Showing posts with label knock-knees. Show all posts
Showing posts with label knock-knees. Show all posts

November 18, 2009

ರಾಜೀವಿ ನಮ್ಮ ಮನೆಗೆ ಬಂದ ಪರಿ

ನನಗೆ ಎರಡು ವರ್ಷ ಆಗುವ ಮುನ್ನ ನನ್ನ ತಮ್ಮ ಏಳನೇ ತಿಂಗಳಿಗೆ ಹುಟ್ಟಿದ. ಅವನಿಗೆ ಇನ್ಕ್ಯೂಬೇಟರ್(incubator) ನಲ್ಲಿ ಹತ್ತಿಯಲ್ಲಿ ಸುತ್ತಿ ಇಟ್ಟಿದ್ದರು. ಇಬ್ಬರು ಪುಟ್ಟ ಮಕ್ಕಳನ್ನು ನೋಡಲು ತೊಂದರೆ ಆಗುತ್ತದೆ ಎಂದು, ನನ್ನ ಆಜೋಬಾ ನನ್ನನ್ನು ಅವರ ಬಳಿ ಇಟ್ಟು ಕೊಂಡರು.ಅಜ್ಜ ಸಿವಿಲ್ ಇಂಜಿನಿಯರ್ ಆಗಿ ಆಗ ರಸ್ತೆ (highways construction)ಕಾಮಗಾರಿಯಲ್ಲಿ ವ್ಯಸ್ತರಾಗಿ ಕೆಲಸದ ಮೇಲೆ ಊರೂರು ತಿರುಗಬೇಕಾಗುತ್ತಿತ್ತು. ನನ್ನ ನಾನಿಗೆ rheumatic arthritis ಕಾಯಿಲೆ ಇತ್ತು. ಇದರಿಂದ ಕೈ-ಕಾಲು ಗಂಟಿನಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಿತ್ತು. ಅದಕ್ಕೆ ಮನೆಯಲ್ಲಿ ಇಬ್ಬರು ಕೆಲಸದವರಿದ್ದರು, ಕಮಲಾ ಮತ್ತು ಹೀರ. ಅವರು ಕೆಲಸ ಮುಗಿಸಿದ ಮೇಲೆ ನಾನು ಅವರ ಜತೆ ಅವರ ಝೋಪಡಿಗೆ ಹೋಗುತ್ತಿದ್ದೆ. ಮಾತೃ ಭಾಷೆ ಕೊಂಕಣಿಯಾದ್ರೂ ನಾನು ಅವರ ಜತೆಯಲ್ಲಿದ್ದು ಮರಾಠಿ ಮಾತನಾಡಲಾರಂಭಿಸಿದೆ. ಅವರ ತಂದೆ ಮುನಿಸಿಪಲ್ ಗಾರ್ಡನ್ ನ ಮಾಲಿಯಾಗಿದ್ದರು. ಆ ಗಾರ್ಡನ್ ನಲ್ಲಿ cageನಲ್ಲಿ ಒಂದು ನವಿಲು ಮತ್ತು ಇನ್ನೊಂದರಲ್ಲಿ ಮೊಲ ಸಾಕಿದ್ದರು.ಅವರಲ್ಲಿಗೆ ಹೋಗಲು ನನಗೆ ಇದೇ ಪ್ರಮುಖ ಆಕರ್ಷಣೆ.

ಅಜ್ಜನ ಬಳಿ ರಸ್ತೆ ರಿಪೇರಿ ಮಾಡುವ ಕೂಲಿ ಆಳಾಗಿ ಸೇರಿದ್ದು ಗಿರೀಶ್ ಎನ್ನುವ ಹುಡುಗ. ಅವನು ಮೊದಲು ಸಿನಿಮಾದಲ್ಲಿ ಸ್ಟಂಟ್ ನಲ್ಲಿ part ಮಾಡುತ್ತಿದ್ದ. ಸ್ಟಂಟ್ ನ ಸಂದರ್ಭದಲ್ಲಿ ಬೆನ್ನು ಮೂಳೆಗೆ ಏಟಾಗಿ ಮೂರು-ನಾಲ್ಕು ತಿಂಗಳು ಹಾಸಿಗೆ ಹಿಡಿದಿದ್ದ. ಆಗ ಅವನನ್ನು ನೋಡಿಕೊಳ್ಳಲು ಅವನ ತಾಯಿ ರಾಜೀವಿ ಬಂದಿದ್ದಳು.ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.ರಾಜೀವಿಗೆ ನಾಲ್ಕು ಜನ ಮಕ್ಕಳು. ಎರಡು ಹೆಣ್ಣಿನ ನಂತರ ಹುಟ್ಟಿದವನು ಗಿರೀಶ್. ಇನ್ನೊಬ್ಬ ತಂಗಿ ಚಿಕ್ಕವಳು. ಹಿರಿಯ ಹೆಣ್ಣು ಮಕ್ಕಳಿಬ್ಬರಿಗೂ ಮದುವೆ ಆಗಿತ್ತು. ರಾಜೀವಿ ಗಂಡ, ತಾಳೆ ಮರದಿಂದ ಕಳ್ಳು ತೆಗೆಯುವವನಾಗಿದ್ದ. ಮರದ ಮೇಲಿನಿಂದ ಬಿದ್ದು ತೀರಿಕೊಂಡಿದ್ದ. ಗಿರೀಶ್ ನಿಗೆ ಪೆಟ್ಟಾಗುವ ತನಕ ಅವರು ದಕ್ಷಿಣ ಕನ್ನಡ ಒಂದು ಹಳ್ಳಿಯ ಕೊಂಕಣಿ ಪರಿವಾರದಲ್ಲಿ ಕೆಲಸಕ್ಕಿದ್ದವರು. ರಾಜೀವಿ ಊರಿನಿಂದ ಗಿಡ ಮೂಲಿಕೆಯ ಎಣ್ಣೆ ತಂದು ಗಿರೀಶನಿಗೆ ಹಚ್ಚಿದ್ದರಿಂದ,ಗಿರೀಶ್ ಗುಣಮುಖನಾಗಿದ್ದ. ಫಿಲ್ಮ್ ಲೈನ್ ಬಿಟ್ಟು ಹೀಗೆ ಕೂಲಿ ನಾಲಿ ಮಾಡುತ್ತಿದ್ದ.

ಮೊದಲು ಕಮಲ, ಆರು ತಿಂಗಳ ನಂತರ ಹೀರೆ ಹೀಗೆ ಅವರ ಮದುವೆ ನಡೆದು ಹೋಯಿತು. ಅಷ್ಟರಲ್ಲಿ ನಾನಿಗೆ ಔಷಧದ ದುಷ್ಪರಿಣಾಮವಾಗಿ ಒಂದು ರಾತ್ರಿ ಬೆಳಗಾಗುವಷ್ಟರಲ್ಲಿ ಕೈ ಕಾಲುಗಳು ವಕ್ರವಾಗಿದ್ದವು. ಆಗ ರಾಜೀವಿ ನಮ್ಮ ಮನೆಗೆ ಕೆಲಸಕ್ಕೆ ಬರಲು ಶುರು ಮಾಡಿದಳು. ರಾಜೀವಿಗೆ ಕೊಂಕಣಿ ಬರುತ್ತಿದ್ದರಿಂದ ನಾನು ಪುನಃ ಕೊಂಕಣಿ ಮಾತನಾಡಲಾರಂಭಿಸಿದೆ. ರಾಜೀವಿ ಬೆಳಿಗ್ಗೆ 8.00 ಗಂಟೆಗೆ ಬಂದು ಮಧ್ಯಾನ್ಹ 3.00 ಗಂಟೆಗೆ ಹೊರಟು ಬಿಡುತ್ತಿದ್ದಳು. ಅಡಿಗೆಗೆ ಕಟ್ಟೆಯ ಮೇಲೆ ಎಲ್ಲ ಅಣಿಮಾಡಿದರೆ final ಅಡಿಗೆ ನಾನಿಯದೇ.

ರಾಜೀವಿಯ ಎಲೆ ಅಡಿಕೆ ಸಂಚಿಯ ಬಗ್ಗೆ ಇಲ್ಲಿ ಓದಿ: ನನ್ನ ಮೊಟ್ಟ ಮೊದಲ blog post :-)

ರಾಜೀವಿ ತುಂಬ ನೀಟಾಗಿ ಕೆಲಸಕ್ಕೆ ಬರುತ್ತಿದ್ದಳು. ನನ್ನ ನಾನಿಗಿಂತ ಸ್ವಲ್ಪ ಚಿಕ್ಕ ವಯಸ್ಸೆ. ಅವರನ್ನು ನೋಡಿದರೆ head madam ತರಹ ಕಾಣುತ್ತಿದ್ದರು. ಬಿಳಿ -ಕಪ್ಪು ಮಿಶ್ರಿತ ತಲೆ ಕೊದಲು ನೀಟಾಗಿ ಬಾಚಿದ್ದು, ಒಂದು ಕೂದಲೂ ಆ ಕಡೆ ಈ ಕಡೆ ಇರುತ್ತಿರಲಿಲ್ಲ. ಅವೈ ಶಣ್ಮುಖಿ / ಚಾಚಿ 420 ನ ಕಮಲಹಾಸನ್ ಮೈಕಟ್ಟು ಇತ್ತು ರಾಜೀವಿಗೆ. ಎರಡು ಕೈಗಳಿಗೆ ಯಾವುದೋ ಮೆಟಲ್ ನ ಒಂದೊಂದು ಬಳೆ. ಅಲ್ಲಲ್ಲಿ ಚಪ್ಪಟೆಯಾಗಿತ್ತು. ಗಟ್ಟಿಯಾಳು. ಅವಳು ಊಟ ಮಾಡುವುದನ್ನು ನೋಡುವುದು ನನಗೆ ಮೋಜಿನ ವಿಷಯ. ನಾನಿ ನನಗೆ ಬೈಯುತ್ತಿದ್ದಳು. ರಾಜೀವಿಯ ಊಟದ ಹೊತ್ತಿಗೆ ನನಗೆ ಹೊರಗೆ ಕಳುಹಿಸುತ್ತಿದ್ದರು :-)
ಅಜ್ಜ ಊರಿನಲ್ಲಿಲ್ಲದಿದ್ದಾಗ ರಾತ್ರಿ ಹೊತ್ತು ರಾಜೀವಿ ನಮ್ಮ ಮನೆಯಲ್ಲೇ ಇರುತ್ತಿದ್ದಳು. ಆಗ ಅವರ ಊರಿನ ದೆವ್ವದ ಕತೆಗಳನ್ನೆಲ್ಲ ಹೇಳುತ್ತಿದ್ದಳು.

ನನಗೂ ಉದ್ದ ಕೂದಲು. ಅದಕ್ಕೆ ಎಣ್ಣೆ ಹಾಕಿ ನೀಟಾಗಿ ಬಾಚುತ್ತಿದ್ದರು. ಬಾಚುತ್ತ ನನಗೆ ಕತೆ ಹೇಳುತ್ತಿದ್ದಳು. ಒಂದು ಸಲ ಜಡೆ ಹೆಣೆದರೆ ಮರುದಿನದ ತನಕ ಒಂದು ಕೂದಲು ಮಿಸುಕಾಡುತ್ತಿರಲಿಲ್ಲ. ಬಾಲವಾಡಿಗೆ ಹೋಗಲು ನನಗೆ ನೀಲು ಎನ್ನುವ ಹೆಂಗಸು ಐದು ಜನ ಇತರ ಮಕ್ಕಳೊಂದಿಗೆ ದರ ದರನೆ ಎಳೆದುಕೊಂಡು ಹೋಗುತ್ತಿದ್ದಳು. ನಾವು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಚೈನ್ (chain) ತರಹ ಮಾಡಿಕೊಂಡು ಹೋಗುತ್ತಿದ್ವಿ. ನಾನು ಪ್ರತೀ ಎರಡು ಹೆಜ್ಜೆಗೂ ಎಡವಿ ಬೀಳುತ್ತಿದ್ದೆ. ನನ್ನ ಕೈ ಹಿಡಿದುಕೊಂಡವರೂ ಬೀಳುತ್ತಿದ್ದರು. ನೀಲೂ ಕೆಟ್ಟದಾಗಿ ಬೈಯುತ್ತಿದ್ದಳು ’ಕಾಯ್ ಘರಿ ಖಾಯಾಲಾ ಘಾಲತ್ ನಾಹಿ ಕಾಯ್?’ (ಏನು ಮನೆಯಲ್ಲಿ ತಿನ್ನಕ್ಕೆ ಹಾಕಲ್ಲವೇನು?) ಒಂದೆರಡು ಸಲ ಪೆಟ್ಟು ಬಿದ್ದಿದಿದೆ. ಹೇಗೋ ಅಜ್ಜನಿಗೆ ಗೊತ್ತಾಯಿತು. ಆಮೇಲೆ ಅಜ್ಜನ ಕಾರಿನ ಡ್ರೈವರ್ ನನ್ನನ್ನು ಬಾಲವಾಡಿಗೆ ಬಿಟ್ಟು ಬರುತ್ತಿದ್ದ. ಎರಡು ವರ್ಷಗಳ ನಂತರ ತಿಳಿಯಿತು. ನನಗಿದ್ದದ್ದು knock-knees ಎನ್ನುವ ಪರಿಸ್ಥಿತಿ. ರಾಜೀವಿ ನನಗೆ ಶಾಲೆಯಿಂದ ಬಂದ ಕೂಡಲೇ ಅವಳ special ಗಿಡಮೂಲಿಕೆಗಳ ಎಣ್ಣೆಯಿಂದ ಕಾಲನ್ನು ಚೆನ್ನಾಗಿ ಮಾಲಿಶ್ ಮಾಡಿ ಬಿಸಿಲಿಗೆ ಕೂರಲು ಹೇಳುತ್ತಿದ್ದಳು. ಭಾನುವಾರದಂದು ಬೆಳಗ್ಗಿನ ಎಳೆ ಬಿಸಿಲಿಗೆ ಹೀಗೆ ಎಣ್ಣೆ ಹಚ್ಚಿ ನನ್ನನ್ನು ಕೂರಿಸುತ್ತಿದ್ದಳು. ಸಂಜೆ ಹೊತ್ತು ಅಜ್ಜನ ಜತೆ ಸಮುದ್ರದ ತಡಿಯಲ್ಲಿ barefooted (ಖಾಲಿ ಕಾಲು??) walk. ಕ್ರಮೇಣ ನನ್ನ ಕಾಲು ಸರಿಯಾಯಿತು.ಆ ಮೇಲೆ ಶಾಲೆ/ಹೈ ಸ್ಕೂಲ್/ ನಲ್ಲಿ ಓಟದ ಹಾಗೂ ಹೈ ಜಂಪ್ (highjump) ಸ್ಪರ್ಧೆಯಲ್ಲಿ ನಾನೇ ಮೊದಲಿಗಳು :-)

ಅವಳು ನಮ್ಮ ಮನೆ ಕೆಲಸ ಮುಗಿಸಿ, ಮನೆಗೆ ಹೋಗಿ ಗಿಡಮೂಲಿಕೆಗಳಿಂದ ನೋವಿನ / ತಲೆಗೆ ಉಪಯೋಗಿಸುವ ಎಣ್ಣೆಯನ್ನು ತಯಾರಿಸಿ ಮಾರುತ್ತಿದ್ದಳು. ಅಜ್ಜ ಜಾಸ್ತಿ ದುಡ್ಡು ಕೊಡುತ್ತಿದ್ದರಿಂದ ಅವಳು ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಮ್ಮ ಮನೆ ಸಮುದ್ರದ ಹತ್ತಿರ ಇದ್ದುದರಿಂದ ಕೆಲವೊಮ್ಮೆ ಜೋರಾಗಿ ಗಾಳಿ ಬೀಸುತ್ತಿತ್ತು. ಒಂದು ಸಲ ರಾತ್ರಿ ದೇವರ ದೀಪ ಗಾಳಿಯಲ್ಲಿ ಅಲುಗಿ ಅದರ ಬತ್ತಿ ನಾನಿ ಉಪಯೋಗಿಸುತ್ತಿದ ನೈಲಾನ್ ಸೊಳ್ಳೆ ಪರದೆಯ ಮೇಲೆ ಬಿದ್ದು, ಬೆಂಕಿ ತಗುಲಿಕೊಂಡು ಬಿಟ್ಟಿತು. ಅಜ್ಜನಿಗೆ high ಬಿ.ಪಿ. ಮಾತ್ರೆ ತೆಗೊಂಡು ಜೋರು ಮಂಪರಿನಲ್ಲಿದ್ದರು. ನಾನು ಅಜ್ಜನನ್ನು ಎಬ್ಬಿಸುವಷ್ಟರಲ್ಲಿ ನೆಟ್ ಒಳಗಡೆ ಮಲಗಿದ್ದ ನಾನಿಗೆ ಹಣೆ ಮತ್ತು ಒಂದು ಕೈಯಲ್ಲಿ ತುಂಬ ಸುಟ್ಟ ಗಾಯಗಳಾಗಿದ್ದವು. ಆಗ ರಾಜೀವಿ ಯಾವುದೋ ಗಬ್ಬು ವಾಸನೆಯ ಎಣ್ಣೆ ತಯಾರಿಸಿ, ಕಾಗೆಯ ಗರಿಯಿಂದ ಆ ಎಣ್ಣೆಯನ್ನು ಸುಟ್ಟ ಜಾಗಕ್ಕೆ ಹಚ್ಚುತ್ತಿದ್ದಳು. ಮೂರು ತಿಂಗಳಿಗೆ ನೋವು- ಕಲೆಯೆಲ್ಲ ಮಾಯ.

ನನ್ನ ನಾನಿಗೆ ಆಮೇಲೆ ಕ್ಯಾನ್ಸರ್ ಕಾಯಿಲೆ ತಗುಲಿಕೊಂಡಿತು. ಆಗ ರಾಜೀವಿ ಜಾಸ್ತಿ ಹೊತ್ತು ನಮ್ಮಲ್ಲಿರುತ್ತಿದ್ದಳು. ನನ್ನ ನಾನಿಯ ಕೊನೆಯ ದಿನಗಳವರೆಗೂ ನಮ್ಮ ಜೊತೆಯಲ್ಲೇ ಇದ್ದಳು. ನನ್ನ ನಾನಿ ತೀರಿಕೊಂಡಾಗ ನನ್ನ ಅಜ್ಜ ಅಲ್ಲೇ ಇದ್ದ ರಾಜೀವಿಗೆ ನಾನಿಯ ಬಂಗಾರದ ಬಳೆ ಹಾಗೂ ಮೂಗಿನ ವಜ್ರದ ಬಟ್ಟು ಕೊಟ್ಟುಬಿಟ್ಟರು. ಜನರು ತಲೆಗೊಂದು ಮಾತನಾಡಿದರು.ಆಗ ನಾನು ಎಂಟನೆ ತರಗತಿಯಲ್ಲಿದ್ದೆ. ಅಷ್ಟರಲ್ಲಿ ಬ್ಯಾಂಕೊಂದರಲ್ಲಿ ಅಧಿಕಾರಿಯಾದ ತಂದೆಗೆ ಪುನ: ಮುಂಬಯಿಗೆ ವರ್ಗವಾಗಿತ್ತು. ಅ ಮೇಲೆ ನಾನು ಮತ್ತು ಅಜ್ಜ ಪುನಃ ನನ್ನ ತಂದೆಯ ಮನೆಗೇ ವಾಪಸ್ಸ್ ಆದೇವು. ಈಗ ನಾನು ಅಜ್ಜನ ಜತೆ ಇದ್ದ ಬಿಲ್ಡಿಂಗ್ ಜಾಗದಲ್ಲಿ high rise ಅಪಾರ್ಟ್ ಮೆಂಟ್ ಗಳು ಮೇಲೆ ಬಂದಿವೆ.

ಅಜ್ಜನೂ ತೀರಿಕೊಂಡು 15 ವರ್ಷಗಳೇ ಆಗಿವೆ.
ರಾಜೀವಿ ಕೆಲವು ವರ್ಷ ಮುಂಬಯಿನಲ್ಲಿ ಇದ್ದಳು. ನಮ್ಮಲ್ಲಿ ಆಗಾಗ ಬಂದು ಹೋಗುತ್ತಿದ್ದಳು. ಗಿರೀಶನ ಹೆಂಡತಿ ಮುಂಬೈನವಳು. ಅವಳಿಗೂ ರಾಜೀವಿಗೂ ಕೂಡಿ ಬರಲಿಲ್ಲ. ಚಿಕ್ಕ ಮಗಳಿಗೂ ಮದುವೆಯ ವಯಾಸ್ಸಾಗಿದ್ದರಿಂದ ಅವರು ವಾಪಸ್ಸ್ ಅವರ ಊರಿಗೆ ಹೋದರು. ರಾಜೀವಿ ಇತ್ತೀಚಿಗೆ ಅಂದರೆ ಐದು ವರ್ಷಗಳ ಹಿಂದೆ ತೀರಿಕೊಂಡಳು ಅಂತ ಸುದ್ದಿ. ಅವಳು ಊರಿಗೆ ಹೋದ ಮೇಲೆ ನಮ್ಮ ಸಂಪರ್ಕ ಕಡಿದು ಬಿತ್ತು. ಗಿರೀಶ ಡ್ರೈವರ್ ಆಗಿ ದುಬೈಗೆ ಹೋದ. ಅದರ ಮುಂಚೆ ಅವನ ಹೆಂಡತಿ ಅವನನ್ನು ಬಿಟ್ಟು ಓಡಿ ಹೋದಳು.