March 28, 2011

ನಿಹಾರಿಕಾಳ ಉಂಗುಷ್ಠ ಪುರಾಣ- ಸಂಚಿಯಿಂದ ತೆಗೆದ ನೆನಪು-4

ಈ ಪೋಸ್ಟ್ ಗೆ ಪ್ರೇರಣೆ ಶ್ರೀವತ್ಸ ಜೋಶಿಯವರ ಅಂಗುಷ್ಠ ಪುರಾಣ ವಿಜಯಕರ್ನಾಟಕದ ಪರಾಗಸ್ಪರ್ಶ ಅಂಕಣ ತಾರೀಕು 6&20 ಮಾರ್ಚ್ 2011. ಅಂಗುಷ್ಠ ಅನ್ನುವ ಪದ ಬಿಟ್ಟರೆ ಅವರ ಅಂಕಣಕ್ಕೂ ನನ್ನ ಬರಹಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಕೊಂಕಣಿಯಲ್ಲಿ ಹೆಬ್ಬೆರಳಿಗೆ ಉಂಗುಷ್ಠ ಎನ್ನುತ್ತೇವೆ.

ತಾರೀಕು 7.12.1992 ಸರಿಯಾಗಿ ಸಂಜೆ 6.58 ಕ್ಕೆ ನಿಹಾ ಜನನ. ಹುಟ್ಟಿದ ತಕ್ಷಣ ಅಳಲಿಲ್ಲ. ಅದಕ್ಕೆ ಡಾ. ಪ್ರಮೀಳಾ ಕೇಂಕ್ರೆ ಅವಳನ್ನು ಉಲ್ಟಾ ಹಿಡಿದು ಫಟ್ಟನೆ ಅವಳ ಹಿಮ್ಮಡಿಗೆ ಜೋರಾಗಿ ಪೆಟ್ಟೊಂದನ್ನು ಕೊಟ್ಟರು. ಒಂದೆರಡು ನಿಮಿಷ ಅತ್ತಳು.ಮಲಯಾಳಿ ನರ್ಸ್ ’ಮಾಲದಿ ತುಮ್ಹಾರಾ ಬೇಟಿ ಕೊ ದೆಕೊ’ ಅಂತನನಗೆ ಮಗುವನ್ನು ತೋರಿಸಿದಳು. ಬಿಳಿ ಮೈ ಬಣ್ಣ, ತಲೆ ತುಂಬ ಕಪ್ಪು ಕಪ್ಪು ಕೂದಲು ಆ ಮೇಲೆ ತಕ್ಷಣಕ್ಕೆ ಕಂಡಿದ್ದು ಅವಳ ಬಿಳಿ ಮುಖದಲ್ಲಿ ಎರಡು ಹುಬ್ಬು ಸೇರಿ ಹಣೆಯ ಮೇಲೆ ಮೂಡಿದ ಚಕ್ರಾಕಾರದಲ್ಲಿ ಚಿನ್ಹೆ. ಸುಮ್ನೆ ಮುಗುಳುನಕ್ಕು, ಸುಸ್ತಾಗಿ ಕಣ್ಣು ಮುಚ್ಚಿದೆ. ಸ್ವಲ್ಪ ಸಮಯಕ್ಕೆ ದಾದಿ ಬಂದು ’ತುಝ್ ನಸೀಬ್ ಫುಟ್ಲೇ ಗ ಪೋರಿ’ ಅಂದಾಗ ನನ್ನೆದೆ ಧಸಕ್ ಎಂದು ಎದೆ ಹಾರಿ ಗಂಟಲಿಗೆ ಬಂದು ಬಡಿಯುತ್ತಿದೆಯೆಂಬಂತೆ , ನನ್ನ ಪುಟ್ಟ ಕಂದಂಗೆ ಏನಾಯ್ತು ಅಂತ ಹೆದರಿ ಹೈರಾಣಾದೆ. ಕಾಯ್ ಝಾಲ? ಅಂತ ಕೇಳ ಬೇಕಾದ್ರೆ ತುಂಬಾನೆ ಧೈರ್ಯ ಬೇಕಾಯ್ತು. ’ಹೇ ಪಣ್ ಮುಲ್ಗೀಚ್ ಝಾಲಿ ನ?? (ಇನ್ನೊಂದು ಹೆಣ್ಣು ಮಗು ಹುಟ್ಟಿತಲ್ಲ) ರೀಲಿಫ್ ನಿಂದ ಉಸಿರು ಬಿಟ್ಟೆ. ಆದರೆ ಆಕೆ ಮೇಲೆ ತುಂಬ ಸಿಟ್ಟು ಬಂತು. ನನ್ನ ಮಾಲವಿಕನೂ ಆ ಅಸ್ಪತ್ರೆಯಲ್ಲೇ ಹುಟ್ಟಿದ್ದು . ಆದ್ದರಿಂದ ಸ್ವಲ್ಪ ಸಲುಗೆ ತೆಗೆದುಕೊಂಡಿರಬೇಕು ದಾಯಿ.
(ಆ ಮೇಲೆ ಅವಳ ಬಗ್ಗೆ ಡಾಕ್ಟರ್ ಗೆ complaint ಕೊಟ್ಟೆ. ಡಾಕ್ಟರ್ ನನ್ನೆದುರಿಗೆ ಸರೀ ಬೈದದ್ದು ಮಾತ್ರವಲ್ಲ, ’ನಿನಗೆ ಇಬ್ಬರೂ ಗಂಡು ಮಕ್ಕಳಲ್ಲವೇ ಅನುಸೂಯಾ ಬಾಯಿ??ನಿನ್ನನ್ನು ನೋಡಿಕೊಳ್ಳುತ್ತಿದ್ದಾರಾ ಅವರು? 65 ವಯಸ್ಸು ನಿನಗೆ. ಇಬ್ಬರೂ ಒಳ್ಳೆ ಕೆಲಸದಲ್ಲಿದ್ದರೂ, ನಿಮಗೇ ಕೂಡದಿದ್ದರೂ ಹೀಗೆ ಕೆಲಸ ಮಾಡಿ ಜೀವನ ನಡೆಸುತ್ತೀರಲ್ಲವಾ?? ಯಾಕೀ ಗಂಡು ಮಗು ಗಂಡು ಮಗು ಅಂತ ಸಾಯ್ತೀರ? ’ ನನಗ್ಯಾಕೋ ತುಂಬ ಕೆಟ್ಟದನಿಸಿತ್ತು ಆಮೇಲೆ)

ಪುಟ್ಟಿಯನ್ನು ಕ್ಲೀನ್ ಮಾಡಿ. ಬಟ್ಟೆಯಲ್ಲಿ ಸುತ್ತಿ ವೈಯಿಂಗ್ ಸ್ಕೇಲ್ ಮೇಲಿಟ್ಟರು. ಡಾಕ್ಟರ್ ನನ್ನ ಚೆಕ್ ಮಾಡ್ತಾ ಇದ್ದಾಗ, ಪಕ್ಕದಲ್ಲಿ ’ಚೊರೋಂ ಚೊರೋಂ’ ಸದ್ದು. ಏನಪ್ಪ ಅಂತ ನೋಡಿದ್ರೆ ಪುಟ್ಟಿ ಬಟ್ಟೆಯೊಳಗಿಂದ ಬಲಗೈಯನ್ನು ಹೊರತೆಗೆದು ಹೆಬ್ಬೆರಳನ್ನು ಚೀಪುತ್ತಿದ್ದಳು. ನನ್ನನ್ನೂ ಪುಟ್ಟಿಯನ್ನು ಲೇಬರ್ ವಾರ್ಡ ನಿಂದ ರೂಮ್ ಗೆ ತಂದರು.

ಪುಟ್ಟಿಗೆ ಹಸಿವೆಯಾಗಿದೆ ಅಂತ ಹಾಲು ಕೊಟ್ಟರೆ ಅವಳು ನನ್ನ ಹಾಲನ್ನು ಕುಡಿಯುತ್ತಿದ್ದ ಹಾಗೆ ಮದ್ಯ ದಲ್ಲಿ ತನ್ನ ಹೆಬ್ಬೆರಳನ್ನೂ ಚೀಪುತ್ತಿದ್ದಳು. ನರ್ಸ್ ಗಳು ಎರಡೂ ಕೈ ಒಳಗೆ ಬರುವಂತೆ ಬಟ್ಟೆಯಲ್ಲಿ ಸುತ್ತಿದ್ದರೂ ಯಾವುದೋ ಮಾಯೆಯಿಂದ ಅವಳು ಬಲಗೈ ಹೊರಗೆ ತಂದು ಬೆರಳು ಚೀಪಲು ಶುರು ಮಾಡುತ್ತಿದ್ದಳು.ಆಸ್ಪತ್ರೆಯ ನರ್ಸ್ ಗಳಿಗೆಲ್ಲ - ಒಟ್ಟು 5 ಜನರಿದ್ದರು- ಅವಳು ಕೈ ಹೊರಗೆ ತೆಗೆಯದ ಹಾಗೆ ಅವಳನ್ನು ಬಟ್ಟೆಯಲ್ಲಿ ಸುತ್ತಲು competition ನಡೆಯ ಹತ್ತಿತ್ತು. ಅನುಸೂಯ ದಾಯಿ ಅವಳನ್ನು ತುಂಬ ಗಟ್ಟಿಯಾಗಿ ಬಟ್ಟೆಯಿಂದ ಸುತ್ತಲು ಯಶಸ್ವಿಯಾದರೂ ಅವಳು ಎಷ್ಟು ಅತ್ತು ರಂಪ ಮಾಡಿದಳೆಂದರೆ ನಾವೇ ಸೋತು ಅವಳಿಗೆ ಕಟ್ಟಿದ್ದನ್ನು ಸಡಲಿಸಬೇಕಾಗ್ತಿತ್ತು.ಮತ್ತೇ ಬಾಬರಿ ಮಸ್ಜಿದ್ ಗಲಾಟೆಯಾಗಿ ನಾವು ಮೂರನೆ ದಿನಕ್ಕೆ ಮನೆಗೆ ಬಂದೆವು. ಸಾಧಾರಣವಾಗಿ ನಾರ್ಮಲ್ ಡೆಲಿವರಿಯಾದ್ರೆ 6 ದಿನ ಆಸ್ಪತ್ರೆಯಲ್ಲಿ ಇಡುತ್ತಾರೆ.
ನಾಮಕರಣದ ದಿನ. ಇನ್ನೊಂದು ಫೋಟು ಇದಕ್ಕೆ ಅಂಟಿದ್ದು ಫೋಟೊ ಹೀಗಾಗಿದೆ. ಫೋಟೊ ತೇಗಿಬೇಕಾದ್ರೆಅಮ್ಮ ಅವಳ ಕೈಯನ್ನು ಮೇಲಕ್ಕೆತ್ತಿ ಹಿಡಿದಿದ್ದರು.

ಹನ್ನೊಂದನೆ ದಿನ ಬೆಳಿಗ್ಗೆ ಅವಳಿಗೆ ಕಿವಿ ಚುಚ್ಚುವ ಶಾಸ್ತ್ರ, ಸಂಜೆ ನಾಮಕರಣ. ನಿಹಾರಿಕಾ ಎನ್ನುವ ಹೆಸರು ಇಟ್ಟೆವು. ಅಷ್ಟರ ತನಕ ಅವಳಿಗೆ ಬಾಬಲಿ, ಬಬ್ಬುಲಿ, ಬಾಬು ಅಂತ ಕರಿತಿದ್ವಿ

ದಿನ ಹೋಗುತ್ತ ಅವಳ ಬೆರಳು ಚೀಪುವ ಗೀಳು ಎಷ್ಟಾಯಿತೆಂದರೆ, ಹಾಲು ಕುಡಿಯುವುದರಲ್ಲಿ ಅವಳಿಗೆ ಆಸಕ್ತಿನೇ ಇರಲಿಲ್ಲ,ಹಗಲು ರಾತ್ರಿಯಿಡಿ ಬೆರಳು ಚೀಪುದರಲ್ಲೆ ಅವಳು ಮಗ್ನ. As if thumb sucking was suddenly going out of fashion.ನನಗೆ ಹಾಲು ತುಂಬಿ ಎದೆಯೆಲ್ಲ ಬಾವು ಆಗಿ, ಬಿಟ್ಟು ಬಿಟ್ಟು ಜ್ವರ ಬರಲು ಶುರು ಆಯಿತು.ಅವಳ ಹೆಬ್ಬೆರಳೂ ಕ್ರಮೇಣ ಸಣ್ಣಗಾಗುತ್ತ ಹೋಯ್ತು. ಅಮ್ಮನಿಗೆ ಚಿಂತೆ ಶುರು ಆಗಿ ತಡಿ ಮಾಡ್ತೀನಿ ಅಂತ ಅವಳ ಬಲಗೈ ಪುಟ್ಟ ಸಾಕ್ಸ್ ಕಟ್ಟಿದರು. ಒಂದು ದಿನ ಪುಟ್ಟಿ ಸುಮ್ಮನಿದ್ದಳು. ಮರುದಿನ ಅವಳು ಎಡಗೈ ಹೆಬ್ಬರಳು ಚೀಪುತ್ತಿದ್ದಳು. ನನಗೆ ಎಷ್ಟು ಆಶ್ಚರ್ಯ ಎಂದರೆ 22 ವರ್ಷ ವಯಸ್ಸಿನ ನಾನು ಎಲ್ಲರ ಕಣ್ಣು ತಪ್ಪಿಸಿ, ಅವಳ ಬೆರಳನ್ನು  ನಾನೂ ಚೀಪಿದ್ದೆ , ಏನಾದರೂ ಸ್ಪೆಷಲ್ ಇದೆಯಾ ಅಂತ,ಎಂದರೆ ನಂಬುತ್ತೀರಾ? ಎಂಜಲಿನ ವಾಸನೆ ಬಿಟ್ಟರೆ ಏನೂ ಇರಲಿಲ್ಲ. :-) ಅಮ್ಮ ಈಗ ಎರಡೂ ಕೈಗೆ ಸಾಕ್ಸ್ ಕಟ್ಟಿದಳು. ಈಗ ನೋಡ್ತೇನೆ ಹೇಗೆ ಬೆರಳು ಚೀಪ್ತಿಯಾ ಅಂತ.ಹೊರಗೆ ಬಾಬ್ರಿ ಮಸ್ಜಿದ್ ಗಲಾಟೆ, ಮನೆಯಲ್ಲಿ ಅಮ್ಮನಿಗೂ ನಿಹಾಗೂ ಜಿದ್ದಾ ಜಿದ್ದಿ. ಎರಡೂ ಕೈ ಗಳಿಗೆ ಸಾಕ್ಸ್ ಕಟ್ಟಿದ ಮೇಲೆ ನಾನೂ, ಅಮ್ಮ ಸ್ವಲ್ಪ ಹೊತ್ತು ರೂಮ್ ನಿಂದ ಹೊರಗೆ ಹೋಗಬೇಕಾಗಿ ಬಂತು. ಬರುವಾಗ ಪುನ: ಬೆರಳು ಚೀಪುವ ಚೊರೋಂ ಚೊರೊಂ ಸದ್ದು. ನೋಡಿದರೆ ಅವಳು ಹುಬ್ಬುಗಂಟಿಕ್ಕಿ ಕಾಲು ಬೆರಳು ಚೀಪುತ್ತ ಇದ್ದಳು. ಹಾ ಹಾ ಹಾ. ಆಮೇಲೆ ರಕ್ತಬೊಂಬುಳ ಎಂಬ ಕಹಿ ಔಷಧಿ ಅವಳ ಬೆರಳಿಗೆ ಹಚ್ಚಿಯಾಯ್ತು, ವಿಕ್ಸ್ ಹಚ್ಚಿದರೆ ಬೆರಳುಚೀಪುವುದನ್ನು ಬಿಡುತ್ತಾರೆ ಅಂತ ಕೇಳಿ ಅದೂ experiment ಆಯ್ತು. ಜಪ್ಪಯ್ಯ ಅಂದ್ರು ಬೆರಳು ಚೀಪುವುದು ಮಾತ್ರ ಅವಳು ಬಿಡಲಿಲ್ಲ.ಒಂದು ದಿನ ಅಮ್ಮ ಅಡಿಗೆ ಮನೆಗೆ ಧಾವಿಸಿ ಮಜ್ಜಿಗೆ ಕಡೆಯುವ ಕಡಗೋಲು ತಂದು’ತೆಗಿ ಬೆರಳು ತೆಗಿ ಅತ್ತ ಮಾಡ್ತೀನಿ’ ಅಂದರೆ ಹೆದರಿ ಬೆರಳನ್ನು ಬಾಯಿಯಿಂದ ತೆಗೆದ್ಲು. ಆದರೆ ಅಮ್ಮ ರೂಮ್ ನಿಂದ ಹೊರಗೆ ಬಂದ ಕೂಡಲೇ ಅವಳದ್ದು ಪುನ: ’ಚೀಪಿಂಗ” ಶುರು. ಕೊನೆ ಕೊನೆಗೆ ಅಮ್ಮ ಅವಳಿಗೆ ನಿದ್ದೆ ಬರುವ ತನಕ ಕಡಗೋಲು ಹಿಡಿದುಕೊಂಡು ಕೂರುತಿದ್ದು, ಅವಳು ಬೆರಳು ಚೀಪುವುದನ್ನು ಬಿಟ್ಟಳು.......ಅಥವಾ ನಾವು ಹಾಗಂದುಕೊಂಡಿದ್ದು. ಅವಳಿಗೆ 40 ದಿನಗಳಾದ ಮೇಲೆ ಅಮ್ಮನಿಗೆ ಹುಬ್ಬಳ್ಳಿಯಲ್ಲಿರುವ ದೊಡ್ಡಮ್ಮನಿಂದ ಅವರ ಜತೆ ಅವರ ಊರಾದ ಕಾಸರಗೋಡಿನ ಕೋರ್ಕೋಡಮ್ಮನ ಜಾತ್ರೆಗೆ ಹರಕೆ ಸಲ್ಲಿಸಲು , ಅವರ ಜತೆ ಬರಲು ಕರೆ ಬಂತು. ನಾನು ಮ್ಯಾನೇಜ್ ಮಾಡ್ತೀನಿ ಅಮ್ಮ ನೀನು ಹೋಗು ಅಂದೆ. ಅಮ್ಮ  ಮನೆಯಿಂದ ಹೊರಟ ಕೂಡಲೆ ನಿಹಾ ಬೆರಳು ಚೀಪುವುದು ಸ್ಟಾರ್ಟ್. ಅಂದರೆ ಒಂದು ಹತ್ತು ದಿನ ಅವಳು ಬಾಯಿಗೆ ಬೆರಳು ಹಾಕಿಕೊಂಡಿರಲಿಲ್ಲ. ನಾನು ’ಎಲಾ ಹುಡುಗಿ’ ಅಂತಂದೆ!!ತಮ್ಮ ಇರಲಿ ಬಿಡು ದೊಡ್ಡವಳಾದ ಮೇಲೆ ಅವಳಿಗೆ ನಾಚಿಕೆಯಾಗಿ ಅವಳೆ ಬಿಡ್ತಾಳೆ ಸುಮ್ಮನಿರು ಅಂದ.

ಬಿಲ್ಡಿಂಗ ನಲ್ಲಿರುವವರೆಲ್ಲ ಈ ತರಹ ಎಲ್ಲ ಹೇಳುವವರು:
'ಬೆರಳು ಚೀಪಿದ್ರೆ ಹಲ್ಲು ಮುಂದೆ ಬರುತ್ತೆ'
'ಹಾಲು, ಊಟ -ಆಟ ದಲ್ಲಿ ಆಸಕ್ತಿಯಿರದೆ ಬಡಕಲಾಗ್ತಾಳೆ'’
’ನಮ್ಮ ಸುಮ, 13 ವರ್ಷದ ತನಕ ಹೆಬ್ಬೆರಳು ಚೀಪಿದ್ದಾಳ” etc.

ತಮ್ಮಂದಿರಂತು ಮಧ್ಯ ಮಧ್ಯ ಬಂದು ’ನಿಹಾ ಏನು ಮಾಡ್ತಾಳೆ?? ’ಶಂಖ ಊದ್ತಾಳೆ’ ಅಂತ ಒಬ್ಬ ಅಂದರೆ, ಇನ್ನೊಬ್ಬ”ಏನೆ, ಅದರಲ್ಲಿ ಜೇನುತುಪ್ಪ ಬರುತ್ತ’ ಅಂತ ಕೇಳಿ ನಗುತ್ತ ಹೋಗುತ್ತಿದ್ದ. ನಿಹಾಳನ್ನು ಕಂಡು ಹೋಗಲು ಬಂದ ಕೆಲ ಅತಿಥಿಗಳು ’ಓ ತುತ್ತೂರಿ’ ಊದುತ್ತಾಳಾ’ ಅಂತ ಅಂದಿದ್ದೂ ಇದೆ.

 ಅಮ್ಮಊರಿನಿಂದ ವಾಪಸ್ ಬರುವ ತನಕ ಕೆಲಸಗಳ ಮಧ್ಯ ನಾನೂ ಅತ್ತ ಲಕ್ಷ ಕೊಡಲಿಲ್ಲ. ಅಮ್ಮ ಬಂದ ಮೇಲೆ ನಿಹಾ ಅವರ ಬೆದರಿಕೆಗೆ ಬೆಲೆ ಕೊಡದೆ ಕಣ್ಣು ಮುಚ್ಚಿ ಬೆರಳು ಚೀಪಲು ತೊಡಗಿದಳು

ಅವಳಿಗೆ ಮೂರು ತಿಂಗಳಾಗುವಾಗ ನಮ್ಮ ಅತ್ತೆಗೆ ಸೀರಿಯಸ್ ಅಂತ ಫೋನ್ ಬಂತು. ತಮ್ಮ ನನಗೆ ತೀರ್ಥಹಳ್ಳಿಗೆ ಕರೆದು ತಂದು ಬಿಟ್ಟು ಹೋದ.ಆಮೇಲೆ ದೊಡ್ಡ ಮನೆಯೆಂದ ಮೇಲೆ ಕೆಲಸಗಳು ಹಾಗೆ. ಹಾಲು ತುಂಬ ಕುಡಿಯುತ್ತಿರಲಿಲ್ಲ ವಾದ್ದರಿಂದ ಅಮ್ಮ ನಿಹಾಗೆ ಬೇಗ, ಮನೆಯಲ್ಲೇ ತಯಾರು ಮಾಡಿದ ರಾಗಿ-ಗೋದಿ ಮಣ್ಣಿ (ನೀರಿನ ಹಾಗೆ, ತೆಳು ಮಾಡಿ)ಹಾಕಲು ಶುರು ಮಾಡಿದ್ದರು. ಅವಳು ಅತ್ತರೆ ಅವಳಿಗೆ ಮಣ್ಣಿ ಮಾಡಿ ತಿನ್ನಿಸುತ್ತಿದೆ. ಉಳಿದ ಸಮಯ ಮನೆಯಲ್ಲಿ ಯಾರಾದರೊಬ್ಬರು ಅವಳನ್ನು ನೋಡಿ ಕೊಳ್ಳುತ್ತಿದ್ದರು. ನಾನು ಅತ್ತೆಯವರನ್ನು ನೋಡಿಕೊಳ್ಳುತ್ತಿದ್ದೆ. ನಾನು ಬಂದ ನಾಲ್ಕನೇ ದಿನಕ್ಕೆ ಅತ್ತೆ ತೀರಿ ಕೊಂಡರು. ಆಮೇಲೆ ಹದಿಮೂರು ದಿನ ಪುರುಸೊತ್ತಿಲ್ಲದಷ್ಟು ಕೆಲಸಗಳು. ನಿಹಾ ಅತ್ತರೆ ನಾನೇ ಅವಳ ಬೆರಳನ್ನು ಅವಳ ಬಾಯಿಗೆ ತುರುಕುತ್ತಿದ್ದೆ. ಆತ್ತೆಯ ವೈದೀಕಗಳು ಮುಗಿದು, ಮನೆಗೆ ಬಂದವರೆಲ್ಲ ತೆರಳಿದ ಮೇಲೆ ನಾವು ಉಜಿರೆಗೆ ಬಂದೆವು. ನಾನು ಡೆಲಿವರಿ ಗೆ ಮುಂಬೈಗೆ ಹೋದಾಗ ಶ್ರೀಕಾಂತ್ ಗೆ ಉಜಿರೆಗೆ ಟ್ರಾನ್ಸ್ ಫರ್ ಆಗಿತ್ತು. ಮಾಲವಿಕಳನ್ನು ಅಮ್ಮ ಮುಂಬೈ ನಲ್ಲೇ ಉಳಿಸಿಕೊಂಡರು. ಅವಳು ಅಲ್ಲೇ ಶಾಲೆಗೆ ಸೇರಿದಳು. ಉಜಿರೆಯಲ್ಲಿ ಮನೆ ಸೆಟ್ ಮಾಡುವ ಕೆಲಸ. ನಿಹಾ ಬೆರಳನ್ನು ಚೀಪುತ್ತ ಕೂತರೆ, ನಾನು ಅವಳ ಬಳಿ ಕೂತು ಬೆರಳು ಚೀಪುವ acting ಮಾಡಿದ್ರೆ, ಅವಳು ಬಾಯಲ್ಲಿ ಬೆರಳು ಇಟ್ಟುಕೊಂಡೆ ದೊಡ್ಡದಾಗಿ ನಗುತ್ತಿದ್ದಳು . ಬಾಯಲ್ಲಿ ಬಲ ಹೆಬ್ಬೆರಳಿಟ್ಟುಕೊಂಡು ಅವಳ ಆಟಿಕೆಗಳೊಂದಿಗೆ ಆಡುತ್ತಿದ್ದಳು. ಅದಕ್ಕಾಗಿಯೋ ಏನೋ ಗೊತ್ತಿಲ್ಲ ಅವಳು lefty!!
ಯಾವಗಲೋ ಒಂದು ದಿನ, ಮೊದಲನೇ ಹುಟ್ಟಿದ ಹಬ್ಬಕ್ಕಿಂತ ಮುಂಚೆನೆ ಅವಳು ಬೆರಳು ಚೀಪುವುದು ಬಿಟ್ಟಿದ್ದು ಮಾತ್ರ ಗೊತ್ತೇ ಆಗಲಿಲ್ಲ.
Niha on her 18th B'day, along with Malavika who is describing the cake. Butterscotch cake from Sweet Chariot. :-)
ಮೊನ್ನೆ ಡಿಸೆಂಬರ್ ನಲ್ಲಿ ನಿಹಾ 18 ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಳು. ಅವಳ ಚಿಕ್ಕಂದಿನ ವಿಷಯಗಳನ್ನು ಹೇಳಿ ನಗಿಸುತ್ತಿರುತ್ತೇನೆ. ಬರಿ ಕೀಟಲೆ ಮಾಡ್ತಿರುತ್ತಾಳೆ. ಪಿ.ಯು.ಸಿ. ಆದ ಮೇಲೆ ಒಂದು ವರ್ಷ ಕಾಲೇಜಿಗೆ ಹೋಗದೇ ಬೇರೆ ಬೇರೆ ಕೋರ್ಸ್ ಗಳಿಗೆ ಸೇರಿದ್ದಾಳೆ. ಸಮಾಜ ಸೇವೆಯಲ್ಲಿ ತುಂಬ ಆಸಕ್ತಿ. ಈ ವರ್ಷ IIT -Madras (ಅವಳ ಆಯ್ಕೆಯ ವಿಷಯ ಅಲ್ಲಿ ಮಾತ್ರ ಲಭ್ಯ)ಸೇರಲು entrance ಪರೀಕ್ಷೆಗೆ ಸಜ್ಜಾಗುತ್ತಿದ್ದಾಳೆ. ಯಾವಾಗಲೂ ನಗು ಮುಖ. ಅಕ್ಕ*(ಮಾಲವಿಕ)ನನ್ನು ಸತಾಯಿಸುವುದು ಅಂದ್ರೆ ತುಂಬ ಇಷ್ಟದ ಕೆಲಸ ಆಕೆಗೆ! ನಮ್ಮ ಮನೆಯ entertainer. mimicry artist!
She has simple ambitions in life and is quite focussed in her approach in achieving it. Love you Nymphs, You bring out the best in Me. May all that you aspire come true!!
ಹೌದು!! she brings out the best in me...ಮೊದಲೆಲ್ಲ ನನಗೆ ತುಂಬ ಸಿಟ್ಟು. ನನಗ್ಯಾರೂ ಮಾಲತಿ ಅಂತ ಕರೆಯುತ್ತಿರಲಿಲ್ಲ. ಜಮದಗ್ನಿ ವಂಶದವಳು, ಲೇಡಿ ದುರ್ವಾಸ ಮುನಿ, ಜೀಜಾಮಾತಾ, ಜಗದಂಬೆ ಅಂತೆಲ್ಲ ಕರೆಯುತ್ತಿದ್ದರು. ಮದುವೆಯಾದ ಮೇಲೆ, ನನಗೆ ಸಿಟ್ಟು ಬಂದಾಗಲೆಲ್ಲ ಶ್ರೀಕಾಂತ್ ನನಗೆ ಇಂದಿರಾಗಾಂಧಿ, ದುರ್ದುಂಡಿ ಅಂತ ಕರೆದಿದ್ದು ಇದೆ. ನೀಹಾ ನ sweet nature ನಿಂದ ನಾನು ತುಂಬ ತುಂಬ ಬದಲಾಗಿದ್ದೇನೆ.
ನಿಹಾ ಕೆಲವೊಮ್ಮೆ ನನ್ನ ಬ್ಲಾಗ್ ಓದುತ್ತಾಳೆ. ಈ ಪೋಸ್ಟ್ ಅವಳಿಗೋಸ್ಕರ. ಅವಳು ಹೆಬ್ಬೆರಳು ಚೀಪುವುದು ಅವಳಿಗೆ ಗೊತ್ತಿದ್ದದ್ದೇ,ಆದರೆ ಉಳಿದ ವಿಷಯಗಳು ಅವಳು ಇಲ್ಲಿ ಓದಿಯೇ ತಿಳಿದುಕೊಳ್ಳಬೇಕು

ಥ್ಯಾಂಕ್ಯು ಶ್ರೀವತ್ಸ ಜೋಶಿ ನಿಮ್ಮ ಅಂಕಣ ಇಷ್ಟೆಲ್ಲ ಬರೆಸಲು ಕಾರಣವಾಯಿತು.
* ಮಾಲವಿಕ -ಅಕ್ಕ- ಆಗಿದ್ದ ಬಗ್ಗೆ: ನಿಹಾ ಮಾಲವಿಕಳನ್ನು ಅಕ್ಕ ಅಂತ ಕರೆಯಲಿ ಅಂತ ನಾವೆಲ್ಲ ಅವಳನ್ನು ಅಕ್ಕ ಅಕ್ಕ ಅಂತ ಕರೆಯಲಿಕ್ಕೆ ಶುರು ಮಾಡಿ ಈಗ ಮಾಲವಿಕಳಿಗೆ ಕುಟುಂಬದ ಎಲ್ಲರೂ(ನನ್ನ ತಮ್ಮಂದಿರು, ತಂಗಿ, ನಾನು, ಶ್ರೀಕಾಂತ್) ಅಕ್ಕ ಅಂತ ಕರೆಯುವುದು. ನಿಹಾರಿಕ ಮಾತ್ರ ಮಾಲವಿಕಾssss ಅಂತ ಕರೆಯುವುದು. ಮನೆಗೆ ಬಂದ ಹೊಸಬರು ಆಶ್ಚರ್ಯ ಪಟ್ಟಿದ್ದು ಇದೆ, ಇದೇನಪ್ಪ ಚಿಕ್ಕ ಹುಡುಗಿಯನ್ನ ಇವರು ’ಅಕ್ಕ’ ಅಂತ ಕರೆಯುವುದು. ಉಜಿರೆಯಲ್ಲಿ ನಾವು ಕೆ.ಟಿ.ಗಟ್ಟಿ ಮಾಮನ  ಮನೆಯಲ್ಲಿ ಬಾಡಿಗೆಗೆ ಇದ್ದೆವು. ಅವರ ಪತ್ನಿ- ಯಶೋದಾ ಆಂಟಿ- ಎಂತಕ್ಕೆ  ಅವಳನ್ನು ಅಕ್ಕ ಅಕ್ಕ ಅಂತ ಕೂಗೋದು ನೀವೆಲ್ಲ, ನನಗೆ ಒಂದು ತರಾ ಆಗುತ್ತೆ’ ಅಂತಿದ್ದರು.

:-)

March 22, 2011

ಈಗ ವಿಶ್ವ ಕನ್ನಡ ಸಮ್ಮೇಳನದ ಸರದಿ

77 ನೇ ಕನ್ನಡ ಸಮ್ಮೇಳನ ಆಯಿತು. ವಿಶ್ವ ಸಂಸ್ಕೃತ ಸಮ್ಮೇಳನ ಕೂಡ. ಈಗ ನೋಡಿ ವಿಶ್ವ ಕನ್ನಡ ಸಮ್ಮೇಳನದ ಸರದಿ.ಕೆಲವು ಚಿತ್ರಗಳು. ಇತ್ತೀಚಿಗೆ ನನ್ನ ಅಮ್ಮ - ಅಪ್ಪ,ಮತ್ತು ಒಬ್ಬ ತಮ್ಮ ಮತ್ತು ಅವನ ಕುಟುಂಬ ಬೆಳಗಾವಿಯಲ್ಲಿ ನೆಲೆಸಿದ್ದಾರೆ. ನಾನು ಅವರಲ್ಲಿ ಹೋಗಲು ಟಿಕೇಟ್ ಬುಕ್ ಮಾಡಿದಾಗ, ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ನನಗೆ ತಲೆಯಲ್ಲಿರಲಿಲ್ಲ. ಯಾಕೋ ಬೆಂಗಳೂರಿನಿಂದ ಬ್ರೇಕ್ ಬೇಕೆನ್ನಿಸಿತ್ತು. ನಾನು ಹೊರಡುವ ಎರಡು ದಿನ ಮುಂಚೆ ಶ್ರೀಕಾಂತ್ ನೆನಪಿಸಿದ್ದರು, ’ಅರೇ ವಿಶ್ವ ಕನ್ನಡ ಸಮ್ಮೇಳನದ ಹೊತ್ತಿಗೆ ಬೆಳಗಾವಿಯಲ್ಲಿರುತ್ತೀಯಾ’ ಅಂತ. ಮಕ್ಕಳಿಗೂ ಹೊರಡುವಂತೆ ಸೂಚಿಸಿದರು. ಆಶ್ಚರ್ಯವೆಂಬಂತೆ ಮಕ್ಕಳು ಹೂಂ ಅಂದ್ರು. ಟಿಕೇಟು ಸಿಗುವ ಬಗ್ಗೆ ನನಗೆ ಅನುಮಾನವಿತ್ತು. ಟಿಕೇಟು ಇದೆ ಅಂದಾಗ ಈಗ ಆಶ್ಚರ್ಯ ಪಡುವ ಸರದಿ ನನ್ನದಾಯಿತು.
ಇನ್ನೂ ಕತ್ತಲೆಯಿರುವಾಗಲೇ ಬೆಳಗಾವಿ ತಲುಪಿದಾಗ ಬೆಳಗಾವಿ ಒಳ್ಳೆ ಮದುಮಗಳ ತರಹ ಸಿಂಗರಿಸಿಕೊಂಡಿದ್ದು ಕಾಣಿಸಿತು. ಎಲ್ಲ ವೃತ್ತಗಳಲ್ಲಿರುವ ಮೂರ್ತಿಗಳು ಲೈಟಿಂಗ್ ನ ಬೆಳಕಲ್ಲಿ ಲಕಲಕನೆ ಹೊಳೆಯುತ್ತಿತ್ತು.  ಕೋಟೆಯಂತೂ ವಿದ್ಯುತ್ ನಿಂದ ಕಂಗೊಳಿಸಿ ಮೊದಲ ಬಾರಿಗೆ ತನ್ನ ಇರುವನ್ನು ಸಾರಿತು.

ಈ ಚಿತ್ರವನ್ನು ಗೂಗಲ್ ಇಮೇಜಸ್ ನಿಂದ ಲಪಟಾಯಿಸಿದ್ದು
 ಹಲವಾರು ವರುಷಗಳ ಹಿಂದೆ ಕಛೇರಿಯ ಕೆಲಸದ ನಿಮಿತ್ತ ಬೆಳಗಾವಿಯ ಆಸುಪಾಸಿನ ಹಳ್ಳಿಗಳ ಭೇಟಿಯ ಪ್ರಯುಕ್ತ, ನಮ್ಮ ಕಾರಿನ ಚಾಲಕ ನಮಗೆ ಕೋಟೆಯಲ್ಲಿರುವ ದುರ್ಗಾದೇವಿಯ  ಹಾಗೂ ಗಣೇಶನ ದೇವಸ್ಥಾನದ ಪರಿಚಯ ಮಾಡಿಸಿದ್ದರು..ಆಮೇಲೂ ಹಲವು ಸಲ ಹೋಗಿದ್ದರೂ ಬೆಳಗಾವಿ ಬಗ್ಗೆ ನನಗೆ ಅಷ್ಟೇನೂ ಕುತೂಹಲ ಬೆಳೆದಿರಲಿಲ್ಲ. ಅಮ್ಮನ ಮನೆಗೆ ಹೋಗಿ ಎರಡು ದಿನ ಇದ್ದು ಬರೋದು ಅಷ್ಟೆ ಇತ್ತು. ಹಳೆಯ ಕಾರಂಜಿಗಳನ್ನೆಲ್ಲ ರೀಪೆರಿ ಮಾಡಿ, ಹೊಳದ ಹೂಳೆತ್ತಿ , ರಸ್ತೆಗಳನ್ನು ಅಗಲ ಮಾಡಿಟ್ಟಿದ್ದರು. ಊರ ಹೊರವಲಯದಲ್ಲಿರುವ ಕೆರೆಯೊಂದಕ್ಕೆ (ಹೆಸರು ತಿಳಿದಿಲ್ಲ) ಸುತ್ತಲೂ ವಿದ್ಯುತ್ ಅಳವಡಿಸಿದರಿಂದ ಯಾಕೋ ಮುಂಬಯಿ ನ ಮರೀನ್ ಡ್ರೈವ್ ನೆನಪಿಸಿತು.it was totally a novel experience!!!




ಮತ್ತೂ ಸಂತಸದ ಸಂಗತಿಯೆಂದರೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಮನೆಯ ಹತ್ತಿರದಲ್ಲಿರುವ ಲೇಲೆ ಗ್ರಾಂಡ್ಸ್ ನಲ್ಲಿ ನಡೆದಿದ್ದು. ಅಲ್ಲಿ ನೆರೆದಿರುವ ಜನಸ್ತೋಮ ಕಂಡು ಮೇರೆ ತೋ ಹೋಶ್ ಉಡ್ ಗಯೇ :-)

ಯಾಕೆಂದ್ರೆ ಬೆಳಗಾವಿಯ ಕೆಲವು ಭಾಗಗಳ ಬಗ್ಗೆ ನಮ್ಮ ಮನೆಯಲ್ಲಿ ಇನ್ನೂ ಗೊತ್ತಿಲ್ಲ. ಎರಡೂ ದಿನ  ಫ್ರೆಂಡ್ಲೀ ರಿಕ್ಷಾದವರು(ಒಬ್ಬ ಮರಾಠೀ, ಇನ್ನೊಬ್ಬ ಕನ್ನಡಿಗ)  ನನಗೆ ನಿಹಾ ಗೆ ಬೆಳಗಾವಿಯ ಮುಖ್ಯ ಸ್ಥಳಗಳನ್ನು ಪರಿಚಯಿಸಿದ್ದು.




ಲಿಂಗರಾಜ ಕಾಲೇಜು ಮೈದಾನದಲ್ಲಿ ಪುಸ್ತಕ ಪ್ರದರ್ಶನ-ಮಾರಾಟ

ನನಗೆ ತುಂಬ ಇಷ್ಟವಾದ ಮಳಿಗೆ


ಗಾಂಧೀಜಿಯವರ ಬದುಕಿನ ಕೆಲವು ಚಿತ್ರಗಳು

ವಸ್ತು ಪ್ರದರ್ಶನ etc.. RPD ಮೈದಾನ
ಇದು  ಆಕೃತಿ ಬುಕ್ಸ್ (ಬೆಂಗಳೂರು)ಮಳಿಗೆಯಲ್ಲಿನ ರಶ್
ಖುಶಿಯ ವಿಷಯ ಅಂದ್ರೆ ನನಗೆ ಮಿತ್ರ ವಸುಧೇಂದ್ರರ ಗೋಷ್ಠಿ ಯಲ್ಲಿ ಭಾಗವಹಿಸುವ ಅವಕಾಶ ದೊರೆತಿದ್ದು. ಗೋಷ್ಠಿಯ ಹಿಂದಿನ ದಿನ ನಾನು ಲಿಂಗರಾಜ್ ಕಾಲೇಜಿನ ಮೈದಾನದಲ್ಲಿರುವ ಪುಸ್ತಕ ಪ್ರದರ್ಶನಕ್ಕೆ ಗೆ ಹೋದಾಗ,ಬೆಂಗಳೂರಿನವರಾದ ಗುರುಪ್ರಸಾದ ಅವರ ಆಕೃತಿ ಬುಕ್ಸ್ ಗೆ ಭೇಟಿ ನೀಡಿದ್ದೆ. ವಸುಧೇಂದ್ರ ಅಲ್ಲಿಯೇ ಸಿಕ್ಕಿ, ಆಮಂತ್ರಣ ಕೊಟ್ಟಿದ್ದರು.  ಕೆಲವು ಚಿತ್ರಗಳು ನನ್ನ ನಿಹಾರಿಕಾ ನ  ಕ್ಯಾಮೆರಾ ಕಣ್ಣಿನಲ್ಲಿ.

ಕುಮಾರ ಗಂಧರ್ವ ಹಾಲ್-ಮಹಿಳಾ ಗೋಷ್ಠಿಗೆ ಸಜ್ಜಾದ ವೇದಿಕೆ
ವಸುಧೇಂದ್ರ ತಮ್ಮ ವಿಚಾರಗಳನ್ನು ಮಂಡಿಸುತ್ತಿರುವುದು -ವಿಷಯ- ಔದ್ಯೋಗಿಕ ಜಗತ್ತು ಮತ್ತು ಮಹಿಳೆ

ವಸುಧೇಂದ್ರ, ಡಾ.ಧರಣಿದೇವಿ ಮಾಲಗತ್ತಿ, ಮಾಜಿ ಸಚಿವೆ  ರಾಣಿ ಸತೀಶ, ಸಚಿವೆ ಶೋಭ ಕರಂದ್ಲಾಜೆಯವರು, ಕಮಲಾ ಹಂಪನಾ, ಡಾ. ವಿಜಯ, MLC ಭಾರತಿ ಶೆಟ್ಟಿ, ಡಾ. ಎಂ.ವಿ.ವಸು ಮುಂತಾದವರು, (ಗೋಷ್ಠಿ-ಸಮಕಾಲೀನ ಜಗತ್ತು ಮತ್ತು ಮಹಿಳೆ)
ಹಾಲ್ ನ ಪ್ರವೇಶದ್ವಾರದ ಬಳಿ ರಂಗೋಲಿ



ಶ್ಯಾವಿಗೆಯಲ್ಲಿ ಅರಳಿದ ಗೊಂಬೆಗಳು

ಭಾರತದ, ವಿಶೇಷವಾಗಿ ಕರ್ನಾಟಕದ ,ಮಹಾನ್ ಗಾಯಕರು ರಂಗೋಲಿಯಲ್ಲಿ- ಕಲಾವಿದರ ಹೆಸರಿನ ಫೋಟೊ ಕೂಡ ಇದೆ ಯಾರಿಗಾದರು ಆಸಕ್ತಿ ಇದ್ದಲ್ಲಿ :-)
ಬೆಳಗಾವಿಯಿಂದ ಬಂದಿದ್ದೆ ಲೇಟ್ , ಅದಕ್ಕೆ ಲೇಟ್ ಆಗಿ ವಿಶ್ವ ಕನ್ನಡ ಸಮ್ಮೇಳನದ ಚಿತ್ರಗಳು.
ಪರಿಸರ ಸ್ನೇಹಿ ವಿದ್ಯುತ್ ಬ್ಯಾಟರಿ ಚಾಲಿತ ಸೈಕಲ್ ಪೋಸ್ಟ್ ನಲ್ಲಿ ಅಗತ್ಯಕ್ಕಿಂತ ಹೆಚ್ಚೆ ಆಂಗ್ಲ ಪದಗಳನ್ನು ಬಳಸಿದ್ದಕ್ಕೆ ಶ್ರೀಕಾಂತ್ ಸ್ವಲ್ಪ ಬೈದಿದ್ದರು. ಅದಕ್ಕೆ ಈ ಸಲ ಆದಷ್ಟು   ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ಏನಂತೀರಾ?
:-)

March 18, 2011

ಢೊಕಲಾ/ಢೋಕ್ಲಾ/Dhokla

1ಕಪ್ - ಬೇಸನ್/ಕಡ್ಲೆ ಹಿಟ್ಟು
1 ಕಪ್- ಬಾಂಬೆ ರವಾ
2 ಕಪ್ - ಮೊಸರು
1/2 ಟೀ. ಸ್ಪೂನ್ ಅರಿಸಿನ ಪುಡಿ
1/4 ಇಂಚ ಶುಂಠಿ ಮತ್ತು ಎರಡು ಹಸಿಮೆಣಸಿನಕಾಯಿಯಿಂದ ಮಾಡಿದ ಪೇಸ್ಟ್
1 ಟೀ.ಸ್ಪೂನ್ Eno fruit salt
1/2 ಲಿಂಬೆಹಣ್ಣಿನ ರಸ
ರುಚಿಗೆ ಉಪ್ಪು, ಒಂದು ಸ್ಪೂನ್ ಸಕ್ಕರೆ,  ೨ ಟೀ ಸ್ಪೂನ್ ಅಡಿಗೆ ಎಣ್ಣೆ, ಒಗ್ಗರಣೆಗೆ : ಎಣ್ಣೆ, ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ,ಜೀರಿಗೆ, ಹಿಂಗು. ಅಲಂಕರಿಸಲು (garnishing)  ಕೊತ್ತಂಬರಿ ಸೊಪ್ಪು, ತಾಜಾ ತೆಂಗಿನಕಾಯಿ ತುರಿ
ಮಾಡುವ ವಿಧಾನ:
ಕಡಲೆ ಹಿಟ್ಟಿಗೆ  ರವೆ ಮತ್ತು ಮೊಸರನ್ನು ಬೆರೆಸಿ ಗಂಟಾಗದಂತೆ ಕಲಿಸಿ. (ಇಡ್ಲಿ ಹಿಟ್ಟಿನ ಹದ). ಬೇಕಾದರೆ ಮಾತ್ರ ನೀರು ಬೆರೆಸಿ.ಉಪ್ಪು ಸಕ್ಕರೆ , ಅರಿಸಿನ ಪುಡಿ,ಶುಂಠಿ-ಮೆಣಸಿನಕಾಯಿ ಪೇಸ್ಟ್, ನಿಂಬೆ ರಸ ಹಾಗೂ ಎಣ್ಣೆ ಬೆರೆಸಿ ಹತ್ತು ನಿಮಿಷ ಇಡಿ. 

ಇಡ್ಲಿ ಕುಕ್ಕರ್ ನಲ್ಲಿ ನೀರು ಬಿಸಿ ಮಾಡಲು ಇಡಿ. ನೀರು ಹಬೆಯಾಡುತ್ತಿರಬೇಕಾದ್ರೆ ಕಲಿಸಿದ ಹಿಟ್ಟಿಗೆ eno fruit salt  ಬೆರೆಸಿ.


ಹಿಟ್ಟು ನೊರೆನೊರೆಯಾಗಿ ಮೇಲೆ ಬರುತ್ತದೆ. ಈಗ ಹಿಟ್ಟನ್ನು ಎಣ್ಣೆ ಹಚ್ಚಿದ ಪಾತ್ರೆಗೆ ಕೂಡಲೆ ವರ್ಗಾಯಿಸಿ(ದೊಡ್ಡ ದಾದ ಪಾತ್ರೆಯನ್ನೆ  ಬಳಸಿ.) ಕೂಡಲೆ ಹಬೆಪಾತ್ರೆಯಲ್ಲಿ ಇಟ್ಟು 15 ನಿಮಿಷ ಬೇಯಿಸಿ--
ಹಬೆ ಪಾತ್ರೆಯಿಂದ ಹೊರಗೆ ತೆಗೆದಿದ್ದು
ಪಾತ್ರೆ ಹೊರಗೆ ತೆಗೆದು ಅದು ತಣಿದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಢೊಕ್ಲಾ ಕತ್ತರಿಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು, ಜೀರಿಗೆ, ಹಿಂಗು ಮತ್ತು ಹಸಿಮೆಣಸಿನಕಾಯಿ ಒಗ್ಗರಣೆ ಕೊಡಿ. ಇದರಲ್ಲಿ ಕತ್ತರಿಸಿದ ಢೋಕ್ಲಾಗಳನ್ನು ಹಾಕಿ. ಅರ್ಧ ಗ್ಲಾಸ್ ನೀರು ನಿಧಾನವಾಗಿ ಎಲ್ಲ ಧೋಕ್ಲಾಗಳ ಮೇಲೆ ಬರುವಂತೆ ಸಿಂಪಡಿಸಿ. ಪ್ಲೇಟ್ ಗೆ ರವಾನಿಸಿ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ
ಢೊಕಲಾ - ಗುಜರಾತಿ ತಿನಿಸು ready
too many cooks spoil the broth ಅನ್ನುತ್ತಾರೆ. ಆದರೆ ನಾವು ಮೂರು ಜನ ಸೇರಿ ಮಾಡಿದ ಢೋಕ್ಲ , ಮೊದಲನೇ ಪ್ರಯತ್ನದಲ್ಲೇ ಹಿಟ್. ಟೇಸ್ಟೂ ಸೂಪರ್. ಅರಸಿನ ಪುಡಿ ಸ್ವಲ್ಪ ಕಡಿಮೆಯಾಯ್ತು ಅಷ್ಟೆ.
ಕೊತ್ತಂಬರಿ ಸೊಪ್ಪಿನ ಚಟ್ನಿ ಜತೆಗೆ serve ಮಾಡಿ.

ಇನೋ ಫ್ರುಟ್ ಸಾಲ್ಟ್ ಕಿರಾಣಿ ಅಂಗಡಿ/ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯ.
:-)

March 6, 2011

ಪರಿಸರ ಸ್ನೇಹಿ ಇ-cycle ಕಂಡೀರಾ??

ಪರಿಸರ ಮಾಲಿನ್ಯ, traffic jam ತಡೆಗಟ್ಟಲು ಸೂಕ್ತ ಉಪಾಯ


ಪೆಟ್ರೊಲ್ ಖರ್ಚಿಲ್ಲ, ತುಂಬ ಜಾಗ ಬೇಕಿಲ್ಲ, ಮನೆಯೊಳಗೆ ಪಾರ್ಕ್ ಮಾಡಬಹುದು.

ನಿಮ್ಮ ಹಳೆ ಸೈಕಲ್ ನ modify ಮಾಡಬಹುದು. ಹೊಸ ಸೈಕಲ್ ಗೆ ತಗಲುವ ವೆಚ್ಚ ಅಂದಾಜು 14,000 to 15,000
battery charge indicator

ಲೈಸನ್ಸ್ ಬೇಕಿಲ್ಲ.vehicle registration not needed.1 ಗಂಟೆ charge ಮಾಡಿದ್ರೆ, 30 km ಓಡುತ್ತೆ. As per ARAI (Automotive Research Association of India, Pune)regulation the maximum speed is 25 km/hr.ಹಾರ್ನ ಇದೆ, ಇಂಡಿಕೇಟರ್ ಇದೆ.ಆಕಸ್ಮಾತ್ ರಸ್ತೆಯಲ್ಲಿ battery ಡಿಸ್ಚಾರ್ಜ್ ಆದ್ರೆ ನೊ ಪ್ರಾಬ್ಲಮ್, ಸಾದಾ cycling ಮಾಡಿ ಬರಬಹುದು.ಪ್ರತಿ ತಿಂಗಳು ಅಂದಾಜು 6 unit ವಿದ್ಯುತ್ ಖರ್ಚು ಬರುತ್ತದೆ,ಮತ್ತು ವರ್ಷಕ್ಕೆ 100 ಲೀಟರ್ ಪೆಟ್ರೊಲ್ ಉಳಿತಾಯ ಆಗುತ್ತೆ.

charge ಮಾಡುವ slot
this slot is for connecting to the cycle
ಮುಂದಿನ ಯೋಜನೆ ಸೌರ್ಯ ಚಾಲಿತ battery ಗಳನ್ನು ಅಳವಡಿಸುವುದು. ಆಗ ವಿದ್ಯುತ್ ಖರ್ಚು ಕೂಡ ಇರುವುದಿಲ್ಲ..ಇದಕ್ಕೆ ತಕ್ಕ ರಿಸರ್ಚ್ ನಡೀತಾ ಇದೆ. ಸ್ಕೂಲ್ ಮಕ್ಕಳಿಗೆ perfect travel solution

smooth sailing

easy to fix the battery


at least ಕೊತ್ತಂಬರಿ ಸೊಪ್ಪು, ಬೆಂಕಿ ಪೊಟ್ಟಣ, ಹಾಲು ತರಬೇಕಾದರೆ, ಮೊಬೈಲ್ ಕರೆನ್ಸಿ ಹಾಕಲು ಹೋಗಬೇಕಾದ್ರೆ, ಸ್ಕೂಟರ್ ಬಿಟ್ಟುಕೊಂಡು ಹೋಗೊದಕ್ಕಿಂತ ಇದೇ ಹೆಚ್ಚು sensible.


with Dr. R. Ramarathnam (extreme left)

ಇದು ಡಾ. ರಾಮ ರಾಮರತ್ನಂ ಎನ್ನುವವರ (IIT-Madras) brainchild. ಹಲವಾರು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿ, ವಿದೇಶದಿಂದ ಸಾಕಷ್ಟು offers ಬಂದರೂ ನಮ್ಮ ದೇಶದಲ್ಲೇ ಇದ್ದು, ಈಗ DELTEC ಎನ್ನುವ ಕಂಪನಿಯ ಶುರು ಮಾಡಿ,ಪರಿಸರ ಸ್ನೇಹಿ appliances ತಯಾರಿಸಲು ಜೀವನ ಮುಡಿಪಾಗಿಟ್ಟಿದ್ದಾರೆ. ಅವರೊಂದಿಗೆ ಹಲವಾರು ಯುವಕರು ಅವರ ಕೆಲಸದಲ್ಲಿ ಕೈ ನೀಡಿ ಸಹಕರಿಸುತ್ತಿದ್ದಾರೆ. ಈಗಾಗಲೆ solar ರೆಫಿರಿಜಿರೇಟರ್, ಮಿಕ್ಸಿ, Airconditioner ಮುಂತಾದ್ದು ಮಾಡಿದ್ದಾರೆ.

ರಾಜಾಜಿ (ಸಿ. ರಾಜಗೋಪಾಲಾಚಾರಿ)ಒಮ್ಮೆ IIT-Madras ಕ್ಯಾಂಪಸ್ ಗೆ ಬಂದಾಗ ರಾಮ್ ಅವರ ತಂದೆಯ ಹತ್ತಿರ ಮಾತು ತೆಗೆದುಕೊಂಡಿದ್ದರಂತೆ, ನಮ್ಮ ದೇಶದಲ್ಲೇ ಇದ್ದು ಏನಾದರೂ ಮಾಡಬೇಕು ಅಂತ, -give back to the nation what you have learnt..ಅಂತ...ಅಲ್ಲೆ ನಿಂತು ಕೇಳಿಸಿಕೊಳ್ಳುತ್ತಿದ್ದ ರಾಮ್, ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ದೊಡ್ಡ waiting list ಇದೆ.  ಇಲ್ಲಿದೆ ನಾವು ನಡೆಸಿದ ಟ್ರಯಲ್ ರನ್


ರಸ್ತೆ uphill ಇದ್ದಾಗ accelerator ಜತೆಗೆ ಪೆಡಲ್ ಮಾಡಿದ್ರಾಯ್ತು...ಗೊತ್ತೆ ಆಗುವುದಿಲ್ಲ. i enjoyed it. ನಾವು ಎರಡು ಸೈಕಲ್ ಗೆ order ಕೊಟ್ಟಿದ್ದೇವೆ, ಅದರಲ್ಲಿ ಒಂದು ಲೇಡಿಸ್ ಸೈಕಲ್.

ಹಳ್ಳಿಯಲ್ಲಿರುವ ನಮ್ಮ ಸ್ವ ಸಹಾಯ ಸಂಘದ ಸದಸ್ಯರಿಂದ assembling unit ಹಾಕುವ ತಯಾರಿಯಲ್ಲಿದ್ದೇವೆ ನಾವು.

powered and pollution free vehicle.
only the mirror and lamp are missing :-)

  on the electric cycle
:-)