June 30, 2016

ಭಯ

ಆತನಿಗೆ ಹಾವೆಂದರೆ ಸಿಕ್ಕಾಪಟ್ಟೆ ಭಯ. ಹಾಗಾಗಿ ಅವನ ಊರಲ್ಲಿ ೧೦೬ ನೇ ಮಹಡಿಯ ಕಟ್ಟಡದಲ್ಲಿ ೧೦೬ ನೇ ಮಹಡಿಯಲ್ಲಿ ಮನೆ ಕೊಂಡುಕೊಂಡ. ಅಷ್ಟು ದೊಡ್ಡ ಕಟ್ಟಡಕ್ಕೆ ಹಾವು ಬರುವ ಹೆದರಿಕೆ ಅವನಿಗೆ ಲವಲೇಶವೂ ಇರಲಿಲ್ಲ, ಹಾಗಾಗಿ ಅವನು ಆ ರಾತ್ರಿ ತುಂಬಾ ಚೆನ್ನಾಗಿ ನಿದ್ದೆ ಮಾಡಿದ. ಮಾರನೇ ದಿನ ಬೆಳಿಗ್ಗೆ ಬಾಗಿಲಿನ ಕರೆಗಂಟೆಯ ಸದ್ದಾದಾಗ ಅವನಿಗೆ ಎಚ್ಚರ. ಅವನ ಪಕ್ಕದ ಫ್ಲ್ಯಾಟ್ ನಲ್ಲಿರುವ ಅಮ್ಮ ಮಗ ಕೂಡಿ  ಅವನಿಗೆ ಆ ಕಟ್ಟಡಕ್ಕೆ ಹಾಗೂ ಅವರ ನೆಕ್ಸ್ಟ್ ಡೋರ್ ನೈಬರ್ ಆಗಿದ್ದಕ್ಕೆ ಸ್ವಾಗತಿಸಲು ಬಂದು ಒಂದು ಚಂದದ  ಸಣ್ಣ ಸಣ್ಣ ನೇರಳೆ ಬಣ್ಣದ ಹೂಗಳ ಕುಂಡವನ್ನು ಕೊಟ್ಟು ಅವರು ಹೊರಟರು. ಅದನ್ನು ಬಾಲ್ಕನಿಯ ಕಟ್ಟೆಯ ಮೇಲಿಟ್ಟು ಎಷ್ಟು ಸುಂದರವಾಗಿ  ಫ್ಲ್ಯಾಟ್ ಗೆ ಕಳೆಯನ್ನು ಕೊಟ್ಟಿದೆ ಆ ಹೂ ಕುಂಡ ಅಂತ ಖುಷಿಯಾಗಿದ್ದ. 
ಮರುದಿನ ಬೆಳಿಗ್ಗೆ ಎದ್ದ ಕೂಡಲೇ ಅವನ ಕಣ್ಣು ಹೂಕುಂಡದ ಬಳಿ ಹೋಯಿತು. ಅಲ್ಲೇನೋ ವಿಲವಿಲನೆ ಅಲ್ಲಾಡುವ ಹುಳ ಕಾಣಿಸಿತು. ಹಾವು ಎಂದು ಆತನಿಗೆ ಹೃದಯ sthaMbana ಆಯ್ತು. 
ಎರಡು ದಿನದ ನಂತರ ಕೊಳೆತ ವಾಸನೆಗೆ ಪೊಲೀಸರು ಮನೆ ಬಾಗಿಲು ಒಡೆದು ಒಳ ಹೊಕ್ಕರು. ಪುಟ್ಟ ಗಿಡ ಬಿಸಿಲಿಗೆ ಒಣಗಿತ್ತು ಅದರಿಂದ ಕೆಲವು ಎರೆಹುಳಗಳು ಹರಿದಾಡ್ತಿದ್ದವು. ಆ ಮನುಷ್ಯ ಅವನ್ನೇ ಹಾವು ಎಂದು ತಿಳಿದು ಹೆದರಿ ಮೃತ ಪಟ್ಟಿದ್ದ. 
ನನ್ನ ಅಜ್ಜ ನಾನು ಚಿಕ್ಕವಳಿದ್ದಾಗ ಒಂದು ಕತೆ ಹೇಳಿದ್ದರು. ಒಬ್ಬನ ಮಗನ  ಕುಂಡಲಿಯಲ್ಲಿ ಹಾವಿನ ಕಡಿತದಿಂದ ಸಾವು ಎಂದು ಬರೆದಿತ್ತು. ಹಾಗಾಗಿ ಅವನ ತಂದೆ  ಸಮುದ್ರದ ಮಧ್ಯೆ ಒಂದು ಕಂಬ ಕಟ್ಟಿ ಆ ಕಂಬದ ಮೇಲೆ ಮನೆಯೊಂದನ್ನು ಮಾಡಿ ಮಗನನ್ನು ಅಲಿಟ್ಟನಂತೆ . ಆಳು ಕಾಳು  ಸೇವಕರಿಂದ ಜೀವನ ಏನು ಸಮಸ್ಯೆ ಇಲ್ಲದೆ ನಡೆಯುತ್ತಿತ್ತು. ಮಗನಿಗೆ ೧೮ ವರ್ಷ  ಆದಾಗ ತಂದೆ ಅಂದುಕೊಂಡನಂತೆ "ಈ ಕುಂಡಲಿ ಎಲ್ಲ ಸುಳ್ಳು ' ಅಷ್ಟು ಉದ್ದದ ಕಂಬದ ಮೇಲಿನ ಮನೆಗೆ ಹಾವು ಹೇಗೆ ಹೋಗುತ್ತೆ' ಅಂತ,
ಮಗ ಒಂದು ಸಲ ಸಮುದ್ರದ ಕಡೆಗೆ ನೋಡುತ್ತಿದ್ದ ಹಾಗೆ ಒಂದು ಚೆಂದದ  ನಿಂಬೆ ಹಣ್ಣು ನೀರೊಳಗೆ ತೇಲಿ ಹೋಗುತ್ತಾ ಇತ್ತಂತೆ. ಆ ಹುಡುಗ ಆಳುಗಳನ್ನು ಕಳುಹಿಸಿ ಅದನ್ನು ತನ್ನ ಕೊಠಡಿ ಗೆ ತರಿಸಿದನಂತೆ. ರಸಭರಿತ ನಿಂಬೆ ಹಣ್ಣನ್ನು ಚಾಕುವಿನಿಂದ ಕೊಯ್ದಾಗ ಅದರಲ್ಲಿನ ಹಾವು ಹೊರಗೆ ಬಂದು ಆ ಹುಡುಗನ್ನ ಕಚ್ಚಿಬಿಟ್ಟಿತಂತೆ, ಈ ಕತೆ ನೆನಪಾಗಿ ಮೇಲಿನ ಕತೆ ಬರೆದಿದ್ದು. 
ಅಂದ ಹಾಗೆ ಒಂದು ಸಲ ಶ್ರೀಕಾಂತ ಕಸಿನ್ ಮನೆ ಗೋವಾದಲ್ಲಿನ ಅವರ  ಮನೆಗೆ, ಅದೂ  ಅವರು ಇದ್ದದ್ದು ಎಂಟನೇ ಮಹಡಿಯಲ್ಲಿ . ಅವರ ಬಾಲ್ಕನಿಯಲ್ಲಿ ಹಾವನ್ನು ಕಂಡು ಹೆದರಿದ್ದರು. ನನಗೆ ಫೋನ್ ಮಾಡಿದಾಗ ನಾನು ಡಿಟೆಕ್ಟಿವ್ ತರಹ ಎಲ್ಲ ಕೇಳಿಕೊಂಡು, ಅಂದರೆ ಮನೆಯಲ್ಲಿ ಏನೇನೆಲ್ಲ ನಡೆಯಿತು, ಆ ದಿನ ಮನೆಗೆ ಹೊರಗಿನಿಂದ ಏನು ತಂದಿದ್ದರು ವಗೈರೆ. 
ಆಗ ಗೊತ್ತಾದದ್ದು ಅದು ಮನೆಗೆ ತಂದು ಕೊಟ್ಟ ಕಣಿಲೆಯ ಪದರದಲ್ಲಿ ಅಡಗಿಕೊಂಡು ಬಂದಂತಹ   ಹಾವಿನ ಮರಿ... ವಿಷಕಾರಿ ಅಲ್ಲ ಅನ್ನುವುದೊಂದೇ ಸಮಾಧಾನ 
ಮೊನ್ನೆ   ಸ್ನೇಹಿತೆ ಸೂಸಿ ಫೋನ್  ಮಾಡಿದಾಗ, ನೀರಿನ ಹೂಜಿ  ತೆಗೆದಿದ್ದೆ ಕ್ಲಿನ್ ಮಾಡಲು ಅದರ ಕೆಳಗೆ ಸ್ವಲ್ಪ ಜಾಗ ಇತ್ತು . ಅದರಲ್ಲಿ ಹಾವೊಂದು ಸಿಂಬಿ ಸುತ್ತಿ   ಕುಳಿತಿತ್ತು. ಮಾಲತಿ ಇದ್ದರೆ  ಏನು ಮಾಡ್ತಿದ್ದಳು ಅಂತ ಆಲೋಚನೆ ಮಾಡಿ ಅದನ್ನು ಕಸಬರಿಕೆ ಮತ್ತು ರಟ್ಟಿನ ಸಹಾಯದಿಂದ   ನೀರಿನ ಕೊಳದಲ್ಲಿ ಬಿಟ್ಟರಂತೆ. ಸೂಸಿ ಇರೋದು ಚಾರ್ಮಾಡಿ ಬೆಟ್ಟದ ತಪ್ಪಲಿನಲ್ಲಿ, ದಡ್ಡ ಕಾಡಿನ ನಡುವೆ. ಹಾಗಾಗಿ ಅಲ್ಲಿ ಹಾವು ಸರ್ವೇ ಸಾಮಾನ್ಯ. 
ಸುಮ್ನೆ ಒಂದು ಲಹರಿ, ಆಗುವುದೆಲ್ಲ ಆಗೇ ಆಗುತ್ತೆ. ಸುಮ್ಮನೆ ಹೆದರಿಕೊಂಡು ಇರಬಾರದು.  
:-)

No comments: