October 11, 2009

ಸಂಚಿಯಿಂದ ಇನ್ನೊಂದು ನೆನಪು


ಆಗ ನಾನು ಎರಡನೇಯ ತರಗತಿಯಲ್ಲಿದ್ದೆ. ಆ ದಿನಾ ನನ್ನ ಹುಟ್ಟಿದ ಹಬ್ಬ. ಕೆಂಪು- ಕೆನೆ ಬಣ್ಣದ ಕಸೂತಿ ಮಾಡಿದ ಪಾಕೀಜಾ (pakeezah) ಡ್ರೆಸ್ಸ್ ಹಾಕ್ಕೊಂಡಿದ್ದೆ. ಪಾಕೀಜಾ ಮೀನಾ ಕುಮಾರಿಯ ಕೊನೆಯ, ಹಿಟ್ ಚಿತ್ರ. ಅದರಲ್ಲಿ ಅವರು ಧರಿಸಿದ ಲಖನೌವಿ ಘಾಗ್ರ, ಚೋಲಿನೂ ಹಿಟ್ ಆಗಿತ್ತು.ನನ್ನ ಅಮ್ಮನೇ ನನಗೆ ಮುದ್ದಾದ ಬಟ್ಟೆಗಳನ್ನು ಹೊಲಿಯುತ್ತಿದ್ದರು. ಶಾಲೆಯಲ್ಲಿ ಚಾಕಲೇಟು ಹಂಚಿಯಾದ ಮೇಲೆ, ಇನ್ನೇನು ಪಠ್ಯ ಪುಸ್ತಕ ತೆರೆಯುತ್ತಿದ್ದಂತೆ, ಏನೋ ಗಲಾಟೆ ಶುರು ಆಗಿದೆಯಂತ ನಮ್ಮನ್ನು ಶಾಲೆಯಿಂದ ಬೇಗ ಬೇಗ ಮನೆಗೆ ಹೋಗಲು ಒತ್ತಾಯಿಸಲಾಯಿತು. ಮನೆ ಶಾಲೆಯ ಬಳಿಯಲ್ಲೇನೋ ಇತ್ತು ನಿಜ. ಆದರೆ ಬೆಳಿಗ್ಗೆ ಕಾರಿನಲ್ಲಿ ಡ್ರೈವರ್ ಜತೆ ಬಂದು, ಸಾಯಂಕಾಲ ನನ್ನ ಆಜೋಬಾ (ಅಜ್ಜ - ಮರಾಠಿ ಸಂಬೋಧನೆ) ಮನೆಗೆ ಕರೆದು ಕೊಂಡು ಹೋಗುವುದು ರೂಢಿ, ಯಾಕೆಂದರೆ ನಡೆದುಕೊಂಡು ಹೋಗುವ ದಾರಿಯಲ್ಲಿ ನಾವು ರೈಲ್ವೆ ಹಳಿ ದಾಟಿಕೊಂಡು ಹೋಗಬೇಕಿತ್ತು.

ಸರಿ ಆ ದಿನ ನನ್ನಷ್ಟಕ್ಕೆ ನಾನೇ ಹೊರಟೆ. ನಾನು ಹಳಿ ಇನ್ನೇನು ದಾಟ ಬೇಕು ಎನ್ನುವಷ್ಟರಲ್ಲಿ ರೈಲು ಸಿಗ್ನಲ್ ಕೈ ಕೆಳಗಿಳಿಯಿತು. ನಾವು ಹಳಿದಾಟಬೇಕಾದ ಕಡೆಯಲ್ಲಿ ಆ ಸಿಗ್ನಲ್ ತಂತಿ ಇತ್ತು. ರೈಲು ಬರ್ತಾ ಇದೆ ಅನ್ನುವುದಕ್ಕೆ ಸೂಚನೆ. ನನ್ನ ಉದ್ದನೆಯ ಪಾಕೀಜಾ ಡ್ರೆಸ್, ತಂತಿಯಲ್ಲಿ ಹೇಗೋ ಸಿಕ್ಕಿಕೊಂಡಿತು. ನನ್ನ ಪುಟ ಕೈ ಗಳಿಂದ ಎಳೆದದ್ದೆ ಆಯ್ತು. ಕೊನೆಗೂ ಸುಸ್ತಾಗಿ ಸುಮ್ಮನಿದ್ದು ಬಿಟ್ಟೆ. ಸಾವು ಏನು ಅಂತ ಗೊತ್ತಿರಲಿಲ್ಲ ಆದರೂ ಎನೋ ಒಂದು ತೆರನಾದ, ಕೆಟ್ಟದ್ದು ಘಟಿಸಲಿದೆ ಎಂಬುದು ಮನವರಿಕೆ ಯಾಗಿ ರೈಲಿನ ದಡಬಡ ಸದ್ದಿಗಿಂತ ನನ್ನ ಎದೆ ಬಡಿತದ ಸದ್ದು ಜಾಸ್ತಿಯಾಗಿತ್ತು.
ರೈಲು ಇನ್ನೇನೂ ಹತ್ತಿರವಾಗಲಿದ್ದಾಗ, ಬಿಳಿ ಜುಬ್ಬಾ-ಪೈಜಾಮ, ಗಾಂಧಿ ಟೋಪಿ ಹಾಕಿ ಕೊಂಡಿದ್ದ ಸುಮಾರು ನನ್ನ ಅಜ್ಜನ ವಯಸ್ಸಿನವರು, ನನ್ನ ಲಂಗವನ್ನು ತಂತಿಯಿಂದ ಬಿಡಿಸಿ ಬೇಗ ಬೇಗನೆ ನನ್ನ ಕೈಗಳನ್ನು ಹಿಡಿದು ರೈಲಿನ ಹಳಿಯಿಂದ ದೂರ ಕರೆದುಕೊಂಡು ಹೋಗಿ ನಿಲ್ಲಿಸಿದರು. ರೈಲು ಹೋಗಿಯಾದ ಮೇಲೆ ನನ್ನನ್ನು ಹಳಿ ದಾಟಿಸಿ ’ಪೋರ್ ಆತಾ ಘರಿ ಜಾಶಿಲ್ ಕಾಯ” (ಮಗು ಈಗ ಮನೆಗೆ ಹೋಗ್ತಿಯಾ) ಅಂತ ಪ್ರಿತಿಯಿಂದ ತಲೆ ನೇವರಿಸಿ ಕೇಳಿದರು. ನಾನಂತು ಧನ್ಯವಾದ ಕೂಡ ಹೇಳದೆ ಬೇಗ ಬೇಗ ಮನೆಗೆ ನಡೆದು ಬಿಟ್ಟೆ.

ಈ ಘಟನೆ ನಡೆದು ಎಷ್ಟೊಂದು ವರ್ಷಗಳಾಗಿವೆ. ಆದರೂ ಅವರ ಚಹರೇ ಈಗಲೂ ಸ್ಪಷ್ಟವಾಗಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಯಾವುದೇ ಕಾರಣಕ್ಕೆ ಖುಷಿಯಾದಾಗ ನಾನು ನೆನೆಸುವುದು ಅವರನ್ನು. ಆ ದಿನ ಅವರು ಹಾಗೆ ಬರದೆ ಹೋಗಿದ್ದಿದ್ದರೆ would not have lived to tell this tale

:-)

5 comments:

ಸವಿಗನಸು said...

ಎರಡನೆ ತರಗತಿ ಘಟನೆ ಅಂತ ಶುರುಮಾಡಿದಾಗ ಅಷ್ಟು ನೆನಪಿದೆಯಾ ಅನಿಸಿತು.....
ಆಮೇಲೆ ನಡೆದ ಘಟನೆ ಓದಿ ಅನಿಸಿತು ಅದು ಮರೆಯೋಕೆ ಸಾದ್ಯವೆ ಇಲ್ಲವಂತದ್ದು ಅಂದು....
ಆಪತ್ಭಾಂದವರನ್ನು ಮರೆಯೋಕೆ ಸಾದ್ಯವೆ ಇಲ್ಲ...

Ittigecement said...

ನಿಜ...

ಕೆಲವೊಮ್ಮೆ ಕೆಲವರ ಚಹರೆ ಮರೆಯಲಾಗುವದಿಲ್ಲ...
ನಿನ್ನೆ ಮೊನ್ನೆ ನಡೆದ ಘಟನೆಯ ಹಾಗೆ
ಅಚ್ಚಳಿಯದೆ ಉಳಿದು ಬಿಡುತ್ತದೆ...

ನಿಮ್ಮ ವಯಸ್ಸು ಕೂಡ ಸಣ್ಣದಾಗಿತ್ತು...
ಹಾಗಾಗಿ ಅಪರಾಧಿ ಮನೋಭಾವ ಬೇಡ..

ಹೃದಯದಲ್ಲಿ ಕೃತಜ್ಞತಾ ಭಾವವಿದೆಯಲ್ಲ...
ಅಷ್ಟು ಸಾಕು...

ಚಂದದ ಬರಹಕ್ಕೆ ಅಭಿನಂದನೆಗಳು...

ಸುಧೇಶ್ ಶೆಟ್ಟಿ said...

ಓಹ್! ಆ ಆಜ್ಜ ಮಾಡಿದ ಸಹಾಯ ಜೀವನ ಪೂರ್ತಿ ಕೃತಜ್ಞತೆಯಿ೦ದ ಇರಬೇಕಾದುದು ಅಲ್ವೇ ಮಾಲತಿ ಅವರೇ....

nenapina sanchy inda said...

:-)
malathi S

Anomalyka said...

God is great!