April 26, 2014

ಎಳನೀರಿನ ಸೂಪ್/ Tender coconut soup

ಮೊನ್ನೆ ಭಾನುವಾರ ಮಡಿವಾಳ ಸಂತೆಗೆ ಹೋಗಿದ್ದೆ . ಹಲವಾರು ಸಲ ವೀಕ್ ಡೇಸ್ ನಲ್ಲೂ ಹೋಗಿದ್ದೇನೆ, ಆದರೆ ಶನಿವಾರ ಭಾನುವಾರ ಅಲ್ಲಿ ಜನರನ್ನು ನೋಡ ಬಹುದು. ಮತ್ತೆ ಭಾನುವಾರ ಆದರೆ ನಮ್ಮ ರಾಯರ ಐರಾವತ ಅರ್ಥಾತ್ ಸ್ಕೂಟರ್ ಏರಿ ಹೋದ್ರೆ ಸ್ವಲ್ಪ ಜಾಸ್ತಿ ತರಕಾರಿ ಎತ್ತ ಕೊಂಡು ಬರಬಹುದು. 

ಮಡಿವಾಳದ ತರಕಾರಿ ಮಾರ್ಕೆಟ್ ತುಂಬಾ ದೊಡ್ಡದಾಗಿದೆ. ಪೂರ್ತಿ ಮಾರ್ಕೆಟ್ ನಾ ಇನ್ನೂ ನೋಡಿಲ್ಲ. ಹಾಗೆ ಮೊನ್ನೆ ಬರ್ತಾ 10 ಏಳನೀರು ಕಾಯಿಗಳನ್ನು ಹೊತ್ತುಕೊಂಡು ಬಂದ್ವಿ. ಎರಡು ದಿನ ಆದ ನಂತರ ಯಾರಿಗೂ ಎಳನೀರು ಕುಡಿಯುವ ಮನಸ್ಸು ಆಗಲಿಲ್ಲ. ನಾನಂತೂ ಜೀವ ಹೋದರೂ ಎಳನೀರು ಕುಡಿಯಲ್ಲ. ಯಾಕೆ ಅಂತ (ಕುಸುಮಬಾಲೆ ಸ್ಟೈಲ್ ನಲ್ಲಿ) ಯೋಳ್ತೀನಿ ಕೇಳಿ:

ಆಗ ನಾನು ಮಾಲವಿಕಳ ಟೈಮ್ ಪ್ರೆಗ್ನೆಂಟ್ . ಅಮ್ಮ ಅಪ್ಪ ಕೊಪ್ಪಕ್ಕೆ ಬಂದಿದ್ದರು. ಅವರು ಕೊಪ್ಪಕ್ಕೆ ಬಂದಾಗಲೇ ನನ್ನ ಅಣ್ಣನ (ದೊಡ್ಡಪ್ಪನ ಎರಡನೇ ಮಗ) ನ ಮದುವೆ ಬೆಂಗಳೂರಿನಲ್ಲಿ ಅಂತ ಆಮಂತ್ರಣ ಪತ್ರ ಬಂದಿತು. ಆಗ ಬೆಂಗಳೂರಿಗೆ ಡೈರಕ್ಟ್ ಬಸ್ ಶೃಂಗೇರಿ  ಯಿಂದ  ಮಾತ್ರ. ಅಪ್ಪ ಅಮ್ಮನಿಗೆ ಶೃಂಗೇರಿ ತೋರಿಸಿದ ಹಾಗಾಗುತ್ತದೆ ಎಂದು ಶ್ರೀಕಾಂತ ಶೃಂಗೇರಿಯಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿಸಿದ್ರು. ಮಧ್ಯಾಹ್ನ ಊಟದ ನಂತರ ನಾವು ಶೃಂಗೇರಿಗೆ ಹೊರಟ್ವಿ. ಕೊಪ್ಪದಿಂದ ಶೃಂಗೇರಿ ರೂಟ್ ಇದೆಯಲ್ಲ ಅಬ್ಬ ಎಷ್ಟೊಂದು ತಿರುವು ಮುರುವು? ಹೊಟ್ಟೆಯಲ್ಲಿದ ಅನ್ನ ಸಾರು ಪಲ್ಯ ಎಲ್ಲ ಮಿಕ್ಸಿ ನಲ್ಲಿ ಹಾಕಿದ ಹಾಗಾಯ್ತು. ವಾಂತಿ ಮಾಡ್ತಾ ಹೋದೆ. ಶೃಂಗೇರಿ ತಲುಪುವಷ್ಟರಲ್ಲಿ ಅರೆ ಜೀವ ಆದೆ. ಶೃಂಗೇರಿಯಲ್ಲಿ ಶಾರದೆಯ ದರ್ಶನ ಮಾಡಿ, ಅಲ್ಲಿ ನೀರಿನ ಮೀನುಗಳಿಗೆ ಮಂಡಕ್ಕಿ ಹಾಕಿ ದೇವಸ್ಥಾನ ಆವರಣದಲ್ಲಿ ಸಂಜೆ ತನಕ ಕಾಲ ತಳ್ಳಿದ್ವಿ. ಸಂಜೆ 7.30 ಗೆ ನಮ್ಮ ಬಸ್. ನನಗೆ ಊಟ ಮಾಡಬೇಕೆನ್ನಿಸಲಿಲ್ಲ. ಹಾಗಾಗಿ ಶ್ರೀಕಾಂತ್ ಎಳನೀರು ಕುಡಿಬಹುದು ಅಂದ್ರು. ಎಷ್ಟು ರುಚಿಯಾಗಿತ್ತೆಂದರೆ,  ಒಂದಲ್ಲ ಎರಡು ಎಳನೀರು ಕುಡಿದೆ. ಡಿಸೆಂಬರ್ ನ ಚಳಿ ಗಾಲ. ಅಲ್ಲೆಲ್ಲ ತುಂಬಾ ಚಳಿ. ಹೊಟ್ಟೆನೂ ಖಾಲಿ. ಬಸ್ ಊರಿಂದ ಬಿಟ್ಟ ಸ್ವಲ್ಪ ಹೊತ್ತಿಗೆ ನನಗೆ ಮೂತ್ರಶಂಕೆ ಎನ್ಸಿತು. ಇರಲಿ ಹೇಗಾದರೂ ಕಂಟ್ರೋಲ್ ಮಾಡಿ ಬೆಳಿಗ್ಗೆ ಬೆಂಗಳೂರಿಗೆ ತಲುಪಿದ ಮೇಲೆ  ಟಾಯ್ಲೆಟ್ ಗೆ ಹೋಗೋದು ಅಂತ ತೀರ್ಮಾನಿಸಿದೆ. ನಾನು ತೀರ್ಮಾನಿಸಿದರೆ ಆಯಿತೇ? ಪ್ರೆಗ್ನೆಂಟ್ ಬೇರೆ ಇದ್ನಾ? ಕಡೆಗೆ ತಡಿಲಿಕ್ಕ್ ಆಗದೆ ಶ್ರೀಕಾಂತ ಗೆ ಬಸ್ ನಿಲ್ಲಿಸಲಿಕ್ಕೆ ಹೇಳಿದೆ. ಬಸ್ ನವರು ಅರ್ಧ ಗಂಟೆ, ಅರ್ಧ ಗಂಟೆ ಅಂತ ಸತಾಯಿಸ್ತಾ ಇದ್ರು. ಕೊನೆಗೆ ಶ್ರೀಕಾಂತ ಬೆರಳು ಕಚ್ಚಲಿಕ್ಕೆ ಶುರು ಮಾಡಿದೆ, ಅದರ ಜತೆ ಅಳು ಕೂಡ. ಕೊನೆಗೆ ನಾಲ್ಕೈದು ಪ್ಯಾಸೆಂಜರ್ ಸ ಸೇರಿ ಡ್ರೈವರ್ ಅನ್ನು ದಬಾಯಿಸಿದರು. ಬಸ್ ಕೊನೆಗೂ ನಿಂತಿತು. ಹಲವಾರು ಜನ ಇಳಿದರು. ಅಮ್ಮ ಕೂಡ. ಅಷ್ಟು ಹೊತ್ತು ತಡಕೊಂಡಿದ್ದಕ್ಕೋ ಏನೋ ಮೂತ್ರ ಬರಲೇ ಇಲ್ಲ. ಅಷ್ಟರಲ್ಲಿ ಎರಡು ಮೂರು ಸಲ ಡ್ರೈವರ್ ಬೇಗ ಬೇಗ ಬಸ್ ಹತ್ತಿ ಅಂತ ಕಿರುಚ್ತಾ ಇದ್ದ. ಅಂತೂ ಇಂತೂ ಎಲ್ಲ ಸುಸೂತ್ರವಾಗಿ ನಡೆದು ಉಸ್ಸಪ್ಪ ಅಂತ ಬಸ್ ಹತ್ತಿದ್ದೆ. ಅಮ್ಮನೂ ಹಾಗೇ ಹೇಳಿದ್ರು ಇನ್ನು ಜನ್ಮದಲ್ಲಿ ಟ್ರಾವೆಲ್ ಮಾಡುವಾಗ ಎಳನೀರು ಕುಡಿಯಲ್ಲ ಅಂತ. ಅದೇ ಫರ್ಸ್ಟ್ ಟೈಮ್ ರಸ್ತೆ ಪಕ್ಕ ಕೂತು ವನ್ ನಂಬರ್ ಮಾಡಿದ್ದು. (ಆಮೇಲೆ ನಮ್ಮ ಟ್ರಾವೆಲ್, ಟ್ರೆಕ್ಕಿಂಗ್, ಬೈಂಕಿಂಗ್, ಹೈಕಿಂಗ್ ಸಮಯದಲ್ಲಿ ಇದೆಲ್ಲ ಸರ್ವೇ ಸಾಮಾನ್ಯವಾದ ವಿಷಯ ಆಯ್ತು ಬಿಡಿ. )ಆದರೂ ಆದಿನ ನಾ ಪಟ್ಟ ಮುಜುಗರ ಜೀವನ ಪರ್ಯಂತ ಮರೆಯುವುಲ್ಲ. ಹಾಗಾಗಿ ನನಗೆ ಎಳನೀರ್ ಗೆ ಕಟ್ಟಿ. :-)

ಸೊ ಎರಡು ದಿನ ನಂತರ ಶ್ರೀಕಾಂತ ಪುನ: ಹಳ್ಳಿಗೆ ಪ್ರಯಾಣ. ಈ ಹುಡುಗಿಯರು ಎಳನೀರು ಬೇಡ ಅಂತ. ಮೊದಲೇ ಸೆಕೆ. ಸೆಕೆಗೆ ಎಳನೀರು , ತೆಂಗಿನಕಾಯಿ ಎಲ್ಲ ಬೇಗ ಹಾಳಾಗುತ್ತಿವೆ.  ಆದ್ದರಿಂದ ಎಳನೀರಿನಿಂದ ಸೂಪ್ ಮಾಡುವ ಪ್ಲ್ಯಾನ್ ಹಾಕಿದೆ. 
ಎರಡು ಎಳನೀರು, ಅದರಿಂದ ಗಂಜಿ ಬೇರ್ಪಡಿಸಿ. ನಿಮಗೆ ಬೇಕಾದ ತರಕಾರಿ ಕತ್ತರಿಸಿ ಇಡಿ.. ನಾನು ಬೀನ್ಸ್, ಕ್ಯಾರೆಟ್, ಬಸಳೆ ಉಪಯೋಗಿಸಿದೆ. ಸ್ವಲ್ಪ ನೀರುಳ್ಳಿಯನ್ನು ಎಣ್ಣೆಯಲ್ಲಿ ಘಂ ಪರಿಮಳ ಬರುವ ತನಕ ಹುರಿಯಿರಿ. ಇದಕ್ಕೆ ಸಣ್ಣಕ್ಕೆ ಕತ್ತರಿಸಿದ ತರಕಾರಿಗಳನ್ನು ಬೆರೆಸಿ. ದೊಡ್ಡ ಉರಿಯಲ್ಲಿ ಎರಡು ನಿಮಿಷ ಕೈಯಾಡಿಸಿ. ಉಪ್ಪು ಬೆರೆಸಿ. ಎಳನೀರು ಹಾಕಿ ಕುದಿ ಯಲು ಬಿಡಿ. ಇದಕ್ಕೆ ಸ್ವಲ್ಪ ಕೋರ್ನ್ ಫ್ಲೋರ್ ಬೆರೆಸಿ . ಸೂಪ್ ದಪ್ಪ ಆಗಲಿಕ್ಕೆ ಬಂದಾಗ ಬೆಂಕಿಯಿಂದ ಕೆಳಗಿಳಿಸಿ. ಕರಿಮೆಣಸಿನ ಪುಡಿ ಮತ್ತು ದಪ್ಪ ಗಂಜಿ ಇದ್ದಲ್ಲಿ ಅದನ್ನೂ ಸಣ್ಣಕ್ಕೆ ಕತ್ತರಿಸಿ ಸೂಪ್ ನಲ್ಲಿ ಹಾಕಬಹುದು.  ಎಳನೀರಿನ ಚಿಪ್ಪಿನಲ್ಲಿ ಸರ್ವ ಮಾಡ ಬಹುದು. 

ಇಲ್ಲಿದೆ ಸೂಪ್ ಮಾಡುವ ವಿಧಾನ/ಫೋಟೊಗಳು. ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ
Tender coconut soup

April 20, 2014

ಮೀನು minded malathi- ಸಂಚಿಯಿಂದ ತೆಗೆದ ನೆನಪು-10

ಈ ಮೊದಲೇ ಬಹಳ ಸಲ ಬರೆದ ಹಾಗೆ : ನಾನು ನನ್ನ ಅಜ್ಜನ ಹತ್ತಿರ ಬೆಳೆದೆ. ಅವರು ಪಕ್ಕಾ ಸಸ್ಯಾಹಾರಿಗಳು. ರಜೆಗೆಂದು ಅಮ್ಮನ ಮನೆಗೆ ಹೋದಾಗ ಅವರು ಬಹಳ ಕಟ್ಟುನಿಟ್ಟಾಗಿ ಹೇಳುತ್ತಿದ್ದರು, ’ಮಾಲತಿ ಅಲ್ಲಿ ಹೋಗಿ ಮೀನು ತಿಂದರೆ ನೀನು ವಾಪಸ್ ನನ್ನ ಬಳಿ ಬರಲಿಕ್ಕಿಲ್ಲ’ ಅಂತ. ಅಮ್ಮನ ಮನೆಗೆ ಹೋದಾಗಲೆಲ್ಲ ನನಗೋಸ್ಕರ ಅಮ್ಮ ವೆಜಿಟೇರಿಯನ್ ಅಡಿಗೆ ಮಾಡುತ್ತಿದ್ದರು. ಆ ಮೇಲೆ ನಾನಿಗೆ ಕ್ಯಾನ್ಸರ್ ಆಗಿ ನಾನು ಅಮ್ಮನ ಮನೆಗೆ ಪರ್ಮನೆಂಟ್ ಆಗಿ ವರ್ಗಾಯಿಸಲ್ಪಟ್ಟೆ. ಅಮ್ಮನಿಗೋ ತುಂಬ ಕೆಲಸಗಳು. ನಾವು ಐದು ಜನರ ಪಾತ್ರೆ ಬಟ್ಟೆ ಮನೆ ಕ್ಲೀನ್ ಇಡುವುದು, ಹೊರಗಿನಿಂದ ಸಾಮಾನು ತರುವುದು ವಗೈರೆ. ಅಷ್ಟೆ ಅಲ್ಲ ಯಾವುದೇ ಕಾರಣಕ್ಕೆ ಪಾಲಕರು ಶಾಲೆಗೆ ಬರಲೇಬೇಕಿದ್ದಲ್ಲಿ ನಮ್ಮ ಅಮ್ಮನೇ ಬರುತ್ತಿದ್ದದ್ದು- ಶಾಲೆಯ ವಾರ್ಷಿಕೋತ್ಸವ ಇರಲಿ, ಸ್ಪೋರ್ಟ್ಸ್ ಡೇ ಇರಲಿ, ಪೇರೆಂಟ್ ಟೀಚರ್ಸ್ ಮೀಟ್ ಇರಲಿ... ನಮ್ಮ ತಂದೆ ಬೆಳಿಗ್ಗೆ ಆಫಿಸ್ ಗೆ ಹೋದರೆ ಬರುತ್ತಿದ್ದದ್ದೆ ರಾತ್ರಿ. ಆವಾಗಲೇ ನಮ್ಮ ಬಿಲ್ಡಿಂಗ್ ನಲ್ಲಿ ಕಾರ್ ಪೂಲಿಂಗ್ ನಡೀತಿತ್ತು. ನಮ್ಮ ಮನೆ ಒಂದು ಕಡೆ ಆದರ ಅಪ್ಪನ ಆಫಿಸ್ ಮುಂಬೈ ನ ಇನ್ನೊಂದು ತುದಿಯಲ್ಲಿ. ಹಾಗಾಗಿ ಅಪ್ಪ ನಮಗೆ ಅಪರಿಚರಾಗೇ ಉಳಿದರು. ನಾನಂತು ಅಪ್ಪನಿಗೆ ಸಿಕ್ಕಾಪಟ್ಟೆ ಹೆದರುತ್ತಿದ್ದೆ. ಮಾರ್ಕ್ಸ್ ಕಾರ್ಡ್ ಎಲ್ಲ ಅಮ್ಮ ಅಥವಾ ತಮ್ಮ ತಂಗಿಯರಿಂದ ಅಪ್ಪನ ಬಳಿ ಕಳುಹಿಸಿ ಸಹಿ ಪಡೆದುಕೊಳ್ಳುತ್ತಿದ್ದೆ, ಒಳ್ಳೆಯ ಅಂಕಗಳನ್ನು ಪಡೆದುಕೊಂಡರೂ!!!.

ಆಮೇಲೆ ಅಮ್ಮಮನೆಯಲ್ಲಿ ನಾನ್ ವೆಜ್ ಮಾಡಿದಾಗ (ವಾರದಲ್ಲಿ ನಾಲ್ಕು ಸಲ ನಮ್ಮನೆಯಲ್ಲಿ ಮೀನು ಮಾಡುತ್ತಿದ್ದರು) ನನಗೊಸ್ಕರ ಬೇರೆ ಅಡಿಗೆ ಮಾಡಬೇಕಲ್ಲವಾ ಅಂತ ನಾನು ಪರವಾಗಿಲ್ಲಮ್ಮ ನಾನು ಮೀನು ತಿನ್ನಲು ಟ್ರೈ ಮಾಡ್ತೇನೆ ಏನಿಲ್ಲದಿದ್ದರೆ ಅದರ ಗ್ರೇವಿಯಾದರೂ ತಿನ್ನುತ್ತೇನೆ ನೀನು ನನಗೋಸ್ಕರ ಸಸ್ಯಾಹಾರಿ ಅಡುಗೆ ಮಾಡಬೇಕಿಲ್ಲ. ಹೌದು ನನ್ನ ಅಡುಗೆ ನಾನೇ ಮಾಡಿಕೊಳ್ಳುವಷ್ಟು ಬುದ್ದಿ ಬಂದಿತ್ತು ನನಗೆ, ಆದರೆ ನನಗೆ ಬೆಳಗ್ಗಿನ ಶಿಫ್ಟ್ ಶಾಲೆ ಇತ್ತು. 6 ಗಂಟೆಗೆಲ್ಲ ನಾನು ಮನೆಯಿಂದ ಹೊರಬೀಳಬೇಕಿತ್ತು. ಅದಲ್ಲದೇ ಎನ್ ಸಿ ಸಿ ಪರೇಡ್ ಇದ್ದಾಗ 5 ಕ್ಕೆ ಬೆಳಿಗ್ಗೆ ಹೊರಡಬೇಕಿತ್ತು.

ತಂದೆಯವರು ಭಾನುವಾರ ಬೆಳಿಗ್ಗೆ ವರ್ಸೋವಾ ಧಕ್ಕೆಗೆ ಹೋಗಿ ದೊಡ್ಡ ದೊಡ್ಡ ಗೋಣಿ ಚೀಲದಲ್ಲಿ ಮೀನು ತರುತ್ತಿದ್ದರು, ನಮಗೆ ಮಾತ್ರವಲ್ಲ ನಮ್ಮ ಬಿಲ್ಡಿಂಗ್ ನಲ್ಲಿನ ಇತರರಿಗೂ ಸಾಕಾಗುವಷ್ಟು, ನಮ್ಮ ಮನೆಯಲ್ಲಿ ಒಂದು ಜರ್ಮನ್ ಕಂಪನಿಯ ಯಾವುದೋ ಒಂದು ದೋssssssಡ್ಡ ಫ್ರಿಜ್ ಇತ್ತು. ಅದರ ಫ್ರೀಜರ್ ಕಂಪಾರ್ಟ್ ಮೆಂಟ್ ನಲ್ಲಿ ಪೂರ್ತಿ ಎರಡು ಮೂರು ನಮೂನೆಯ ಮೀನುಗಳು. ಅಷ್ಟೆ ಅಲ್ಲ ಭಾನುವಾರ ನಮ್ಮ ಮನೆಯಲ್ಲಿ ಮೂರು ನಾಲ್ಕು ಬಗೆಯ ಮೀನಿನ ಐಟಮ್. ನಮ್ಮಮ್ಮನ ಅಡುಗೆ ಮಾತ್ರ ಯಾವತ್ತೂ ಸೂಪರ್!

ಮಧ್ಯಾಹ್ನ ಚಪಾತಿ ಮೆಂತೆ ಸೊಪ್ಪು ಅಥವಾ ಆಲೂ ಭಾಜಿ ತಿಂದು ನಿಭಾಯಿಸುತ್ತಿದ್ದೆ. ರಾತ್ರಿ ಕಷ್ಟಪಟ್ಟು ಮೀನಿನ ಊಟ ಮಾಡುತ್ತಿದ್ದೆ. ಆ ಮೇಲೆ ರಾತ್ರಿ ಎಲ್ಲರೂ ಮಲಗಿದ ಮೇಲೆ ಟಾಯಲೆಟ್ ಹೋಗಿ ವಾಂತಿ ಮಾಡುತ್ತಿದ್ದೆ :-) ನನ್ನ ಮದುವೆ ಆಗುವ ತನಕ ಇದು ನಡೆಯಿತು.

ಸಮುದ್ರ ಹೇಗೂ ನಮ್ಮ ಮನೆಯ ಬಳಿಯೇ ಇತ್ತು. ಅಪರೂಪಕ್ಕೊಮ್ಮೆ ಸಮುದ್ರದ ಅಲೆಯಲ್ಲಿ ರಾಶಿರಾಶಿ ಚಿಪ್ಪು ಮೀನು (Shell Fish) ಬರುತ್ತಿತ್ತು. ಆಗ ಬಿಲ್ಡಿಂಗ್ ನ ಯಾರಾದ್ರೂ ನಮಗೆ ತಿಳಿಸುತ್ತಿದ್ದರು. ಅಮ್ಮ, ಅಮ್ಮನ ಫ್ರೆಂಡ್ ಜತೆ ನಾವು ಪ್ಲ್ಯಾಸ್ಟಿಕ್ ಚೀಲ ಹಿಡಿದುಕೊಂಡು ಹೋಗಿ, ಕರ್ಚೀಫ್ ಅನ್ನು ಗಾಳದ ತರಹ ಯೂಸ್ ಮಾಡಿ ಅದರಲ್ಲಿ ಚಿಪ್ಪುಗಳನ್ನು ಹಿಡಿಯುತ್ತಿದ್ದೆವು. ನನಗೆ ಸಮುದ್ರದ ಬಳಿ ಹೋಗುವುದೆಂದರೆ ಇಷ್ಟದ ಕೆಲಸ. ಅಮ್ಮ ಎಲ್ಲ ಇದ್ದಾಗ ಸ್ವಲ್ಪ ಹೆಚ್ಚಿನ ಸಮಯ ಅಲ್ಲಿ ಕಳೆಯುವ ಅವಕಾಶವಾಗುತ್ತಿತ್ತು. ಹಾಗಾಗಿ ನಾನು ಫುಲ್ ಜೋಶ್ ನಿಂದ ಚಿಪ್ಪು ಗಳನ್ನು ಹಿಡಿದುಕೊಡುತ್ತಿದ್ದೆ. ನಮ್ಮ ಮನೆಯಲ್ಲಿ ನನ್ನ ಅಪ್ಪ, ತಮ್ಮ ತಂಗಿಯಂದಿರಿಗೆ ಇದು ಇಷ್ಟದ ಪದಾರ್ಥ.  ಸಂಜೆ ಅದನ್ನು ತಂದ ಮೇಲೆ ಅಮ್ಮ ಅದನ್ನು ಕ್ಲೀನ್ ಆಗಿ ತೊಳೆದು( ಅದಕ್ಕೆ ಮರಳು ಮೆತ್ತಿಕೊಂಡಿರುತ್ತೆ ಅಲ್ಲವಾ? )ಅದನ್ನು ಫ್ರೀಜ್ ನಲ್ಲಿ ಹಾಕಿಟ್ಟು ಅದರ ಅಡುಗೆ ಮರುದಿನ ಮಾಡುವುದು. ಇದು ಯಾವತ್ತಿನ ಪರಿಪಾಠ.

ಹೀಗಿದ್ದಾಗ ಒಂದು ದಿನ ಅಮ್ಮನ ಕಸಿನ್ ಅವಳ ಪುಟ್ಟ ಮೂರು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಬರುತ್ತಾರೆಂದು ಪತ್ರ ಬಂತು. ಆಗಿನ್ನೂ ಮನೆಗೆ ಫೋನ್  ಬಂದಿರಲಿಲ್ಲ. ಪತ್ರ ತಲುಪಿದ ಮೂರನೇ ದಿನಾ ನೆ ಅವರು ಬರುವ ದಿನಾಂಕ್. ಅಪ್ಪನಿಗೆ ಆ ದಿನ ಆಫಿಸ್ ನಲ್ಲಿ ಇನ್ಸ್ಪೆಕ್ಷನ್, ಆದ್ದರಿಂದ ಅಮ್ಮನೇ ಅವರನ್ನು ಕರೆತರಲು ದಾದರ್ ಗೆ ಹೋಗಬೇಕಾದ ಪರಿಸ್ಥಿತಿ. ನಾನು ಶಾಲೆಯಿಂದ ಮನೆಗೆ 1 ಗಂಟೆಗೆ ತಲುಪಿದಾಗ ಮನೆಗೆ ಬೀಗ. ಮೇಲಿನ ಮನೆಯಲ್ಲಿರುವ ಅಮ್ಮನ ಸ್ನೇಹಿತೆಯ ಮನೆಯಿಂದ ಬೀಗದ ಕೈ ತೆಗೊಂಡು ಮನೆಗೆ ಬಂದು ನೋಡಿದರೆ, ಅಡಿಗೆನೇ ಆಗಿರಲಿಲ್ಲ.  ಬಹುಶ: ಟ್ರೈನ್ ಬರಲು ವಿಳಂಬ ವಾಗಿರಬೇಕೆಂದು ಕೊಂಡೆ. ಆ ಮೇಲೆ ಎನಪ್ಪಾ ಮಾದುವುದು ಅಂತ ತಲೆ ಕೆರೆದುಕೊಂಡೆ. ಹಿಂದಿನ ದಿನ ಸಂಜೆ ತಂದಿಟ್ಟ ಚಿಪ್ಪು ಮೀನಿನ ನೆನಪಾಯಿತು. ಅದನ್ನು ಪುನ: ಒಮ್ಮೆ ತೊಳೆದು ನೀರಲ್ಲಿ ಹಾಕಿ ಬಿಸಿ ಮಾಡಲಿಟ್ಟೆ. ಇನ್ನೊಂದು ಗ್ಯಾಸ್ ಮೇಲೆ (ಆಗ ನಮ್ಮನೇಲಿ ಗ್ಯಾಸ್ ಇದ್ದರೂ ಸಿಲಿಂಡರ್ ಸಿಗುವುದು ಕಿರಿಕಿರಿಯಾಗುತ್ತದೆಂದು, ಅಮ್ಮ ತುರ್ತು ಪರಿಸ್ಥಿತಿ ಬಿಟ್ಟರೆ ಸೀಮೆ ಎಣ್ಣೆಯ ಸ್ಟವ್ ಮೇಲೆ ಅಡಿಗೆ ಮಾಡುತ್ತಿದ್ದರು.) ಕುಕ್ಕರ್ ನಲ್ಲಿ ಅನ್ನಕಿಟ್ಟೆ, ಜತೆಯಲ್ಲಿ ಸ್ವಲ್ಪ ಬೇಳೆ ಕೂಡ. ನಮ್ಮಲ್ಲಿ ಬೇಳೆ ದಾಳಿ ತೊವ್ವೆ ಆಪತ್  ಬಾಂಧವ್. ಸೇಫ್ ಅಡುಗೆ. :-) ಆ ಮೇಲೆ ನಿಧಾನಕ್ಕೆ ತೆಂಗಿನಕಾಯಿ ಹೆರೆದೆ, ಅದಕ್ಕೆ ಅಂದಾಜಿನಲ್ಲಿ (ಆ ಅಂದಾಜು ಮಾಡಬೇಕಾದ್ರೆ 10 ನಿಮಿಷ ಬೇಕಾಯ್ತು) ಹುರಿದ ಕೆಂಪು ಮೆಣಸು, ಸಣ್ಣ ಹುಣಸೆ ಹುಳಿ ತುಂಡು (ಹುರಿದ ಕೆಂಪು ಮೆಣಸು+ ಉಪ್ಪು ಹಚ್ಚಿಟ್ಟ ಹುಣಸೆ ಹುಳಿ ನಮ್ಮಲ್ಲಿ ಯಾವತ್ತೂ ಸ್ಟಾಕ್ ಇರುತ್ತೆ) , ಸ್ವಲ್ಪ ಹರಳುಪ್ಪು ಹಾಕಿ ರುಬ್ಬುವ ಕಲ್ಲಲ್ಲಿ (ಆಗ ನಮ್ಮ ಮನೆಯಲ್ಲಿ ಮಿಕ್ಸಿ ಇರಲಿಲ್ಲ) ನುಣ್ಣಗೆ ರುಬ್ಬಿದೆ. ರುಬ್ಬುವ ಅಭ್ಯಾಸ ನನಗೆ ಮೊದಲೆ ಅಮ್ಮ ಮಾಡಿಸಿದ್ದರು. ಹಾಗಾಗಿ ಅಂದಾಜಲ್ಲಿ ಏನೇನು ಸಾಮಾನು ಹಾಕಬೇಕೆಂದು ಗೊತ್ತಾಗಿದ್ದು) -ಎಲ್ಲೋ ಒಂದು ಕಡೆ ಮನಸ್ಸಲ್ಲಿ ಮನಸ್ಸಿಲ್ಲದಿದ್ದರೂ ಕೆಲವು ವಿಷಯ ಸೇವ್ ಆಗಿರುತ್ತೆ ಅಂತಹ ವಿಷಯಗಳು) 

ಬಿಸಿ ನೀರಿನಲ್ಲಿ ಮರಳುತ್ತ ಆ ಚಿಪ್ಪುಗಳು ತೆರೆದುಕೊಳ್ಳುತ್ತವೆ. ಅದರ ಒಳಗಿನ ಫ್ಲೆಶ್ ಅನ್ನು ತೆಗೆಯಬೇಕು, ಚಿಪ್ಪುಗಳನ್ನು ಬಿಸಾಡುವುದು. ಈ ಕೆಲಸ ಮಾಡಿ ಅದಕ್ಕೆ ರುಬ್ಬಿಟ್ಟ ಮಸಾಲೆ ಬೆರೆಸಿದೆ, ಒಂದು ಸಣ್ಣ ತುಂಡು ಮಾವಿನ ಕಾಯಿಯಿತ್ತು ಅದನ್ನು ಸೇರಿಸಿ, ಅದನ್ನು ಕುದಿ ಬರಲು ಇಟ್ಟೆ. ವಾಹ್ ಏನು ಘಂ ಎನ್ನುವ ಪರಿಮಳ. ಸರಿ ಕುದಿ ಬಂದ ನಂತರ ಅದಕ್ಕೆ ಒಂದೆರಡು ಸ್ಪೂನ್ ತೆಂಗಿನ ಎಣ್ಣೆ ಬರೆಸಿ, ಆಫ್ ಮಾಡಿ , ಪಾತ್ರೆ ಮುಚ್ಚಿಟ್ಟೆ. ಅಷ್ಟರಲ್ಲಿ ಕುಕ್ಕರ್ ಕೂಡ ತನ್ನ ಕೆಲಸ ಮುಗಿಸಿತ್ತು. ನೋಡಿದರೆ ಅನ್ನ ಚೆನ್ನಾಗಿ ಬೆಂದಿತ್ತು, ಆದರೆ ಬೇಳೆ ಬೆಂದಿರಲಿಲ್ಲ. ಹಾಗಾಗಿ ಅನ್ನದ ಪಾತ್ರೆ (ದೊಡ್ಡ ಕುಕ್ಕರ್ ಅದು ಈಗ ಅಂತಹುದ್ದನ್ನು ನಾನು ನೋಡಿಲ್ಲ, ಅದು ಜೋಡಿಸಬೆಕಾದರೆ ಸ್ವಲ್ಪತಲೆ ಖರ್ಚು ಮಾಡಬೇಕಾಯಿತು.) ಪುನ: ಬೇಳೆ ಬೇಯಲು ಇಟ್ಟೆ. ನನ್ನ ಅಡುಗೆ ಎಲ್ಲ ಮುಗಿಸಿ ಖುಶಿ ಖುಶಿಯಾಗಿದ್ದೆ. ನನ್ನ ಜೀವಮಾನದ ಮೊದಲ ಅಡುಗೆ (from scratch) ಅದೂ ಮೀನಿನದ್ದು, ಅಮ್ಮ , ಅಮ್ಮನ ಕಸಿನ ಎಲ್ಲ ಹಸಿವೆಯಿಂದ ಬಂದು ಊಟ ಮಾಡಿ ಕೊಂಡಾಡುತ್ತಾರೆಂದು!!

ಹೌದು ನಾನೆಣೆಸಿದ ಹಾಗೆ ಟ್ರೈನ್ ಬರುವಾಗ ತುಂಬ್ ಲೇಟ್ ಆಗಿ, ಎರಡು ಎರಡು ಲೋಕಲ್ ಟ್ರ್ರೈನ್ ಹಿಡಿದು. ಮೂರು ಪುಟ್ಟ ಮಕ್ಕಳು, ಸಾಮಾನು, ಮನೆಗೆ ತಲುಪುವಾಗ ಅವರೆಲ್ಲ ಸೋತು ಸುಣ್ಣವಾಗಿದ್ದರು. ಅದರಲ್ಲೂ ಅಮ್ಮನಿಗೆ ಡಬಲ್ ಚಿಂತೆ. ಮನೆಗೆ ಬಂದು ಅಡುಗೆ ಮಾಡಬೇಕಲ್ಲವಾ ಎಂದು. ಅಮ್ಮನ ಕಸಿನ್ ವಾಹ್ ವಾಹ್ ಅನ್ನುತ್ತ ಹೊಗಳುತ್ತ ಊಟ ಮಾಡಿದರು. ನಾನು ಮೊದಲ್ನೇ ಸಲ ಮಾಡಿದ ಅಡುಗೆ ಅಂತ ಅವರಿಗೆ ನಂಬಲಾಗಲಿಲ್ಲ. ಅಮ್ಮನಿಗೆ ನಾನು ಅಡಿಗೆ ಮಾಡಿಟ್ಟಿದ್ದೇನೆ ಅಂತ ನಿರಾಳ ಏನೋ ಆಯ್ತು ಆದರೆ ಒಂದು ಹೊಗಳಿಕೆಯ ಮಾತುಗಳನ್ನು ಹೇಳದೇ ಇದ್ದುದರಿಂದ ತುಂಬಾ ಪೆಚ್ಚಾದೆ. :-( :-(. ನಾನು ಅನ್ನ ತೊವ್ವೆ ಮಾತ್ರ ಉಂಡದ್ದು. ನಾನು ಮೀನಿನ ಸುದ್ದೆಗೆ ಹೊಗಿರಲಿಲ್ಲ. ರಾತ್ರಿ ಅಪ್ಪ ಊಟ ಮಾಡ್ತಾ, ಚೆನ್ನಾಗಿದೆ ಪ್ರಿಪರೇಶನ್ ಅಂದಾಗ ಮಾಲತಿ ಮಾಡಿಡ್ಡು ಅಂದಾಗ ಅಪ್ಪ ಆಶ್ಚರ್ಯದಿಂದ ಹೌದಾssssss, ಆಡ್ಡಿಲ್ಲ ಹುಡುಗಿ, ಅಂದಿದ್ದು ಕೇಳಿಸಿಕೊಂಡಿದ್ದೆ. :-)

ಆಮೇಲೆ ಮದುವೆಯಾಗಿ ತೀರ್ಥಹಳ್ಳಿಗೆ. ಅಲ್ಲಿ ಮೀನು ಬಿಡಿ ನೀರುಳ್ಳಿ ಬೆಳ್ಳುಳ್ಳಿ ಸಮೇತ ತಿನ್ನುತ್ತಿರಲಿಲ್ಲ. ಸಾಧಾರಣವಾಗಿ ಮನೆಯಲ್ಲಿ ಸಾಲಿಗ್ರಾಮಕ್ಕ್ಕೆ ಪೂಜೆ ಮಾಡುತ್ತಿದ್ದ ಪಕ್ಷ ಹೀಗೆ ಸಾತ್ವಿಕ ಆಹಾರ ತಿನುತ್ತಾರೆ ಅಂತ ನನ್ನ ಅನಿಸಿಕೆ. ನನಗೇನು ಕಿರಿಕಿರಿ ಅನ್ನಿಸಲಿಲ್ಲ. ಅದರ ಬದಲು ನೀರುಳ್ಳಿ ಬೆಳ್ಳುಳ್ಳಿ ಬಳಸದೇ ಎಷ್ಟೊಂದು ಅಡಿಗೆ ತಯಾರಿಸಬಹುದು ಎನ್ನುವ ಮನವರಿಕೆ ಯಾಯಿತು.

ನನ್ನ ಅಕ್ಕನಿಗೆ ಅಡಿಗೆ ಮನೆಯ ಕೆಲಸಗಳಲ್ಲಿ ಸಹಕರಿಸಿ ಆ ಮೇಲೆ ನನ್ನ ಓದು (ನನ್ನ ಪದವಿ ಪೂರ್ಣಗೊಂಡಿರಲಿಲ್ಲ, ಹನ್ನೆರಡನೇ ಇಯತ್ತೆ ಆದಕೂಡಲೇ ಮದುವೆ ಆಗಿದ್ದು) , ಓದಿ ಬೇಜಾರಾದಾಗ ನನ್ನ ಅತ್ತೆಯ ಕೊಠಡಿ ಹೊಕ್ಕುತ್ತಿದ್ದೆ. ಅವರು ಹರಳಿಮಠದ ಅವರ ತೋಟದ ವಿಷಯ, ಅವರ ಕುಟುಂಬದ ವಿಷಯಗಳನ್ನೆಲ್ಲ ಮೆಲುಕು ಹಾಕುತ್ತಿದ್ದರು. ಆಗ ಅವರಿಗೆ ಕಣ್ಣು ಕಾಣುತ್ತಿರಲಿಲ್ಲ, ಕಿವಿ ಮಂದವಾಗಿ ಕೇಳಿಸುತ್ತಿತ್ತು. ಹೀಗೆ ಒಂದು ಸಲ ಲೋಕಾಭಿರಾಮವಾಗಿ ಮಾತನಾಡುವಾಗ ಅವರು ಈ ತೀರ್ಥಹಳ್ಳಿಯ ಮನೆಯಲ್ಲಿ ಮಿಸ್ ಮಾಡುತ್ತಿದ್ದದ್ದು ಮೀನಿನ ಊಟ ಅಂದಾಗ ನನಗೆ ಆಶ್ಚರ್ಯ. ಮದುವೆಯಾದ ಕೆಲವು ತಿಂಗಳು ಅವರು ಮೀನಿನ ಊಟ ಮಾಡಲಿಕ್ಕೋಸ್ಕರ, ಹೋಗುವಾಗ ನಡೆದುಕೊಂಡು, ಬರುವಾಗ ತೀರ್ಥಹಳ್ಳಿ ಪೇಟೆಗೆ ಬರುವ ಎತ್ತಿನಗಾಡಿಯಲ್ಲಿ ವಾಪಸ್ ಬರುವುದು ಮಾಡುತ್ತಿದ್ದರಂತೆ :-) ಹರಳೀಮಠ ತೀರ್ಥಹಳ್ಳಿಯಿಂದ 12 ಕಿ.ಮೀ ದೂರದಲ್ಲಿದೆ.

ಮತ್ತೆ ನಮ್ಮ ರಾಯರ ಬಗ್ಗೆ ಕೇಳಿ! ಧಾರವಾಡದಲ್ಲಿ ಓದಲು ಹಾಸ್ಟೆಲ್ ನಲ್ಲಿದ್ದಾಗ ಮೀನು ತಿನ್ನುವ ರೂಢಿಯಾಯಿತಂತೆ. ಹಾಸ್ಟೆಲ್ ಮೆಸ್ ನಲ್ಲಲ್ಲ. ಪ್ರೆಂಡ್ಸ್ ಜತೆ ಹೋಟಲ್ ನಲ್ಲಿ. ಅವರ ಮೆಸ್ ಗೆ ಪ್ರತೀ ಭಾನುವಾರ ರಜೆ. ಆಗ ಇವರು ಬೆಳಿಗ್ಗೆ ಬಿನ್ ಬುಲಾಯೆ ಮೆಹಮಾನ್ ತರಹ ಅವರ ಪ್ರೊಫೆಸರ್ ಗಳ ಮನೆಗೆ ಲಗ್ಗೆ ಇಡುತ್ತಿದ್ದರಂತೆ. ಪಾಪ ಅವರು ಬೇರೆ ದಾರಿಗಾಣದೇ ಇವರನ್ನು ಬ್ರೇಕ್ ಫಾಸ್ಟ್, ಲಂಚ್ ಗೆ ಉಳಿಸಿಕೊಳ್ಳುತ್ತಿದ್ದರಂತೆ. ಧಾರವಾಡದಲ್ಲಿ ನಡೆದ alumni meet ನಲ್ಲಿ ಶ್ರೀಕಾಂತ ಅವರನ್ನೆಲ್ಲ ಪರಿಚಯಿಸಿ ಅವರ ಕಾಲಿಗೆರಗಿದ್ದು ನನಗೆ ಖುಶಿಯಾಗಿತ್ತು.  ಅದಕ್ಕೆ ನಾನೆ ಇಲ್ಲಿ ಮುಂದಾಗಿ ನನ್ನ ಬ್ಯಾಚಲರ್ ತಮ್ಮಗಳಂದಿರಿಗೆ ಹಬ್ಬಕ್ಕೆ ಊಟಕ್ಕೆ ಕರೆಯುವುದು. :-)

ಹಾಂ ಎಲ್ಲಿದ್ದೆ?! ಸರಿ ಆ ಮೇಲೆ ಶ್ರೀಕಾಂತ್ ಬ್ಯಾಂಕ್ ಸೇರಿ ಮೊಟ್ಟ ಮೊದಲ ಪೋಸ್ಟಿಂಗ್ ಗೋವಾಕ್ಕೆ. ಅಲ್ಲಂತೂ ತಾಜಾ ಮೀನು ನೋಡಿ, ಗೋವಾದ ಸ್ಪೇಶಲ್ ಮೀನಿನ ಕರಿ ಪ್ರೆಪರೆಶನ್ ಗೆ ಫೀದಾ ಆಗಿ ಅವರು ಸಿಕ್ಕಾಪಟ್ಟೆ ಮೀನ್ ಮೈಂಡಂಡ್ ಆದ್ರೂ. (ಮೀನು ತಿನ್ನುವವರೆಲ್ಲ ಮೀನ್ ಮೈಂಡಡ್, ಶುಗರ್ ಇರುವವರೆಲ್ಲ ಗೋಡ್ ಬೋಲೆ/godfearing  - ಗೋಡ್ ಅಂದರೆ ಕೊಂಕಣಿಯಲ್ಲಿ ಸಿಹಿ - ಅಂತ ನಮ್ಮ ಪ್ರೈವಟ್ ಸರ್ಕಲ್ ನ ಜೋಕ್) ಕೊಪ್ಪದಲ್ಲಿ ಮನೆ ಮಾಡಿದಾಗ ನಾನೂ ನಿಧಾನಕ್ಕೆ ಅವರ ಪ್ರೆಂಡ್ಸ್ ಗೋಸ್ಕರ ಮೀನಿನ ಅಡಿಗೆ ಮಾಡುತ್ತಿದ್ದೆ. ಅಮ್ಮ ಮಾಡುತ್ತಿದ್ದದ್ದು ಅಂದಾಜು ನನಗೆ ಇತ್ತು. ಆಗ ಮೀನು ಉಡುಪಿಯಿಂದ ಕೊಪ್ಪಕ್ಕೆ ತರಿಸುತ್ತಿದ್ದರು ಅಥವಾ ರಾಯರು ಬ್ಯಾಂಕ್ ನ ಮೀಟಿಂಗ್ ಮಂಗಳೂರು-ಉಡುಪಿಯಲ್ಲಿ ಇದ್ದರೆ , ನನ್ನ ಬಳಿ ದೊಡ್ಡ ಐಸ್ ಬಾಕ್ಸ್ ಇತ್ತು ಅದರಲ್ಲಿ ಹಾಕಿ ತರುತ್ತಿದ್ದರು. ಆ ದಿನ ರಾತ್ರಿ ಬೀರ್ ಮತ್ತು ಮೀನಿನ ಪಾರ್ಟಿ. ಅಲ್ಲೆಲ್ಲ ಇಂಡಿಪೆಂಡೆಂಟ್ ಮನೆಗಳಿದ್ದವು, ನಾನೂ ಮಾಡುತ್ತಿದ್ದೆ.

Manohar Mulgaonkar's book: 'Inside Goa',- 'Market Place' Cartoon : Mario Miranda

ಮಾಲವಿಕಳ ಟೈಮ್ ಡೆಲಿವರಿಗೆ ಮುಂಬೈಗೆ ಹೋದಾಗ ಅಮ್ಮ ಒಂದು ಸಲ ಬಂಗುಡೆ ಮೀನು ಕರಿಯುತ್ತಿದ್ದರು ಆ ವಾಸನೆಗೆ ನನಗೆ ತಿನ್ನುವ ಬಯಕೆಯಾಯಿತು. ತಿಂದೆ . ವಾಂತಿ ಗೀಂತಿ ಏನೂ ಆಗಲಿಲ್ಲ. ಸರಿ ಆಮೇಲೆ ನಾನು ಪಕ್ಕಾ ಮೀನ್ ಮೈಂಡಡ್ ಮಾತ್ರವಲ್ಲ ಮಾಲವಿಕಾ ಕೂಡ ಮೀನು ತಿನ್ನುವುದರಲ್ಲಿ ಎಕ್ಶಪರ್ಟ್ ಆದಳು. ಆದರೆ ಬೆಂಗಳೂರಿಗೆ ಬಂದ ಮೇಲೆ(ಇಲ್ಲಿ ಮನೆ ಬಾಡಿಗೆಗೆ ಕೊಡುವಾಗ ಮೀನು ತಿನ್ನದವರಿಗೆ ಮಾತ್ರ ಅಂತೆಲ್ಲ ಹೇಳುತ್ತಾರಾದ್ದರಿಂದ) ನಾನು ಶ್ರೀಕಾಂತ್ ಗೆ ಮೊದಲೇ ಹೇಳಿದ್ದೆ ಇಲ್ಲಿ ಮೀನು ಹೋಟಲ್ ನಲ್ಲಿ ಮಾತ್ರ ಅಥವ ನಮ್ಮ ಸ್ವಂತ ಮನೆಯಾದಲ್ಲಿ ಮಾತ್ರ ಅಂತ.

ಈಗ ನಮ್ಮದೇ ಮನೆ ಅದಲ್ಲದೇ ಅಡುಗೆ ಮನೆಯಲ್ಲಿ ಹೈ ಫಂಡಾ  ಚಿಮ್ನಿ ಬೆರೆ. ಇವತ್ತು ಮಡಿವಾಳ ಮಾರ್ಕೆಟ್ ನಲ್ಲಿ ಫ್ರೆಶ್ ಮೀನು ಸಿಕ್ಕಿತು. ಮನೆಯಲ್ಲೆ ಮಾಡಿದೆ. ಹಾಂ ಈಗ ಮಾಲವಿಕ ಪ್ಯೂರ್ ವೆಜ್, ನಮ್ಮ ನಿಹಾಗೆ ಆವಾಗಾವಾಗ್ ಮೀನು ತಿನ್ನಲೇ ಬೇಕು, ನನಗೆ ಶ್ರೀಕಾಂತ್ ಗೆ ಹೇಗಾದರೂ ನಡೆಯುತ್ತೆ. ಚೆನ್ನಾಗಿತ್ತು. ನನ್ನ ಮೀನು ತಿನ್ನುವ ಪ್ರೆಂಡ್ಸ್, ತಮ್ಮ ತಂಗಿಯಂದಿಗೆಲ್ಲ whatsapp ನಲ್ಲಿ ಚಿತ್ರ ಕಳುಹಿಸಿ ಹೊಟ್ಟೆ ಕಿಚ್ಚಾಗುವಂತೆ ಮಾಡಿದೆ.

ಇತ್ತೀಚಿಗೆ ಆಫಿಸ್ ನಿಂದ ಒಂದು ಬಸ್ ಮಾಡಿ ನಾವೆಲ್ಲ ಕೇರಳಕ್ಕೆ ಹೋಗಿದ್ವಿ. ವಾಪಸ್ ಬೆಂಗಳೂರಿಗೆ ಬರುವ ದಿನ ’ಕೇರಳಕ್ಕೆ ಬಂದು ಮೀನು ಊಟ ಮಾಡದಿದ್ದರೆ ಹೇಗೆ’ ಅಂತ ವೆಜ್ ನಾನ್-ವೆಜ್ ಎರಡೂ ಸರ್ವ್ ಮಾಡುವ ಹೋಟಲ್ ಗೆ ಹೋದ್ವಿ. ಎರಡು ಗುಂಪುಗಳಾದ್ವು. ನಾನು ನಾನ್ ವೆಜ್ ಟೀಮ್ ಜತೆ ಹೋಗುತ್ತಿರಬೇಕಾದ್ರೆ, ನಮ್ಮ ಕಲೀಗ್ ಹೆಂಡತಿ, ’ಮಾಲತಿ ಆ ಕಡೆ ಯಾಕೆ ಹೋಗ್ತಿದ್ದೀರಾ? ಅವರು ಮೀನು ಊಟಕ್ಕೆ ಹೋಗ್ತಿದ್ದಾರೆ’ ಅಂದಾಗ ನಾನು ಸುಮ್ನೆ ಅವರ ಕಡೆ ಮುಗುಳ್ನಕ್ಕು , ಮೀನು ಊಟ ಟೀಮ್ ಜತೆ ನಡೆದೆ. ಅವರು ಮಾಲತಿ ’ನೀವು ನಾನ್ ವೆಜ್ ತಿನ್ನುತ್ತೀರಾ’ ಅಂತ ಸಿಕ್ಕಪಟ್ಟೆ ಅಪ್ ಸೆಟ್ ಆಗಿ ಊಟ ಕೂಡ ಮಾಡದೆ, ತುಂಬ ಸೈಲೆಂಟ್ ಆಗಿ ಕೂತ್ರಪ್ಪ. ಯಾಕೆ ಅಂತ ನನಗೊತ್ತಾಗಲಿಲ್ಲ, ಅಂದ ಹಾಗೆ ಅವರ ಹಸ್ಬೆಂಡ್ ಮೀನುಪ್ರಿಯರು....................!!! :-) :-)

ಸುಮ್ನೆ as usual :-) :-)

ಮೀನಿನ ಅಡುಗೆ ನನ್ನ ಇಂಗ್ಲಿಷ್ ಬ್ಲಾಗನಲ್ಲಿ



April 11, 2014

ಚಿತ್ತದಲ್ಲಿರಲು ಚಿತ್ತಾಲರು

ಮೊನ್ನೆ ತಂಗಿ ಯು ಎಸ್ ನಿಂದ ಫೋನ್ ಮಾಡಿದ್ದಳು. ಅವಳ ಕಿರಿ ಮಗಳು ನಮ್ಮ ನಿಹಾಳ ಹಾಗೆ ಕೀಟಲೆ ಹುಡುಗಿ ಏನಾದರು ಅಂದು ನಗಿಸುತ್ತಿರುತ್ತಾಳೆ. ಕೊಂಕಣಿ ಇಂಗ್ಲಿಷ್ ನಲ್ಲಿ ತುಂಬಾ ಪನ್ ಮಾಡ್ತಾಳೆ. ಏನಾದರೂ ಸ್ಪೆಷಲ್ ವಿಷಯ ಇದ್ದರೆ ದೊಡ್ಡಮ್ಮನೊಡನೆ ಶೇರ್ ಮಾಡು ಅಂತ ಹೇಳಿರುತ್ತಾಳೆ. ಅದಕ್ಕೆ ಅವಳು ಶಾಲೆ ಹೋದ ಮೇಲೆ ತಂಗಿ ನನಗೆ ಅವಳ ಕಿತಾಪತಿಗಳನ್ನೆಲ್ಲ ವರ್ಣಿಸುತ್ತಾಳೆ.
ಹೀಗೆ ಮಾತನಾಡುವಾಗ ನನ್ನ ತಂಗಿ ’ನೀನು ಕನ್ನಡ ಪುಸ್ತಕ ಓದುತ್ತಿಯಲ್ಲವಾ?? ಇತ್ತೀಚಿಗೆ ಚಿತ್ತಾಲ ಎನ್ನುವವರು ತೀರಿಕೊಂಡರಂತಲ್ಲ ಅಂದಾಗ ಕಾಕಾತಾಳೀಯ ಎಂಬಂತೆ the Outlook ಮ್ಯಾಗಜೀನ್ ನಲ್ಲಿ ಅವರ ಸಂತಾಪ ಸೂಚಕ ಸಣ್ಣದೊಂದು ಕಾಲಂ ಓದ್ತಾ ಇದ್ದೆ, 

ಅದರ ಬಗ್ಗೆ ಹೇಳಿ, ನಾನು ಅವರ ಬರಹದ ಫ್ಯಾನ್, ನಿಹಾ ’ಶಿಕಾರಿ ” ಓದಿ ಕವರ್ ಪೇಜ್ ಮಾಡಿ ಎರಡನೇ ಬಹುಮಾನ ಪಡೆದದ್ದು, ಬರಹಗಾರರಾದ ಎಮ್ ಎಸ್ ಶ್ರೀರಾಮ ಅವರನ್ನು ಕೊನೆಯ ಬಾರಿ ನೋಡಿದ್ದು, ಅವರ ಲ್ಯಾಪ್ ಟಾಪ್ ನಲ್ಲಿ ಕವರ್ ಪೇಜ್ ಗಳನ್ನು ತೋರಿಸಿದ ಬಗ್ಗೆ, ನನಗೆ ಕೆಲವರಿಂದ ಅವರ ದೇಹಾಂತದ ಬಗ್ಗೆ ಎಸ್ ಎಮ್ ಎಸ್ ಬಂದಿದ್ದು, ಮೊನ್ನೆ ಪುಸ್ತಕದ ಕಪಾಟನ್ನು ಸೆಟ್ ಮಾಡುತ್ತಿದ್ದಾಗ ಅವರ ಪುಸ್ತಕಗಳನ್ನು ಒಂದೇ ಕಡೆ ಜೋಡಿಸಿ ಎಲ್ಲದರ ಮೊದಲ ಪುಟ ಓದಿದ್ದು.... ಎಲ್ಲ ಅವಳಿಗೆ ಕೊರೆದೆ. ಅವಳು ಯಶವಂತ ಚಿತ್ತಾಲರು ದೈವಾಧೀನರಾದ ದಿನ ಅವಳ ಫ್ರೆಂಡ್ ಶುಭಾ ವಾಘ್ ಗೆ ಫೋನ್ ಮಾಡಿದ್ದಳಂತೆ, ಅವಳ ಹುಟ್ಟಿದ ಹಬ್ಬಕ್ಕೆ ವಿಶ್ ಮಾಡಲು, ಆಗ ಶುಭಾ ಅವರು ’ ಮುಂಬೈನಲ್ಲಿರುವ ನನ್ನ ಯಶವಂತ ಕಾಕಾ ಇವತ್ತು ತೀರಕೊಂಡರು ಅಂತ ತುಂಬಾ ಬೇಜಾರು ಪಟ್ಟುಕೊಂಡರಂತೆ.ಅಷ್ಟೊಂದು upset ಆಗಿದ್ದನ್ನು ಇದೇ ಮೊದಲ ಸಲ. ಅವರಿಬ್ಬರೂ ತುಂಬಾ ಕ್ಲೋಸ್ ಆಗಿದ್ದರ್ಂತೆ. ಅವರು ಕನ್ದಡ ದಲ್ಲಿ ಬರೀತಿದ್ರು’ ಅಂತೆಲ್ಲ ಶೇರ್ ಮಾಡಿದರಂತೆ.
ಎಲ್ಲರೂ ಇಲ್ಲಿ especially ಕರ್ನಾಟಕದ literary circle ನಲ್ಲಿ ಅವರನ್ನು ತುಂಬಾ ಮಿಸ್ ಮಾಡ್ತಿದ್ದಾರೆ ಅವರ ಬಗ್ಗೆ ಹಿರಿಯ ಕಿರಿಯ ಲೇಖಕರೆಲ್ಲ ಬರಹಗಳನ್ನು ನ್ಯುಸ್ ಪೇಪರ್ ನಲ್ಲಿ ಹಾಕಿದ್ದಾರೆ ಅಂತೆಲ್ಲ ಹೇಳಿ , ನನ್ನ ಬ್ಲಾಗ್ ನಲ್ಲಿ ಎಮ್ ಎಸ್ ಶ್ರೀರಾಮ್ ಅವರ ಬ್ಲಾಗ್ ಕೊಂಡಿ ಕೊಟ್ಟಿದ್ದನ್ನು ಹೇಳಿದೆ. ಅದಕ್ಕೆ ಅವಳು ’ಇಲ್ಲ ನನ್ನ ಫ್ರೆಂಡ್ ಇಲ್ಲಿ ಯು ಎಸ್ ನಲ್ಲಿ ಹಲವಾರು ವರ್ಷಗಳಿಂದ ಇರುವುದರಿಂದ ಕನ್ನಡ ಓದಲು ಬರುವುದಿಲ್ಲ, ಮಾತನಾಡಿದರೆ ಸ್ವಲ್ಪ ಅರ್ಥ ಆಗುತ್ತೆ, ಮನೆಯಲ್ಲಿ ಅವರು ಕೊಂಕಣಿ ಮಾತನಾಡುವುದು ಅಂದಳು. ನನಗೆ ದೀಪಾ ಗಣೇಶ ’ದ ಹಿಂದು’ ದಲ್ಲಿ ಅಮೂರ ರ ಬರಹ ಟ್ರಾನ್ಸ್ಲೇಟ್ ಮಾಡಿ ಹಾಕಿದ್ದು ನೆನಪಾಗಿ ನನ್ನ ತಂಗಿಗೆ ಹೇಳಿದೆ. ’ಪ್ಲೀಸ್ ಅದರ ಲಿಂಕ್ ಕಳಿಸ್ತೀಯಾ ಅವರಿಗೆ ಖುಶಿ ಆಗುತ್ತೆ ಅಂದಳು’ ಅದರಲ್ಲಿ ಚೆಂದ್ದ ಕೆಲವು ಬ್ಲ್ಯಾಕ್ & ವೈಟ್ ಫೋಟೊಗಳಿದ್ದಾವೆ ಅಂದೆ. ಲಿಂಕ್ ಹುಡುಕಿ ತಂಗಿಗೆ ಮೈಲ್ ನಲ್ಲಿ ಕಳುಹಿಸಿದೆ. ಅವಳ ಫ್ರೆಂಡ್ ಗೆ ಕಳುಹಿಸಲು. ಹಾಗೆ ನಿಮ್ಮ ಜತೆ ಶೇರ್ ಮಾಡ್ತಾ ಇದ್ದೇನೆ.



ಕೆಲವರು ಬರಹದ ಮೂಲಕ ಎಷ್ಟು ಆಪ್ತರಾಗುತ್ತಾರಲ್ಲವೇ?

April 8, 2014

ಈ ಯುಗಾದಿಯ ಕತೆ

ಇದೇನಪ್ಪ ರಾಮನವಮಿಯಂದು ಯುಗಾದಿ ಪೋಸ್ಟ್ ಅಂದುಕೊಂಡ್ರಾ ಮತ್ತೆ? ಯುಗಾದಿಗೆ ವಿಶ್ ಮಾಡುತ್ತಾ ಎರಡು ಮೈಲ್ ’ಈ ಯುಗಾದಿಗೆ ಏನು ಸ್ಪೇಶಲ್, ಯಾರನ್ನು ಊಟಕ್ಕೆ ಕರೀತಾ ಇದ್ದೀರ” ಅಂತ ಕೇಳಿದ್ದವು.
ಯುಗಾದಿಗೆ ಒಂದೆರಡು ದಿನ ಮುಂಚೆ ತೀರ್ಥಹಳ್ಳಿಯ ನಮ್ಮ ತೋಟದಲ್ಲಿ ಬೆಂಕಿ ಬಿದ್ದು ಸುಮಾರಷ್ಟು ಹಾನಿಯಾಯಿತು. ರಾಯರು ತೀರ್ಥಹಳ್ಳಿಗೆ ಹೋಗುವವರಿದ್ದರು. ಆದ್ದರಿಂದ ನಾವೇ ಮೂರು ಜನ ಒಂದು ಅನ್ನ ಸಾರು ಒಂದು ಸ್ವೀಟ್ ಮಾಡಿ ಹಬ್ಬ ನಿಪಟಾಯಿಸುವಾ ಅಂತ ಇದ್ವಿ. ಆದರೆ ಮನೆ ಗೃಹಪ್ರವೇಶಕ್ಕೆ ಕರೆದ ಮಿತ್ರರೊಬ್ಬರು, ಆಗ ಹುಷಾರಿಲ್ಲದೆ ಊರಿಗೆ ಹೋಗಿ ಅಲ್ಲಿಂದಲೇ ಫೋನ್ ಮಾಡಿದಾಗ, ಇರಲಿ ಬಿಡಿ ಡಾಕ್ಟರ್ ಹತ್ತಿರ ಎಲ್ಲ ಚೆಕ್ ಅಪ್ ಮಾಡಿಸಿ, ಆರಾಮಾಗಿ ಬೆಂಗಳೂರಿಗೆ ಬಂದ ಮೇಲೆ ಬನ್ನಿ. ಯುಗಾದಿಗೆ ಬನ್ನಿ ಅಂತ ಹೇಳಿದ್ದೆ. ನಿರಂತರ ಸಂಪರ್ಕದಲ್ಲಿರುವ ಅವರು, ಅವರ ಗಾಯಕ ಮಿತ್ರರನ್ನು ನಮ್ಮನ್ನು ಪರಿಚಯಿಸಬೇಕೆಂದಿದ್ದರು. ಅಷರಲ್ಲೇ ಮಿತ್ರರ ಮಿತ್ರರು ಅವರ ಗುರುಗಳನ್ನು ವಂದಿಸುವ ಒಂದು ಸುಂದರ ಸಂಗೀತದ ಸಂಜೆಯನ್ನು ನಾವು ಅಸ್ವಾದಿಸುವಮ್ತೆ ಮಾಡಿದರು. ಅಲ್ಲಿ ಪರಿಚಯ ಆದ ಅವರು ಅವರ ಮದುವೆಯ ಆಮಂತ್ರಣ ಕೊಡಲು ಮನೆಗೇ ಬರುವರೆಂದು ಹೇಳಿದರು. ಅವರಿಗೂ ಯುಗಾದಿಗೆ ಆಹ್ವಾನವೀಯುತ್ತ , ಏನಿದ್ದರೂ ಪುನ: ಫೋನ್ ಮಾಡಿ ತಿಳಿಸುತ್ತೇನೆಂದು ಹೇಳಿದ್ದೆ. ಯುಗಾದಿಯ ಮುಂಚಿನ ದಿನ ನನ್ನ ಸ್ನೆಹಿತರು ಫೋನ್ ಮಾಡಿದಾಗ ಹೀಗ್ ಹೀಗೆ, ಶ್ರೀಕಾಂತ ತುಮಕೂರುನಿಂದ ತೀರ್ಥಹಳ್ಳಿಗೆ ಹೋಗಬಹುದು, ನಾವು ಹಬ್ಬ ಗ್ರಾಂಡ್ ಆಗಿ ಮಾಡಲ್ಲ’ ಅಂದು ’ಏನು ಮಾಡುತ್ತೀರಿ, ಯಾರ ಮನೆಗೆ ಊಟಕ್ಕೆ ಹೋಗುತ್ತೀರಿ ಅಂತ ಬೇರೆ ಕೇಳಿದೆ. ಅದಕ್ಕೆ ಅವರು ’ಯಾರೂ ಊಟಕ್ಕೆ ಕರೆದಿಲ್ಲ ಯಾರದಾದ್ರೂ ಮನೆಗೆ ಹೋಗೋದಪ್ಪ’ ಅಂದಾಗ ಛೆ ಬ್ಯಾಚಲರ್ ಹುಡುಗ್ರು, ನನಗೆ ಅಕ್ಕ ಅಂತೆಲ್ಲ ಕರೀತಾರೆ ಅಂತ ಕೆಟ್ಟದನಿಸಿ, ಅಯ್ಯೋ ಹಾಗಾದ್ರೆ ಇಲ್ಲಿಗೇ ಬನ್ನಿ, ಸಿಂಪಲ್ಲಾಗ್ ಒಂದು ಊಟ ಮಾಡೋಣ, ಒಂದೆ ಪ್ರಾಬ್ಲಮ್ ಅಂದ್ರೆ ನಾವು ಮೂರು ಜನ ಮಾತೇ ಆಡಲ್ಲ. ಸ್ವಲ್ಪ ಸುಧಾರಿಸಕೊಳ್ಳಬೇಕು’ ಅಂತ. ರಾಯರು ಇದ್ದರೆ ಅವರೆ ಮಾತಾಡ್ತಾರೆ......( ಅಂತ ಹೇಳಿ ಅಡಿಗೆ ಮನೆಗೆ ಹೋದಾಗ ಅಲ್ಲಿ ನಾಲ್ಕೇ ನಾಲ್ಕು ಬ್ರೆಡ್ ಸ್ಲೈಸ್ ಕಾಣಿಸಿತ್ತು. ರಾಯರು ಊರಲ್ಲಿಲ್ಲದಿದ್ದಾಗ ನಾವು ಬ್ರೆಡ್ ಬಿಸ್ಕತ್ ಮೇಲೆ ಜೀವನ ಸಾಗಿಸೋದು. ಹಿ ಹಿ ಹಿ.).....ಈ ವಿಷಯದ ಬಗ್ಗೆ ಮುಂದೆ ಬರೀತೇನೆ. ಸ್ವಲ್ಪ ಟ್ರ್ಯಾಕ್ ಚೆಂಜ್!
ಅಲ್ಲಿ ತೋಟದಲ್ಲಿ ಬೆಂಕಿ ಬಿದ್ದಾಗ ಪಕ್ಕದ ತೋಟದವರು ಫೋನ್ ಮಾಡಿ ಹೇಳಿದರು. ನಮ್ಮ ತೋಟದ ಉಸ್ತುವಾರಿ ನೋಡಿಕೊಳ್ಳುವ ಪುಟ್ಟರಾಜು ಕುಟುಂಬ ಹಬ್ಬಕ್ಕೆಂದು ಅವರ ಉರಾದ ಹಿರಿಯೂರಿಗೆ ಹೋಗಿದ್ದರು. ಶ್ರೀಕಾಂತ ಇಲ್ಲಿಂದಲೇ ತೀರ್ಥಹಳ್ಳಿಯ ಫೈರ್ ಇಂಜೀನ್ ಗೆ ಫೋನ್ ಮಾಡಿದರು. ಆದರೆ ಅಲ್ಲಿರುವ ಒಂದೇ ಫೈರ್ ಇಂಜಿನ್ ಕೋಣಂದೂರಿಗೆ ಹೋಗಿತ್ತು. ಆ ದಿನ ಸುಮಾರು ತೋಟಗಳಲ್ಲಿ ಬೆಂಕಿ ಬಿದ್ದಿದ್ದವಂತೆ. ಅಷ್ಟು ಸೆಕೆ/ಬಿಸಿಲು. ಕೊಪ್ಪ, ಶ್ರೀಂಗೇರಿಯ ಫೈರ್ ಎಂಜಿನ್ ಕೂಡ ದೂರ ದೂರದ ಹಳ್ಳಿಗೆ ಹೋಗಿದ್ದರಿಂದ ಶಿವಮೊಗ್ಗಕ್ಕೆ ಫೋನ್ ಮಾಡಿ ಅಲ್ಲಿಂದ ತೀರ್ಥಹಳ್ಳಿಗೆ ನಮ್ಮ ತೋಟಕ್ಕೆ ಬರಲು ಎರಡು ಮುಕ್ಕಾಲು ಗಂಟೆ. ಬಿಸಿಲಿಗೆ ಚೆನ್ನಾಗಿ ಒಣಗಿನ ಬಿದಿರಿನ ಮೆಳೆ ಬೆಂಕಿಗೆ ಆಹುತಿಯಾಯಿತು. ಅಂತೂ ಬೆಂಕಿ ನಂದಿಸಲು ಸುಮಾರು ಹರಸಹಾಸ ಪಡಬೇಕಾಯ್ತು. ನೆಂಟರು ಮಿತ್ರರೆಲ್ಲ ತುಂಬ ಸಹಕರಿಸಿದರು. ಅಷ್ಟೆ ಅಲ್ಲ whatsapp ನಲ್ಲಿ ಬೆಂಕಿಯ, ಅದನ್ನು ಆರಿಸುವ ಚಿತ್ರಗಳನ್ನು ಕಳುಹಿಸಿ ನಮ್ಮ ಹೃದಯಕ್ಕೆ ಬೆಂಕಿ ತಾಗುವಂತೆ ಮಾಡಿದರು :-(
ಊಟಕ್ಕೆ ಕರೆದಿದ್ದಾಯ್ತು. ಅಡಿಗೆ ಮನೆಗೆ ಹೋಗಿ ಮೊದಲಿಗೆ ಉದ್ದಿನ ಬೇಳೆ ನೆನೆಸಿದೆ. ಬಾಳೆ ಎಲೆ ಕಡಬು ಮಾಡಲಿಕ್ಕೆ. ಮಕ್ಕಳಿಗೆ ಜಯನಗರ್ ಫೋರ್ಥ್ ಬ್ಲಾಕ್ ಕೆ ಓಡಿಸಿದೆ ಶೆಣೈ ಸ್ಟೋರ್ಸ್ ನಿಂದ ಎಳೆ ಗೇರು ಬೀಜ ತರಲು. ತೊಂಡೆಕಾಯಿ+ ಎಳೆಗೇರುಬೀಜದ ಪಲ್ಯ  ಯುಗಾದಿಗೆ ನಮ್ಮಲ್ಲಿ ಮಸ್ಟ್.  ಮಕ್ಕಳು ಸಂತೆಗೆ ಹೋಗಿ ಹೂ, ಹಣ್ಣು, ತರಕಾರಿ ತಂದರು. ಹಬ್ಬದ ದಿನ ನಾನು ಬೆಳಿಗ್ಗೆ ಬೇಗ ಎದ್ದು ಮನೆಯೆಲ್ಲ ಶುಚಿ ಮಾಡಿ, ರಂಗೋಲಿ ಬರೆದು, ಮಾವಿನ ತೋರಣ ಕಟ್ಟಿದೆ. ದೇವರಿಗೆ ದೀಪ ಕೂಡ ನಾನೇ ಹಚ್ಚಿದೆ. ಹೊಸ ಪಂಚಾಂಗ್ ಮೊದಲೆ ತಂದಿದ್ದಿತ್ತು. ಅದನ್ನು ದೇವರ ಮುಂದಿಟ್ಟೆ. ಅಡಿಗೆ ಎಲ್ಲ ಮುಗಿಸುವಷ್ಟರಲ್ಲಿ ರಾಯರು ಹಳ್ಳಿಯಿಂದ ಫೋನ್ ಮಾಡಿದರು. ತೀರ್ಥಹಳ್ಳಿಯಲ್ಲಿ ಅವರ ಕಸಿನ್ ಎಲ್ಲ ಮ್ಯಾನೇಜ್ ಮಾಡಿದ್ದಾರೆ ನಾನೇನೂ ಅರ್ಜೆಂಟ್ ಹೋಗುವ ಪ್ರಮೇಯ ಇಲ್ಲ’ ಅಂತ. ಹಾಗಾದರೆ ಬೇಗ ಬನ್ನಿ , ಸ್ನೇಹಿತರಾದ ’ರ’ ಮತ್ತು ”ನ’ ಬರುತ್ತಿದ್ದಾರೆಅಂತ ಖುಶಿಯಿಂದ ಕುಣಿಯೋದೊಂದೆ ಬಾಕಿ. ಅದಕ್ಕೆ ರಾಯರು, ’ಇಲ್ಲ ನಾವು ಬರುವುದು ನಾಲ್ಕು ಗಂತೆಯಾಗುತ್ತೆ, ಪಾಪ ಅವರನ್ನು ಕಾಯಿಸುವುದು ಬೇಡ’ ಅಂದರು.
ಹೇಳಿದ ಟೈಮ್ ಗೆ ಸರಿಯಾಗಿ ಬಂದರು ’ರ’ ಮತ್ತು ’ನ’. ಗಡಿಬಿಡಿಯಲ್ಲಿ ಅವರಿಗೆ ವಿಶ್ ಮಾಡಲು ಮರೆತು ಹೋಯ್ತು. ಊಟ ಬಡಿಸುವಾಗ ಇಬ್ಬರಿಗೂ ಯುಗಾದಿಯ ಶುಭಾಶಯಗಳನ್ನು ಹೇಳಿದೆ.
ಆ ದಿನದ ಮೆನ್ಯೂ:
ಬೇವು ಬೆಲ್ಲ with lots of ಬೆಲ್ಲ, ತೊಂಡೆಕಾಯಿ+ ಎಳೆಗೇರುಬೀಜದ ಪಲ್ಯ, ಬೀನ್ಸ್ ಪಲ್ಯ, ಸೌತೆಕಾಯಿ ಪಚ್ಚಡಿ, ದಪ್ಪಮೆಣಸಿನ ಬೋಂಡಾ, ಬಾಳೆಲೆ ಕಡುಬು, ಚಟ್ನಿ, ಅನ್ನ, ತೊವ್ವೆ, ಸಾರು, ಸಾಬಕ್ಕಿ ಖೀರು, ಬೇಳೆ ಹೋಳಿಗೆ with home made ತುಪ್ಪ, ಮಸಾಲಾ ಮಜ್ಜಿಗೆ :-) ಅಷ್ಟೆ. ನಾಲ್ಕು ಐಟಮ್ ಕಡಿಮೆ.
ಸರಿ ಈಗ ಆ ಬ್ರೆಡ್ ಸ್ಲೈಸ್ ಕಡೆ ಹೊರಡುವ?? ಅದರಿಂದ ಏನಾದರೂ ಹೊಸ ಡಿಶ್ ಮಾಡುವ ಅಂದುಕೊಂಡು ಅದರ ಜಾಮೂನು ಮಾಡಿದೆ. ಇಲ್ಲ ಅದನ್ನು ಬಂದ ಮಿತ್ರರಿಗೆ ನೀಡಲು ಮುಜುಗರ ಆಯ್ತು.
ಮೊದಲಿಗೆ ಬ್ರೆಡ್ ಸ್ಲೈಸ್ ಮುಳುಗುವಷ್ಟು ಹಾಲು ಹಾಕಿದೆ. ಮನೆಯ ಕಸ ಗುಡಿಸಿ ಬರುವಷ್ಟರಲ್ಲಿ ಅದು ಮೆತ್ತಗಾಯ್ತು. ಅದಕ್ಕೆ ಒಂದು ಟೀ ಸ್ಪೂನ್ ರವೆ, ಸ್ವ್ಲಲ್ಪ ಸೋಡಾ ಪುಡಿ, ಒಂದೆ ಟೇಬಲ್ ಸ್ಪೂನ್ ಮೈದಾ, ಒಂದು ಟೇಬಲ್ ಚಮಚ ಮೊಸರು ಬರೆಸಿ. soft dough ಮಾಡಿ ಒದ್ದೆ ಬಟ್ಟೆಯಿಂದ ಮುಚ್ಚಿಟ್ಟು ಮನೆಯೆಲ್ಲ ಒರೆಸಿ ಬಂದೆ. ಆ ಮೇಲೆ ಆ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಟ್ಟು ಸಕ್ಕರೆ ಸಿರಪ್ ಮಾಡಿ ಅದಕ್ಕೆ ಏಲಕ್ಕಿ ಪುಡಿ ಬೆರೆಸಿದೆ. ಮಾಡಿಟ್ಟ ಉಂಡೆಗಳನ್ನು ಎಣ್ಣೆಯಲ್ಲಿ ಕರಿದು ಸಕ್ಕರೆ ಪಾಕಕ್ಕೆ ಹಾಕಿದೆ. ಮಕ್ಕಳಿಗೆ ಫೋನಾಯಿಸಿ ವ್ಯಾನಿಲ್ಲ ಐಸ್ ಕ್ರೀಮ್ ತರಿಸಿದೆ. ಮಧ್ಯಾಹ್ನ ಊಟ ಆದಮೇಲೆ ಈ ಜಾಮೂನಿನ ಮೇಲೆ ಐಸ್ ಕ್ರೀಮ್ ಹಾಕಿ ತಿಂದೆವು. ನಿಹಾರಿಕಾಗೆ ತುಂಬ ಇಷ್ಟ ಆಗಿ, ನಾಳೆ ನಿನ್ನ ಫ್ರೆಂಡ್ಸ್ ಗೂ ಸರ್ವ್ ಮಾಡು. ಎಮ್ ಟಿ ಆರ್ ಗಿಂತ ಈ ಜಾಮೂನೇ ಚೆನ್ನಾಗಿದೆ ಅಂದ್ಲು. :-)






ಹಬ್ಬದ ದಿನ ರಾಯರು  ಮತ್ತು ಅವರ ಮಿತ್ರರು ಮನೆಗೆ ತಲುಪಿದಾಗ ನಾಲ್ಕು ಕಾlu ಆಗಿತ್ತು . ಆಮೇಲೆ ಸ್ನಾನ ಒಂದು ಮಿನಿ ಪೂಜೆ ಆದಮೇಲೆ ಊಟ. ನಾನು ಮಜ್ಜಿಗೆ ಮಾತ್ರ ಕುಡಿದು ಸೀದಾ ರಾತ್ರಿ ನೇ ಊಟ ಮಾಡಿದ್ದು. ಮಿತ್ರರು ಮನೆಗೆ ಹೋಗಿ ನಿದ್ದೆ ಹೊಡೆದು, ಸಂಜೆ ಫೋನ್ ಮಾಡಿ ’ಚೆನ್ನಾಗಿತ್ತು ಅಡಿಗೆ’ ಅಂದಾಗ ಖುಶಿಯೇನೋ ಆಯ್ತು. ಆದರೆ ರಾತ್ರಿ ಕಡಬು ಚಟ್ನಿ ತಿನ್ನುವಾಗ ಸಖತ್ ಉಪ್ಪುಪ್ಪು ಆಗಿದ್ದು ಗೊತ್ತಾಗಿ ಛೆ! ಪಾಪ ಏನೂ ಅನ್ನದೇ ತಿಂದುಬಿಟ್ರು ಪಾಪ ಅನ್ನಿಸಿತು:-(
ಅವರು ತುಂಬಾssss ಚೆನ್ನಾಗಿದೆ ನಿಮ್ಮ ಮನೆ ಅಂದಿದ್ದು ತುಂಬಾ ಅಂದ್ರೆ ತುಂಬಾ ಖುಶಿ ಆಯ್ತು.
ಅಷ್ಟೆ ಕತೆ. ಸಾಕಾ??!! :-)
(ಅಮ್ಮ, ಯುಗಾದಿ ಮುಗಿದು ಅದೆಷ್ಟೊ ದಿನ ಆದ ಮೇಲೆ ಬರಿತಿದ್ದಿಯಾ ಅಂತ ಮಾಲವಿಕಾ ಉವಾಚ’ ಹೌದು ಒಂದು ಸೋಂಬೇರಿತನ, ಇನ್ನೊಂದು ಹದಿನಾಲ್ಕನೇ ತಾರೀಕಿಗೆ ಸೌರಮಾನ ಯುಗಾದಿ......ಹಾಗಾಗಿ ಇನ್ನೂ ಕೆಲವೇ ದಿನಕ್ಕೆ ಯುಗಾದಿಯೇ ತಾನೇ??ಅದಕ್ಕಿಂತ ಮೊದಲೇ ಬರೆದೆ ಅಲ್ವಾ  ಮತ್ತು ನನ್ನ ಬ್ಲಾಗ್ ಹೆಸರೆ ನೆನಪಿನ ಸಂಚಿಯಲ್ಲವಾ’ಅಂತ ಹೇಳಿದೆ ಅವಳಿಗೆ. ಅವಳು whew, whatever, sorry i asked ಅಂದ್ಲು....)
:-) :-)