Showing posts with label shami tree. Show all posts
Showing posts with label shami tree. Show all posts

October 2, 2009

ಬಣ್ಣ ಬಣ್ಣದ ದಸರಾ ಮೆರವಣಿಗೆ

ನಾಳೆ ನಾವು ಮೈಸೂರಿಗೆ ಹೋಗ್ತಾ ಇದ್ದೇವೆ’ ಅಂದರು ಶ್ರೀಕಾಂತ್. ಹೇಳಿದ್ದು ಹೇಗಿತ್ತೆಂದರೆ ಇದರ ಬಗ್ಗೆ ದೂಸರಾ ಮಾತಿಲ್ಲ ಅನ್ನುವಂತಹ ಧಾಟಿ.


ಇದಕ್ಕೆ ಕಾರಣ ಇದೆ. ನಾವು ಬೆಂಗಳೂರಿಗೆ ಬಂದು ಆಗಲೇ ಒಂಬತ್ತು ವರ್ಷವಾಗಿದೆ. ಪ್ರತೀ ಸಲ ಶ್ರೀಕಾಂತ್ ದಸರೆಗೆ ಮೈಸೂರಿಗೆ ಹೋಗುವ ಅಂದರೆ ನಾನೇನಾದ್ರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ನನಗೆ ಜನ ಜಂಗುಳಿಯಂದ್ರೆ ಆಗದು.


ಶ್ರೀಕಾಂತ್ ಮಿತ್ರರು ಮೈಸೂರನಲ್ಲಿ ನಾವು ವಿಜಯದಶಮಿಯ ದಿನ ಕಳೆಯಲು ಎಲ್ಲ ಏರ್ಪಾಡು ಮಾಡಿದ್ದರು. ನಾವು ಬೆಳಿಗ್ಗೆ 7.00 ಗಂಟೆಗೆ ಬೆಂಗಳೂರು ಬಿಡಿವುದೆಂದಾಯಿತು. ಮಗಳ ಫರ್ಮಾಯಿಶ್ ನಂತೆ ವಾಂಗೀ ಭಾತ್, ಮೊಸರನ್ನ ಬುತ್ತಿ ಕಟ್ಟಿಕೊಂಡು ಹೊರಟೆವು.


ನಾವು ಬಾಡಿಗೆಗೆ ಪಡೆದುಕೊಂಡ ಟ್ಯಾಕ್ಸಿ ಚಾಲಕ ತೀರ್ಥಹಳ್ಳಿಯವನು. ಶ್ರೀಕಾಂತ್ ಗಂತೂ ಇದು ಖುಶಿಯ ವಿಷಯ. ಊರಿನ ವಿಷಯ ಹರಟುತ್ತ ಸಾಗಿತು ನಮ್ಮ ಪ್ರವಾಸ.

ಮೊದಲು ಶ್ರೀರಂಗಪಟ್ಟಣಕ್ಕೆ ನಮ್ಮ ಪ್ರಯಾಣ.ದೇವಾಲಯದ ಹೊರಗಿನ ಗೋಪುರ ತುಂಬಾ ಆಕರ್ಷಕವಾಗಿದೆ. ಒಳಗೆ ಹೋಗುವ ಮುನ್ನ ’ಪ್ಲಾಸ್ಟಿಕ್ ಹಾಗೂ ಮೊಬೈಲ್ ನಿಷೇಧಿಸಿದೆ’ ಬೋರ್ಡ ನೋಡಿ ತುಂಬ ಖುಶಿಯಾಯಿತು. ದೇವಾಲಯದ ಒಳಗಡೆ ಫೋಟೊ ತೆಗೆಯುವುದು ನೀಷೇಧಿಸಿತ್ತು.ದ್ರಾವಿಡ/ವಿಜಯನಗರ- ಹೊಯ್ಸಳ ಶೈಲಿಯಲ್ಲಿ ಕಟ್ಟಿದ ದೇವಾಲಯ, ಸೂಕ್ಷ್ಮವಾದ ಕೆತ್ತನೆಯಿಂದ ತುಂಬಾ ಚಂದ ವಾಗಿದೆ. ನವರಂಗದಲ್ಲಿನ ಕಂಬಗಳು ನನಗೆ ತುಂಬ ಇಷ್ಟವಾಯಿತು. ಇಡೀ ದೇವಾಲಯ ಇಂತಹ ಕಂಬಗಳ ಮೇಲೆ ನಿಂತಿವೆ. ಪ್ರತಿ ಕಂಬದ ಕೆತ್ತನೆ ಕೆಲಸ ವೈವಿಧ್ಯಮಯವಾಗಿದೆ.-


ಏಳು ತಲೆಯ ಆದಿಶೇಷನ ಮೇಲೆ ಪವಡಿಸಿರುವ ಶ್ರೀ ರಂಗನಾಥಸ್ವಾಮಿಯ ಮೂರ್ತಿ ತುಂಬ ಆಕರ್ಷಕವಾಗಿದೆ. ಸಾಧಾರಣವಾಗಿ ಗರ್ಬಗುಡಿಯಲ್ಲಿ ವಿದ್ಯುದ್ದೀಪ ಇರುವುದಿಲ್ಲ. ಇಲ್ಲಿ ಲೈಟ್ ಹಾಕಿದ್ದರಿಂದ ಒಳಗಣ ದೇವರ ಮೂರ್ತಿ ಸ್ಪುಟವಾಗಿ ಕಾಣುತಿತ್ತು. ರಂಗನಾಥಸ್ವಾಮಿ ಪಾದದ ಬಳಿ ಲಕ್ಷ್ಮಿ ವಿಗ್ರಹವಿದೆ.


ಅಲ್ಲಿಂದ ನಾವು ಟಿಪ್ಪು ಸುಲ್ತಾನ್ ಕಟ್ಟಿಸಿದ ಕಾರಾಗ್ರಹವನ್ನು ನೋಡಿದೆವು. ಮತ್ತು ನಂತರದ ಭೇಟಿ ನಿಮಿಷಾಂಬ ದೇವಾಲಯಕ್ಕೆ. ಆದರೆ ಅಲ್ಲಿ ತುಂಬ ಗದ್ದಲ ಇದ್ದ ಕಾರಣ ನಾವು ಒಳಗೆ ಹೋಗಲಿಲ್ಲ. ಅಲ್ಲಿಯೆ ಒಂದು ಮಾರು ದೂರದಲ್ಲಿದ್ದ ಕೆರೆಯ ಬಳಿಗೆ ತೆರಳಿ ನಾವು ಕಟ್ಟಿ ತಂದಿರುವ ಬುತ್ತಿಯನ್ನು ತಿಂದೆವು. ಅಲ್ಲಿಂದ ದರಿಯಾ ದೌಲತ್ ಗೆ. ಅಲ್ಲೂ ಒಳ ಹೋಗುವ ಕ್ಯೂ ತುಂಬ ದೊಡ್ಡದಾಗಿತ್ತು.


ಸೊ ಅದನ್ನೂ ಬಿಟ್ಟು ಅಲ್ಲಿಂದ ನಾವು ಸಂಗಮ್ ಗೆ ತೆರಳಿದೆವು. ಅಲ್ಲಿ ಕೆಲವು ಬಂಗಾಲಿಗಳು ಸೇರಿ ದುರ್ಗೆಯ ವಿಸರ್ಜನೆಗೆ ತಯಾರಿ ನಡಿಸಿದ್ದರು. ತರುಣ ತರುಣಿಯರು ಹಣೆಯ ಮೇಲೆ ಗುಲಾಲನ್ನು ಢಾಳಾಗಿ ಲೇಪಿಸಿ ದೇವಿಯ ಸುತ್ತ ಧೋಲಕದ ತಾಳಕ್ಕೆಮನಮೋಹಕವಾಗಿ, ನರ್ತಿಸಿದರು. ಹೂವಿನಿಂದ ಅಲಂಕೃತ ದುರ್ಗೆಯ ಮೂರ್ತಿ ಕೂಡ ಸುಂದರವಾಗಿತ್ತು.









ಎರಡು ಗಂಟೆಗೆ ನಾವು ಬನ್ನಿ ಮಂಟಪ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ ಹತ್ತಿರ ಬಂದೆವು. ಮೈಸೂರಿನ ಮಿತ್ರರು ನಮಗಾಗಿ ಕಾದಿದ್ದರು. ನಾನು ಮಗಳು ಮೆಟ್ಟಿಲ ಮೇಲೆ ಪವಡಿಸಿದೆವು. ಶ್ರೀಕಾಂತ್ ಗೆ ರಾಜಯೋಗ, ಕುರ್ಚಿ ಸಿಕ್ಕಿತು.

ಮೆರವಣಿಗೆ ಇನ್ನೂ ಶುರುವಾಗದೆ ಇದ್ದುದರಿಂದ ಶ್ರೀಕಾಂತ್ ತೀರ್ಥಹಳ್ಳಿಯಲ್ಲಿ ಅವರ ಚಿಕ್ಕಂದಿನ ದಸರಾ ಕಾರ್ಯಕ್ರಮದ ಬಗ್ಗೆ ವಿವಿರಿಸಿದರು. ಅವರ ಅಕ್ಕಂದಿರು- ತಂಗಿಯಂದಿರು ಸೇರಿ ಗೊಂಬೆ ಹಬ್ಬ ಆಚರಿಸುತ್ತಿದ್ದರಂತೆ. ಸಾಯಂಕಾಲ ಗಂಡು ಮಕ್ಕಳನ್ನು ’ನೀವು ಹೊರಗೆ ಹೋಗಿ ಅಡ್ಡಾಡಿಕೊಂಡು ಬನ್ನಿ ಅಂದರೆ ಇವರು ಮಹಡಿ ಮೇಲೆ ಅಡಗಿ ಕೂರುತ್ತಿದ್ದರಂತೆ. ಹೆಂಗೆಳೆಯರು ಧಾವಣಿ/ಸೀರೆ ಉಟ್ಟಿಕೊಂಡು, ದಸರಾ ಗೊಂಬೆಗಳ ಎದುರು ಕೋಲಾಟ/ ಹಾಡು ಮುಂತಾದವುಗಳನ್ನು ನಡೆಸಿ ಚರಪು ತಿಂದು ಹೋಗುತ್ತಿದರಂತೆ. ಸುಂದರಿಯರಾದ ಹೆಣ್ಣು ಮಕ್ಕಳ ಮೇಲೆ ಈ ಗಂಡು ಮಕ್ಕಳ ಕಣ್ಣು ಇರುತ್ತಿತ್ತಂತೆ. ರಾತ್ರಿ ಆ ಹುಡುಗಿಯರ ನೃತ್ಯದ mimicry ಮಾಡಿ ಏಟು ತಿಂದಿದ್ದೂ ಹೇಳಿದರು.

ಬನ್ನಿ ವೃಕ್ಷದ ಬಗ್ಗೆ : ತೀರ್ಥಹಳ್ಳಿಯ ಕುಶಾವತಿಯಲ್ಲಿ ಒಂದು ಶಮೀ (ಬನ್ನಿ) ವೃಕ್ಷ ಇದೆ. ವಿಜಯದಶಮಿಯಂದು ಊರಿನ ಎಲ್ಲರೂ ಶಮಿ ಎಲೆಗಳನ್ನು ಅಲ್ಲಿಂದ ತಂದು ಒಬ್ಬ್ಬರಿಗೊಬ್ಬರು ಅದನ್ನು ವಿನಿಮಯ ಮಾಡುತ್ತ, ಕಿರಿಯರು ’ಪ್ರೀತಿ -ವಿಶ್ವಾಸ- ಅಭಿಮಾನಗಳು ಯಾವಾಗಲೂ ಇರುವಂತೆ ಕೇಳಿಕೊಳ್ಳುತ್ತ ಹಿರಿಯರ ಕಾಲಿಗೆ ಒರಗಿ ಆಶೀರ್ವಾದವನ್ನು ಬೇಡುವ ಕ್ರಮ ಈಗಲೂ ಇದೆ.
ಬ್ಯಾಂಕಿನ ಮೆಟ್ಟಿಲ ಮೇಲೆ ನನ್ನ ಪಕ್ಕದಲ್ಲಿ ಕೂತ ಮಹಿಳೆಯ ಹೆಸರು ಅಲಮೇಲಮ್ಮ. ಅವರು ಮೈಸೂರಿನವರಂತೆ.ಅವರಿಗೆ 65 ವರ್ಷ ವಯಸ್ಸಂತೆ. ಒಂದೂ ದಸರಾ ಮೆರವಣಿಗೆಯನ್ನು ಬಿಡದೆ ನೋಡಿದಂತವರು. ಕೆನ್ನೆಗೆ ಅರಿಶಿನ, ಹಾಗೂ ಹಣೆಯಲ್ಲಿನ ದೊಡ್ಡ ಕುಂಕುಮದ ಬೊಟ್ಟಿನಿಂದ ತುಂಬ ಲಕ್ಷಣವಾಗಿತ್ತು ಅವರ ಮುಖ. ಅವರು ನೋಡಿದ ಹಳೆಯ ದಸರಾ ವೈಭವಗಳನ್ನೆಲ್ಲ ತುಂಬ ರಸವತ್ತಾಗಿ ವರ್ಣಿಸಿದರು. ಹಾಗೂ ರಾಜರ ಕಾಲದಲ್ಲಿ ದಸರಾ ರೇಷನ್ ಅಂತನೂ ಕೊಡುತ್ತಿದ್ದರಂತೆ. ದಸರೆಗೆ ಬಂದ ಬಂಧು, ಮಿತ್ರ ರ ಸತ್ಕಾರದಲ್ಲಿ ಲೋಪವಾಗದಿರುವುದು ಹಾಗೂ ಅತೀಥೇಯರಿಗೂ ಇದರಿಂದ ಅನುಕೂಲವಾಗಲೀ ಎನ್ನುವ ಉದ್ದೇಶ.

ಅಷ್ಟರಲ್ಲಿ ನನ್ನ ಎದುರಿಗೆ ಕೂತಿದ್ದ ಪುಟ್ಟ ಬಾಲಕಿ ’aunty, iam seeing you and seeing you from that time. I think i seen you many times. do you sing in Wilsons orchestra?' ಅಂತ ಕೇಳಿದಳು. ಅದಕ್ಕೆ ನಾನು ಅವಳ ಗಲ್ಲ ನೇವರಿಸುತ್ತ ’no baby, i cannot sing to save the the life of me' ಅಂದಾಗ ಮುದ್ದಾಗಿ ಮುಗುಳ್ನಕ್ಕಳು.

ಎರಡು ಕಾಲು ಗಂಟೆಯ ಸುಮಾರಿಗೆ ಮೆರವಣಿಗೆ ಶುರುವಾಯಿತು. ಮೊದಲು ಆನೆ ಅಶ್ವಗಳು followed by ಒಂದೊಂದೆ ಸ್ಥಿರ ಚಿತ್ರಗಳು. ನಡು ನಡುವೆ ನಮ್ಮ ರಾಜ್ಯದ ವೈವಿದ್ಯಮಯ ಪರಂಪರೆಯನ್ನು ಸಂಕೇತಿಸುವ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ಕೊಟ್ಟವು. ಆಟ, ನೃತ್ಯ, ಕೋಲಾಟ, ಕವಾಯತು, ರೊಲರ್ ಸ್ಕೇಟ್ ಶೋ ಮುಂತಾದವುಗಳು ಒಂದರ ಹಿಂದೆ ಒಂದರಂತೆ ಬರುತ್ತಿದ್ದವು. ನಮ್ಮ ಅಕ್ಕ ಪಕ್ಕ ಸೇರಿದ ಜನರೆಲ್ಲ ಮರೆವಣಿಗೆಯಲ್ಲಿ ಪಾಲ್ಗೊಂಡವರನ್ನು ಚಪ್ಪಾಳೆ/ಉತ್ಸಾಹದ / ಹೋ ಎನ್ನುವ ಕೂಗುಗಳಿಂದ ಪ್ರೋತ್ಸಾಹಿಸುತಿತ್ತು.


ಕಡೆಗೆ ರಾಜಠೀವಿಯಲ್ಲಿ ಹೆಜ್ಜೆ ಹಾಕುತ್ತ ಬರುವ ಗಜರಾಜ ಬಲರಾಮ ಕಾಣಿಸಿದನು. 750 ಕೆ.ಜಿ ತೂಕದ ಚಾಮುಂಡಿ ವಿಗ್ರಹವನ್ನು ಅಂಬಾರಿಯಲ್ಲಿ ಹೊತ್ತ ಬಲರಾಮ ಹಾಗೂ ಅಕ್ಕ ಪಕ್ಕದಲ್ಲಿ ಬರುವ ಅಲಂಕೃತ ಹೆಣ್ಣಾನೆಗಳನ್ನು ನೋಡಲು ಎರಡು ಕಣ್ಣು ಸಾಲದಾಯಿತು. ನೆರೆದಿದ್ದ ಜನ ಸಮೂಹ ನಿಂತಲ್ಲಿ/ಕೂತಲ್ಲಿ ದೇವಿಗೆ ನಮಸ್ಕಾರ ಮಾಡುತ್ತಿದ್ದರು.

ಕ್ಯಾಮರ ನನ್ನ ಬಳಿ ಇತ್ತು. ಝೂಮ್ ನಲ್ಲಿ ಫೋಟೊ ತೇಗಿ ಬೇಕಾದ್ರೆ ಒಂದು ಕ್ಷಣ ನನ್ನ ಕಣ್ಣು, ಬಲರಾಮನ ಕಣ್ಣೊಂದಿಗೆ ಕೂಡಿತ್ತು. ಒಂದು ಕ್ಷಣ ಎಲ್ಲ ಸ್ಥಬ್ದವಾದಂತೆ, ಅಲ್ಲಿರುವುದು ನಾನು ಮತ್ತು ಬಲರಾಮ ಮಾತ್ರ ಅನ್ನಿಸಿ, ಅದರ ಕಣ್ಣಿನಲ್ಲಿರುವ ನೋವು ನನಗೆ ರವಾನಿಸಿದಂತಾಗಿ, ಸುಮ್ಮನೆ ಅದನ್ನೆ ನೋಡ್ತಾ ಕೂತೆ. ದೇವಿಯನ್ನು ಹೊತ್ತ ಅಂಬಾರಿ ಸ್ವಲ್ಪ ಬಲಕ್ಕೆ ವಾಲಿ ಬಲರಾಮನಿಗೆ ತುಂಬಾ ತೊಂದರೆಯಾಗಿದೆ ಅನ್ನಿಸಿತು. ತನ್ಮಯಳಾಗಿ ಹಾಗೇ ನೋಡ್ತಾ ಫೋಟೊ ತೆಗೆಯುವುದನ್ನು ಮರೆತುಹೋದೆ. ನನ್ನ ಮಗಳಿಗೂ ಹೀಗೆ ಅನುಭವ ಆಗಿ ತುಂಬ ಬೇಸರವಾಯಿತಂತೆ.
ಕಾರ್ ನಲ್ಲಿ ಹೋಗ್ತಾ ಬರ್ತಾ Lays potato wafers ನ ಎಲ್ಲ flavor ನ 20 ಪ್ಯಾಕೆಟ್ ಗಳನ್ನು ದ್ವಂಸ ಮಾಡಿದ್ದೆ. ಅದಕ್ಕೆ ಶ್ರೀಕಾಂತ್ ಮುಂದಿನ ವರ್ಷ ಬಲರಾಮನ ಬದಲಿಗೆ ನನ್ನನ್ನು ಕಳಿಸುತ್ತಾರಂತೆ. though i dont think it will be as spectacular :-)

ಇನ್ನೊಂದು ಬೇಜಾರಿನ ವಿಷಯವೆಂದರೆ ಜನರು ಅವರು ತಿಂದ,ಕುಳಿತುಕೊಳ್ಳಲು ತಂದ ಪ್ಲಾಸ್ಟಿಕ್ ಚೀಲ ಹಾಗೂ ವೃತ್ತಪತ್ರಿಕೆಗಳನ್ನು ಅಲ್ಲಲ್ಲೇ ಬಿಸುಟು ಹೋಗಿದ್ದು. ಜೋರಾಗಿ ಬೀಸಿದ ಗಾಳಿಗೆ ಅವೆಲ್ಲ ಎರ್ರಾ ಬಿರ್ರಿ ಯಾಗಿ ಹಾರಾಡ್ತಾ ಇದ್ದವು. ನಡೆದುಕೊಂಡು ಹೊರಟ ಜನರ ಮುಖಕ್ಕೆ ಬಡಿಯುತ್ತಿತ್ತು. ಹೋಟಲ್ ದಾಸ್ ಪ್ರಕಾಶ ದಲ್ಲಿ ಬಿಸಿ ಬಿಸಿ ಮಸಾಲೆ ದೋಸೆ, ಟೀ ಕುಡಿದು, ಕೃಷ್ಣರಾಜಸಾಗರ್ ಡ್ಯಾಮ್ ಗೆ ಭೇಟಿ ಕೊಟ್ಟು, ಪಂಜಿನ ಕವಾಯತನ್ನು ಮಿಸ್ ಮಾಡಿ ರಾತ್ರಿ 10.30 ಗೆ ಬೆಂಗಳೂರು ತಲುಪಿದೆವು.

at last ನಾವೂ ದಸರಾ ಮೆರವಣಿಗೆ ನೋಡಿದಂತಾಯಿತು.


ಚಿತ್ರಗಳನ್ನು ನಾನೇ ತೆಗೆದದ್ದು. ನಾಜೂಕಿನ ಕೆಲಸಗಳು ನನ್ನ ಕೈಲಾಗುವುದಿಲ್ಲವೆನ್ನುವುದಕ್ಕೆ ಸಾಕ್ಷಿ. ಹಾ ಹಾ ಹಾ