ನಮ್ಮ ಕಿರಾಣಿ(grocery) ಅಂಗಡಿಯವನು- ಶ್ರಿ ವೆಂಕಟೇಶ್ವರ buy and save , ಸಂಕ್ರಾಂತಿ ಹಬ್ಬಕ್ಕೆ ಒಂದು ವಾರ ಇದೆ ಎನ್ನುವಾಗ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು , ಪುಟ್ಟ ಪುಟ್ಟ ಪ್ಲ್ಯಾಸ್ಟಿಕ್ ಡಬ್ಬಿಗಳನ್ನು ಅಂಗಡಿಯ ಮೆಟ್ಟಿಲಿನ ಮೇಲೆ ಒಂದು ಮರದ ಚಚೌಕಾರದ ಟೇಬಲ್ ಇಟ್ಟು ಮಾರುತ್ತಾನೆ. ನಾನು ಯಾವತ್ತು ಹಬ್ಬದ ಮುನ್ನಾ ದಿನ ಸಂಜೆ ಹೋಗಿ ಎಳ್ಳು ಬೆಲ್ಲ ಖರೀದಿಸುತ್ತೇನೆ. ಹಿಂದಿನ ವರ್ಷ ಹೀಗೆ ರಶ್ ನಲ್ಲಿ ನನ್ನ ಸರದಿಗಾಗಿ ನಾನು ನಿಹಾರಿಕಾ ಕಾಯ್ತಾ ಇದ್ವಿ. ನನ್ನ ಎದುರಿಗೆ ವಯಸ್ಸಾದ ಹೆಂಗಸೊಬ್ಬರು ನಿಂತಿದ್ದರು. ಉಟ್ಟಿದ ಸಿಲ್ಕ್ ಸೀರೆ ಸುಮಾರು wash ಕಂಡಿದ್ದು ಅಲ್ಲಲ್ಲಿ ಬಣ್ಣ ಮಾಸಿತ್ತು. ಕಿವಿಯಲ್ಲಿನ ವಜ್ರದ ಬೆಂಡೋಲೆ ಫಳ ಫಳ ಹೊಳೆಯುತ್ತಿತ್ತು. ಒಂದಾನೊಂದು ಕಾಲದಲ್ಲಿ ಆರ್ಥಿಕವಾಗಿ ಚೆನ್ನಾಗಿದ್ದಿರಬೇಕು. ಅವರು ಒಂದು ಪ್ಯಾಕೆಟ್ ಎಳ್ಳು ಬೆಲ್ಲ ಕೊಂಡು ಅದರ ಕ್ರಯ ಕೇಳಿದರು. ಅಂಗಡಿಯ ಹುಡುಗಿ 25 ರೂ ಅಂತ ಹೇಳಿದಳು. ಅವರು ಪರ್ಸ್ ತೆರೆದಾಗ ಅದರಲ್ಲಿದ್ದುದೇ 20 ರೂ ನೋಟು. ಅಂಗಡಿಯವನು ಚಿಕ್ಕ ಪ್ಯಾಕೆಟ್ ಇಡುವುದಿಲ್ಲ. ಸ್ವಲ್ಪ ಹೊತ್ತು ಆ ಅಜ್ಜಿ ಸುಮ್ಮನೇ ನಿಂತರು. ಆಮೇಲೆ ಪ್ಯಾಕೆಟ್ 20 ರೂ ಗೆ ಕೊಡುತ್ತಿಯಾ ಅಂತ ಆ ಹುಡುಗಿಗೆ ತುಂಬ ದೀನರಾಗಿ ಕೇಳಿದಾಗ ನನಗೆ ಕುರುಳು ಚುರ್ ಅಂದಿತು. ನಾನು ಹುಡುಗಿ ಬಳಿ ಸಾರಿ, ಅಜ್ಜಿಗೆ ಕೇಳಿಸದಹಾಗೆ- ಕೊಟ್ಟು ಬಿಡಿ 5 ರೂ ನಾನು ಕೊಡುತ್ತೇನೆ ಅಂದೆ. ಹುಡುಗಿ ಆ ಪ್ಯಾಕೆಟ್ ಆ ಅಜ್ಜಿಗೆ ಕೊಟ್ಟರು, ಅಜ್ಜಿ ಸಂತಸದಿಂದ ಆ ಹುಡುಗಿಗೆ ’ನಿನ್ನ ಹೊಟ್ಟೆ ತಣ್ಣಗಿರಲವ್ವ’ ಅಂತ ಹರಸಿ ಹೊರಟುಹೋದರು. ನನಗಂತೂ ಸಂಕ್ರಾಂತಿ ಹಬ್ಬ ಆಗಲೇ ಮಾಡಿದಷ್ಟು ಸಂಭ್ರಮ. ನೀಹಾರಿಕಾ ನನಗೆ ಅಲ್ಲೆ ಒಂದು hug ಸಹ ಕೊಟ್ಟಳು. ನನ್ನ ಖರೀದಿ ಎಲ್ಲ ಮುಗಿಸಿ ನಾನು ಮನೆಗೆ ಬಂದೆ.
ಮರು ದಿನ ಬೇರೆ ಎನೋ ಸಾಮಾನು ಬೇಕಾದ್ದರಿಂದ ಪುನಃ buy & save ಗೆ ಹೋದೆ. ಅಂಗಡಿ ಮಾಲೀಕ ’ಮೇಡಂ, ನಿನ್ನೆ ನೀವು ಐದು ರೂಪಾಯಿ ಆ ಅಜ್ಜಿ ಪರವಾಗಿ ಕೊಟ್ಟಿದ್ದನ್ನು ನಾನು ನೋಡ್ದೆ. ನನಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಈ ಕೆಲಸ ನಾನೇ ಮಾಡಬಹುದಿತ್ತು. 5 ರೂ ನಿಂದ ನಾನೇನೂ ಬಡವನಾಗ್ತಿರಲಿಲ್ಲ. ತೆಗೊಳ್ಳಿ ಈ 5 ರೂ., ತಪ್ಪಾಗಿ ಭಾವಿಸಬೇಡಿ. ನನಗೆ ಸಮಾಧಾನ ಆಗುತ್ತೆ’ ಅಂತ ಹೇಳಿದರು.
ಮಜವಾಗಿತ್ತಲ್ಲವ ನನ್ನ ಹಬ್ಬ???
:-)
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಗಳು