕೆ.ಎನ್. ಗಣೇಶಯ್ಯನವರ ನೇಹಲ ಕಥಾಸಂಕಲದಲ್ಲಿನ ಕತೆ ’ನಿಷಿದ್ದಬಂಧ’ ಹಾಗೂ ಯಾವಾಗಲೋ ಚಿಕ್ಕಂದಿನಲ್ಲಿ ಅಂಗಡಿಯಿಂದ ಸಾಮಾನು ಕಟ್ಟಿಸಿ ಬಂದ ಮರಾಠಿ ಪೇಪರ್ ನಲ್ಲಿ ಬಂದ ಇಂತಹುದೊಂದು ಕತೆಯ ನೆನಪಿನ ಆಧಾರದ ಮೇಲೆ.)
:-)

November 7, 2012

ಹೀಗೂ ಉಂಟಂತೆ!!!

ಮೊನ್ನೆ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಾ ಬಸ್ ನಲ್ಲಿ ಕೇಳಿಸಿಕೊಂಡಿದ್ದು.
ನನ್ನ ಪಕ್ಕದ ಸೀಟನಲ್ಲಿಬ್ಬರು ಗಟ್ಟಿಯಾಗೇ ಮಾತಾಡ್ತಾ ಇದ್ದರು. ಆದ್ದರಿಂದ ಕದ್ದು ಕೇಳಿದ್ದು ಅಂತ ಹೇಳಲಿಕ್ಕೆ ಆಗಲ್ಲ.
ಪಕ್ಕದ ಸೀಟ್ ಅಂದ್ರೆ ನಾನು ಹೋಗಿದ್ದು 2 + 1 ಬಸ್ ನಲ್ಲಿ
ಸೋ ಅವರ ಸಂಭಾಷಣೆ ಹೀಗೆ ಸಾಗಿತ್ತು. ಕಿಟಕಿ ಬಳಿ ಕೂತವರು ಒಬ್ಬ ಇಕೊನೋಮಿಕ್ ಕನ್ಸಲ್ಟೆಂಟ್ ಅಂತೆ. ಇತ್ತೀಚಿಗೆ ಮಧ್ಯಪದ್ರೇಶದ ಒಂದು ಊರಿಗೆ ದೊಡ್ಡ ಕಂಪೆನಿ ಒಂದಕ್ಕೆ ಕನ್ಸಲ್ಟೆಂಟ್ ಆಗಿ ಹೋಗಿದ್ದರಂತೆ. ಆಗ ಸೆಕೆ ಸಮಯ. ಒಂದು ಸಂಜೆ ತುಂಬ ಸೆಕೆ ಎನಿಸಿ, ಅವರು ಉಳಿದುಕೊಂಡಿದ್ದ ಗೆಸ್ಟ್ ಹೌಸ್ ಮೇಲ್ವಿಚಾರಕನಿಗೆ, ಒಂದು ಬೀಯರ್ ಹೊಡೆಯುವ ಅಂದಾಜಲ್ಲಿ, ’ಇಲ್ಲಿ ಡ್ರಿಂಕ್ಸ್ ಎಲ್ಲಿ ಸಿಗತ್ತೆ’ ಅಂತ ಕೇಳಿದನಂತೆ. ಗೆಸ್ಟ್ ಹೌಸ್ ಪಕ್ಕದ ರೋಡ್ ತೋರಿಸಿ ’ಯಾಹಾಂ ಸೆ ಏಕ್ ಹೀ ರಾಸ್ತಾ, ದೊ ಕಿಲೋಮಿಟರ್ ಕಿ ದೂರಿ ಪರ್ ಹೈ, ಕಾರ್ ಮಂಗವಾವೂಂ ಸಾಬ್?’ ಅಂತ ಕೇಳಿದನಂತೆ. ನಮ್ಮ ನೆರೇಟರ್ (narrator) ಸಾಹಬರಿಗೆ ಒಂದು ಬ್ರೇಕ್ ಬೇಕಿತ್ತಂತೆ ಹಾಗೂ ಎಕ್ಸರ್ಸೈಝ್ ಆದ ಹಾಗಾಗುತ್ತೆ ಅಂತ ’ಪೈದಲ್ ಚಲೂಂಗಾ, ಗಾಡಿ ಕಿ ಜರೂರತ್ ನಹೀಂ’ ಅಂತ ಹೇಳಿ ಸವಾರಿ ಆ ಕಡೆ ಹೆಜ್ಜೆ ಹಾಕಿತಂತೆ..:-) 
ಒಂದು ಕಿ.ಮಿ ನಡೆದ ನಂತರ ಒಂದು ಸೈನ್ ಬೋರ್ಡ್ ಸಿಕ್ಕಿತಂತೆ...***** ಕ್ಲಬ್ -1 km ಅಂತ. ಇನ್ನಷ್ಟು ನಡೆದುಕೊಂಡ ಹೋದ ಮೇಲೆ ಕ್ಲಬ್ ನ ಗೇಟ್ ಸಿಕ್ಕಿತಂತೆ. ಗೇಟ್ ನಿಂದ ಕ್ಲಬ್ ಒಂದು ಫರ್ಲಾಂಗ್ ಇತ್ತಂತೆ. ಒಳಗೆ ನಡೆದು ರಿ ರಿಸೆಪ್ಷನ್ ಬಳಿ ಹೋಗುವಷ್ಟರಲ್ಲಿ ಅಲ್ಲಿನ ವಾಚ್ ಮನ್ ’ಆಪ್ ಅಂದರ್ ನಹೀಂ ಜಾ ಸಕ್ತೆ’ ಅಂತ ದಾರಿಗೆ ಅಡ್ಡ ನಿಂತನಂತೆ. ಯಾಕಪ್ಪ ಅಂತ ಕೇಳಿದ್ರೆ, ’ನೀವು ಶೂ ಹಾಕಿಕೊಂಡಿಲ್ಲ’ ಅಂತ ಹೇಳಿದ್ನಂತೆ. ದಿನ ಇಡೀ ಶೂ ಹಾಕಿದ್ದು, ಸಾಕ್ಸ್ ಗೆ ವಾಸನೆ ಹೊಡೆಯುತ್ತೆ ಅಂತ ಹಾವಾಯಿ ಚಪ್ಪಲ್ ಹಾಕಿಕೊಂಡು ಬಂದಿದ್ದರಿವರು. ’ದೂರದಿಂದ ನಡೆದುಕೊಂಡು ಬಂದಿದ್ದೇನೆ, ****** ಕಂಪೆನಿ ಕೆಲ್ಸದ ಮೇಲೆ ಬಂದಿದ್ದೆ ಅಂದರೂ ಅವನದ್ದು ಒಂದೇ ವರಾತ ವಂತೆ no shoe no entry..ಸರಿ ಇನ್ನು ಇವನ ಜತೆ ಏಗಿ ಪ್ರಯೋಜನವಿಲ್ಲ, ಬಂದ ದಾರಿಗೆ ಸುಂಕವಿಲ್ಲ ಅಂತ ನಮ್ಮ ನೆರೇಟರ್ ಮಹಾಶಯರು ಇನ್ನೇನು ಗೇಟ್ ಬಳಿ ತಲುಪುವಷ್ಟರಲ್ಲಿ, ಒಂದು ಕಾರ್ ಬಂದು ಅವರ ಬಳಿ ನಿಂತು, ಅವರ *****ಕಂಪಿನಿಯ ಹಿರಿಯ ಅಧಿಕಾರಿ ಇಳಿದು, ’ಇದೇನಿದು ಇಷ್ಟು ಬೇಗ ಹೊರಟಾಯಿತೆ? ಇವತ್ತು ಒಂದೊಳ್ಳೆ ಗಜಲ್ ಕಾರ್ಯಕ್ರಮ ಇದೆ, ಕೇಳಿಕೊಂಡು ಹೋಗಬಹುದಿತ್ತು’. ’ಇಲ್ಲ ಶೂ ಇಲ್ಲದ ಕಾರಣ ಒಳಗೆ ಬಿಡಲಿಲ್ಲ.’ ಅರೇ ಬನ್ನಿ ನನ್ನ ಜತೆ, ಅಂತ ರೆಸೆಪ್ಪ್ಷನ್ ಬಳಿ ಹೋಗಿ ಅಲ್ಲಿ ಸಹಿ ಹಾಕಿ (ಅವರು ಅಲ್ಲಿನ ಮೆಂಬರ್ ಅಂತೆ, ವರ್ಷಕ್ಕೆ ಒಂದು ಲಕ್ಷ ಮೆಂಬರ್ ಶಿಪ್ ಫೀ ಅಂತೆ). ರಿಸೆಪ್ಷನಿಷ್ಟ್ ಬಳಿ ಹಿರಿಯ ಅಧಿಕಾರಿ ಗುಸು ಪುಸು ಏನೋ ಮಾತಾಡಿದರಂತೆ. ನಮ್ಮ ನೆರೇಟರ್ ಮಹಾಶಯರು ’ಓ ಇವರ interference ಇಂದ ನನಗೆ ಒಳಬಿಡುತ್ತಿದ್ದಾರೆ ಅಂದುಕೊಳ್ಳುವಷ್ಟರಲ್ಲಿ , ರಿಸೆಪ್ಷನಿಷ್ಟ್, ’ಸಾಬ್ ಆಪ್ ಹಮಾರೆ ಸಾಥ್ ಚಲಿಯೆ’ ಅಂತ ಒಂದು ದೊಡ್ಡ ಕೋಣೆಗೆ ಕರೆದುಕೊಂಡು ಹೋದನಂತೆ. ಅಲ್ಲಿ ನೋಡಿದರೆ rack ಮೇಲೆ rack....ಅಲ್ಲಿ ಎಲ್ಲಾ ಸೈಜ್ ನ ಶೂ ಗಳು. ’ಆಪ್ ಕಾ ಸೈಜ್’ ಅಂತ ಕೇಳಿ ಇವರು ಹಾಕಿಕೊಂಡ ಬಟ್ಟೆಗೆ ಸ್ಯೂಟ್ ಆಗುವ ಒಂದು ಜತೆ ಶೂ ಕೊಟ್ಟನಂತೆ. ಶೂ ಕ್ಲೀನ್ ಆಗಿದ್ದು ಅದರಲ್ಲಿ ಸಿಲಿಕಾ ಜೆಲ್ ಪ್ಯಾಕೆಟ್ ಗಳನ್ನು ತುಂಬಿಟ್ಟಿದ್ದರಂತೆ. ಒಂದು ಜತೆ ಸಾಕ್ಸ್ ಗೆ ಇವರು ದುಪ್ಪಟ್ಟು ದುಡ್ಡು ಕೊಟ್ಟು ಕೊಳ್ಳಬೇಕಾಗಿ ಬಂದದ್ದು ಮಾತ್ರವಲ್ಲ ಶೂ ಬಾಡಿಗೆ ಮತ್ತು maintenance ಅಂತ ಸಣ್ಣ ಮೊತ್ತ ಕೊಡಬೇಕಾಯಿತಂತೆ. ಉಳಿದಂತೆ ಒಳಗಡೆ ಹೋದ ಮೇಲೆ ಅನ್ ಲಿಮಿಟಡ್ ಡ್ರಿಂಕ್ಸ್, ಸ್ನ್ಯಾಕ್ಸ್ ಊಟ ಇತ್ಯಾದಿ ಅಂತೆ, ಯಾಕೆಂದರೆ ಇವರು ಹಿರಿಯ ಅಧಿಕಾರಿ ಜತೆ ಇದ್ದರಲ್ಲವೇ?
ಈ ಪೋಸ್ಟ್ ನನ್ನ ಆತ್ಮೀಯ ಗೆಳತಿ/ಮಗಳು ದಿವ್ಯಾ ಮಲ್ಯಾಗೆ...:-) ಪ್ರೀತಿಯಿಂದ....

November 2, 2012

ಭವಿಷ್ಯ: ಬೆಸ್ತು



ನನ್ನ ತಂದೆಯವರು ಬೆಳಿಗ್ಗೆ ಜ್ಯೋತಿಷ್ಯ ಕಾರ್ಯಕ್ರಮ ನೋಡುತ್ತಿದ್ದಾಗ ಹೊಳೆದಿದ್ದು:
ಅದೊಂದು ಫೋನ್ ಇನ್ ಕಾರ್ಯಕರಮ.
ತಾಯಿ: ಗುರೂಜಿ ನನ್ನ ಮಗನ ಭವಿಷ್ಯ ಹೇಗಿದೆ?
ಗುರೂಜಿ: ಓದಲ್ಲಿ ಸ್ವಲ್ಪ ಹಿಂದಿದ್ದಾನೆ ಆದರೂ ಏನಡ್ಡಿಯಿಲ್ಲ.
ಕೆಲದಿನಗಳ ನಂತರ
ಗುರೂಜಿ ನಿಮ್ಮನ್ನ ಕಾಣಲು ಒಬ್ಬ ಯುವಕ ಬಂದಿದ್ದಾನೆ
ಗುರೂಜಿ: ಒಳಗೆ ಕಳಿಸಿ ಅವನ್ನನ್ನ
ಯುವಕ: ಗುರೂಜಿ ನೀವು ಟಿವಿ. ಕಾರ್ಯಕ್ರಮದಲ್ಲಿ ಭವಿಷ್ಯ ಹೇಳಿ ಸಕತ್ತ್ ದುಡ್ಡು ಮಾಡ್ತಿರಬೇಕಲ್ಲವಾ??
ಗುರೂಜಿ: ಹಾಂ ಬರುತ್ತೆ ಆದಾಯ. ಯಾಕೇ?
ಯುವಕ್: ನೀವು ನಿಮಗೆ ಬರುವ ಆದಾಯದಲ್ಲಿ ನನಗೆ 20% ಕೊಡಬೇಕು
ಗುರೂಜಿ: ಯಾಕೆ?
ಯುವಕ: ಇಷ್ಟರ ತನಕ ನಾನು ಚೆನ್ನಾಗಿ ಓದಿ ಚೆನ್ನಾಗಿ ಅಂಕಗಳನ್ನು ಪಡೆಯುತ್ತ ಬಂದಿದ್ದೇನೆ. ಆದರೆ ನಿನ್ನೆ ಅಮ್ಮನ ನಿಮ್ಮ ಸಂಭಾಷಣೆ ಕೇಳಿಸ್ಕೊಂಡೆ..ಇನ್ಮುಂದೆ ಓದದೆ ಇರಬೇಕೆಂದು ಕೊಂಡಿದ್ದೇನೆ.
ಗುರೂಜಿ; ಅದಕ್ಕೂ ಇದಕ್ಕೂ ಏನು ಸಂಬಂಧ?
ಯುವ್ಕ: ಅಮ್ಮನಿಗೆ ನನ್ನ ಮೇಲೆ ನಂಬಿಕೆಯಿಲ್ಲ. ಈಗ ನಾನು ಅಂಕ ತೆಗೆದುಕೊಳ್ಳದೇ ಇದ್ದರೆ ಅಮ್ಮನಿಗೆ ನಿಮ್ಮ ಮೇಲೆ ನಂಬಿಕೆ ಇನ್ನೂ ಹೆಚ್ಚಾಗುತ್ತೆ. ಆದ್ದರಿಂದ ನಿಮಗೆ  ಇದರಿಂದ ಆದಾಯ ಹೆಚ್ಚುತ್ತದೆ.ಅಮ್ಮ ಅವರ ಸ್ನೇಹಿತೆಯರಿಗೆ ಆಪ್ತೇಷ್ಟರಿಗೆ ಈ  ವಿಷಯ ಹೇಳುತ್ತಾರೆ. ನಿಮಗೆ free advertisement ಆಗುತ್ತೆ, ಹಾಗಾಗಿ.ನೀವು ನನ್ನ ಜತೆ 20% ಶೇರ್ ಮಾಡಲೇಬೇಕು..
(ಸುಮ್ನೆ, ನಾನು ಟೂರ್ ಮೇಲಿದ್ದೀನಿ. ಚಿಕ್ಕ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡೋದು ಕಿರಿಕಿರಿ..ಇದರಲ್ಲಿ ಕಾಗುಣಿತದ ತಪ್ಪಿದ್ದಲ್ಲಿ ಮುಂದಿನ ತಿಂಗಳು ಸರಿಮಾಡೋದು...ಅಲ್ಲಿ ತನಕ...Sayonara...)

October 21, 2012

ಚಾಟಿ- ಒಂದು ನ್ಯಾನೋ ಕತೆ


ಬೆಳಿಗ್ಗೆ ಟೀ ಕುಡೀತಾ ಹೊಳೆದ ಒಂದು ನ್ಯಾನೋ ಕತೆ...

ಆ ದಿನ

ಹೀಗೆ ಮನೆಗೆ ಬಂದ ಕೀಳು ಜಾತಿಯವನಿಗೆ ನಾವು ಉಪಯೋಗಿಸುವ ಬೆಲೆಬಾಳುವ ಕಪ್ ನಲ್ಲಿ ,ಇಷ್ಟು ದಪ್ಪ ಹಾಲು ಹಾಕಿ ಮಾಡಿದ ಚಹಾ ಕೊಡುವುದೇ? ಗಾಂಧಿ ತತ್ವಗಳನ್ನು ಪಾಲಿಸುವ ಅವಳ ತಂದೆಯ ಬಳಿ ಎಲ್ಲ ಜನರನ್ನೂ ಸಮಾನವಾಗಿ ಕಾಣುವುದನ್ನು ಕಲಿತ ಅವಳು ಮದುವೆಯಾಗಿ ಬಂದ ಮನೆಯಲ್ಲಿ ಕಲಿತ ಮೊದಲ ಪಾಠ ಅವಳನ್ನು ಕಕ್ಕಾಬಿಕ್ಕಿಯಾಗಿಸಿತ್ತು
ಇಂದು
ಆ ಕೀಳು ಜಾತಿಯವ ಈಗ ದೇಶದ ದೊಡ್ಡ ವ್ಯಕ್ತಿ. ಅವರು ಮನೆಗೆ ಬರುವವರಿದ್ದಾರೆ, 'ಲಾಕರ್ ನಿಂದ ನಮ್ಮ ಬೆಳ್ಳಿ
ಸಾಮಾನುಗಳನ್ನು ತಂದಿಡು ಬೆಳ್ಳಿ ಲೋಟದಲ್ಲೇ ಅವರಿಗೆ ಬಾದಾಮಿ ಹಾಲು ನೀಡಬೇಕು' ಎಂಬ ಆಜ್ಝೆ ಅವಳಿಗೆ...

ಆ ದಿನ: ಆ ಕೀಳು ಜಾತಿಯವನಿಗೆ ಕೇಳಿಸುವ ಹಾಗೆ ಆಕೆಯ ಗಂಡ ಗರ್ಜಿಸಿದ, 'ಇನ್ನು ಆ ಕಪ್ ಬೇರೆ ಕಡೆ ಇಟ್ಟು ಬಿಡು. ಇನ್ನು ಮುಂದೆ ಅಂವ ಬಂದಾಗ ಎಲ್ಲ ಆ ಕಪ್ ನಲ್ಲೆ ಅವನಿಗೆ ಚಹಾ ಕೊಡು....
ಇಂದು: ಅಂವ" ತಾಯಿ ನನಗೆ ಈ ಬೆಳ್ಳಿ ಲೋಟದಲ್ಲಿ ಹಾಲು ಬೇಡ. ನನಗೋಸ್ಕ್ರರ ಆ ದಿನ ಬೇರೆ ಇಟ್ಟ ಕಪ್ ನಲ್ಲೆ ಚಹಾ ಕೊಡಿ'.....
(ಚಾಟಿ ಹಾಗೂ ತಿರುಗೇಟು ಎನ್ನುವ ಎರಡು ಶಿರ್ಷಿಕೆಗಳ option ನನಗೆ ಫೇಸ್ ಬುಕ್ ನಲ್ಲಿ ಸಿಕ್ಕಿತ್ತು. 'ಚಾಟಿ' ಸೂಚಿಸಿದವರು ಮಿತ್ರ ಶ್ರೀವತ್ಸ ಜೋಶಿ ಮತ್ತು ತಿರುಗೇಟು ಬೈ ಸಾವಿತ್ರಿ ಹಟ್ಟಿ...)
:-)
ಚಾ/Tea one and the same...;-)

October 18, 2012

ಇಸ್ತ್ರೀ ಅಜ್ಜಿಯೂಂ ಸೀರೆಯೂಂ

ಮೊನ್ನೆ ನಮ್ಮ ಮನೆಯಿಂದ ನಮ್ಮ ಹಳೆ ಮನೆ ಇದ್ದ area- ಮಹಾಲಕ್ಶ್ಮಿ ಲೇ ಔಟ್ ಕಡೆ ಸುಮ್ಮನೆ ನಾನು ಶ್ರೀಕಾಂತ ವಾಕ್ ಹೋಗಿದ್ವಿ. ಅಲ್ಲಿ ಒಂದು ಕಡೆ ಶ್ರೀಕಾಂತ ಹಣ್ಣು ಖರೀದಿಸಬೇಕಾದ್ರೆ ನನ್ನ ಕಣ್ಣು ಅಲ್ಲೇ ಲೈಟ್ ಕಂಬಕ್ಕೆ ತೂಗುಹಾಕಿದ ಫ್ಲೆಕ್ಸ್ banner ಕಡೆ ಹೋಯ್ತು. ಅರೇ ಮುಖ ಎಲ್ಲೋ ನೋಡಿದ ಹಾಗಿದೆಯಲ್ಲ ಅಂತ ಶ್ರೀಕಾಂತ ಗೂ ತೋರಿಸಿದೆ. ಶ್ರೀಕಾಂತ ಫೋಟೊ ನೋಡಿ, 'ನೆನಪಾಗಲಿಲ್ಲವಾ, ಸರೀ ನೋಡು ಅಂದ್ರು' ಕೆಲವೆ ದಿನಗಳ ಹಿಂದೆ ಕಣ್ಣು ಪರೀಕ್ಷೆ ಮಾಡಿಸಿ ಬಂದು ಡಾಕ್ಟರ್ 'ಕಣ್ಣು perfect ' ಅಂದಿದ್ದು ಖುಶಿಯಿಂದ ಮನೆಗೆ ಬಂದು ಅಮ್ಮ ತಮ್ಮನಿಗೆ ಫೋನ್ ನಲ್ಲಿ ರವಾನಿಸಿದ್ದು ಎಲ್ಲ ನೆನಪಿಗೆ ಬಂದು, ಕಣ್ಣು ಉಜ್ಜಿಕೊಂಡು ಪುನ: ನೋಡಿದೆ.ಊಹೂಂ ಯಾರು ಅಂತ ಗೊತ್ತಾಗಲಿಲ್ಲ. ಶ್ರೀಕಾಂತ ಕಡೆ ಪ್ರಶ್ನಾರ್ಥಕವಾಗಿ ನೋಡಿದಾಗ, ಅವರು'ನಮ್ಮ ಹಳೆ ಇಸ್ತ್ರಿಯವಳು' ಅಂತ ಹೇಳಿ ಪುನ: ಹಣ್ಣಿನ ಚೌಕಾಸಿಯಲ್ಲಿ ನಿರತರಾದರು. ಅರೇ ಹೌದಲ್ಲವೇ ಐದು ವರ್ಷ ನನ್ನ ಕಾಟನ್ ಸೀರಿಗಳಿಗೆ ಸ್ಟಾರ್ಚ್, ಇಸ್ರೀ ವಗೈರೆ ಹಾಕಿ, ನಾನು ಆಫಿಸ್ ಗೆ ಟಿಪ್ ಟಾಪ್ ಆಗಿ ಹೋಗುವಂತೆ ಮಾಡಿದವರು..ಅಂತ ಪುನ: ಫ್ಲೆಕ್ಸ್ ನ ತೀರ ಬಳಿ ಹೋಗಿ ಕಣ್ಣು ಗುಡ್ಡೆ ಹೊರಬರುವಷ್ತು ಕಣ್ಣನ್ನು ದೊಡ್ಡದಾಗಿಸಿ ನೋಡಿದೆ. ಅರೇ ಅವರು ತೀರಿ ಹೋಗಿರುವ ವಿಷಯ ಹಾಕಿದ್ದರು. ಇದೇನಿದು ಹೊಸ ಪರಿ ಅಂದುಕೊಳ್ಳುತ್ತಿರುವಾಗಲೇ ಶ್ರೀಕಾಂತ , ಅದು ಇತ್ತೀಚಿಗಿನ ಹೊಸ ಫ್ಯಾಷ್ಯನ್ -ಸತ್ತು ಹೋಗಿರುವವರ ಚಿತ್ರ ಫ್ಲೆಕ್ಸ್ ನಲ್ಲಿ ಪ್ರಿಂಟ್ ಹಾಕಿಸಿ ನೇತಾಕುವುದು- ಅಂದುಬಿಟ್ಟರು.
ಅರೇ ಇವರು ತೀರಿಕೊಂಡೇ ಬಿಟ್ರಾ ಅಂತ ಅವರ ಬಗ್ಗೆ ನೆನೆಸ್ತಾ ವಾಪಸ್ ಮನೆ ದಾರಿ ಹಿಡ್ಕೊಂಡ್ವಿ.
ನಾವು ಉಡುಪಿಯಿಂದ ಮಹಾಲಕ್ಷ್ಮಿ ಲೇಔಟ್ ನ ಮನೆಗೆ ಶಿಫ್ಟ್ ಆದ ಮೂರನೆ ದಿನ ಈ ಅಜ್ಜಿ ಬಂದಿದ್ದರು. ಇಸ್ತ್ರೀ ಬಟ್ಟೆ ಇದ್ರೆ ನಾನು ತೆಗೆದುಕೊಂಡು ಹೋಗ್ತೀನಿ ಅಂತ. ನಾನು ಮುಂದಿನ ವಾರ ಬನ್ನಿ ಅಂತ ಹೇಳಿ ಕಳಿಸಿದೆ. ಸರೀ ಒಂದು ವಾರದ ನಂತ್ರ ಬಂದ್ರು ಅಜ್ಜಿ. ಅಷ್ಟೇನೂ ಬಟ್ಟೆಗಳಿಲ್ಲದಿದ್ರೂ (ಮಕ್ಕಳ ಯೂನಿಫಾರ್ಮ್ ನನ್ನ ಚೂಡಿದಾರ್ ಗೆಲ್ಲ ನಾನೆ ಇಸ್ತ್ರೀ ಹಾಕ್ತಿದ್ದೆ. ಆದರೆ ಶ್ರೀಕಾಂತ ಪ್ಯಾಂಟ್ ಶರ್ಟ್ ಗೆ ಇಸ್ತ್ರೀ ಹಾಕಕ್ಕೆ ನನಗೆ ಬರ್ತಿರಲಿಲ್ಲ ಈಗಲೂ ಬರಲ್ಲ.) ಹಾಗಾಗಿ ಶ್ರೀಕಾಂತ ರ ಕೆಲವು ಶರ್ಟ್ ಮತ್ತು ಪ್ಯಾಂಟ್ , ಕೆಲವು ನಾನು ವಾಶ್ ಮಾಡಿ ಹಾಕಿದ್ದು, ಕೆಲವು ನಮ್ಮ ಪ್ರಾಯಾಣದ ವೇಳೆ ನೆರಿಗೆ ಬಿದ್ದ ಬಟ್ಟೆಗಳನ್ನು ಕೊಟ್ಟೆ. ಆಗ ಅವರು ಬಟ್ಟೆ count ಮಾಡಿದ್ದು ಗಮ್ಮತ್ತು ಎನಿಸಿತ್ತು. ಅಜ್ಜಿ ತಮಿಳು  ಮಾತನಾಡುವವರು. her lanaguage was a curious mix of Kannada and Tamil. ನಾಲ್ಕು ಆದ ಮೇಲೆ ಕೈದು, ಕಾರು, ಕೇಳು, ಕೆಂಟು ಅಂತ ಲೆಕ್ಕ ಮಾಡ್ತಿದ್ದದ್ದು. ನಾನು ಮಕ್ಕಳು ನಗುತ್ತಿದದ್ದು ಇನ್ನೂ ನೆನಪಿದೆ. ಆಮೇಲೆ ಕಾಟನ್ ಸೀರೆಗೆ ಸ್ಟಾರ್ಚ್ ಮಾಡಿ ಪಾಲಿಶ್ ಮಾಡ್ತೇವೆ. ಸೀರೆನೂ ಕೊಡಬಹುದು ಅಂತ ಹೇಳಿದ್ದರು ಒಂದು ದಿನ ನಾ ಸೀರೆ ಉಟ್ಟಿಕೊಂಡಾಗ. ಸರಿ ಅಂತ ಅವಳಿಗೆ ಕೊಡ್ತಿದ್ದೆ. ನನಗಂತೂ ಆರಾಮ್. ಆಕಸ್ಮಾತ್ ನಾವು ಯಾರೂ ಮನೆಯಲ್ಲಿಲ್ಲದಿದ್ದಲ್ಲಿ ಹೊರಗಡೆ ಝೂಲಾದ ಮೇಲೆ ಇಟ್ಟು ಹೋಗ್ತಿದ್ದರು. ಮರುದಿನ ಹಣ ಪಡೆದುಕೊಂಡು ಹೋಗುತ್ತಿದ್ದರು. ಸಾಧಾರಣ ಆ ಮನೆಯಲ್ಲಿ ನಮ್ಮದು ಮೂರನೆ ವರ್ಷ ಅನ್ನಿಸುತ್ತೆ, ಒಂದು ದಿನ ಸಾಯಂಕಾಲ ಜೋರಾಗಿ ಅಳುತ್ತ ಅಜ್ಜಿ ನಮ್ಮನೆಗೆ ಬಂದ್ರು. ನಾನೇನಾಯ್ತು ಅಂದಿದಕ್ಕೆ ನೀವು ನಿನ್ನೆ ಕೊಟ್ಟ ಸೀರೆ ಸುಟ್ಟು ಹೋಯ್ತು. ಅದರ ಬದಲಾಗಿ ಕಾಸು ಕೊಡವಾ ಅಂದ್ರೆ ನನ್ನ ಮಗ 'ನಿನ್ನ ಬೇಜವಾಬ್ದಾರಿಯಿಂದ ಹಾಗಾಗಿದ್ದು ನಾ ಯಾಕೆ ದುಡ್ಡು ಕೊಡಲಿ' ಅಂತ ಹೇಳ್ತಿದ್ದಾನೆ, ಆ ಸೀರೆ ಬೆಲೆ ಎಸ್ತು? ನಾನು ನಿಮ್ಮ ಹತ್ತಿರ ಸೀರೆ ಬೆಲೆಯಾಗುವಸ್ತು ದಿನ ಕಾಸ್ ತೆಗೆದುಕೊಲ್ಲಲ್ಲ (ಅವರ ಕನ್ನಡ) ಅಂದ್ರು. ಅದಕ್ಕೆ ನಾನು 'ಅಯ್ಯೋ ಬಿಡಿ ಅಜ್ಜಿ, ಮನುಷ್ಯರೇ ಈಗ ಇದ್ದವರು ಸ್ವಲ್ಪ ಹೊತ್ತಿಗೆ ಇರಲ್ಲ, ಅದರಲ್ಲಿ ಸೀರೆ ಬಗ್ಗೆ ತಲೆ ಕೆಡಿಸಕೊಳ್ಳಬೇಡಿ ಅಂತ ಹೇಳಿ ಅವರನ್ನು ಬಲವಂತದಿಂದ ಮನೆಗೆ ಕಳಿಸಿದ್ದೆ.ಆ ಸೀರೆ ಹಾಗೆ ತಂದು ಕೊಡಿ ಮಕ್ಕಳೆಗೆ ಬಟ್ಟೆ ಹೊಲಿಸ ಬಹುದು. (ಅದು ಚಂದದ ಆರ್ಟ್ ಸಿಲ್ಕ್ ಸಾರಿ ಆಗಿತ್ತು ಅದರ ಕತೆ ಮುಂದಿನ ಪ್ಯಾರ)  ಆದರೂ ಹೋಗುವ ಮುಂಚೆ, 'ನಾನು ಆದಷ್ಟು ಆ ಚೀರೆ ಶೆರಿ (ಸರಿ) ಮಾಡಿ ತರ್ತೇನೆ ಅಕ್ಕ ಅಂದ್ರು..ಮೂರು ದಿನ ಬಿಟ್ಟು ನನ್ನ ಸೀರೆ ನನಗೆ ತಂದು ಕೊಟ್ರು. ನಾನು ಸೀರೆ ಬಿಡಿಸಿ ನೋಡ್ತೇನೆ ಎಲ್ಲಿಯೂ ಅದು ಸುಟ್ಟಿದ್ದು.ಹೊಲಿದಿದ್ದು ಕಾಣಲಿಲ್ಲ. ಕೊನೆಗೆ ಸೀರೆಯ ಅಂಚು ಕೂಡ ಸೂಕ್ಷ್ಮವಾಗಿ ನಿರೂಕಿಸಿದೆ, ಊಹೂಂ...ಬಹುಶ್ಯ ಬೇರೆಯವರಿಗಾದ್ರೂ ಅದರಲ್ಲಿನ defect ಕಾಣಬಹುದು ಅಂತ ಮತ್ತೆರಡು ಸಮಾರಂಭಕ್ಕೆ ಕೂಡ ಅದನ್ನು ಉಟ್ಟು ಹೋದೆ. ಯಾರೂ ಏನೂ ಗಮನಿಸಲಿಲ್ಲ..ನನಗಂತೂ ಸೋಜಿಗ ಅರೆ?? ಮುಂದಿನ ಸಲ ಅಜ್ಜಿ  ಬಂದಾಗ ಪುನ: ವಿಚಾರಿಸಿದೆ. ಸುಟ್ಟಿದ್ದು ಹೌದಾ?? ನನಗೇನೂ ಕಾಣ್ತಿಲ್ಲವಲ್ಲ ಅಂದಾಗ ಅಜ್ಜಿ mysteriously ನಕ್ಕು ಸೀರೆ ರಿಪೇರಿಯವನ ಗುಣಗಾನ ಮಾಡ್ತಾ ಇದ್ದಳು. ಆ ಸಮಯಕ್ಕೆ ಅಮ್ಮ ಕೂಡ ನಮ್ಮನೆಗೆ ಬಂದಿದ್ರು. ಸೀರೆ ಸುಟ್ಟಿದ್ದು ಹೇಳಲು ಅಜ್ಜಿ ನಮ್ಮ ಮನೆಗೆ ಬಂದು ಹೋದ ಮೇಲೆ ಅಮ್ಮನ ಫೋನ್ ಬಂದಿತ್ತು ಅವರು ಬೆಂಗಳೂರಿಗೆ ಬರುತ್ತಿರುವುದಾಗಿ ನನಗೆ ತಿಳಿಸಲು, ಆಗ ಅಜ್ಜಿ ಕತೆ ಹೇಳಿ, ನಾನು ಬೈಯಿಸಿಕೊಂಡಿದ್ದೆ. ' ಅಷ್ಟು ಚಂದದ ಸೀರ ಅವಳು ಹಾಳು ಮಾಡಿಬಿಟ್ಟಳಾ ಅದರ ದುಡ್ಡು ತೆಗೋ ಬೇಕಿತ್ತು. ಅದಕ್ಕೆ ನಾನು ಅಮ್ಮ 'ಆ 150 ಬೆಲೆ ಸೀರೆಗೆ ಅಷ್ಟು ಜಗಳ ಮಾಡಬೇಕ ಅಂತಲೂ ಕೇಳಿದ್ದೆ.ಹಾಗಾಗಿ ಅಮ್ಮ ಕೂಡ ಸೀರೆ ಬಿಡಿಸಿ ಕೂಲಂಕಷವಾಗಿ ಅದನ್ನು ಪರೀಕ್ಷಿಸಿದರು.ಅಮ್ಮನಿಗೂ ಎಲ್ಲೂ damage ಗೊತ್ತಾಗಲಿಲ್ಲ
ಈಗ ಆ ಸೀರೆ ನನ್ನ ಬಳಿ ಬಂದ ಬಗ್ಗೆ ಹೇಳುತ್ತೇನೆ:
ನಾವು ಉಡುಪಿ ಬಿಡುವ ಮುಂಚೆ ಅಮ್ಮ ಸಿಲ್ಕ್ ಸೀರೆ ಬೇಕೆಂದಿದ್ದಕ್ಕೆ ಅಮ್ಮನಿಗೆ ಅಲ್ಲಿ ಬರಲಿಕ್ಕೆ ಹೇಳಿದ್ದೆ.ಯಾಕಂದರೆ ನನ್ನ ದೂ ಅಮ್ಮಂದೂ ಬಣ್ಣದ ಟೇಸ್ಟ್ ಯಾವತ್ತೂ ಮ್ಯಾಚ್ ಆಗ್ತಿರಲಿಲ್ಲ ಇಬ್ಬರೂ ಕುಲ್ಯಾಡಿಕಾರ್ಸ್ ಸಿಲ್ಕ್ಸ್ ಅಂಗಡಿಗೆ ಹೋಗಿ, ಅಲ್ಲಿ ಕೊಂಕಣಿ ಮಾತಾಡ್ತಾರಾದ್ದರಿಂದ ನಾನು ಅಮ್ಮನಿಗೆ ಅವರ ಖರೀದಿಗೆ ಬಿಟ್ಟು ನಾನು ಅಲ್ಲಿಗೆ ಬಂದ ಬೇರೆ ಮಹಿಳೆಯರನ್ನೂ, ರಸ್ತೆಯಲ್ಲಿನ ಆಗು ಹೋಗುಗಳನ್ನು ಗಮನಿಸುತ್ತ ಇದ್ದೆ. ಅಮ್ಮ ಮೂರು ನಾಲ್ಕು ಸೀರೆ ಖರೀದಿಸಿದ ನಂತರ ಬಿಲ್ಲ ಪಾವತಿಸುವ ವೇಳೆಗೆ ,ಮಾಯಿ ನಿಮ್ಮ ಮಗಳಿಗೆ ಅಂತ ಒಂದು ಸೀರೆ ತೋರಿಸ್ತೇನೆ ಅಂತ, ನಾನು ಬೇಡ ಬೇಡ ಅಂದರೂ ಒಂದು ಸೀರೆ ತೆಗೆದು ತೋರಿಸಿದ್ರು. ಬಿಳಿ ಟಿಶ್ಯು ಪೇಪರ್ ನಲ್ಲಿ ಸುತ್ತಿದ ಆ ಸೀರೆಗೆ ನಾನೆಂದೂ ಕಂಡಿರದ ವಿಶಿಷ್ಟ ಬಣ್ಣ, ಜರಿ ಅಂಚು.ಇಡೀ ಸೀರೆ ಮೇಲೆ ಜರಿಯ ಬುಟ್ಟ. ಯಾವುದೂ ಸಿಂತೆಟಿಕ್ ಸೀರೆ ಉಡದ ನಾನು 'ನಾನು ಅಂತ ಸೀರೆ ಉಡೋದಿಲ್ಲ ಮಾಮ' ನನಗೆ ಬೇಡ ಅಂದ್ರೆ, ಅದನ್ನು ತೆಗೆದುಕೊಳ್ಳುವಂತೆ ಪೀಡಿಸಿ ಅವರು ಅಳುವುದೊಂದು ಬಾಕಿ. ನಾನು ಅಮ್ಮನಿಗೇ ಹೇಳಿದೆ, 'ಅಮ್ಮ ನಿನಗೆ ಬೇಕಾದರೆ ತೆಗೋ, ನನಗೆ ಮಾತ್ರ ಬೇಡ'. ಆ ಮಾಮ ಎಷ್ಟು upset ಆದರೆಂದರೆ ನನಗೆ ತೀರ ಕೆಡುಕೆನಿಸಿತು plus ವಿಚಿತ್ರ ಅನಿಸಿತ್ತು, ಯಾಕಂದ್ರೆ ಅಮ್ಮ ಕೊಂಡಿದ್ದ ಸೀರೆಯೆ 6000 ರೂ ಗಿಂತ ಹೆಚ್ಚಾಗಿತ್ತು, ಆಗ ಅದು ಸ್ವಲ್ಪ ಹೆಚ್ಚೆ ಮೊತ್ತ...ಹಾಗಾಗಿ ಸೀರೆ ಮಾರುವ ಮಾಮನಿಗೆ (ಕೊಂಕಣಿಯವರೆಲ್ಲ ಮಾಮ-ಮಾಯಿ ಗಳೆ) ಕಮಿಶನ್ ಅಂತ ಇದ್ದ್ರೂ ಅದಕ್ಕೇನೂ ತೊಂದರೆ ಇರಲಿಲ್ಲ. ಆಯ್ತು ಕೊಡಿ ಅಂದ್ರೆ ಬೆಲೆ ಕೇವಲ 150 ರೂ...ಈಗ ಇನ್ನಷ್ಟು ಗಾಬರಿ ಮಿಶ್ರಿತ ಆಶ್ಚರ್ಯ ಪಡುವ ಸರದಿ ನಮ್ಮದಾಯಿತು, ಆದರೂ ಮೂರು ಸಲ ಕನ್ ಫರ್ಮ್ ಮಾಡಿ, ಇನ್ನು ಅಲ್ಲಿ ಸೀನ್ create ಮಾಡೋದು ಬೇಡ ಅಂತ ಬಿಲ್ಲ ಪಾವತಿಸುವ ಕೌಂಟರ್ ಬಳಿ ಸೀರೆ ಕೊಡುವಾಗಲೂ ನನಗೊಂದು ಸಣ್ಣ ಆಸೆ, ಆ ಮಾಮನಾದರೂ 'ಇದರ ಬೆಲೆ ಹೆಚ್ಚೆ ಇದೆ ಇದ್ಯಾಕೆ 150 ರೂ' ಅಂತ ಹೇಳುತ್ತಾರೇನೋ ಅಂತ..ಇಲ್ಲ ಅವರೂ ಏನೂ ಹೇಳಲಿಲ್ಲ. ಆ ದಿನ ಮನೆ ತಲುಪಿದ ಕೂಡಲೇ ಅಮ್ಮ ನನ್ನ ಸೀರೆ ಪ್ಯಾಕೆಟ್ ನಿಂದ ಬಿಡಿಸಿ ಏನೋ ಮೊಸ ಇದೆ ಅಂತ ಅದನ್ನು ಇಂಚಿಂಚಾಗಿ  ಪರಿಶೀಲಿಸಿದ್ದು ಇನ್ನೂ ನೆನಪಿದೆ.
ಈಗ ಈ ಅಜ್ಜಿಯ ಪ್ರಸಂಗ. 
ಮತ್ತೆ ನಾವು ಆ ಮನೆಯ 5 ವರ್ಷಗಳ ಲೀಸ್ ಮುಗಿದ ಮೇಲೆ ಬಸವೇಶ್ವರನಗರಕ್ಕೆ ಶಿಫ್ಟ್ ಆದ್ವಿ. ನಾವು ಹೋಗುವ ಮುಂಚ ಅಜ್ಜಿ ಅಳುತ್ತ ಇದ್ದರು. ನಾನು ಅವರಿಗೆ ನೀವು ಅಲ್ಲಿಗೆ ಬರಬಹುದಲ್ಲ್ವಾ? ಏನೂ ಪರದೇಶಕ್ಕೆ ಹೋಗ್ತಾ ಇಲ್ಲ ತಾನೆ ಅಂದಿದ್ದೆ. ಆ ಐದು ವರ್ಷಗಳಲ್ಲಿ ಮಗನ ಮದುವೆ ಆಗಿತ್ತು. ಸೊಸೆಗೂ ಅತ್ತೆಗೂ ಕೂಡಿ ಬರುತ್ತಿರಲಿಲ್ಲ, ನಮ್ಮ ಮನೆಯಿಂದ ಇಸ್ರೀ ಬಟ್ಟೆ ತೆಗೆದುಕೊಂಡು ಹೋಗುವಾಗ ಸೊಸೆಯ ಚಾಡಿ ಮಾತೆ ಜಾಸ್ತಿ ಇರುತ್ತಿದ್ದವು. ಈಗ ಅವರ ಮುಖ ಇಲೆಕ್ಟ್ರಿಕ್ ಕಂಬದಲ್ಲಿ ನೇತಾಡುವ ಫ್ಲೇಕ್ಸ್ ನಲ್ಲಿ ನೋಡುವಂತಾಯಿತು. ಹೀಗೆ ಒಂದು ದಿನ ನನ್ನ ಕಲೀಗ್ ಮನೆಗೆ ಹೋಗಿ (ಅವರು ಇನ್ನೂ ಅಲ್ಲೇ ಇದ್ದಾರೆ) ನನಗೆ ಆ ಅಕ್ಕನ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಹಿಂಸೆ ತಾಳಕ್ಕೆ ಆಗಲ್ಲ ಅಂತ ಕೂತಿದ್ದರಂತೆ, ಅವರು ಜಾಣತನದಿಂದ ಅವರೀಗ ಊರಲಿಲ್ಲ ಅವರು ಬಂದ ಮೇಲೆ ಹೋಗುವ ಅಂತ ಹೇಳಿದ್ರಂತೆ. ವಿಷಯ ಇಷ್ಟೆ ಕೊನೆ ಕೊನೆಗೆ ಬಟ್ಟೆಗಳು ಅದಲು ಬದಲಾಗೋದು, ಪ್ಲ್ಲ್ಯಾಸ್ಟಿಕ್ ಗುಂಡಿ melt ಆಗೋದು, ಸುಡೋದು , (ನನ್ನ ಕಲೀಗ್ ಗಂಡನ ಎರಡು ಹೊಸ ಶರ್ಟ್ ಹಾಳು ಮಾಡಿದ್ದರಂತೆ) ಮುಂತಾದವು ಜಾಸ್ತಿ ಆಗಿ ಯಾರೂ ಬಟ್ಟೆ ಕೊಡುತ್ತಿರಲಿಲ್ಲವಾದ್ದರಿಂದ ಅಕ್ಕನಾದ್ರೂ (ನಾನು) ಬಟ್ಟೆ ಕೊಡ್ತಾರೆ ದೂರ ಆದ್ರೂ ಅಡ್ಡಿಯಿಲ್ಲ ಅವರ ಬಟ್ಟೆಗೆ ನಾನೇ ಇಸ್ತ್ರೀ ಹಾಕಿ ಕೊಡ್ತೇನೆ ಅಂತ ಹೊರಟಿದ್ರಂತೆ. ಅವರ ಸೊಸೆಯನ್ನು ಮೊನ್ನೆ ನೋಡಿದೆ, ನಮ್ಮ ಈಗಿನ ಮನೆಯ ಬಳಿ ಶಿಫ್ಟ್ ಆಗಿದ್ದಾರೆ. ಚಂದದ ಹೆಂಗಸು. ಎಲ್ಲೋ ಹರಕೆ ಹೇಳಿ ತಳೆ ಬೋಳಿಸಿದ್ದು ಈಗ ಸ್ವಲ್ಪ ಸ್ವಲ್ಪ ಕೂದಲು boycut ತರಹ ಬರುತ್ತ ಇದೆ.ನನಗೆ ಫಕ್ಕನೆ ಅವಳ ಗುರುತು ಸಿಗಲಿಲ್ಲ ಅವಳೆ   ನಾನು ನನ್ನಷ್ಟಕ್ಕೆ ನಡೆದುಕೊಂಡು ಹೋಗ್ತಾ ಇದ್ರೆ, ನನ್ನ ಕೈ ಗಟ್ಟಿ ಹಿಡಿದು ನಿಲ್ಲಿಸಿ, ಪರಿಚಯಿಸಿಕೊಂಡ್ಲು. ಎರಡು ಹೆಣ್ಣು ಒಂದು ಗಂಡು ಮಗ ಅಂತೆ. :-)
ಅಂತೂ ನನಗೆ ಬೇಡದಿದ್ದ ಸೀರೆ 14 ವರ್ಷಗಳ ಕಾಲ ಉಡುತ್ತಿದ್ದರೂ ಒಂಚೂರು ಶೈನ್ ಕಳಕೊಳ್ಳದೇ, ಇತ್ತೀಚಿಗೆ ನಮ್ಮ BBMP ರಸ್ತೆ ಕ್ಲೀನ್ ಮಾಡುವ ಜಯಮ್ಮ, ಸೀರೆ ಚೆನ್ನಾಗಿದೆ ಅಕ್ಕೋ ನನಗೆ ಕೊಡಿ ಅಂದಿದಕ್ಕೆ ಆಕೆಗೆ ಕೊಟ್ಟು ಬಿಟ್ಟೆ.ಶssss ಅಮ್ಮನಿಗೆ ಹೇಳಿಲ್ಲ. ಆ ಸೀರೆ ಉಟ್ಟಿದ್ದ ಫೋಟೊ ಎಲ್ಲಾದರೂ ಇದ್ರೆ ಅದನ್ನೂ ಇಲ್ಲಿ ಹಾಕ್ತೇನೆ..
ಮೊನ್ನೆ ಯಾವುದೋ ಕಾರ್ಯಕ್ರಮಕ್ಕೆ ಹೊರಟಿದ್ದ ಜಯಮ್ಮ 'ನೋಡಿ ಅಕ್ಕ ನೀವು ಕೊಟ್ಟ ಸೀರೆ, ಬೋ ಪಸಂದಾಗೈತೆ' ಅಂತ ರಸ್ತೆ ಮಧ್ಯ ನಿಂತು ಗಟ್ಟಿ ದನಿಯಲ್ಲಿ ಹೇಳಿದಾಗ ನನಗೆ ನಾಚಿಕೆ...
Long live the saree , the man who sold it to me (forced it on me) and peace be to ಇಸ್ತ್ರೀ ಅಜ್ಜಿ..
:-)
ಹಾಂ ಅಂದ ಹಾಗೆ ಇಂಗ್ಲಿಷ್-ವಿಂಗ್ಲಿಷ ನಲ್ಲಿ ಶ್ರೀದೇವಿ ಸೀರೆಗಳು ಸೂಪರ್sssssss

October 13, 2012

ಬಾಳೆ ಎಲೆ ಕಡುಬು

ಒಂದು ಕಪ್ ಉದ್ದಿನ ಬೇಳೆ ಗೆ ಎರಡು ಕಪ್ ಅಕ್ಕಿ ರವೆ/3 ಕಪ್ ಬಾಂಬೆ ರವಾ
ಉದ್ದಿನ ಬೇಳೆ ರುಬ್ಬೋಕಲ್ಲು ಅಥವ ಗ್ರೈಂಡರ್ ನಲ್ಲಿ ರುಬ್ಬಿದರೆ ನಿಮಗೆ soft ಇಡ್ಲಿ ಅಥವ ಕಡಬು ಮಾಡಲಿಕ್ಕೆ ಆಗುತ್ತದೆ. ಕೈಗೆಟಕುವ ಬೆಲೆಗೆ ಟೇಬಲ್ ಟಾಪ್ ಗ್ರೈಂಡರ್ ಸಿಗುತ್ತೆ. ಇಡ್ಲಿ ದೋಸೆಗೆ ಇದು ಉತ್ತಮ.
ಉದ್ದಿನ ಬೇಳೆ ರುಬ್ಬಿದ ಎರಡು ಮೂರು ಗಂಟೆ ನಂತರ ಅಕ್ಕಿ ರವೆ ಬೆರೆಸಿ. ಮೊದಲೆಲ್ಲ ಅಕ್ಕಿ ರುಬ್ಬಿ ಅಥವ ಅಕ್ಕಿಯನ್ನು ಎರಡು ಗಂಟೆ ನೆನೆಕಾಕಿ, ಆಮೇಲೆ ನೀರಲ್ಲ ಬಸಿದು ಅದನ್ನು ಬಟ್ಟೆ ಮೇಲೆ spread ಮಾಡಿ, ಅದು ಒಣಗಿದ ಮೇಲೆ ಅದರ ರವೆ ಮಾಡಿ ಬೆರೆಸುವುದಿತ್ತು ನಾನು. ಈಗ ಎಲ್ಲ ರೆಡಿ ಸಿಗುತ್ತೆ. ಮಂಗಳೂರು ಸ್ಟೋರ್ಸ್ ನಲ್ಲಿ ಬೆಳ್ತಿಗೆ ಅಕ್ಕಿ ರವೆ ಸಿಗುತ್ತೆ. ಆಫಿಸ್ ಗೆ ಹೋಗುವವರಿಗೆ ಇದರಿಂದ ಅನುಕೂಲ. ( ಕುಚ್ಚಲಕ್ಕಿ ರವೆ ಬೆರೆಸಿ ಕೂಡ ಕಡುಬು ಮಾಡಬಹುದು ಆದರೆ ಕೆಲವರಿಗೆ ಅದರ ಪರಿಮಳ ಹಿಡಿಸುವುದಿಲ್ಲ.)
ವಿ.ಸೂ: ಬಾಂಬೆ ರವಾ ಬೆರೆಸುವುದಾದರೆ ಬಾಂಬೆರವೆಯನ್ನು ಒಂದು ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ಹಬೆ ಮೇಲೆ 15 ನಿಮಿಷ ಬೇಯಿಸಿ. ಕೂಡಲೆ ಹೊರಗೆ ತೆಗೆದು ಆರಲು ಬಿಡಿ. ಪೂರ್ತಿ ಆರಿದ ಮೇಲೆ ಕೈನಿಂದ ರವೆಯನ್ನು ಉದುರುದುರಾಗಿಸಿ ಅದನ್ನು ಉದ್ದಿನ ಹಿಟ್ಟಿಗೆ ಬೆರೆಸಿ.
ಅಕ್ಕಿ ರವೆ ನೀರಿನಲ್ಲಿ ಎರಡು  ಗಂಟೆ ನೆನೆಸಿ ಆಮೇಲೆ ಅದರ ನೀರೆಲ್ಲ ಬಸಿದು ಉದ್ದಿನ ಹಿಟ್ಟಿಗೆ ಬೆರೆಸಿ.

ಮರು ದಿನ ಹಬೆಪಾತ್ರೆಯಲ್ಲಿ ನೀರು ಇಟ್ಟು ಬಿಸಿ ಮಾಡಲು ಇಡಿ. ಅದರಲ್ಲಿ ಬಾಳೆ ಎಲೆಯನ್ನು ಚೆನ್ನಾಗಿ spread ಮಾಡಿಡಿ. ನೀರು ಮರಳಲು (boiling) ಶುರು ಆದಾಗ ಹಿಟ್ಟನ್ನು ಹಾಕಿ.

ಹಿಟ್ಟು ಬೆಂದು ದುಪ್ಪಟ್ಟು ಆಗುವ ಸಾಧ್ಯತೆಗಳಿರುವುದುದರಿಂದ ಪಾತ್ರೆಯ ಅರ್ಧದಷ್ಟೆ ಹಿಟ್ಟು ಹಾಕಿ. ಹದಿನೈದು ನಿಮಿಷ ಬೇಯಿಸಿ. ಕಡಬು ರೆಡಿ.

 ಚಟ್ನಿ, ಬೆಣ್ಣೆ ಅಥವ ಆಲುಗಡ್ಡೆಯ ತೆಳು ಪಲ್ಯ ಚೆನ್ನಾಗಿರತ್ತೆ.
ಕಡುಬು, ಸಾಂಬಾರ, ಶುಂಠಿ ಹಾಕಿದ ಕೆಂಪು ಖಾರ ಚಟ್ನಿ ಮತ್ತು ತಾಜಾ ತಾಜಾ ಬೆಣ್ಣೆ
FB ನಲ್ಲಿ ಪೋಸ್ಟ್ ಮಾಡಿದ ಕಡುಬಿನ ಚಿತ್ರ ನೋಡಿದ ನನ್ನ ಬ್ಲಾಗ್ ಓದುಗರು, ಇದರ ರೆಸಿಪಿ ಇಲ್ಲಿ ಹಾಕಲು ಸಲಹೆ ನೀಡಿದ್ದರು..ಈ ಪೋಸ್ಟ್ ಅವರಿಗೆ...
:-)