June 3, 2018

Stuffed sardines - ಕಥೆ ಬರೆಯುವ ಹೊಸ ರೀತಿ

A new concept in story writing. Cooked up story ☺☺
ಸಮುದ್ಯತಾ ಟೀಪಾಯ್ ಮೇಲೆ ಕಾಲಿಟ್ಟು ಕ್ರೈಮ್  ಚಾನೆಲ್ ಒಂದನ್ನು ನೋಡುತ್ತಾ ಕುಳಿತಿದ್ದಳು. ಅದರ ಜತೆ ಹಲಸಿನ ಕಾಯಿಯ ಕುರುಕಲು ಚಿಪ್ಸ್ ಹಾಗು ಮೌಂಟನ್ ಡ್ಯೂ ಸೋಡಾ ಕುಡಿಯಲು. ಫೋನ್ ರಿಂಗಣಿಸಿತು. ಸೆಕ್ಯುರಿಟಿಯವರಿಂದ ಫೋನ್ ಬಂದು ಅದರಲ್ಲಿ ಕುರಿಯರ್ ನವರು ಬಂದಿದ್ದಾರೆ, ಬಿಡುವುದು /ನಿರಾಕರಿಸುವುದು (allow/deny) ಎಂಬ option ಬಂದು, ಸಮುದ್ಯತಾ allow ಅನ್ನುವ ಗುಂಡಿಯನ್ನು ಒತ್ತಿದಳು. ಏನು ಮಾತಾಡದೆ ಹೀಗೆ ಗುಂಡಿ ಒತ್ತುವುದರ ಮೂಲಕ ಸಂಪರ್ಕದ ಬಗ್ಗೆ ಅವಳಿಗೆ ಖುಷಿ. 
ಈ ಮನೆಗೆ ಬಂದು ೫ ವರ್ಷಗಳು ಕಳೆದಿವೆ. ಸಿಕ್ಕಾಪಟ್ಟೆ ದೊಡ್ಡ ಮನೆ. ಊರಿಂದ ಸ್ವಲ್ಪ ದೂರವಾದರೂ ಎಲ್ಲ ಸೌಕರ್ಯಗಳಿದ್ದವು. ಅಪಾರ್ಟ್ಮೆಂಟ್ ಕೆಳಗಡೇನೇ ಮಾಲ್, ಜಿಮ್ ಸ್ಕೂಲ್, ಆಸ್ಪತ್ರೆ ಎಲ್ಲ ಇತ್ತು. ಆಫಿಸ್ ಪೇಟೆಗೆ ಹೋಗಲೇ ಬೇಕಿತ್ತಂದರೆ ಕಾರ್ ಇತ್ತು. ಇವರ ಮನೆ ಏನೋ interactive ಮನೆಯಂತೆ. ಹಲೋ ,ಗುಡ್ ಮಾರ್ನಿಂಗ್ ಅಂತೆಲ್ಲಾ ಮನೆ ಉಸುರುತ್ತಾನೆ ಇರುತ್ತೆ. ಒಂದು ಸಲ ಅಡಿಗೆ ಮನೆಯ ಗ್ಯಾಸ್ ಲೀಕ್ ಆದಾಗ 'mrs  ಸಮುಡ್ಯಾತಾ ದೇರ್ ಸೀಮ್ಸ್ ಟು ಬಿ ಗ್ಯಾಸ್ ಲೀಕೇಜ್ , ಕೈಂಡ್ಲಿ ಓಪನ್ ಆಲ್ ಡೋರ್ಸ್ ಅಂಡ್ ವಿಂಡೋಸ್... ಅಂತಾ ಆ ಹೆಣ್ಣು ದನಿ  ಉಲಿಯುತ್ತಾ  ಇತ್ತಲ್ಲದೆ ಸೆಕ್ಯುರಿಟಿಯವರು ಕೂಡಲೇ ಬಂದು ಚೆಕ್ ಮಾಡಿ ಹೋದರು. ಟಾಯ್ಲೆಟ್ ಗು ಕೂಡ sensors  ಅಂತ , ಬಳಸಿದ ಕೂಡಲೇ ತನ್ನ ತಾನೇ ಫ್ಲಶ್ ಆಗುತಿತ್ತು. 




ಕುರಿಯರ ನವ ಮೇಲೆ ಬಂದು ಕರೆಗಂಟೆ ಒತ್ತಿದಾಗ ನಿಧಾನಕ್ಕೆ ತನ್ನ ದಪ್ಪಮಯ್ಯನ್ನು ಸೋಫಾದಿಂದ ಎತ್ತಿಕೊಂಡು  ಹೋಗಿ ಬಾಗಿಲು ತೆಗೆದಳು. ಸಾಕಷ್ಟು ಭಾರವಾದ ಕುರಿಯರ್. ಅದನ್ನು ಇಸಿದುಕೊಂಡು , ಸೈನ್ ಹಾಕಿ ಅವನನ್ನು ಕಳುಹಿಸಿ ಬಾಗಿಲು ಹಾಕಿದಳು. ಇವತ್ತು ಆಶ್ಚರ್ಯ ಅಂದರೆ ಸಮುದ್ಯತಾಳ ಹೆಸರಿಗೆ ಕುರಿಯರ್ ಬಂದಿದ್ದು. ಸಾಧಾರಣವಾಗಿ ಅವಳ ಮಗ  ಸೊಸೆ ಕೆಲಸಕ್ಕೆ ಹೋಗುವುದರಿಂದ ಅಮೆಜಾನ್ ನಲ್ಲಿ ಏನಾದರೂ  ಖರೀದಿಸಿ , ಇಲ್ಲಿಯ ಮನೆಯ ವಿಳಾಸಕ್ಕೆ ಕಳುಹಿಸುತ್ತಿದ್ದಳು. ವಾರ್ಯಾ೦ತದಲ್ಲಿ ಮಗ ಸೊಸೆ ಮೊಮ್ಮಗ ಇಲ್ಲಿಗೆ ಬರುತ್ತಿದ್ದರು. ಶುಕ್ರವಾರ ಸಂಜೆ ಬಂದರೆ ಸೋಮವಾರ ಬೆಳಿಗ್ಗೆ ಇಲ್ಲಿಂದಲೇ ಆಫಿಸ್ ಗೆ ಹೋಗುವ ಪರಿಪಾಠ.  ಅವರಿಗೆ ಬಂದಿದ ಕುರಿಯರ್ ಅನ್ನು ಅವಳು ಯಾವತ್ತೂ ತೆರೆದಿಲ್ಲ. ಆದರೆ ಇವತ್ತು ಅವಳ ಹೆಸರಿಗೆ ಬಂದಿದ್ದರಿಂದ ಕುತೂಹಲ ತಾಳಲಾರದೆ ಪ್ಯಾಕ್ ಅನ್ನು ತೆರೆದಳು. ಅದರಲ್ಲಿ ಹೊಚ್ಚ ಹೊಸ ಮಾದರಿಯ ಮಿಕ್ಸಿ. ಅದರೊಟ್ಟಿಗೆ  ಅವಳಿಗೆ ಬಂದ ಬಹುಮಾನದ ಬಗ್ಗೆ ಅಭಿನಂದನಾ ಪತ್ರ .
*********************************************************
ಅರೆ ಯಾವಾಗಲೋ ಕಳುಹಿಸಿದ ಅಡುಗೆಗೆ ಇಷ್ಟು ಲೇಟಾಗಿಯಾದರು ಬಹುಮಾನ ಬಂದ ಬಗೆ ಖುಷಿ. ಹೊಸ ಮಾದರಿಯ ಮಿಕ್ಸಿಯಲ್ಲಿ ಆರೆಂಟು ಜಾರ್ ಗಳು. ಚಟ್ನಿ, ಹಿಟ್ಟು, ಪುಡಿ, ಸ್ಮೂದಿ , ಜ್ಯುಸ್ ವಗೈರೆ ಮಾಡಲು ಚೆಂದದ ಜಾರ್ ಗಳು .. ಹೊಸ ಮಿಕ್ಸಿ ಇಟ್ಟುಕೊಂಡು  ಹಳೆಯದನ್ನು ಅಡಿಗೆಯವಳಿಗೆ ಕೊಡುವುದೆಂದು ನಿರ್ಧರಿಸಿದಳು. 
ಸ್ಪರ್ಧೆ ಗೆ ಕಳುಹಿಸಿದ ಮೀನಿನ ಅಡುಗೆಯ ಬಗ್ಗೆ ಮನಸ್ಸು ಮೆಲುಕು ಹಾಕಿತು. 
ಸಮುದ್ಯತಾ ತುಂಬಾ ಬಡ ಕುಟುಂಬದಲ್ಲಿ ಹುಟ್ಟಿದವಳು. ಐದು ಜನ ಮಕ್ಕಳಲ್ಲಿ ಕೊನೇಯವಳು, ಅಮ್ಮನಿಗೆ ಮುಟ್ಟು  ನಿಲ್ಲುವ ಪ್ರಾಯದಲ್ಲಿ ಹುಟ್ಟಿದವಳು. ಆವಳಿಗೆ ಬುದ್ದಿ ಬರುವಷ್ಟರಲ್ಲಿ ದೊಡ್ಡ ಅಕ್ಕನಿಗೆ ಮದುವೆಯಾಗಿ ಒಂದು ಮಗು, ಹಾಗು ಅಣ್ಣನಿಗೂ ಮದುವೆಯಾಗಿ ಮಕ್ಕಳು ಹುಟ್ಟಿದ್ದವು. ಕೊನೆಯವಳು ಅಂತ ಪ್ರೀತಿ ಅಂತ ಯಾರೂ ಮಾಡುವವರಿರಲಿಲ್ಲ. ಅಷ್ಟು ಪುರುಸೊತ್ತೂ ಇರಲಿಲ್ಲ. ಮನೆ ತುಂಬಾ ಜನ ಅಪ್ಪ ಅಮ್ಮ , ಒಬ್ಬ ಅಣ್ಣನ ಕುಟುಂಬ, ಉಳಿದ ಮೂರೂ ಮಕ್ಕಳು ಮಾತ್ರವಲ್ಲದೆ ಅಜ್ಜ ಅಜ್ಜಿ ಕೂಡಾ ಮನೆಯಲ್ಲಿ. ಒಪ್ಪೊತ್ತಿನ ಊಟಕ್ಕೆ ದುಸ್ವಾರ. ಅಜ್ಜ ಹೆಸರಾಂತ   ಆಯುರ್ವೇದ ಪಂಡಿತ .ಈಗ ಮಲಗಿದ ಕಡೆ . ಅಜ್ಜಿ ಅವರ ಸೇವೆಯಲ್ಲಿ ನಿರತ.  ಅಜ್ಜ ನೀಡಿದ ಔಷಧಿಯಿಂದ ಗುಣ ಹೊಂದಿದ ಮಾರ್ವಾಡಿಯೊಬ್ಬನು ಅಜ್ಜನ ಹೆಸರಿಗೆ   ಎರಡೆಕರೆ ಜಮೀನು ಬರೆದುಕೊಟ್ಟಿದ್ದ. ಅದರಲ್ಲಿ ಮಣ್ಣಿನ ಗೋಡೆಯ ಪುಟ್ಟ ಮನೆ ಅದಕ್ಕೆ ಹುಲ್ಲಿನ ಮಾಡು. ಮನೆ ಮಂದಿ ಜಾಸ್ತಿಯಾದಾಗಲೆಲ್ಲ ಕಟ್ಟಿದ ಪುಟ್ಟ ಪುಟ್ಟ ಕೋಣೆ . ಎರಡು ಫಲವತ್ತಾದ ತೆಂಗಿನ ಮರ ಒಂದು ಹಾಲು ನೀಡುವ ಹಸು. ತೆಂಗಿನಕಾಯಿಯ ಮಾರಾಟದಿಂದ ಸ್ವಲ್ಪ ಹಣ ಕಾಸು ಒಟ್ಟಾಗುತ್ತಿತ್ತು. ಆದರೂ ಅಷ್ಟು ಜನರ ಹಸಿವನ್ನು ನೀಗಿಸಲು ಅದು ಸಾಕಾಗುತ್ತಿರಲಿಲ್ಲ. ಅಪ್ಪನಿಗೆ ಒಂದು ಪೆಟ್ಟಿಗೆ ಅಂಗಡಿ. ಮಿಠಾಯಿ, ಬೀಡಿ , ಪೆಪ್ಪರಮಿಂಟು ಇವಷ್ಟೇ ಸರಕು. ಹತ್ತಿರದಲ್ಲೇ ಶಾಲೆ ಹಾಗು ಸಿನಿಮಾ ಟಾಕೀಸು. ಬೆಳಿಗ್ಗೆ ಒಂದು ಹೊತ್ತು ಅಂಗಡಿಯಲ್ಲಿ ಕುಳಿತು ಬಂದು, ಮಧ್ಯಾಹ್ನ ಊಟ ಸಣ್ಣ ನಿದ್ದೆ, ಕಾಪಿ ಕುಡಿದಾದ ಮೇಲೆ ಪುನ: ಸಂಜೆ ಅಂಗಡಿಯ ಬಾಗಿಲು ತೆರೆದರೆ ಸಿನಿಮಾಡಾ ಕೊನೆ ಷೋ ಮುಗಿಯುವ  ತನಕ ಅಂಗಡಿಯ ಬಾಗಿಲು ತೆರೆದಿರುತ್ತಿತ್ತು. ಅದರಲ್ಲೂ ದುಡ್ಡು ಆಮೇಲೆ ಕೊಡುತ್ತೇನೆ ಎಂದು ಮೋಸ ಮಾಡುವ ಜನ. ಅಪ್ಪ ತುಂಬಾ ಸಾಧು ಸ್ವಭಾವ, ಅಮ್ಮ ಅಷ್ಟೇ ಜೋರಿನವಳು. ಬಾಯಲ್ಲಿ ಯಾವಾಗಲೂ ಬೈಗಳು ಮುಂದು. ಮದುವೆಯಾದ ಅಣ್ಣ ಅಷ್ಟೊಂದು ಚುರುಕಿಲ್ಲ . ಅವನಿಗೆ ಹಣ್ಣಿನ ವ್ಯಾಪಾರಿಯ ಬಳಿ ಮಾಲನ್ನು ಅತ್ತ ಇತ್ತ ಹೊರುವ ಕೆಲಸ. ಉಳಿದ ಅಣ್ಣ೦ದಿರಿಗೂ ವಿದ್ಯಾಭ್ಯಾಸ ಅಷ್ಟೊಂದು ಒಲಿದಿಲ್ಲ. ಅಲ್ಲಿ ಇಲ್ಲಿ ಕೂಲಿ ಆಳುಗಳಾಗಿ ಕೆಲಸ. ಸಮುದ್ಯತಾಳಿಗೆ  ಪಕ್ಕದ ಮನೆಯವರ ಒತ್ತಾಯದಿಂದ ಬಳಿಯಲ್ಲೇ ಇರುವ ಹೆಣ್ಣುಮಕ್ಕಳ ಶಾಲೆಗೇ ದಾಖಲಿಸಿದ್ದರು. 
ಬೆಳಿಗ್ಗಿನ ತಿಂಡಿಗೆ ಯಾವಾಗಲೂ ಅವಲಕ್ಕಿ ಮತ್ತು ಉಪ್ಪು ಹಾಕಿ ಬೇಯಿಸಿದ ಸಿಹಿಗೆಣಸು. ಅದರಲ್ಲೂ ಮೊದಲು ತಿನ್ನುವ ಪ್ರಾಶಸ್ತ್ಯ ಗಂಡಸರಿಗೆ. ಉಳಿದರೆ ಹೆಣ್ಣು ಮಕ್ಕಳಿಗೆ. ಸಮುದ್ಯತಾಳ  ಮುಂಚೆ ಹುಟ್ಟಿದ ವಿಠಲ ನಿಗೆ  ಯಾವಾಗಲೂ ಸಿಕು. ಮುಗಿನಿಂದ ಯಾವತ್ತೂ ಸುರಿಯುವ ಸಿಂಬಳ. ಅವನು ಬಿಟ್ಟ ಅವಲಕ್ಕಿ ಇವಳ ಪಾಲಿಗೆ. ವಾಕರಿಸಿಕೊಂಡು ಉಪಾಯವಿಲ್ಲದೆ ತಿನ್ನುತ್ತಿದ್ದಳು. ಕ್ರಮೇಣ ಅವಳಿಗೆ ಗೆಣಸು ತಿಂದರೆ ಹೊಟ್ಟೆ ನೋವು ಶುರು ಆಗುತ್ತಿತ್ತು.  ಉಳಿದ ಹೆಣ್ಣು ಮಕ್ಕಳಿಗ್ಗೆ ಬೆಳಿಗ್ಗೆ ಒಂದು ಬೆಲ್ಲದ ಕಾಪಿ ಕುಡಿದರೆ ಮಧ್ಯಾಹ್ನ ಗಂಜಿ ಊಟವೇ ಸೈ . ಅಮ್ಮ ಮೀನಿನ ಮಾರುಕಟ್ಟೆಗೆ ಹೋಗಿ ಅಲ್ಲಿ ಎಸೆದ ಪುಟ್ಟ ಭೂತಾಯಿ ಮೀನುಗಳನ್ನು ಆರಿಸಿ  ತರುತ್ತಿದ್ದಳು. ಆಗ ಪುಟ್ಟ ಭೂತಾಯಿ ಮಿನುಗಳನ್ನು  ಗೊಬ್ಬರಕ್ಕೆ ಉಪಯೋಗಿಸುತ್ತಿದ್ದರು. ಬೆಲೆ ಕೂಡ ಕಡಿಮೆಯಿತ್ತು. ಕಾಸು ಇಸಕೊಳ್ಳದೆ ಮೀನು ಮಾರುವವರು ಅಮ್ಮನಿಗೆ ಮೀನು ಕೊಡುವವರಿದ್ದರು. ಅಮ್ಮ ನ ಕೈಯಲ್ಲಿ ಏನೇ ಅಡುಗೆ ಮಾಡಿದರು ರುಚಿಯೇ ರುಚಿ. ತೆಂಗಿನಕಾಯಿ ಹೇಗೂ ಮನೆಯಲ್ಲಿ ಇರುತ್ತಿತ್ತು. . ಮಧ್ಯಾನಕ್ಕೆ  ಬಗೆ ಬಗೆಯ ಮೀನು ಸಾರು, ಒಣ ಮೀನಿನ  ಚಟ್ನಿ, ಮೀನಿನ ಫ್ರೈ ಮುಂತಾದವು ಇತ್ತು. ರಾತ್ರಿ ಪುನ: ಗಂಜಿ ತುಪ್ಪ ಉಪ್ಪಿನಕಾಯಿ. ಹಸುವಿನ ಹಾಲು ಮಾರುತ್ತಿರಲಿಲ್ಲ. ಮನೆಯವರ ಬೆಲ್ಲದ  ಕಾಪಿ, ನೀರು ಮಜ್ಜಿಗೆಗೆ ಅದು  ಸಾಕಾಗುತ್ತಿತ್ತು. 
ಸಮುದ್ಯತಾ ಚಿಕ್ಕವಳೆಂದು ಅವಳಿಗೆ ಯಾವ ಕೆಲಸವನ್ನು ಕೊಡುತ್ತಿರಲಿಲ್ಲ. ಆದರೆ ಅಡುಗೆ ಮನೆಯಲ್ಲಿ ಕುಳಿತು ಅಮ್ಮ ಮಾಡುವ ಅಡಿಗೆಗಳನ್ನು ನೋಡಿಯೇ ಕಲಿಯುತ್ತಿದ್ದಳು. ಅವರ ಮನೆಯ ಬಳಿ  ಟೀಚರ್ ಕುಟುಂಬ ವಾಸಿಸಲು ಬಂದಾಗ , ಸಮುದ್ಯತಾಕದ್ದು ಮುಚ್ಚಿ  ಅವರ ಮನೆಗೆ ಹೋಗಿ ಬರಲು ಶುರು ಮಾಡಿದಳು. ಟೀಚರ್ ಅಂದರೆ ಬಳಿಯ ಕಾಲೇಜಿಗೆ ಹೋಲಿಗೆ ಕಲಿಸುವ ಟೀಚರ್. . ಸಮುದ್ಯತಾಳಿಗೂ ಹೋಲಿಗೆ ಹಾಕುವುದನ್ನು ,ಕಲಿಸಿದಲ್ಲದೆ  ಅವಳಿಗೆ ಅವರ ಮನೆಯ ತಿಂಡಿಗಳನ್ನು ನೀಡುತ್ತಿದ್ದರು. ಆ ತಿಂಡಿಯ ಆಸೆಗೆ ಸಮುದ್ಯತಾ ಅಲ್ಲಿ ಹೆಚ್ಚ್ಚು ಸಮಯ ಕಳೆಯುತ್ತಿದ್ದಳು ಮಾತ್ರವಲ್ಲದೆ ಟೀಚರ್ ಗೆ ಬಟ್ಟೆಯ ಮೇಲೆ ಹೆಮ್ಮಿಂಗ್  , ಕುಸುರಿ ಕೆಲಸ ಎಲ್ಲ ಮಾಡಿ ಕೊಡುತ್ತಿದ್ದಳು. 
ಯಾರದೋ ಮನೆಗೆ ಮದುವೆಗೆಂದು ಹೋದಾಗ , ಬಿಳಿ ಮೈ ಬಣ್ಣದ, ಉದ್ದ ಜಡೆಯ ಚೆಂದದ  ೧೬ ವಯೋಮಾನದ ಸಮುದ್ಯತಾಳಿಗೆ ಚಂದನಕುಮಾರ ಎಂಬ ಟ್ರಾನ್ಸ್ಪೋರ್ಟ್ ಕಂಪನಿ ನಡೆಸುವ   ವರನೊಬ್ಬ ಪಸಂದು ಮಾಡಿ, ಅವರೇ ಖರ್ಚು ವೆಚ್ಚವನ್ನು ಸರಿದೂಗಿಸಿ ಮದುವೆಯೂ ಆಗಿ ಹೋಯಿತು. ಮಂಗಳೂರಿನ ಬಳಿಯ ಪುಟ್ಟ ಊರಿನಿಂದ ಸೀದಾ ಬೆಂಗಳೂರಿಗೆ. ಮನೆಯಲ್ಲಿ  ಅತ್ತೆ ಮಾವ ನಾದಿನಿ. ಕೈ ತುಂಬಾ ಓಡಾಡುವ ದುಡ್ಡು. ಮನೆಕೆಲಸಗಳಿಗೆ ಆಳು ಕಾಳು . ಹೊಟ್ಟೆ ತುಂಬಾ ತಿಂದು, ಒಳ್ಳೆಯ ಬಟ್ಟೆ ತೊಟ್ಟು, ಕಣ್ಣು ತುಂಬಾ ನಿದ್ರೆ ಮಾಡುವ ಕೆಲಸ ಸಮುದ್ಯತಾಳದ್ದು. ಮನೆಯ ಜವಾಬ್ದಾರಿ, ಇವಳ ಬಾಣಂತನ ಎಲ್ಲ ಅತ್ತೆಯ ದ್ದು. ಇವಳಿಗೆ ತವರಿನ ನೆನಪು ಬಾರದಷ್ಟು. ಮದುವೆಯಾದ ಮೇಲೆ ಒಂದೆರಡು ಬಾರಿ ತವರಿಗೆ  ಹೋಗಿ ಬಂದಿದ್ದಳಷ್ಟೆ. ಅವರೇನು ಉಪಚಾರ ಮಾಡಿ ನಿಲ್ಲಿಸಿಕೊಳ್ಳಲಿಲ್ಲ . ಹಾಗಾಗಿ ಅಲ್ಲಿನ ಸಂಪರ್ಕ ಕ್ರಮೇಣ  ತಪ್ಪಿಯೇ ಹೋಯಿತು. ಯಾರಾದರೂ ಸಂಬಂಧಿಕರು ಸಿಕ್ಕಿದರೆ ಅವರ ಬಗ್ಗೆ ತಿಳಿಯುತ್ತಿತ್ತು.
ಸಮುದ್ಯತಾಳ  ದು ವಿಚಿತ್ರ ಸ್ವಭಾವ. ಯಾವುದನ್ನೂ ಯಾರನ್ನೂ  ತೀರಾ ಹಚ್ಚಿಕೊಂಡವಳೇ ಅಲ್ಲ. ಅಪಾರ್ಟ್ಮೆಂಟ್ ನ ಇತರ ಜನಗಳೊಂದಿಗೆ ಮುಗುಳ್ನಗೆ ವಿನಿಮಿಯ. ಅವರೇನಾದರೂ ಕೇಳಿದರೆ ಉತ್ತರ. ಅವಳಾಗೆ ಯಾರನ್ನೂ ಈವರೆಗೂ ಮಾತಾಡಿಸಿಲ್ಲ. ಮನೆಯ ಆಳುಕಾಳುಗಳೊಂದಿಗೆ ಎಷ್ಟು ಬೇಕು ಅಷ್ಟೇ ಮಾತು. ತನ್ನದೇ ಪ್ರಪಂಚದಲ್ಲಿ ಇರುತ್ತಿದ್ದಳು. ಮಗ ಚಿಕ್ಕವನಿದ್ದಾಗ ಮನೆಯಲ್ಲಿ ಅತ್ತೆ ಮಾವ ನಾದಿನಿ ಇವರ ಲಾಲನೆ ಪಾಲನೆಯಲ್ಲಿ ಬೆಳೆದ. ನಾದಿನಿಗೆ ಮದುವೆಯಾಗಿ ಆಫ್ರಿಕಾಗೆ ಹೋದಳು. ಅಪರೂಪಕ್ಕೆ ಭಾರತಕ್ಕೆ ಬಂದರೂ ಹೋಟಲ್ ನಲ್ಲಿ ವಾಸ್ತವ್ಯ. ಇವರ ಮನೆಗೆ ಭೇಟಿ ನೀಡಿ , ಉಡುಗೊರೆಗಳನ್ನು ಕೊಟ್ಟು, ಆಫ್ರಿಕಾಗೆ ಬನ್ನಿ ಎಂದು ಹೇಳಿ ಹೋಗುತ್ತಿದ್ದಳು. ಈಗ ವಯಸ್ಸಾದ ಮೇಲೆ ಅದೂ ನಿಂತಿದೆ. ಅಪರೂಪಕ್ಕೆ ಫೋನ್ ನಲ್ಲಿ ಮಾತು. ಅವಳಿಗೆ ಮಕ್ಕಳಿಲ್ಲ, ಮನೆಯೆಲ್ಲ ನಾಯಿ ಬೆಕ್ಕುಗಳಿಂದ ತುಂಬಿದೆ. ಅತ್ತೆ  ಮಾವ ಈಗಿಲ್ಲ. ಮಗ ಓದಿನಲ್ಲಿ ಜಾಣ. ಯಾವುದೇ ತಂಟೆ ತಕರಾರಿಲ್ಲದೆ, ಆಳು ಕಾಳು ಗಳೊಂದಿಗೆ ಬೆಳೆದವನು.  . ಅಪ್ಪನ ಬಿಸಿನೆಸ್ ನಲ್ಲಿ ಅವನಿಗೆ ಆಸಕ್ತಿಯಿಲ್ಲ. ಸಾಫ್ಟವೆರ್ ಕಂಪನಿಯಲ್ಲಿ ಕೆಲಸ. ಅವನ ಆಫಿಸ್ ನಲ್ಲಿ ಪರಿಚಯವಾದ ರುತು ವಿನೊಂದಿಗೆ ಮದುವೆಯಾಗಿದೆ. 
ಸಮುದ್ಯತಾಳ ಗಂಡನಿಗೆ ಕೆಲಸ ಮಾತ್ರ  ಗೊತ್ತು. ಯಾವಾಗ ನೋಡಿದರೂ ಬಿಸಿನೆಸ್ ದೇ ಧ್ಯಾನ , ಫೋನು ವ್ಯವಹಾರ. ಅದು ಬಿಟ್ಟರೆ ವರ್ಷಕ್ಕೆ ಒಂದು ಬಾರಿ ಕುಟುಂಬ ಸಮೇತ ವೈಶ್ನೋದೇವಿ ಪ್ರಯಾಣ. ಮೊದಲೆಲ್ಲ ಆಫಿಸ್ ನ ಪಾರ್ಟಿ ಅಂತ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದ. ಕ್ರಮೇಣ ಸಮುದ್ಯತಾಳಿಗೆ ಬೊಜ್ಜು ಬಂದಂತೆ , ಅವಳೇ ಹೋಗಲು  ನಿರಾಕರಿಸುತ್ತಿದ್ದಳು. ಕೆಲವು commercial complex ಗಳನ್ನೂ ಖರೀದಿಸಿ ಅವನ್ನೆಲ್ಲಾ ಸಮುದ್ಯತಾಳ ಹೆಸರಿಗೆ ಮಾಡಿದ್ದಾನೆ. ಎಷ್ಟು ದುಡ್ಡು ಇದೆ, ಅದನ್ನು ಏನು ಮಾಡಬೇಕು ಇದ್ಯಾವುದರ ಬಗ್ಗೆಯೂ ಸಮುದ್ಯತಾ ತಲೆ ಕೆಡಿಸಿಕೊಂಡವಳೇ ಅಲ್ಲ. ಅದು ಬೇಕು ಇದು ಬೇಕು ಅಂತ ಕೂಡ ಕೇಳಿದವಳೇ ಅಲ್ಲ. ಬಟ್ಟೆ ಬಂಗಾರ ಯಾವುದರಲ್ಲೂ ವಿಶೇಷ ಆಸಕ್ತಿ ಕೂಡ ಇಲ್ಲ. ಅಡುಗೆ ಮಾಡಲು ಬರುತ್ತದೆಯಾದರೂ ಮನೆಯಲ್ಲಿ ಅಡುಗೆಯವಳು ಇದ್ದುದರಿಂದ ಆ ಕೆಲಸ ಕೂಡ ಇಲ್ಲ. ದಿನ ಇಡೀ ಟಿವಿ ನೋಡುವುದರಲ್ಲಿ ಸಮಯ ಕಳೆಯುತ್ತಾಳೆ 
***************************************************************************

ಹೀಗೆ ಒಂದು ದಿನ,  ಟಿ ವಿ ಯಲ್ಲಿ  ತಲೆಮಾರಿನಿಂದ ಬಳುವಳಿಯಾಗಿ  ಬಂದ , ಸಿಂಪಲ್ , ಸ್ವಾಸ್ಥ್ಯಕರ, ರುಚಿಕರ ಬೇಗ ತಯಾರಾಗುವ  ಅಡುಗೆಯ ಸ್ಪರ್ಧೆಯ ಬಗ್ಗೆ ಕೇಳಿದಾಗ, ಅವಳಿಗೆ ಅವಳ ಅಜ್ಜಿ, ಅಮ್ಮ ಮಾಡುವ ಭೂತಾಯಿ ಮೀನಿನ ಖಾದ್ಯ ನೆನಪಿಗೆ ಬಂದು ಒಂದು ಕ್ಷಣ ಬಾಯಲ್ಲಿ ನೀರೂರಿತು . ಒಂದು ಶುಕ್ರವಾರ ಮಗ ಸೊಸೆ ಬರುವಷ್ಟರಲ್ಲಿ ಅವಳು ಕೆಲಸದಾಕೆಯನ್ನು ಮೀನಿನ ಅಂಗಡಿಗೆ ಕಳುಹಿಸಿ ಮೀನಿನ ಅಡುಗೆಯನ್ನು ಮಾಡಿಟ್ಟಳು. ಗಂಡ ಮಗ ಸೊಸೆ 'ವಾವ್ ಭೇಶ ' ಅಂದಮೇಲೆ ಅವಳು ಸ್ಪರ್ಧೆಯ ಬಗ್ಗೆ ಹೇಳಿದಳು. ಸೊಸೆಯಿಂದ ತುಂಬಾ ಸಹಕಾರ ಸಿಕ್ಕಿತು,  ರೆಸಿಪಿ ಬರೆದು, ಅದನ್ನು ನೀಟಾಗಿ ಟೈಪ್ ಮಾಡಿ ಅವರು ಕೊಟ್ಟ ಈ ಮೇಲ್ ವಿಳಾಸಕ್ಕೆ ಆಕೆಯೇ ಕಳುಹಿಸಿದಳು. ಅದೇ  ಅಡುಗೆಗೆ ಬಹುಮಾನ ಬಂದಿದ್ದು ಅವಳಿಗೆ  ಖುಷಿ ಅನಿಸಿ ಮನೆ ಮಂದಿಗೆ ಹೇಳುವ ತರಾತುರಿಯಲ್ಲಿ ಇದ್ದಳು. 
  










ಸ್ಟಫ್ಡ್ ಸಾರ್ಡಿನ್ಸ್ (stuffed sardines)
ಬೇಕಾಗುವ ಸಾಮಗ್ರಿ : ೪-೫ ಸಣ್ಣ ಭೂತಾಯಿ ಮೀನು , ಕ್ಲಿನ್ ಮಾಡಿ ಉಪ್ಪು ಹಚ್ಚಿಡಿ
ಸಣ್ಣಕ್ಕೆ ಕತ್ತರಿಸಿದ -ನೀರುಳ್ಳಿ, ಎರಡು ಇಂಚು ಶುಂಠಿ , ಎರಡು  ಟೇಬಲ್ ಚಮಚ ಕೆಂಪು ಮೆಣಸಿನ ಪುಡಿ, ಸ್ವಲ್ಪ ಹುಣಸೆ ರಸ, ಉಪ್ಪು , ಎಣ್ಣೆ , ಕೊತ್ತಂಬರಿ ಸೊಪ್ಪು
 ಮೇಲಿನ ಎಲ್ಲ ಸಾಮಾಗ್ರಿಯನ್ನು ಚೆನ್ನಾಗಿ ಮಿಶ್ರ ಮಾಡಿ, ಭೂತಾಯಿಯಲ್ಲಿ ತುಂಬಿ.
ಹತ್ತು  ನಿಮಿಷ ಇಡಿ
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದರಲ್ಲಿ ತುಂಬಿದ ಭೂತಾಯಿಗಳನ್ನು ನೀಟಾಗಿ ಜೋಡಿಸಿ. ಮುಚ್ಚಿ ಬೇಯಿಸಿ. ಎರಡು ನಿಮಿಷದ ನಂತರ ಮೀನುಗಳನ್ನು ಮಗುಚಿ ಮಸಾಲೆ ಏನಾದರೂ ಉಳಿದಲ್ಲಿ ಇದರ ಮೇಲೆ ಹಾಕಿ . ಪುನ: ಒಂದೈದು ನಿಮಿಷ ಮುಚ್ಚಿ ಬೇಯಿಸಿ
ಘಮ್ ಎನ್ನುವ ಸ್ಟಫ್ಡ್ ಸಾರ್ಡಿನ್ಸ್ ರೆಡಿ. ಕೆಳಗಿಳಿಸಿದ  ಮೇಲೆ, ಸರ್ವ್ ಮಾಡುವ ಮುನ್ನ ಕೊತ್ತಂಬರಿ ಸೊಪ್ಪು ಉದುರಿಸಿ ,
ಡ್ರಿಂಕ್ಸ್ ಜತೆ ಸ್ಟಾರ್ಟರ್ ಆಗಿ ಅಥವಾ ಬಿಸಿ ಅನ್ನದೊಂದಿಗೆ ಕಲಸಿ ತಿನ್ನುವುದು . :-) :-)
ಆವಾಗಲೆಲ್ಲ ಪ್ರೀ ಯಾಗಿ ಸಿಗುವ ಭೂತಾಯಿಗೆ ಈಗ ಎಲ್ಲಿಲ್ಲದ ಬೇಡಿಕೆ. ಮಿದುಳಿಗೆ ಒಳ್ಳೆಯದೆಂದು, ಒಮೇಗಾ -3 fatty acid ಆರೋಗ್ಯಕ್ಕೆ ಒಳ್ಳೆಯದೆಂದು ದುಬಾರಿ ಕೂಡ.
:-)


No comments: