ಮೊನ್ನೆ ಭಾನುವಾರ ಮಡಿವಾಳ ಸಂತೆಗೆ ಹೋಗಿದ್ದೆ . ಹಲವಾರು ಸಲ ವೀಕ್ ಡೇಸ್ ನಲ್ಲೂ ಹೋಗಿದ್ದೇನೆ, ಆದರೆ ಶನಿವಾರ ಭಾನುವಾರ ಅಲ್ಲಿ ಜನರನ್ನು ನೋಡ ಬಹುದು. ಮತ್ತೆ ಭಾನುವಾರ ಆದರೆ ನಮ್ಮ ರಾಯರ ಐರಾವತ ಅರ್ಥಾತ್ ಸ್ಕೂಟರ್ ಏರಿ ಹೋದ್ರೆ ಸ್ವಲ್ಪ ಜಾಸ್ತಿ ತರಕಾರಿ ಎತ್ತ ಕೊಂಡು ಬರಬಹುದು.
ಮಡಿವಾಳದ ತರಕಾರಿ ಮಾರ್ಕೆಟ್ ತುಂಬಾ ದೊಡ್ಡದಾಗಿದೆ. ಪೂರ್ತಿ ಮಾರ್ಕೆಟ್ ನಾ ಇನ್ನೂ ನೋಡಿಲ್ಲ. ಹಾಗೆ ಮೊನ್ನೆ ಬರ್ತಾ 10 ಏಳನೀರು ಕಾಯಿಗಳನ್ನು ಹೊತ್ತುಕೊಂಡು ಬಂದ್ವಿ. ಎರಡು ದಿನ ಆದ ನಂತರ ಯಾರಿಗೂ ಎಳನೀರು ಕುಡಿಯುವ ಮನಸ್ಸು ಆಗಲಿಲ್ಲ. ನಾನಂತೂ ಜೀವ ಹೋದರೂ ಎಳನೀರು ಕುಡಿಯಲ್ಲ. ಯಾಕೆ ಅಂತ (ಕುಸುಮಬಾಲೆ ಸ್ಟೈಲ್ ನಲ್ಲಿ) ಯೋಳ್ತೀನಿ ಕೇಳಿ:
ಆಗ ನಾನು ಮಾಲವಿಕಳ ಟೈಮ್ ಪ್ರೆಗ್ನೆಂಟ್ . ಅಮ್ಮ ಅಪ್ಪ ಕೊಪ್ಪಕ್ಕೆ ಬಂದಿದ್ದರು. ಅವರು ಕೊಪ್ಪಕ್ಕೆ ಬಂದಾಗಲೇ ನನ್ನ ಅಣ್ಣನ (ದೊಡ್ಡಪ್ಪನ ಎರಡನೇ ಮಗ) ನ ಮದುವೆ ಬೆಂಗಳೂರಿನಲ್ಲಿ ಅಂತ ಆಮಂತ್ರಣ ಪತ್ರ ಬಂದಿತು. ಆಗ ಬೆಂಗಳೂರಿಗೆ ಡೈರಕ್ಟ್ ಬಸ್ ಶೃಂಗೇರಿ ಯಿಂದ ಮಾತ್ರ. ಅಪ್ಪ ಅಮ್ಮನಿಗೆ ಶೃಂಗೇರಿ ತೋರಿಸಿದ ಹಾಗಾಗುತ್ತದೆ ಎಂದು ಶ್ರೀಕಾಂತ ಶೃಂಗೇರಿಯಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿಸಿದ್ರು. ಮಧ್ಯಾಹ್ನ ಊಟದ ನಂತರ ನಾವು ಶೃಂಗೇರಿಗೆ ಹೊರಟ್ವಿ. ಕೊಪ್ಪದಿಂದ ಶೃಂಗೇರಿ ರೂಟ್ ಇದೆಯಲ್ಲ ಅಬ್ಬ ಎಷ್ಟೊಂದು ತಿರುವು ಮುರುವು? ಹೊಟ್ಟೆಯಲ್ಲಿದ ಅನ್ನ ಸಾರು ಪಲ್ಯ ಎಲ್ಲ ಮಿಕ್ಸಿ ನಲ್ಲಿ ಹಾಕಿದ ಹಾಗಾಯ್ತು. ವಾಂತಿ ಮಾಡ್ತಾ ಹೋದೆ. ಶೃಂಗೇರಿ ತಲುಪುವಷ್ಟರಲ್ಲಿ ಅರೆ ಜೀವ ಆದೆ. ಶೃಂಗೇರಿಯಲ್ಲಿ ಶಾರದೆಯ ದರ್ಶನ ಮಾಡಿ, ಅಲ್ಲಿ ನೀರಿನ ಮೀನುಗಳಿಗೆ ಮಂಡಕ್ಕಿ ಹಾಕಿ ದೇವಸ್ಥಾನ ಆವರಣದಲ್ಲಿ ಸಂಜೆ ತನಕ ಕಾಲ ತಳ್ಳಿದ್ವಿ. ಸಂಜೆ 7.30 ಗೆ ನಮ್ಮ ಬಸ್. ನನಗೆ ಊಟ ಮಾಡಬೇಕೆನ್ನಿಸಲಿಲ್ಲ. ಹಾಗಾಗಿ ಶ್ರೀಕಾಂತ್ ಎಳನೀರು ಕುಡಿಬಹುದು ಅಂದ್ರು. ಎಷ್ಟು ರುಚಿಯಾಗಿತ್ತೆಂದರೆ, ಒಂದಲ್ಲ ಎರಡು ಎಳನೀರು ಕುಡಿದೆ. ಡಿಸೆಂಬರ್ ನ ಚಳಿ ಗಾಲ. ಅಲ್ಲೆಲ್ಲ ತುಂಬಾ ಚಳಿ. ಹೊಟ್ಟೆನೂ ಖಾಲಿ. ಬಸ್ ಊರಿಂದ ಬಿಟ್ಟ ಸ್ವಲ್ಪ ಹೊತ್ತಿಗೆ ನನಗೆ ಮೂತ್ರಶಂಕೆ ಎನ್ಸಿತು. ಇರಲಿ ಹೇಗಾದರೂ ಕಂಟ್ರೋಲ್ ಮಾಡಿ ಬೆಳಿಗ್ಗೆ ಬೆಂಗಳೂರಿಗೆ ತಲುಪಿದ ಮೇಲೆ ಟಾಯ್ಲೆಟ್ ಗೆ ಹೋಗೋದು ಅಂತ ತೀರ್ಮಾನಿಸಿದೆ. ನಾನು ತೀರ್ಮಾನಿಸಿದರೆ ಆಯಿತೇ? ಪ್ರೆಗ್ನೆಂಟ್ ಬೇರೆ ಇದ್ನಾ? ಕಡೆಗೆ ತಡಿಲಿಕ್ಕ್ ಆಗದೆ ಶ್ರೀಕಾಂತ ಗೆ ಬಸ್ ನಿಲ್ಲಿಸಲಿಕ್ಕೆ ಹೇಳಿದೆ. ಬಸ್ ನವರು ಅರ್ಧ ಗಂಟೆ, ಅರ್ಧ ಗಂಟೆ ಅಂತ ಸತಾಯಿಸ್ತಾ ಇದ್ರು. ಕೊನೆಗೆ ಶ್ರೀಕಾಂತ ಬೆರಳು ಕಚ್ಚಲಿಕ್ಕೆ ಶುರು ಮಾಡಿದೆ, ಅದರ ಜತೆ ಅಳು ಕೂಡ. ಕೊನೆಗೆ ನಾಲ್ಕೈದು ಪ್ಯಾಸೆಂಜರ್ ಸ ಸೇರಿ ಡ್ರೈವರ್ ಅನ್ನು ದಬಾಯಿಸಿದರು. ಬಸ್ ಕೊನೆಗೂ ನಿಂತಿತು. ಹಲವಾರು ಜನ ಇಳಿದರು. ಅಮ್ಮ ಕೂಡ. ಅಷ್ಟು ಹೊತ್ತು ತಡಕೊಂಡಿದ್ದಕ್ಕೋ ಏನೋ ಮೂತ್ರ ಬರಲೇ ಇಲ್ಲ. ಅಷ್ಟರಲ್ಲಿ ಎರಡು ಮೂರು ಸಲ ಡ್ರೈವರ್ ಬೇಗ ಬೇಗ ಬಸ್ ಹತ್ತಿ ಅಂತ ಕಿರುಚ್ತಾ ಇದ್ದ. ಅಂತೂ ಇಂತೂ ಎಲ್ಲ ಸುಸೂತ್ರವಾಗಿ ನಡೆದು ಉಸ್ಸಪ್ಪ ಅಂತ ಬಸ್ ಹತ್ತಿದ್ದೆ. ಅಮ್ಮನೂ ಹಾಗೇ ಹೇಳಿದ್ರು ಇನ್ನು ಜನ್ಮದಲ್ಲಿ ಟ್ರಾವೆಲ್ ಮಾಡುವಾಗ ಎಳನೀರು ಕುಡಿಯಲ್ಲ ಅಂತ. ಅದೇ ಫರ್ಸ್ಟ್ ಟೈಮ್ ರಸ್ತೆ ಪಕ್ಕ ಕೂತು ವನ್ ನಂಬರ್ ಮಾಡಿದ್ದು. (ಆಮೇಲೆ ನಮ್ಮ ಟ್ರಾವೆಲ್, ಟ್ರೆಕ್ಕಿಂಗ್, ಬೈಂಕಿಂಗ್, ಹೈಕಿಂಗ್ ಸಮಯದಲ್ಲಿ ಇದೆಲ್ಲ ಸರ್ವೇ ಸಾಮಾನ್ಯವಾದ ವಿಷಯ ಆಯ್ತು ಬಿಡಿ. )ಆದರೂ ಆದಿನ ನಾ ಪಟ್ಟ ಮುಜುಗರ ಜೀವನ ಪರ್ಯಂತ ಮರೆಯುವುಲ್ಲ. ಹಾಗಾಗಿ ನನಗೆ ಎಳನೀರ್ ಗೆ ಕಟ್ಟಿ. :-)
ಸೊ ಎರಡು ದಿನ ನಂತರ ಶ್ರೀಕಾಂತ ಪುನ: ಹಳ್ಳಿಗೆ ಪ್ರಯಾಣ. ಈ ಹುಡುಗಿಯರು ಎಳನೀರು ಬೇಡ ಅಂತ. ಮೊದಲೇ ಸೆಕೆ. ಸೆಕೆಗೆ ಎಳನೀರು , ತೆಂಗಿನಕಾಯಿ ಎಲ್ಲ ಬೇಗ ಹಾಳಾಗುತ್ತಿವೆ. ಆದ್ದರಿಂದ ಎಳನೀರಿನಿಂದ ಸೂಪ್ ಮಾಡುವ ಪ್ಲ್ಯಾನ್ ಹಾಕಿದೆ.
ಎರಡು ಎಳನೀರು, ಅದರಿಂದ ಗಂಜಿ ಬೇರ್ಪಡಿಸಿ. ನಿಮಗೆ ಬೇಕಾದ ತರಕಾರಿ ಕತ್ತರಿಸಿ ಇಡಿ.. ನಾನು ಬೀನ್ಸ್, ಕ್ಯಾರೆಟ್, ಬಸಳೆ ಉಪಯೋಗಿಸಿದೆ. ಸ್ವಲ್ಪ ನೀರುಳ್ಳಿಯನ್ನು ಎಣ್ಣೆಯಲ್ಲಿ ಘಂ ಪರಿಮಳ ಬರುವ ತನಕ ಹುರಿಯಿರಿ. ಇದಕ್ಕೆ ಸಣ್ಣಕ್ಕೆ ಕತ್ತರಿಸಿದ ತರಕಾರಿಗಳನ್ನು ಬೆರೆಸಿ. ದೊಡ್ಡ ಉರಿಯಲ್ಲಿ ಎರಡು ನಿಮಿಷ ಕೈಯಾಡಿಸಿ. ಉಪ್ಪು ಬೆರೆಸಿ. ಎಳನೀರು ಹಾಕಿ ಕುದಿ ಯಲು ಬಿಡಿ. ಇದಕ್ಕೆ ಸ್ವಲ್ಪ ಕೋರ್ನ್ ಫ್ಲೋರ್ ಬೆರೆಸಿ . ಸೂಪ್ ದಪ್ಪ ಆಗಲಿಕ್ಕೆ ಬಂದಾಗ ಬೆಂಕಿಯಿಂದ ಕೆಳಗಿಳಿಸಿ. ಕರಿಮೆಣಸಿನ ಪುಡಿ ಮತ್ತು ದಪ್ಪ ಗಂಜಿ ಇದ್ದಲ್ಲಿ ಅದನ್ನೂ ಸಣ್ಣಕ್ಕೆ ಕತ್ತರಿಸಿ ಸೂಪ್ ನಲ್ಲಿ ಹಾಕಬಹುದು. ಎಳನೀರಿನ ಚಿಪ್ಪಿನಲ್ಲಿ ಸರ್ವ ಮಾಡ ಬಹುದು.