ಆಫಿಸ್ ನಲ್ಲಿದ್ದರೂ ಜಮುನಾಳ ಮನಸ್ಸೆಲ್ಲಾ ಇನ್ನೆರಡು ದಿನದಲಿ ಕಟ್ಟಬೇಕಾದ ಬಡ್ಡಿ ಕಂತಿನ ಮೇಲೆ ನೆಟ್ಟಿತ್ತು. ಏನು ಮಾಡಿದರೂ ೧೦,೦೦೦ ರೂಪಾಯಿಗಳು ಹೊಂದಿಸಲು ಶಕ್ಯವಿರಲಿಲ್ಲ. ಅಂತೂ ಇಂತೂ ಆಫಿಸ್ ಬಿಡುವ ವೇಳೆಯಾಯ್ತು. ಸ್ನೇಹಿತೆ ವಸುಧಾ 'ಯಾಕೇ ಮೋರೆ ಬಾಡಿದೆ ಹುಷಾರಿಲ್ಲ್ವಾ ' ಅಂತ ಕೇಳಿದಳು. ಇಲ್ವೆ ಹುಷಾರಾಗಿದ್ದೇನಿ. ಇನ್ನೆರಡು ದಿನದಲ್ಲಿ ಕಟ್ಟಬೇಕಾದ ಮೊತ್ತದ ಬಗ್ಗೆ ವಿಚಾರ.
ಆ ದಿನ ಏನೋ ಅರ್ಜೆಂಟ್ ಇತ್ತು ಆ ವ್ಯಾಪಾರಿಯ್ಂದ ದುಡ್ಡು ಕಡ ತೆಗೆದುಕೊಂಡೆ. ಈಗ ಅರ್ಧ ದುಡ್ಡು ಕಟ್ಟ್ತೇನೆ ಅಂದ್ರೂ ಒಪ್ಪಲ್ಲಾ. ಎಲ್ಲ ದುಡ್ಡು ನಾಡಿದ್ದೇ ಬೇಕಂತೆ. ಏನು ಮಾಡಲಿ? ಮನೆಯಲ್ಲಿ ಪುಟ್ಟ ಮಕ್ಕಳು ಮಾತ್ರ ಇರೋದು. ಅವರಿಗೆ ಏನಾದರೂ ತೊಂದರೆ ಮಾಡ್ತಾರಾ ಅಂತ ಅಷ್ಟೆ ಟೆನ್ಶನ್. ಸಂಬಳ ಕೈಗೆ ಬರಲು ಇನೂ ಹದಿನೈದು ದಿನ. ಅಷ್ಟೂ ಕಾಯಕ್ಕಾಗಲ್ವಂತೆ. ಅವರನ್ನೂ ದೂಷಿಸುವ ಹಾಗಿಲ್ಲ ಬಿಡು. ನನ್ನ ಕಷ್ಟಕ್ಕೆ ತುರ್ತಾಗಿ ದುಡ್ಡು ಕೊಟ್ಟಿದ್ದಾರೆ. ಈಗ ನಾನೂ ಅದನ್ನೂ ಕಟ್ಟಬೇಕಾದುದು ನನ್ನ ಧರ್ಮ. ಬಂಗಾರ ಕೂಡ ಅಡವಿಟ್ಟದ್ದು ಆ ದುಡ್ಡು ಖಾಲಿಯಾಗಿದೆ.
ಜಮುನಾಳ ಮಗನಿಗೆ ಇತ್ತೀಚಿಗೆ ಆಕ್ಸಿಡೆಂಟ್ ಆಗಿ ತಲೆಗೆ ಏಟು ಬಿದ್ದಿತ್ತು. ಕೂಡಲೆ ಶಸ್ತ್ರ ಚಿಕಿತ್ಸೆ ನಡೆಸಿದ್ದಲ್ಲಿ ಮಾತ್ರ ಜೀವ ಉಳಿಯುವ ಆಸೆಯಿತ್ತು. ಲಕ್ಷಗಟ್ಟಲೆ ಖರ್ಚು ಬಂದಿತ್ತು. ಹಾಗಾಗಿ ಆಕೆ ಮಾರ್ವಾಡಿಯಿಂದ ದುಡ್ಡನ್ನು ದುಪ್ಪಟ್ಟು ಬಡ್ಡಿಗೆ ತೆಗೆದುಕೊಂಡಿದ್ದಳು. ಅವಳು ಕೆಲಸ ಮಾಡೋದು ಪ್ರೈವೆಟ್ ಫರಂ ನಲ್ಲಿ. ಸಂಬಳ ಬಿಟ್ಟರೆ ಅಲ್ಪ ಸ್ವಲ್ಪ ಮೆಡಿಕಲ್ ಫೆಸಿಲಿಟಿ ಗೆ ದುಡ್ಡು ಕೊಡ್ತಿದ್ರೆ ವಿನಾ: ದೊಡ್ಡ ಮೊತ್ತದ ಸಾಲ ವಗೈರೆ ಕೊಡುತ್ತಿರಲಿಲ್ಲ.
ಅಲ್ಪ ಸ್ವಲ್ಪ ಉಳಿತಾಯ ಮಾಡಿದ್ದು ಮಕ್ಕಳ ಶಾಲೆಗೇ ಕಟ್ಟ ಬೇಕಾಯ್ತು. ಹಲವಾರು ಜನ ಇದರ ಬಗ್ಗೆ ಚಕಾರ ವೆತ್ತಿದ್ದು ಅವಳಿಗೆ ಗೊತ್ತು. ಅದು ಪ್ರತಿಷ್ಠಿತ ಶಾಲೆ. ಮಾತ್ರವಲ್ಲ ಮಕ್ಕಳಿಬ್ಬರೂ ಬುದ್ದಿವಂತರು. ಅಷ್ಟಲ್ಲದೇ ಈಗ ಆ ಶಾಲೆಗೆ ಭರ್ತಿ ಮಾಡಿದರೆ ಮಕ್ಕಳ ಹನ್ನೆರಡನೇ ಕ್ಲಾಸ್ ತನಕ ಚಿಂತೆಯಿಲ್ಲದ ಶಿಕ್ಷಣ . ಅದೆಲ್ಲಾ ಆಲೋಚನೆ ಮಾಡಿಯೇ ಮಕ್ಕಳನ್ನು ಆ ಶಾಲೆಗೆ ಹಾಕಿದ್ದಳು. ಇನ್ನುಳಿದ ಉಳಿತಾಯಕ್ಕೆ ಸಧ್ಯಕ್ಕೆ ಕೈ ಹಾಕಿದರೆ ಬಡ್ಡಿ ಹಣ ಪೋಲಾಗುತ್ತಿತ್ತು. ಸಧ್ಯದ ಆಲೋಚನೆ ೧೦,೦೦೦ ರೂಪಾಯಿಗಳನ್ನು ಹೊಂದಿಸುವದು ಆಗಿತ್ತು.
ಅವಳ ಸ್ನೇಹಿತೆ ಅವಳ ಮುಖ ನೋಡ ಲಾಗದೆ ಅವಳ ಕೈಲಿದ್ದ ಬಂಗಾರದ ಬಳೆ ಕಳಚಿ ಕೊಟ್ಟು. ಇಗೋ ಇದನ್ನು ಮಾರು ಅಥವಾ ಅಡವಿಡು. ಆ ಮೇಲೆ ಯಾವುಗಲಾದ್ರು ದುಡ್ಡು ಕೊಡು. ಮತ್ತು ನೋಡು ನೀನು ನಂಬಿರುವ ದೇವರು ನಿನ್ನನ್ನು ಯಾವತ್ತೂ ಕೈ ಬಿಡುವುದಿಲ್ಲ ಅಂತ ನಕ್ಕಳು. ದೇವರನ್ನು ನಂಬದ ವಸುಧಾ ಚೇಷ್ಟೆ ಮಾಡುತ್ತಾಳೇನೋ ಅಂದುಕೊಂಡಳು ಜಮುನಾ. ಆದರೆ ಅಲ್ಲಿ ತಮಾಷೆ ಇರಲಿಲ್ಲ. ಅವಳ ಕೈ ಬಳೆ ಯನ್ನು ಅವಳಿಗೆ ವಾಪಸ್ಸು ಮಾಡುತ್ತಾ , 'ಅಯ್ಯೋ ಇಟ್ಟುಕೋ . ನಿನ್ನಿಂದಲೇ ನನಗೆ ಧೈರ್ಯ. ಅಷ್ಟಿದ್ದರೆ ಬ್ಯಾಂಕ್ ನಲ್ಲಿರೋ ಎಫ್ ಡಿ ಮುರಿದ್ರಾಯ್ತು ಬಿಡು.
ಬಸ್ ಹತ್ತಿ ಬಸವಳಿದು ಟ್ರಾವಲ್ ಮಾಡಿ ಮನೆಗೆ ಬರುವಷ್ಟರಲ್ಲಿ ಜಮುನಾ ಸುಸ್ತಾದಳು. ಮಧ್ಯಾಹ್ನ ಯಾವತ್ತೋ ತಿಂದ ಮೊಸರನ್ನ ಕರಗಿ ಹೊಟ್ಟೆ ತಾಳ ಹಾಕಲಾರಂಭಿಸಿತು. ಮೂರು ಮನೆಗಳಿದ್ದ ಮಹಡಿ ಮನೆ. ಗಂಡ ಬದುಕಿದ್ದಾಗ ಮನೆಯೊಂದು ಕಟ್ಟಿಸ್ದ್ದು ಆಯ್ತು. ಅದರ ಲೋನ್ ಎಲ್ಲ ತೀರಿಸುವಷ್ಟರಲ್ಲಿ ಮಗನ ಅಪಘಾತ. ಮನೆ ಅವಳ ಹೆಸರಿಗಿದ್ದಿದ್ದು ಅವಳಿಗೆ ಅನುಕೂಲ ಆಯ್ತು. ಕೆಳಗಿನ ಮನೆಗಳೆರಡನ್ನು ಬಾಡಿಗೆಗೆ ಕೊಟ್ಟಿದ್ದಳು. ತುಂಬಾ ಪುಟ್ಟ ಮನೆಗಳವು, ಬೆಂಕಿ ಪೊಟ್ಟಣದಂತೆ. . ಆದರೆ ಸ್ವಂತದ್ದು ಎನ್ನುವ ಸಮಾಧಾನ.
ಮಹಡಿ ಏರಿ ತನ್ನ ಮನೆ ತಲುಪಿದಾಗ ಅಲ್ಲಿಬ್ಬರು ಹೊರಗಡೆ ಕೂತಿದ್ದರು. ಮೊದಲಿಗೆ ಮನೆಯ ಬೀಗದ ಕಡೆ ಅವಳ ಕಣ್ಣು ಹೋಯಿತು . ಬೀಗ ಹಾಕಿಯೇ ಇತ್ತು. ಮಕ್ಕಳು ಬರುವುದು ಇನ್ನೂ ಒಂದು ಗಂಟೆ ತಡವಿತ್ತು. ನಿಟ್ಟುಸಿರು ಬಿಟ್ಟಳು. ಆತಂಕದಿಂದ ಬಂದವರತ್ತ ಪ್ರಶ್ನಾರ್ಥಕ ನೋಟ ಬೀರಿದಳು.
'ಹೆದರಬೇಡಿ ಮ್ಯಾಡಂ. ನಾವು ಹೆಸರಾಂತ ಜಾಹಿರಾತು ಕಂಪೆನಿಯಿಂದ ಬಂದಿದ್ದೇವೆ. ನಿನ್ನೆ ಕಾರನಲ್ಲಿ ಈ ಕಡೆಯಿಂದ ಹೋಗುವಾಗ ಟ್ರಾಫಿಕ್ ಜ್ಯಾಮ್ ನಲ್ಲಿಸಿಕ್ಕಾಕಿಕೊಂಡು, ಹೀಗೇ ಕಣ್ಣಾಡಿಸುವಾಗ ನಿಮ್ಮ ಮನೆಯ ತಾರಸಿಯ ಮೇಲೆ ಕಣ್ಣು ಹೋಯಿತು. ನಮ್ಮ ಜಾಹಿರಾತಿನ ಹೋರ್ಡಿಂಗ್ ಹಾಕಲು ಪ್ರಶಸ್ತ ಜಾಗ. ಇಲ್ಲಿ ಒಂದು ಗ್ರಿಲ್ ರೈಲಿಂಗ್/ scaffolding ನಿರ್ಮಿಸಲು , ನಮ್ಮ ಹೋರ್ಡಿಂಗ್ ಹಾಕಲು ಅನುಮತಿ ನೀಡ ಬಹುದಾ? ಇದರಿಂದ ನಿಮಗೆ ತಿಂಗಳಿಗೆ ೨೫,೦೦೦ ರೂ ಬಾಡಿಗೆ ಕೊಡುತ್ತೇವೆ ನಾವು. ಈ ಮಹಡಿ ನಿಮ್ಮ ಸ್ವಂತದ್ದು ಅಂತ ನಿಮ್ಮ ಬಾಡಿಗೆದಾರರಿಂದ ತಿಳಿಯಿತು. ಹಾಗಾಗಿ ನಿಮಗೋಸ್ಕರ ವೈಟ್ ಮಾಡ್ತಾ ಇದ್ವಿ. ನಾಳೆ ಇದೇ ಹೊತ್ತಿಗೆ ಬರುತ್ತೇವೆ. ನೀವು ಆಲೋಚನೆ ಮಾಡಿ ನಮ್ಮ ಕಾಂಟ್ರಾಕ್ಟ್ ಒಂದಕ್ಕೆ ಸಹಿ ಹಾಕ ಬೇಕು.
" ನಿಮ್ಮ ಹೋರ್ಡಿಂಗ್ ಹಾಕಲು ನನ್ನದೇನೂ ಅಡ್ಡಿಯಿಲ್ಲ. ಅದು ಸೇಫ್ ಆಗಿರಬೇಕು. ಬೆಂಗಳೂರಿನ ಗಾಳಿಗೆ ಹೊಯ್ದಾಡದಂತೆ ಅದನ್ನು ನಿರ್ಮಿಸಬೇಕು. ಅದಲ್ಲದೇ ಆಕಸ್ಮಾತ್ ಅನಾಹುತಗಳೇನಾದರೂ ಆದರೆ ಅದರ ಜವಾಬ್ದಾರಿ ನೀವು ತೆಗೆದುಕೊಳ್ಳಬೇಕು ಅಂದಳು. ಅವರು ಎಲ್ಲದಕ್ಕೂ ಸೈ ಅಂತ ಹೇಳಿ ಮರುದಿನ ದಿನ ಮರಳುವುದಾಗಿ ಹೇಳಿದರು.
"ಏನಾದರೂ ಎಡ್ವಾನ್ಸ್ ಕೊಡಬಹುದಾ? ಒಂದು ಹತ್ತು ಸಾವಿರ ನಾಳೆ ಸಹಿ ಹಾಕಿದ ಮೇಲೆ ಕೊಡ ಬಹುದಾ ಅಂತ ಹೆದರಿ ಹೆದರಿ ಕೇಳಿದಳು. ಅವರು ಸಂತಸದಿಂದ ಖಂಡಿತ ಮ್ಯಾಡಂ ಅಂತ ಹೊರಟರು.
ಮರುದಿನ ಬೆಳಿಗ್ಗೆ ಅವಳು ಆಫಿಸಿಗೆ ಹೋಗುವಾಗ ಮನೆಯ ಬಳಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು ವಸುಧಾಳಿಗೆ ಪ್ರಸಾದವನ್ನು ಕೊಡಲು ಮರೆಯಲಿಲ್ಲ.
:-)