Showing posts with label ಮೇಸ್ಟ್ರು. Show all posts
Showing posts with label ಮೇಸ್ಟ್ರು. Show all posts

September 4, 2013

ಶಿಕ್ಷಕರ ದಿನಾಚರಣೆಗೆ : ಅರುಣಿ ಎಂಬ ಬಾಲಕ ಉದ್ದಾಲಕನಾದ ಕತೆ

ಧೌಮ್ಯ ಎಂಬ ಋಷಿಯ ಆಶ್ರಮದಲ್ಲಿ ಅರುಣಿ ಎಂಬ ಬಾಲಕ ಕೂಡ ಇದ್ದ. ಆಗಿನ ಕಾಲದಲ್ಲಿ ಮಕ್ಕಳಿಗೆ ಅದೂ ಗಂಡು ಮಕ್ಕಳಿಗೆ ಗುರುಕುಲ ಪದ್ದತಿಯಲ್ಲಿ ಪಾಠಗಳನ್ನು ಕಲಿಸಲಾಗುತ್ತಿತ್ತು. ಪಾಠದ ಜತೆ ಗುರು ಹಾಗೂ ಗುರುಮಾತೆ ಹೇಳಿದ ಕೆಲಸಗಳನ್ನೆಲ್ಲ ಈ ಮಕ್ಕಳು ಮಾಡಲೇ ಬೇಕಿತ್ತು. ಮಕ್ಕಳೂ ಬೇಸರಿಸದೆ ಆಟ ಪಾಠದ ಜತೆ ಗುರುಕುಲದ ಕೆಲಸ - ದನದ ಕೊಟ್ಟಿಗೆ ತೊಳೆಯುವುದು, ದನಗಳನ್ನು ಮೇಯಿಸಲು ಕರೆದುಕೊಂಡು ಹೋಗುವುದು, ಮನೆಗೆ ಬೇಕಾದ ಸೊಪ್ಪು ಸದೆಗಳನ್ನು ಹೊತ್ತು ತರುವುದು ಇತ್ಯಾದಿ. ಒಂದು ದಿನ ಗುರುಪತ್ನಿ ನೋಡುತ್ತಾಳೆ ಅಡುಗೆಗೆ ಸೌದೆ ಕಡಿಮೆಯಿತ್ತು. ಧೌಮ್ಯ ಋಷಿಗಳು ಅರುಣಿಯನ್ನು ಸೌದೆ ತರಲು ಕಾಡಿಗೆ ಹೊರಡಿಸಿದರು. ಅರುಣಿಗೆ ಖುಷಿ. 'ಗುರುಗಳಿಗೆ ಅವರು ತನಗೆ ಒಪ್ಪಿಸಿದ ಕೆಲಸ ಸರಿಯಾಗಿ ನಿಭಾಯಿಸುತ್ತೇನೆಂಬುದು ನನ್ನ ಮೇಲೆ ವಿಶ್ವಾಸ ಅದಕ್ಕೆ ನನ್ನನ್ನು ಕಳುಹಿಸುತ್ತಾರೆ' ಎಂದು ತನ್ನಷ್ಟಕ್ಕೆ ಅಂದುಕೊಂಡು ಗುರುಗಳು ಕಲಿಸಿದ ಶ್ಲೋಕಗಳನ್ನು ಮನನ ಮಾಡುತ್ತ ಕಾಡಿಗೆ ಹೋಗುತ್ತಾನೆ. ಅಲ್ಲಿ ಒಣ ಸೌದೆಯನ್ನು ರಾಶಿ ಹಾಕಿ ಸಾಕಷ್ಟು ಸೌದೆ ಆಯ್ದುಕೊಂಡಾದ ಮೇಲೆ ಅವನ್ನು ಸೆಣಬಿನಿಂದ ಕಟ್ಟಿ ತಲೆ ಮೇಲಿಟ್ಟುಕೊಂಡು ಇನ್ನೇನೂ ಆಶ್ರಮಕ್ಕೆ ಹೊರಡಬೇಕು, ಅನ್ನುವಷ್ಟರಲ್ಲಿ ಆಕಾಶದಲ್ಲೆಲ್ಲ ಕಪ್ಪು ಮೋಡಗಳು. ಬೇಗ ಬೇಗ ಹೆಜ್ಜೆ ಹಾಕಿದ ಅರುಣಿ ಆದರೆ ಅಷ್ಟರಲ್ಲೇ ಜೋರಾಗಿ ಗಾಳಿ ಮಳೆ ಶುರುವಾಗಿ ಬಿಡ್ತು. ಆಶ್ರಮದ ದಾರಿಯಲ್ಲೇ ಧೌಮ್ಯ ಋಷಿಗಳ ಗದ್ದೆ, ಅಲ್ಲಿ ಸುಮಾರಾಗಿ ಮೇಲೆ ಬಂದ ಬತ್ತದ ಪೈರು. ಗದ್ದೆ ಸುತ್ತ ಒಡ್ಡಿದ ಕಟ್ಟೆ. ಅರುಣಿ ಗದ್ದೆಯ ಬಳಿಗೆ ಬರಲಿಕ್ಕೂ ಕಟ್ಟೆಗೆ/ ದಂಡೆಗೆ (ಬದುವು) ಒಂದು ಬಿರುಕು ಮೂಡಿದುದು ಕಾಣಿಸಿತು. ಅದರಿಂದ ನೀರು ಗದ್ದೆಯ ಒಳ ಹೊಕ್ಕಲು ಪರಿಕ್ರಮಿಸಿತು. ನೋಡನೋಡುತ್ತ ಬಿರುಕು ದೊಡ್ಡದಾಗುತ್ತ ಹೋಯಿತು. 'ಅಯ್ಯೋ ಪೈರು ಎಲ್ಲ ನಾಶವಾದರೆ ಋಷಿಗಳು ಏನನ್ನು ಊಟ ಮಾಡುತ್ತಾರೆ ಅಂತ ಸೌದೆಯ ರಾಶಿಯನ್ನು ನೆಲಕ್ಕೆ ಕೆಡವಿ ಕಲ್ಲು ಮಣ್ಣುಗಳಿಂದ ಆ ಬಿರುಕನ್ನು ತುಂಬುವ ಪ್ರಯತ್ನ ಮಾಡುತ್ತಾನೆ ಅರುಣಿ. ಅವನ ಕೈ, ಬೆರಳು ಸೋತು ಹೋಯಿತೆ ವಿನ: ಧಾರಾಕಾರ ಮಳೆಗೆ ಅವನು ಬಿರುಕು ತುಂಬುವ ಪ್ರಯತ್ನದಲ್ಲಿ ವಿಫಲನಾದ. ಕೊನೆಗೆ ಅವನಿಗೊಂದು ಉಪಾಯ ಹೊಳೆಯಿತು ಆ ಬಿರುಕಿಗೆ ತನ್ನ ಬೆನ್ನನ್ನು ಒತ್ತಿ ಕೊಂಡು ಅಡ್ಡಡ್ಡಲಾಗಿ ಮಲಗಿಕೊಂಡ.
ಇತ್ತ ಎಷ್ಟು ಹೊತ್ತ್ತಾದರೂ ಅರುಣಿ ಬಾರದೆ ಇದ್ದದ್ದು ಋಷಿ ಧೌಮ್ಯರಿಗೆ ಚಿಂತೆಗೆ ಹಚ್ಚಿಕೊಂಡಿತು. ಹೇಳಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದು ಅರುಣಿಯ ಸ್ವಭಾವ. ಆಶ್ರಮಕ್ಕೆ ಮರಳದೇ ಇರಲು ಬಲವಾದ ಕಾರಣ ಇರಲೇಬೇಕು. ಬಹುಶ: ಬಿದ್ದು ಗಿದ್ದು ಏಟಾಗಿರ ಬಹುದು ಅಂತ ಭಾವಿಸಿ ಆಶ್ರಮದ ಇತರೇ 5 ದೊಡ್ಡ ಹುಡುಗರ ಸಂಗಡ ಅವರು ಅರುಣಿಯನ್ನು ಹುಡುಕುತ್ತ ಕಾಡಿಗೆ ಹೊರಟರು. ಅವರೂ ತಮ್ಮ ಗದ್ದೆಯ ಬಳಿಗೆ ಬರುತ್ತಿದ್ದಂತೆ ಮಳೆಯ ರಭಸ ಹಾಗೂ ಧೋ ಎನ್ನುವ ಅದರ ಸದ್ದನ್ನು ಆಲಿಸಿ ಈ ವರ್ಷ ನಮ್ಮ ಗದ್ದೆ ಹೋದಂತೆಯೇ ಅಂತ ತುಂಬ ದು:ಖದಿಂದ ನಿಡುಸುಯ್ದು ಹಾಗೆ ಮುಂದಕ್ಕೆ ಹೋಗಿ ನೋಡುತ್ತಾರೆ ಏನಾಶ್ಚರ್ಯ ಗದ್ದೆಯಲ್ಲಿ ಅಷ್ಟು ನೀರು ತುಂಬದೆ ಫಸಲು ಸುರಕ್ಷಿತವಾಗಿ ರಾರಾಜಿಸುತ್ತಿತ್ತು. ಯಾಕೋ ಅನುಮಾನಗೊಂಡು 'ಅರುಣೀssssss' ಎಂದು ಕೂಗು ಹಾಕಿದರು. ದೂರದಿಂದ ಅಸ್ಪಷ್ಟವಾಗಿ 'ಗುರುಗಳೇ' ಅಂತ ಪ್ರತ್ಯುತ್ತರ ಸಿಕ್ಕ ಹಾಗೆ ಅನಿಸಿ ಧೌಮ್ಯರಿಗೆ. ಆ ದನಿಯ ಜಾಡನ್ನು ಅರಿಸಿ ಹೊರಟರೆ ಬಿರುಕನ್ನು ಮುಚ್ಚುವ ಪ್ರಯತ್ನದಲ್ಲಿ ದಂಡೆಗೆ ಅಡ್ಡ ಮಲಗಿದ  ಅರುಣಿ ಕಾಣಿಸಿದ. ಕೂಡಲೇ ದೊಡ್ಡ ಹುಡುಗರನ್ನು ಕಟ್ಟೆಯ ಅಂಚಿನ ದುರಸ್ತಿಗೆ ಹಚ್ಚಿ ಅರುಣಿಯನ್ನು ಎತ್ತಿಕೊಂಡು ಆಶ್ರಮಕ್ಕೆ ನಡೆದರು ಧೌಮ್ಯ ಋಷಿ.
ಅವನ ಶುಶ್ರೂಷೆ ಮಾಡಿ ಅವನಿಗೆ ಪ್ರೀತಿಯಿಂದ ಉದ್ದಾಲಕ-ಅರುಣಿ (ಉದ್ದಾಲಕ ಎಂದರೆ ದಂಡೆ/ಬದುವಿನಿಂದ ಎಬ್ಬಿಸಲ್ಪಟ್ಟವನು ಅಂತ) ಎಂಬ ಬಿರುದನ್ನು ದಯಪಾಲಿಸಿದರು ಗುರುಗಳು. ಮುಂದೆ ಉದ್ದಾಲಕನೂ ಉಪನಿಶತ್ತುಗಳನ್ನು ಕಲಿತು ಪಾಂಡಿತ್ಯದಿಂದ ಕೂಡಿದ ಋಷಿಯಾದನು. ಅವರಿಗೆ ಪಂಡಿತೋತ್ತಮರಾದ ಶ್ವೇತಕೇತು ಎಂಬ ಮಗನೂ  ಅಷ್ಟಾವಕ್ರ ಎಂಬ ಮೊಮ್ಮಗನೂ ಹುಟ್ಟಿದ.
ಆಗಿನ ಕಾಲದಲ್ಲಿ ಗುರು ಶಿಷ್ಯರ ನಡುವೆ  ಪ್ರೀತಿ ಗೌರವ ಸೌಹಾರ್ದದಿಂದ ಕೂಡಿದ ಸಂಬಂಧವಿತ್ತು. ಈಗ ಗುರುಗಳು ಏನಾದರೂ ಬೈದಲ್ಲಿ ಕೂಡಲೆ ಪಾಲಕರಿಗೆ ಸುದ್ದಿ ಮುಟ್ಟಿ - ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಬದಲು ಅವರು ಗುರುಗಳಿಗೆ ಗುರ್ರ್sss ಅನ್ನುವವರೇ ಜಾಸ್ತಿ.
ಬೇರೆಲ್ಲೂ ಕೆಲಸ ಸಿಕ್ಕದವರೂ ಕೊನೆಗೆ ಟೀಚರ್ ಆಗಿ ಮನಸ್ಸಿಲ್ಲದ ಮನಸ್ಸಿನಿಂದ ಮಕ್ಕಳನ್ನು ಕಲಿಸುವುದಕ್ಕಿಂತ ದಂಡಿಸುವುದನ್ನೆ ಹೆಚ್ಚಾಗಿ ಮಾಡುವವರು ಇದ್ದಾರೆ. ನಮಗೆ ನಮ್ಮ ಶಿಕ್ಷಕರ ಕುರಿತು ಇದ್ದ ಗೌರವ ಈಗಿನ ಮಕ್ಕಳಲ್ಲಿ ಖಂಡಿತ ಇಲ್ಲ. ಇದಕ್ಕೆ ಗುರುಗಳೂ ಕಾರಣರು ಹೌದು.
ಇವತ್ತು ಎಂ. ಜಿ ರೋಡ್ ಕಡೆ ಹೋಗ್ತಾ ಅಜ್ಜ ಹೇಳಿದ ಈ ಕತೆ ನೆನಪಾಯ್ತು. ನಿಮಗೂ ಈ ಕತೆ ಗೊತ್ತಿರಬಹುದು. ಸುಮ್ನೆ ನಿಮ್ಮ ಮನಸ್ಸನ್ನು ನೆನಪನ್ನು ರಿಫ್ರೆಶ್ ಮಾಡಿಕೊಳ್ಳಿ. ಇನ್ನೇನಾದರೂ ಈ ಕತೆ ಬಗ್ಗೆ ಗೊತ್ತಿದ್ದಲ್ಲಿ ಪ್ಲೀಸ್ ಶೇರ್ ಮಾಡಿ. ಕತೆ Pure ಕನ್ನಡದಲ್ಲೇ ಬರೆದಿದ್ದೀನಿ.
ಅಲ್ಲಿ ರೂಮ್ ನಲ್ಲಿ ನಿಹಾ ತನ್ನ ಶಿಕ್ಷಕರಿಗೋಸ್ಕರ ಚಿಕ್ಕ ಪುಟ್ಟ ಕಾಣಿಕೆ( ಕೈಯಾರೆ) ತಯಾರಿಸುವುದರಲ್ಲಿ ನಿರತಳಾಗಿದ್ದಾಳೆ. ಅವರಿಗೋಸ್ಕರ ವಿವಿಧ ಆಟಗಳನ್ನು ರೂಪಿಸಿದ್ದಾಳೆ. ಫೋಟೊ ತೆಗೆದರೆ ಇಲ್ಲಿ ನಂತರ ಹಾಕುತ್ತೇನೆ.

ಸುಮ್ನೆ ಶೇರಿಂಗ್: ನಾವು ಬೆಂಗಳೂರಿಗೆ ಬಂದ ಹೊಸತರಲ್ಲಿ ಒಂದು ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದೆವು. ಹಿಂದಿನಿಂದ ನನಗೆ 'ಮಾಲತಿ ಶೆಣೈ' ಅಂತ ಕರೆದ ಹಾಗೆ ಅನ್ನಿಸಿ ತಿರುಗಿ ನೋಡಿದರೆ ನಾನು ಮಣಿಪಾಲದಲ್ಲಿ ಕೆಲಸಕ್ಕಿದ್ದಾಗ ನನ್ನ ಜತೆಯ ಹುಡುಗಿ. ಕೂಡಲೆ ಅವಳ ಹೆಸರು ನೆನಪಿಗೆ ಬರಲಿಲ್ಲ. ಕಾರ್ಯಕ್ರಮ ಮುಕ್ತಾಯದ ನಂತರ ಮಾತನಾಡುವ ಅಂದಳು ನಾನು ಸರಿ ಅಂದೆ. ತಟ್ಟನೆ ಅವಳ ಹೆಸರು ರಕ್ಷಿತಾ, ಮದುವೆ ಆದ ಮೇಲೆ ಅವಳು ಬೆಂಗಳೂರಿಗೆ ಬಂದಿದ್ದು ನೆನಪಾಯಿತು. ಕಾರ್ಯಕ್ರಮದ ನಂತರ ನಾನು ಅವರಿಗಾಗಿ ಕಾದೆ. ಅವಳ ಮಾವ ನವರನ್ನು ಪರಿಚಯಿಸಬೇಕಾದರೆ ಶ್ರೀಕಾಂತ 'ಅರೇ ನಮ್ಮ ಮೇಸ್ಟ್ರು ಅಂತ ಸಂಭ್ರಮ ಪಟ್ಟು ಅವರ ಕಾಲಿಗೆ ಎರಗಿದರು. ನಾನು ಹಾಗೆ ಮಾಡಿದ್ದರಿಂದಲೋ ಏನೋ ಮಾಲವಿಕಾ ನಿಹಾರಿಕಾ ಕೂದ ಅಲ್ಲೆ ಹಾಲ್ ನಲ್ಲಿ ಅವರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರು. ನೋಡುಗರಿಗೆ ಕುತೂಹಲ. ಶ್ರೀಕಾಂತ ಅವರನ್ನು 'ನಮ್ಮ ಮೇಷ್ಟ್ರು, ಅವರಿಗೆ ನೆನಪಿರಲಿಕ್ಕಿಲ್ಲ , ಇವರ ಹೆಸರು ಶ್ರೀನಿವಾಸ ಉಡುಪ ಅಂತ ನನ್ನ ಬಳಿ ಪರಿಚಯ್ರ ಮಾಡಿಕೊಟ್ಟರು. ಅವರಿಗೂ ಸಂತಸ ಅವರ ಮಗ ಕೂಡ ಶ್ರೀಕಾಂತ, ರಕ್ಷಿತಾನ ಮಾವ ಹಾಗೂ ಪತಿ ಅಂತ ತಿಳಿದು ಖುಶಿ. ಶ್ರೀಕಾಂತ ಬ್ಯಾಂಕ್ ಬಿಟ್ಟು ನಮ್ಮದೆ ಸಂಸ್ಥೆ ಎಲ್ಲ ಆರಂಭಿಸಿದ್ದು ಕೇಳಿ ತುಂಬಾ ಹೆಮ್ಮೆ ಪಟ್ಟರು ಶ್ರೀ ಉಡುಪರು. ಈ ಮೈಲ್, ಫೋನ್ ನಂಬರ್ ಎಲ್ಲ  ವಿನಿಮಯ ಮಾಡಿಕೊಂಡೆವು. ಆದರೆ ನಾವು ಮನೆ ಬದಲಾಯಿಸಿದಾಗ ಎಲ್ಲ ಕಳೆದುಹೋಗಿದೆ. ಮಿತ್ರ ರಘು ಅವರೊಂದಿಗೆ ಸಂಪರ್ಕದಿಂದಿರುವುದರಿಂದ ಅವರ ಬಗ್ಗೆ ನನಗೆ ತಿಳಿಸುತ್ತಿರುತ್ತಾರೆ.

ನನ್ನ ಹಳೇ ಪೋಸ್ಟ್ ಗಳಿಗೆ ಕೊಂಡಿ



Happy teachers day ಎಲ್ಲರಿಗೂ
:-) :-)