ಸಂಜೆ ಕೆಲಸ ಮುಗಿಸಿ ಟಿ ವಿ ಎದುರು ಕುಳಿತುಕೊಂಡು ಅಕ್ಕಿ ಆರಿಸುತ್ತ ಅತ್ತೆ ಸೊಸೆ ಜಗಳದ ದಾರಾವಾಹಿ ನೋಡುತ್ತ ಕುಳಿತಿದ್ದಳು ಕರುಣಾ. ಅಷ್ಟರೊಳಗೆ ಗಂಡ ಮನೆಗೆ ಬಂದನೆಂದು ಅಡಿಗೆ ಮನೆಗೆ ಹೋಗಿ ಚಹಾ ಗೆ ನೀರಿಟ್ಟಳು. ಬಂದ ಮೇಲೆ ಯಾವಾಗಲೂ ಏನಾದರು ಕಛೇರಿಯ ವಿಷಯ ತೆಗೆದು ಕರುಣಾಳಿಗೆ ಇಷ್ಟ ವಿದೆಯೋ ಇಲ್ಲವೋ ಮಾತನಾಡುತ್ತ ಹೋಗುವುದು ಕರುಣಾ ಕೇಳುತ್ತ, ಕೆಲವೊಮ್ಮೆ ಸೂಕ್ತ ಪ್ರತಿಕ್ರಿಯೆ ನೀಡುತ್ತಿರುವುದು ಇತ್ತೀಚಿನ ಪರಿಪಾಠ. ನಂತರ ಊಟ ಮಾಡುತ್ತ ತಂದೆ- ಮಗಳ ಹರಟೆ, ಮಾತು ಕತೆ, ಅವರ ದಿನಚರಿ ಬಗ್ಗೆ ಅವರು ಮಾತನಾಡುವುದು ಇವಳು ಕೇಳುವುದು- ಇಂತದೆಲ್ಲ ನಡೆಯುತ್ತಿದ್ದು ಯಾಕೋ ಒಂದು ವಾರದಿಂದ ಪೂರ್ತಿ ಸ್ತಬ್ದವಾಗಿತ್ತು. ಸೂಕ್ಷ್ಮ ವಾಗಿ ಕರುಣಾ ಕೇಳಿದಾಗಲೂ ಸರಿಯಾದ ಉತ್ತರ ಬರದೆ ಕಛೇರಿಯ ತಲೆ ಬಿಸಿ ಏನೋ ಅಂದು ಕೊಂಡರೂ ಮನಸ್ಸಿನಲ್ಲಿ ಎನೋ ಅನುಮಾನ.
ಚಹಾ ಮಾಡಿ ಕೊಟ್ಟು ಅವರ ಮುಖ ನೋಡಿದಾಗ ಮುಖ ತೀರಾ ಕಳೆಗುಂದಿತ್ತು. "ಯಾಕೆ ರೀ ಹುಷಾರಿಲ್ಲವಾ, ಮುಖ ತುಂಬ ಇಳಿದಿದೆ’ ಅಂದಾಗ ಚಹಾ ಬಟ್ಟಲು ಅಲ್ಲೇ ಟಿಪಾಯ್ ಮೇಲಿಟ್ಟು ಕರುಣಾಳ ಕೈ ಗಟ್ಟಿ ಹಿಡಿದು ಅಳಲು ಆರಂಭಿಸಿದನು ಅವಳ ಗಂಡ. ಏನಾಯಿತೆಂದು ಗೊತ್ತಿಲ್ಲದೆ ಕರುಣಾಳ ಎದೆ ಡವ ಡವ ಹೊಡೆದುಕೊಂಡು ಕೈ ಕಾಲು ತಣ್ಣಗಾದವು ’ರೀ ಏನಾಯ್ತು ಹೇಳ್ರಿ’ ಅಂದಳು ಧೈರ್ಯ ತಂದು ಕೊಂಡು
ಪ್ಲೀಸ್ ನನಗೆ ಬಿಡುಗಡೆ ಕೊಟ್ಟುಬಿಡು. ನಾನು ಬೇರೊಬ್ಬಳನ್ನು ಪ್ರೀತಿಸಿದ್ದೇನೆ ಅಂದಾಗ ತಲೆ ತಿರುಗಿದಂತಾಯಿತು ಕರುಣಾಗೆ. ಹೊರಗಡೆ ಎಫೈರ್ ಇದ್ದದ್ದು ಕರುಣಾಗೆ ಸಂಶಯ ಇತ್ತು ಆದರೂ ಕಾರಣಾಂತರಗಳಿಂದ ಸುಮ್ಮನಿದ್ದಳು. "ನಾನು ಆಕೆಯನ್ನು ಆರು ತಿಂಗಳಿಂದ ಬಲ್ಲೆ. ಈಗ ಅವಳು ಗರ್ಭಿಣಿ. ನನಗೆ ಆಕೆಯನ್ನು ಬಿಟ್ಟಿರಲಾಗುವುದಿಲ್ಲ’ ದಯವಿಟ್ಟು ನನ್ನನ್ನು ಈ ಮದುವೆಯಿಂದ ಬಿಡುಗಡೆಗೊಳಿಸು’ ನಿನಗೆ ಅನ್ಯಾಯವಾಗುತ್ತದೆ ನಿಜ. ನಾನು ಹೀಗೆ ಮುಂವರೆಸುವ ಅಂತಿದ್ದೆ, ಈಗ ಹೇಗೆ ನಡೆದುಕೊಂಡು ಹೋಗುತ್ತಿದೆಯೋ ಹಾಗೆ ನಡೆದುಕೊಂಡು ಹೋಗಲಿ ಎಂದು ಇಚ್ಛಿಸುತ್ತಿದ್ದೆ. ಆದರೆ ಅವಳಿಗೆ ಅವಳ ಮಗುವಿನ ಭವಿಷ್ಯದ ಚಿಂತೆ’ ಇದನ್ನೆಲ್ಲ ಕೇಳಿ ಕರುಣಾ ಅವಾಕ್ಕಾದಳು. ಅರೇ ಅಳಬೇಕಾದವಳು ನಾನು. ನನ್ನ ಭವಿಷ್ಯ ಚಿಂತಿಸಿ. ಇದೇನು ಉಲ್ಟಾ ಆಗ್ತಿದೆ ಇಲ್ಲಿ.
"ನಿನ್ನ ಬಳಿ ನಾನು ಯಾವತ್ತೂ ಏನೂ ಕೇಳಿಲ್ಲ, ಆದರೆ ಇವತ್ತು ಕೈ ಮುಗಿದು ಬೇಡುತ್ತೇನೆ, ನನಗೆ ಅವಳ ಅಳು ನೋಡಲು ಆಗುತ್ತಿಲ್ಲ". ಅರೇ ನಾನು ಯಾವತ್ತದ್ರೂ ಇವರ ಬಳಿ ಏನಾದರೂ ಪಡೆದುಕೊಂಡಿದ್ದೀನಾ?? ಮನೆ ಖರ್ಚಿಗೆ ಒಂದಿಷ್ಟು ದುಡ್ಡು ಕೊಡುತ್ತಿದ್ದರು. ಅದನ್ನು ಜೋಪಾನವಾಗಿ ದುಂದುವೆಚ್ಚ ಮಾಡದಂತೆ ಅದರಲ್ಲೂ ಉಳಿತಾಯ ಮಾಡಿ ಸಂಸಾರವನ್ನು ತೂಗಿಸುತ್ತಿದ್ದೆ. ನನ್ನ ಬಳಿ ಇರುವ ಸೀರೆ ಓಡವೆ ಬಹುತೇಕ ಅತ್ತೆ ಮನೆಯಿಂದ ಆಪ್ತೇಷ್ಟರ ಮದುವೆ ಮುಂಜಿಯಲ್ಲಿ ಕೊಟ್ಟಿದ್ದು. ನನ್ನ ಬಳಿ ಏನೂ ಇಲ್ಲ ಅಂದುಕೊಂದಿದ್ದೆ. ಅವರ ಬಿಡುಗಡೆಯ ದಾರಿ ನನ್ನಲ್ಲಿದೆಯೇ ಅಂತ ಒಂದು ಕ್ಷಣ ಚಿಂತಿಸಿದಳು. ಸ್ನಾನದ ಮನೆಗೆ ಹೋಗಿ ಸ್ವಲ್ಪ ಹೊತ್ತು ಅತ್ತಳು ಕರುಣಾ. ಆ ಮೇಲೆ ರಭಸದಿಂದ ತನ್ನ ಕಣ್ಣು ಮುಖವನ್ನು ಸ್ವಚವಾಗಿ ತೊಳೆದು. ಇದು self pity ಗೆ ಸಮಯವಲ್ಲ, ಮುಂದಿನದನ್ನು ಚಿಂತಿಸಬೇಕು. ಒಲ್ಲದ ಸಂಬಂಧ ಇಟ್ಟುಕೊಂಡು ಸಾಧಿಸುವುದಾದರೂ ಏನು? ರಾತ್ರಿ ಊಟ ಮಾಡುವಾಗ ಮಗಳಿಗೂ ಈ ವಿಷಯ ತಿಳಿಸಿದಳು. ಮಗಳು ಸ್ವಲ್ಪವೂ ಬೇಸರಿಸಿಕೊಳ್ಳಲಿಲ್ಲ.
’ಆಯ್ತು ವಿಚ್ಛೇದನ ಪ್ರತಿಗೆ ಸಹಿಹಾಕುತ್ತೇನೆ ಅಂದಾಗ ಅವರ ಮುಖ ಸಂತಸದಿಂದ ಅರಳಿದ್ದು ನೋಡಿ ಅವಳ ಹೃದಯ ಮುದುಡಿತ್ತು.
ಮರುದಿನ ಅವನು ಬೆಳಿಗ್ಗೆ ಎದ್ದು ಬೇಗ ಬೇಗ ತಯಾರಾಗಿ ತನ್ನ ಬಟ್ಟೆ ಬರೆ, ಕಛೇರಿಯ ಕಡತಗಳು, personal documents ಗಳನ್ನು ಮಧ್ಯಾಹ್ನದ ತನಕ ಜೋಡಿಸಿ , ’ಡಿವೋರ್ಸ್ ಪೇಪರ್ ಅನ್ನು ಪೋಸ್ಟ್ ಮೂಲಕ ಕಳುಹಿಸುತ್ತೇನೆಂದು, ಮಗಳು ನನ್ನ ಜತೆ ಇರುತ್ತಳೆಂದು ಹೇಳಿ, ಇನ್ನು ಈ ಮನೆಯಲ್ಲಿ ಏನೇನು ಉಳಿದಿದೆ ಅವೆಲ್ಲ ನಿನ್ನದು. ಹೇಗೆ ಬೇಕೋ ಹಾಗೆ ಉಪಯೋಗಿಸಿಕೋ ಅಂತ ಸಾಮನುಗಳನ್ನೆಲ್ಲ ಗಾಡಿಯಲ್ಲಿ ಹೇರಿ, ಒಂದುಸಲವೂ ಹಿಂದಿರುಗೆ ನೋಡದೆ ಹೊರಟಾಗ ಕರುಣಾಗೆ ಆದ ನೋವು ಅಷ್ಟಿಷ್ಟಲ್ಲ. ಅವರಿಗೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವುದು ಅಷ್ಟು ಸುಲಭವೆನಿಸಿತೇ? ನಾನೇನೂ ತಪ್ಪು ಮಾಡದೆ, ಜಗಳ, ಕಿರುಕುಳ ಕೊಡದೆ ಅವರು ಹೇಳಿದ್ದಕ್ಕೆಲ್ಲ ಗೋಣಾಡಿಸಿಕೊಂಡಿದ್ದರೂ ಅದು ಅವರಿಗೆ ಸಾಕಾಗಲಿಲ್ಲವೇ? ಬೇಡ ಬೇಡ ವೆಂದರೂ ಕಣ್ಣೀರು ಧೀಡಿರನೆ ದಾಳಿ ಮಾಡಿತು. ಮಗಳು ಕೂಡ ನನ್ನ ಬಳಿಯಲ್ಲಿರಲು ಇಚ್ಛಿಸಲಿಲ್ಲ. ಇನ್ನು ನನ್ನ ಜೀವನ ಹೇಗೆ ಸಾಗಿಸಬೇಕೆಂದು ನನ್ನ ಮುಂದೆ ಇರುವ ದಾರಿ. ನನ್ನ ಎಕೌಂಟ್ ನಲ್ಲಿ ಒಂದಿಷ್ಟು ಹಣ ಇದೆ. ಅದು ಮುಗಿಯುವ ಮುನ್ನಮುಂದಿನ ಜೀವನಕ್ಕೆ ದಾರಿ ಕಂಡುಕೊಳ್ಳಬೇಕು. ಕೂತು ತಿಂದರೆ ಕುಡಿಕೆ ಹಣ ಸಾಲದು....
......................................................................................................
ಕರುಣಾಳ ತಂದೆ ತಾಯಿಗೆ ಕಡು ಬಡತನ. ಆಕೆ ಕಲಿತದ್ದು ಬರೀ ಹತ್ತನೆ ತರಗತಿ. ಹೆಚ್ಚು ಓದಲು ಆಕೆಗೆ ಅವಕಾಶವೇ ಇರಲಿ. ದೂರದ ಸಂಬಂಧದಲ್ಲಿ ಮದುವೆಯಾಗಿ ಗಂಡನ ಮನೆಗೆ ಬಂದಳು. ಅದೂ ಅತ್ತೆಗೆ ಕಾಯಿಲೆ ಇದ್ದುದರಿಂದ ನೋಡಿಕೊಳ್ಳಲು ಹೆಣ್ಣು ದಿಕ್ಕು ಬೇಕೆಂದು. ಇದನ್ನು ಕರುಣಾಳಿಗೆ ಅವಳ ಮಾವ ಮನದಟ್ಟು ಮಾಡಿಯೇ ಅವಳಿಂದ ಮದುವೆಗೆ ಒಪ್ಪಿಗೆ ಪಡಕೊಂಡಿದ್ದು. ಹಾಗೂ ಮಗನೂ ಜವಾಬ್ದಾರಿಯಿಂದ ಇರಬಹುದು ಅಂತ ಅವರ ಆಶೆಯಿತ್ತು. ಅತ್ತೆ ಮಾವ ಇರುವುದು ಹಳ್ಳಿಯಲ್ಲಿ. ಕರುಣಳ ಗಂಡನಿಗೆ ದೂರದ ಪೇಟೆಯಲ್ಲಿ ಒಳ್ಳೆಯ ನೌಕರಿ. ವಾರಕ್ಕೊಮ್ಮೆ ಮನೆಗೆ ಬರಲು ಆಗುತ್ತಿತ್ತು. ಮದುವೆಯಾದ ಒಂದು ತಿಂಗಳು ತಪ್ಪದೆ ಪ್ರತಿ ವಾರ ಮನೆಗೆ ಬರುತ್ತಿದ್ದ ಅವಳ ಗಂಡ, ಆಮೇಲೆ ಕೆಲಸ, ಬಡ್ತಿಯ ನೆವ ಹೇಳಿಕೊಂಡು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಬರುವುದು ರೂಢಿಯಾಯಿತು. ಇದರಿಂದ ಕರುಣಾಳ ಮಾವ ತುಂಬ ನೊಂದುಕೊಂಡರು, ಕರುಣಾಳನ್ನು ಈ ಮನೆಯ ಸೊಸೆಯಾಗಿ ತಂದು ತಪ್ಪು ಮಾಡಿದ್ದೇನೇನೋ ಅಂತ.
ಇಷ್ಟರಲ್ಲೇ ಕರುಣಾಗೆ ಒಂದು ಹೆಣ್ಣು ಮಗಳು ಹುಟ್ಟಿದ್ದಲ್ಲದೇ ಅವಳ ಅತ್ತೆಯೂ ಕಾಲವಾದರು. ಮಗಳು ಶಾಲೆಗೆ ಹೋಗುವ ವಯಸ್ಸಾದಾಗ "ಈ ಹಳ್ಳಿ ಕೊಂಪೆಯಲ್ಲಿ ನನ್ನ ಜಾಣ ಮಗಳು ಬೆಳೆಯುವುದು ಬೇಡ’ ಅಂತ ಕರುಣಾಳ ಗಂಡ ಮಗಳನ್ನೂ ಕರೆದುಕೊಂಡು ಪೇಟೆ ಕಡೆ ನಡೆದು ಬಿಟ್ಟನು.
ಈಗ ಮನೆಯಲ್ಲಿ ಮಾವ ಮತ್ತು ಸೊಸೆ ಅಷ್ಟೆ. ಹಳ್ಳಿಯಲ್ಲಿ ತೋಟ ಗದ್ದೆ ಮಾತ್ರವಲ್ಲದೇ ಅವರದ್ದೆ ಕಿರಾಣಿ ಅಂಗಡಿ ಕೂಡ ಇತ್ತು. ಕರುಣಾ ಮನೆ ಕೆಲಸ ಎಲ್ಲ ಮುಗಿಸಿ ಮಾವನವರಿಗೆ ಅಂಗಡಿ ಕೆಲಸಗಳಲ್ಲಿ ನೆರವಾಗುತ್ತಿದ್ದಳು. ಅವಳು ಅಂಗಡಿ ನಿರ್ವಹಿಸುವುದನ್ನು, ಲೆಕ್ಕ ಮಾಡುವ ಚಾಕ ಚಕ್ಯತೆ ನೋಡಿ ಅವಳ ಮಾವನನವರಿಗೆ ಒಂದು ಉಪಾಯ ಹೊಳೆಯಿತು. ಅವಳನ್ನು ಊರಲ್ಲೇ ಇರುವ ಕಾಲೇಜಿಗೆ ಸೇರಲು ಪ್ರೆರೇಪಿಸಿದರು. ಅವಳು ಬಿ ಕಾಮ್ ಮಾಡಿ ಎಕೌಂಟ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಮತ್ತೇ ಮಾವನವರಿಗೆ ಅಂಗಡಿಯನ್ನು ಇನ್ನೂ ಚೆನ್ನಾಗಿ ನಿರ್ವಹಿಸುವಲ್ಲಿ ಹೊಸ ಹೊಸ ಐಡಿಯಾ ಅಳವಡಿಸುವುದರಲ್ಲಿ ಸಹಾಯ ಮಾಡುತ್ತಿದ್ದಳು. ಮಾವನವರ ಆರೋಗ್ಯ ಹದೆಗೆಡುತ್ತ ಹೋದ ಹಾಗೆ ಅವಳು ಅಂಗಡಿಯ ಪೂರ್ತಿ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಳು. ಮಾವನವರು ಸಾಯುವ ಮುಂಚೆ ಅವರ ಆಸ್ತಿಯನ್ನು ಅವಳ ಹೆಸರಿಗೆ ಬರೆದುಬಿಟ್ಟರು. ಅವಳು ಬೇಡ ಬೇಡ ಅಂದರು ಸಹ.." ನಿನಗೆ ಅನ್ಯಾಯ ಆಗಿದೆ. ಅವನ ಅಮ್ಮ ಅವನಿಗೆ ಒಬ್ಬನೆ ಗಂಡು ಮಗ ಎಂದು ತಲೆ ಏರಿಸಿ ಕೂರಿಸಿದ್ದು ಸ್ವಲ್ಪ ಹೆಚ್ಚೆ ಆಯಿತು, ಯಾಕೋ ಅವನಿಗೆ ತನ್ನವರಿಗಿಂತ ಪೇಟೆಯ ಆಕರ್ಷಣೆನೆ ಹೆಚ್ಚಾಯಿತು.’ ಅಂದಾಗ ಇಲ್ಲ ಮಾವ ನೀವು ಬೇಜಾರು ಮಾಡಬಾರದು. ಆದದ್ದೆಲ್ಲಾ ಆಯಿತು, ಮತ್ತೆ ನಮ್ಮ ಮನೆಯಲ್ಲಿದ್ದಾಗ ನಮಗೆ ಎರಡು ಹೊತ್ತಿನ ಊಟಕ್ಕೂ ತುಂಬಾ ತೊಂದರೆ ಆಗಿತ್ತು. ನಾನಿಲ್ಲಿ ಆರಾಮಾಗೆ ಇದ್ದೀನಿ’ ಅಂದಳು.
ಮಾವನವರು ತೀರಿಕೊಂಡ ಸಮಯ ಗಂಡ ಮಗಳು ಅತಿಥಿಗಳಂತೆ ಬಂದು ಹೋದರು. ಆಸ್ತಿ ಕರುಣಾಳ ಹೆಸರಿಗೆ ಆಗಿದ್ದು ಅವಳ ಗಂಡನಿಗೇನೂ ಬೇಜಾರು ಅಥವಾ ಸಿಟ್ಟು ಆಗಲಿಲ್ಲ, ಬದಲಿಗೆ ಖುಶಿಯೇ ಪಟ್ಟರು. ಅವಳೂ ಸಂಪೂರ್ಣವಾಗಿ ಕಿರಾಣಿ ಅಂಗಡಿ ನಡೆಸುವಲ್ಲಿ ವ್ಯಸ್ತಳಾದಳು. ಇದಾದ ಸ್ವಲ್ಪ ಸಮಯದ ನಂತರ ಪೇಟೆಯಲ್ಲಿ ಗಂಡನ ಕಛೇರಿಯಿಂದ ಟೆಲಿಗ್ರಾಮ್ ಬಂತು. ’ಯುವರ್ ಹಸ್ಬೆಂಡ್ ಸಿರೀಯಸ್ ಸ್ಟಾರ್ಟ್ ಇಮ್ಮಿಡಿಯಟ್ಲೀ’ ಅಂತ. ಅಂಗಡಿ ಕೆಲಸಗಳನ್ನು ಕೆಲಸಗಾರರಿಗೆ ಒಪ್ಪಿಸಿ ಸ್ವಲ್ಪ ದುಡ್ಡು ಹಿಡಿದುಕೊಂಡು ಗಂಡನ ಆಫಿಸ್ ಬಳಿ ಹೋದಳು ಕರುಣಾ. ಅಲ್ಲಿನ ಸಿಬ್ಬಂಧಿಗಳು ಆಕೆಗೆ ಅವಳ ಗಂಡನನ್ನು ಸೇರಿಸಿದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಜಾಂಡೀಸ್ ಕಾಯಿಲೆ ಗೊತ್ತಾಗದೇ ಉಲ್ಬಣಗೊಂಡು ತುಂಬಾ ಬಳಲಿದ್ದರು. ಆರು ತಿಂಗಳ ವಿಶ್ರಾಂತಿ ಮತ್ತು ಪಥ್ಯದ ಅಡುಗೆ ಹೇಳಿದ್ದರು ವೈದರು. ಮನೆಯಲ್ಲಿ ಶಾಲೆಗೆ ಹೋಗುವ ಮಗಳು. ನೋಡಿಕೊಳ್ಳಲು ಯಾರೂ ಇಲ್ಲವೆಂದು ಕರುಣಾಳಿಗೆ ಹೇಳಿ ಕಳುಹಿಸಿದ್ದರು.
ಕರುಣಾ ಈಗ ಇಲ್ಲೇ ಆದಳು. ಗಂಡನ ಆರೋಗ್ಯ ಪೂರ್ತಿ ಸರಿಯಾದ ಮೇಲೆ ಒಂದು ದಿನ ಅವರು ಅಚಾನಕ್ಕಾಗಿ ’ಊರಿನಲ್ಲಿರುವ ಆಸ್ತಿ ಅಂಗಡಿ ಮಾರಿ ಇಲ್ಲೇ ಇರಬಹುದಲ್ಲ’ ಎಂದು. ಕರುಣಾಳಿಗೆ ಖುಶಿ. ನನ್ನದೂ ಒಂದು ನಾರ್ಮಲ್ ಕುಟುಂಬ ಆಗ ಬಹುದು. ಗಂಡ ಮಗಳು ಮನೆ ಅಂತ ನಾನೂ ಖುಶಿಯಾಗಿರಬಹುದು ಅಂತ. ಮಗಳೇನೂ ಇವಳ ಜತೆ ಹೆಚ್ಚು ಮಾತಾಡ್ತಿರಲಿಲ್ಲ. ಈಗ ಅವಳು ಒಂಬತ್ತನೇಯ ತರಗತಿ. ಊರಿನಲ್ಲಿರುವ ಅಂಗಡಿ ತೋಟ ಎಲ್ಲ ಬೇರೆಯವರಿಗೆ ವಹಿಸಿ ಕೊಟ್ಟು ಅವಳು ಪೇಟೆಯಲ್ಲಿ ಆರಾಮಾಗಿದ್ದಳು. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಅವರ ಲಂಚ್ ಬಾಕ್ಸ್ ಗೆ ಅಡುಗೆ ಮಾಡಿದರೆ ಆಮೇಲೆ ದಿನವಿಡಿ ನಿಧಾನಕ್ಕೆ ತನ್ನ ಉಳಿದ ಕೆಲಸ ಬೊಗಸೆ ಮುಗಿಸುತ್ತಿದ್ದಳು. ಗಂಡ ಮಗಳ ಸಂಭಾಷಣೆಯಲ್ಲೇ ಅವಳಿಗೆ ಖುಶಿ. ಇವಳ ಜತೆ ಇಬ್ಬರೂ ಇಷ್ಟ ಇದ್ದರೆ ಮಾತನಾಡುತ್ತಿದ್ದರು ಇಲ್ಲದಿದ್ದರೆ ಇಲ್ಲ.
ಈಗ ಇದು...
ಬ್ಯಾಂಕ್ ಗೆ ಹೋಗಿ ತನ್ನ ಖಾತೆಯಲ್ಲಿ ದುಡ್ಡು ಎಷ್ಟಿದೆಯೆಂದು ನೋಡಿದಳು. ವಾಪಸ್ ಆಗುವಾಗ ಸೀರೆ ಅಂಗಡಿಯ ಮಾರವಾಡಿಯು ವಾಂಟಡ್ ಸೇಲ್ಸ್ ವುಮನ್ ಅಂತ ಬೋರ್ಡ್ ಹಾಕಿದ್ದು ನೋಡಿ ಕೂಡಲೆ ಅಲ್ಲಿ ಹೊಕ್ಕಳು. ಅವಳಿಗೆ ಏನನ್ನೂ ಆಲೋಚಿಸುವುದು ಬೇಡವಗಿತ್ತು. ಮಾರವಾಡಿ ಮತ್ತು ಅವನ ಹೆಂಡತಿ ಇವಳಿಗೆ ಕೂಲಂಕಷವಾಗಿ ಪ್ರಶ್ನಿಸಿ ಅವಳನ್ನು ಕೆಲಸಕ್ಕಿಟ್ಟುಕೊಂಡರು. ದೀಪಾವಳಿ ಹಬ್ಬ ಸನೀಹವಿತ್ತು. ಆಗ ಅವರಿಗೆ ವ್ಯಾಪಾರ ಜೋರು. ಹಿಂದಿನ ದಿನವಷ್ಟೆ ಜಗಳವಾಡಿಕೊಂಡು ಇಬ್ಬರು ಸೇಲ್ಸ್ ಗರ್ಲ್ ಕೆಲಸ ಬಿಟ್ಟು ಹೋಗಿದ್ದರು. ಹಾಗಾಗಿ ತುಂಬಾ ಏನೂ ವಿಚಾರ ಮಾಡದೆ ಕರುಣಾಳಿಗೆ ಕೆಲಸ ಕೊಟ್ಟರು. ತನ್ನ ಕೆಲಸಗಳನ್ನು ಕರುಣಾ ಚೆನ್ನಾಗಿಯೇ ನಿಭಾಯಿಸುತ್ತಿದ್ದಳು. ಸಂಬಳ ತುಂಬ ಕಡಿಮೆ ಕೆಲಸ ಹೆಚ್ಚಿದ್ದರೂ ಕರುಣಾಳಿಗೆ ಅದೇಬೇಕಿತ್ತು. ರಾತ್ರಿ ಮಲಗಿದ ಕೂಡಲೆ ನಿದ್ದೆ ಬರುವಷ್ಟು ದೇಹ ಬಳಲಿಸುತ್ತಿದ್ದಳು. ಮನೆ ಸುಮಾರಾಗಿ ದೊಡ್ಡದಾಗಿತ್ತು ಒಬ್ಬಳಿಗೆ ಅದೂ ತುಂಬ ದೊಡ್ಡ ಅನಿಸಿತ್ತು. ಆದ್ದರಿಂದ ಅವಳು ಪಿ ಜಿ ಕೂಡ ನಡೆಸಲು ಶುರು ಮಾಡಿದಳು. ನಾಲ್ಕು ಜನ ಹೆಣ್ಣು ಮಕ್ಕಳು ಇವಳನ್ನು ಬಾಯಿ ತುಂಬಾ ಆಂಟಿ ಅಂದುಕೊಂಡು ಅಂಟಿಕೊಂಡು ಬಿಟ್ಟರು. ಬೆಳಿಗ್ಗೆ ಎಲ್ಲರಿಗೂ ತಿಂಡಿ ಅಡಿಗೆ ಮಾಡಿ ಹೋಗುತ್ತಿದ್ದಳು. ಭಾನುವಾರ ರಾತ್ರಿ ಹೊರಗಿನಿಂದ ಊಟ ತರಿಸಿ ಈ ಮಕ್ಕಳೊಂದಿಗೆ ಮಕ್ಕಳಾಗಿ, ಟಿ ವಿ ಕಾರ್ಯಕ್ರಮಗಳನ್ನು ನೋಡುತ್ತಿದ್ದಳು.
ಒಂದು ದಿನ ಅವಳು ಕೆಲಸ ಮಾಡುವ ಕಡೆ ಎಕೌಂಟ್ಸ್ ನವನು ಕೈ ಕೊಟ್ಟು ಫಜೀತಿಯಾಯಿತು. ಆಗ ಕರುಣಾ ಅದನ್ನು ತಾನು ನಿರ್ವಹಿಸುತ್ತೇನೆಂದು , ತನ್ನ ಬಳಿ ಸೂಕ್ತ ಡಿಗ್ರಿಯಿದೆಯೆಂದು ಬಾಯಿ ಬಿಟ್ಟಳಲ್ಲದೇ ಸ್ವಲ್ಪದರಲ್ಲೇ ತನ್ನ ಬಾಳಿನ ಕತೆ ಹೇಳಿ ಮುಗಿಸಿದಳು. ಆ ದಿನದಿಂದ ಮಾರವಾಡಿ ಆಕೆಯನ್ನು ಎಕೌಂಟೆಂಟ್ ಹುದ್ದೆ ಕೊಟ್ಟಿದ್ದಲ್ಲದೇ, ಸಂಬಳ ಹೆಚ್ಚಿಸಿ ಅವಳದ್ದೇ ಆದ ಕ್ಯಾಬಿನ್ ಕೂಡ ಕೊಟ್ಟ. ಸೀರೆ ಮಾರುವುದಲ್ಲ್ದೇ ಬೇರೆ ಬೇರೆ ಊರಿಗೆ, ದೇಶಗಳಿಗೆ ಅವನ ಅಂಗಡಿಯಿಂದ ಸೀರೆಗಳು ರವಾನೆಯಾಗುತ್ತಿದ್ದವು. ಅಂಗಡಿಯ ಹಿಂದಗಡೆ ದೊಡ್ಡ ಗೋಡೌನ್ ಇತ್ತು. ಅದಕ್ಕೆ ಬರುವ ಹೋಗುವ ಸೀರೆಗಳ ಸ್ಟಾಕ್ ಲೆಕ್ಕ ಇಡಲು ಆರಂಭಿಸಿದ ಮೇಲೆ, ಉಳಿದವರು ಎಷ್ಟು ಮೋಸ ಮಾಡಿದ್ದಾರೆ ಅಂತ ಮಾರವಾಡಿ ದಂಪತಿಗಳಿಗೆ ಮನದಟ್ಟಾಗಿ, ಆಕೆಯನ್ನು ಸೇಲ್ಸ್ ಗರ್ಲ್ ಹುದ್ದೆಯಲ್ಲಿ ಅಷ್ಟು ಸಮಯ ಇಟ್ಟಿದ್ದು ಪೇಚಾಡಿಕೊಂಡರು. ಈಗ ಕರುಣಾ ಅವರ ಕುಟುಂಬದ ಸದಸ್ಯೆಯನ್ನುವಷ್ಟು ಸನೀಹವಾಗಿದ್ದಳು. ಹಬ್ಬ ಹರಿದಿನ ಅವರ ಮನೆಗೆ ಹೋಗಿ ಹಬ್ಬ ಆಚರಿಸಿ ಊಟ ಮಾಡಿ ಬರುತ್ತಿದ್ದಳು.
ಒಂದು ದಿನ ಸಂಜೆ ಅವಳು ಮನೆಗೆ ಬರುವಾಗ ಅವಳ ಮಗಳು ಬಾಗಿಲ ಬಳಿ ಕೂತು ಶಾಲೆಯ ಪುಸ್ತಕ ಓದುತ್ತಿದ್ದಳು. ಇವಳು ಕೇಳಿದ್ದಕ್ಕೆ ’ಅಮ್ಮ ಪ್ಲೀಸ್ ನನ್ನನ್ನು ಕ್ಷಮಿಸು. ಇನ್ನು ಮುಂದೆ ನಿನ್ನ ಜತೆ ಇರುತ್ತೀನಿ, ನಿನಗೆ ಎಲ್ಲ ಕೆಲ್ಸ ಮಾಡಿಕೊಟ್ಟು ಶಾಲೆಗೆ ಹೋಗುತ್ತೇನೆ’ ಅಂತ ಅಳಲು ಶುರು ಮಾಡಿದಳು. ಮೊದಲು ಬೀಗ ತೆಗೆದು ಮನೆಯೊಳಕ್ಕೆ ಹೊಕ್ಕು ಅವಳಿಗೆ ಬಿಸಿ ಬಿಸಿ ಕಾಫಿ ಮಾಡಿಕೊಟ್ಟು, ’ಈಗ ಹೇಳು ಏನಾಯ್ತು’ ಅಂತ ಕೇಳಿದಳು. ಆ ಮನೆಯಲ್ಲಿ ಮಗು ಹುಟ್ಟಿದ ಮೇಲೆ ಅಪ್ಪನ ಇನ್ನೊಂದು ಹೆಂಡತಿಯ ಅಸಹನೆ ಬೆಳೆದು ಇವಳ ಮೇಲೆ ಕಿಡಿಕಾರುತ್ತಿದ್ದಳಂತೆ’ ಓದಲು ಬರೆಯಲು ಆಗದಷ್ಟು ಕೆಲಸ ಮಾಡಿಸುತ್ತಿದ್ದಳಂತೆ, ಅಷ್ಟೆ ಅಲ್ಲದೇ ತಲೆ ಚಿಟ್ಟು ಹಿಡಿಯುವಷ್ಟು ಸದಾ ಅಳುವ ಮಗುವಂತೆ. ಅಪ್ಪ ಕೂಡ ನನ್ನ ಮೇಲೆ ಸಿಡಿ ಸಿಡಿ ಗೊಳ್ಳುವುದನ್ನು ಶುರು ಮಾಡಿದ್ದಾರೆ. ಅದಕ್ಕೆ ಇಲ್ಲೇ ಬಂದು ಬಿಟ್ಟೆ. ಇರಲಾ ನಿನ್ನ ಜತೆ ಅಥವಾ ನನ್ನ ಮೇಲೆ ಸಿಟ್ಟಾ. ನನ್ನನ್ನು ಚಿಕ್ಕವಳಿದ್ದಾಗ ನೀನು ಜತೆ ಇಟ್ಟುಕೊಳ್ಳಲಿಲ್ಲಾಂತ ಅಪ್ಪ ಹೇಳಿ ಹೇಳಿ ನನ್ನ ಬ್ರೈನ್ ವಾಶ್ ಮಾಡಿದ್ದರು. ಈಗ ನಿಧಾನಕ್ಕೆ ನನಗೆ ಎಲ್ಲ ಅರ್ಥ ಆಗುತ್ತಾ ಇದೆ. ಪ್ಲೀಸ್ ಕ್ಷಮಿಸಿಬಿಡು ಮಾಮ್’ ಅಂದಳು. ಅವಳನ್ನು ಅಪ್ಪಿಕೊಂಡು ಕುಣಿದಾಡುವುದೊಂದು ಬಾಕಿ ಕರುಣಾ.
**********************************************
ಕರುಣಾಳ ಗಂಡನಿಗೆ ತಲೆ ಚಿಟ್ಟು ಹಿಡಿದು ಹೋಗಿತ್ತು. ಆಫಿಸ್ ಬಳಿಯ ಹೋಟಲ್ ಗೆ ಬಂದು ಕೂತಿದ್ದ. ಮಗಳು ಮನೆಯಿಂದ ಹೊರಬಿದ್ದು ಪುನ: ಕರುಣಾಳ ಬಳಿಗೆ ಹೋಗಿದ್ದು ಅವನಿಗೆ ಶಾಕ್ ಆಗಿತ್ತು. ಅವನ ಇನ್ನೊಬ್ಬ ಹೆಂಡತಿಗೆ ಹೆರಿಗೆಯಲ್ಲಿ ಕಷ್ಟವಾಗಿ ಈಗೀಗ ಆರೋಗ್ಯ ಕೂಡ ಸರಿಯಿರುತ್ತಿರಲಿಲ್ಲ. ಅವಳ ತಂಗಿ ಮನೆಗೆ ಬಂದು ಇದ್ದರೂ ಇಬ್ಬರಿಗೂ ಯಾವಾಗಲೂ ಜಗಳ. ಆಫಿಸಿನ ಕೆಲಸಗಳಿಂದ ಮನೆಗೆ ಹೋಗಿ ಸ್ವಲ್ಪ ಹೊತ್ತು ನಿರುಮ್ಮಳವಾಗಿರುವ ಅಂದ್ರೆ ಇಬ್ಬರ ಕಿರಿಕಿರಿಯಲ್ಲದೇ ಯಾವಗಲೂ ಅಳುತ್ತಲೇ ಇರುವ ಮಗು. ಅದನ್ನು ಡಕ್ಟರ್ ಬಳಿಯಾದರೂ ಕರೆದುಕೊಂಡು ಹೋಗುವ ಅಂದ್ರೆ ಇವಳ ಜೋರು ’ಪುಟ್ಟ ಮಕ್ಕಳಲ್ಲಿ ಇದೆಲ್ಲ ಮಾಮೂಲು’ ನಿಮಗೇನು ನಿಮ್ಮ ಮಗಳು ಚಿಕ್ಕವಳಿರುವಾಗ ಅಮ್ಮನ ಬಳಿ ಇದ್ದಿದ್ದು’ ಸ್ವಲ್ಪ ತಿಳುವಳಿಕೆ ಬಂದ ಮೇಲಲ್ಲವೇ ನೀವು ಅವಳನ್ನು ನಿಮ್ಮ ಬಳಿ ಇರಲು ಕರೆದುತಂದಿದ್ದು’ ಅಂತ ಹಂಗಿಸುತ್ತಿದ್ದಳು.
ಯಾಕೋ ಸಂಯಮಿ ಕರುಣಾ ಇತ್ತೀಚಿಗೆ ತುಂಬಾ ಕಾಡುತ್ತಿದ್ದಳು. ಯಾವಗಲೂ ನಗು ಮುಖ. ತಾನಾಯಿತು ತನ್ನ ಕೆಲಸವಾಯಿತು. ತನಗೆ ಆರೋಗ್ಯ ತಪ್ಪಿದಾಗ ಈಕೆ ಒಂದು ದಿನ ಕೂಡ ಆಸ್ಪತ್ರೆಗೆ ಬರಲಿಲ್ಲ. ರಜೆ ಯಿದ್ದಾಗ ಆಫಿಸ್ ನ ಕಲೀಗ್ ಗಳ ಜತೆ ಪಿಕ್ನಿಕ್ ಗೆ ಹೋಗಿದ್ದಳು. ಅಡೆ ಕರುಣಾ ತಾನು ಎಷ್ಟು ನಿರ್ಲಕ್ಷಿಸಿ ಅವಮಾನ ಮಾದಿದರೂ ಕೂಡಲೆ ಉಟ್ಟ ಬಟ್ಟೆಯಲ್ಲೇ ಹೊರಟು ಬಂದಿದ್ದಳು. ಕರುಣಾಳ ಅಡಿಗೆಯಂತೂ ಎಷ್ಟು ಅಚ್ಚುಕಟ್ಟು ರುಚಿಕರ. ಇವಳು ಅಡಿಗೆ ಮಾಡಿದರೆ ಬಾಯಲ್ಲಿ ಹಾಕಲು ಆಗುತ್ತಿರಲಿಲ್ಲ. ಯಾವಾಗಲೂ ಗರಂ ಮಸಾಲೆ. ಬೇರೆ ಯೇನಾದರು ಮಾಡು ಅಂದ್ರೆ, ;ಹೋಟಲ್ ಗೆ ಹೋಗಿ ತಿನ್ನಿ’ಅಥವಾ ಅಡುಗೆಯವಳನ್ನಿಟ್ಟುಕೊಳ್ಳಿ, ನನ್ನನ್ನೇನೂ ನಿಮ್ಮ ಹಳೆ ಹೆಂಡತಿ ಅಂತ ತಿಳಕೊಂಡ್ರಾ ಅಂತ ಮುಖಕ್ಕೆ ಹೊಡೆಯುವ ಹಾಗೆ ಉತ್ತರಿಸುತ್ತಿದ್ದಳು.
ಅಗೋ ಆ ಟೇಬಲ್ ನಲ್ಲಿ ಅದೇನು ಗೌಜು-ಗಮ್ಮತ್ತು, ನಗು. ಯರಾದ್ದೋ ದನಿ ಕರುಣಾಳ ದನಿಯನ್ನು ಹೋಲುತ್ತಿದೆಯಲ್ಲ. ಬೆಳಿಗ್ಗೆ ಅಡುಗೆಮಾಡುವಾಗ ಅವಳು ತನ್ನಷ್ಟಕ್ಕೆ ತಾನೆ ನಿಧಾನವಾಗಿ ಸುಶ್ರ್ಯಾವ್ಯವಾಗಿ ಹಾಡುತ್ತಿದ್ದಳು. ಹಾ ಎಷ್ಟು ಮಿಸ್ ಮಾಡ್ತಾ ಇದ್ದೇನೆ ಅವಳನ್ನ.
ಕಾಯಿಲೆ ಬಿದ್ದ ಹೆಂಡತಿ ಕಾಯಿಲೆ ಜಾಸ್ತಿಯಾಗಿ ಮೂರುದಿನ ಗಳ ಹಿಂದೆ ತೀರಿಕೊಂಡಳು. ಚಿಕ್ಕ ಮನೆ ತುಂಬಾ ಗಿಜಿ ಗಿಜಿ ಜನ ಅವರ ಗದ್ದಲ, ಅಳುವ ಮಗು ಇದರಿಂದ ತಲೆ ಹಾಳಾಗಿತ್ತು. ಇವತ್ತು ಮನೆ ಖಾಲಿ. ಅವಳ ತಂಗಿ ಮಾತ್ರ ಇದ್ದಾಳೆ ಆದರೆ ಬೆಳಿಗ್ಗೆ ಯಿಂದ ಮಗುವನ್ನು ನೋಡಿಕೊಳ್ಳಲು ಯಾರನ್ನಾದರೂ ಇಟ್ಟುಕೊಳ್ಳಿ ನಾನು ಊರಿಗೆ ಹೋಗಬೇಕೆಂಬ ಒಂದೆ ವರಾತ, ಹಾಗೆ ತಟ್ಟನೆ ಯಾರು ಸಿಗುತ್ತಾರೆ?
ಅವನಿಗೆ ತಟ್ಟನೆ ಮನಸ್ಸಿನಲ್ಲೊಂದು ಮಿಂಚು ಹೊಳೆಯಿತು. ನಾನು ಕರುಣಾಳನ್ನು ಮಿಸ್ ಮಾಡ್ತಾ ಇದ್ದೇನೆ. ಅವಳು ಕೂಡ ನನ್ನನ್ನು ಮಿಸ್ ಮಾಡಬಹುದಲ್ಲವೇ? ಅವಳನ್ನೆ ಕೇಳಿದರೆ ಹೇಗೆ ಮಗುವನ್ನು ನೋಡಿಕೊಳ್ಳಲು?? ಮನಸ್ಸಿಗೆ ಸಮಾಧಾನವಾಗಿ ಆ ಟೇಬಲ್ ಕಡೆ ಕಣ್ಣು ಹರಿಯಬಿಟ್ಟರು. ಅರೇ ಇದೇನಿದು ಆಶ್ಚರ್ಯ ಅದು ಕರುಣಾ ಅಲ್ಲವೇ. ಅದೇನು ಮುಖದಲ್ಲಿ ಖಳೆ, ಅದೇನು ನಗು. ಇಷ್ಟು ಸುಂದವಾಗಿದ್ದನ್ನು ನಾನು ಈವರೆಗೇ ಅದೇನು ಗಮನಸಿಸಲಿಲ್ಲ? ಅವನು ಸಂತಸದಿಂದ ಅವಳ ಟೇಬಲ್ ಕಡೆ ನಡೆದ.
ಸಡನ್ ಆಗಿ ಬಂದ ಅವಳ ಗಂಡನನ್ನು ನೋಡಿ ಕರುಣಾ ಚಕಿತ ಗೊಂಡು ಎಲ್ಲರಿಗೂ ಅವಳು ಅವನ ಪರಿಚಯ ಮಾಡಿಸಿದಳು.
ಅವರು ಹೋಟಲ್ ಗೆ ಬಂದು ಪಾರ್ಟಿ ಮಾಡಲು ಕಾರಣ- ಅಂಗಡಿಯಲ್ಲಿ ಬಿಸಿನಸ್ ವಿಷಯವಾಗಿ ವ್ಯವಹರಿಸಲು ಬರುತ್ತಿದ ಮಾರವಾಡಿಯವರ ದೂರದ ಸಂಬಂಧಿಕ ಜೀನೇಶ್ ಗೆ ಕರುಣಾಳ ಕಂಡು ಅವಳ ಮೇಲೆ ಪ್ರೀತಿ ಹುಟ್ಟಿತು.ಕರುಣಾಳಿಗೂ ಚುರುಕಾಗಿರುವ ಜಿನೇಶ್ ಮೇಲೆ ಆಕರ್ಷಣೆ ಹುಟ್ಟಿತು. ತನ್ನ ಕತೆಯೆಲ್ಲ ಅವನಿಗೆ ಹೇಳಿದ್ದಳು. ಅವನು ಇರುವುದು ಹೊರದೇಶದಲ್ಲಿ. ಇವಳನ್ನು ಮದುವೆಯಾಗಿ ಅಲ್ಲೇ ಕರೆದುಕೊಂಡು ಹೋಗುವವನಿದ್ದ. ಆಫಿಸ್ ನವರೆಲ್ಲ ಕರುಣಾಗೆ ಫೇರ್ ವೆಲ್ ಪಾರ್ಟಿ ಇಟ್ಟುಕೊಂಡಿದ್ದರು. ಮಾತು ನಗು ಗಲಾಟೆ ನಡೆಸುತ್ತ ಎಲ್ಲರೂ ಎಂಜಾಯ್ ಮಾಡ್ತಾ ಇದ್ದರು.
’ಸ್ವಲ್ಪ ಈ ಕಡೆ ಬರುತ್ತೀಯ, ನಿನ್ನ ಜತೆ ಮಾತನಾಡಬೇಕಿತ್ತು’ ಅಂದ. ಅವಳು ಕಛೇರಿಯ ಸಿಬ್ಬಂದಿ ಬಳಿ ಎಕ್ಸ್ಕೂಸ್ ಕೇಳಿ ಇತ್ತ ಬಂದಳು’ ’ನಿನ್ನನ್ನು ನೋಡಿ ಖುಶಿಯಾಯ್ತು. ಮನೆ ಬಳಿ ಬರಬೇಕೆಂದು ಕೊಂಡಿದ್ದೆ. ಅವಳು ಮೂರುದಿನದ ಹಿಂದೆ ತೀರಿಕೊಂಡಳು. ಈಗ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲ. ನನಗೆ ಗೊತ್ತು ನೀನು ಇಲ್ಲ ಅನ್ನಲ್ಲ ಅಂತ. ನಾವೆಲ್ಲ ಪುನ: ಕೂಡಿ ಒಟ್ಟಿಗೆ ಇರುವ.’
ಆಗ ಅವಳು ಅವನನ್ನು ಕರೆದು ಕೊಂಡು ತನ್ನ ಟೇಬಲ್ ಬಳಿ ಬಂದು ತಾನು ಮದುವೆಯಾಗುವವನನ್ನು ಪರಿಚಯಮಾಡಿಸಿಕೊಟ್ಟಳು. ಮುಂದಿನವಾರ ನಮ್ಮ ಮದುವೆ. ಮಗಳ 10 ನೇ ಕ್ಲಾಸ್ ಪರೀಕ್ಷೆ ಮುಗಿದ ಕೂಡಲೇ ನಾವು ಹೊರ ದೇಶಕ್ಕೆ ಹಾರುತ್ತಾ ಇದ್ದೇವೆ. ಇನ್ನೂ ಗುಡ್ ಬೈ ಅಷ್ಟೆ ನಾನು ಹೇಳುವುದು...
:-)
(ಯಾಕೆ ಬರೆಯುತ್ತಿಲ್ಲ ಅಂತ ಕೇಳುವವರು ಹಲವಾರು ಜನ. ಎನೂ ಸಿರಿಯಸ್ ಕಾರಣಗಳಿಲ್ಲ. ಮೊದಲಿನ ಮನೆ ಸ್ಯಾಂಡ್ ವಿಚ್ ತರಹ ಇದ್ದು ,ಆಫಿಸ್ ಕೆಲಸ ಬಿಟ್ಟು, ಮಾಡಲು ಬೇರೇನೂ ಕೆಲಸವಿರಲಿಲ್ಲವೆಂದು ,ಮಿತ್ರರು ನನ್ನ ಕನ್ನಡ ಚೆನ್ನಾಗಿದೆಯೆಂದು ಹೊಗಳಿ ಹೊನ್ನ ಶೂಲಕ್ಕೆ ಏರಿಸಿ ನನ್ನನ್ನು ಬರೆಯಲು ಪ್ರೇರೇಪಿಸಿದ್ದರು. :-) ಹಳೆಯದನ್ನ ಮೆಲುಕು ಹಾಕುತ್ತ ಬರೆಯುತ್ತಿದೆ. ಆದರೆ ನಮ್ಮ ಸ್ವಂತ ಮನೆಗೆ ಬಂದ ಮೇಲೆ ಇಲ್ಲಿನ ಮೂರು ಬಾಲ್ಕನಿ, ನನ್ನ ಪುಟ್ಟ ಬಾಲ್ಕನಿ ಗಾರ್ಡನ್, ನಮ್ಮ ಬಿಲ್ಡಿಂಗ್ ನ ಸುತ್ತ ನಡೆಯುವ ವಿದ್ಯಮಾನಗಳು, ಸೂರ್ಯಾಸ್ತ, ಸೂರ್ಯೋದಯ, ಚೆಂದದ ಹಕ್ಕಿಗಳು, ಓದಲು ತುಂಬಾ ಪುಸ್ತಕಗಳು, ನನ್ನದೇ ಲ್ಯಾಪ್ ಟಾಪ್ ನಲ್ಲಿ ನೋಡಲು ಸಿಗುವ ಅಸಂಖ್ಯಾತ ಸಿನಿಮಾಗಳು, ಮನೆಗೆ ಬರುವ ನೆಂಟರು, ಫೇಸ್ ಬುಕ್, ಶನಿವಾರ ಭಾನುವಾರ ನಾಟಕ, ಸಂಗೀತ ಕಾರ್ಯಕ್ರಮಗಳು... ಇವೆರಲ್ಲದರ ಮಧ್ಯ ಬರೆಯಲು ಸರಕು ತುಂಬಾ ಇದ್ದರೂ ಬರೆಯುವ ಆಸಕ್ತಿ ಹೋಗ್ತಾ ಇದೆ....ಯಾರೂ ಬೇಸರಿಸಿದಿರಿ. but please be happy that i am happy, ಮಧ್ಯ ಮಧ್ಯ ಹೀಗೆ ಹುಕ್ಕಿ ಬಂದರೆ ಖಂಡಿತ ಬರೆಯುತ್ತೇನೆ. ಮೊನ್ನೆ ಸಿಕ್ಕಿದ ಒಂದು ಪುಟ್ಟ ಗೆಳತಿ ತಾನು ಪ್ರೆಗ್ನೆಂಟ್ ಇದ್ದಾಗ ಹಾಗೂ ಡೆಲಿವರಿ ನಂತರ ಆಳವಾದ ಡಿಪ್ರೆಶನ್ ಗೆ ಹೋದಾಗ ನನ್ನ ಬರಹಗಳ ಮೊರೆ ಹೋಗಿದ್ದನ್ನು ಹಂಚಿಕೊಂಡಿದ್ದಳು.ಯಾಕೆ ಈಗ ರೆಗ್ಯುಲರ್ ಆಗಿ ಬರೆಯುತ್ತಿಲ್ಲ ಅಂತ ಕೇಳಿದ್ದಳು. ಅವಳಿಗೂ ಮೇಲಿನ ಉತ್ತರವಷ್ಟೆ ಕೊಟ್ಟಿದ್ದೇನೆ.)
ಕತೆ ಹೇಗನ್ನಿಸಿತು ಖಂಡಿತ ಹೇಳಿ..ಧನ್ಯವಾದಗಳು for tolerating my writing for so long..love you ಆಲ್
:-)